ಶರಣಸಂಸ್ಕೃತಿ/ ಪ್ರೊ. ಬಸವರಾಜ ಕಡ್ಡಿ, ಜಮಖಂಡಿ.

ಸಂಸ್ಕಾರಗಳ ಒಟ್ಟು ಮೊತ್ತವೆ ಸಂಸ್ಕೃತಿ. ಸಂಸ್ಕಾರ ಕಾರಣವಾದರೆ, ಸಂಸ್ಕೃತಿ ಅದರ ಪರಿಣಾಮ. ಉದಾಹರಣೆಗೆ ಹಾಲೊಳಗೆ ತುಪ್ಪವಿದೆ. ಆದರೆ, ಅದು ಅವ್ಯಕ್ತವಾಗಿದೆ. ಅದು ವ್ಯಕ್ತವಾಗಬೇಕಾದರೆ ಹಾಲನ್ನು ಕಾಯಿಸಬೇಕು, ಹೆಪ್ಪಿಡಬೇಕು. ಮೊಸರಾದ ನಂತರ ಕಡೆಯಬೇಕು, ಮಜ್ಜಿಗೆಯಲ್ಲಿ ಬರುವ ಬೆಣ್ಣೆಯನ್ನು ಕಾಯಿಸಬೇಕು. ಆಗ ತುಪ್ಪ ಘಮಘಮಿಸುವುದು. ಹೀಗೆ ಹಾಲಿಗೆ ಸಂಸ್ಕಾರ ಕೊಟ್ಟರೆ ತುಪ್ಪವಾಗುವುದು. ಹಾಗೆಯೇ ಶಿಲೆಗೆ ಸಂಸ್ಕಾರ ಕೊಟ್ಟರೆ ಶಿಲ್ಪವಾಗುವುದು. ಶಿಲೆಯಲ್ಲಿ ಸುಂದರ ಮೂರ್ತಿಗೆ ಬೇಕಾದ ಮತ್ತು ಬೇಡವಾದ ಸಂಗತಿಗಳೆರಡೂ ಇವೆ. ಶಿಲ್ಪವಾಗಲು ಬೇಕಾದುದನ್ನು ಮಾತ್ರ ಉಳಿಸಿ ಬೇಡವಾದುದೆಲ್ಲವನ್ನೂ ಶಿಲ್ಪಿಯು ಕೌಶಲದಿಂದ ಉಳಿಯ ಪೆಟ್ಟುಗಳ ಮೂಲಕ ತೆಗೆದು ಹಾಕಿದರೆ ಸುಂದರ ಮೂರ್ತಿ ಉಳಿಯುತ್ತದೆ. ಮೂರ್ತಿ ಸಂಸ್ಕೃತಿಯಾದರೆ ಶಿಲ್ಪಿಯ ಉಳಿಗಳ ಪೆಟ್ಟುಗಳೆ ಸಂಸ್ಕಾರಗಳು. ಹಾಗೆಯೇ ಅರಿವು, ಆಚಾರ, ಕಾಯಕ, ದಾಸೋಹ, ಸಮಾನತೆ, ಸಮನ್ವಯತೆ, ಸಮತೆ, ವೈಚಾರಿಕತೆ, ನೈತಿಕತೆ, ಆಧ್ಯಾತ್ಮಿಕತೆ ಮುಂತಾದ ಸಂಸ್ಕಾರಗಳ ಒಟ್ಟು ಮೊತ್ತವೆ ಶರಣ ಸಂಸ್ಕೃತಿ.

ಶರಣ ಸಂಸ್ಕೃತಿಯ ಕುರಿತು ಸ್ವರಚಿತ ವಚನಗಳು / (ಶರಣಸಂಸ್ಕೃತಿ/ಪ್ರೊ. ಬಸವರಾಜ ಕಡ್ಡಿ/ಪುಟ ಸಂ. 182):

ಶರಣಸಂಸ್ಕೃತಿ ಕಾಲ್ಪನಿಕ ಸಂಸ್ಕೃತಿಯಲ್ಲ,
ʼಅನುಭಾವಪ್ರಮಾಣʼಸಂಸ್ಕೃತಿ.
ಶರಣಸಂಸ್ಕೃತಿ ಕಾಲಮಿತಿ ಸಂಸ್ಕೃತಿಯಲ್ಲ,
ʼಕಾಲಾತೀತʼಸಂಸ್ಕೃತಿ.
ಶರಣಸಂಸ್ಕೃತಿ ಜಾತಿಸೀಮಿತ ಸಂಸ್ಕೃತಿಯಲ್ಲ,
ʼಜಾತ್ಯತೀತʼಸಂಸ್ಕೃತಿ.

ಶರಣಸಂಸ್ಕೃತಿ ಬೇಡಿ ತಿನ್ನುವ ಸಂಸ್ಕೃತಿಯಲ್ಲ,
ದುಡಿದು ತಿನ್ನುವ ʼಕಾಯಕʼ ಸಂಸ್ಕೃತಿ.
ಶರಣಸಂಸ್ಕೃತಿ ಸಂಗ್ರಹ ಸಂಸ್ಕೃತಿಯಲ್ಲ,
ಹಂಚಿ ಉಣ್ಣುವ ದಾಸೋಹ ಸಂಸ್ಕೃತಿಯಯ್ಯಾ.
ಶರಣಸಂಸ್ಕೃತಿಮೇಲು-ಕೀಳೆಂಬ ಭೇದ ಸಂಸ್ಕೃತಿಯಲ್ಲ,
ಎಲ್ಲರನ್ನೂ ಅಪ್ಪಿಕೊಳ್ಳುವ ʼಸಮಾನತೆʼಸಂಸ್ಕೃತಿ.

ಶರಣಸಂಸ್ಕೃತಿ ಸಕಲಜೀವಿಗಳಿಗೆ ಲೇಸನೆ ಬಯಸುವ
ʼಮಾನವೀಯʼಸಂಸ್ಕೃತಿ.
ಶರಣಸಂಸ್ಕೃತಿ ಪ್ರಚಾರ ಸಂಸ್ಕೃತಿಯಲ್ಲ, ʼಆಚಾರʼಸಂಸ್ಕೃತಿ.
ಶರಣಸಂಸ್ಕೃತಿ ಪರಾಧೀನ ಸಂಸ್ಕೃತಿಯಲ್ಲ,
ಆತ್ಮಸ್ಥೆೈರ್ಯದಿಂದ ಸಾಗುವ ʼಸ್ವಾವಲಂಬನಸಂಸ್ಕೃತಿʼ

ಶರಣಸಂಸ್ಕೃತಿ ಕೇವಲ ಜ್ಞಾನಸಂಪಾದನೆ ಸಂಸ್ಕೃತಿಯಲ್ಲ,
ʼಜ್ಞಾನ-ಕ್ರಿಯೆʼಸಮನ್ವಯಸಂಸ್ಕೃತಿ.
ಶರಣಸಂಸ್ಕೃತಿ ಕೇವಲ ನುಡಿ ಸಂಸ್ಕೃತಿಯಲ್ಲ,
ʼನಡೆ-ನುಡಿʼಒಂದಾಗಿಸಿಕೊಂಡ ಸಂಸ್ಕೃತಿ.
ಶರಣಸಂಸ್ಕೃತಿ ಸಂಸಾರತೊರೆವ ಸಂಸ್ಕೃತಿಯಲ್ಲ,
ʼಲೌಕಿಕ-ಪಾರಮಾರ್ಥʼ ಸಮೀಕರಿಸಿಕೊಂಡ ಸಂಸ್ಕೃತಿ
.

ಶರಣಸಂಸ್ಕೃತಿ ಕೇವಲ ಬಹಿರಂಗಕೃಷಿ ಸಂಸ್ಕೃತಿಯಲ್ಲ,
ʼಬಹಿರಂಗ-ಅಂತರಂಗಕೃಷಿʼ ಮೇಳೈಸಿಕೊಂಡ ಸಂಸ್ಕೃತಿ.
ಶರಣಸಂಸ್ಕೃತಿ ಬರಿ ಆತ್ಮಕಲ್ಯಾಣ ಸಂಸ್ಕೃತಿಯಲ್ಲ,
ʼಆತ್ಮಕಲ್ಯಾಣ-ಸಮಾಜಕಲ್ಯಾಣ ಸಾಮರಸ್ಯʼ ಸಂಸ್ಕೃತಿ.
ಶರಣಸಂಸ್ಕೃತಿ ಪರಿಸ್ಥಿತಿಗೆ ಪ್ರತಿಕ್ರಿಯಿಸುವ ಸಂಸ್ಕೃತಿಯಲ್ಲ,
ಬಂದುದೆಲ್ಲವನ್ನು ಸನವಾಗಿ ಸ್ವೀಕರಿಸುವ ʼಸಮತೆʼಸಂಸ್ಕೃತಿ.

ಶರಣಸಂಸ್ಕೃತಿ ನಾಸ್ತಿಕ ಸಂಸ್ಕೃತಿಯಲ್ಲ, ʼಆಸ್ತಿಕʼಸಂಸ್ಕೃತಿ.
ಶರಣಸಂಸ್ಕೃತಿ ಬಹುದೇವೋಪಾಸನಾ ಸಂಸ್ಕೃತಿಯಲ್ಲ,
ʼಏಕದೇವೋಪಾಸನಾʼಸಂಸ್ಕೃತಿ.
ಶರಣಸಂಸ್ಕೃತಿ ದೇವಾಲಯ ಸಂಸ್ಕೃತಿಯಲ್ಲ,
ʼದೇಹಾಲಯʼಸಂಸ್ಕೃತಿ.

ಶರಣಸಂಸ್ಕೃತಿ ಅನಂತತೆಯನ್ನು ಅಂಗೈಯಲ್ಲಿ,
ಆರಾಧಿಸುವ ʼಶಿವಯೋಗʼಸಂಸ್ಕೃತಿ.
ಶರಣಸಂಸ್ಕೃತಿ ದೇಹದಂಡನೆ ಸಂಸ್ಕೃತಿಯಲ್ಲ,
ʼಅಂತರಂಗಶುದ್ಧಿʼಸಂಸ್ಕೃತಿ.

ಶರಣಸಂಸ್ಕೃತಿ ಮೂಢ ಸಂಪ್ರದಾಯ ಸಂಸ್ಕೃತಿಯಲ್ಲ,
ವಾಸ್ತವಿಕತೆಯ ಅರಿವಿನೆಡೆಗಿನ ʼವೈಚಾರಿಕʼಸಂಸ್ಕೃತಿ.

ಶರಣಸಂಸ್ಕೃತಿ ಲಗ್ನ-ವಿಘ್ನ, ದೋಷ-ದುರಿತ,
ಸ್ವರ್ಗ-ನರಕಗಳ ʼಭ್ರಾಂತಿಯನತಿಗಳೆವʼ ಸಂಸ್ಕೃತಿ.
ಶರಣಸಂಸ್ಕೃತಿ ತೀರ್ಥ-ಯಾತ್ರೆ, ತೀರ್ಥ-ಸ್ನಾನ ಸಂಸ್ಕೃತಿಯಲ್ಲ,
ʼಅಂತರಂಗದರಿವಿನ ಸ್ನಾನʼಸಂಸ್ಕೃತಿ.
ಶರಣಸಂಸ್ಕೃತಿ ಹೋಮ-ಹವನಗಳಿಂದ ಹೊಗೆಯಬ್ಬಿಸುವ ಸಂಸ್ಕೃತಿಯಲ್ಲ,
ದ್ವೇಷ-ಅಸೂಯೆಗಳ ‘ಹೊಗೆ ನಿಲ್ಲಿಸುವ’ ಸಂಸ್ಕೃತಿ.

ಶರಣಸಂಸ್ಕೃತಿ ಸದಾ ಸಜ್ಜನರ ಸಂಗದಲ್ಲಿರುವ ‘ಸತ್ಸಂಗ’ಸಂಸ್ಕೃತಿ.
ಶರಣಸಂಸ್ಕೃತಿ ಸಂಪ್ರದಾಯಗಳ ಸಂಕೀರ್ಣ ಸಂಸ್ಕೃತಿಯಲ್ಲ, ‘ಸರಳಬದುಕಿನ’ಸಂಸ್ಕೃತಿ.
ಶರಣಸಂಸ್ಕೃತಿ ಆತ್ಮವಿಶ್ವಾಸ ಹೆಚ್ಚಿಸುವ ‘ಸಕಾರಾತ್ಮಕ’ಸಂಸ್ಕೃತಿ.

ಶರಣಸಂಸ್ಕೃತಿ ಧಾರ್ಮಿಕ ವಿಧಿವಿಧಾನಗಳ ಸಂಸ್ಕೃತಿಯಲ್ಲ, ‘ಆಧ್ಯಾತ್ಮಿಕ’ಸಂಸ್ಕೃತಿ.
ಶರಣಸಂಸ್ಕೃತಿ ಕೇವಲ ಘನಮನೆ ಸಂಸ್ಕೃತಿಯಲ್ಲ, ‘ಘನಮನ’ಸಂಸ್ಕೃತಿ.
ಶರಣಸಂಸ್ಕೃತಿ ಅಹಂದಿಂದ ಬೀಗುವ ಸಂಸ್ಕೃತಿಯಲ್ಲ,
ಪಕ್ವತೆಯಿಂದ ಬಾಗುವ ‘ಕಿಂಕರತ್ವ’ಸಂಸ್ಕೃತಿ.

ಶರಣಸಂಸ್ಕೃತಿ ವೈಭೋಗ ಸಂಸ್ಕೃತಿಯಲ್ಲ, ‘ವೈರಾಗ್ಯ’ಸಂಸ್ಕೃತಿ.
ಶರಣಸಂಸ್ಕೃತಿ ‘ಜೀವನ್ಮುಕ್ತಿ’ಸಂಸ್ಕೃತಿ.
ಶರಣಸಂಸ್ಕೃತಿ ‘ಪರಮಸುಖ’ಸಂಸ್ಕೃತಿ.

ಇಂತಪ್ಪ ಶರಣಸಂಸ್ಕೃತಿಗೆ ಶರಣರ ವಚನಗಳೆ ಪ್ರಮಾಣವಯ್ಯಾ,
ಮಾನವೀಯ ಮೌಲ್ಯಗಳ ಆಗರವಾದ ಶರಣಸಂಸ್ಕೃತಿಗೆ
ನಮೋ ನಮೋ ಎನುತ ಬದುಕಿದೆನು, ಶ್ರೀಗುರುಬಸವ.

ಹೀಗೆ ಹಲವು ಅತ್ಯಮೂಲ್ಯವಾದ ತತ್ತ್ವಗಳನೊಳಗೊಂಡ ಶರಣಸಂಸ್ಕೃತಿವಿಶ್ವದಲ್ಲಿಯೇ ವಿನೂತನ ಸಂಸ್ಕೃತಿಯಾಗಿದೆ.

ಅನುಭಾವ ಪ್ರಮಾಣ ಸಂಸ್ಕೃತಿ:
ಶರಣ ಸಂಸ್ಕೃತಿಯು ಅನುಭಾವ ಪ್ರಮಾಣ ಸಂಸ್ಕೃತಿಯಾಗಿದೆ. ಈ ಕುರಿತು ಶರಣ ಆದಯ್ಯನವರ ವಚನ:

ಹಿಂದಣ ಕಥೆಯ ಮುಂದೆ ಪೇಳುವ ಕಾವ್ಯವಲ್ಲ.
ಮುಂದನ ಕಥೆಯನಿಂದು ಹೇಳುವ ನಾಟಕವಲ್ಲ.
ಬಂದ ಶಬ್ದವ ಸಂದಿಲ್ಲದುಸುರುವೆನೆಂಬ ಅಭ್ಯಾಸಿಯಲ್ಲ.
ಛಂದ ವಿಚ್ಛಂದಯೆಂಬ ಸಂದೇಹಿಯಲ್ಲ.
ಸೌರಾಷ್ಟ್ರ ಸೋಮೇಶ್ವರಾ
ನಿಮ್ಮ ಶರಣರ ಸ್ವಯಾನುಭಾವದ ಪರಿ ಬೇರೆ.
(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-429/ವಚನ ಸಂಖ್ಯೆ-1145)

ವಚನಗಳು ಕಥೆ, ಕಾವ್ಯ, ನಾಟಕ, ಪುರಾಣಗಳಂತಹ ರಚನೆಗಳಲ್ಲ. ಊಹಿಸಿ, ಕಲ್ಪಿಸಿ ಬರೆದ ಕವನಗಳಲ್ಲ. ಛಂದಸ್ಸಿನಿಂದ ಕೂಡಿದ ಕಲಾತ್ಮಕ ಶಬ್ದಗಳ ಜೋಡಣೆಯಲ್ಲ. ಪಾಂಡಿತ್ಯ ಪ್ರದರ್ಶನಕ್ಕಾಗಿ ಬರೆದ ಸಾಹಿತ್ಯವಲ್ಲ. ಲಿಂಗದಿಂದ ಉದ್ಭವಿಸಿದ ಅಥವಾ ತಪಸ್ಸಿಗೆ ಮೆಚ್ಚಿ ಪ್ರತ್ಯಕ್ಷನಾದ ದೇವನು ಹೇಳಿದಂತೆ ಬರೆದ ದೇವವಾಣಿಯೂ ಅಲ್ಲ. ನಡೆ ಹೇಗೆಯೇ ಇರಲಿ ನುಡಿ ಮಾತ್ರ ಕಲಾತ್ಮಕವಾದುದು ರಚನೆಯಾದರೆ, ನಡೆದಂತೆ ನುಡಿದ, ಬದುಕಿದಂತೆ ಬರೆದ ಆತ್ಮಸಾಕ್ಷಿಯ ವಾಣಿಯೇ ವಚನ. ವಚನಗಳು ಕೇವಲ ಬುದ್ಧಿಯಿಂದ ಅಥವಾ ಭಾವಾವೇಶದಿಂದ ರಚನೆಗೊಂಡವುಗಳಲ್ಲ. ಬುದ್ಧಿಭಾವಗಳು ಸೇರಿ ಅಂತರಂಗದ ಕುಲುಮೆಯಲ್ಲಿ ಪಾಕಗೊಂಡು ಅನುಭಾವದಿಂದ ಹೊರಹೊಮ್ಮಿದವುಗಳು. ವಚನಗಳು ಅನುಭಾವಿಗಳ ಅನುಭವದ ಅಂತರಂಗದ ನುಡಿಗಳು ಎಂದು ಹೇಳುವ ಶರಣ ಆದಯ್ಯನವರ ವಚನ ಶರಣಸಂಸ್ಕೃತಿಯ ಆಧಾರಸ್ತಂಭವಾಗಿದೆ. ಶರಣಸಂಸ್ಕೃತಿ ಎರವಲು ತಂದ ಸಂಸ್ಕೃತಿಯಲ್ಲ ಎಂಬುದಕ್ಕೆ ಈ ವಚನ ಪ್ರಮಾಣವಾಗಿದೆ.

ಕಾಯಕ ಜೀವಿಗಳಾದ ಶರಣರು ತಮ್ಮ ಕಾಯಕದ ಅನುಭವವನ್ನು ಅನುಭಾವದ ಮಟ್ಟಕ್ಕೇರಿಸಿದರು. ‘ಹದ ಮಣ್ಣಲ್ಲದೆ ಮಡಿಕೆಯಾಗಲಾರದು’ ಎಂದು ಕುಂಬಾರ ಗುಂಡಯ್ಯನವರ ಪುಣ್ಯಸ್ತ್ರೀ ಕೇತಲದೇವಿ ಹೇಳುತ್ತಾರೆ. ಮಡಿಕೆ ಮಾಡಲು ಮಣ್ಣನ್ನು ಸೋಸಬೇಕು. ನೀರಲ್ಲಿ ಕಲಿಸಿಟ್ಟು ತುಳಿದು ತುಳಿದು ಹದ ಮಾಡಬೇಕು. ಕಾಯಕದ ಅನುಭವದ ಮೂಲಕ ಕೇತಲದೇವಿ ಅನುಭಾವದ ಮಾತುಗಳನ್ನು ಸೂಚಿಸುತ್ತಾರೆ. ಪ್ರಕೃತಿದತ್ತವಾದ ಮನುಷ್ಯ ಸಂಸ್ಕಾರದ ಮೂಲಕ ಹದಗೊಂಡಾಗ ಅನುಭಾವ ತುಂಬಿದ ‘ಘಟ’ವಾಗುತ್ತಾನೆ. ಹೀಗೆ ಕಾಯಕಜೀವಿಗಳು ತಮ್ಮ ಕಾಯಕದ ಅನುಭವವನ್ನು ಅನುಭಾವದ ಮಟ್ಟಕ್ಕೇರಿಸಿ ವಚನ ರಚನೆ ಮಾಡಿದರು. ಅನುಭವದ ಮೂಲಕ ಮಾತ್ರ ಅನುಭಾವದ ಕಡೆಗೆ ಹೋಗಲು ಸಾಧ್ಯ ಎಂಬುದನ್ನು ಸಾಬೀತುಪಡಿಸಿದರು. ಅನುಭಾವಪ್ರಮಾಣದ ವಚನಸಾಹಿತ್ಯ ಜಗತ್ತಿನಲ್ಲಿ ದುಡಿಯುವ ವರ್ಗದಿಂದ ರಚಿಸಲ್ಪಟ್ಟ ಮೊದಲ ತಾತ್ವಿಕ ಸಾಹಿತ್ಯವಾಗಿದೆ.

ವಚನ ಸಾಹಿತ್ಯ ಮೆದುಳಿನ ಸಾಹಿತ್ಯವಲ್ಲ, ಹೃದಯದ ಸಾಹಿತ್ಯ. ಬುದ್ಧಿಯ ಸಾಹಿತ್ಯವಲ್ಲ, ಅನುಭವದ ಸಾಹಿತ್ಯ. ನಾ ಹೇಳಿದ್ದೇ ಸತ್ಯ ಎಂದು ಬರೆದ ಸಾಹಿತ್ಯವಲ್ಲ. ಆದರೆ, ಅವರು ಬರೆದುದೆಲ್ಲವೂ ಸತ್ಯವಾಯಿತು. ಜನರನ್ನು ಒಪ್ಪಿಸಬೇಕೆಂದು ಬರೆದುದಲ್ಲ, ಆದರೆ, ಎಲ್ಲರೂ ಒಪ್ಪಿಕೊಳ್ಳುವಂತಹ ಸಾಹಿತ್ಯವಾಗಿದೆ.

‘ವಚನಾನುಭವ ವಾಗ್ರಚನೆಯಲ್ಲ’ ಎಂದು ಸಿದ್ಧರಾಮೇಶ್ವರರು ಹೇಳುವಂತೆ ಅನುಭಾವದ ಸಹಜ ಅಭಿವ್ಯಕ್ತಿಯೇ ವಚನ. ಇನ್ನೊಂದೆಡೆ ‘ವಾಗ್ರಚನೆಯೆಂಬುದು ಕರ್ಣಾಟವಯ್ಯಾ’ ಎನ್ನುತ್ತಾರೆ. ಕರ್ಣಾಟವೆಂದರೆ ಕಿವಿಗೆ ಹಿತವಾಗಿರುವಂಥದು. ವಚನಗಳು ಶೃತಿಬದ್ಧವಾದ, ಛಂದೋಬದ್ಧವಾದ ವೇದಮಂತ್ರಗಳಲ್ಲ. ಅವು ‘ಒಲಿದಂತೆ ಹಾಡಿದ’ ಅನುಭಾವದ ನುಡಿಗಳು. ಸಾಂಪ್ರದಾಯಿಕ ಸಾಹಿತ್ಯವು ಬರೆಯಬೇಕೆಂಬ ಉದ್ದೇಶವುಳ್ಳುದಾದರೆ, ವಚನಗಳು ಚಳವಳಿಯ ಭಾಗವಾಗಿ ಹೇಳಬೇಕಾದುದನ್ನು ಹೇಳುವ ಮಾಧ್ಯಮವಾಗಿ ಬಂದವು. ಪಕ್ವ ಮನಸ್ಸಿನ ಮಥಿತ ಫಲವಾಗಿ ಹೊರಹೊಮ್ಮಿದವು, ಹೃದಯದಿಂದ ಬಂದು ಹೃದಯವನ್ನು ತಲುಪುವ ಮಾತುಗಳಾಗಿ ಪರಿಣಮಿಸಿದವು.

ಜೀವಾತ್ಮ-ಪರಮಾತ್ಮರ ಸಂಬಂಧದ ಅಮೃತತ್ವವೇ ‘ಅನುಭಾವದ’ ಮೂಲದ್ರವ್ಯವಾಗಿದೆ. ಅನುಭಾವದ ಮಾರ್ಗವನ್ನು ಅನುಸರಿಸಿ ಸತ್ಯದ ಸಾಕ್ಷಾತ್ಕಾರ ಮಾಡಿಕೊಂಡ ಶರಣನೇ ‘ಅನುಭಾವಿ’. ಆತ ತಾನು ಕಂಡ ಸತ್ಯವನ್ನು, ಉಂಡ ಸುಖವನ್ನು, ಅನುಭವಿಸಿದ ಇಂದ್ರಿಯಾತೀತ ಆನಂದವನ್ನು ಲೋಕಕ್ಕೆ ಹಂಚಬೇಕೆಂಬ ಉತ್ಕಟ ಹಂಬಲದಿಂದ ಬರವಣಿಗೆಯ ಮೂಲಕ ಅಭಿವ್ಯಕ್ತಪಡಿಸಿದ ಸಾಹಿತ್ಯವೇ ‘ವಚನ ಸಾಹಿತ್ಯ’. ತಾವು ಕಂಡುಂಡ ಸತ್ಯವನ್ನು ಜಗತ್ತಿಗೆ ಕಂಡರಿಸಿದರು.

ಕಲ್ಯಾಣದ ಅಂಗಳದಲ್ಲಿ ಬಸವಣ್ಣನವರು ನೆಟ್ಟು ಬೆಳೆಸಿದ ‘ಅನುಭವ ಮಂಟಪ’ ಎಂಬ ಮರಕ್ಕೆ ದೇಶದ ನಾನಾ ಮೂಲೆಗಳಿಂದ ಶರಣರೆಂಬ ಜೇನುನೊಣಗಳು ಬಂದು ‘ಕಾಯಕ-ದಾಸೋಹ’ ಎಂಬ ಜೇನುಗೂಡು ಕಟ್ಟಿ ‘ಅರಿವು-ಆಚಾರ’ ಎಂಬ ಸುಗಂಧ ಕುಸುಮದ ಮಕರಂದದಿಂದ ‘ಅನುಭಾವ’ ಎಂಬ ಜೇನುತುಪ್ಪವನ್ನು ತಾವೂ ಅನುಭವಿಸಿ ನಮಗೂ ವಚನಗಳ ಮೂಲಕ ನೀಡಿದ್ದಾರೆ. ಅಂಥ ವಚನ ಜೇನಿನ ಕಲಶವೇ ‘ಶರಣಸಂಸ್ಕೃತಿ’ ಎಂಬ ಕೃತಿ. ಆ ಜೇನಿನ ಸವಿಯನ್ನು ಸವಿದವನೇ ಧನ್ಯ. ಜೇನಿಗೆ ಜಾತಿ ಎಂಬುದಿಲ್ಲ. ಅದಕ್ಕೂ ಜಾತಿ ಅಂಟಿಸುವವರಿಗೆ ಸಿಹಿಯ ಅನುಭವ ಆಗುವುದೇ ಇಲ್ಲ.

ನಾವು ಲಕ್ಷದೀಪ ಹಚ್ಚಿ ಹೊರಗೆಲ್ಲ ಬೆಳಕು ಮಾಡಬಹುದು. ಆದರೆ, ಅವು ನಮ್ಮೊಳಗೆ ಬೆಳಕು ಚಲ್ಲಲಾರವು. ಶರಣರ ಒಂದೊಂದು ವಚನ ಒಂದೊಂದು ಜ್ಯೋತಿಯಂತೆ ನಮ್ಮೊಳಗೆ ಬೆಳಕು ಮೂಡಿಸುತ್ತವೆ. ಅಂಥ ಅನೇಕ ವಚನಗಳಲ್ಲಿಯ ಅರಿವಿನ ಕಿರಣಗಳ ಒಟ್ಟು ಮೊತ್ತವೇ ‘ಶರಣಸಂಸ್ಕೃತಿ’ ಎಂಬ ಪುಸ್ತಕ. ಬೆಳಕಿಗೆ ಭೇದಭಾವವಿಲ್ಲ. ಅದಕ್ಕೂ ಭೇದ ತಗಲಿಸುವವರ ತಲೆಯಲ್ಲಿಯ ಕತ್ತಲೆಯನ್ನು ಅದು ಹೋಗಲಾಡಿಸದು. ಸಂಕುಚಿತತೆ ತೊರೆದು, ಭೇದ ಬಿಟ್ಟು, ತೆರೆದ ಮನಸ್ಸಿನಿಂದ ‘ಶರಣಸಂಸ್ಕೃತಿ’ ಯನ್ನು ಓದಿದಾಗ ಬೆಳಕಿನ ಅನುಭವವಾಗುತ್ತದೆ ಎಂಬ ಆತ್ಮ ವಿಶ್ವಾಸ ನನಗಿದೆ.

ಅರಳಿದ ಹೂಗಳೆಲ್ಲವೂ ಕಾಯಿಯಾಗಲಾರವು, ಕಾಯಿಗಳೆಲ್ಲವೂ ಹಣ್ಣಾಗವು. ಆದರೆ, ಕಾಯಿಯಾಗದೆ ಉದುರಿದ ಹೂವು, ಹಣ್ಣಾಗದೆ ಬಿದ್ದ ಕಾಯಿ ಮತ್ತು ಒಣಗಿದ ಎಲೆ ಅದೇ ಗಿಡಕ್ಕೆ ಗೊಬ್ಬರವಾಗಿ ಕಸುವನ್ನು ತುಂಬುತ್ತವೆ. ಮತ್ತೆ ಅನೇಕ ಹೊಸ ಹೂವು, ಕಾಯಿ, ಹಣ್ಣುಗಳಿಗೆ ಶಕ್ತಿಯನ್ನು ಒದಗಿಸುತ್ತವೆ. ಹಾಗೆಯೇ ನಾವು ಶರಣರಾಗದಿದ್ದರೂ ಸದಾಚಾರಿಗಳಾಗಿ ‘ಶರಣಸಂಸ್ಕೃತಿ’ ಎಂಬ ಮರಕ್ಕೆ ಗೊಬ್ಬರವಾಗಿ ಅದು ಇನ್ನಷ್ಟು ಹೆಮ್ಮರವಾಗಿ ಬೆಳೆಯಲು ಸಹಕಾರಿಯಾಗೋಣ.

ಕಾಯಕಸಂಸ್ಕೃತಿ

ಶರಣಸಂಸ್ಕೃತಿಯು ಬೇಡಿ ತಿನ್ನುವ ಸಂಸ್ಕೃತಿಯಲ್ಲ, ದುಡಿದು ತಿನ್ನುವ ಕಾಯಕ ಸಂಸ್ಕೃತಿಯಾಗಿದೆ. ಎಲ್ಲ ದುಡಿಮೆಗಳು, ಕೆಲಸಗಳು, ವೃತ್ತಿಗಳು ಕಾಯಕವಲ್ಲ. ಅವು ಸತ್ಯಶುದ್ಧವಾಗಿದ್ದರೆ ಮಾತ್ರ ಕಾಯಕವೆನಿಸುತ್ತವೆ. ಈ ಕುರಿತು ಶರಣೆ ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆಯವರ ಒಂದು ವಚನ ಹೀಗಿದೆ:

ಕೃತ್ಯ ಕಾಯಕವಿಲ್ಲದವರು ಭಕ್ತರಲ್ಲ;
ಸತ್ಯಶುದ್ಧವಿಲ್ಲದುದು ಕಾಯಕವಲ್ಲ;
ಆಸೆಯೆಂಬುದು ಭವದ ಬೀಜ;
ನಿರಾಸೆಯೆಂಬುದು ನಿತ್ಯಮುಕ್ತಿ.
ಉರಿಲಿಂಗಪೆದ್ದಿಗಳರಸನಲ್ಲಿ ಸದರವಲ್ಲ ಕಾಣವ್ವಾ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-277/ವಚನ ಸಂಖ್ಯೆ-733)

ಕಾಯಕದಲ್ಲಿ ಅತ್ಯಾಸೆಯಿದ್ದರೆ ಭವಕ್ಕೆ ಮೂಲವಾಗುತ್ತದೆ. ಏಕೆಂದರೆ ಅದಕ್ಕೆ ಮಿತಿಯೆಂಬುದಿಲ್ಲ. ಅದು ದುಃಖಕ್ಕೆ ಕಾರಣವಾಗುವುದು. ನಿರಾಸೆ, ನಿಸ್ವಾರ್ಥತೆಯಿಂದ ಕೂಡಿದ ಕಾಯಕ ಮುಕ್ತಿಗೆ ಸಾಧನ.

ಗುರು, ಲಿಂಗ, ಜಂಗಮರು ಸಹ ಕಾಯಕ ಮಾಡಬೇಕು. ಕಾಯಕದಿಂದಲೆ ಜೀವನ್ಮುಕ್ತಿ ಎಂದು ನುಲಿಯ ಚಂದಯ್ಯನವರು ಹೇಳುತ್ತಾರೆ:

ಗುರುವಾದಡೂ ಕಾಯಕದಿಂದವೆ ಜೀವನ್ಮುಕ್ತಿ.
ಲಿಂಗವಾದಡೂ ಕಾಯಕದಿಂದವೆ ವೇಷದ ಪಾಶ ಹರಿವುದು.
ಗುರುವಾದಡೂ ಚರಸೇವೆಯ ಮಾಡಬೇಕು.
ಲಿಂಗವಾದಡೂ ಚರಸೇವೆಯ ಮಾಡಬೇಕು.
ಜಂಗಮವಾದಡೂ ಚರಸೇವೆಯ ಮಾಡಬೇಕು.
ಚೆನ್ನಬಸವಣ್ಣಪ್ರಿಯ ಚಂದೇಶ್ವರಲಿಂಗದ ಅರಿವು.
(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-455/ವಚನ ಸಂಖ್ಯೆ-1304)

ಒಟ್ಟಿನಲ್ಲಿ ಪ್ರತಿಯೊಬ್ಬರೂ ಕಾಯಕದಲ್ಲಿ ನಿರತರಾಗಿರಬೇಕೆಂಬುದು ಶರಣರ ಸದಾಶಯ. ಅದರಂತೆ ಅವರು ಕೃಷಿ, ಕಮ್ಮಾರಿಕೆ, ಕುಂಬಾರಿಕೆ, ಕದಿರೆ ಕಾಯಕ, ಕಸಗೂಡಿಸುವುದು, ಕಟ್ಟಿಗೆ ಒಡೆಯುವುದು, ಕ್ಷೌರ ಮಾಡುವುದು, ಬಟ್ಟೆ ತೊಳೆಯುವುದು, ಚಮ್ಮಾರಿಕೆ, ನೇಕಾರಿಕೆ ಮುಂತಾದ ಕಾಯಕದಲ್ಲಿ ತೊಡಗಿದ್ದರು. ಜಗತ್ತಿನಲ್ಲಿ ಕಾಯಕಜೀವಿಗಳ ಸಂಘಟನೆ ಮಾಡಿದವರಲ್ಲಿ ಬಸವಣ್ಣನವರು ಮೊದಲಿಗರು.

ಯಾವುದೇ ಕಾಯಕವಿರಲಿ. ಆ ಕಾಯಕದಲ್ಲಿ ಹುಸಿ ಇಲ್ಲದಿರಬೇಕೆಂದು ಶರಣ ಮೆರಮಿಂಡದೇವರು ಹೇಳುವ ವಚನ:

ಅಸಿಯಾಗಲಿ ಕೃಷಿಯಾಗಲಿ,
ವಾಚಕ ವಾಣಿಜ್ಯ ಮಸಿಯಾಗಲಿ,
ಮಾಡುವಲ್ಲಿ ಹುಸಿಯಿಲ್ಲದಿರಬೇಕು.
ಅದು ಅಸಮಾಕ್ಷನ ಬರವು, ಪಶುಪತಿಯ ಇರವು,
ಐಘಟದೂರ ರಾಮೇಶ್ವರಲಿಂಗ ತಾನೆ.
(ಸಮಗ್ರ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-497/ವಚನ ಸಂಖ್ಯೆ-1294)


ಅಸಿ ಎಂದರೆ ಖಡ್ಗ. ಅಸಿಕಾಯಕವೆಂದರೆ ಸೇನಾಹುದ್ದೆ, ಕೃಷಿಯೆಂದರೆ ಒಕ್ಕಲುತನ. ವಾಚಕ ಎಂದರೆ ಜ್ಞಾನಪ್ರಸಾರಕ, ವಾಣಿಜ್ಯವೆಂದರೆ ವ್ಯಾಪಾರ, ಮಸಿಕಾಯಕವೆಂದರೆ ಕರಣಿಕ ಕಾಯಕ. ಹೀಗೆ ಪ್ರತಿಯೊಂದು ಕಾಯಕದಲ್ಲಿ ಹುಸಿಯಿಲ್ಲದಿರಬೇಕು. ಅಂದರೆ ಸತ್ಯ ಶುದ್ಧತೆ ಇರಬೇಕು. ಹುಸಿ ಇದ್ದರೆ ಅದು ಕಾಯಕವಲ್ಲ. ನ್ಯಾಯಾಧೀಶನು ತನ್ನ ವೃತ್ತಿಯಲ್ಲಿ ಹುಸಿ, ಮೋಸ ಬಳಸುತ್ತಿದ್ದರೆ ಅವನದು ಕಾಯಕವಲ್ಲ. ಅದೇ ನ್ಯಾಯಾಧೀಶನ ಕೈಕೆಳಗಿನ ಸೇವಕ ತನ್ನ ಕಾರ್ಯದಲ್ಲಿ ಸತ್ಯಶುದ್ಧ ಪ್ರಾಮಾಣಿಕನಾಗಿದ್ದರೆ ಪರಮಾತ್ಮನ ದೃಷ್ಟಿಯಲ್ಲಿ ಆತ ಕಾಯಕಯೋಗಿ. ಅಂಥ ಸತ್ಯಶುದ್ಧವಾದ ಕಾಯಕ ಶಿವನ ಬರವಿಗೆ ಮತ್ತು ಇರುವಿಕೆಗೆ ಮೂಲವಾಗುತ್ತದೆ. ಪಂಚಭೂತಗಳಿಂದಾದ ಈ ಘಟವೇ ಐಘಟದ ಊರು. ಈ ಕಾಯಕಯೋಗಿಯ ಘಟದಲ್ಲಿಯೇ ರಾಮೇಶ್ವರ ವಾಸಿಸುತ್ತಾನೆಂಬ ವಾಸ್ತವಿಕತೆಯನ್ನು ಶರಣ ಮೆರಮಿಂಡ ದೇವರು ತಿಳಿಸುತ್ತಾರೆ.

ಶಿವಯೋಗಿ ಭಿಕ್ಷೆ ಬೇಡುವಾಗಲೂ ಭಿಕ್ಷಾ ಧರ್ಮವನ್ನು ಅನುಸರಿಸಬೇಕು, ಭಿಕ್ಷೆ ಬೇಡುವಲ್ಲಿ ಜಾತಿಭೇದ ಮಾಡಬಾರದು. ಭಕ್ತರು ನೀಡುತ್ತಾರೆಂದು ಅಲ್ಲದುದನ್ನು ಬೇಡಬಾರದು ಎಂದು ತಿಳಿಸುವ ಸಕಲೇಶ ಮಾದರಸರ ವಚನ:

ಶಿವಯೋಗಿ ಭಿಕ್ಷವ ಕೊಂಬಲ್ಲಿ
ಜಾತಿಸೂತಕವಿಲ್ಲದಿರಬೇಕು.
ಆಚಾರ ಸಂಕಲ್ಪವಿಲ್ಲದಿರಬೇಕು.
ಶಿವಂಗೆ ಸಲ್ಲದ ದ್ರವ್ಯಕ್ಕೆ ಕೈಯಾನದಿರಬೇಕು.
ಇಂತೀ ಕ್ರಮವನರಿದು,
ಭಕ್ತಿ ಭಿಕ್ಷವ, ಲಿಂಗನೈವೇದ್ಯವ ಮಾಡಿಕೊಳ್ಳಬಲ್ಲ ಶರಣನ
ನೀನೆಂಬೆ [ನ] ಯ್ಯಾ, ಸಕಳೇಶ್ವರಾ.
(ಸಮಗ್ರ ವಚನ ಸಂಪುಟ: ಒಂಭತ್ತು-2021/ಪುಟ ಸಂಖ್ಯೆ-208/ವಚನ ಸಂಖ್ಯೆ-480)

ಕಾಯಕದಲ್ಲಿ ಮೇಲು-ಕೀಳು ಎಂಬುದಿಲ್ಲ. ಎಲ್ಲ ಕಾರ್ಯಗಳು ಸಮಾನ, ಎಲ್ಲ ಕಾರ್ಯಗಳೂ ಪವಿತ್ರ ಎಂಬ ಸಂದೇಶವನ್ನು ಶರಣೆ ಹಾದರ ಕಾಯಕದ ಮಾರಯ್ಯಗಳ ಪುಣ್ಯಸ್ತ್ರೀ ಗಂಗಮ್ಮನವರು ತಮ್ಮ ವಚನದ ಮೂಲಕ ನೀಡಿದ್ದಾರೆ:

ಆವ ಕಾಯಕವ ಮಾಡಿದಡೂ ಒಂದೆ ಕಾಯಕವಯ್ಯಾ,
ಆವ ವ್ರತವಾದಡೂ ಒಂದೆ ವ್ರತವಯ್ಯಾ.
ಆಯ ತಪ್ಪಿದಡೆ ಸಾವಿಲ್ಲ; ವ್ರತತಪ್ಪಿದಡೆ ಕೂಡಲಿಲ್ಲ.
ಕಾಕಪಿಕದಂತೆ ಕೂಡಲು ನಾಯಕನರಕ ಗಂಗೇಶ್ವರಲಿಂಗದಲ್ಲಿ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-500/ವಚನ ಸಂಖ್ಯೆ-1347)

ಕಾಯಕವನ್ನು ಗುರುಪೂಜೆಯೆಂದು, ಲಿಂಗಾರ್ಚನೆಯೆಂದು, ಜಂಗಮದಾಸೋಹವೆಂದು ಪವಿತ್ರಭಾವದಿಂದ ಮಾಡಬೇಕೆಂದು ಬಸವಣ್ಣನವರು ತಿಳಿಸುತ್ತಾರೆ:

ನಾನು ಆರಂಬವ ಮಾಡುವೆನಯ್ಯಾ, ಗುರುಪೂಜೆಗೆಂದು,
ನಾನು ಬೆವಹಾರವ ಮಾಡುವೆನಯ್ಯಾ, ಲಿಂಗಾರ್ಚನೆಗೆಂದು,
ನಾನು ಪರಸೇವೆಯ ಮಾಡುವೆನಯ್ಯಾ, ಜಂಗಮದಾಸೋಹಕ್ಕೆಂದು.
ನಾನಾವ ಕರ್ಮಂಗಳ ಮಾಡಿದಡೆಯು
ಆ ಕರ್ಮಫಲಭೋಗವ ನೀ ಕೊಡುವೆ ಎಂಬುದು ನಾ ಬಲ್ಲೆನು.
ನೀ ಕೊಟ್ಟ ದ್ರವ್ಯವ ನಿಮಗಲ್ಲದೆ ಮತ್ತೊಂದಕ್ಕೆ ಮಾಡೆನು,
ನಿಮ್ಮ ಸೊಮ್ಮಿಂಗೆ ಸಲಿಸುವೆನು.
ನಿಮ್ಮಾಣೆ ಕೂಡಲಸಂಗಮದೇವಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-193/ವಚನ ಸಂಖ್ಯೆ-709)

ಪ್ರತಿಯೊಂದು ಕಾಯಕವನ್ನು ಪವಿತ್ರಭಾವದಿಂದ ಮಾಡಬೇಕು. ಕೃಷಿ ಕಾಯಕವನ್ನು ಗುರುಪೂಜೆಯೆಂದು, ವ್ಯಾಪಾರವನ್ನು ಲಿಂಗಪೂಜೆಯೆಂದು, ಸಮಾಜ ಸೇವೆಯನ್ನು ಜಂಗಮ ದಾಸೋಹವೆಂದು ತ್ರಿವಿಧ ದಾಸೋಹಗಳ ಭಾವದಿಂದ ಮಾಡಬೇಕೆಂದು ಬಸವಣ್ಣನವರು ಕಾಯಕದ ಪಾವಿತ್ರ್ಯತೆಯನ್ನು ತಿಳಿಸುತ್ತಾರೆ. ಕಾಯಕಕ್ಕೆ ತಕ್ಕ ಪ್ರತಿಫಲವನ್ನು ಪರಮಾತ್ಮ ನೀಡುತ್ತಾನೆ. ಕಾಯಕದಿಂದ ಬಂದ ದ್ರವ್ಯವನ್ನು ಪರಮಾತ್ಮನಿಗೆ ಪ್ರಿಯವಾದ ದಾಸೋಹಕ್ಕಾಗಿ ಬಳಸುತ್ತೇನೆಂದು ಕಾಯಕ-ದಾಸೋಹ ಸಮನ್ವಯಸಂಸ್ಕೃತಿಗೆ ಸಾಕ್ಷಿಯಾಗಿದ್ದಾರೆ.

ಕಾಯಕದಲ್ಲಿ ಶ್ರದ್ಧೆ, ನಿಷ್ಠೆ ಇರಬೇಕು. ಕಾಯಕದಲ್ಲಿ ನಿರತನಾದಡೆ ಉಳಿದೆಲ್ಲವನ್ನೂ ಮರೆಯಬೇಕೆಂದು ಆಯ್ದಕ್ಕಿ ಮಾರಯ್ಯನವರು ಹೇಳುತ್ತಾರೆ:

ಕಾಯಕದಲ್ಲಿ ನಿರತನಾದಡೆ
ಗುರುದರುಶನವಾದಡೂ ಮರೆಯಬೇಕು.
ಲಿಂಗಪೂಜೆವಾದಡೂ ಮರೆಯಬೇಕು.
ಜಂಗಮ ಮುಂದೆ ನಿಂತಿದ್ದಡೂ ಹಂಗು ಹರಿಯಬೇಕು.
ಕಾಯಕವೇ ಕೈಲಾಸವಾದ ಕಾರಣ
ಅಮರೇಶ್ವರಲಿಂಗವಾಯಿತ್ತಾದಡೂ ಕಾಯಕದೊಳು.
(ಸಮಗ್ರ ವಚನ ಸಂಪುಟ: ಒಂಭತ್ತು-2021/ಪುಟ ಸಂಖ್ಯೆ-208/ವಚನ ಸಂಖ್ಯೆ-480)

ಕಾಯಕದಲ್ಲಿ ನಿರತರಾದರೆ ಸಂಪೂರ್ಣ ಲಕ್ಷ್ಯ ಕಾಯಕದಲ್ಲಿರಬೇಕು. ನಮ್ಮ ಎಲ್ಲಾ ಜ್ಞಾನ ಚಕ್ಷುಗಳು ಮತ್ತು ಮನಸ್ಸು ಕಾಯಕದಲ್ಲಿರಬೇಕು. ಯಾರೇ ಬಂದರೂ ಏಕಾಗ್ರತೆ ಕದಡಬಾರದು. ಶರಣರು ‘ಕಾಯಕವೇ ಕೈಲಾಸ’ವೆಂದು ಕಾಯಕದ ಪಾವಿತ್ರ್ಯತೆಯನ್ನು ತಿಳಿಸುತ್ತ ಕಾಯಕವನ್ನು ದೈವತ್ವಕ್ಕೇರಿಸಿದರು.

ಏಕಾಗ್ರಚಿತ್ತದಿಂದ ಕಾಯಕ ಮಾಡುವವರಿಗೆ ಆರ್ಥಿಕ ಕೊರತೆಯಾಗದು. ಚಿತ್ತಶುದ್ಧವಿಲ್ಲದವರಿಗೆ ಬಡತನ ತಪ್ಪಿದ್ದಲ್ಲ ಎಂದು ಕಾಯಕತತ್ಪರತೆಯ ಮಹತ್ವ ಕುರಿತು ಹೇಳುವ ಆಯ್ದಕ್ಕಿ ಲಕ್ಕಮ್ಮನವರ ವಚನ:

ಮನಶುದ್ಧವಿಲ್ಲದವಂಗೆ ದ್ರವ್ಯದ ಬಡತನವಲ್ಲದೆ
ಚಿತ್ತಶುದ್ಧದಲ್ಲಿ ಕಾಯಕವ ಮಾಡುವಲ್ಲಿ
ಸದ್ಭಕ್ತಂಗೆ ಎತ್ತ ನೋಡಿದಡತ್ತ ಲಕ್ಷ್ಮಿ ತಾನಾಗಿಪ್ಪಳು
ಮಾರಯ್ಯಪ್ರಿಯ ಅಮರೇಶ್ವರಲಿಂಗದ ಸೇವೆಯುಳ್ಳನಕ್ಕ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-273/ವಚನ ಸಂಖ್ಯೆ-723)

ಶ್ರದ್ಧೆಯಿಲ್ಲದ ಕಾಯಕ, ಸತ್ಪಾತ್ರಕ್ಕೆ ಸಲ್ಲದ ದಾಸೋಹ ವ್ಯರ್ಥಪ್ರಯಾಸ ಎಂಬ ಸತ್ಯವನ್ನು ಬಸವಣ್ಣವರು ತಿಳಿಸುತ್ತಾರೆ:

ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ,
ನೀಡಿ ನೀಡಿ ಕೆಟ್ಟರು ನಿಜವಿಲ್ಲದೆ,
ಮಾಡುವ ನೀಡುವ ನಿಜಗುಣವುಳ್ಳಡೆ
ಕೂಡಿಕೊಂಬ ನಮ್ಮ ಕೂಡಲಸಂಗಮದೇವ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-63/ವಚನ ಸಂಖ್ಯೆ-233)

ಮನಸ್ಸಿಲ್ಲದೆ ಮಾಡುವ ಕಾಯಕ ಅಪೂರ್ಣವಾದುದು. ಸತ್ಪಾತ್ರಕ್ಕೆ ಸಲ್ಲದ ದಾಸೋಹ ವ್ಯರ್ಥವಾದುದು. ಈ ನಿಜವನರಿತು ಮಾಡುವ ಕಾಯಕ-ದಾಸೋಹದಲ್ಲಿಯೇ ದೇವನಿದ್ದಾನೆಂದು ಬಸವಣ್ಣನವರು ಕಾಯಕ-ದಾಸೋಹಗಳನ್ನು ಅನುಭಾವದ ಎತ್ತರಕ್ಕೇರಿಸಿದ್ದಾರೆ.

ಶರಣರು ಅನುಭಾವಕ್ಕಿಂತ ಕಾಯಕಕ್ಕೆ ಹೆಚ್ಚು ಪ್ರಾಶಸ್ತ್ಯತೆ ಕೊಟ್ಟರು. ಮುಂಜಾನೆ ಕಾಯಕ, ಸಾಯಂಕಾಲ ಅನುಭವ ಮಂಟಪದಲ್ಲಿ ಅನುಭಾವ. ಒಂದು ದಿನ ಆಯ್ದಕ್ಕಿ ಮಾರಯ್ಯನವರು ಪ್ರಭುದೇವರ ಜೊತೆಗೆ ಅನುಭಾವದ ಮಾತುಗಳನ್ನು ಆಡುತ್ತ ನಿಂತಿರುವ ಸಮಯದಲ್ಲಿ, ಮಾರಯ್ಯನವರ ಧರ್ಮಪತ್ನಿ ಲಕ್ಕಮ್ಮನವರು ಅಲ್ಲಿಗೆ ಬಂದು, ಅಲ್ಲಮದೇವರಿಗೆ ನಮಸ್ಕರಿಸಿ, ಗಂಡನಿಗೆ ವಿನಂತಿಸಿಕೊಳ್ಳುತ್ತಾರೆ ‘ಎನ್ನೊಡೆಯಾ ಕಾಯಕಕ್ಕೆ ವೇಳೆಯಾಯಿತು. ಇನ್ನು ಹೊರಡು. ಮಹಾಶರಣರ ಅಂಗಳದಲ್ಲಿ ಕೈತಪ್ಪಿ ಬಿದ್ದಿರುವ ಅಕ್ಕಿಯ ಕಾಳನ್ನು ನಿರ್ಮಲ ಮನಸ್ಸಿನಿಂದ ಆಯ್ದುಕೊಂಡು ಬಾ. ನನಗೂ ಮನೆಯಲ್ಲಿ ಸಾಕಷ್ಟು ಕೆಲಸವಿದೆ. ಬೇಗ ಹೋಗಿ ಬಾ’ ಎಂದು ತಮ್ಮ ವಚನದ ಮೂಲಕ ‘ಕಾಯಕಪ್ರಜ್ಞೆ’ಯನ್ನು ತಿಳಿಸುತ್ತಾರೆ.

ಕಾಯಕ ನಿಂದಿತ್ತು ಹೋಗಯ್ಯಾ ಎನ್ನಾಳ್ದನೆ.
ಭಾವಶುದ್ಧವಾಗಿ ಮಹಾಶರಣರ
ತಿಪ್ಪೆಯ ತಪ್ಪಲ ಅಕ್ಕಿಯ ತಂದು
ನಿಶ್ಚೆೈಸಿ ಮಾಡಬೇಕು
ಮಾರಯ್ಯಪ್ರಿಯ ಅಮರೇಶ್ವರ ಲಿಂಗಕ್ಕೆ,
ಬೇಗ ಹೋಗು ಮಾರಯ್ಯ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-269/ವಚನ ಸಂಖ್ಯೆ-711)

ಶರಣರ ಕಾಯಕಪ್ರಜ್ಞೆ ಮತ್ತು ಭಾವಶುದ್ಧತೆಯಿಂದ ಕಾಯಕ ಮಾಡಬೇಕು ಎಂಬ ಸಂದೇಶ ಅಮೂಲ್ಯವಾದುದು. ಕಾಯಕ ಬಿಟ್ಟು ಹರಟೆ ಹೊಡೆಯುವವರಿಗೆ ಇದೊಂದು ಎಚ್ಚರಿಕೆಯ ಸಂದೇಶವಾಗಿದೆ.

ಕಾಯಕಕ್ಕೆ ತಕ್ಕ ಹಣ ಪಡೆಯಬೇಕು. ಕಡಿಮೆ ಕಾಯಕ ಮಾಡಿ ಹೆಚ್ಚಿಗೆ ಹಣ ಬೇಡಬಾರದು. ಕಾಯಕಕ್ಕಿಂತ ಕಡಿಮೆ ಹಣ ಬೇಡಿದರೆ ಮತ್ತಷ್ಟು ಒಳ್ಳೆಯದು ಎಂದು ಆಯ್ದಕ್ಕಿ ಮಾರಯ್ಯನವರು ಸಂದೇಶ ನೀಡುತ್ತಾರೆ.

ಹಾಗದ ಕಾಯಕವ ಮಾಡಿ,
ಹಣವಡ್ಡವ ತಾ ಎಂಬಲ್ಲಿ
ಸತ್ಯದ ಕಾಯಕ ಉಂಟೆ?
ಭಕ್ತರಲ್ಲಿ ಕಾಯಕಕ್ಕೆ ಕಡಿಮೆಯಾಗಿ ತಾ ಎಂಬುದು
ಅಮರೇಶ್ವರ ಲಿಂಗಕ್ಕೆ ಚಿತ್ತಶುದ್ಧದ ಕಾಯಕ.
(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-442/ವಚನ ಸಂಖ್ಯೆ-1190)

ಕಾಯಕಕ್ಕೆ ತಕ್ಕ ಪ್ರತಿಫಲ ಪಡೆಯಬೇಕು. ಹೆಚ್ಚಿಗೆ ನಿರೀಕ್ಷಿಸುವುದು, ಬೇಡುವುದು ಕಾಯಕ ತತ್ವಕ್ಕೆ ವಿರೋಧವಾದುದು ಎಂಬ ಮಾರಯ್ಯನವರ ಸಂತೃಪ್ತಿಯ ಸಂದೇಶ ಅಮೋಘವಾದುದು. ಇಂದು ಇದಕ್ಕೆ ವಿರುದ್ಧವಾದ ಸನ್ನಿವೇಶವಿದೆ. ಶ್ರಮವಿಲ್ಲದೆ ಹಣಗಳಿಸುವುದು, ಶ್ರಮಕ್ಕಿಂತ ಹೆಚ್ಚು ಹಣ ಪಡೆಯುವುದು ಜಾಣತನವೆಂದು ಭಾವಿಸಿದ್ದಾರೆ. ಅದು ಕಾಯಕವಲ್ಲ ಎಂಬುದರ ಅರಿವು ಅವರಿಗಿಲ್ಲ.

ಅತಿಯಾದ ಆಸೆ ಶರಣಸಂಸ್ಕೃತಿಗೆ ಸಲ್ಲದು ಎಂದು ಆಯ್ದಕ್ಕಿ ಲಕ್ಕಮ್ಮನವರು ಪತಿಯನ್ನು ಎಚ್ಚರಿಸುತ್ತಾರೆ:

ಆಸೆಯೆಂಬುದು ಅರಸಿಂಗಲ್ಲದೆ,
ಶಿವಭಕ್ತರಿಗುಂಟೆ ಅಯ್ಯಾ?
ರೋಷವೆಂಬುದು ಯಮದೂತರಿಗಲ್ಲದೆ
ಅಜಾತರಿಗುಂಟೆ ಅಯ್ಯಾ?
ಈಸಕ್ಕಿಯಾಸೆ ನಿಮಗೇಕೆ? ಈಶ್ವರನೊಪ್ಪ
ಮಾರಯ್ಯಪ್ರಿಯ ಅಮರೇಶ್ವರ ಲಿಂಗಕ್ಕೆ ದೂರ ಮಾರಯ್ಯ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-268/ವಚನ ಸಂಖ್ಯೆ-708)

ಒಮ್ಮೆ ಮಾರಯ್ಯನವರು ಪ್ರತಿದಿನಕ್ಕಿಂತ ಹೆಚ್ಚಿನ ಅಕ್ಕಿಯನ್ನು ಆಯ್ದು ತಂದಿದ್ದನ್ನು ಕಂಡು ಶರಣರಿಗೆ ದುರಾಸೆ ಒಳ್ಳೆಯದಲ್ಲ, ಅದನ್ನು ಪರಮಾತ್ಮನೂ ಒಪ್ಪಲಾರ, ಇಷ್ಟೊಂದು ಅಕ್ಕಿಯನ್ನು ಏಕೆ ತಂದಿರಿ? ಎಂದು ಲಕ್ಕಮ್ಮನವರು ಪ್ರಶ್ನಿಸಿದ್ದು ಶರಣರ ಪ್ರಾಮಾಣಿಕತೆಯ ಸಂಸ್ಕೃತಿಗೆ ಸಾಕ್ಷಿಯಾಗಿದೆ. ಈ ಪ್ರಜ್ಞೆ ಎಲ್ಲ ಸ್ತ್ರೀಯರಲ್ಲಿ ಬರಬೇಕು. ಪತಿ ಹೆಚ್ಚಿನ ಹಣವನ್ನು ತಂದರೆ ಇಷ್ಟೊಂದು ಹಣ ಎಲ್ಲಿಂದ ತಂದಿರಿ? ಏಕೆ ತಂದಿರಿ? ಎಂದು ಪ್ರಶ್ನಿಸಿದರೆ ಭ್ರಷ್ಟಾಚಾರ ಎಂಬ ಭೂತ ತಾನಾಗಿಯೇ ಓಡಿ ಹೋಗುತ್ತದೆ. ನೆರೆ ಮನೆಯವರ ಸಂಪತ್ತು, ಅನುಕೂಲತೆಗಳ ಜೊತೆಗೆ ಹೋಲಿಕೆ ಮಾಡಿಕೊಂಡು ನಾವೂ ಬೇಗ ಶ್ರೀಮಂತರಾಗಬೇಕು, ಐಶಾರಾಮಿ ಜೀವನ ನಡೆಸಬೇಕು ಎಂಬ ದುರಾಸೆಯಿಂದ ವಾಮಮಾರ್ಗಕ್ಕೆ ಇಳಿಯದಂತೆ ಪ್ರತಿಯೊಬ್ಬ ಸ್ತ್ರೀ ತನ್ನ ಪತಿಗೆ ಲಕ್ಕಮ್ಮನಂತೆ ಎಚ್ಚರಿಕೆ ನೀಡಿದರೆ ಶರಣರ ಸಂತೃಪ್ತ ಸಂಸ್ಕೃತಿ ಮತ್ತೊಮ್ಮೆ ಮರಳಿ ಬರುವುದರಲ್ಲಿ ಯಾವ ಸಂಶಯವಿಲ್ಲ.

ಪ್ರೊ. ಬಸವರಾಜ ಕಡ್ಡಿ,
ಆಡಳಿತಾಧಿಕಾರಿಗಳು,
ಬಸವಜ್ಯೋತಿ ಶಿಕ್ಷಣ ಸಮೂಹ ಸಂಸ್ಥೆಗಳು,

ಜಮಖಂಡಿ.
ಮೋಬೈಲ್‌ ಸಂ. 94497 13204

 ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
 ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in / admin@vachanamandara.in

Loading

Leave a Reply