ಶರಣ ಕಿನ್ನರಿ ಬ್ರಹ್ಮಯ್ಯನವರ ಬದುಕು ಬರಹ | ಶ್ರೀಮತಿ. ಸುನಿತಾ ಮೂರಶಿಳ್ಳಿ, ಧಾರವಾಡ.(ಶರಣ ಕಿನ್ನರಿ ಬ್ರಹ್ಮಯ್ಯನವರ ಸ್ಮರಣೋತ್ಸವದ ತನ್ನಿಮಿತ್ಯ ಈ ಲೇಖನ)

ಕಿನ್ನರಿ ಬ್ರಹ್ಮಯ್ಯನವರು 12 ನೇ ಶತಮಾನದ ಶರಣ ಸಮೂಹದಲ್ಲಿ ಗುರುತಿಸಿಕೊಂಡಂಥ ಶರಣರು. ಇವರ ಹುಟ್ಟೂರು ಈಗಿನ ತೆಲಂಗಾಣದ ಪೂಡೂರು ಅನ್ನುವಂಥ ಗ್ರಾಮ. ಇವರ ತಾಯಿ ಕಲಿದೇವಿ. ಇವರು ಅಕ್ಕಸಾಲಿಗ ವೃತ್ತಿಯನ್ನು ಕೈಗೊಂಡಿರುತ್ತಾರೆ. ಅದರ ಜೊತೆ ಜೊತೆಗೆ ದಾಸೋಹವನ್ನು ಕೂಡ ಮಾಡುತ್ತಿರುತ್ತಾರೆ. ಒಮ್ಮೆ ತೂಕದಲ್ಲಿ ಚಿನ್ನವನ್ನು ಕಡಿಮೆ ತೂಗಿ ಮೋಸ ಮಾಡಿದ್ದಾರೆ ಅನ್ನುವ ಆಪಾದನೆಗೊಳಗಾದರು. ಆಗ ಇದು ಆ ಶಿವನದೇ ಇಚ್ಛೆ ಆಗಿರಬೇಕು ಎಂದು ಅಕ್ಕಸಾಲಿಗ ಕಾಯಕವನ್ನು ಬಿಟ್ಟು ಕಿನ್ನರಿ ಬಾರಿಸುವ ಕಾಯಕವನ್ನು ಕೈಗೊಳ್ಳುವರು. ಬಸವಣ್ಣನವರ ಹಿರಿಮೆಯ ಬಗೆಗೆ ಸಾಕಷ್ಟು ಕೇಳಿ ಅವರನ್ನು ಕಾಣಲು ಕಲ್ಯಾಣಕ್ಕೆ ಬಂದು ತ್ರಿಪುರಾಂತಕೇಶ್ವರ ದೇವಾಲಯದಲ್ಲಿ ಕಿನ್ನರಿ ನುಡಿಸುತ್ತಾ, ಅನುಭವ ಮಂಟಪದಲ್ಲಿ ಭಾಗಿಯಾಗುತ್ತಾ ಅಲ್ಲಿಯೇ ನೆಲೆಸುವರು. ಇವರು ಬೀದರ ಜಿಲ್ಲೆಯ ಹುಮನಾಬಾದ ತಾಲೂಕಿನ ಹಳ್ಳಿಖೇಡ ಗ್ರಾಮದಲ್ಲಿಯೂ ಕೆಲವು ದಿನ ಇದ್ದು ಸಾಧನೆ ಮಾಡಿದ ಕುರುಹುಗಳಿವೆ. ಇವರ 18 ವಚನಗಳು ಲಭ್ಯವಾಗಿವೆ. ಇವರ ವಚನಾಂಕಿತ “ಮಹಾಲಿಂಗ ತ್ರಿಪುರಾಂತಕ ದೇವ”.

ಸಂಗೀತ ವಿದ್ಯೆಯದು ಸಂಗಡವೇ ಬಂದದ್ದು
ಲಿಂಗಿಗಳ ಹಿರಿಮೆ ಹಾಡುತಲಿ | ಕಲ್ಯಾಣ |
ಲಿಂಗ ಮಂಟಪವ ಕೂಡಿದನು

ಎಂದು ಜನಪದರು ಇದನ್ನ ದಾಖಲಿಸುವರು. ಅವರ ಬಗೆಗೆ ಪುರಾಣ ಕಾವ್ಯಗಳಲ್ಲಿ ಅನೇಕ ಕಥೆಗಳು ಬರುತ್ತವೆ. ಒಮ್ಮೆ ಹರಕೆಯ ಕುರಿ ಒಂದು ನೇಣಿನಿಂದ ತಪ್ಪಿಸಿಕೊಂಡು ತ್ರಿಪುರಾಂತಕೇಶ್ವರನ ಗುಡಿಯೊಳಗೆ ಹೊಕ್ಕು ಕಿನ್ನರಿ ಬೊಮ್ಮಯ್ಯನವರ ಎದುರಿಗೆ ಬಂದು ನಿಲ್ಲುತ್ತದೆ. ಅದು ತನ್ನ ಆಶ್ರಯಕ್ಕೆ ಬಂದಿದೆ ಎಂದು ಅವರು ಪ್ರೀತಿಯಿಂದ ಅದರ ಮೈದಡುವರು. ನಂತರ ಆ ಕುರಿಯ ಒಡೆಯ ಅದನ್ನು ಎಳೆದೊಯ್ಯಲು ಪ್ರಯತ್ನಿಸಿದಾಗ ಅದರ ಬೆಲೆಯನ್ನು ಕೊಡುವೆ ಬಿಟ್ಟುಬಿಡು ಎನ್ನುವರು. ಈ ಘಟನೆಯನ್ನು ಬಸವ ಪುರಾಣದಲ್ಲಿ “ತಿರುಕ ಜಂಗಮ ನೀನು ಮುರುಕ ಕಿನ್ನರಿ ನಿನಗೆ ಕುರಿ ಬಿಟ್ಟು ನಿಲ್ಲು ಬೊಮ್ಮಯ್ಯ ಎನ್ನುವುದಕೆ ಕರವೆತ್ತಿ ಹಿಡಿದ ಕಿನ್ನರಿಯ” ಅಂತಾ ಬಿಂಬಿಸುವರು.

ಕಿನ್ನರಿಯ ಬಾರಿಸಲು ಚೆನ್ನಿಗರು ಕೇಳಿದರು
ಚಿನ್ನ ಸುರುವಿದರ ಗುಡಿ ಮುಂದೆ | ಭೋಜಗನಿಗೆ |
ಹೊನ್ನ ಸಾಸಿರವ ಎಣಿಸಿದರು

ಎಂದು. ಬಸವ ಪುರಾಣದಲ್ಲಿ ಭೀಮಕವಿ (ಮೂಲ ತೆಲುಗಿನ ಪಾಲ್ಕುರಿಕೆ ಸೋಮನಾಥನ ರಚನೆ) ತುಂಬ ಹೃದಯಸ್ಪರ್ಶಿ ಆಗಿ ಇದನ್ನು ಹೇಳುವರು. ಹೀಗೆ ಹೊನ್ನು ತೆಗೆದುಕೊಂಡು ಕುರಿಯನ್ನೂ ಎಳೆದೊಯ್ಯಲು ಪ್ರಯತ್ನಿಸಿದಾಗ ಬ್ರಹ್ಮಯ್ಯನವರಿಗೆ ಸಿಟ್ಟು ಬಂದು ಆತನನ್ನು ಕೊಂದುಬಿಡುವರು. ಇದು ಬಿಜ್ಜಳನವರೆಗೆ ವಿಚಾರಣೆಗೆ ಹೋಗುತ್ತದೆ. ಕೊನೆಗೆ ಸಾಕ್ಷಿ ಯಾರು? ಎಂದು ಬಿಜ್ಜಳ ಕೇಳಲು “ತ್ರಿಪುರಾಂತಕನೇ ಇದಕ್ಕೆ ಸಾಕ್ಷಿ” ಎಂದು ಬ್ರಹ್ಮಯ್ಯ ನುಡಿವರು. ಕೊನೆಗೆ ತ್ರಿಪುರಾಂತಕ ಲಿಂಗವೆ ನುಡಿದು ಸಾಕ್ಷಿಯನ್ನು ಹೇಳುವುದು ಅಲ್ಲದೆ ಆ ಕುರಿಯ ಒಡೆಯನಾದಾತನೂ ಮತ್ತೆ ಮರುಜೀವ ಪಡೆವನು ಎಂಬ ಕಥೆ ಇಲ್ಲಿ ಬರುವುದು. ಕಥೆಯ ಔಚಿತ್ಯತೆ ಏನೇ ಇರಲಿ ಇದರ ಹಿಂದಿರುವ ಶರಣ ಕಿನ್ನರಿ ಬ್ರಹ್ಮಯ್ಯನವರ ಜೀವ ಕಾರುಣ್ಯ ಇಲ್ಲಿ ಮುಖ್ಯವಾಗುತ್ತದೆ.

ಹಣವಂತ ಬೊಮ್ಮಯ್ಯ ಗುಣವಂತ ಶರಣಯ್ಯ
ರಣವಂತ ವೀರ ಶಿವಮತಕೆ | ನಾಡೊಳಗೆ |
ತನುವಂತನಾದ ಪಶುಗಳಿಗೆ

ಎಂದು ಹಂತಿ ಪದಗಳಲ್ಲಿ ಜನಪದರು ನೆನೆಯುತ್ತಾರೆ.

ಒಮ್ಮೆ ಮಹಾ ಮನೆಯಲ್ಲಿ ಒಂದು ಭೋಜ್ಯವನ್ನು ಶರಣ ಕಿನ್ನರಿ ಬ್ರಹ್ಮಯ್ಯನವರು ತಂದಿರಿಸುವರು. ಈರುಳ್ಳಿಯ ವಾಸನೆ ಹಿಡಿದ ಬಸವಣ್ಣನವರು ಯಾರು ತಂದವರು ಇದನ್ನು ಎಂದು ಅಸಡ್ಡೆ ತೋರಲು ಶರಣ ಕಿನ್ನರಿ ಬ್ರಹ್ಮಯ್ಯನವರು ಮನನೊಂದು ಮರಳಿ ಹೋಗುವರು. ಇದನ್ನು ತಿಳಿದ ಬಸವಣ್ಣನವರು ಊರೆಲ್ಲಾ ಈರುಳ್ಳಿ ಮೆರವಣಿಗೆ ಮಾಡಿ ಅವರ ಮನವೊಲಿಸಿ ಮತ್ತೆ ಮಹಾಮನೆಗೆ ಕರೆತರುತ್ತಾರೆ. ಅನನ್ಯ ಭಕ್ತಿ ಹಾಗೂ ಪ್ರೀತಿ ಸಂಬಂಧ ಇಲ್ಲಿ ವ್ಯಕ್ತವಾಗುವದು.

ವೈರಾಗ್ಯನಿಧಿ ಅಕ್ಕಮಹಾದೇವಿಯವರು ಕಲ್ಯಾಣವನ್ನು ಪ್ರವೇಶಿಸುವಾಗ ಪ್ರಭುದೇವರ ಅಣತಿಯಂತೆ ಶರಣ ಕಿನ್ನರಿ ಬ್ರಹ್ಮಯ್ಯನವರು ಅಕ್ಕನವರನ್ನು ಹೆಬ್ಬಾಗಿಲಿನಲ್ಲೆ ತಡೆದು ಪರೀಕ್ಷೆಗೆ ಈಡು ಮಾಡುವರು.

ಕಾಯದಲ್ಲಿ ಕಳವಳವಿರಲು,
ಪ್ರಾಣದಲ್ಲಿ ಮಾಯೆಯಿರಲು,
ಏತರ ಗಮನ ಏತರ ನಿರ್ವಾಣ.
ಮಹಾಲಿಂಗ ತ್ರಿಪುರಾಂತಕ
ನಿನ್ನ ಸಂಹಾರಿ ಎಂಬನಲ್ಲದೆ
ಸಜ್ಜನೆಯೆಂದು ಕೈವಿಡಿವನಲ್ಲ.
(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-27/ವಚನ ಸಂಖ್ಯೆ-55)

ಎಂದು ನಿಷ್ಠೂರತೆಯಿಂದ ನುಡಿವರು. ಕೊನೆಗೆ ಅವಳ ಮೇರು ವೈರಾಗ್ಯಕ್ಕೆ ತಲೆಬಾಗಿ ವಚಿಸುವರು.

ವಿಷಯಂಗಳು ನಿರ್ವಿಷಯವಾದವಿಂದು,
ಕರ್ಣಂಗಳು ತರಹರಿಸಿದವಿಂದು,
ಎನ್ನ ಆಳುಪೆಂಬ ಅರೆವಾವು ಮಡಿಯಿತ್ತಿಂದು
ಎನ್ನ ಹೃದಯದ ಕಲ್ಮಶ ತೊಡೆಯಿತ್ತಿಂದು
ಮಹಾಲಿಂಗ ತ್ರಿಪುರಾಂತಕ,
ಮಹಾದೇವಿಯಕ್ಕಗಳ ಧರ್ಮದಿಂದ
ಹಿಂದಣ ಹುಟ್ಟು ಮುರಿಯಿತ್ತಿಂದು.
(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-32/ವಚನ ಸಂಖ್ಯೆ-64)

ಶರಣು ಶರಣಾರ್ಥಿ ಎಲೆ ನಮ್ಮವ್ವ,
ಶರಣು ಶರಣಾರ್ಥಿ ಶರಣಾರ್ಥಿ
ಕರುಣ ಸಾಗರ ನಿಧಿಯೆ,
ದಯಾಮೂರ್ತಿ ತಾಯೆ, ಶರಣಾರ್ಥಿ!
ಮಹಾಲಿಂಗ ತ್ರಿಪುರಾಂತಕನೊಡ್ಡಿದ ತೊಡಕು,
ನೀವು ಬಿಡಿಸಿದರಾಗಿ ನಿಮ್ಮ ದಯದಿಂದ
ನಾನು ಹುಲಿನೆಕ್ಕಿ ಬದುಕಿದೆನು
ಶರಣಾರ್ಥಿ ಶರಣಾರ್ಥಿ ತಾಯೆ.
(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-63/ವಚನ ಸಂಖ್ಯೆ-65)

ಎಂದು ಧನ್ಯತೆಯಿಂದ ನುಡಿವರು. ಗುಪ್ತವಾಗಿ ಇದ್ದ ಮರುಳಶಂಕರದೇವರ ಗುಪ್ತ ಭಕ್ತಿಯನ್ನು ಕಂಡು ಹೀಗೆ ಹೇಳುವರು:

ಆಕಾರವೆಂಬೆನೆ ನಿರಾಕಾರವಾಗಿದೆ
ನಿರಾಕಾರವೆಂಬೆನೆ ಅತ್ತತ್ತ ತೋರುತ್ತದೆ
ತನ್ನನಳಿದು ನಿಜವುಳಿದ
ಮಹಾಲಿಂಗ ತ್ರಿಪುರಾಂತಕನ ನಿಲವ ಕಂಡು ಒಳಕೊಂಡ
ಮರುಳ ಶಂಕರದೇವರ ಮೂರ್ತಿಯ ನಿಮ್ಮಿಂದ ಕಂಡು
ಬದುಕಿದೆನು ಕಾಣಾ ಸಂಗನಬಸವಣ್ಣಾ.
(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-26/ವಚನ ಸಂಖ್ಯೆ-50)

ಎಂದು ಕೊಂಡಾಡುವರು.

ಇನ್ನು ಶರಣ ಕಿನ್ನರಿ ಬ್ರಹ್ಮಯ್ಯನವರ ಕಥೆ, ಪುರಾಣ, ಸಂಪಾದನೆಗಳ ಹೊರತಾಗಿ ಅವರ ವಚನಗಳ ಮೂಲಕ ಅವರ ಒಳಲೋಕವನ್ನು ಅವಲೋಕಿಸುವ ಒಂದು ಪುಟ್ಟ ಪ್ರಯತ್ನ ನನ್ನ ಅರಿವಿನ ಮಿತಿಯಲ್ಲಿ ಮಾಡಬಯಸುವೆ.

ಆವ ಮಡಕೆಯಾಗಲಿ ಸ್ವಾದ
ಸಾಕಾರದಲ್ಲಿ ಭೇದವಿಲ್ಲ.
ಮಣ್ಣ ಮಡಕೆ ಒಕ್ಕಲಿಗನಲ್ಲಿ,
ಚಿನ್ನದ ಮಡಕೆ ಅರಮನೆಯಲ್ಲಿ,
ಅರಮನೆ ಗುರುಮನೆ ಹಿರಿದಾದ ಕಾರಣ-
ಹಾದರ ಸಲ್ಲದು ಕಾಣಾ, ತ್ರಿಪುರಾಂತಕ ಲಿಂಗವೇ!
(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-26/ವಚನ ಸಂಖ್ಯೆ-51)

ಮಣ್ಣಿನ ಪಾತ್ರೆ ಇರಲಿ, ಚಿನ್ನದ ಪಾತ್ರೆ ಇರಲಿ ಅದರಲ್ಲಿ ಇರುವಂತಹ ವಸ್ತುವಿನ ಆಕಾರ ರುಚಿಯಲ್ಲಿ ಬದಲಾಗುವುದೇ ಎಂದು ಕೇಳುವರು. ಮಣ್ಣಿನ ಮಡಿಕೆ, ಬಡತನವನ್ನು ಬಿಂಬಿಸಿದರೆ ಚಿನ್ನದ ಮಡಕೆ ಸಿರಿವಂತಿಕೆಯನ್ನು ಬಿಂಬಿಸುವುದು. ಎಲ್ಲ ವಿಭಿನ್ನ ಧಾತುಗಳಿಂದ ಕೂಡಿದ ಪಾತ್ರೆಗಳಾದರೂ ಪಾತ್ರೆಗಳಲ್ಲಿರುವ ಪ್ರಸಾದ ಒಂದೇ ಆಗಿರುವುದು. ಅದರಲ್ಲಿ ಭೇದವನ್ನು ಮಾಡಿದ್ದೇ ಆದರೆ ಅದಕ್ಕಿಂತ ಮಿಗಿಲಾದ ಹಾದರ ಇಲ್ಲ ಎಂದು ಅತ್ಯಂತ ನಿಷ್ಟುರವಾಗಿ ವಾಸ್ತವದ ವಿಷಯವನ್ನು ಹೇಳುತ್ತಾ ಸಮತ್ವದ ಬದುಕಿಗೆ ದಿಕ್ಸೂಚಿಯಾಗಿ ನಿಲ್ಲುವರು ಶರಣ ಕಿನ್ನರಿ ಬ್ರಹ್ಮಯ್ಯನವರು.

ಹೀಗೆ ಅವರ ಅನೇಕ ವಚನಗಳಲ್ಲಿ ಎತ್ತರದ ಅನುಭಾವ, ಸಮಾನತೆ, ಅರಿವು ಜ್ಞಾನ, ಬಸವಾದಿ ಶರಣರ ಸ್ತುತಿ ಎಲ್ಲವೂ ಗೋಚರ ಆಗುವವು. ಬಸವಣ್ಣನವರು, ವೈರಾಗ್ಯನಿಧಿ ಆಕ್ಕಮಹಾದೇವಿಯವರು‌, ಶರಣ ಆದಯ್ಯನವರು ಇನ್ನೂ ಅನೇಕ ಶರಣರು ಅವರನ್ನು ಸ್ಮರಿಸಿದ್ದಾರೆ.

ಕಲ್ಯಾಣ ಕ್ರಾಂತಿಯ ಕೊನೆಯ ದಿನಗಳಲ್ಲಿ ವಚನ ಸಾಹಿತ್ಯದ ರಕ್ಷಣೆಗಾಗಿ ಶರಣರು ಬೇರೆ ಬೇರೆ ದಿಕ್ಕುಗಳಲ್ಲಿ ತೆರಳಿದರು. ಹಾಗೆಯೇ ಚನ್ನಬಸವಣ್ಣನವರ ನೇತೃತ್ವದಲ್ಲಿ ಉಳವಿಯೆಡೆಗೆ ನಡೆದ ಕಿನ್ನರಿ ಬ್ರಹ್ಮಯ್ಯನವರು ಅನೇಕ ಕಡೆ ಹೋರಾಟದಲ್ಲಿ ಭಾಗಿಯಾದರು. ಕೊನೆಗೆ ಉಳವಿಯ ಮಹಾಮನೆಯ ಬಳಿ ವೈರಿಗಳಿಗೆ ನಿಲುಕಬಾರದೆಂದು ಹೊಳೆಯ ದಿಕ್ಕನ್ನೇ ಬದಲಿಸುವರು. ಈಗಲೂ ಅದು ಬ್ರಹ್ಮಯ್ಯನ ಹೊಳೆ ಎಂದೇ ಪ್ರಸಿದ್ಧವಾಗಿದೆ. ಹೀಗೆ ತಮ್ಮ ಜೀವದ ಹಂಗು ತೊರೆದು ಹೋರಾಡಿ, ತಾವು ಹೊತ್ತ ಮಣಿಹವನ್ನು ಪೂರೈಸಿ ತಾನೆಂಬುದ ಅಳಿದು ಉಳುವಿಯಲ್ಲಿಯೇ ಐಕ್ಯವಾಗುವರು.

ಶ್ರೀಮತಿ. ಸುನಿತಾ ಮೂರಶಿಳ್ಳಿ,
“ಶಿವಶಕ್ತಿ” ಮಂಜುನಾಥಪುರ,
ಮಾಳಮಡ್ಡಿ,
ಧಾರವಾಡ – 580 007.
ಮೋಬೈಲ್‌ ನಂ. 99864 37474

ಆಧಾರ:
ವಚನ ಸಂಪುಟ.
ಸಿದ್ಧಯ್ಯ ಪುರಾಣಿಕರ ಶರಣ ಚರಿತಾಮೃತ.
ಡಾ. ವೀರಣ್ಣ ದಂಡೆ ಹಾಗೂ ಡಾ. ಜಯಶ್ರೀ ದಂಡೆ ಅವರ ಶರಣ ಸ್ಮಾರಕಗಳು ಸಂಪುಟ-೧

 ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
 ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in / admin@vachanamandara.in

Loading

Leave a Reply