
ಕಲ್ಯಾಣದಲ್ಲಿ ಕ್ರಾಂತಿಯಾಗಿ ಸುಮಾರು 900 ವರ್ಷಗಳು ಕಳೆದಿವೆ. ವಿಶ್ವಮಟ್ಟದಲ್ಲಿ ಬಸವಣ್ಣನವರ ಸಾಮಾಜಿಕ ಕ್ರಾಂತಿಯ ಬಗ್ಗೆ ಇಂದಿಗೂ ತುಲನಾತ್ಮಕ ಅಧ್ಯಯನ ನಡೀತಾ ಇದೆ. ಅಂದರೆ ಬಸವಣ್ಣನವರ ನಾಯಕತ್ವ ಎಂಥ ಮಹತ್ವದ್ದಾಗಿತ್ತು, ಎಂಥ ಶ್ರೇಷ್ಠ ಮಟ್ಟದ್ದಾಗಿತ್ತು ಎನ್ನುವುದನ್ನು ತಿಳಿದುಕೊಳ್ಳುವುದು ಈ ಲೇಖನದ ಮೂಲ ಆಶಯ ಮತ್ತು ಅಧ್ಯಯನ.
ಇದರಲ್ಲಿ ಎರಡು ರೀತಿಯ ವಿಚಾರ ಮಾಡೋಣ. ಒಂದು ಜಾಗತಿಕ ಮಟ್ಟದಲ್ಲಿ ತುಲನಾತ್ಮಕ ಚಿಂತನೆ ಅಂದರೆ ಪಕ್ಷಿನೋಟದಿಂದ ನೋಡುವುದು. ಇನ್ನೊಂದು ಹತ್ತಿರದಿಂದ ನೋಡಿದವರ ಮತ್ತು ಅವರು ಕಂಡಿರುವ ಸೂಕ್ಷ್ಮ ಒಳನೋಟದಿಂದ ಅಧ್ಯಯನ ನಡೆಸುವುದು. Microscopic Analysis ಅಂತೀವಲ್ಲ ಹಾಗೆ. ಬಸವಣ್ಣನವರೊಂದಿಗೆ ಇರುವ ಒಡನಾಟ ಮತ್ತು ಸಂವಾದಗಳಿಂದ ಹೊರಬಂದ ಸಾಹಿತ್ಯ ಅಧ್ಯಯನದಿಂದ. ಹಾಗಾಗಿ ಈ ಎರಡೂ ಸ್ಥರದ ವಿಶ್ಲೇಷಣೆಯಿಂದ ಬಸವಣ್ಣನವರ ಸಮಗ್ರ ನಾಯಕತ್ವದ ಅರಿವು ನಮಗೆ ಆಗುತ್ತದೆ ಅನ್ನುವ ಒಂದು ನಂಬಿಕೆ ಮತ್ತು ವಿಶ್ವಾಸ.
1857 ರ ಸಿಪಾಯಿ ದಂಗೆಯಿಂದ ಹಿಡಿದು 1947 ರಲ್ಲಿ ಸ್ವಾತಂತ್ರ್ಯ ಘೋಷಣೆ ಆಗುವವರೆಗೂ ನಡೆದ ಭಾರತದ ಸ್ವಾತಂತ್ರ್ಯ ಸಂಗ್ರಾಮ ಜಾಗತಿಕ ಇತಿಹಾಸದಲ್ಲಿಯೆ ಅನುಪಮ, ವಿಶಿಷ್ಠ ಮತ್ತು ಸಂಘರ್ಷಪೂರ್ಣ. ಜವಾಹರಲಾಲ್ ನೆಹರೂರವರು ಈ ಸ್ವಾತಂತ್ರ್ಯ ಸಂಗ್ರಾಮದ ಖಿಲಾಫತ್ ಚಳುವಳಿ, ಭಾರತ ಬಿಟ್ಟು ತೊಲಗಿ, ಸ್ವದೇಶೀ ಆಂದೋಲನ ಮುಂತಾದವುಗಳನ್ನು ತಮ್ಮ The Discovery of India ಪುಸ್ತಕದಲ್ಲಿ ರೋಮಾಂಚಕವಾಗಿ ವಿವರಿಸಿದ್ದಾರೆ.
17.05.1918 – Editorial in Times of India :
ಈ ಸ್ವಾತಂತ್ರ್ಯ ಚಳುವಳಿಯನ್ನು ಯಾಕೆ ಇಲ್ಲಿ ಜ್ಞಾಪಿಸಿಕೊಳ್ಳತಾ ಇದೀನಿ ಅಂದರೆ ಅಂದಿನ ಪ್ರಕ್ಷುಬ್ದ ಸಂದರ್ಭದಲ್ಲೂ Times of India ಪತ್ರಿಕೆಯವರು ಬಸವಣ್ಣನವರ ಬಗ್ಗೆ 17.05.1918 ರರಲ್ಲಿ ಸಂಪಾದಕೀಯದಲ್ಲಿ ಬರೀತಾರೆ ಅಂದರೆ ಬಸವಣ್ಣನವರ ವ್ಯಕ್ತಿತ್ವ ಎಷ್ಟರ ಮಟ್ಟಿಗೆ ಪ್ರಭಾವ ಬೀರಿತ್ತೆಂದು ನಾವು ಊಹಿಸಿಕೊಳ್ಳಬಹುದು. ಬಹುಶಃ ಅವತ್ತು ಬಸವ ಜಯಂತಿ ಅಂತ ಅನಿಸುತ್ತೆ. ಸಂಪಾದಕೀಯ ಮಂಡಳಿಯಲ್ಲಿ ಎಷ್ಟು ಚರ್ಚೆಯಾಗಿರಬಹುದು ಎನ್ನುವುದನ್ನು ನಾವು ಕಲ್ಪಸಿಕೊಳ್ಳಬಹುದು. ಅವರು ಬರೀತಾರೆ :
It was the distinctive feature of his mission that while illustrious religious and social reformers in India before him had each laid his emphasis on one or other item of religious and social reforms either subordinating more or less other items to it or ignoring them altogether. Basava sketched and boldly tried to work out a large and comprehensive programme of social reform with the elevation and independence of woman hood as its guiding point.
ಬಸವಣ್ಣನವರ ಸಾಮಾಜಿಕ ಕ್ರಾಂತಿಯ ಹೆಜ್ಜೆಗಳು ವಿಶೇಷ ಮತ್ತು ವಿಶಿಷ್ಠವಾದದ್ದವು. ಅವರಿಗಿಂತ ಮುಂಚೆಯ ಆಗಿ ಹೋದ ಸಮಾಜ ಸುಧಾರಕರ ಚಿಂತನೆಗಳು ಸಾಮಾಜಿಕ ಅಥವಾ ಧಾರ್ಮಿಕ ಪರಿವರ್ತನೆಯ ಹೆಜ್ಜೆಗಳು ಕೇವಲ ಒಂದೆರಡು ಚಿಂತನೆಗಳಿಗಾಗಿ ಮಾತ್ರ ಮೀಸಲಾಗಿದ್ದವು. ಬಸವಣ್ಣನವರ ಚಿಂತನೆಗಳು ಶ್ರೇಣಿಕೃತ ಸಮಾಜದ ಕೆಳಸ್ಥರದ ಜನರ ಜೊತೆಗೆ ಸಮಾಜದ ಸಮಗ್ರ ಏಳಿಗೆಗೆ ಸಂಬಂಧಪಟ್ಟಂಥವು. ಮಹಿಳೆಯರ ಸಮಾಜೋ ಧಾರ್ಮಿಕ ಏಳಿಗೆಗಾಗಿ ಮತ್ತು ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದರು ಮತ್ತು ಯಶಸ್ವಿಯಾಗಿ ಕಾರ್ಯರೂಪಕ್ಕೆ ತಂದವರು ಬಸವಣ್ಣನವರು.
ಬ್ರಿಟೀಷ್ ಪಾರ್ಲಿಮೆಂಟ್ ನಲ್ಲಿ 2009 ರಿಂದ 2019 ರ ವರೆಗೆ ಹತ್ತು ವರ್ಷದವರೆಗೆ ಸ್ಪೀಕರ್ ಆಗಿದ್ದಂಥವರು John Simon Bercow. ಬಸವಣ್ಣನವರ ಬಗ್ಗೆ ಆಪಾರ ಗೌರವ ಮತ್ತು ಹೆಮ್ಮೆಪಟ್ಟವರು. ಅವರು Basavanna’s Philosophy of Universal Significance ಬಗ್ಗೆ ಹೇಳಿದ್ದು ದಾಖಲಾಗಿದೆ.
Basavanna pioneered the idea of democracy and stood for civil liberties even before “Magna Carta” was signed & preached the idea of democracy 700 years before Abraham Lincoln. It is amazing & extraordinary that, Basavanna professed, adopted, campaigned and advocated genuine democracy, human rights, gender equality, way back in the 12th century even before anyone in UK had even thought about it.
ಬಸವಣ್ಣನವರು ಒಬ್ಬ ಯುಗ ಪ್ರವರ್ತಕನರಾಗಿ ಹುಟ್ಟುಹಾಕಿದ ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ಸುಧಾರಣೆಗಳನ್ನು “ಮ್ಯಾಗ್ನಾ ಕಾರ್ಟಾ” ಬರುವುದಕ್ಕಿಂತ ಮುಂಚೆಯೇ ಯಶಸ್ವಿಯಾಗಿ ಕಾರ್ಯರೂಪಕ್ಕೆ ತಂದಿದ್ದರು. ಅಮೇರಿಕದ ಅಧ್ಯಕ್ಷರಾದ ಅಬ್ರಹಾಂ ಲಿಂಕನ್ನರಿಗಿಂತ 700 ವರ್ಷಗಳ ಮುಂಚೆಯೇ ಸಾಮಜಿಕ ನ್ಯಾಯ ನೀತಿಗಳನ್ನು ಜಾರಿಗೆ ತಂದಿದ್ದರು ಬಸವಣ್ಣನವರು. 12 ನೇ ಶತಮಾನದಲ್ಲಿಯೇ ಬಸವಣ್ಣನವರು ಪ್ರಾಮಾಣಿಕವಾಗಿ ಪ್ರಜಾಪ್ರಭುತ್ವವನ್ನು, ಮಾನವ ಕಲ್ಯಾಣವನ್ನು, ಲಿಂಗ ಸಮಾನತೆಯನ್ನು ಅದ್ಭುತ ಮತ್ತು ಅಸಾಧಾರಣ ರೀತಿಯಿಂದ ಸಮಾಜದಲ್ಲಿ ಪ್ರತಿಪಾದಿಸಿ ಅಳವಡಿಸಿಕೊಂಡು ಪ್ರಚಾರಗೊಳಿಸಿದರು.
ಕ್ರಿ. ಶ. 1933 ರಲ್ಲಿ ಪ್ರಕಟವಾದ ಬ್ರಿಟೀಷ್ ಲೇಖಕ Arthur Miles ಬರೆದ ಪುಸ್ತಕ The Land of Lingam ನಲ್ಲಿ ಬಸವಣ್ಣನವರ ಸಾಮಾಜಿಕ ಸುಧಾರಣೆಯನ್ನು ಬಹಳ ಚನ್ನಾಗಿ ಬರೆದಿದ್ದಾನೆ.
THE LAND OF LINGAM written by ARTHUR MILES (Page-111) :
Whatever legend may say of Basavanna; the fact is pretty clear that he was the “First Indian Free Thinker”. He might be called the “Luther of India”. The acknowledged leadership of the priests was in full swing when Basava came upon the scene, and there was a movement on foot to replace caste and priestly authority with intelligence and free thinking.
ಬಸವಣ್ಣನವರ ಬಗ್ಗೆ ಏನೇ ದಂತ ಕಥೆಗಳಿರಲಿ, ಬಹಳ ಸ್ಪಷ್ಟವಾದ ವಿಷಯವೆಂದರೆ “ಬಸವಣ್ಣನವರು ಒಬ್ಬ ಉದಾತ್ತ ಸಮಾಜಮುಖಿ ಚಿಂತನೆಯುಳ್ಳ ವ್ಯಕ್ತಿ” ಅವರನ್ನು ಭಾರತದ ಲೂಥರ್ ಎಂದು ಹೇಳಬಹುದು. ವೈದಿಕ ಪರಂಪರೆಯು ತನ್ನ ಅಧಿಕಾರವನ್ನು ಚಲಾಯಿಸುತ್ತಿದ್ದ ಸಂಕ್ರಮಣ ಕಾಲದಲ್ಲಿ ಬಸವಣ್ಣನವರು ಎಲ್ಲ ಶ್ರೇಣೀಕೃತ ಸಮಾಜದ ಕಟ್ಟಳೆಗಳನ್ನು ಕಿತ್ತು ಹಾಕಿ ಅಂಧಕಾರದಲ್ಲಿ ಬದುಕುತ್ತಿದ್ದ ಸಮಾಜದಲ್ಲಿ ಬೆಳಕನ್ನು ತಂದರು.
ತಮ್ಮ ಈ ಸಾಮಾಜಿಕ, ಅರ್ಥಿಕ, ಸಾಂಸ್ಕೃತಿಕ, ಸಾಹಿತ್ಯಿಕ ಉನ್ನತ ಸಿದ್ಧಾಂತಗಳನ್ನು ಪ್ರತಿಪಾದಿಸಿ ಒಂದು ಅದ್ಭುತವಾದ ಪರಿವರ್ತನೆಗೊಂಡ ಸಮಾಜವನ್ನು ಎರಡೇ ಎರಡು ದಶಕಗಳಲ್ಲಿ ಕಟ್ಟಿ ನಿಲ್ಲಿಸಿದಂತಹ ಮಹಾನ್ ದಾರ್ಶನಿಕ ಬಸವಣ್ಣನವರು. ಇದು ಇಡೀ ವಿಶ್ವಕ್ಕೇ ಒಂದು ಮಾದರಿ ನಾಯಕತ್ವ.
ಇನ್ನು ಬಸವಣ್ಣನವರನ್ನು ಅತೀ ಹತ್ತಿರದಿಂದ ಕಂಡವರು ಹೇಳಿದ್ದೇನು. ಅವರು ಬಸವಣ್ಣನವರು ಕಂಡ ಸಮಾಜದ ಕ್ರಾಂತಿಯ ಭಾಗವಾಗಿ ಅನುಭವಿಸಿದ ತಳಮಳವಾದರೂ ಏನು. ಅಲ್ಲಮ ಪ್ರಭುಗಳು 12 ನೇ ಶತಮಾನದ ಆಧ್ಯಾತ್ಮ ಲೋಕ ಕಂಡಂಥ ಶ್ರೇಷ್ಠ ವಚನಕಾರರು ಮತ್ತು ಅನುಭಾವಿಗಳು. ಅನುಭವ ಮಂಟಪದ ಮೊದಲನೇಯ ಶೂನ್ಯ ಪೀಠಾಧಿಪತಿಗಳಾಗಿ ವಚನ ಸಾಹಿತ್ಯ ಲೋಕಕ್ಕೆ ಸಲ್ಲಿಸಿದ ಸೇವೆ ಅನುಪಮ ಮತ್ತು ಅದ್ಭುತ. ಕಲ್ಯಾಣದ ಕ್ರಾಂತಿಯಲ್ಲಿ ನಡೆದದ್ದನ್ನು ಕಣ್ಣಾರೆ ಕಂಡಂಥವರು. ಅವರ ಒಂದು ವಚನ ಇಡೀ ಬಸವಣ್ಣನವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ ಅನ್ನಬಹುದು.
ಕಲ್ಯಾಣವೆಂಬ ಪ್ರಣತೆಯಲ್ಲಿ | ಭಕ್ತಿರಸವೆಂಬ ತೈಲವನೆರೆದು ||
ಆಚಾರವೆಂಬ ಬತ್ತಿಯಲ್ಲಿ | ಬಸವಣ್ಣನೆಂಬ ಜ್ಯೋತಿಯ ಮುಟ್ಟಿಸಲು ||
ತೊಳಗಿ ಬೆಳಗುತ್ತಿದ್ದಿತಯ್ಯಾ | ಶಿವನ ಪ್ರಕಾಶ ||
ಆ ಬೆಳಗಿನೊಳಗೆ ಒಪುತ್ತಿದ್ದರಯ್ಯಾ | ಅಸಂಖ್ಯಾತ ಭಕ್ತಗಣಂಗಳು ||
ಶಿವಭಕ್ತರಿರ್ದ ಕ್ಷೇತ್ರವೆ | ಅವಿಮುಕ್ತ ಕ್ಷೇತ್ರವೆಂಬುದು ಹುಸಿಯೆ ||
ಶಿವಭಕ್ತರಿರ್ದ ದೇಶ | ಪಾವನವೆಂಬುದು ಹುಸಿಯೆ ||
ಗುಹೇಶ್ವರ ಲಿಂಗದಲ್ಲಿ | ಎನ್ನ ಪರಮಾರಾಧ್ಯ ||
ಸಂಗನಬಸವಣ್ಣನ | ಕಂಡು ||
ಬದುಕಿದೆನು | ಕಾಣಾ ಸಿದ್ಧರಾಮಯ್ಯಾ ||
“ಉಪಮಾ ಕಾಳಿದಾಸಸ್ಯ” ಅಂತ ಕಾವ್ಯ ಮೀಮಾಂಸೆಯಲ್ಲಿ ಕಾಳಿದಾಸನಿಗೆ ಅತಿ ದೊಡ್ಡ ಸ್ಥಾನವಿದೆ. ಕಾವ್ಯ ಮೀಮಾಂಸೆ ಅಂದರೆ ಕವಿ ಮತ್ತು ಕಾವ್ಯದ ಲಕ್ಷಣಗಳು. ಅಲಂಕಾರಗಳು ಕಾವ್ಯದ ಒಂದು ಅವಿಭಾಜ್ಯ ಅಂಗ. ಈ ಮೇಲಿನ ವಚನದಲ್ಲಿಯೂ ಸಹ ಉಪಮಾಲಂಕರಾಗಳನ್ನು ಅಲ್ಲಮ ಪ್ರಭುಗಳು ಬಳಸಿದ್ದಾರೆ. ಹಾಗೆ ನೋಡಿದರೆ ಇಡೀ ವಚನ ಸಾಹಿತ್ಯದಲ್ಲಿ ಅಲಂಕಾರಗಳ ಉಪಯೋಗವನ್ನು ಅತ್ಯಂತ ಜಾವಾಬ್ದಾರಿಯುತವಾಗಿ ಪ್ರಯೋಗಿಸಿದ್ದನ್ನು ನಾವು ಕಾಣಬಹುದು. ಈ ಅಲಂಕಾರಗಳ ವಿವರಣೆಯನ್ನು ಲೇಖನದ ಕೊನೆಗೆ ಓದುಗರ ಗಮನಕ್ಕೆ ನೀಡಲಾಗಿದೆ.
ಅಲ್ಲಮ ಪ್ರಭುಗಳ ಈ ವಚನವೇ ಒಂದು ಅಲಂಕಾರದ ವ್ಯಾಕರಣ ಶಾಲೆ ಅನ್ನಬಹುದು. ಎಲ್ಲ ಅಲಂಕಾರಗಳನ್ನೂ ಅಲ್ಲಮ ಪ್ರಭುಗಳು ಈ ವಚನದಲ್ಲಿ ಪ್ರಯೋಗಿಸಿದ್ದಾರೆ. ಕಲ್ಯಾಣವನ್ನೇ ದೀಪ ಅಂತಾ ಕರೀತಾರೆ ಅಲ್ಲಮ ಪ್ರಭುಗಳು. ವಚನದ ಗಂಭೀರತೆ ಮತ್ತು ಸೌಂದರ್ಯವನ್ನು ಹೆಚ್ಚಿಸುವ ಪ್ರಣತೆಗೆ ಹೋಲಿಸುವ ಉಪಮಾ ಅಲಂಕಾರವನ್ನು ಎಷ್ಟು ವಿಶಾಲ ದೃಷ್ಟಿಯಿಂದ ಪ್ರಯೋಗ ಮಾಡಿದ್ದಾರೆ ಅಲ್ಲಮ ಪ್ರಭುಗಳು. ಆ ದೀಪಕ್ಕೆ ಭಕ್ತಿರಸವೆಂಬ ತೈಲವನೆರೆದು, ಎಂಥ ಅದ್ಭುತ ಶಬ್ದ ಪ್ರಯೋಗ. ಇಡೀ ಸಾಮಾಜಿಕ ಸಮರಸವನ್ನೇ ಈ ತೈಲ ಸೂಚಿಸುತ್ತದೆ. ಅಚಾರವೆಂಬ ಬತ್ತಿ ಸಂಸ್ಕೃತಿಯನ್ನು ಸೂಚಿಸಿದರೆ, ಬಸವಣ್ಣನೆಂಬ ಜ್ಯೋತಿ ಬೆಳಕನ್ನು ಹುಟ್ಟು ಹಾಕುವ ಅರಿವು ಮತ್ತು ಪ್ರಜ್ಞೆಯನ್ನು ನೀಡುತ್ತದೆ.
ಬಸವಣ್ಣನೆಂಬ ಜ್ಯೋತಿಯ ಸ್ಪರ್ಷದಿಂದ ತೊಳಗಿ ಬೆಳಗುತ್ತಿದ್ದಿತ್ತಯ್ಯಾ ಶಿವನ ಪ್ರಕಾಶ. ಶಿವನ ಪ್ರಕಾಶ ಅಂದರೇನೆ ಅದು ಆಧ್ಯಾತ್ಮ ಲೋಕದ ಬೆಳಕು. ಅತ್ಯಂತ ಪವಿತ್ರವಾದ ಬೆಳಕು. ಅಂಥಾ ಶಿವನ ಪ್ರಕಾಶ ಬಸವಣ್ಣನವರ ಸ್ಪರ್ಷ ಮಾತ್ರದಿಂದಲೇ ತೊಳಗಿ ಬೆಳಗಿತು ಅಂದರೆ ಪ್ರಜ್ವಲವಾಗಿ ಅಗಾಧ ಪರಿಣಾಮ ಬೀರಿ ಇಡೀ ಕಲ್ಯಾಣವನ್ನೆ ಸಾಮಾಜಿಕವಾಗಿ ಪರಿವರ್ತನೆ ಮಾಡುವಲ್ಲಿ ಯಶಸ್ವಿಯಾಯಿತು ಅನ್ನುವುದರ ಸಾಂಕೇತಿಕ ಉಪಮಾಲಂಕಾರ.
ಇದು ಬಸವಣ್ಣನವರ ನಾಯಕತ್ವದ ಹಿನ್ನೆಲೆಯಲ್ಲಿ ನೋಡಿದಾಗ ಎಂಥ ಪರಿಣಾಮ ಬೀರಿತ್ತು ಎನ್ನುವುದರ ಕಲ್ಪನೆ ನೀಡುತ್ತದೆ. ಕೆಳ ವರ್ಗದ ಶೋಷಿತ ಸಮುದಾಯಕ್ಕೆ ಶಿಕ್ಷಿತರನ್ನಾಗಿ ಮಾಡಿದರು ಮತ್ತು ಅದರ ಜೊತೆಗೆ ಸಂಸ್ಕಾರವನ್ನೂ ನೀಡಿದರು ಎನ್ನುವುದರ ಸಂಕೇತಿಕ ಶಬ್ದ ಈ ಶಿವನ ಪ್ರಕಾಶ. ಇದನ್ನು ಬಹಳ ಹತ್ತಿರದಿಂದ ಕಂಡಂಥ ಅಲ್ಲಮ ಪ್ರಭುಗಳ ದೃಷ್ಟಿಕೋನ .
ಮುಂದುವರೆದು ಅಲ್ಲಮ ಪ್ರಭುಗಳು ಹೇಳತಾರೆ, ಆ ಬೆಳಕಿನಲ್ಲಿ ಅಸಂಖ್ಯಾತ ಭಕ್ತ ಗಣಂಗಳು ಒಪ್ಪುತ್ತಿದ್ದರಯ್ಯಾ. ಆ ಪರಿವರ್ತನೆಯ ಬೆಳಕಿನಲ್ಲಿ ಪರಿವರ್ತನೆಗೊಂಡಂಥ ಜನರು ಸಾಮೂಹಿಕವಾಗಿ ಎಲ್ಲವನ್ನೂ ಒಪ್ಪಿಕೊಂಡರು ಎನ್ನುವ ಸಂದೇಶ. ಇದು ಬಸವಣ್ಣನವರ ನಾಯಕತ್ವದ ಆಕರ್ಷಕ ಗುಣ. ಎಲ್ಲರನ್ನು ತಮ್ಮೊಂದಿಗೆ ಸೆಳದುಕೊಳ್ಳುವ ಗುಣ. ಅವಿಮುಕ್ತ ಕ್ಷೇತ್ರ ಅಂದರೆ ಎಲ್ಲ ಕಡೆಯಿಂದ ತೆರೆದಿಟ್ಟಂಥಾ ಸಮಾಜ. ಅಲ್ಲಿ ಎಲ್ಲ ಪ್ರಕ್ರಿಯೆಗಳು ಅಂದರೆ ಸಾಮಾಜಿಕ, ಧಾರ್ಮಿಕ, ಆರ್ಥಿಕ ಮತ್ತು ಸಾಹಿತ್ಯಿಕ ವಿಚಾರಧಾರೆಗಳ ಚಿಂತನೆಗಳಿಗೂ ಅವಕಾಶ ಇತ್ತು ಎನ್ನುವುದರ ಸಾಂಕೇತಿಕ ಶಬ್ದ “ಅವಿಮುಕ್ತ ಕ್ಷೇತ್ರ”. ಯಾವುದಕ್ಕೂ restriction ಇಲ್ಲ. ಎಲ್ಲವೂ ಮುಕ್ತ ಮುಕ್ತ ಮುಕ್ತ. ಅಂಥ ಕ್ಷೇತ್ರ ಪಾವನವಾಗುತ್ತದೆ. ಎಂಥ ಅಗಾಧ ಕಲ್ಪನೆ ಬಸವಣ್ಣನವರದು. ಈ ಮುಕ್ತ ಚಿಂತನೆಯನ್ನು ಅಲ್ಲಮ ಪ್ರಭುಗಳು ಈ ವಚನದಲ್ಲಿ ಎರಡೇ ಎರಡು ಸಾಲುಗಳಲ್ಲಿ ಅದ್ಭುತವಾಗಿ ಚಿತ್ರಣ ಮಾಡಿದ್ದಾರೆ ಶ್ಲೇಷಾಲಂಕಾರದ ಮೂಲಕ.
“ಬದುಕಿದೆನು” ಇದು ಅನುಭೂತಿ ಚರಿತ್ರೆ ಅಥವಾ ವಚನ ಸಾಹಿತ್ಯದಲ್ಲಿ ಬರುವ ಅತ್ಯಂತ ಶ್ರೇಷ್ಠ ಶಬ್ದ ಅಂತ ನನಗನಿಸತದ. ಗುಹೇಶ್ವರ ಲಿಂಗದಲ್ಲಿ ಬಸವಣ್ಣನನ್ನು ಕಂಡು ಬದುಕಿದೆನು ಎನ್ನುವಲ್ಲಿ ಬಸವಣ್ಣನವರಿಗೆ ಗೌರವ ಸೂಚಿಸುವ ಅಲಂಕಾರವೇ ಅಗಾಧ ಮತ್ತು ಅತ್ಯಂತ ವಿಶಿಷ್ಠ ಶಬ್ದ ಪ್ರಯೋಗ. ಇದು ಬಸವಣ್ಣನವರ ನಾಯಕತ್ವ ಎಂಥ ಪರಿಣಾಮ ಬೀರಿತ್ತು ಎನ್ನುವದರ ಕಲ್ಪನೆ. ಇದು ಕಲ್ಯಾಣ ಕ್ರಾಂತಿಯ ಅತ್ಯಂತ ಶೇಷ್ಠ ಕೊಡುಗೆ. ಅಂಥ ಅಲ್ಲಮ ಪ್ರಭುಗಳೇ ಬದುಕಿದೆನು ಎಂದರೆ ಉಳಿದ ಶರಣರು ಬಸವಣ್ಣನವರ ನಾಯಕತ್ವದಲ್ಲಿ ಬದುಕನ್ನು ಕಂಡುಕೊಂಡರು ಅನ್ನುವುದರ ಸಂಕೇತ.
ಪಕ್ಷಿನೋಟದಿಂದ Times of India ದವರು ಮತ್ತು Arthur Miles ಅವರು ಬಸವಣ್ಣನವರನ್ನು ಕಂಡ ದೃಷ್ಟಿ ಮತ್ತೊಂದು ಬಸವಣ್ಣನವರನ್ನು ಹತ್ತಿರದಿಂದ ನೋಡಿದ ಅಲ್ಲಮ ಪ್ರಭುಗಳ ದೃಷ್ಟಿಕೋನ. ಇವೆರಡೂ ಬಸವಣ್ಣವರ ಜಾಗತಿಕ ನಾಯಕತ್ವದ ಗರಿಮೆ ಮತ್ತು ಅಗಾಧತೆಯನ್ನು ಪರಿಚಯಿಸುತ್ತವೆ.
ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಮಾಜಿಕ ನ್ಯಾಯ ಒದಗಿಸುವಲ್ಲಿ ಹೋರಾಟ ಮಾಡಿದ ನಾಯಕರು ಏನು ಹೇಳಿದ್ದಾರೆ ಅನ್ನುವದನ್ನು ಪರಿಶೀಲಿಸೋಣ. ಇದು ಜಾಗತಿಕ ಮಟ್ಟದಲ್ಲಿ ಬಸವಣ್ಣನವರ ನಾಯಕತ್ವದ ತುಲನಾತ್ಮಕ ಅಧ್ಯಯನವನ್ನು ಮಾಡಲು ಸಹಕಾರಿಯಾಗುತ್ತದೆ. ದಕ್ಷಿಣ ಆಫ್ರಿಕಾದ ನೆಲ್ಸನ್ ಮಂಡೇಲಾ, ಅಮೇರಿಕಾದ ಮಾರ್ಟಿನ್ ಲೂಥರ್ ಕಿಂಗ್, ಜರ್ಮನಿಯ ಕಾರ್ಲ್ ಮಾರ್ಕ್ಸ್, ಸ್ಕಾಟ್ ಲ್ಯಾಂಡಿನ ಆಡಮ್ ಸ್ಮಿತ್ ಮತ್ತು ಫ್ರಾನ್ಸ್ ನ ಸ್ಟೆಫನಿ ತವ್ಹಾ ಲಾಮಾ ಮುಂತಾದವರ ವಿಚಾರ ಧಾರೆಗಳ ಚಿಂತನೆಯನ್ನು ಮಾಡೋಣ.
ನೆಲ್ಸನ್ ಮಂಡೇಲಾ

ಪ್ರಪಂಚ ಕಂಡ ಶ್ರೇಷ್ಠ ನಾಯಕ ನೆಲ್ಸನ್ ಮಂಡೇಲಾ. ಜನಾಂಗೀಯ ದ್ವೇಷದ ದಳ್ಳುರಿಯಲ್ಲಿ ಬೆಂದೆದ್ದ ದಕ್ಷಿಣ ಆಫ್ರಿಕಾಕ್ಕೆ ಶಾಂತ ಪ್ರಜಾಪ್ರಭುತ್ವದ ತಂಗಾಳಿಯನ್ನು ತಂದ ನಾಯಕ. ಸರಿ ಸುಮಾರು 27 ವರ್ಷ ರಾಬಿನ್ ಐಲ್ಯಾಂಡ್ (Robben Island) ಜೈಲಿನಲ್ಲಿ ಕಳೆದ ನೆಲ್ಸನ್ ಮಂಡೇಲಾ ಫೆಬ್ರುವರಿ 1990 ರಲ್ಲಿ ಬಿಡುಗಡೆಯಾಗಿ ದಕ್ಷಿಣ ಆಫ್ರಿಕಾದ ಅಧ್ಯಕ್ಷರಾಗಿ ಆಯ್ಕೆಯಾಗತಾರೆ. A Long Walk to Freedom ಎನ್ನುವ ಪುಸ್ತಕದಲ್ಲಿ ಈ ಚಳುವಳಿಯನ್ನು ಚಿತ್ರಿಸಿದ್ದಾರೆ. ಅದರಲ್ಲಿನ ಎರಡು ಸಂಗತಿಗಳನ್ನು ನಾನು ಇಲ್ಲಿ ಉಲ್ಲೇಖ ಮಾಡುತ್ತೇನೆ. ಬಸವಣ್ಣನವರ ಕ್ರಾಂತಿಗೂ ನೆಲ್ಸನ್ ಮಂಡೇಲಾ ಅವರ ಕ್ರಾಂತಿಗೂ ಬಹುತೇಕ ಹೊಂದಿಕೆಯಾಗುವುದರಿಂದ ಈ ಸಾಹಸ.
Nelson Mandela says: As I walked out the door towards the gate that would lead to my freedom, I knew if I didn’t leave my bitterness and hatred behind, I would still be in the prison.
ನೆಲ್ಸನ್ ಮಂಡೇಲಾ ಹೇಳತಾರೆ : ನಾನು ಬಿಡುಗಡೆಯಾಗಿ ಸ್ವತಂತ್ರನಾಗಿ ಜೈಲಿನ ಬಾಗಿಲಿನ ಮೂಲಕ ಹೊರ ಬಂದಾಗ ನನ್ನಲ್ಲಿದ್ದ ದ್ವೇಷ ಮತ್ತು ಕಹಿ ನೆನಪುಗಳನ್ನು ಅಲ್ಲೇ ಬಿಟ್ಟು ಬರದಿದ್ದರೆ ನಾನಿನ್ನೂ ಜೈಲಿನಲ್ಲಿ ಇರುತ್ತಿದ್ದೆ.
ದ್ವೇಷ ಅಸೂಯೆಗಳನ್ನು ಮನಸ್ಸಿನಲ್ಲಿ ಹೊತ್ತು ತಿರುಗುವುದರಿಂದ ಸಾಮಾಜಿಕ ನ್ಯಾಯ ಕ್ರಾಂತಿಗಳನ್ನು ಸಾಧಿಸಲು ಆಗುವುದಿಲ್ಲ ಎಂಬುದನ್ನು ಬಸವಣ್ಣವರೂ ಕಂಡುಕೊಂಡಿದ್ದರು.
ಕರ್ತರು ನಿಮ್ಮ | ಗಣಂಗಳು ||
ಎನ್ನ ತೊತ್ತು ಮಾಡಿ | ಸಲುಹಿದ ಸುಖವು ||
ಸಾಲೋಕ್ಯ | ಸಾಮಿಪ್ಯ ||
ಸಾರೂಪ್ಯ | ಸಾಯುಜ್ಯದಂತುಟಲ್ಲ ||
ಕೇಳಯ್ಯಾ | ಕೂಡಲಸಂಗನ ಶರಣರು ||
ತಮ್ಮ ಒಕ್ಕುದನಿಕ್ಕಿ | ಸಲಹಿದ ಸುಖವು ||
ಸಾಮಾಜಿಕ ನ್ಯಾಯ ಒದಗಿಸುವಲ್ಲಿ ಬಸವಣ್ಣನವರು ಮಾಡಿದ ಅಗಾಧ ಕೆಲಸದಲ್ಲಿ ಒಂದು ಎಲ್ಲರನ್ನೂ ಸರಿಸಮನಾಗಿ ಕಂಡಿದ್ದು, ಎರಡು ಇಡೀ ಸಮಾಜವನ್ನೇ ತಮ್ಮ ಮನೆಯಾಗಿಸಿಕೊಂಡಿದ್ದು. ಎಲ್ಲರೂ ಸೇರಿ ಬಸವಣ್ಣನನ್ನು ಸಾಕಿ ಸಲುಹಿದರು ಎನ್ನುವುದು. ಎಲ್ಲರನ್ನೂ ತಮ್ಮೊಡನೆ ಸೇರಿಸಿಕೊಂಡು ಮುಂದುವರೆಯದಿದ್ದರೆ ಕಲ್ಯಾಣ ಕ್ರಾಂತಿ ಸಾಧ್ಯವೇ ಎನ್ನುವುದು ಬಸವಣ್ಣ ಮತ್ತು ಮಂಡೇಲಾ ಅವರ ಈ ಮಾತುಗಳೆ ನಿದರ್ಶನ.
ಕಾಮ | ಸಂಗವಳಿದು ||
ಅನುಭಾವ | ಸಂಗದಲುಳಿದವರ ||
ಅಗಲಲಾರೆನು | ಶಿವಂಗೆ ಮಿಗೆ ||
ಒಲಿದವರನು ನಾನು | ಅಗಲಲಾರೆನು ||
ಕಾಣಾ | ಕೂಡಲಸಂಗಮದೇವಾ ||
ಬಸವಣ್ಣನವರು ಅನುಭಾವವನ್ನು ಪಡೆದುಕೊಂಡ ಮತ್ತು ಸಾಮಾಜಿಕ ನ್ಯಾಯ ಒದಗಿಸುವವ ಜನರನ್ನು ಬಿಟ್ಟು ಅಗಲಲಾರೆ ಅಂತಾರೆ. ಮಂಡೇಲಾ ಮತ್ತು ಬಸವಣ್ಣನವರ ಸಾಮಾಜಿಕ ಕ್ರಾಂತಿಯಲ್ಲಿ ಬಹಳಷ್ಟು ಹೋಲಿಕೆಯಿದೆ. ಯಾಕೆ ಈ ಉದಾಹರಣೆ ಅಂದರೆ ಶ್ರೇಣೀಕೃತ ಸಮಾಜದಲ್ಲಿ ಅತ್ಯಂತ ನಿಕೃಷ್ಠ ಸ್ಥಾನದಲ್ಲಿ ಇರುವ ಜನರಿಗೆ ನಾಯಕನಾದವನು ತಲುಪುವುದು ಅದೇ ಕ್ರಾಂತಿಯ ಯಶಸ್ಸು ಮತ್ತು ಶ್ರೇಷ್ಠ ನಾಯಕತ್ವದ ಹೆಗ್ಗುರುತು.
ಕಲ್ಯಾಣ ಕ್ರಾಂತಿ ಬಹಳ ಸಂಕೀರ್ಣವಾದದ್ದು. ಒಂದು ಕಡೆ ಅರಸೊತ್ತಿಗೆ ಮತ್ತು ಬಸವಣ್ಣನವರ ಚಿಂತನೆಗಳ ವಿರೋಧಿಗಳು. ಇನ್ನೊಂದು ಕಡೆ ಶ್ರೇಣೀಕೃತ ಸಮಾಜದ ಮೇಲು ಕೀಳೆಂಬ ದಬ್ಬಾಳಿಕೆ. ಮತ್ತೊಂದು ಕಡೆ ವಿಚಾರಶೀಲರು ಮತ್ತು ಅವಿದ್ಯಾವಂತರು. ಆರ್ಥಿಕ ಬಲವುಳ್ಳವರು ಮತ್ತು ಬಡವರು. ಕಾಯಕವನ್ನೇ ನಂಬಿದಂಥವರು ಮತ್ತು ಶೋಷಣೆಯನ್ನೇ ಉಪಜೀವನ ಮಾಡಿಕೊಂಡಂಥವರು. ದೇವರೆ ಎಂಥಾ ಗೋಜಲು ಗೋಜಲು ಪರಿಸ್ಥಿತಿ ಎಂದರೆ ವ್ಯಷ್ಠಿ (ವೈಯಕ್ತಿಕ) ಪ್ರಜ್ಞೆಯಿಂದ ಸಮಷ್ಠಿ (ಸಾಮೂಹಿಕ) ಪ್ರಜ್ಞೆಯವರೆಗೆ ತಲೆಕೆಟ್ಟು ಓಡಿಹೋಗುವಂಥಾ ಪರಿಸ್ಥಿತಿ. ಒಟ್ಟಾರೆ ಕಠಿಣ ಹಾದಿಯನ್ನು ಸವೆಸಿದರು ಬಸವಣ್ಣ. ಅದಕ್ಕೇನೆ ಅವರನ್ನು ವಿಶ್ವ ನಾಯಕನ ಸಾಲಿನಲ್ಲಿ ನಿಲ್ಲಿಸಿರುವದು.
“ಸಮಷ್ಠಿ” ಅಂದರೆ ಇಡೀ ಸಮಾಜ ಅಥವಾ ಸಮಸ್ತ ನಾಗರೀಕರ ಹಿತಾಸಕ್ತಿ. “ವ್ಯಷ್ಠಿ” ಅಂದರೆ ವೈಯಕ್ತಿಕ ಹಿತಾಸಕ್ತಿ. ಒಬ್ಬ ಸಮರ್ಥ ನಾಯಕನಾದವನು ವ್ಯಷ್ಠಿ ಮತ್ತು ಸಮಷ್ಠಿಯನ್ನು ಸಮತೋಲನದಿಂದ ಸಮಾಜವನ್ನು ಮುನ್ನಡೆಸಬೇಕಾಗುತ್ತದೆ. ಆ ಎರಡಕ್ಕೂ ನ್ಯಾಯ ಒದಗಿಸುವ ಮುತ್ಸದ್ದಿಯಾಗಿರಬೇಕು.
ನೆಲ್ಸನ್ ಮಂಡೇಲಾ ತಮ್ಮ ಪುಸ್ತಕ “A Long Walk to Freedom“ ದಲ್ಲಿ ಹೇಳತಾರೆ:
Lead from the back, let others believe they are in front. There go my people, who are in front of me. I must follow them, Because I am their leader. Even if I fall, they will not fall. Even if I fail, they know where to go.
ನನ್ನ ಎಲ್ಲ ಸಹೋದರ ಸಹೋದರಿಯರು ಮಾತೆಯರು ಮುಂದೆ ಇರಲಿ. ನಾನು ಅವರ ಹಿಂದೆ ನಿಂತು ಮುನ್ನಡೆಸುತ್ತೇನೆ. ಅಗೋ ನೋಡಿ ಅಲ್ಲಿ ಹೋಗುತ್ತಿದ್ದಾರೆ ನನ್ನ ಜನರು, ನಾನು ಅವರ ನಾಯಕನಾದ್ದರಿಂದ ನಾನು ಅವರನ್ನು ಹಿಂಬಾಲಿಸಬೇಕು. ಒಂದು ವೇಳೆ ನಾನು ಎಡವಿ ಬಿದ್ದರೂ ಅವರು ಎಡವಿ ಬೀಳುವುದಿಲ್ಲ. ನಾನು ಸೋಲನ್ನು ಅನುಭವಿಸಿದರೂ ಅವರರು ದಾರಿ ತಪ್ಪುವುದಿಲ್ಲ. ಯಶಸ್ಸಿನ ದಾರಿ ಹೇಗೆ ಅಂತ ಅವರಿಗೆ ಗೊತ್ತು.
ಇಡೀ ಸಮುದಾಯವನ್ನು ಮುಂದಿಟ್ಟುಕೊಂಡು, ಸಮಾಜವನ್ನು ಮುಂದಿಟ್ಟುಕೊಂಡು ನಾಯಕನಾದವನು ಮುನ್ನಡೆಸಬೇಕಾಗುತ್ತದೆ. ನೆಲ್ಸನ್ ಮಂಡೇಲಾ ಅವರ ಈ statement ನಾಯಕತ್ವ ಹೇಗಿರಬೇಕೆಂಬುದರ definition. ಅಂದ್ರ ಸಮಾಜ ಅಥವಾ ಜನರು ಹೋಗತಾ ಇರೋ ದಾರಿ ಸರಿಯಾಗಿದೆಯೇ ಎನ್ನುವುದನ್ನು ಖಾತ್ರಿ ಪಡಿಸಿಕೊಳ್ಳೊದು.
ಈ ವಿಚಾರಧಾರೆಯನ್ನು ತೀವ್ರವಾಗಿ ಪ್ರತಿಪಾದಿಸಿದವರಲ್ಲಿ ಬಸವಣ್ಣನವರು ಅಗ್ರಗಣ್ಯರು. ವರ್ಗ ರಹಿತ, ವರ್ಣ ರಹಿತ, ಲಿಂಗಭೇದ ರಹಿತ, ಆಶ್ರಮಭೇದ ರಹಿತ, ಸಾಂಸ್ಥೀಕರಣವಲ್ಲದ, ಪೌರೋಹಿತ್ಯವಲ್ಲದ ಶ್ರೇಷ್ಠತೆ ಮತ್ತು ಜ್ಯೇಷ್ಠತೆಯಿಲ್ಲದ ಸಮಾಜವನ್ನು ಕಟ್ಟಿ ಮುನ್ನಡೆಸುವಲ್ಲಿ ಕ್ರಾಂತಿಕಾರಿ ಹೆಜ್ಜೆಯಿಟ್ಟವರು. The only philosopher who advocated “Metamorphosis” is Basavanna. ಅವರ ಎರಡು ವಚನಗಳ ಮೂಲಕ ಈ ನಾಯಕತ್ವದ ಮೂಲವನ್ನು ನೋಡುವ ಪ್ರಯತ್ನ ಮಾಡೋಣ.
ಭಕ್ತಿಯಿಲ್ಲದ | ಬಡವ ನಾನಯ್ಯ ||
ಕಕ್ಕಯ್ಯನ | ಮನೆಯಲ್ಲೂ ಬೇಡಿದೆ ||
ಚೆನ್ನಯ್ಯನ | ಮನೆಯಲ್ಲೂ ಬೇಡಿದೆ ||
ದಾಸಯ್ಯನ | ಮನೆಯಲ್ಲೂ ಬೇಡಿದೆ ||
ಎಲ್ಲ ಪುರಾತರು | ನೆರೆದು ||
ಭಕ್ತಿ | ಭಿಕ್ಷೆಯನಿಕ್ಕಿದೊಡೆ ||
ಎನ್ನ ಪಾತ್ರೆ | ತುಂಬಿತ್ತು ||
ನೋಡಾ | ಕೂಡಲಸಂಗಮದೇವಾ || ಇವನಾರವ | ಇವನಾರವ ||
ಇವನಾರವನೆಂದೆ | ನಿಸದಿರಯ್ಯಾ ||
ಇವ ನಮ್ಮವ | ಇವ ನಮ್ಮವ ||
ಇವ | ನಮ್ಮವನೆಂದೆನಿಸಯ್ಯ ||
ಕೂಡಲಸಂಗಮದೇವಾ | ನಿಮ್ಮ ||
ಮನೆಯ | ಮಗನೆಂದೆನಿಸಯ್ಯ ||
ಇಡೀ ಜಗತ್ತಿನಲ್ಲಿ ಎಲ್ಲಿಯೂ ಕಾಣಲಿಕ್ಕೆ ಸಾಧ್ಯವಾಗದ, ಎಲ್ಲಿಯೂ ಕೇಳಲು ಸಿಗದ ಒಂದು ಸಮಾಜಮುಖಿ ಚಿಂತನೆಯುಳ್ಳ ನಾಯಕತ್ವ ಬಸವಣ್ಣನವರಲ್ಲಿತ್ತು. ಬಸವಣ್ಣವರ ನಾಯಕತ್ವವನ್ನು ಮತ್ತು ವ್ಯಕ್ತಿತ್ವವನ್ನು ಒಂದೇ ವಚನದಲ್ಲಿ ಹಿಡಿದಿಡಬಹುದಾದಂಥ ವಚನ ಅಂದರೆ ನನ್ನ ದೃಷ್ಟಿಯಲ್ಲಿ ಇದೇನೆ.
“Good leaders must first become good servants.”
Robert Greenleaf.
Robert Greenleaf (1904–1990) was the founder of “Servant leadership movement” and the “Greenleaf Center for Servant Leadership”. Greenleaf was born in Terre Haute, Indiana (USA) in 1904. After graduating from Carleton College in Minnesota, he went to work for AT&T. For the next forty years he researched management, development & education. In 1964 he took an early retirement to found the Greenleaf Center for Servant Leadership (first called the “Center for Applied Ethics”).
“ಭಕ್ತಿಯಿಲ್ಲದ ಬಡವ ನಾನಯ್ಯಾ” ಅಂತ ಭಿಕ್ಷಾಪಾತ್ರೆ ಹಿಡಕೊಂಡು ಶ್ರೇಣಿಕೃತ ಸಮಾಜದ ನಿಕೃಷ್ಠ ಜನರ ಮುಂದೆ ನಿಂತು ಭಿಕ್ಷೆ ಕೇಳಿದಾಗ ಅವರ ಮನಸ್ಥಿತಿಯನ್ನು ಒಮ್ಮೆ ಯೋಚಿಸಿ ನೋಡಿ. ನಿಮ್ಮ ಮನೆಯ ಮಗ ನಾನು ಅಂದಾಗ ಶೋಷಣೆಗೆ ಒಳಗಾಗಿದ್ದಂಥ ಅತ್ಯಂತ ಕೀಳು ಮಟ್ಟದಲ್ಲಿಂದಂಥಾ ಜನರ ಅಂತರಂಗದೊಳಗೆ ಅಡಗಿದ್ದ ಸಚೇತಕ ಶಕ್ತಿಯನ್ನು ಎಬ್ಬಿಸಿ ಹೊರಗೆ ತರುವಂಥಾ ಶಕ್ತಿ ಈ ಶಬ್ದಗಳಿಗಿದೆ.
ಅತ್ಯಂತ ಕೀಳುಮಟ್ಟದಲ್ಲಿ ನೋಡುತ್ತಿದ್ದಂಥಾ ಕಾಲಘಟ್ಟದಲ್ಲಿ ಆ ಜನಗಳ ಎದುರು ನಿಂತುಕೊಂಡು, ನೀವೆಲ್ಲರೂ ನನ್ನ ಜೊತೆ ಬನ್ನಿ ನಿಮಗೆ ದಾರಿ ತೋರಿಸುತ್ತೇನೆ ನಾನು ನಿಮ್ಮ ನಾಯಕ ಅಂತ ಏನಾದರೂ ಬಸವಣ್ಣ ಅಂದುಬಿಟ್ಟಿದ್ದರೆ ಜನರು ಬಸವಣ್ಣವರನ್ನು ಹೋಲಿಕೆ ಮಾಡತೊಡಗುತ್ತಿದ್ದರು. Literally Speaking Comparison ಗೆ ಇಳಿದು ಬಿಡತಿದ್ದರು ಅಂತ ಅನಿಸುತ್ತೆ.
ಭಕ್ತಿ ಭಂಡಾರಿ ಬಸವಣ್ಣನವರೆಲ್ಲಿ ಕನಿಷ್ಠರಾದ ನಾವೆಲ್ಲಿ ???
ಬಸವಣ್ಣನವರ ಜ್ಞಾನವೆಲ್ಲಿ ನಮ್ಮ ಜ್ಞಾನವೆಲ್ಲಿ ???
ಬಸವಣ್ಣನವರ ಕುಲವೆಲ್ಲಿ ನಮ್ಮ ಕುಲವೆಲ್ಲಿ ???
ಬಸವಣ್ಣನವರ ಗೌರವ ಘನತೆಯೆಲ್ಲಿ ನಮ್ಮ ಗೌರವ ಘನತೆಯೆಲ್ಲಿ ???
ಹೀಗೆ ಬಸವಣ್ಣವರ ಮತ್ತು ಸಮಾಜದ ನಡುವೆ ಒಂದು ಕಂದಕ ನಿರ್ಮಾಣ ಆಗುತ್ತಿತ್ತು. ಇದನ್ನೇ ಸಮಾಜ ಶಾಸ್ತ್ರದಲ್ಲಿ “ಮಾನಸಿಕ ಕಂದಕ” (Psychological Distancing) ಅನ್ನೋದು. ಯಾವಾಗ ನಾಯಕ ಮತ್ತು ಸಮಾಜದ ನಡುವೆ ಒಂದು ಕಂದಕ ಏರ್ಪಡುತ್ತದೆಯೋ ಅಲ್ಲಿಗೆ ಆ ಕ್ರಾಂತಿ ನಿಂತು ಹೋಗಿ ಸತ್ತೇ ಹೋಗತದ. ಈ ಒಂದು ವಚನದಿಂದ ಬಸವಣ್ಣನವರು ಅನಾಮತ್ತಾಗಿ ಈ ಮಾನಸಿಕ ಕಂದಕವನ್ನು ಕಿತ್ತು ಬಿಸಾಕತಾರೆ.
In Modern Management Theory there are 4 types of Leaderships:
S1: Directive Leadership (High Directive & Low Supportive)
It sets clearly defined objectives and rules for team members. This is based on the path-goal theory developed by Martin G. Evans in 1970. Directive leadership is most common in a military setting.
S2: Authoritative Leadership (High Directive & High Supportive)
This is used when leaders tell their employees what they want and how they want it accomplished, without getting the advice of their followers.
S3: Participative Leadership (Low Directive & High Supportive)
This style involves the leader including one or more employees in the decision making process (determining what to do and how to do it). However, the leader maintains the final decision making authority.
S4: Delegative Leadership (Low Directive & Low Supportive)
In this style, the leader allows the employees to make the decisions. However, the leader is still responsible for the decisions that are made.
ಮೇಲೆ ಹೇಳಿದ ಯಾವುದೇ ನಾಯಕತ್ವದ ಪ್ರಕಾರಗಳನ್ನು ನಾವು ಬಸವಣ್ಣನವರ ನಾಯಕತ್ವದಲ್ಲಿ ಕಾಣೋದಿಲ್ಲ. ಈ ಎಲ್ಲ Theory ಗಳನ್ನು ಬೇರು ಸಹಿತ ಬುಡಮೇಲು ಮಾಡಿ ಒಂದು ಹೊಸ ನಾಯಕತ್ವದ ಥಿಯರಿಯನ್ನು ಯನ್ನು 12 ನೇ ಶತಮಾನದಲ್ಲಿ ಬಸವಣ್ಣನವರು ಹುಟ್ಟು ಹಾಕತಾರೆ. ಅದೇ Motivational Leadership Theory. ಮನೋ ಮಂದಿರದಲ್ಲಿ ನಡೆದ ಕಲ್ಯಾಣ ಕ್ರಾಂತಿಯ ಅದ್ಭುತ ಪರಿವರ್ತನೆ ಅಂದರೆ ಬಸವಣ್ಣನವರು ನಾಯಕರಲ್ಲಾ “ನಾವೆಲ್ಲರೂ ನಾಯಕರು” ಮತ್ತು we are bound to do it ಎನ್ನುವ soft command ನ್ನು ಎಲ್ಲರೂ ಸ್ವೀಕರಿಸಿದ್ದರು. ಅಂದರೆ ಇಡೀ ಸಮಾಜ ತಮ್ಮ ಕೀಳರಿಮೆಯ ಚಿಪ್ಪಿನಿಂದ ಹೊರಬಂದು ಮಾನಸಿಕವಾಗಿ ಸಿದ್ಧವಾಗಿ ಕಲ್ಯಾಣದ ಕ್ರಾಂತಿಯಲ್ಲಿ ಭಾಗವಹಿಸುತ್ತಾರೆ. ಇದು ಜಾಗತಿಕ ಇತಿಹಾಸದಲ್ಲಿ ಬಸವಣ್ಣನವರು ಹುಟ್ಟು ಹಾಕಿದ ಹೊಚ್ಚ ಹೊಸ ಪ್ರಯೋಗ. ಇಂದಿಗೂ ಈ ಪ್ರಯೋಗವನ್ನು ಸುಧಾರಿಸುವುದಕ್ಕೆ ಸಾಧ್ಯ ಆಗಿಲ್ಲಾ ಯಾಕೆಂದರೆ ಅದು ಅತ್ಯಂತ ಸುಧಾರಿತ ಸೂತ್ರ (Modified & Modernized Theory) ಯನ್ನು ಬಸವಣ್ಣನವರು ಜಗತ್ತಿಗೆ ಕೊಟ್ಟಿದ್ದಾರೆ.
ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್ :

ಮಾರ್ಟಿನ್ ಲೂಥರ್ ಕಿಂಗ್ (ಜ್ಯೂನಿಯರ್) (15.01.1929 – 04.04.1968) ಅಮೇರಿಕಾ ಸಂಯುಕ್ತ ಸಂಸ್ಥಾನದ ಆಟ್ಲಾಂಟ ನಗರದಲ್ಲಿ ಜನಿಸಿದ ಡಾ. ರೆವೆರೆಂಡ್ ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್, ವರ್ಣಭೇಧನೀತಿಯ ವಿರುಧ್ಧ ಹೋರಾಡಿದ ಪ್ರಮುಖ ಕಪ್ಪು ನಾಯಕರಲ್ಲೊಬ್ಬರು. ಇವರನ್ನು ಗೌರವಿಸಿದ ಪ್ರಶಸ್ತಿಗಳಲ್ಲಿ “ನೊಬೆಲ್ ಶಾಂತಿ ಪ್ರಶಸ್ತಿ” ಮತ್ತು “ಅಮೇರಿಕದ ಅಧ್ಯಕ್ಷರ ಸ್ವಾತಂತ್ರ್ಯ ಪದಕ” ಗಳು ಪ್ರಮುಖವಾದವು. ಮಹಾತ್ಮ ಗಾಂಧಿಯವರಿಂದ ಪ್ರಭಾವಿತರಾಗಿದ್ದ ಇವರ ಅಹಿಂಸಾತ್ಮಕ ಚಳುವಳಿ ಮತ್ತು ಸರಳ ನಡವಳಿಕೆಗಳು, ಇವರ ಚಳುವಳಿಯನ್ನು ಜಗತ್ತಿನಾದ್ಯಂತ ಜನಪ್ರಿಯಗೊಳಿಸಿದವು. 04.04.1968 ರಂದು ಇವರು ಹಂತಕನ ಗುಂಡಿಗೆ ಬಲಿಯಾಗಿ ಹುತಾತ್ಮರಾದರು.
ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್ ಅವರು ಬಾಲ್ಯದಿಂದಲೂ ಇಡೀ ಜಗತ್ತಿನ ಜನಾಂದೋಲನ ಸಾಹಿತ್ಯವನ್ನು ಸಮಗ್ರವಾಗಿ ಅಭ್ಯಾಸ ಮಾಡಿದವರು. ಆದರೆ ಅವರು ಅತ್ಯಂತ ಪ್ರಭಾವಿತರಾಗಿದ್ದು ಮಾಹಾತ್ಮಾ ಗಾಂಧೀಜಿಯವರ ಅಹಿಂಸಾತ್ಮಕ ಹೋರಾಟಕ್ಕೆ.
ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್ ಅವರ ಪ್ರಸಿದ್ಧ ಹೇಳಿಕೆಗಳು ಅಥವಾ ಉಲೇಖಗಳಲ್ಲಿ ಕೆಲವೊಂದನ್ನು ಬಸವಣ್ಣನವರ ವಚನಗಳ ಮೂಲಕ ತಿಳಿದುಕೊಳ್ಳುವದರಿಂದ ಜಾಗತಿಕ ಮಟ್ಟದಲ್ಲಿ ಬಸವಣ್ಣನವರ ವಿಚಾರಧಾರೆಗಳು ಎಷ್ಟರ ಮಟ್ಟಿಗೆ ಹೋಲಿಕೆಯಾಗುತ್ತವೆ ಎನ್ನುವುದರ ಪರಿಕಲ್ಪನೆ ನಮಗಾಗಬಹುದು.
Never be afraid to do what’s right, especially if the well-being of a person or animal is at stake. Society’s punishments are small compared to the wounds we inflict on our soul when we look the other way.
ಸಕಲ ಚರಾಚರ ವಸ್ತುಗಳ ಮತ್ತು ಜನಸಾಮಾನ್ಯರ ಒಳಿತಿಗಾಗಿ ಮಾಡುವ ಕೆಲಸ ಸತ್ಯ ಮತ್ತು ಸರಿಯಿದ್ದರೆ ಆ ಕೆಲಸವನ್ನು ಮಾಡಲು ಹಿಂಜರಿಯುವದು ಬೇಡ ಮತ್ತು ಹೆದರುವುದು ಬೇಡ. ಜನಸಾಮಾನ್ಯರ ಘಾಸಿಗೊಂಡ ಮನ ಅಥವಾ ಅತ್ಮಗಳಿಗಾದ ಗಾಯಗಳನ್ನು ಹೋಲಿಸಿದರೆ ಸಮಾಜ ನೀಡುವ ಶಿಕ್ಷೆ ನಮಗೆ ಅತಿ ಚಿಕ್ಕವು ಅಥವಾ ಕನಿಷ್ಠವಾದವು.
ನಿಂದಿಸುವನೊಬ್ಬ | ಸ್ತುತಿಸುವನೊಬ್ಬ ||
ಇವರಿಬ್ಬರು ನಮ್ಮ | ಶಿವಯೋಗಿಯ ||
ಪರಮ | ಬಂಧುಗಳಯ್ಯಾ ||
ಪಾಪವನೊಬ್ಬ ಕೊಂಬ | ಪುಣ್ಯವನೊಬ್ಬ ಕೊಂಬ ||
ಕೂಡಲಸಂಗಮದೇವಾ | ನಿಮ್ಮ ಶರಣರು ನಿತ್ಯಮುಕ್ತರು ||
Injustice anywhere is a threat to justice everywhere. We are caught in an inescapable network of mutuality, tied in a single garment of destiny. Whatever affects one directly, affects all indirectly.
ಅನ್ಯಾಯ ಎಲ್ಲಿಯೇ ನಡೆದರೂ ಅದು ನ್ಯಾಯದ ಮೇಲೆ ನಡೆದ ದಾಳಿ ಮತ್ತು ದಬ್ಬಾಳಿಕೆ. ನಾವೆಲ್ಲರೂ ಒಂದು ಅವಿಚ್ಛಿನ್ನವಾದ ಸಂಭಂಧ, ಸಹಾನುಭೂತಿ ಮತ್ತು ಗಮ್ಯ ಸ್ಥಾನವನ್ನು ಸೇರುವಲ್ಲಿ ಒಂದಾನೊಂದು ರೀತಿಯಲ್ಲಿ ಬಂಧಿಸಲ್ಪಟ್ಟಿದ್ದೇವೆ.
ಬೆದಕದಿರು | ಬೆದಕದಿರು ||
ಬೆದಕಿದಡೆ | ಹುರುಳಿಲ್ಲ ||
ಚಿತ್ತರಕಟ್ಟೆಯ | ಕಾಯಲ್ಲಿ ||
ಮತ್ತೇನನ | ರಸುವಿರಯ್ಯಾ ||
ನಿಮ್ಮ | ಉತ್ತಮಿಕೆಯ ||
ಪೂರೈಸುವುದು | ಕೂಡಲಸಂಗಮದೇವಾ ||
I look to a day when people will not be judged by the color of their skin, but by the content of their character.
ಕಪ್ಪು ಬಣ್ಣದ ಜನ ಅಥವಾ ಕಪ್ಪು ಜನಾಂಗವನ್ನು ಸಮಾಜ ಅವರ ಉತ್ತಮ ನಡತೆ, ತ್ತಮ ಗುಣ ಲಕ್ಷಣಗಳು ಮತ್ತು ಉತ್ತಮ ಸ್ವಭಾವಗಳನ್ನು ಗುರುತಿಸುವ ದಿನಗಳನ್ನು ನಾನು ಆಶಾ ಭಾವನೆಯಿಂದ ಎದುರು ನೋಡುತ್ತಿದ್ದೇನೆ.
ಲಿಂಗವ ಪೂಜಿಸಿ | ಫಲವೇನಯ್ಯಾ ||
ಸಮರತಿ ಸಮಕಳೆ | ಸಮಸುಖವನರಿಯದನ್ನಕ್ಕ ||
ಲಿಂಗವ ಪೂಜಿಸಿ | ಫಲವೇನಯ್ಯಾ ||
ಕೂಡಲಸಂಗಮದೇವರ | ಪೂಜಿಸಿ ||
ನದಿಯೊಳಗೆ ನದಿ | ಬೆರೆಸಿದಂತಾಗದನ್ನಕ್ಕ ||
A man dies when he refuses to stand up for that which is right. A man dies when he refuses to stand up for justice. A man dies when he refuses to take a stand for that which is true.
ಯಾವುದು ಸರಿ ಅದರ ಪರವಾಗಿ ನಿಲ್ಲದಿದ್ದರೆ ಆ ಮನುಷ್ಯ ಸತ್ತಂತೆ. ನ್ಯಾಯದ ಪರವಾಗಿ ಯಾವ ಮನುಷ್ಯ ನಿಲ್ಲುವಿದಿಲ್ಲವೋ ಆತ ಸತ್ತಂತೆ. ಸತ್ಯದ ಪರವಾಗಿ ಯಾವ ಮನುಷ್ಯ ನಿಲ್ಲುವುದಿಲ್ಲವೋ ಅವನು ಸತ್ತಂತೆ.
ಸಮಯ ವಿರುದ್ಧಕ್ಕಂಜಿ | ವಿನಯವ ನುಡಿವೆ ||
ಕೊಂದಡೆ ಕೊಲ್ಲು | ಕಾಯ್ವಡೆ ಕಾಯಿ ||
ಎನ್ನವರೆಂದು | ಮನ ||
ಹಿಡಿಯದು | ಕೂಡಲಸಂಗಮದೇವಾ ||
Oppressed people cannot remain oppressed forever. The yearning for freedom eventually manifests itself.
ಕೀಳುಮಟ್ಟಕ್ಕೆ ತಳ್ಳಲ್ಪಟ್ಟ ಅಥವಾ ದೂಡಲ್ಪಟ್ಟ ಜನರು ಅಲ್ಲಿಯೇ ಉಳಿದುಕೊಳ್ಳಲಾರರು. ಸ್ವಾತಂತ್ರ್ಯಕ್ಕೆ ಪರಿತಪಿಸುವ ಮತ್ತು ಹೋರಾಟ ಮಾಡುವ ಜನರಿಗೆ ಸ್ವಾತಂತ್ರ್ಯ ಸಿಕ್ಕೇ ಸಿಗುತ್ತದೆ.
ಸಂಜೆಯ ಮಂಜಿನ | ಕಪ್ಪು ಅಂಜಿದಡೆ ||
ಶಂಕೆ | ತದ್ರೂಪವಾಗಿ ನಿಂದಿತ್ತು ||
ತನ್ನ ಭಾವದ | ನಟನೆ ||
ನಡೆವನ್ನಕ್ಕ | ನಡೆಯಿತ್ತು ||
ಅದು | ನಿಂದಲ್ಲಿಯೇ ನಿಂದಿತ್ತು ||
ಅದರಂತುವನರಿದಡೆ | ಹಿಂದೆ ಹುಸಿ ||
ಮುಂದೆ ಕೂಡಲಸಂಗಮದೇವನ | ನಿಲವು ತಾನೆ ||
If you can’t fly then run, if you can’t run then walk, if you can’t walk then crawl, but whatever you do you have to keep moving forward.
ಆಕಾಶದಲ್ಲಿ ಹಾರಾಡುವುದಕ್ಕೆ ಆಗದಿದ್ದರೆ ನೆಲದ ಮೇಲಾದರೂ ಓಡಬೇಕು. ಒಡುವುದಕ್ಕೆ ಆಗದಿದ್ದರೆ ನಡೆಯಲೇಬೇಕು. ನಡೆಯುವದಕ್ಕೆ ಆಗದಿದ್ದರೆ ತೆವಳುವ ಛಾತಿ ಇರಬೇಕು. ಏನಾದರೂ ಮಾಡು ಒಟ್ಟಾರೆ ಮುಂದೆ ಹೋಗುವುದನ್ನು ನಿಲ್ಲಿಸಬೇಡ.
ಹೊತ್ತಾರೆ ಎದ್ದು | ಅಗ್ಘವಣಿ ಪತ್ರೆಯ ತಂದು ||
ಹೊತ್ತು ಹೋಗದ | ಮುನ್ನ ಪೂಜಿಸು ಲಿಂಗವ ||
ಹೊತ್ತು ಹೋದ ಬಳಿಕ | ನಿನ್ನನಾರು ಬಲ್ಲರು ||
ಹೊತ್ತು ಹೋಗದ ಮುನ್ನ | ಮೃತ್ಯುವೊಯ್ಯದ ಮುನ್ನ ||
ತೊತ್ತುಗೆಲಸವ ಮಾಡು | ಕೂಡಲಸಂಗಮದೇವಾ ||
ಮಾಹಾತ್ಮಾ ಗಾಂಧೀಜಿಯವರ ಅಹಿಂಸಾತ್ಮಕ ಹೋರಾಟದ ವಿಚಾರಧಾರೆಗಳಿಗೆ ಮಾರು ಹೋಗಿದ್ದ ಮಾರ್ಟಿನ್ ಲೂಥರ್ ಕಿಂಗ್ ಅವರಿಗೆ ಬಸವಣ್ಣನವರ ವಚನ ಸಾಹಿತ್ಯ ಸಿಕ್ಕಿದ್ದರೆ ಇನ್ನೂ ಉತ್ತಮ ಹೋರಾಟವಾಗುತ್ತಿತ್ತು ಎನ್ನುವುದರಲ್ಲಿ ಸಂಶಯವೇ ಇಲ್ಲ ಎನ್ನುವುದಕ್ಕೆ ಮೇಲೆ ಉದಾಹರಿಸಿದ ವಚನಗಳೇ ಸಾಕ್ಷಿ. ಇದು ಜಾಗತಿಕ ನಾಯಕತ್ವದ ಒಂದು ತುಲನಾತ್ಮಕ ವಿಶ್ಲೇಷಣೆ. ಪ್ರಜೆಗಳ ಮೇಲೆ ಎಂಥಾ ಅದ್ಭುತ ಪರಿಣಾಮ ಬೀರುತ್ತದೆ ಎನ್ನುವುದಕ್ಕೆ ನಿದರ್ಶನ.
ಸ್ಟೇಫನಿ ತವ್ಹಾ ಲಾಮಾ ರೇವಾಲ್ (ಫ್ರಾನ್ಸ್)
Stephanie Tawa Lama-Rewal (France) :

ಫ್ರಾನ್ಸ್ ಮಹಿಳೆ ಡಾ. ಸ್ಟೇಫನಿ ತವ್ಹಾ ಲಾಮಾ ರೇವಾಲ್ ದಕ್ಷಿಣ ಏಷಿಯಾ ದೇಶಗಳ ಅಧ್ಯಯನ ಕೇಂದ್ರ (Centre for South Asian Studies: CNRS-EHESS) ದಲ್ಲಿನ ಅವರ ಸಂಶೋಧನಾ ಪ್ರಭಂಧ “Electoral Reservations, Political Representation and Social Change in India” ಪರಿವರ್ತನೆ ಯಲ್ಲಿ ಮಹಿಳೆಯರ ಪಾತ್ರವನ್ನು ವಿಶ್ಲೇಷಣೆ ಮಾಡಿದ್ದಾರೆ.
ಅಮೇರಿಕಾದಲ್ಲಿ 1779 ರಿಂದ ಚುನಾವಣೆ ನಡೀತಾ ಇದ್ದರೂ ಮಹಿಳೆಯರಿಗೆ ಮತದಾನದ ಹಕ್ಕು ಸಿಕ್ಕಿದ್ದು 1924 ರಲ್ಲಿ. ಕಪ್ಪು ಜನಾಂಗದ ಮಹಿಳೆಯರು ಮತದಾನ ಮಾಡಿದ್ದು 1940 ರಲ್ಲಿ. ಇಂಗ್ಲಂಡಿನಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ನೀಡಿದ್ದು 1926 ರಲ್ಲಿ. ಜರ್ಮನಿ ಮತ್ತು ಫ್ರಾನ್ಸ್ ನಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ಸಿಕ್ಕಿದ್ದು 1945 ರಲ್ಲಿ. ಸ್ವಿಟ್ಝರ್ ಲ್ಯಾಂಡ್ ನಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ಬಂದಿದ್ದು 1972 ರಲ್ಲಿ. ಆದರೆ ಭಾರತದಲ್ಲಿ ಸ್ವಾತಂತ್ರ್ಯ ಬಂದಾಗ ಮಹಿಳೆಯರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಯಿತು. ಬಸವಣ್ಣವರು ಹುಟ್ಟುಹಾಕಿದ ಅನುಭವ ಮಂಟಪದಲ್ಲಿ 54 ಮಹಿಳೆಯರು ಸ್ವತಂತ್ರವಾಗಿ ವಚನಗಳನ್ನು ಬರೆದು ಹೆಸರುವಾಸಿಯಾದರು.
ಮಹಿಳಾ ಹಕ್ಕು, ಸ್ತ್ರೀ ಸ್ವಾತಂತ್ರ್ಯ ಮಹಿಳಾ ಶೋಷಣೆ ಅಂತೆಲ್ಲಾ ಘೋಷಣೆಗಳನ್ನು ಕೂಗುತ್ತಾ ಇದ್ದೇವೆ. ಹನೆರಡನೇ ಶತಮಾನದಲ್ಲಿ ಮಹಿಳೆಯರಿಗೆ ಎಷ್ಟು ಗೌರವ ಕೊಟ್ಟಿದ್ದರು ಬಸವಣ್ಣನವರು ಅಂದರೆ ವಿಶ್ವ ನಾಯಕ ಎನ್ನುವದು ಸಾರ್ಥಕ. ಅವರ ಒಂದು ವಚನವನ್ನು ನೋಡಿ ಮುಂದೆ ಹೋಗೋಣ.
ಮುದ್ದ ನೋಡಿ | ಮುಖವ ನೋಡಿ ||
ಮೊಲೆಯ ನೋಡಿ | ಮುಡಿಯ ನೋಡಿ ||
ಕರಗಿ | ಕೊರಗುವದೆನ್ನ ಮನ ||
ಲಿಂಗದೇವನ ಧ್ಯಾನವೆಂದಡೆ | ಕರಗಿ ಕೊರಗದೆನ್ನ ಮನ |
ಆನು ಭಕ್ತನೆಂಬಡೆ | ಲಜ್ಜೆಯಿಲ್ಲ ನೋಡಯ್ಯಾ ||
ಎನ್ನ ತಂದೆ | ಕೂಡಲಸಂಗಮದೇವಯ್ಯ ||
ಒಲಿದು | ಒಪ್ಪಗೊಂಡನಾದಡೆ ||
ಆನು ಚೆಂಗಳೆಯ | ಬಸುರಲ್ಲಿ ಬಾರದಿಹನೆ ||
ಮಹಿಳೆಯರ ಪ್ರತಿ ಬಸವಣ್ಣನವರಿಗೆ ಎಂಥ ಉದಾತ್ತ ಚಿಂತನೆ ಇತ್ತು ಎನ್ನುವುದನ್ನು ಈ ವಚನ ಸಾರುತ್ತದೆ. ಎಷ್ಟೇ ಸುಂದರವಾಗಿರುವ ಹೆಣ್ಣಮಗಳನ್ನು ನೋಡಿದರೂ ಅವಳು ತಾಯಿ ಎನ್ನುವ ಕಲ್ಪನೆಯೇ ಅತ್ಯಂತ ಶ್ರೇಷ್ಠ ಮನೋಧರ್ಮ. ಇದಕ್ಕಾಗಿಯೇ ಬಸವಣ್ಣನವರನ್ನು ನಾವು ವಿಶ್ವನಾಯಕನೆಂದು ಹೆಮ್ಮೆಯಿಂದ ಹೇಳಿಕೊಳ್ಳುವುದು. ಸ್ಟೇಫನಿ ತವ್ಹಾ ಲಾಮಾ ರೇವಾಲ್ ತಮ್ಮ ಸಂಶೋಧನ ಪ್ರಭಂಧದಲ್ಲಿ ಬಾರತದಲ್ಲಿ ಮಹಿಳೆಯರಿಗೆ ಎಂಥ ಉತ್ತಮ ಸ್ಥಾನವಿತ್ತು ಎಂಬುದನ್ನು ಪ್ರತಿಪಾದಿಸಿದ್ದು.
ಜಾಗತಿಕ ಮಟ್ಟದಲ್ಲಿ ಒಂದು Comparison ಮಾಡೋದಕ್ಕೆ ಅಂದರೆ ತುಲನಾತ್ಮಕ ಅಧ್ಯಯನ ಮಾಡೋದಕ್ಕೆ ಮತ್ತೊಂದು ಉದಾಹರಣೆ ಸ್ಕಾಟ್ ಲ್ಯಾಡ್ ನ ಆಡಮ್ ಸ್ಮಿತ್. ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಹೃದಯಕ್ಕೆ ಪ್ರವೇಶ ಮಾಡುವಂಥ ಸೂಕ್ಷ್ಮ ಮತ್ತು ತೀಕ್ಷ್ಣ ವಿಚಾರಧಾರೆ ನಾಯಕನಾದವನಿಗೆ ಇರಬೇಕು ಎನ್ನುವುದು ಈ ಉದಾಹರಣೆಯ ಉದ್ದೇಶ.
ಆಡಮ್ ಸ್ಮಿತ್ (ಸ್ಕಾಟ್ ಲ್ಯಾಂಡ್) – Adam Smith (FRSA – Fellow Royal Society of Arts) (1723 –1790) :

ಆಡಮ್ ಸ್ಮಿತ್ ಸ್ಕಾಟ್ ಲ್ಯಾಂಡ್ ನ ಪ್ರಖ್ಯಾತ ಅರ್ಥಶಾಸ್ತ್ರಜ್ಞ, ತತ್ವಜ್ಞಾನಿ ಮತ್ತು ಶ್ರೇಷ್ಠ ಲೇಖಕ. ಇವರನ್ನು “ಅರ್ಥಶಾಸ್ತ್ರದ ಜನಕ” (The Father of Economics) ಅಂತಲೂ ಕರಿತಾರೆ. ಆಡಮ್ ಸ್ಮಿತ್ ಅವರ ಎರಡು ಪುಸ್ತಕಗಳು ಒಂದು “The Theory of Moral Sentiments (1759)” ಮತ್ತೊಂದು “Inquiry into the Nature and Causes of the Wealth of Nations (1776)” ಅತ್ಯಂತ ಪ್ರಸಿದ್ಧವಾದವುಗಳು.
ಅವರುಗಳ ಒಂದು ಪುಸ್ತಕಗಳ ವಿಮರ್ಶೆಯನ್ನು ಮಾಡುವಾಗ ಸುಪ್ರಸಿದ್ಧ ಲೇಖಕರು ಬಸವಣ್ಣವರ ಆರ್ಥಿಕ ನೀತಿಗಳಿಗೆ ಹೋಲಿಸಿ ಬೆರೆದಿದ್ದಾರೆ.
Basavanna’s economic thoughts emerging from Vachana Literature stands on a much higher plane in relation to those of Adam Smith, the so called “Father of Economics of the 18th Century” – as embedded in his book “Inquiry into the Nature and Causes of the Wealth of Nations” and equally so in relation to those of Karl Marx, the architect of communism of the 19th century as contained in his book “Das Capital”. We say so, because the economic ideas enshrined in the Vachana Literature stand on ethical spiritual plane as against just a materialistic plane on which others stand. Hence, they have an everlasting value and significance.
18 ನೇ ಶತಮಾನದಲ್ಲಿ “ಆರ್ಥಿಕತೆಯ ಜನಕ” ಎಂದೇ ಪ್ರಖ್ಯಾತರಾದ ಆಡಮ್ ಸ್ಮಿತ್ ಅವರು ಬರೆದಂಥಾ ಪುಸ್ತಕ Inquiry into the Nature and Causes of the Wealth of Nations ಮತ್ತು 19 ನೇ ಶತಮಾನದಲ್ಲಿ ಸಮಾತಾವಾದ (communism) ದ ಶೇಷ್ಠ ಚಿಂತಕ ಕಾರ್ಲ್ ಮಾರ್ಕ್ಸ್ ಅವರ ಪುಸ್ತಕ “ದಾಸ್ ಕ್ಯಾಪಿಟಲ್” ನಲ್ಲಿ ವಚನ ಸಾಹಿತ್ಯವು ಪ್ರತಿಪಾದಿಸಿದಂಥ ಯಾವುದೇ ಕಾಯಕ ಸಿದ್ಧಾಂತಗಳು ಕಂಡು ಬರುವುದಿಲ್ಲ. ವಚನ ಸಾಹಿತ್ಯದಲ್ಲಿ ಕಂಡು ಬರುವಂಥ ಆರ್ಥಿಕ ನೀತಿಯಲ್ಲಿ ಬರುವ ಕಾಯಕ ಸಿದ್ಧಾಂತವು ನೈತಿಕ ಮತ್ತು ಆಧ್ಯಾತ್ಮಿಕ ತಳಹದಿಯ ಮೇಲೆ ಪ್ರತಿಪಾದಿತವಾಗಿದೆ. ಯಾವುದೇ ಭೌತಿಕ ವಸ್ತು ಅಥವಾ ವ್ಯಕ್ತಿಯ ಮೇಲೆ ಪ್ರತಿಪಾದಿತವಾಗಿಲ್ಲ. ಇದು ವಚನ ಸಾಹಿತ್ಯದ ಶ್ರೇಷ್ಠತೆಯ ಉದಾಹರಣೆ.
ಕಾಯದಲ್ಲಿ | ನಿರತನಾದೊಡೆ ||
ಗುರು ದರುಶನವಾದಡೂ | ಮರೆಯಬೇಕು ||
ಲಿಂಗ ಪೂಜೆಯಾದಡೂ | ಮರೆಯಬೇಕು ||
ಜಂಗಮ ಮುಂದೆ ನಿಂತಿದ್ದಡೂ | ಹಂಗು ಹರಿಯಬೇಕು ||
ಕಾಯಕವೇ ಕೈಲಾಸವಾದ | ಕಾರಣ ||
ಅಮರೇಶ್ವರಲಿಂಗವಾಯಿತ್ತಾದಡೂ || ಕಾಯಕದೊಳು ||
ಆಯ್ದಕ್ಕಿ ಮಾರಯ್ಯನವರ ಈ ವಚನ ಕಾಯಕ ಸಿದ್ಧಾಂತದ ಶ್ರೇಷ್ಠತೆಯನ್ನು ತಿಳಿಸುತ್ತದೆ. ಆಯಗಾರರು ಎಂಬ ಕಾಯಕ ಕೇಂದ್ರೀಕೃತ ಸಾಮಾಜಿಕ ವ್ಯವಸ್ಥೆಯನ್ನು ಹುಟ್ಟು ಹಾಕಿದ ಬಸವಣ್ಣನವರು ವಿಶ್ವನಾಯಕರು ಎನ್ನಲು ಇದಕ್ಕಿಂತ ಉತ್ತಮ ಉದಾಹರಣೆ ಬೇಕಾಗಿಲ್ಲ ಅಂತ ನನಗೆ ಅನಿಸುತ್ತದೆ. ಕಾಯಕವೇ ಕೈಲಾಸ ಎನ್ನುವ ಉದಾತ್ತ ಮತ್ತು ಶ್ರೇಷ್ಠ ಪರಿಕಲ್ಪನೆ ಬಹುಶಃ ಜಗತ್ತಿನಲ್ಲಿ ಎಲ್ಲಿಯೂ ಕಾಣೋದಕ್ಕೆ ಸಾಧ್ಯವಿಲ್ಲ. ಇದು ಶರಣರ ಮತ್ತು ವಚನ ಸಾಹಿತ್ಯದ ಮಹತ್ವ.
ಈ ಮೂಲಕ ನಾವು ನೆನಪಿಸಿಕೊಳಬೇಕಾದ ಒಂದು ಮಹತ್ವ ಅಂದರೆ 12 ನೇ ಶತಮಾನದಲ್ಲಿ ಬಸವಣ್ಣನವರು ಜನರಲ್ಲಿದ್ದ ಸಾಮಾಜಿಕ ಮತ್ತು ಉತ್ತರದಾಯಿತ್ವವನ್ನು ಅಂದರೆ Social Responsibility & Social Accountability ಎಚ್ಚರಿಸುವ ಮಹತ್ತರ ಕೆಲಸವನ್ನು ಮಾಡಿದರು. ಪ್ರತಿಯೊಬ್ಬರಲ್ಲಿಯೂ ಬದ್ಧತೆ ಇತ್ತು. ಈ ಬದ್ಧತೆಯನ್ನು ಶರಣರು ಎಂದೂ ಮೀರಲಿಲ್ಲಾ. ಅದಕ್ಕೆ ಒಂದು ಅದ್ಭುತ ಉದಾಹರಣೆ ಅಂದರೆ ಶರಣೆ ಆಯ್ದಕ್ಕಿ ಲಕ್ಕಮ್ಮ. ಎರಡು ಬೊಗಸೆ ಅಕ್ಕಿಯನ್ನು ಜಾಸ್ತಿ ತಂದಿದ್ದಕ್ಕೆ ಕೋಪಗೊಂಡು ತನ್ನ ಪತಿ ಶರಣ ಆಯ್ದಕ್ಕಿ ಮಾರಯ್ಯನವರನ್ನು ಎಚ್ಚರಿಸುವ ರೀತಿ ಸಾಮಾಜಿಕ ತತ್ವಗಳನ್ನು ಎಷ್ಟು ಆದರಿಸುತ್ತಿದ್ದರು ನಮ್ಮ ಶರಣರು ಎನ್ನುವುದಕ್ಕೆ ಉದಾಹರಣೆ.
ಒಮ್ಮನವ ಮೀರಿ | ಇಮ್ಮನದಲ್ಲಿ ತಂದಿರಿ ||
ಇದು ನಿಮ್ಮ | ಮನವೋ ||
ಬಸವಣ್ಣನ | ಅನುಮಾನದ ಚಿತ್ತವೋ ||
ಈ ಮಾತು | ಮಾರಯ್ಯಪ್ರಿಯ ||
ಅಮರೇಶ್ವರಲಿಂಗಕ್ಕೆ | ಸಲ್ಲದ ಬೋನ ||
ಅಲ್ಲಿಯೇ ಸುರಿದು | ಬನ್ನಿ ಮಾರಯ್ಯ ||
ಇಂಥ ಬದ್ಧತೆಗೆ ಯಾವಾಗಲೂ ಶರಣರು ಅಂಟಿಕೊಂಡಿದ್ದರು. ಇದು ಬಸವಣ್ಣನವರು ಹಾಕಿಕೊಟ್ಟ ಭದ್ರ ಬುನಾದಿ “A Strong Foundation”. ಈ ಹಿನ್ನಲೆಯಲ್ಲಿ ಬಸವಣ್ಣನವರ ನಾಯಕತ್ವವನ್ನು ಬೀಂಬಿಸುವ ಅನೇಕ ವಚನಗಳನ್ನು ನೋಡಿದ್ದೇವೆ. ಅವುಗಳಲ್ಲಿ ನನಗೆ ಶ್ರೇಷ್ಠವೆನಿಸಿದ ಮತ್ತೊಂದು ವಚನವನ್ನು ನೋಡಿದಾಗ ಬಸವಣ್ಣನವೆ ವ್ಯಕ್ತಿತ್ವ ಎಂಥ ಮೇರಿಶಿಖರಕ್ಕೇರಿತ್ತು ಎನ್ನುವ ಕಲ್ಪನೆ ನಮಗಾದೀತು.
ಚೆನ್ನಯ್ಯನ ಮನೆಯ | ದಾಸನ ಮಗನು ||
ಡೋಹರ ಕಕ್ಕಯ್ಯನ | ಮನೆಯ ದಾಸಿಯ ಮಗಳು ||
ಇವರಿಬ್ಬರು ಹೊಲದಲು | ಬೆರಣಿಗೆ ಹೋಗಿ ||
ಸಂಗವ | ಮಾಡಿದರು ||
ಇವರಿಬ್ಬರಿಗೆ ಹುಟ್ಟಿದ | ಮಗ ನಾನು ||
ಕೂಡಲಸಂಗಮದೇವ | ಸಾಕ್ಷಿಯಾಗಿ ||
ಶ್ರೇಣೀಕೃತ ಸಮಾಜದಲ್ಲಿ ಅತ್ಯಂತ ನಿಕೃಷ್ಠ ಸ್ಥಾನದಲ್ಲಿದ್ದವರು ಮಾದಾರ ಚೆನ್ನಯ್ಯ ಮತ್ತು ಡೋಹರ ಕಕ್ಕಯ್ಯ. ಇವರ ಮನೆಯ ದಾಸ ಮತ್ತು ದಾಸಿಯರು ಅಂದರೆ ಅವರಿಗಿಂತ ಕೆಳಗಿರುವಂಥವರು. ಇಂಥ ದಾಸ ದಾಸಿಯರು ಮದುವೆಯಾಗದೇ ಹುಟ್ಟಿದ ಮಗ ನಾನು ಕೂಡಲಸಂಗಮದೇವರ ಸಾಕ್ಷಿಯಾಗಿ ಅಂತ ಬಸವಣ್ಣನವರು ಹೇಳತಾರೆ ಮತ್ತು ಹಾಗೆ ಹೇಳಿಕೊಳ್ಳಲು ಎಂಥ ಧೈರ್ಯ ಬೇಕು. ಅಂದರೆ Dis-owning my own prestige. ನಿಕೃಷ್ಠರಲ್ಲಿ ನಿಕೃಷ್ಠರಿಗೆ ಹುಟ್ಟದವನು ಅಂತ ಬಸವಣ್ಣವರೇ ಹೇಳಿದಾಗ ಕೆಳವರ್ಗಕ್ಕೆ ದೂಡಲ್ಪಟ್ಟ ಜನರಿಗೆ ಒಂದು ರೀತಿಯ ಮಾನಸಿಕ ಧೈರ್ಯವನ್ನು ಸ್ಥೈರ್ಯವನ್ನು ತುಂಬುವ ಕೆಲಸಕ್ಕೆ ಕೈ ಹಾಕಿ ಅವರ ಮನಃಪರಿವರ್ತನೆ ಮಾಡುವಲ್ಲಿ ಯಶಸ್ವಿಯಾಗತಾರೆ. ಇಂಥ ಬದ್ಧತೆಗೆ ಯಾವಾಗಲೂ ಶರಣರು ಅಂಟಿಕೊಂಡಿದ್ದರು. ಇದು ಬಸವಣ್ಣನವರು ಹಾಕಿಕೊಟ್ಟ ಮಾನಸಿಕ ಭದ್ರ ಬುನಾದಿ “A Strong Psychological Foundation”. ಬುನಾದಿ ಸರಳತೆಯಲ್ಲಿ ಇನ್ನೂ ಸರಳತೆಯ ವ್ಯಕ್ತಿತ್ವವನ್ನು ಮುಂದಿಟ್ಟುಕೊಂಡು ಹೋಗುವ ಒಂದು ದೊಢ್ಡ ಛಾಯಾಚಿತ್ರವನ್ನು ನಮ್ಮದುರಿಗೆ ನಿಲ್ಲಿಸತಾರೆ ಬಸವಣ್ಣನವರು. ಅಂದರೆ ಬಸವಣ್ಣನವರ ನಾಯಕತ್ವದ ದೊಡ್ಡ ಸಾಧನೆ ಅಂದರೆ ಗುರಿ ಮುಟ್ಟಲು ಯಾವ ಮಟ್ಟಕ್ಕೆ ಜನರೆಗೆ ಧೈರ್ಯ ತುಂಬಿ ಬಡಿದೆಬ್ಬಿಸತಾರೆ ಅನ್ನೋದು. ಇಂಥ ಮನಸ್ಥಿತಿಯನ್ನು ಹೊಂದಿದಂಥಾ ನಾಯಕ ಜಾಗತಿಕ ಮಟ್ಟದಲ್ಲಿ ಯಾರೂ ಕಾಣಲು ಸಾಧ್ಯವಿಲ್ಲ.
ಒಂದು ಕ್ರಾಂತಿಗೆ ಎಂದೂ ಬತ್ತದ ಚಿಲುಮೆಯಾಗಿ ಕೆಲಸ ಮಾಡತಾರೆ ಬಸವಣ್ಣನವರು. ಇವರ ನಾಯಕತ್ವದ ದೊಡ್ಡ ಗುಣ ಅಂದರೆ Self Motivation. ಕಿಂಕರ ಮನೋಭಾವವನ್ನು ಜನರ ಮನದಾಳದಿಂದ ಕಿತ್ತು ಬಿಸಾಕೋದು ಮತ್ತು inclusiveness, ಅಂದರೆ ಈ ಆಂದೋಲನದಲ್ಲಿ ನಾನೂ ಭಾಗಿಯಾಗಿದೀನಿ ಅನ್ನೂವ ಮನೋಭಾವವನ್ನು ತರೋದಕ್ಕೆ ಬಸವಣ್ಣವರು ಸ್ವತಃ ತಮ್ಮನ್ನು ಕಿಂಕರತ್ವಕ್ಕೆ ದೂಡಿಕೊಳತಾರೆ ಅನ್ನೋದು ಮೇಲಿನ ವಚನ ಸಾರಿ ಹೇಳುತ್ತದೆ.
ಬಸವಣ್ಣನವರು ಜನರಿಗೆ ಏನನ್ನೂ ಕಲಿಸಲಿಲ್ಲ. ಅವರ ಅಂತರಂಗ ಅರಿವನ್ನು ಜಾಗೃತಗೊಳಿಸಿದರು. ಅದೇ ದೊಡ್ಡ ಕ್ರಾಂತಿಯಾಯಿತು. ಕೊನೇಯಲ್ಲಿ ಹೇಳತಾರೆ ಬಸವಣ್ಣನವರು “ಎಲ್ಲ ಪುರಾತರೂ ನೆರೆದು ಭಕ್ತಿ ಭಿಕ್ಷೆಯನಿಕ್ಕಿದೆಡೆ ಎನ್ನ ಪಾತ್ರೆ ತುಂಬಿತ್ತು ನೋಡಾ” ಅಂತ. ಎಲ್ಲರೂ ಸೇರಿ ನನ್ನ ಭಿಕ್ಷಾಪಾತ್ರೆಯನ್ನು ತುಂಬಿಸಿದರು. ಇದೇ ಸಾರ್ಥಕತೆ ಮತ್ತು ಇದೇ ನಾಯಕತ್ವದ ಫಲ. ಕಲ್ಯಾಣ ಕ್ರಾಂತಿಯ ಒಟ್ಟರೆ ಫಲಿತಾಂಶ ಅಂದರೆ ಬಸವಣ್ಣನೆಂಬ ಅರಿವನ್ನು ಮೂಡಿಸುವ ಭಿಕ್ಷಾಪಾತ್ರೆಯೆಂಬ ನಾಯಕತ್ವ ಮತ್ತು ಆ ಪಾತ್ರೆಯನ್ನು ಎಲ್ಲರೂ ಸಾಮಾಜಿಕ ಅರಿವಿನ ಪ್ರಸಾದದ ಮೂಲಕ ಅದನ್ನು ತುಂಬಿಸುವುದು. ಇದು ಬಸವಣ್ಣನೆಂಬ ವಿಶ್ವನಾಯಕನ ವಿಶ್ವರೂಪ.
ಅಂಗದ ಮೇಲೆ ಲಿಂಗ ಕಟ್ಟಿಕೊಂಡವರೆಲ್ಲಾ ಲಿಂಗಾಯತರೇ ಅಥವಾ ಲಿಂಗಾಯತರ ಮನೆಯಲ್ಲಿ ಹುಟ್ಟಿದವರು ಲಿಂಗಾಯತರೇ ಎನ್ನುವುದನ್ನು ಆತ್ಮಾವಲೋಕನೆ ಮಾಡಿಕೊಳ್ಳಬೇಕಾಗಿದೆ. ಸನಾತನ ವೈದಿಕ ಪರಂಪರೆಯ ದಬ್ಬಾಳಿಕೆಯಿಂದ ಜಡ್ಡುಗಟ್ಟಿದ ಸಾಮಾಜಿಕ ವ್ಯವಸ್ಥೆಗೆ ಬಸವಣ್ಣನವರು ಬೆಳದಿಂಗಳ ಬೆಳಕಾಗಿ ಬಂದರು.
ಬಸವಣ್ಣ ಬರುವಾಗ | ಬಿಸಿಲು ಬೆಳದಿಂಗಳು ||
ಮೊಗ್ಗು ಮಲ್ಲಿಗೆ | ಅರಳ್ಯಾವ ||
ಯಾಲಕ್ಕಿ ಗೊನೆ ಬಾಗಿ | ಹಾಲ ಸುರಿದಾವ ||
ಬಸವಣ್ಣನವರು ಬರುವುದನ್ನು ನಮ್ಮ ಜನಪದರು ಎಷ್ಟು ಸೊಗಸಾಗಿ ಹೇಳಿದ್ದಾರೆ. ಸಾವಿರಾರು ವರ್ಷಗಳ ಶ್ರೇಣೀಕೃತ ಸಮಾಜದ ವರ್ಗ, ವರ್ಣ ಮತ್ತು ಲಿಂಗಭೇದಗಳನ್ನು ಕಿತ್ತುಹಾಕಿ ಸರ್ವಕಾಲಿಕ ಸಮ-ಸಮಾಜವನ್ನು ಕಟ್ಟಿ ಜಾಗತಿಕ ಮಟ್ಟದಲ್ಲಿ ಶ್ರೇಷ್ಠ ನಾಯಕನಾಗಿ ಬಸವಣ್ಣನವರು ಕಂಗೊಳಿಸುತ್ತಾರೆ. ಬಸವಣ್ಣವರ ನಾಯಕತ್ವದ ಮಾದರಿ ಎಲ್ಲ ಕಾಲಕ್ಕೂ ಮಾದರಿಯಾದ ನಾಯಕತ್ವ ಅಂತ ಹೇಳತಾ ಈ ಲೇಖನಕ್ಕೆ ವಿರಾಮ ಹೇಳತಾ ಇದೀನಿ. ಶರಣು ಶರಣಾರ್ಥಿಗಳು.
ಸಂಗ್ರಹ ಮತ್ತು ಲೇಖನ :
ವಿಜಯಕುಮಾರ ಕಮ್ಮಾರ
“ಸವಿಚರಣ” ಸುಮತಿ ಇಂಗ್ಲೀಷ್ ಶಾಲೆಯ ಹತ್ತಿರ
ಸುಭಾಷ್ ನಗರ, ಕ್ಯಾತ್ಸಂದ್ರ
ತುಮಕೂರು – 572 104
ಮೋಬೈಲ್ ನಂ : 9741 357 132
ಈ-ಮೇಲ್ : vijikammar@gmail.com
ಅಲಂಕಾರಗಳ ಬಗ್ಗೆ ಸಂಕ್ಷಿಪ್ತವಾದ ಚಿತ್ರಣ:
ಕ್ರಿ. ಶ. 5 ಅಥವಾ 6 ನೇ ಶತಮಾನದಿಂದೀಚೆಗೆ ಈ ಅಲಂಕಾರಗಳ ಪ್ರಯೋಗ ಆಗಿದ್ದು ತಿಳಿದು ಬರುತ್ತದೆ. ಮೊದಲು ಸಿಕ್ಕುವುದು “ಬಾಮಹನ ಕಾವ್ಯಾಲಂಕಾರ”. ಹಾಗೇನೆ ದಂಡಿಯ ಕಾವ್ಯಗಳಲ್ಲಿ ಗುಣ, ಮಾರ್ಗ, ದೋಷ ರಸ ಮೊದಲಾದ ಅಲಂಕಾರಗಳನ್ನು ಕಾಣಬಹುದು. 10 ನೇ ಶತಮಾನದಲ್ಲಿ “ರಾಜಶೇಖರನ ಕಾವ್ಯ ಮೀಮಾಂಸೆ” ಗಳಲ್ಲಿ ಶೃಂಗಾರ, ಔದಾರ್ಯ, ಮಾಧುರ್ಯ, ಪ್ರಸಾದ ಮುಂತಾದ ಅಲಂಕಾರಗಳನ್ನು ಕಾಣಬಹುದು.
ಕಾವ್ಯದ ರಮಣೀಯತೆ ಅಥವಾ ಅದರ ಸೌಂದರ್ಯವನ್ನು ಇಮ್ಮಡಿಗೊಳಿಸುವುದಕ್ಕೆ ಕಾರಣವಾಗುವ ‘ಶಬ್ದ’ ವನ್ನು “ಅಲಂಕಾರ” ಎನ್ನಬಹುದು. ಭಾರತೀಯ ಕಾವ್ಯ ಮೀಮಾಂಸೆಯ ಪ್ರಮುಖ ಲಾಕ್ಷಣಿಕನಾದ ದಂಡಿ “ಕಾವ್ಯ ಶೋಭಾಕರನ್ ಧರ್ಮಾನಲಂಕಾರಾನ್ ಪ್ರಚಕ್ಷತೇ” ಎಂದಿದ್ದಾನೆ. ಭಾರತೀಯ ಕಾವ್ಯಮೀಮಾಂಸೆಯ ಪ್ರಮುಖ ಪ್ರಸ್ಥಾನಗಳಾಗಿ ಅಲಂಕಾರಗಳನ್ನು ಗುರುತಿಸುತ್ತೇವೆ.
ವಾಸ್ತವವಾಗಿ ಅಲಂಕಾರವನ್ನು ಮೂರು ವಿಧಗಳಾಗಿ ವಿಂಗಡಿಸಲಾಗಿದೆ.
- ಅಲಂಕಾರ ಪ್ರಸ್ಥಾನ : ಭಾರತೀಯ ಕಾವ್ಯಮೀಮಾಂಸೆಯ ಪ್ರಮುಖ ಅಲಂಕಾರಿಕನಾದ ಭಾಮಹನು “ಕಾವ್ಯಾಲಂಕಾರ” ಎಂಬ ಕೃತಿಯನ್ನು ರಚಿಸಿದ್ದಾನೆ. ಕಾವ್ಯವನ್ನು ಕುರಿತು ಚರ್ಚಿಸುವಾಗ ವಿಶಾಲ ಅರ್ಥವನ್ನು ಬಯಸಿ, ರಸವನ್ನು ಅಲಂಕಾರವೆಂದೆ ಪರಿಗಣಿಸಿ, ಕಾವ್ಯದಲ್ಲಿ ಅಲಂಕಾರಗಳೇ ಮುಖ್ಯವವೆಂದು ಪ್ರತಿಪಾದಿಸಿದ ಕಾವ್ಯಮೀಮಾಂಸಕರಾದ ಭಾಮಹ, ಉದ್ಬಟ, ರುದ್ರಟ, ಜಯದೇವ ಮೊದಲಾದವರ ಒಟ್ಟು ಚರ್ಚೆಯನ್ನು ‘ಅಲಂಕಾರ ಪ್ರಸ್ಥಾನ’ವೆಂದು ಕರೆಯಬಹುದು. ಅಲಂಕಾರ ಪ್ರಸ್ಥಾನದ ಪ್ರಭಾವವೂ ಗಾಢವಾಗಿದ್ದ ಕಾವ್ಯಮೀಮಾಂಸೆಯನ್ನು ‘ಅಲಂಕಾರ ಶಾಸ್ತ್ರ’ ವೆಂದು ಹೇಳಲಾಗುತ್ತದೆ.
- ಶಬ್ದಾಲಂಕಾರಗಳು : ದಂಡಿ ಎಂಬ ಕವಿಯು ಕಾವ್ಯಕ್ಕೆ ಸೊಗಸು ಕೊಡುವ ಶಬ್ದಗಳನ್ನು ಅಲಂಕಾರಗಳೆಂದು ಕರೆದಿದ್ದಾನೆ. ಶಬ್ದಾಲಂಕಾರಗಳಲ್ಲಿ ಮೂರು ಬಗೆಗಳಿವೆ. ಅವುಗಳೆಂದರೆ
ಅನುಪ್ರಾಸ : ಅಂದರೆ ಅಕ್ಷರಗಳ ಆವೃತ್ತಿ. ಇದರಲ್ಲಿ ಒಂದೊ, ಎರಡೊ. ಮೂರೊ ಅಕ್ಷರಗಳು ಮತ್ತೆ ಮತ್ತೆ ಬಂದರೆ ಅದನ್ನು “ವೃತ್ತ್ಯಾನುಪ್ರಾಸ” ಎನ್ನುತ್ತಾರೆ. ಎರಡು ಅಕ್ಷರಗಳು ಜತೆಜತೆಯಾಗಿ ಹಲವು ಕಡೆ ಬಂದರೆ, ಅದನ್ನು “ಛೇಕಾನುಪ್ರಾಸ” ಎನ್ನುವರು.
ಯಮಕ : ಮೂರು ಅಥವಾ ಅದಕ್ಕಿಂತ ಹೆಚ್ಚಿನ ಅಕ್ಷರಗಳುಳ್ಳ ಪದವೋ, ಒಂದು ಪದ್ಯದ ಆದಿ, ಮಧ್ಯ, ಅಂತ್ಯದಲ್ಲಿ ನಿಯತವಾಗಿ ಪುನಃ ಪುನಃ ಬಂದರೆ ಅದಕ್ಕೆ ಯಮಕ ಎನ್ನುತ್ತಾರೆ.
ಚಿತ್ರಕವಿತ್ವ : ಅಕ್ಷರಗಳನ್ನು, ಪದಗಳನ್ನು ಕುಶಲತೆಯಿಂದ ಆರಿಸಿ ಜೋಡಿಸಿ ಕವಿಗಳು ಉಂಟುಮಾಡುವ ಇತರ ಶಬ್ದ ವೈಚಿತ್ರಕ್ಕೆ ‘ಚಿತ್ರಕವಿತ್ವ’ ಎನ್ನುತ್ತಾರೆ. ಇದನ್ನು ಶಬ್ದವೈಖರಿ, ಅಭ್ಯಾಸಬಲ, ಬುದ್ಧಿ ಸಾಮರ್ಥ್ಯ ಇವು ಇದ್ದ ಹಾಗೆಲ್ಲಾ ಕಲ್ಪಿಸಿ ರಚಿಸಬಹುದು. - ಅರ್ಥಾಲಂಕಾರಗಳು : ಕವಿಗಳು ಅರ್ಥ ಚಮತ್ಕಾರದಿಂದ ಕಾವ್ಯದ ಸೊಬಗನ್ನು ಹೆಚ್ಚಿಸಿದರೆ ಅದು ಅರ್ಥಾಲಂಕಾರ. ಅರ್ಥಾಲಂಕಾರದಲ್ಲಿ ಎಂಟು ವಿಧ ಅವುಗಳೆಂದರೆ :
ಉಪಮಾ ಅಲಂಕಾರ – ಎರಡು ವಸ್ತುಗಳು ಪರಸ್ಪರವಾಗಿ ಇರುವ ಸಾದೃಶ್ಯ (ಸಮಾನವಾದ) ಹೋಲಿಕೆಯನ್ನು ತಿಳಿಸುವುದೇ ಉಪಮಾಲಂಕಾರ.
ದೃಷ್ಟಾಂತ ಅಲಂಕಾರ – ಎರಡು ಬೇರೆ ಬೇರೆ ವಾಕ್ಯಗಳು ಅರ್ಥ ಸಾದೃಶ್ಯದಿಂದ ಒಂದಕ್ಕೊಂದು ಬಿಂಬ ಭಾವದಂತೆ ತೋರುತ್ತಿದ್ದರೆ ಅದು ದೃಷ್ಟಾಂತ ಅಲಂಕಾರ.
ರೂಪಕ ಅಲಂಕಾರ – ಉಪಮೇಯ ಉಪಮಾನಗಳಲ್ಲಿ ಹೋಲಿಕೆಯು ಬೇಧವಿಲ್ಲದೆ ವರ್ಣಿತವಾದರೆ ಅದು ರೂಪಕಾಲಂಕಾರ.
ಉತ್ಪ್ರೇಕ್ಷಾಲಂಕಾರ – ಒಂದಾನೊಂದು ಪದವನ್ನೋ ಸನ್ನಿವೇಶವನ್ನೋ ಮತ್ತೊಂದಾಗಿ ಕಲ್ಪಿಸಿ ವರ್ಣಿಸುವುದೇ ಉತ್ಪ್ರೇಕ್ಷೆ ಎನಿಸುವುದು.
ಅರ್ಥಾಂತರನ್ಯಾಸ ಅಲಂಕಾರ – ಒಂದು ವಿಶೇಷ ವಾಕ್ಯವನ್ನು ಸಾಮಾನ್ಯ ವಾಕ್ಯದಿಂದಾಗಲಿ ಅಥವಾ ಸಾಮಾನ್ಯ ವಾಕ್ಯವನ್ನು ವಿಶೇಷ ವಾಕ್ಯದಿಂದಾಗಲಿ ಸಮರ್ಥನೆ ಮಾಡುವುದನ್ನು ಅರ್ಥಾಂತರನ್ಯಾಸಾಲಂಕಾರ ಎನ್ನುವರು .
ಅತಿಶಯೋಕ್ತಿ ಅಲಂಕಾರ – ಅತಿಶಯ ಸೂಚಿಸುವ ಅಲಂಕಾರ.
ಶ್ಲೇಷಾಲಂಕಾರ – ಒಂದಕ್ಕಿಂತ ಹೆಚ್ಚು ಅರ್ಥಕೊಡುವ ಪದಶಕ್ತಿಗೆ ಶ್ಲೇಷಾ ಎಂದು ಹೆಸರು. ಬೇರೆ ಬೇರೆ ಅರ್ಥ ನೀಡುವಂತಿದ್ದರೆ ಅದು ಶ್ಲೇಷಾಲಂಕಾರ.
ಸ್ವಭಾವೋಕ್ತಿ ಅಲಂಕಾರ – ಸ್ವಭಾವ ಸೂಚಿಸುವ ಅಲಂಕಾರ.