ವ್ಯೋಮಕಾಯ ಅಲ್ಲಮ ಪ್ರಭುಗಳ ವಚನ “ನೆಲದ ಮರೆಯಲಡಗಿದ ನಿಧಾನದಂತೆ” ವಿಶ್ಲೇಷಣೆ / ಡಾ. ಯಲ್ಲಪ್ಪ ಯಾಕೊಳ್ಳಿ, ಸವದತ್ತಿ, ಬೆಳಗಾವಿ ಜಿಲ್ಲೆ.

ನೆಲದ ಮರೆಯಲಡಗಿದ ನಿಧಾನದಂತೆ,
ಮುಗಿಲ‌ ಮರೆಯಲಡಗಿದ ಮಿಂಚಿನಂತೆ,
ಬಯಲ ಮರೆಯಲಡಗಿದ ಮರೀಚಿಯಂತೆ
ಕಂಗಳ‌ ಮರೆಯಲಡಗಿದೆ ಬೆಳಗಿನಂತೆ-
ಗುಹೇಶ್ವರಾ ನಿಮ್ಮ ನಿಲುವು
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-8/ವಚನ ಸಂಖ್ಯೆ-4)

ದೈವದ ವಿಸ್ತಾರವನ್ನು ಶರಣರು ವಿವರಿಸಿದ ಹಾಗೆ ಮತ್ತಾರೂ ವಿವರಿಸಿಲ್ಲ. ಎಲ್ಲವೂ ಸಾಧ್ಯವಾಗುವದು ನಡೆಯುವದು, ನಿಲ್ಲುವದು ಪ್ರತಿಬಂಧಿಸುವದು ಇದೆಲ್ಲವೂ ದೈವದಿಂದಲೇ ಎಂದು ಶರಣರು‌ ಪ್ರಖರವಾಗಿ‌ ನಂಬಿದ್ದರು. ಇದನ್ನೆ ಸೃಷ್ಟಿ-ಸ್ಥಿತಿ-ಲಯ ಎನ್ನುವ ಪದಗಳಲ್ಲಿ ವಿವರಿಸಲಾಗುತ್ತದೆ ಈ‌ ಮೂರು‌ ಸಾಧ್ಯವಾಗುವದು ದೈವದಿಂದಲೇ‌ ಹೊರತು‌ ಬೇರಾರಿಂದಲೂ‌ ಸಾಧ್ಯವಿಲ್ಲ ಎನ್ನುವದು ಅವರ ದೃಢ ಅಭಿಪ್ರಾಯ.

ನಮ್ಮ‌ ಕಣ್ಣಿನ‌ ಮಿತಿಗೆ ಸಿಗದ ವಿಸ್ತಾರ ದೈವದ್ದು ಎನ್ನುವ ಶರಣರು ಅದನ್ನು ಹಿಡಿಯಲಾಗದು ಎನ್ನುತ್ತಾರೆ. “ಆಕಾಶದಿಂದತ್ತ ನಿಮ್ಮ ಶ್ರೀ ಮುಕುಟ, ಪಾತಾಳದಿಂದತ್ತತ್ತ‌ ನಿಮ್ಮ ಶ್ರೀಚರಣ, ಅಗಮ್ಯ ಅಗೋಚರ ಲಿಂಗ” ಎಂದು ಶರಣರು ವರ್ಣಿಸಿದ್ದರು. ಇದೆಲ್ಲ ವಿಚಾರವನ್ನು ಒಳಗೊಳ್ಳುವ ರೀತಿಯಲ್ಲಿ ಅಲ್ಲಮಪ್ರಭುಗಳು‌ ದೈವದ ಇರುವಿಕೆಯನ್ನು‌ ಒಂದು ವಚನದಲ್ಲಿ ಬಿಡಿಸಿರುವದನ್ನು‌ ನೋಡಬಹುದು.

ಪ್ರಸ್ತು ವಚನದಲ್ಲಿ ಉದಾಹರಿಸಿದ ಎಲ್ಲವೂ ಇರುವದು ನಿಜ. ಆದರೆ ಹೊರಗಣ್ಣಿಗೆ ಕಾಣಲಾರವು. ಹಾಗೆಂದು ಅವುಗಳ ಇರುವಿಕೆ ಸುಳ್ಳು ಎನ್ನಲಾದೀತೆ? ನಿಧಾನ ಅಂದರೆ ಸಂಪತ್ತು. ಅದನ್ನು ನೆಲದ ಮರೆಯಲಿ ಅಡಗಿಸಿಟ್ಟಿರೋದು ನಿಜ. ಆದರೆ ಕಣ್ಣಿಗೆ ಕಾಣಿಸದು. ಹಾಗೆಯೆ ಮಿಂಚು ಮಿಂಚಿದಾಗಲೇ ಗೋಚರವಾಗುವದು. ಕಣ್ಣಿಗೆ ಕಾಣಿಸದು. ಬಿಸಿಲು ಕುದುರೆ (ಮರೀಚಿ-Mirage) ಬಿಸಿಲಿನ ದಿನಗಳಲ್ಲಿ ದೂರದಲ್ಲಿ ಇರುತ್ತದೆ. ಆದರೆ ನಮಗೆ ಹಿಡಿಯಲಾಗದು.

ಇವುಗಳ ಹಾಗೆಯೆ ದೈವವು ಹೊರಗಿನ‌ ಕಣ್ಣು‌-ಕಿವಿ ಮೊದಲಾದ ಇಂದ್ರಿಯಗಳಿಗೆ ಗೋಚರವಾಗದಂತೆ ಇರುತ್ತದೆ. ಹಾಗೆಂದು ಕಾಣಿಸುವದಿಲ್ಲ ಎಂದ ಮಾತ್ರಕೆ ಅದರ ಇರುವಿಕ ಸುಳ್ಳಲ್ಲ. ಆದರೆ ಅvugL ಇರುವಿಕೆ ನಮಗೆ ಗೋಚರವಾಗುವದಿಲ್ಲ. ಅದನ್ನೆ‌ ಪ್ರಭುಗಳು ಕಂಗಳ‌ ಮರೆಯಲಡಗಿದ ಬೆಳಗಿನಂತೆ ಎಂದು ಬಣ್ಣಿಸುತ್ತಾರೆ.

ಯಾವುದು‌ ಕಣ್ಣಿಗೆ ಕಾಣಿಸದೋ, ಇಂದ್ರಿಯಗಳ ಮಿತಿಗೆ ಅರಿವಾಗದುದೋ ಅದೇ ದೈವ ಎನ್ನುವ ಅಲ್ಲಮ ಪ್ರಭುಗಳು ಇಲ್ಲಿ ಕಣ್ಣಿಗೆ ಕಾಣದಿರುವ ದೈವದ ಇರುವಿಕೆಯನ್ನು ನೆಲದ ಮರೆಯ ನಿಧಾನಕ್ಕೆ, ಮುಗಿಲ‌ ಮರೆಯ‌ ಮಿಂಚಿಗೆ, ಬಯಲ‌ ಮರೆಯಲಡಗಿದ ಮರೀಚಿಕೆಗೆ ಹೋಲಿಸುತ್ತ ಇವೆಲ್ಲದರ ಹಾಗೆ ದೈವವೆನ್ನುವ ಬೆಳಕು ಹೊರಗಣ್ಣಿಗೆ ಕಾಣಿಸದ ಬೆಳಗು. ಅದನ್ನು ಕಾಣಲು ಭಕ್ತಿಯಂಬ ದಿವ್ಯ ಭಾವನೆ ಬೇಕು. ಅದಿದ್ದಾಗ ಗುಹೇಶ್ವರನ‌ ಇರವು ಕಾಣಿಸಲು ಸಾಧ್ಯ ಎನ್ನುತ್ತಾರೆ.

ದೈವದ ಅನುಸಂಧಾನ ಎಂಬುದು ಸುಮ್ಮನೆ ಆಗುವಂಥದಲ್ಲ. ಅದಕ್ಕೆ ಮನದೊಳಗೆ ಗಾಢ ಭಕ್ತಿ ಬೇಕು ಎನ್ನುವದು ಶರಣರ ವಿಚಾರವಾಗಿದೆ.

ಡಾ. ಯಲ್ಲಪ್ಪ ಯಾಕೊಳ್ಳಿ.
ಪ್ರಾಚಾರ್ಯರು (ನಿ),
ಸವದತ್ತಿ, ಬೆಳಗಾವಿ ಜಿಲ್ಲೆ.
ಮೋಬೈಲ್‌ ಸಂ. 97319 70857

 ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
 ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in / admin@vachanamandara-in

Loading

Leave a Reply