ವಿಚಾರಪತ್ನಿಯರಾದ ಶಿವಶರಣೆಯರು / ಡಾ. ರಾಜೇಶ್ವರಿ ಶೀಲವಂತ, ಬೀಳಗಿ.

ಪಾರಂಪರಿಕ ಸಮಾಜ ವ್ಯವಸ್ಥೆಯು ಆಚರಣೆ, ಸಂಪ್ರದಾಯ, ಪದ್ಧತಿಗಳ ಹೆಸರಿನಲ್ಲಿ ಶತ ಶತಮಾನಗಳಿಂದ ಪುರುಷ ಪ್ರಧಾನ ಸಮಾಜದಿಂದ ಮಹಿಳೆ ಶೋಷಣೆಗೆ ಒಳಗಾಗುತ್ತಲೆ ಬಂದಿದ್ದಳು. ಮಹಿಳೆಯರನ್ನು ಆ ಶೋಷಣೆಗಳಿಂದ ಮುಕ್ತಗೊಳಿಸಿ, ಅವರನ್ನು ಗೌರವಿಸಿ, ಅವಳಿಗೆ ಸಮಾಜದಲ್ಲಿ ಪುರುಷರಿಗೆ ಸಮಾನವಾದ ಸ್ಥಾನಮಾನ ಕಲ್ಪಿಸಿ, ಅವರ ವಿಚಾರಗಳಿಗೆ ಮನ್ನಣೆಯನ್ನಿತ್ತು, ಅವರನ್ನು ಮನುಷ್ಯರಂತೆ ಕಂಡದ್ದು ಶರಣ ಪರಂಪರೆ. ಶರಣರು ಮಹಿಳೆಯರಿಗೆ ಸಮಾಜದ ಹಲವಾರು ಕ್ಷೇತ್ರಗಳಲ್ಲಿ ದುಡಿಯುವ ಅವಕಾಶವನ್ನು ನೀಡಿ ಅವರು ಸ್ವಾವಲಂಬಿ ಜೀವನವನ್ನು ನಡೆಸಲು ಅನುವು ಮಾಡಿಕೊಟ್ಟರು. ಜಗತ್ತಿನಲ್ಲಿ ಪ್ರಪ್ರಥಮವಾಗಿ ಮಹಿಳೆಯರಿಗೆ ಆಯ್ಕೆ ಸ್ವಾತಂತ್ರ್ಯ ನೀಡುವ ಮೂಲಕ ಅವರನ್ನು ಸ್ವಾವಲಂಬಿಗಳನ್ನಾಗಿಸಿದರು. ಶರಣರಿಂದ ಅಭಿವ್ಯಕ್ತಿ ಸ್ವಾತಂತ್ರ್ಯ ಪಡೆದ ಈ ಶಿವಶರಣೆಯರು ತಮ್ಮ ಜ್ಞಾನದ ಪರಿಧಿಯನ್ನು ವಿಸ್ತರಿಸಿಕೊಂಡು ಆ ಮೂಲಕ ಕುಟುಂಬ ಮತ್ತು ಸಮಾಜದಲ್ಲಿ ಮನ್ನಣೆ ಗಳಿಸಿದರು. ಸಮಾಜದ ಹಲವಾರು ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡ ಈ ಶರಣೆಯರು ತಮಗೆ ದೊರೆತ ಅಭಿವ್ಯಕ್ತಿ ಸ್ವಾತಂತ್ರ್ಯದ ಸಮರ್ಥ ಬಳಕೆಯ ಮೂಲಕ ಶರಣರಿಂದ “ವಿಚಾರಪತ್ನಿ” ಎಂದು ಕರೆಯಿಸಿಕೊಂಡರು.‌

ಪತಿಯ ಒಳ್ಳೆಯ ಕಾರ್ಯದಲ್ಲಿ ಕೈಜೋಡಿಸಿ ನಡೆದು, ಅವರು ತಪ್ಪು ದಾರಿಗೆ ಹೋದಾಗ ಅವರನ್ನು ತಿದ್ದಿ ಸರಿದಾರಿಗೆ ತರುವ ಹೆಣ್ಣುಮಕ್ಕಳನ್ನು ಬಸವಣ್ಣನವರುವಿಚಾರಪತ್ನಿಎಂದು ಗುರುತಿಸಿದ್ದಾರೆ. ಇಂತಹ ವಿಚಾರ ಪತ್ನಿಯರನ್ನು ಪಡೆದ ಶರಣರ ಜೀವನ ಸುಗಮವಾಗುತ್ತದೆ ಎಂಬ ಭಾವ ಅವರದು. ಶರಣರು ನೀಡಿದ ಅಭಿವ್ಯಕ್ತಿ ಸ್ವಾತಂತ್ರ್ಯ, ಉನ್ನತ ವಿಚಾರಧಾರೆಗಳಿಂದ ಪ್ರೇರಿತಗೊಂಡು ಸಾಧನೆಯ ಶಿಖರಕ್ಕೆರಿದ ಶರಣೆಯರು ತಮ್ಮ ವೈಚಾರಿಕ ದೃಷ್ಟಿಯಿಂದ ವಿಚಾರ ಪತ್ನಿಯ ಸ್ಥಾನಕ್ಕೆರಿದ್ದಾರೆ. ಶರಣೆಯರಾದ ಗಂಗಾಂಬಿಕೆ, ನೀಲಾಂಬಿಕೆ, ಮೋಳಿಗೆ ಮಹಾದೇವಿ, ಆಯ್ದಕ್ಕಿ ಲಕ್ಕಮ್ಮ, ದುಗ್ಗಳೆ ಮೊದಲಾದವರು ಶರಣ ಸಾಹಿತ್ಯ ಪರಂಪರೆಯಲ್ಲಿ ವಿಚಾರ ಪತ್ನಿಯರಾಗಿ ಗೋಚರಿಸುತ್ತಾರೆ.

ಬಸವಣ್ಣನ ಅಂಗಳದಲ್ಲಿ ಬಿದ್ದ ಅಕ್ಕಿಯನ್ನು ಆಯ್ದು ತರಲು ಹೋದ ಆಯ್ದಕ್ಕಿ ಮಾರಯ್ಯ ಅಂದು ದಿನ ನಿತ್ಯಕಿಂತ ಹೆಚ್ಚು ಅಕ್ಕಿಯನ್ನು ಆಯ್ದು ತರುತ್ತಾನೆ. ಶರಣರು ರೂಪಿಸಿದ ಕಾಯಕ ಮತ್ತು ದಾಸೋಹ ತತ್ವಗಳನ್ನು ತನ್ನ ಬದುಕಿನ ಮೌಲ್ಯಗಳನ್ನಾಗಿ ಸ್ವಿಕರಿಸಿದ್ದ ಲಕ್ಕಮ್ಮ ಪತಿ ಅತ್ಯಾಸೆಯಿಂದ ಹೆಚ್ಚು ಅಕ್ಕಿಯನ್ನು ತಂದದನ್ನು ಕಂಡು ಅವನ ದುರಾಸೆಗೆ ಕೋಪಗೊಳ್ಳುತ್ತಾಳೆ. ಹೆಚ್ಚು ಅಕ್ಕಿಯನ್ನು ತಂದ ಪತಿಯನ್ನು ಕುರಿತು,

ಆಸೆಯೆಂಬುದು ಅರಸರಿಗೆ ಇರಬೇಕೆ ಹೊರತು ಶರಣರಾದವರಿಗೆ ಅದು ಸಲ್ಲದ್ದು. ರೊಷ, ಕೋಪ ಎಂಬವು ಯಮಕಿಂಕರರ ಒಡವೆಗಳೇ ಹೊರತು ಶಿವಭಕ್ತಿರಿಗಲ್ಲ. ಈ ಹೆಚ್ಚಿನ ಅಕ್ಕಿಯ ಆಸೆ ಶಿವಭಕ್ತರಾದ ನಿಮಗೇಕೆ ಬಂತು. ಇದನ್ನು ನಿಮ್ಮ ಆರಾಧ್ಯ ದೈವ ಅಮರೇಶ್ವರ ಒಪ್ಪುವುದಿಲ್ಲ ಎಂದು ಮಾರಯ್ಯನಿಗೆ ತಿಳುವಳಿಕೆ ಹೇಳುತ್ತಾಳೆ. ಆತನ ತಪ್ಪಿನ ಅರಿವನ್ನು ಆತನಿಗೆ ಮಾಡಿಸುತ್ತಾಳೆ.

ಅತ್ಯಾಸೆಗಳು ಶಿವಶರಣರಿಗೆ ಇರಕೂಡದು.  ಅದರಲ್ಲೂ ಸಂಗ್ರಹಣಾ ಗುಣವಂತು ಯಾವತ್ತಿಗೂ ಇರಕೂಡದು. ಒಬ್ಬರಲ್ಲಿ ಆಹಾರದ ಸಂಗ್ರಹಣೆ ಆದರೆ ಮತ್ತೊಬ್ಬರಿಗೆ ಆಹಾರದ ಕೊರತೆ ಉಂಟಾಗುವದೆಂಬ ಸತ್ಯದ ಅರಿವು ಲಕ್ಕಮ್ಮನಿಗೆ ಇದೆ. ಇಲ್ಲಿ ಅಹಾರ ಕೊರತೆಯ ಮೂಲವನ್ನು ಅರಿತ ಅರ್ಥಶಾಸ್ತ್ರಜ್ಞೆಯಾಗಿ ಲಕ್ಕಮ್ಮ ನಮಗೆ ತೋರುತ್ತಾಳೆ.  ಯಾರಿಗೂ ಆಹಾರದ ಕೊರತೆ ಆಗಬಾರದು, ಹಸಿವಿನ ನೋವನ್ನು ಯಾರು ಅನುಭವಿಸಬಾರದು ಎಂಬ ಮನೋಭಾವದಿಂದ ಬಸವಣ್ಣನವರು ದಾಸೋಹ ತತ್ವವನ್ನು ಅನುಷ್ಠಾನಕ್ಕೆ ತಂದಿರುವಾಗ, ದಾಸೋಹ ಮಾಡುವ ತಾವೇ ಧಾನ್ಯದ ಸಂಗ್ರಹಣೆಯನ್ನು ಮಾಡಿದ್ದಾದರೆ ತಮ್ಮಿಂದ ಸಮಾಜಕ್ಕೆ ದ್ರೋಹ ಮಾಡಿದಂತಾಗುವದು ಎಂಬ ಭಾವ ಲಕ್ಕಮ್ಮನದು. ಇಡೀ ಸಮಾಜ ನೆಮ್ಮದಿಯಿಂದ ಬದುಕಬೇಕೆಂಬ ಆಸೆ, ಸಂಕಲ್ಪಗಳು ಲಕ್ಕಮ್ಮನ ವಚನದಲ್ಲಿ ಸಾಂದ್ರೀಕೃತಗೊಂಡಿವೆ. ಜೊತಗೆ “ಇದು ನಿಮ್ಮ ಆಸೆಯೋ ಬಸವಣ್ಣನ ಅನುಮಾನದ ಚಿತ್ತವೊ” ಎಂದು ಬಸವಣ್ಣನ ಮೇಲೆ ಸಂಶಯಪಟ್ಟು, ಅವರೆ ನಮ್ಮ ಮನಸ್ಸನ್ನು ಅರಿಯಲು ಹೆಚ್ಚಿನ ಅಕ್ಕಿಯನ್ನು  ಅಂಗಳದಲ್ಲಿ ಚೆಲ್ಲಿದ್ದಾರೆಂಬುದನ್ನು ಅರಿತು ಹೆಚ್ಚಾಗಿದ್ದ ಅಕ್ಕಿಯನ್ನು ಮರಳಿ ಅಂಗಳದಲ್ಲಿ ಸುರಿದು ಬರಲು ಪತಿಯನ್ನು ಕಳಿಸುತ್ತಾಳೆ.

ಮಾರಯ್ಯ ಒಂದು ದಿನ ತನ್ನ ಕಾಯಕವಾದ ಬಸವಣ್ಣನ ಅಂಗಳದಲ್ಲಿ ಬಿದ್ದ ಅಕ್ಕಿಯನ್ನು ಆಯ್ದು ತರುತ್ತೇನೆ ಎಂದು ಪತ್ನಿಗೆ ಹೇಳಿ ಹೋದವ ಅಂದು ಅನುಭವ ಮಂಟಪದಲ್ಲಿ ನಡೆದ ಕಾಯಕದ ಬಗೆಗಿನ ಚರ್ಚೆಯಲ್ಲಿ ಭಾಗವಹಿಸಿ ತನ್ನ ಅಕ್ಕಿ ತರುವ ಕಾಯಕವನ್ನು ಮರೆತು ಬಿಡುತ್ತಾನೆ. ಆತ ಬಸವಣ್ಣನ ಅಂಗಳದಿಂದ ಅಕ್ಕಿಯನ್ನು ಆಯ್ದು ತರುತ್ತಾನೆ. ಆತ ತಂದ ಅಕ್ಕಿಯಿಂದ ಅಡುಗೆ ತಯಾರಿಸಿ ಜಂಗಮರಿಗೆ ದಾಸೋಹ ಮಾಡಬೇಕೆಂದು ಕಾಯ್ದು ಕುಳಿತಿದ್ದ ಲಕ್ಕಮ್ಮ, ಮಾರಯ್ಯ ಬರದಾಗ ಅನುಭವ ಮಂಟಪದಲ್ಲಿಯೆ ಆತನಿರುವನೆಂದು ಸುಳಿವು ಹಿಡಿದು ಹೋಗಿ, ಕಾಯಕ ಮರೆತು ಕುಳಿತಿದ್ದ ಆತನ ಮೇಲೆ ಕ್ರೋದಗೊಂಡು ಇಡೀ ತುಂಬಿದ ಸಭೆಯಲ್ಲಿಯೆ “ಕಾಯಕ ನಿಂದಿತ್ತು ಹೊಗಯ್ಯಾ ಎನ್ನಾಳ್ದನೆ”  ಎನ್ನುವ ಮೂಲಕ ಆತನನ್ನು ಎಚ್ಚರಿಸಿ ಆತನಿಗೆ ಕಾಯಕದ ಅರಿವನ್ನು ಮೂಡಿಸುತ್ತಾಳೆ. ಅನುಭವ ಮಂಟಪದಲ್ಲಿ ಚರ್ಚೆ ಮುಖ್ಯ. ಆದರೆ ಅದಕಿಂತ ಮುಖ್ಯವಾದದ್ದು ಕಾಯಕ. ಇದರಿಂದ ಜಂಗಮರ ಸೇವೆಗೆ ಲೋಪವಾಗುದರ ಜೊತೆಗೆ ಕಾಯಕ ತತ್ವವನ್ನು ಅನುಸರಿಸದ ಅಪರಾಧ ಮಾಡಿದಂತಾಗುತ್ತದೆ ಎಂಬ ಧೋರಣೆ  ಆಕೆಯದು. ಲಕ್ಕಮ್ಮನ ಕಾಯಕ ನಿಷ್ಠೆ, ಸಾಮಾಜಿಕ ಕಳಕಳಿ ಅಭಿನಂದನಾರ್ಹವಾದುದು.

ಕಲ್ಯಾಣದ ಕ್ರಾಂತಿಯಿಂದ ಶರಣರೆಲ್ಲ ಚದುರಿ ಹೋಗಿ ಅಲ್ಲಲ್ಲಿ ಐಕ್ಯರಾಗಲು, ಇದನ್ನು ಕಂಡು ಮೋಳಿಗೆ ಮಾರಯ್ಯನಿಗೂ ಕೈಲಾಸಕ್ಕೆ ಹೋಗಬೇಕೆಂಬ ಇಚ್ಛೆ ಉಂಟಾಗುತ್ತದೆ. ಅದನ್ನು ತನ್ನ ಪತ್ನಿ ಮಹಾದೇವಿಯಲ್ಲಿ ಪ್ರಸ್ತಾಪಿಸುತ್ತಾನೆ. ಇವನ ಆಸೆಯನ್ನು ಕೇಳಿ ಜ್ಞಾನಿಯಾದ ಮಹಾದೇವಿ “ಕಾಯಕವೇ ಕೈಲಾಸವಾದ ಮೇಲೆ ಮತ್ತೆ ಬೇರೆ ಕೈಲಾಸವುಂಟೆ”  ಎಂದು ಪ್ರಶ್ನಿಸಿ ಅವನ ಕಣ್ಣು ತೆರೆಸುತ್ತಾಳೆ. ಒಂದು ಕಾಲಕ್ಕೆ ಕಾಶ್ಮೀರದ ಮಹಾರಾಣಿಯಾಗಿದ್ದ ಮಹಾದೇವಿ, ಶರಣೆಯಾದ ನಂತರ ಸಂಪೂರ್ಣ ಶರಣರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡವಳು. ಶರಣರ  ಕಾಯದ ಮಹತ್ವವನ್ನು ಅರ್ಥೈಸಿಕೊಂಡಿದ್ದ ಮಹಾದೇವಿ ಪತಿಗೆ ಕೈಲಾಸದ ಇರುವನ್ನು ತಿಳಿಸುತ್ತಾಳೆ. ಸತಿಯ ಜಾಣ್ಮೆಗೆ ಮೆಚ್ಚಿದ ಮಾರಯ್ಯ “ನಿನ್ನ ಭಕ್ತಿಯ ಬೆಳೆಯೆ ಎನಗೆ ಸತ್ಯದ ಹಾದಿ” ಎಂದು ಉತ್ತರಿಸುತ್ತಾನೆ. ಹೀಗೆ ಮಾರಯ್ಯನಿಗೆ ಕೈಲಾಸದ ಅರಿವು ಮೂಡಿಸುವ ಮಹಾದೇವಿ ಅಣ್ಣನ ಕಾಯಕವೇ ಕೈಲಾಸ ಎಂಬ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡ ಮಹಾ ಶರಣೆಯಾಗಿ ತೋರುತ್ತಾಳೆ.

ಕಲ್ಯಾಣ ಕ್ರಾಂತಿಯನ್ನು ನೋಡಲಾಗದೆ ಮೃದುಹೃದಯಿ ಬಸವಣ್ಣ ಸಂಗಮಕ್ಕೆ ತೆರಳಿದಾಗ ಪತ್ನಿಯರ ನೆನಪಾಗಿ ಹಡಪದ ಅಪ್ಪಣ್ಣನ ಮೂಲಕ ಅವರನ್ನು ಕರೆಕಳಿಸುತ್ತಾನೆ. ಅಪ್ಪಣ್ಣನ ಸಂದೇಶ ಕೇಳಿದ ನೀಲಾಂಬಿಕೆ “ಬಸವ ರೂಪು ಕರಸ್ಥಲದಲ್ಲಿ ಬೆಳಗಿದ ಬಳಿಕ ಸಂಗಯ್ಯನ ಹಂಗು ನಮಗೇತಕೆ ಅಪ್ಪಣ್ಣ” ಎಂದು ಅಪ್ಪಣ್ಣನಿಗೆ ಮಾರುತ್ತರಿಸುತ್ತಾಳೆ. ತನ್ನ ಇಷ್ಟಲಿಂಗಕ್ಕೆ “ನೋಡು ನೋಡು ಲಿಂಗವೇ ಬಸವಯ್ಯನಾಟವಾ ಅಲ್ಲಿ ಎನ್ನನ್ನು ಬರಹೇಳಿದರಂತೆ ಇಲ್ಲಿ ತಾವಿಲ್ಲವೆ ಸಂಗಯ್ಯನು ಅಲ್ಲಿ ಇಲ್ಲಿ ಎಂಬ ಉಭಯ ಸಂದೇಹವ ಬಲ್ಲ ಮಹಾತ್ಮರಿಗಿದು ಗುಣವೇ?” ಎಂದು ಪ್ರಶ್ನಿಸುತ್ತಾಳೆ. ಮೃದು ಹೃದಯದ ಬಸವಣ್ಣ ಭಾವಪರವಶನಾಗಿ ಸಂಗಮಕ್ಕೆ ಹೋದರೆ, ಧೀರ ನೀಲಾಂಬಿಕೆ ತನ್ನ ಇಷ್ಟಲಿಂಗದಲ್ಲಿಯೆ ಪತಿಯನ್ನು, ಸಂಗಮನಾಥನನ್ನು ಕಾಣುತ್ತಾಳೆ. ಬಸವಣ್ಣನವರ ಲೌಕಿಕ ಮತ್ತು ಅಲೌಕಿಕ ಜೀವನಕ್ಕೆ ಸಹಕಾರಿಯಾಗಿ ನಿಂತವಳು ನೀಲಾಂಬಿಕೆ. ಕಲ್ಯಾಣದಲ್ಲಿನ ಮಹಾಮನೆಯ ದಾಸೋಹ ಕಾರ್ಯಕ್ಕೆ ತನ್ನನ್ನು ತಾನು ಸಮರ್ಪಿಸಿಕೊಂಡಾಕೆ.

ಮಹಾಮನೆಯ ದಾಸೋಹ ಕಾರ್ಯ, ಅನುಭವ ಮಂಟಪದ ಜ್ಞಾನ ದಾಸೋಹದ ಕಾರ್ಯಗಳಲ್ಲಿ ತನು, ಮನ, ಧನಗಳನ್ನು ಸವೆಸಿದವಳು ಗಂಗಾಬಿಕೆ‌. ಕಲ್ಯಾಣ ಕ್ರಾಂತಿಯ ಸಂಧರ್ಭದಲ್ಲಿ  ಗಂಗಾಂಬಿಕೆಗೆ ಆಕೆಯ ಗುರುಗಳಾದ ಘನಲಿಂಗ ರುದ್ರಮುನಿಗಳುಚೆನ್ನಬಸವಣ್ಣನಿಗೆ ನಿನ್ನ ಅವಶ್ಯಕತೆ ಇದೆ‌. ವಚನ ರಕ್ಷಣೆಗಾಗಿ ನೀನು ಕಲ್ಯಾಣ ಬಿಟ್ಟು ತೆರಳು. ಶರಣರ ಬಳಿ ನೀನಿದ್ದರೆ ಅವರಿಗೆ ಮಾತೃ ರಕ್ಷಣೆ ಒದಗಿದಂತಾಗುತ್ತದೆ.” ಎಂದ ಅವರ  ಸಲಹೆ ಪಡೆದು ಅವರು ಶರಣರ ಆತ್ಮ ರಕ್ಷಣೆಗಾಗಿ ಸಿದ್ಧಪಡಿಸಿದ ಪಡೆ ಸೇರಿ ಚಿಕ್ಕಂದಿನಲ್ಲಿ ಕಲಿತ ಯುದ್ಧ ವಿದ್ಯೆಯ ಪ್ರಯೋಜನವನ್ನು ಪಡೆದು ಶರಣರ ರಕ್ಷಣೆಗಾಗಿ ನಿಲ್ಲುತ್ತಾಳೆ. ಆ ಸಾವಿರಾರು ಶರಣರ ಊಟೋಪಚಾರದ ಜವಾಬ್ದಾರಿಯನ್ನು ನೀಲಾಂಬಿಕೆ ಹೊರುತ್ತಾಳೆ.

ಬಸವನ ಅನುಭವದಿಂದ ವಿವರವ ಪಡೆದು ವಿಚಾರ ಪತ್ನಿಯಾದೆ” ಎನ್ನುವ ನೀಲಾಂಬಿಕೆ, ಶರಣರ ರಕ್ಷಣೆಯ ಜವಾಬ್ದಾರಿ ಹೊತ್ತ ಗಂಗಾಬಿಕೆ, ಮಿತವ್ಯಯದ ತತ್ವವನ್ನು ಬೋಧಿಸಿ ಸಾಮಾಜಿಕ ಸ್ವಾಸ್ಥದ ಕಾಳಜಿ ವಹಿಸುವ ಲಕ್ಕಮ್ಮ, ಪತಿಯ ಮನಸ್ಸು ಪರಿವರ್ತಿಸುವ ಮಹಾದೇವಿಯರ ಇಂತಹ ಪ್ರಯತ್ನದ ಹಿಂದೆ ಶರಣರ ಪ್ರೇರಣೆ ಇದೆ. ಬಸವಾದಿ ಶರಣರು ಸ್ತ್ರೀಯರಿಗೆ ತುಂಬಿದ ಮನೋ ಸ್ಥೈರ್ಯ, ಅವರು ನೀಡಿದ ವೈಚಾರಿಕ, ಆಧ್ಯಾತ್ಮಿಕ ಸ್ವಾತಂತ್ರ್ಯ ಇದಕ್ಕೆಲ್ಲ ಕಾರಣವಾಗಿದೆ. ಶರಣರ ಮಾರ್ಗದರ್ಶನ, ಸಹಕಾರದಿಂದ ವಿವೇಚನಾಶೂನ್ಯರಾಗಿದ್ದ ಮಹಿಳೆಯರು ವಿಚಾರಪತ್ನಿ ಸ್ಥಾನಕ್ಕೇರಿ ಆದರ್ಶ ಶರಣೆಯರಾಗುತ್ತಾರೆ.

ಡಾ. ರಾಜೇಶ್ವರಿ ವೀ. ಶೀಲವಂತ
ಕನ್ನಡ ಉಪನ್ಯಾಸಕರು,
ಸರ್ಕಾರಿ ಪದವಿ ಕಾಲೇಜು,
ಬೀಳಗಿ.
ಮೋಬೈಲ್. ಸಂ. +91 99454 56451

Loading

Leave a Reply