
ಅಸಿ ಮಸಿ ಕೃಷಿ ವಾಣಿಜ್ಯ ಮುಂತಾದ
ಕಾಯಕವ ಮಾಡಿ,
ಭಕ್ತರ ಪಡುಗ, ಪಾದತ್ರಾಣ, ಪಹರಿ,
ಬಾಗಿಲು, ಬೊಕ್ಕಸ, ಬಿಯಗ
ಮುಂತಾದ ಕಾಯಕವಂ ಮಾಡಿಕೊಂಡು
ವ್ರತಕ್ಕೆ ಊಣೆಯವಿಲ್ಲದೆ ಮಾಡುವ ಕೃತ್ಯಕ್ಕೆ ಕಡೆಯಾಗದೆ-
ಈ ಭಕ್ತನ ಅಂಗಳ ಅವಿಮುಕ್ತ ಕ್ಷೇತ್ರ,
ಆತನ ಮನೆಯೆ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಾಶ್ರಯ
(ಶಿವಶರಣೆಯರ ವಚನಸಂಪುಟ-೫, ವಚನ-೩೬೫ ಪುಟ-೧೧೫)
ಅಕ್ಕಮ್ಮನ ವಚನದಂತೆ ಅಸಿ ಮಸಿಗಿಂತ ಕೃಷಿಕ್ಷೇತ್ರವು ಮಾನವನ ಸರ್ವಾಂಗೀಣ ಪ್ರಗತಿಗೆ ಅವಿಭಾಜ್ಯ ಅಂಗವಾಗಿರುವAತೆ, ನೂರಾರು ವೃತ್ತಿಗಳಿಗೆ, ಅಸಂಖ್ಯಾತ ಕ್ರಿಮಿ–ಕೀಟ, ಪ್ರಾಣಿ–ಪಕ್ಷಿಗಳಾದಿ ಜೀವಸಂಕುಲಕ್ಕೆ ಪೂರಕವಾಗಿದೆ, ಪೋಷಕವಾಗಿದೆ. ಕೃಷಿಕಾರ್ಯವನ್ನು ಅವಲಂಬಿಸಿ ಬದುಕುತ್ತಿರುವ, ಜೀವನಾಶ್ಯಕ ವಸ್ತುಗಳ ಉತ್ಪಾದಕ ಚಟುವಟಿಕೆಯಲ್ಲಿ ಪಾಲ್ಗೊಂಡವರ ಕಾರ್ಯವೈಖರಿ ಅನನ್ಯವಾದುದು. ಶ್ರಮಜೀವಿಗಳು ತಮ್ಮ ಸೇವೆಯನ್ನು ಅನವರತವಾಗಿ ನೆರವೇರಿಸಿಕೊಂಡು ಬರುವುದರ ಜೊತೆಗೆ ಜೀವಜಾಲದ ಉಳುವಿಗೆ ಶ್ರಮಿಸುವ ನಿಶ್ಚಿತ ಮನೋಭಾವ ಎಲ್ಲ ಕಡೆಗಳಲ್ಲೂ ಕಂಡುಬರುವುದು ಅಪರೂಪ. ಪ್ರಕೃತಿಯ ಜೀವಜಾಲದ ಅಸ್ತಿತ್ವ ಮನ್ನಿಸಿ, ಅದರ ಶ್ರೇಯೋಭಿವೃದ್ಧಿಗೆ ನಿಸ್ವಾರ್ಥ ಮನೋಭಾವದಿಂದ ದುಡಿಯುವವರ, ಅದನ್ನು ಉಪಭೋಗಿಸುವ ಜೀವಿಗಳ ನಡುವಿನ ಆಂತರಿಕ ಸಂಬAಧಗಳು ಅವಿನಾಶಿಯಾದವು. ಜೀವಪರ ಮನಸ್ಥಿತಿಯ ಸಂಬAಧಗಳನ್ನು ಇಡೀ ಜೀವಜಾಲಕ್ಕೆ ಅನ್ವಯಿಸಿ ಪರಸ್ಪರ ಪೂರಕವಾಗಿ ರೂಪುಗೊಳ್ಳುವಂತೆ ಮಾಡಿದ ಶ್ರೇಯಸ್ಸು ೧೨ನೇ ಶತಮಾನದ ಕಾಯಕಜೀವಿಗಳಿಗೆ ಸಲ್ಲುತ್ತದೆ.
ಶರಣ ಶರಣೆಯರು ಭೌತಿಕದ ಮೂಲಕ ಆಧ್ಯಾತ್ಮಿಕ ಅನುಸಂಧಾನ ನಡೆಸಿದ್ದಾರೆ. ಕಾಯಕದಲ್ಲೇ ಕೈಲಾಸ ತೋರಿಸಿಕೊಟ್ಟು ಎಲ್ಲ ಕಾಲಕ್ಕೂ ಮಾದರಿಯಾಗಿದ್ದಾರೆ. ಲೌಕಿಕ ಕೃಷಿಯಲ್ಲಿ ಪಾಲ್ಗೊಂಡು ಆಧ್ಯಾತ್ಮಿಕ ಕೃಷಿ ಪೂರೈಸಿದವರಲ್ಲಿ ಅನೇಕರು. ಬೆಳೆಗೆ ಬೇಕಾಗುವಷ್ಟೇ ನೀರು ಬಿಡಬೇಕೆನ್ನುವ ಒಕ್ಕಲಿಗ ಮುದ್ದಣ್ಣ, ಆರೂಢ ವ್ಯವಸಾಯಗಾರ ಅಜಗಣ್ಣತಂದೆ, ಹುರಿದಬೀಜ ಬಿತ್ತಿ ಫಸಲು ತೆಗೆದ ಏಲೇಶ್ವರ ಕೇತಯ್ಯ, ಒಣಬೇಸಾಯ ಪದ್ಧತಿಯನ್ನವಲಂಬಿಸಿದ್ದ ಮಾರಗೌಡ, ಇಳೆಹಾಳ ಬೊಮ್ಮಯ್ಯ, ಬಡಿಹೋರಿ ಬ್ರಹ್ಮಯ್ಯ, ತೋಟಗಾರಿಕೆಯಲ್ಲಿ ನಿರತರಾಗಿದ್ದ ಬಾಹೂರ ಬೊಮ್ಮಣ್ಣ, ನೀಲಕಂಠಯ್ಯ ಮೊದಲಾದ ಶಿವಶರಣರ ಸಮುದಾಯದಲ್ಲಿ ಆತ್ಮೋನ್ನತಿಗೆ ಅಗತ್ಯವಾಗಿರುವ ವ್ರತಾಚಾರಗಳ ಪ್ರತಿಪಾದಕಿ ಅಕ್ಕಮ್ಮ, ವೀರವಿರಾಗಿಣಿ ಅಕ್ಕನಾಗಮ್ಮ, ವಿಚಾರಪತ್ನಿ ನೀಲಲೋಚನೆ, ಕದಿರೆಯ ಕ್ರಿಯೆಗಳನ್ನೆಲ್ಲ ಪರಮಾತ್ಮನ ಆತ್ಮಿಕ ಸಂಬAಧಕ್ಕೆ ಹೊಂದಿಸಿದ ರೆಮ್ಮೆವ್ವೆ, ಮುಗ್ಧಮನಸ್ಥಿತಿಯ ಮುಕ್ತಾಯಕ್ಕನಂತಹ ವಿವಿಧ ವೃತ್ತಿನಿರತ–ವಸ್ತುನಿಷ್ಠ ಮನೋಧರ್ಮದ ಶಿವಶರಣೆಯರ ಜೀವನ ವಿಧಾನ ಅದ್ವಿತೀಯವಾದುದು.
ಶಿವಶರಣೆಯರ ಸಮಗ್ರ ವಚನ ಸಂಪುಟದಲ್ಲಿ ಪ್ರಕಟಗೊಂಡ ವಚನಕಾರ್ತಿಯರ ವಚನಗಳ ಸಂಖ್ಯೆ ಮತ್ತು ಸತ್ವದ ದೃಷ್ಟಿಯಿಂದ ಗಮನಿಸಿದರೆ ಅಕ್ಕಮಹಾದೇವಿಯ ತರುವಾಯದ ಸ್ಥಾನ ಅಕ್ಕಮ್ಮನಿಗೆ ಸಲ್ಲುತ್ತದೆ. ಈಕೆ ಬಸವಾದಿ ಪ್ರಮಥರ ಕಾಲದಲ್ಲಿದ್ದು ಸನ್ನಡತೆಯ ಬದುಕಿನ ರೂಪುರೇಷೆಗಳನ್ನು ಸಂಯೋಜಿಸಿದ ಶಿವಶರಣೆ. ಅಡುಗೆ ಸಹಾಯಕಿಯಾಗಿ ಕಾಯಕ ಮಾಡುತ್ತಲೇ ಅನುಭವ ಮಂಟಪದಲ್ಲಿ ಅಕ್ಕಮ್ಮ ಪಡೆದಿರುವ ಜ್ಞಾನಕ್ಕೆ, ಅನುಭವಾಭಿವ್ಯಕ್ತಿಯ ಕ್ರಮಕ್ಕೆ ಎಣೆಯಿಲ್ಲ. ಜೀವನಾನುಭವದಿಂದ ಕಂಡುAಡ ವಸ್ತು ವೈವಿಧ್ಯತೆಯ ಪರಿಜ್ಞಾನ ಮನನೀಯವಾಗಿದೆ. ‘ಅಂತರAಗದಲ್ಲಿ ವ್ರತ, ಬಹಿರಂಗದಲ್ಲಿ ಆಚಾರ, ಉಭಯಸಿದ್ಧವಾಗಿ ನಡೆವುದೇ ವ್ರತಾಚಾರ’ ಎಂಬ ಧೋರಣೆ ಹೊಂದಿರುವ; ‘ಆಚಾರವೆ ಪ್ರಾಣವಾದ ರಾಮೇಶ್ವರಲಿಂಗ’ ಎಂಬ ಅಂಕಿತನಾಮದ ಅಕ್ಕಮ್ಮನ ೧೫೩ ವಚನಗಳು ದೊರೆತಿವೆ. ಅಕ್ಕಮ್ಮನ ಬಹಳಷ್ಟು ವಚನಗಳು ಶೀಲ–ವ್ರತ, ನೇಮ–ನಿಷ್ಠೆ, ಆಚಾರ–ವಿಚಾರಗಳಿಂದ ಕೂಡಿವೆ. ಧನ–ಧಾನ್ಯ, ಪಡಿಪದಾರ್ಥ, ಜನಪದ ನಂಬಿಕೆಗಳನ್ನು ಕಟ್ಟಿಕೊಡುವ ವಚನಗಳು ಅರ್ಥಪೂರ್ಣವಾಗಿವೆ. ಕೌಟುಂಬಿಕ ಸಾಮರಸ್ಯ ಕಾಪಾಡುವ, ಸಾಂಸ್ಕೃತಿಕ ಸ್ಥಿತಿಗತಿಗಳನ್ನು ತಿಳಿಸಿಕೊಡುವ, ಸಾಮಾಜಿಕ ಸ್ವಾಸ್ಥö್ಯವನ್ನು ಕಟ್ಟಿಕೊಡುವ ದೃಷ್ಟಿಯಿಂದ ಗಮನಾರ್ಹವಾಗಿವೆ.
ಅರವತ್ತುನಾಲ್ಕು ಶೀಲ, ಐವತ್ತಾರು ನೇಮ, ಮೂವತ್ತೆರಡು ಕೃತ್ಯ
ಇಂತಿವು ಕಟ್ಟಳೆಗೊಳಾದವು.
ಮಿಕ್ಕಾದ ಪ್ರಮಥರೆಲ್ಲರು ಸ್ವತಂತ್ರಶೀಲರು.
ಅಣುವಿAಗಣು, ಘನಕ್ಕೆ ಘನ, ಮಹತ್ತಿಂಗೆ ಮಹತ್ತಪ್ಪ ಘನಶೀಲರುಂಟು.
ಆರಾರ ಅನುವಿನಲ್ಲಿ ಅನುವ ಅನುಕರಿಸಿ,
ಆರಾರ ಭಾವದಲ್ಲಿ ಬಂಧಿತನಾಗಿ ಸಿಕ್ಕಿದೆಯಲ್ಲಾ,
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವೆ?
(ಶಿವಶರಣೆಯರ ವಚನಸಂಪುಟ-೫, ವಚನ-೩೬೪ ಪುಟ-೧೧೪)
ಸುಧಾರಣಾಮನೋಭಾವದ ವ್ಯಕ್ತಿಯು ಸಾಮಾಜಿಕ ಕಟ್ಟುಪಾಡುಗಳಿಗೆ ಒಳಪಟ್ಟರೆ ಆ ವ್ಯಕ್ತಿ, ಆ ಸಮಾಜದ ಅಭಿವೃದ್ಧಿಯಾಗುತ್ತದೆ. ಆದರೆ ಅಂಧಶ್ರದ್ಧೆ, ಶುಷ್ಕಾಚರಣೆ, ಅರ್ಥಹೀನ ವ್ರತಾಚರಣೆಗಳಿಂದ ಬಂಧಿತನಾದರೆ ಅವನಿಂದ ಸಮಾಜಕ್ಕೆ ಯಾವುದೇ ರೀತಿಯ ಪ್ರಯೋಜನವಿಲ್ಲ. ಪ್ರಗತಿವಿರೋಧಿ ಮನಸ್ಥಿತಿ ಹೊಂದಿರುವ ವ್ಯಕ್ತಿತ್ವವನ್ನು ಮತ್ತು ಸಮಾಜದಲ್ಲಿ ಆಳವಾಗಿ ಬೇರುಬಿಟ್ಟಿದ್ದ ವ್ರತಾಚರಣೆ, ಕಂದಾಚಾರಗಳನ್ನು ಅಕ್ಕಮ್ಮ ವಿಡಂಬಿಸಿದ್ದಾಳೆ.
ಅಕ್ಕಿ ಬೇಳೆ ಬೆಲ್ಲ ಉಪ್ಪು ಮೆಣಸು ಅಡಕೆ ಫಲ ರಸ ದ್ರವ್ಯ ಮುಂತಾದ
ದ್ರವ್ಯಕ್ಕೆ ವ್ರತವೊ? ಮುಟ್ಟುವ ತಟ್ಟುವ ಸೋಂಕುವ ಚಿತ್ತಕ್ಕೆ ವ್ರತವೊ?
ಇವು ಬಾಹ್ಯದಲ್ಲಿ ಮಾಡುವ ಸೌಕರಿಯವಲ್ಲದೆ ವ್ರತಕ್ಕೆ ಸಲ್ಲ.
(ಶಿವಶರಣೆಯರ ವಚನಸಂಪುಟ-೫, ವಚನ-೩೫೬ ಪುಟ-೧೧೧)
ಬಸವಣ್ಣ, ಚೆನ್ನಬಸವಣ್ಣ, ಅಲ್ಲಮಪ್ರಭು, ನಿಜಗುಣ ಶಿವಯೋಗಿ, ವೀರಮಡಿವಾಳ ಮಾಚಿದೇವ, ಸಿದ್ಧರಾಮ, ಮೋಳಿಗೆ ಮಾರಯ್ಯ, ಆಯ್ದಕ್ಕಿ ಮಾರಯ್ಯ, ಏಕಾಂತ ರಾಮಯ್ಯ, ಅಜಗಣ್ಣ, ಅಕ್ಕಮಹಾದೇವಿ ಮೊದಲಾದ ೭೭೦ ಅಮರಗಣಂಗಳನ್ನು ಸ್ಮರಿಸಿ, ಅವರೆಲ್ಲರ ‘ವ್ರತಪ್ರಸಾದ’ದಿಂದ ಪ್ರಸನ್ನಳಾದೆ ಎಂದು ನಿವೇದಿಸಿಕೊಂಡಿದ್ದಾಳೆ. ಅಕ್ಕಮಹಾದೇವಿ, ಅಕ್ಕನಾಗಮ್ಮ, ಹಡಪದ ಲಿಂಗಮ್ಮ, ಅಮುಗೆ ರಾಯಮ್ಮ, ಸತ್ಯಕ್ಕ, ಸೂಳೆ ಸಂಕವ್ವೆ ಮೊದಲಾದವರು ಖಚಿತ ನಿಲುವುಗಳ ಮುಖಾಂತರ ಮುಂಚೋಣಿಯಲ್ಲಿದ್ದರೆ; ನೇರವೂ, ಸರಳವೂ ಆದ ರೀತಿಯಲ್ಲಿ ವ್ರತಾಚಾರಗಳನ್ನು ಪ್ರತಿಪಾದಿಸಿ ವ್ರತಾಚಾರನಿಷ್ಠ ಅಕ್ಕಮ್ಮ ಎನಿಸಿಕೊಂಡಿದ್ದಾಳೆ.
ವ್ರತಿಗಳ ಮನೆಗೆ ವ್ರತಿಗಳು ಬಂದಲ್ಲಿ
ಎನ್ನ ಮನೆಗೆ ಇವರು ಬಂದರೆAದು ಭಿನ್ನಭಾವವಾದಾಗಲೆ
ವ್ರತಕ್ಕೆ ದೂರ, ಆಚಾರಕ್ಕೆ ಕೊರತೆ.
ತಮ್ಮ ಮನೆಗೆ ತಾವು ಬಂದರೆAದು ಅನ್ಯಭಿನ್ನವಿಲ್ಲದೆ
ಅರ್ಥ ಪ್ರಾಣ ಅಭಿಮಾನವೆಂದು ಕಟ್ಟುಮಾಡಿದಡೆ
ಸಮಯಾಚಾರಕ್ಕೆ ದೂರ;
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಒಪ್ಪದ ನೇಮ.
(ಶಿವಶರಣೆಯರ ವಚನಸಂಪುಟ-೫, ವಚನ-೪೮೮ ಪುಟ-೧೫೮)
ಚಿನ್ನ ಒಡೆದಡೆ ಕರಗಿದಡೆ ರೂಪಪ್ಪುದಲ್ಲದೆ,
ಮುತ್ತು ಒಡೆದು ಕರಗಿದಡೆ ರೂಪಪ್ಪುದೆ?
ಮರ್ತ್ಯದ ಮನುಜ ತಪ್ಪಿದರೊಪ್ಪಬೇಕಲ್ಲದೆ,
ಸದ್ಭಕ್ತ ಸದೈವ ತಪ್ಪಿದಡೆ ಒಪ್ಪಬಹುದೆ?
ಆಚಾರಕ್ಕು ಅಪಮಾನಕ್ಕು ಅಂಗವೆ ಕಡೆಯಲ್ಲದೆ,
ಬೇರೊಂದAಗವ ಮಾಡಿ ಗುರುಲಿಂಗಜAಗಮದ ಮುಖದಿಂದ
ಶುದ್ಧವೆAದು ತಂದು ಕೂಡಿಕೊಳಬಹುದೆ?
ಲಿಂಗಬಾಹ್ಯನ, ಆಚಾರಭ್ರಷ್ಟನ, ಜಂಗಮವ ಕೊಂದವನ
ಇವರಿರುವ ಕಂಡು ನುಡಿದಡೆ ಕುಂಭೀಪಾತಕಕ್ಕೆ ಒಳಗು;
ಇದಕ್ಕೆ ಸಂದೇಹವಿಲ್ಲ.
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ಆಣತಿ.
(ಶಿವಶರಣೆಯರ ವಚನಸಂಪುಟ-೫, ವಚನ-೪೦೫ ಪುಟ-೧೨೯)
ಅಕ್ಕಮ್ಮನ ವಚನಗಳ ಶೈಲಿ ಕಾವ್ಯಾತ್ಮಕ ಅಲ್ಲದಿದ್ದರೂ ಕೆಲವೊಂದು ವಚನಗಳಲ್ಲಿ ಸುಂದರ ರೂಪಕಾಂಶಗಳಿವೆ ಎನ್ನುವುದಕ್ಕೆ ಈ ವಚನ ನಿದರ್ಶನವಾಗಿದೆ. ಚಿನ್ನಕ್ಕೆ ನಿರ್ದಿಷ್ಟ ಆಕಾರವಿಲ್ಲ. ಅಕ್ಕಸಾಲಿಗ ಅದಕ್ಕೆ ಬೇಕಾದ ಆಕಾರ ನೀಡಬಹುದು. ಮುತ್ತು ಖಚಿತ ಆಕೃತಿ ಹೊಂದಿದೆ. ಅದನ್ನು ರೂಪಾಂತರಿಸಲು ಸಾಧ್ಯವಿಲ್ಲ. ಹಾಗೊಂದು ವೇಳೆ ಮುತ್ತಿನ ಆಕಾರ ಬದಲಿಸಲು ಪ್ರಯತ್ನಪಟ್ಟರೆ ಅದು ನಾಶವಾಗುತ್ತದೆ. ಇಲ್ಲವೆ ವಿರೂಪಗೊಂಡು ನಿಷ್ಪçಯೋಜಕವಾಗುತ್ತದೆ. ಅಮೂಲ್ಯವಾದ ಮುತ್ತಿನಂತಿರುವ ಸದ್ಭಕ್ತ ಲೌಕಿಕ ಪ್ರಲೋಭನೆಗಳಿಗೊಳಗಾಗಿ ಆಚಾರ ವಿಚಾರಗಳಲ್ಲಿ ತಪ್ಪಬಾರದು. ವ್ಯಕ್ತಿಯೊಬ್ಬನ ಸಮಾಜಮುಖಿ ವ್ಯಕ್ತಿತ್ವವನ್ನು ಪರಿಗಣಿಸಿ ಸಮಾಜವೂ ಆತನನ್ನು ಗೌರವಿಸುತ್ತದೆ. ಆದಕಾರಣ ಸದ್ಭಕ್ತನಾದವನು ಆಮಿಷಗಳಿಗೆ ಬಲಿಯಾಗದೆ ತನ್ನ ನಿರ್ದಿಷ್ಟ ನಿಲುವು, ಜವಾಬ್ದಾರಿಯುತ ಕರ್ತವ್ಯದಿಂದ ವಿಮುಖವಾಗಬಾರದೆಂಬ ಕಳಕಳಿ ಅಕ್ಕಮ್ಮನದು.
ಆಚೆಯ ನೀರ ಈಚೆಯಲ್ಲಿ ತೆಗೆವುದು ಚಿಲುಮೆಯಲ್ಲ;
ಆಚೆಯಲ್ಲಿ ಕೇಳಿದ ಮಾತ ಈಚೆಯಲ್ಲಿ ನುಡಿದು
ಮತ್ತಾಚೆಯಲ್ಲಿ ಬೆರಸುವವ ಭಕ್ತನಲ್ಲ;
ಆತನ ಇದಿರಿನಲ್ಲಿ ಆತನ ಸತಿಯ ಅವ್ವಾ ಎಂದು,
ಆತ ಸಂದಲ್ಲಿ ಸತಿ ಎಂಬ ಭಂಡರಿಗೇಕೆ ವ್ರತ ನೇಮ ನಿತ್ಯ?
ಇಂತಿವರಲ್ಲಿ ಕಳೆದುಳಿಯಬೇಕು.
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವನರಿವುದಕ್ಕೆ.
(ಶಿವಶರಣೆಯರ ವಚನಸಂಪುಟ-೫, ವಚನ-೩೬೯, ಪುಟ-೧೧೬)
ಗುರುದರ್ಶನ, ಲಿಂಗಪೂಜೆ, ಜಂಗಮಸೇವೆ, ಶಿವಭಕ್ತರ ಸುಖ ಸಂಭಾಷಣೆ, ಶರಣರ ಸಂಗ ಮೊದಲಾದ ಸದ್ವರ್ತನೆಗಳು ಸದ್ಭಕ್ತನ ಉತ್ತಮ ಲಕ್ಷಣಗಳಾಗಿವೆ. ಆದಕಾರಣ ಸದಾತ್ಮ, ಸದೋನ್ನತಿ ಬಯಸುವ ವ್ರತಧಾರಿಗಳು ಜಗದ ಕಾಮಿಯಂತೆ ಕಾಮಿಸದೆ, ಕ್ರೋಧಿಯಂತೆ ಕ್ರೋಧಿಸದೆ, ಲೋಭಿಯಂತೆ ಲೋಭಿಸದೆ, ಮಾಯಾಮೋಹಂಗಳ ವರ್ಜಿತವಾಗಿ ಮನಬಂದAತೆ ಆಡದೆ, ತನು ಬಂದAತೆ ಕೂಡದೆ ಇರುವುದೇ ವ್ರತಾಚಾರ ಎನಿಸಿಕೊಳ್ಳುತ್ತದೆ. ಚಾಡಿಮಾತು, ಇಬ್ಬಂದಿತನದಿAದ ಕೂಡಿದ ಧೋರಣೆ ವ್ರತಾಚಾರಕ್ಕೆ ವಿರುದ್ಧವಾಗಿದೆ. ಯಾವುದೇ ವ್ರತ ಕೈಗೊಂಡರೂ ಆ ವ್ರತಧಾರಿಗೆ ಗುರು ಲಿಂಗ ಜಂಗಮ ಸೇವೆಯೆ ಮೂಲಮಂತ್ರವಾಗಬೇಕು. ಆವಾವುದ ತಾ ಕೊಂಬಲ್ಲಿ ಕೊಡುವಲ್ಲಿ ಗುರು ಲಿಂಗ ಜಂಗಮವ ಮುಂದಿಟ್ಟುಕೊAಬುದೆ ಶುದ್ಧಕ್ರಿಯೆ ಆಗಬೇಕೆಂಬುದು ಅಕ್ಕಮ್ಮನ ಅಭಿಪ್ರಾಯ.
ಯಾವೊಬ್ಬ ವ್ಯಕ್ತಿಯೂ ತನ್ನ ಉತ್ತಮ ನಡತೆಯಿಂದ, ಮೃದುವಚನಗಳಿಂದ, ಸತ್ಯಶುದ್ಧ ಕ್ರಿಯೆಗಳಿಂದ ಸದ್ಭಕ್ತ ಎನಿಸಿಕೊಳ್ಳುತ್ತಾನೆ. ಅವನು “ಇಂದಿಗೆ ನಾಳಿಂಗೆ ಎಂಬ ಸಂದೇಹವA ಬಿಟ್ಟು ಮುಂದಣ ಕಾಯಕ ಅಂದAದಿಗೆ ಉಂಟು ಎಂಬುದನರಿತು ಬಾಳಬೇಕು. ಬಂದುದ ಕೂಡಿಕೊಂಡು ಲಿಂಗಾರ್ಚನೆಯ ಮಾಡಿ, ಸದಾನಂದದಲ್ಲಿಪ್ಪ ಆ ಭಕ್ತನಂಗಳ ಮಂಗಳಮಯ ಕೈಲಾಸ”ವಾಗುತ್ತದೆ ಎಂದು ಅಕ್ಕಮ್ಮ ಹೇಳಿದ್ದಾಳೆ. ಕಪಟ, ವಂಚನೆ, ಢಾಂಬಿಕತನ ಪ್ರದರ್ಶನ ಮಾಡುವವರು ಎಂದಿಗೂ ಸದ್ಭಕ್ತ ಎನಿಸಿಕೊಳ್ಳಲಾರರು. ಹೋತದಂತೆ ಗಡ್ಡ ಬೆಳೆಸಿಕೊಂಡವರೆಲ್ಲ ಹಿರಿಯರಾಗಲಾರರು. ಆಚಾರ ಬಿಟ್ಟು ಅನಾಚಾರವನ್ನು ಮೈಗೂಡಿಸಿಕೊಂಡು ಕಾಮ, ಕ್ರೋಧ, ಭ್ರಷ್ಟತೆಯಲ್ಲಿ ನಿರತರಾದವರು ಮಹಾನುಭಾವರಲ್ಲ. ಅಜಕಲ್ಪಕೋಟಿ ವರುಷಗಳ ಕಾಲ ತಪಸ್ಸು ಮಾಡಿದವರು, ನಡುಮುರಿದು ಗುಡುಗೂರಿ ತವೆ ನಡುಗಿ ಮತಿಗೆಟ್ಟು ಒಂದನಾಡ ಹೋಗಿ ಒಂಬತ್ತನಾಡುವ ಅಜ್ಞಾನಿಗಳೆಲ್ಲರೂ ಹಿರಿಯರಲ್ಲ. ಅಂತಹವರು ‘ತುಡುಗುಣಿಕಾರ’ ಎನಿಸಿಕೊಳ್ಳುತ್ತಾರೆ. ಅವರು ನರಕಕ್ಕೆ ಯೋಗ್ಯನಾಗುತ್ತಾರೆ ಎಂಬುದು ಅಕ್ಕಮ್ಮನ ಸ್ಪಷ್ಟವಾದ ನಿಲುವು.
ಬತ್ತಲೆ ಇದ್ದವರೆಲ್ಲ ಕತ್ತೆಯ ಮಕ್ಕಳು.
ತಲೆ ಬೋಳಾದವರೆಲ್ಲ ಮುಂಡೆಯ ಮಕ್ಕಳು.
ತಲೆ ಜಡೆಗಟ್ಟಿದವರೆಲ್ಲ ಹೊಲೆಯರ ಸಂತಾನ.
ಆವ ಪ್ರಕಾರವಾದಡೇನು ಅರಿವೆ ಮುಖ್ಯವಯ್ಯಾ
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ.
(ಶಿವಶರಣೆಯರ ವಚನಸಂಪುಟ-೫, ವಚನ-೪೪೬ ಪುಟ-೧೪೩)
ಬತ್ತಲೆ ಇದ್ದವರೆಲ್ಲ, ತಲೆ ಬೋಳಾದವರೆಲ್ಲ, ತಲೆ ಜಡೆಗಟ್ಟಿದವರೆಲ್ಲ ಸಂನ್ಯಾಸಿ ಅಥವಾ ವಿರಕ್ತ ಎನಿಸಿಕೊಳ್ಳುವುದಿಲ್ಲ. ಕೇವಲ ವೇಷಭೂಷಣದಿಂದ ಯಾರೂ ದೊಡ್ಡವರಾಗಲಾರರು. ಸೂಳೆಯಲ್ಲಿ, ಡೊಂಬನಲ್ಲಿ, ಭೈರೂಪನಲ್ಲಿ ವೇಷ ಇರುತ್ತದೆ. ಅಂದ ಮಾತ್ರಕ್ಕೆ ಅವರೆಲ್ಲ ದೊಡ್ಡವರಾಗುತ್ತಾರೆಯೇ ಎಂಬುದು ಅಕ್ಕಮ್ಮನ ಪ್ರಶ್ನೆ. ವೇಷವ ತೋರಿ ಒಡಲಹೊರೆವ ದಾಸಿವೇಶಿಯ ಮಕ್ಕಳಲ್ಲಿ ನಿಜಭಕ್ತಿ ಕಾಣಲಾಗದು. ನಿಜಭಕ್ತನಾಗಬೇಕಾದರೆ ‘ಅರಿವೆ ಮುಖ್ಯವಯ್ಯ’ ಎನ್ನುತ್ತಾಳೆ ಅಕ್ಕಮ್ಮ. ತನುವ್ರತ, ಮನವ್ರತ, ಮಹಾಜ್ಞಾನವ್ರತ ಈ ತ್ರಿಕರಣದಲ್ಲಿ ಶುದ್ಧವಾಗಿಯಲ್ಲದೆ ಕ್ರೀ ಶುದ್ಧವಿಲ್ಲ. ಕ್ರೀ ಶುದ್ಧವಾಗಿಯಲ್ಲದೆ ತನು ಶುದ್ಧವಿಲ್ಲ. ತನು ಶುದ್ಧವಾಗಿಯಲ್ಲದೆ ಮನ ಶುದ್ಧವಿಲ್ಲ. ಮನ ಶುದ್ಧವಾಗಿಯಲ್ಲದೆ ಜ್ಞಾನ ಶುದ್ಧವಿಲ್ಲ ಎಂಬುದು ಅಕ್ಕಮ್ಮನ ಖಚಿತ ಅಭಿಪ್ರಾಯವಾಗಿದೆ.
ಒಟ್ಟಾರೆ ಅಕ್ಕಮ್ಮ ಹೆಸರಿಗೆ ತಕ್ಕಂತೆ ಎಲ್ಲರಿಗೂ ಅಕ್ಕಮ್ಮ. ಸಾಮಾಜಿಕ ಧಾರ್ಮಿಕ ಜೀವನದ ಏಳ್ಗೆಯನ್ನು ಬಯಸಿ, ಸದ್ಗುಣ ಸದಾಚಾರವನ್ನು ಮನ್ನಿಸಿ ಕಟ್ಟಿಕೊಡುವ ಅಕ್ಕಮ್ಮನ ವಚನೋಕ್ತಿಗಳು ಮಾರ್ಮಿಕವಾಗಿವೆ. ಪರಸ್ತಿçà ಪರಧನಂಗಳಲ್ಲಿ ನಿಂದೆಗೆ ಒಡಲಾಗದಿದ್ದುದೆ ವ್ರತ. ತನ್ನ ಸ್ವಕಾರ್ಯದಿಂದ ಮಾಡುವ ಭಕ್ತನ ವ್ರತವೆ ವ್ರತ; ಆತನಾಚಾರವೆ ಸತ್ಯ. ಸರ್ವಭೂತಹಿತನಾಗಿ ದಯವಿದ್ದುದೆ ಆಚಾರ. ತನ್ನಯ ಸ್ವಪ್ನದಲ್ಲಿ ತನಗಲ್ಲದುದ ಕಂಡಡೆ, ತಾ ಮುಟ್ಟದುದ ಮುಟ್ಟಿದಡೆ, ತಾ ಕೊಳ್ಳದುದ ಕೊಂಡಡೆ, ಆ ಸೂಕ್ಷö್ಮತನುವಿನಲ್ಲಿ ಆ ತನುವಂ ಬಿಟ್ಟು ನಿಂದುದೇ ವ್ರತ. ಸ್ಥೂಲ ತನುವಿನಲ್ಲಿ ಸರ್ವರ ನಿಂದೆಗೊಡಲಾಗದೆ, ಮಾಡಿಕೊಂಡ ನೇಮಕ್ಕೆ ಕೇಡಬಂದಲ್ಲಿ ಆ ಅಂಗಕ್ಕೆ ಓಸರಿಸದೆ ನಿಂದುದೆ ಆಚಾರ. ಅಂಗಕ್ಕೆ ಆಚಾರ, ಮನಕ್ಕೆ ಅರಿವು, ಅರಿವಿಂಗೆ ಜ್ಞಾನ ನಿರ್ಧರವಾಗಿ ಕರಿಗೊಂಡುದೆ ವ್ರತ …… ಮುಂತಾದ ವಚನೋಕ್ತಿಗಳು ಅಕ್ಕಮ್ಮ ಪ್ರತಿಪಾದಿಸಿದ ನೇಮ–ನಿಷ್ಠೆ, ವ್ರತಾಚಾರಕ್ಕೆ ಬರೆದಿರುವ ವ್ಯಾಖ್ಯಾನಗಳಾಗಿವೆ. ನೇಮ ಹಲವಾದರೂ ಜ್ಞಾನವೊಂದೆ. ಆ ಜ್ಞಾನಕ್ಕೆ ಪೂರಕವಾಗಬಲ್ಲ ಆಯಾಮಗಳು ಮನುಕುಲದ ಆಚಾರ ವಿಚಾರಸಂಹಿತೆಗೆ ಮಾರ್ಗಸೂಚಿಗಳಾಗಿವೆ.
ಡಾ. ರಘುಶಂಖ ಭಾತಂಬ್ರಾ
“ಬಸವಾಶ್ರಯ” ಪ್ಲಾಟ್ ಸಂಖ್ಯೆ 14-15
ಮುಕ್ತಿಧಾಮ ರಸ್ತೆ, ಮಾಧವನಗರ,
ಬೀದರ-585 402
ದೂರವಾಣಿ : 9916424411