
ಹನ್ನೆರಡನೆಯ ಶತಮಾನದಲ್ಲಿ ಇತಿಹಾಸದಲ್ಲಿಯೇ ಪ್ರಪ್ರಥಮವಾಗಿ ದುಡಿಯುವ ವರ್ಗದ ಅಸ್ಮಿತೆಯ ಪ್ರತೀಕವಾಗಿ ಹುಟ್ಟಿಕೊಂಡಿದ್ದು ಶರಣ ಚಳುವಳಿ. ಈ ಚಳುವಳಿಯಲ್ಲಿ ಶತಶತಮಾನಗಳಿಂದ ಜಾತಿಯ ಹೆಸರಿನಲ್ಲಿ ಶೋಷಣೆ,ಅವಮಾನಕ್ಕೊಳಗಾಗಿದ್ದ ಕಷ್ಟಸಹಿಷ್ಣುಗಳು, ಶ್ರಮಜೀವಿಗಳೆಲ್ಲರೂ ಒಂದಾಗಿ ಇದಕ್ಕೆಲ್ಲ ಕಾರಣವಾದ ಚಾತುರ್ವರ್ಣ ವ್ಯವಸ್ಥೆಯ ವಿರುದ್ಧ ಸೆಟೆದು ನಿಂತರು. ಜಾತಿ,ವರ್ಣ,ವರ್ಗ,ಲಿಂಗಗಳನ್ನು ಆಧರಿಸಿ ಅಸಮಾನತೆಯಿಂದ ನಿರ್ಮಾಣಗೊಂಡಿದ್ದ ಸಮಾಜವನ್ನು ಧಿಕ್ಕರಿಸಿ, ಪ್ರತಿಯಾಗಿ ಸಹಬಾಳ್ವೆ, ಸಮಾನತೆ, ಪರಸ್ಪರ ಸಹಕಾರ, ಸಹಾನುಭೂತಿ, ಅರಿವು, ಆಚಾರ, ನಡೆನುಡಿ ಸಿದ್ಧಾಂತಗಳ ಆಧಾರದ ಮೇಲೆ ಜನಮುಖಿ ಸಮಾಜವನ್ನು ನಿರ್ಮಿಸಿದರು. ಅಂದಿನ ಸಮಾಜವು ತಮ್ಮಲ್ಲಿ ಬಿತ್ತಿದ ಕಿಳರಿಮೆ,ಭಯ,ಅವೈಚಾರಿಕತೆಗಳನ್ನು ಕಿತ್ತೊಗೆದರು. ಕಸಬುದಾರರು,ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಅಸ್ಪೃಶ್ಯರು ಅಕ್ಷರಜ್ಞಾನವನ್ನು, ವೈಚಾರಿಕತೆಯ ಮನೋಭಾವವನ್ನು, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು, ಪ್ರತಿಭಟನೆಯ ಕಿಚ್ಚನ್ನು ಪಡೆದುಕೊಂಡರು. ತಮ್ಮ ಭಾವನೆಗಳನ್ನು ಅಭಿವ್ಯಕ್ತಿಸಲು ಸಾಹಿತ್ಯವನ್ನು ಮಾಧ್ಯಮವನ್ನಾಗಿ ಮಾಡಿಕೊಂಡರು. ದುಡಿಯುವವರ್ಗದ, ಮಹಿಳೆಯರ, ದೀನದಲಿತರ, ದುರ್ಬಲರ ಧ್ವನಿಯಾಗಿ ವಚನಸಾಹಿತ್ಯ ರೂಪಗೊಂಡಿತು. ಅಸಂಖ್ಯಾತ ಶರಣರ ನೇತೃತ್ವದಲ್ಲಿ ನಡೆದ ಈ ಚಳುವಳಿಯ ಪ್ರಮುಖ ಹರಿಕಾರರಲ್ಲಿ ಹಡಪದ ಅಪ್ಪಣ್ಣನವರು ಒಬ್ಬರು.
ಹಡಪದ ಅಪ್ಪಣ್ಣನವರು ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲ್ಲೂಕಿನ ಮಸಬಿನಾಳ ಗ್ರಾಮದ ಚೆನ್ನವೀರಪ್ಪ-ದೇವಕಮ್ಮನವರ ಮಗ. ದೇಗಿನಾಳ ಗ್ರಾಮದ ಜೀರ ನಾಗಪ್ಪ-ಚೆನ್ನಬಸಮ್ಮನವರ ಮಗಳಾದ ಲಿಂಗಮ್ಮ ಇವರ ಪತ್ನಿ . ಇವರ ಕಾಲವನ್ನು ಕ್ರಿ.ಶ ೧೧೬೦ ಎಂದು ಗುರುತಿಸಲಾಗುತ್ತದೆ. ಇವರು “ಬಸವಪ್ರಿಯ ಕೂಡಲ ಚೆನ್ನಬಸವಣ್ಣ” ಎಂಬ ಅಂಕಿತನಾಮದಲ್ಲಿ ಸುಮಾರು ೨೫೦ ವಚನಗಳನ್ನು ರಚಿಸಿದ್ದಾರೆ. ಪತ್ನಿ ಲಿಂಗಮ್ಮನವರು ‘ಅಪ್ಪಣ್ಣಪ್ರಿಯ ಚೆನ್ನಬಸವಣ್ಣ’ ಅಂಕಿತದಲ್ಲಿ ೧೧೪ ವಚನಗಳನ್ನು ರಚಿಸಿದ್ದಾರೆ.ಕಲ್ಯಾಣ ಕ್ರಾಂತಿಯ ತರುವಾಯ ಇವರು ತಂಗಡಗಿಯಲ್ಲಿ ಐಕ್ಯರಾಗಿದ್ದು, ಅಲ್ಲಿಯೇ ಇವರ ಸಮಾಧಿ ಇದೆ. ಬನವಾಸಿಯ ಮಧುಕೇಶ್ವರ ದೇವಾಲಯದ ಶಿವೋತ್ಸವ ಮಂಟಪದ ಗಗ್ಗರಿ ಕಲ್ಲಿನಲ್ಲಿರುವ ಶರಣರ ಶಿಲ್ಪಗಳಲ್ಲಿ ಅಪ್ಪಣ್ಣನವರ ವಿಗ್ರಹವಿದೆ.
“ಹಡಪ” ಎಂಬ ಪದಕ್ಕೆ ಎಲೆ, ಅಡಿಕೆಯನ್ನಿಡುವ ಚೀಲ, ಕ್ಷೌರದ ವಸ್ತುಗಳನ್ನಿಡುವ ಚೀಲ ಎಂಬ ಅರ್ಥಗಳಿರುವದರಿಂದ ಅಪ್ಪಣ್ಣನವರ ವೃತ್ತಿಯ ಬಗ್ಗೆ ಗೊಂದಲಗಳಿವೆ. “ಶರಣ ಲೀಲಾಮೃತ” ದಲ್ಲಿ ಬಿಜ್ಜಳನ ಆಸ್ಥಾನದಲ್ಲಿದ್ದ ಬಸವಣ್ಣನವರಿಗೆ ಅಪ್ಪಣ್ಣನವರು ತಾಂಬೂಲ ಕಳುಹಿಸಿಕೊಟ್ಟ ‘ತಾಂಬೂಲ ಪವಾಡದ ಕತೆ’ ಇದ್ದರೆ, ಇಂದು ಕ್ಷೌರಿಕ ವೃತ್ತಿಯನ್ನು ಮಾಡುವ ಹಡಪದ ಸಮಾಜದವರು ಅಪ್ಪಣ್ಣನೇ ತಮ್ಮ ಸಮಾಜದ ಮೂಲಪುರುಷ ಎನ್ನುತ್ತಾರೆ. ಜೊತೆಗೆ ಬೆಳಿಗ್ಗೆ ಹಡಪದ ಸಮಾಜದವರ ಮುಖ ನೋಡಿದರೆ ಅಪಶಕುನವಾಗುತ್ತದೆ ಎಂಬ ಮೂಢನಂಬಿಕೆ ಸಮಾಜದಲ್ಲಿದ್ದು ಅದನ್ನು ನಿವಾರಿಸಲು ಬಸವಣ್ಣನವರು ಯಾರೇ ಬಂದರೂ ಮೊದಲು ಅಪ್ಪಣ್ಣನವರನ್ನು ನೋಡಿಕೊಂಡೆ ಬರಬೇಕೆಂಬ ನಿಯಮ ಮಾಡಿದ್ದರೆಂಬ ಪ್ರತೀತಿ ಇದೆ. ಹೀಗಾಗಿ ಅಪ್ಪಣ್ಣನವರು ಶರಣರ ಕ್ಷೌರ ಮಾಡುವ ವೃತ್ತಿಯನ್ನು ಮಾಡುತ್ತಿದ್ದರೆಂಬ ಅಭಿಪ್ರಾಯಗಳಿವೆ. ಅಪ್ಪಣ್ಣನವರ ಒಂದು ವಚನದಲ್ಲಿ ಮಾತ್ರ ‘ಹಡಪಿಗ’ಎನ್ನುವ ಪದವಿದ್ದು ,ಅಲ್ಲಿ ಅವರ ವೃತ್ತಿಯನ್ನು ಪ್ರಸ್ತಾಪಿಸಿಲ್ಲ.ಹಾಗಾಗಿ ಅವರ ವೃತ್ತಿಯ ಬಗ್ಗೆ ಇನ್ನೂ ಗೊಂದಲಗಳಿವೆ.
ಮಸಬಿನಾಳ, ವಿಜಯಪುರಗಳಲ್ಲಿ ಶಿಕ್ಷಣ ಪಡೆದ ಅಪ್ಪಣ್ಣನವರು ಗುರುಗಳೊಂದಿಗೆ ಕೂಡಲಸಂಗಮದಲ್ಲಿ ನೆಲೆಸಿರುವ ಸಂದರ್ಭದಲ್ಲಿಯೇ ಬಸವಣ್ಣನವರು ಕೂಡಲಸಂಗಮದಲ್ಲಿ ನೆಲೆಸಿದ್ದರಿಂದ, ಇವರಿಬ್ಬರ ನಡುವೆ ಬಾಂಧವ್ಯ ಬೆಳಯುತ್ತದೆ.ತರುವಾಯ ಕಲ್ಯಾಣಕ್ಕೆ ತೆರಳಿದ ಅಣ್ಣ ,ಶರಣರ ಖ್ಯಾತಿ ತಿಳಿದು ಕಲ್ಯಾಣಕ್ಕೆ ಬಂದಬಾಲ್ಯದ ಜೊತೆಗಾರ ಅಪ್ಪಣ್ಣನವರನ್ನು ಅನುಭವಮಂಟಪದಲ್ಲಿ ತಮ್ಮ ಆಪ್ತ ಕಾರ್ಯದರ್ಶಿಯನ್ನಾಗಿ ನೇಮಿಸಿಕೊಳ್ಳುತ್ತಾರೆ. ಅಣ್ಣನ ಬಗ್ಗೆ ಅಪಾರವಾದ ಗೌರವ,ಭಕ್ತಿ ಹೊಂದಿದ್ದ ಅಪ್ಪಣ್ಣನವರು ಕಾಯಾ-ವಾಚಾ-ಮನಸ್ಸಿನಿಂದ ಅವರ ಸೇವೆ ಮಾಡಿ ಅಣ್ಣನ ಕೊನೆಗಾಲದವರೆಗೂ ಅವರ ಒಡನಾಡಿಯಾಗಿ,ಆಪ್ತಸೇವಕನಾಗಿ ಬಾಳುತ್ತಾರೆ.ಲೌಕಿಕ ಪಾರಮಾರ್ಥಿಕಗಳೆರಡನ್ನು ಎಡರುತೊಡರುಗಳಿಲ್ಲದೆ ಲೀಲಾಜಾಲವಾಗಿ ತೂಗಿಸಿಕೊಂಡು ಹೋಗುತ್ತಿದ್ದುದರಿಂದ ಶರಣರೆಲ್ಲ ಅವರನ್ನು ‘ನಿಜಸುಖಿ ಅಪ್ಪಣ್ಣ’ ಎಂದೂ,ಇವರ ಶರಣಸತಿ ಲಿಂಗಮ್ಮನನ್ನು ‘ನಿಜಮುಕ್ತೆ’ ಎಂದು ಕರೆದರು.
ಅನುಭವ ಮಂಟಪದ ಮಹಾನುಭಾವಿಯಾದ ಅಪ್ಪಣ್ಣನವರು ‘ಬಸವಪ್ರಿಯ ಕೂಡಲಚೆನ್ನಬಸವಣ್ಣ’ ಎಂಬ ಅಂಕಿತದಲ್ಲಿ ವಚನಗಳನ್ನು ರಚಿಸಿದ್ದಾರೆ .ಇವರ ವಚನಗಳಲ್ಲಿ ಷಟಸ್ಥಲದ ವಿಷಯಗಳು ಪ್ರಮುಖವಾಗಿ ಪ್ರಸ್ತಾಪವಾಗಿವೆ. ಪ್ರಭುದೇವ, ಅಕ್ಕಮಹಾದೇವಿಯರಂತೆ ಅಪ್ಪಣ್ಣನವರು ಸಹ ಬೆಡಗಿನ ವಚನಗಳನ್ನು ರಚಿಸಿದ್ದು, ಕಾಯಕನಿಷ್ಠೆ, ದಾಸೋಹನಿಷ್ಠೆ, ಭಕ್ತಿ, ವೈರಾಗ್ಯ, ಆಚಾರ-ವಿಚಾರಗಳನ್ನು ವೈಚಾರಿಕತೆಯ ನೆಲೆಯಲ್ಲಿ ವಿಡಂಬನಾತ್ಮಕವಾಗಿ ತಮ್ಮ ವಚನಗಳಲ್ಲಿ ತಿಳಿಸುತ್ತಾರೆ.ಇವು ಅಂಧಕಾರದಲ್ಲಿ ಮುಳುಗಿದ ಅಜ್ಞಾನಿಗಳಿಗೆ ಸನ್ಮಾರ್ಗವನ್ನು ತೋರಿಸುವ ದಾರಿದೀಪಗಳಾದರೆ,ಶೋಷಕವರ್ಗಕ್ಕೆ ಚಾಟಿ ಎಟಿನಂತಿವೆ.
ಪ್ರಸ್ತುತ ಸಮಾಜದಲ್ಲಿ ವಿವೇಕರಹಿತ ನಡೆಯನ್ನು ರೂಢಿಸಿಕೊಂಡು, ಪ್ರಕೃತಿಯ ಚರಾಚರವು ತನ್ನ ಪಿತ್ರಾರ್ಜಿತ ಆಸ್ತಿಯೆಂದು ಭಾವಿಸಿ,ಮತ್ತೊಬ್ಬರಿಗೆ ಮಾಡುವ ಅತಿಚಿಕ್ಕ ಸಹಾಯವನ್ನು ಊರಿಗೆ ಡಂಗುರಸಾರಿ ದುರಃಹಂಕಾರದಿಂದ ಮೆರೆಯುವ ವರ್ಗವನ್ನು ಮತ್ತು ಇವರ ಈ ಗುಣಗಳನ್ನು ಶೋಷಣೆಗೆ ಅಸ್ತ್ರವನ್ನಾಗಿ ಮಾಡಿಕೊಂಡ ಶೋಷಕವರ್ಗಕ್ಕೆ ಅಪ್ಪಣ್ಣ ಪ್ರಶ್ನೆಗಳ ಸರಮಾಲೆಯನ್ನೆ ಇಡುತ್ತಾರೆ.
ಅನ್ನವನ್ನಿಕ್ಕಿದರೇನು? ಹೊನ್ನ ಕೊಟ್ಟರೇನು?
ಹೆಣ್ಣು ಕೊಟ್ಟರೇನು? ಮಣ್ಣು ಕೊಟ್ಟರೇನು? ಪುಣ್ಯ ಉಂಟೆಂಬರು.
ಅವರಿಂದಾದೊಡವೆ ಏನು ಅವರೀವುದಕ್ಕೆ?
ಇದಕ್ಕೆ ಪುಣ್ಯವಾವುದು, ಪಾಪವಾವುದು?
ನದಿಯ ಉದಕವ ನದಿಗೆ ಅರ್ಪಿಸಿ,
ತನತನಗೆ ಪುಣ್ಯ ಉಂಟೆಂಬ ಬಡಹಾರುವರಂತೆ,
ಸದಮಳ ಶಾಶ್ವತ ಮಹಾಘನಲಿಂಗವನರಿಯದೆ,
ಇವೇನ ಮಾಡಿದರೂ ಕಡೆಗೆ ನಿಷ್ಪಲವೆಂದಾತ,
ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1710 / ವಚನ ಸಂಖ್ಯೆ-852)
ಸಮಾಜದಲ್ಲಿ ಮೇಲ್ಜಾತಿಯವರೆನಿಸಿಕೊಂಡವರು ಕೆಳಜಾತಿಯವರಲ್ಲಿ ನಿಮ್ಮ ಸ್ಥಿತಿಗೆ ಪಾಪಗಳೇ ಕಾರಣ. ತಮಗೆ ಗೋದಾನ,ಭೂದಾನ,ಅನ್ನದಾನ,ಕನ್ಯಾದಾನಗಳನ್ನು ಮಾಡುವ ಮೂಲಕ ನಿಮ್ಮ ಪಾಪಗಳನ್ನು ಕಳೆದುಕೊಳ್ಳಬಹುದೆಂಬ ಮೌಢ್ಯವನ್ನು ಬಿತ್ತಿದ್ದರು.ಅಜ್ಞಾನದಲ್ಲಿ ಮುಳುಗಿದ್ದ ಶ್ರಮಿಕವರ್ಗ ತಮ್ಮ ದುಡಿಮೆಯನ್ನೆಲ್ಲ ಇದಕ್ಕಾಗಿಯೇ ಸುರಿದು ಕಷ್ಟದ ಬದುಕನ್ನು ನಡೆಸುವುದನ್ನು ಕಂಡ ಅಪ್ಪಣ್ಣನವರು ಅನ್ನ, ನೀರು, ಹಣ ಇತ್ಯಾದಿಗಳನ್ನು ಕೊಟ್ಟು ಪುಣ್ಯ ಪಡೆಯಲು ಆ ವಸ್ತುಗಳನ್ನೇನು ನೀವು ಸೃಷ್ಟಿಸಿರುವಿರಾ? ಎಂದು ಪ್ರಶ್ನಿಸುವ ಮೂಲಕ ವೈಚಾರಿಕ ಸತ್ಯವಿಚಾರಗಳನ್ನು ತಿಳಿಸಿ, ಅವರನ್ನು ಶೋಷಣೆಯಿಂದ ಮುಕ್ತಗೊಳಿಸಲು ಪ್ರಯತ್ನಿಸುತ್ತಾರೆ.
ಜ್ಯೋತಿಷ್ಯ,ಶಾಸ್ತ್ರ, ಪುರಾಣಗಳನ್ನು ನಂಬಿ ತಮ್ಮ ಅರಿವಿನ ಜ್ಞಾನವನ್ನು ಪಡೆಯದೆ ಮೂಢನಂಬಿಕೆಯ ದಾಸರಾದ ಜನರನ್ನು ಅಪ್ಪಣ್ಣನವರು ಎಚ್ಚರಿಸುತ್ತಾರೆ.
ಉದಯ, ಮಧ್ಯಾಹ್ನ, ಅಸ್ತಮಯ, ಕತ್ತಲೆ ಬೆಳಗು
ದಿನ ವಾರ ಲಗ್ನತಿಥಿ ಮಾಸ ಸಂವತ್ಸರ ಹೋಗುತ್ತ ಬರುತ್ತಲಿವೆ.
ಇವ ನೋಡಿದವರೆಲ್ಲ ಇದರೊಳಗೆ ಹೋಗುತ್ತ ಬರುತ್ತ ಇದ್ದಾರೆ.
ಜಗಕ್ಕೆ ಇವೀಗ ಇಷ್ಟವಾಗಿಪ್ಪವು. ಎನ್ನ ದೇವಂಗೆ ಇವೊಂದೂ ಅಲ್ಲ.
ದಿನಕಾಲ ಯುಗಜುಗ ಪ್ರಳಯಕ್ಕೆ ಹೊರಗಾದ ಆ ದೇವನ,
ಅಂಗವಿಸಿ ಮುಟ್ಟಿ ಹಿಡಿದ ಕಾರಣ, ಎಮ್ಮ ಶರಣರು ಪ್ರಳಯಕ್ಕೆ ಹೊರಗಾದರು.
ಇದನರಿದು, ಅಂತಪ್ಪ ಶರಣರ ಪಾದವ ನಂಬಿ, ಕೆಟ್ಟು ಬಟ್ಟಬಯಲಾದೆನಯ್ಯಾ,
ಬಸವಪ್ರಿಯ ಕೂಡಲಚೆನ್ನಬಸವಣ್ಣ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1717 / ವಚನ ಸಂಖ್ಯೆ-909)
ಮುಂಜಾನೆ, ಮಧ್ಯಾಹ್ನ, ಸಾಯಂಕಾಲ, ರಾತ್ರಿಗಳೆಲ್ಲವೂ ಪ್ರಾಕೃತಿಕ ಕ್ರಿಯೆಗಳು. ದಿನ, ವಾರ, ವರ್ಷಗಳೂ ಸಹ ನಮ್ಮ ಗುರುತಿಗಾಗಿ ಮಾಡಿಟ್ಟುಕೊಂಡ ಚಿಂತನೆಯ ಸಾರ. ಆದರೆ ಇವುಗಳನ್ನು ಅರಿಯದ ಮನುಷ್ಯ ಅವುಗಳ ಒಳಗೆ ತನ್ನ ಬದುಕಿನ ಒಳಿತು, ಕೆಡುಕುಗಳನ್ನು ತಳುಕು ಹಾಕಿಕೊಂಡು ಏಗುತ್ತಿದ್ದಾನೆ. ಹಲವಾರು ನಂಬಿಕೆಗಳ ದಾಸನಾಗಿ, ನಂಬಿಕೆಗಳ ಹಿಂದಿನ ಸತ್ಯಾಸತ್ಯತೆಯನ್ನು ಪರಾಮರ್ಶಿಸುವ, ಪ್ರಶ್ನಿಸುವ, ವಿವೇಚಿಸುವ ಗೋಜಿಗೆ ಹೋಗಿಲ್ಲ. ಈಗ ಅವೆಲ್ಲ ಪೆಡಂಭೂತದಂತೆ ನಮ್ಮ ಬೆನ್ನು ಬಿದ್ದಿವೆ.ತನ್ನಂತೆ ಶರಣರ ವೈಚಾರಿಕ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಜೀವಕಂಟಕವಾದ ಮೂಢನಂಬಿಕೆಗಳಿಂದ ಹೊರಬರಲು ಅಪ್ಪಣ್ಣ ಸಮಾಜಕ್ಕೆ ಕರೆಕೊಡುತ್ತಾರೆ.
ಶರಣರು ಭಕ್ತಿಗೆ ಪ್ರಾಮುಖ್ಯತೆ ನೀಡಿದ್ದರು. ಭಕ್ತಿಯೆಂಬುದು ತೋರುಂಬ ಲಾಭವಲ್ಲ. ಹಾಗೆಯೇ ಭಕ್ತನಾಗುವುದು ಅಷ್ಟು ಸುಲಭದ ಕೆಲಸವೂ ಆಗಿರಲಿಲ್ಲ. ಅಂಥದ್ದರಲ್ಲಿ ಸಮಾಜದಲ್ಲಿ ಡಾಂಭಿಕಭಕ್ತಿಯನ್ನು ಆಚರಿಸಿಕೊಂಡು ಭಕ್ತಿಯ ಹೆಸರಿನಿಂದ ಜನರನ್ನು ಮೋಸಗೊಳಿಸುವ ಜನರು ಸಾಕಷ್ಟಿದ್ದರು. ಅವರನ್ನು ಅಪ್ಪಣ್ಣನವರು ವಿಡಂಬಿಸುತ್ತಾರೆ.
ಅಂಗವ ಮಾರಿಕೊಂಡು ಉಂಬಾತನೊಬ್ಬ ಠಕ್ಕ.
ಲಿಂಗವ ಮಾರಿಕೊಂಡು ಉಂಬಾತನೊಬ್ಬ ಠಕ್ಕ.
ಜಂಗಮವ ತೋರಿಕೊಂಡು ಉಂಬಾತನೊಬ್ಬ ಠಕ್ಕ.
ಇವರು ಮೂವರು ಕಂಗಳು ಕಾಲು ಹೋದವರ ಸಂಗದಂತೆ,
ಲಿಂಗ ಜಂಗಮಕ್ಕೆ ದೂರ,
ನಮ್ಮ ಶರಣರ ಸಂಗಸುಖಕ್ಕೆ ಸಲ್ಲರು ನೋಡಾ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1709 / ವಚನ ಸಂಖ್ಯೆ-847)
ಹೊಟ್ಟೆಹೊರೆಯಲು ಭಕ್ತಿಯನ್ನು ಮಾರ್ಗವನ್ನಾಗಿ ಮಾಡಿಕೊಂಡು, ಆಸೆಗಾಗಿ ಮೋಸಮಾಡಿದರೆ ಅದರಿಂದ ಯಾವ ಲಾಭವೂ ಆಗಲಾರದು. ಅಂತಹ ಮೋಸಗಾರರಿಂದ ದೂರವಿದ್ದು, ಭಕ್ತಿಯನ್ನು ಸನ್ಮಾರ್ಗದ ಬದುಕಿನ ಕ್ರಮವೆಂದು ಭಾವಿಸಿದರೆ ಮುಕ್ತಿ ದೊರೆಯುತ್ತದೆ.ಇದು ಶರಣರ ಸಂಘದಿಂದ ಮಾತ್ರ ಸಾಧ್ಯವೆಂಬ ಧೋರಣೆ ಅಪ್ಪಣ್ಣನವರದು.
ಕ್ರಾಂತಿಕಾರಕ ಧೋರಣೆ, ವೈಚಾರಿಕಪ್ರಜ್ಞೆಯ ಅಪ್ಪಣ್ಣನವರ ವಚನಗಳು ಸಮಾಜಕ್ಕೆ ಬೆಳಕಾಗಿ, ದಮನಿತರ ದನಿಯಾಗಿ, ದಾರಿತಪ್ಪಿದ ಸಮಾಜವನ್ನು ತಮ್ಮ ಬಂಡಾಯದ ಧ್ವನಿಯ ಮೂಲಕ ಸರಿದಾರಿಯಲ್ಲಿ ತರುವಲ್ಲಿ ಪ್ರಮುಖಪಾತ್ರವನ್ನು ವಹಿಸುತ್ತವೆ.
ಡಾ.ರಾಜೇಶ್ವರಿ ವೀ.ಶೀಲವಂತ,
ಉಪನ್ಯಾಸಕರು,
ಸರ್ಕಾರಿ ಪ್ರಥಮ ದರ್ಜೆ ಕಾಲೇಜು,
ಬೀಳಗಿ.
ಮೋಬೈಲ್ ಸಂ. 99454 56451
ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in.
.