ಶರಣ ಸಂಸ್ಕೃತಿಯ ಆರ್ಥಿಕ ಮೌಲ್ಯಗಳು / ಡಾ. ವಿಜಯಕುಮಾರ ಕಮ್ಮಾರ, ತುಮಕೂರು.

ಆನೆ ಕುದುರೆ ಭಂಡಾರವಿರ್ದಡೇನೊ?
ತಾನುಂಬುದು ಪಡಿಯಕ್ಕಿ, ಒಂದಾವಿನ ಹಾಲು, ಮಲಗುವುದರ್ಧ ಮಂಚ.
ಈ ಹುರುಳಿಲ್ಲದ ಸಿರಿಯ ನೆಚ್ಚಿ ಕೆಡಬೇಡ ಮನುಜಾ.
ಒಡಲು ಭೂಮಿಯ ಸಂಗ, ಒಡವೆ ತಾನೇನಪ್ಪುದೊ?
ಕೈವಿಡಿದ ಮಡದಿ ಪರರ ಸಂಗ, ಪ್ರಾಣ ವಾಯುವಿನ ಸಂಗ.
ಸಾವಿಂಗೆ ಸಂಗಡವಾರೂ ಇಲ್ಲ ಕಾಣಾ, ನಿಃಕಳಂಕ ಮಲ್ಲಿಕಾರ್ಜುನಾ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1523 / ವಚನ ಸಂಖ್ಯೆ-1504)

ವಚನ ಸಾಹಿತ್ಯದ ಅಧ್ಯಯನ ಇಂದಿನ ಪೀಳಿಗೆಯ ಬಹಳಷ್ಟು ವಿದ್ವಾಂಸರುಗಳನ್ನು, ವಿದ್ಯಾರ್ಥಿಗಳನ್ನು ಹಾಗೂ ಲೇಖಕರನ್ನು ಆಕರ್ಷಿಸಿದ್ದು ಒಂದು ಉತ್ತಮ ಬೆಳವಣಿಗೆ. ಬಾಲ್ಯದಿಂದಲೂ ಅಂದರೆ ಸುಮಾರು ನಾನು 12 ವರ್ಷದವನಾಗಿದ್ದಾಗಿನಿಂದ ವಚನ ಸಾಹಿತ್ಯದ ಕಡೆಗಿನ ಒಲವು ಮೂಡಿಸಿದ್ದು ಅಥವಾ ಗೀಳನ್ನು ಹಚ್ಚಿದ್ದು ನಮ್ಮ ತಂದೆ ಲಿಂ. ಶ್ರೀ ಈಶ್ವರ ಕಮ್ಮಾರ ಅವರು. ಇವತ್ತು ಅವರ ಪಾದ ಕಮಲಗಳನ್ನು ಮನಮಂದಿರದಲ್ಲಿ ಪ್ರತಿಷ್ಠಾಪಿಸುತ್ತಾ ಇಂದಿನ ವಿಷಯದ ಕಡೆಗೆ ಗಮನ ಹರಿಸೋಣ.

ಪ್ರಪಂಚದ ಇಂದಿನ ಆರ್ಥಿಕತೆಯನ್ನು ಗಮನಿಸಿದರೆ, ಆಧುನಿಕ ಪ್ರಪಂಚದ ಎಲ್ಲ ದೇಶಗಳೂ ಮಾಡತಾ ಇರೋ ಆಧುನಿಕ ಆರ್ಥಿಕ ಅಭಿವೃದ್ಧಿಯ ಕಾರ್ಯತಂತ್ರಗಳು ಮತ್ತು ಪರಿವರ್ತನೆಯ ಸೂತ್ರಗಳು, ನಿರ್ಧಾರಗಳು, ಆಧುನಿಕ ಯೋಚನೆಗಳು, ಅನುಷ್ಠಾನಗೊಳಿಸುತ್ತಿರುವ ಮಾರುಕಟ್ಟೆ ವ್ಯವಸ್ಥೆಗಳು ಮೇಲ್ನೋಟಕ್ಕೆ ಎಲ್ಲವೂ ಸರಿ ಮತ್ತೆ ಮತ್ತೆ ಎಲ್ಲವೂ ಸರಿ ಎನ್ನುವಂತಿದೆ.

ಈ ಯೋಜನೆಗಳ ದೋಷಪೂರಿತ ಅನುಷ್ಠಾನ (Faulty Approach) ದಿಂದ ಉಂಟಾಗುವ ಅಡ್ಡ ಪರಿಣಾಮಗಳಿಂದ ಭ್ರಷ್ಠಾಚಾರ ಮತ್ತು ಕಪ್ಪುಹಣದ ಸಂಗ್ರಹದಿಂದ ಬಡವ ಶ್ರೀಮಂತರ ನಡುವೆ ನಿರ್ಮಾಣವಾಗುತ್ತಿರುವ ಕಂದಕ ಮತ್ತು ಶೀತಲ ಸಮರ ಅನಾಹುತಗಳಿಗೆ ಕಾರಣವಾಗಿದೆ. ಜಾಗತೀಕರಣ ಮತ್ತು ಆರ್ಥಿಕ ಉದಾರೀಕರಣ (Globalization & Liberalization) ದ ಪ್ರಭಾವದಿಂದ ಭಾರತದ ಪರಂಪರೆ, ಸಂಸ್ಕೃತಿ ಮತ್ತು ಕೌಟುಂಬಿಕ ವ್ಯವಸ್ಥೆಯ ಮೇಲೆ ಆಗಿರುವುದನ್ನು ನಾವು ಕಾಣಬಹುದು. ಇಂಥ ಶೀತಲ ಸಮರವನ್ನು ತಮ್ಮ ಒಂದು ವಚನದಲ್ಲಿ ಬಸವಣ್ಣನವರು 12 ನೇ ಶತಮಾನದಲ್ಲಿಯೇ ಎಚ್ಚರಿದ್ದಾರೆ.

ಊರ ಸೀರೆಗೆ ಅಸಗ ಬಡಿ ಹಡೆದಂತೆ
ಹೊನ್ನೆನ್ನದು ಮಣ್ಣೆನ್ನದು ಎಂದು ಮರುಳಾದೆ
ನಿಮ್ಮನರಿಯದ ಕಾರಣ
ಕೆಮ್ಮನೆ ಕೆಟ್ಟೆ ಕೂಡಲಸಂಗಮದೇವಾ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-34 / ವಚನ ಸಂಖ್ಯೆ-310)

ಇನ್ಯಾರದೋ ಸೀರೆಯನ್ನು ತನ್ನದೇ ಸೀರೆಯೆಂದು ಭಾವಿಸುವ ಅಗಸನನ್ನು ಆಧುನಿಕ ಆರ್ಥಿಕತೆಗೆ ಹೋಲಿಸಬಹುದು. ಆಧುನಿಕ ಅರ್ಥ ವ್ಯವಸ್ಥೆಯೇ ಹೊರಗಿನವರು ಹೂಡಿದ ಬಂಡವಾಳದಿಂದ ನಡೆಯುವ ಪ್ರಕ್ರಿಯೆ. ಶೇರು ಮಾರುಕಟ್ಟೆ (Stock Market), ಪಾಶ್ಚಿಮಾತ್ಯ ಬಂಡವಾಳಶಾಹಿ ಅರ್ಥ ವ್ಯವಸ್ಥೆ (Anglo Saxon Capitalism) ಅಥವಾ ಮುಕ್ತ ಮಾರುಕಟ್ಟೆ ಮಾದರಿ (Free Market Theory) ಇದಕ್ಕೆ ಉತ್ತಮ ಉದಾಹರಣೆಗಳು.

ಹೊನ್ನು ಮಣ್ಣು ಎಲ್ಲವೂ ನನ್ನದೇ ಮತ್ತು “ನಿಮ್ಮನರಿಯದ ಕಾರಣ” ಅಂದರೆ ಪರಂಪರೆ, ಸಂಸ್ಕೃತಿ, ಸಾಮಾನ್ಯ ಜನಜೀವನದ ಮೇಲೆ ಆಗುತ್ತಿರುವ ಅಡ್ಡ ಪರಿಣಾಮಗಳನ್ನೂ ಲೆಕ್ಕಿಸದೇ ಹೊಣ್ಣು ಮಣ್ಣಿಗಾಗಿ ಮರುಳಾಗಿ ವ್ಯರ್ಥವಾಗಿ ಹಾಳಾಗಿ ಹೋಗುವಂತಾಯಿತು. Stock Market ಏರಿಳಿತವನ್ನು ಕಂಡಾಗ ಆಗುವ ಆರ್ಥಿಕ ಅನಾಹುತಗಳನ್ನು 2008 ರಲ್ಲಿ ಅಮೇರಿಕದಲ್ಲಿ ಉಂಟಾದ “ಆರ್ಥಿಕ ಹಿಂಜರಿತ” (Economic Recession) ದಿಂದ ಇಡೀ ಪ್ರಪಂಚದ ಆರ್ಥಿಕ ವ್ಯವಸ್ಥೆಯೇ ಅಲ್ಲೋಲ ಕಲ್ಲೋಲವಾಗಿದ್ದನ್ನು ನಾವೀಗಾಗಲೇ ಕಂಡಿದ್ದೇವೆ. ಇಂದಿನ ಆರ್ಥಿಕ ನೀತಿಗಳಿಂದ ಅಸಮಾನತೆಯನ್ನು ಬಿತ್ತುವ ಮತ್ತು ಆಗುವ ಅನಾಹುತಗಳನ್ನು ಎಷ್ಟು ಸರಳವಾಗಿ ಅರ್ಥ ಮಾಡಿಕೊಳ್ಳಬಹುದು ಬಸವಣ್ಣನವರ ಈ ವಚನದ ಮೂಲಕ.

ಹಾಗಾಗಿ ಬಸವಣ್ಣನವರ ಅತಿ ದೊಡ್ಡ ಕನಸು ಅಂದರೆ ದುಡಿಯುವ ಕೈಗಳಿಗೆ ನಿರಂತರ ಕೆಲಸ ಮತ್ತು ಹಸಿವು ಮುಕ್ತ ಸಮಾಜ. ಇದಕ್ಕಾಗಿ ಬಸವಣ್ಣನವರು ಆಯ್ದುಕೊಂಡಿದ್ದು ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯ Model ಆದ ಆಯಗಾರರ ಪರಿಕಲ್ಪನೆ. ಆಯಗಾರರು ಅಂದ್ರೆ ಕಮ್ಮಾರರು, ಕುಂಬಾರರು, ಹೂಗಾರರು, ಅಕ್ಕಸಾಲಿಗರು, ಗಾಣಿಗೇರರು ಮುಂತಾದ ವೃತ್ತಿಯವರು. ಒಟ್ಟು 99 ಕ್ಕೂ ಹೆಚ್ಚು ಆಯಗಾರರನ್ನು ಒಟ್ಟುಗೂಡಿಸಿ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಕ್ರಾಂತಿಯನ್ನು ಬಸವಣ್ಣನವರು 12 ನೇ ಶತಮಾನದಲ್ಲಿ ಮಾಡತಾರೆ. ಶ್ರೇಣೀಕೃತ ಸಮಾಜದಲ್ಲಿ ಅತ್ಯಂತ ನಿಕೃಷ್ಟವಾಗಿ ಕಂಡಂಥ ಜನರಿಗೆ ಅಡ್ರೆಸ್ಸೇ ಇರಲಿಲ್ಲ. ಅವರ ವೃತ್ತಿಗೇನೆ ದೈವತ್ವವನ್ನು ಕೊಟ್ಟು ಅದನ್ನೇ Sir Name ಅಥವಾ Address ಮಾಡಿದಂಥ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ.

Communist ಸಿದ್ಧಾಂತವನ್ನು ಮುಂಚೂಣಿಗೆ ತಂದ ಕಾರ್ಲ ಮಾರ್ಕ್ಸ ಕಾಯಕಕ್ಕೆ ಗೌರವ ತಂದು ಕೊಟ್ಟರೆ ಬಸವಣ್ಣನವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕಾಯಕವನ್ನು ದೈವತ್ವಕ್ಕೆ ಹೋಲಿಸುತ್ತಾರೆ.

ಜರ್ಮನಿಯ ತತ್ವಜ್ಞಾನಿ ಮತ್ತು ಕಮ್ಯುನಿಸ್ಟ್‌ ಸಿದ್ಧಾಂತದ ಪ್ರತಿಪಾದಕರಾದ ಫ್ರೆಡರಿಕ್‌ ಏಂಜಲ್ಸ್‌ ಮತ್ತು ಕಾರ್ಲ್‌ ಮಾರ್ಕ್ಸ್ ಇವರಿಬ್ಬರ ಆರ್ಥಿಕ ಚಿಂತನೆಗಳ ಮತ್ತು ಆರ್ಥಿಕ ನೀತಿಗಳ ಅಪಾರ ಪ್ರಭಾವ ಭಾರತದ ಮೇಲೆ ಅಪಾರವಾಗಿದೆ. 1845 ರಲ್ಲಿ ಕಾರ್ಲ್‌ ಮಾರ್ಕ್ಸ ಜೊತೆಗೂಡಿ “The Communist Manifesto” ಬಿಡುಗಡೆ ಮಾಡತಾರೆ. ಇವರಿಬ್ಬರೂ ಬಸವಣ್ಣನವರ ಸಾಮಾಜಿಕ ಚಳುವಳಿಗಳನ್ನು ಮತ್ತು ಸಮಾಜೋ-ಧಾರ್ಮಿಕ ಚಳುವಳಿಗಳನ್ನೂ ಸಹ ಆಳವಾಗಿ ಅಭ್ಯಾಸ ಮಾಡಿದ್ದಾರೆ.

Friedrich Engels Says:
“Labour Created Man”. Basavanna declared “Work is Worship”. By doing so, he exalted physical labour into a religious ideology and gave a severe blow to a society which looked down upon different professions since labour was fundamentally woven fabric of caste.

ಫ್ರೆಡರಿಕ್‌ ಏಂಜಲ್ಸ್‌ ಹೇಳತಾರೆ:
ಕಾಯಕವೇ ಕೈಲಾಸ ಎಂದ ಬಸವಣ್ಣನವರು “ಕಾಯಕ ಯೋಗಿಗಳ ನಾಯಕ” ಎನ್ನುವ ಮೂಲಕ ಶ್ರೇಣೀಕೃತ ಸಮಾಜದಲ್ಲಿ ತುಳಿತಕ್ಕೊಳಗಾದ ಕಾಯಕ ಯೋಗಿಗಳಿಂದ ಆರ್ಥಿಕ ಮತ್ತು ಸಮಾಜೋ-ಧಾರ್ಮಿಕ ಚಳುವಳಿಯನ್ನು ಹುಟ್ಟು ಹಾಕಿದರು. ಶ್ರಮಿಕ ವರ್ಗದವರನ್ನು ಮೇಲಕ್ಕೆತ್ತುವ ಕೆಲಸವನ್ನು ಬಸವಣ್ಣನವರು ಮಾಡಿದರು. ಅವರ ಕಾಯಕಕ್ಕೆ ದೈವತ್ವವನ್ನು ಕೊಡುವ ಮೂಲಕ ಅವರ ಕಾಯಕಕ್ಕೆ ನ್ಯಾಯ ಒದಗಿಸಿದರು.

ದೇವ ಸಹಿತ ಭಕ್ತ ಮನೆಗೆ ಬಂದಡೆ
ಕಾಯಕವಾವುದೆಂದು ಬೆಸಗೊಂಡೆನಾದಡೆ
ನಿಮ್ಮಾಣೆ ನಿಮ್ಮ ಪುರಾತರಾಣೆ
ತಲೆದಂಡ ತಲೆದಂಡ ಕೂಡಲಸಂಗಮದೇವಾ
ಭಕ್ತರಲ್ಲಿ ಕುಲವನರಸಿದಡೆ
ನಿಮ್ಮಾಣೆ ನಿಮ್ಮ ರಾಣೀವಾಸದಾಣೆ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-44 / ವಚನ ಸಂಖ್ಯೆ-453)

ಬಸವಣ್ಣನವರ ಈ ವಚನ ಕಾಯಕ ಸಿದ್ಧಾಂತದ ದೈವತ್ವಕ್ಕೆ ಹಿಡಿದ ಕನ್ನಡಿ ಎನ್ನಬಹುದು. ಭಕ್ತರೇ ಆಗಲಿ ಅಥವಾ ದೇವರೇ ಆಗಲಿ ನನ್ನ ಮನೆಗೆ ಬಂದರೆ ಅವನ ಕುಲ, ಜಾತಿ ಹಾಗು ಕಾಯಕವನ್ನು ನಾನು ಕೇಳಿದರೆ ಕೂಡಲಸಂಗಮನ ಮೇಲೆ ಆಣೆ ಅಂತಾರೆ ಬಸವಣ್ಣನವರು. ಇದು ಕಾಯಕವನ್ನು ದೈವತ್ವಕ್ಕೇರಿಸಿದ ಪ್ರಪಂಚದ ಮೊಟ್ಟ ಮೊದಲನೇ ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯ Economic Model. ಇದರ Total Application ನಾವು ಕಾಣಬೇಕಾದರೆ ಜಪಾನ್‌ ದೇಶ ಆರ್ಥಿಕವಾಗಿ ದೈತ್ಯ ಶಕ್ತಿಯಾಗಿ ಬೆಳೆದದ್ದನ್ನು ನಪಿಸಿಕೊಳ್ಳಬೇಕಾಗುತ್ತದೆ.

ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಜಪಾನ್‌ ಮೇಲೆ ಅಣುಬಾಂಬ್‌ ದಾಳಿಯಾದಾಗ ಇಡೀ ಜಪಾನ್‌ ದೇಶ ಛಿದ್ರ ಛಿದ್ರವಾಗಿ ಹೋಗತದೆ. ಆದರೆ, ಅಲ್ಲಿಂದ 50 ವರ್ಷಗಳಲ್ಲಿ ಜಪಾನ್‌ ದೇಶ ಆರ್ಥಿಕವಾಗಿ ಬಲಾಢ್ಯ ರಾಷ್ಟ್ರವಾಗಿ ಬೆಳೀತದೆ. ಅದೇ ಒಂದು ಸಾಹಸ ಗಾಥೆ.

ಫ್ರಾನ್ಸ್‌ ದೇಶದಲ್ಲರುವ OECD (Organization of Economic Co-Operation & Development) ಎನ್ನುವ ಸಂಸ್ಥೆ ಇದೆ. ಇಂಥ ಅಭೂತಪೂರ್ವ ಸಾಧನೆ ಮಾಡಿದ್ದು ಹೇಗೆ ಎನ್ನುವದನ್ನು 1998 ರಲ್ಲಿ ಈ ಸಂಸ್ಥೆ ಜಪಾನ್‌ ದೇಶವನ್ನು ಕೇಳತದೆ. ಈ ಪ್ರಶ್ನೆಗೆ 2001 ರಲ್ಲಿ ಜಪಾನ್‌ ದೇಶ ಬೃಹತ್ 20 volume ಗಳಲ್ಲಿ ವರದಿಗಳ ಮೂಲಕ ಉತ್ತರ ನೀಡತದೆ. ಎಲ್ಲ 20 Volume ಗಳನ್ನೂ ಇಂಗ್ಲೀಷಿಗೆ ಭಾಷಾಂತರಿಸಿ ಪ್ಯಾರಿಸ್ ನ OECD ಕಛೇರಿಯಲ್ಲಿ ಇಡಲಾಗಿದೆ. ನಾನು ಮೊದಲನೇಯ ಪ್ರತಿಯನ್ನು ಓದಿದಾಗ ಅದ್ಭುತ ಮತ್ತು ಆಶ್ಚರ್ಯಕರ ಸಂದೇಶ ಸಿಗತದೆ. ಅದರ ಮೊದಲನೇ ಪ್ಯಾರಾದಲ್ಲಿ ಅವರು ಹೇಳತಾರೆ.

 After the destruction we have not started Engg or Medical colleges or any other technical training centres to rebuild our country.
 In fact, we gave responsibility to our own people who are Carpenters, Masons, Blacksmiths, Weavers and so on and depended on them.
 These people built an economically strong nation and much more than that is they went on to start Engg & Medical Colleges, which the younger generation carried forward the legacy of nation building.

ಇದು ಆಯಗಾರ ಪರಿಕಲ್ಪನೆಯ Model. ಇದನ್ನು ಅಳವಡಿಸಿಕೊಂಡು ಜಪಾನ್‌ ದೇಶ ಆರ್ಥಿವಾಗಿ ಸಧೃಢವಾಗಿದ್ದು ನಮ್ಮ ಕಣ್ಣ ಮುಂದೆಯೇ ಇದೆ. ಇದು ಆರ್ಥಿಕ ಮತ್ತು ಸಾಮಾಜಿಕ ಸಮಾನತೆಯ ಪರಿಕಲ್ಪನೆಯ ಒಂದು ಉದಾಹರಣೆ.

ಇದನ್ನೇ ಬಸವಣ್ಣನವರು 12 ನೇ ಶತಮಾನದಲ್ಲಿ ಹೇಳಿದ್ದರು ಎನ್ನುವುದು ಆಶ್ಚರ್ಯಕರ ಮತ್ತು ಭಾರತದಲ್ಲಿ ಇದನ್ನು ನಾವು ಗಮನಿಸಲಿಲ್ಲ ಎನ್ನುವುದು ಅಷ್ಟೇ ಖೇದಕರವಾದದ್ದು. ಅವರ ಒಂದು ವಚನ ನಮ್ಮನ್ನು ಈ ದಿಸೆಯಲ್ಲಿ ಚಿಂತನೆಗೆ ಹಚ್ಚುತ್ತದೆ. ಇದು ಆಯಗಾರರ ಕೌಶಲ್ಯದ ತಾಕತ್ತು. ಇದನ್ನು ಬಸವಣ್ಣನವರು 12 ನೇ ಶತಮಾನದಲ್ಲಿ ಗುರುತಿಸಿದ್ದರು.

ಕಾಸಿ ಕಮ್ಮಾರನಾದ ಬೀಸಿ ಮಡಿವಾಳನಾದ
ಹಾಸನಿಕ್ಕಿ ಸಾಲಿಗನಾದ ವೇದವನೋದಿ ಹಾರುವನಾದ
ಕರ್ಣದಲ್ಲಿ ಜನಿಸಿದವರುಂಟೆ ಜಗದೊಳಗೆ?
ಇದು ಕಾರಣ ಕೂಡಲಸಂಗಮದೇವ
ಲಿಂಗಸ್ಥಲವನರಿದವನೆ ಕುಲಜನು
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-55 / ವಚನ ಸಂಖ್ಯೆ-590)

ಈ ವಚನವನ್ನು ಓದಿದರೆ ಮೈನವಿರೇಳುವಂತಾಗುತ್ತದೆ. ಎಂಥ ಅದ್ಭುತ ಕೌಶಲ್ಯಾಭಿವೃದ್ಧಿಯ (Skill Development) ಸಂಕೇತವನ್ನು ಬಸವಣ್ಣನವರು ನಮಗೆ ತಿಳಿಸಿಕೊಟ್ಟದ್ದಾರೆ. ಪ್ರತಿಯೊಬ್ಬ‌ ಮಾನವರಲ್ಲಿರುವಯೂ ಕೌಶಲ್ಯವಿರುವುದು. ಹುಟ್ಟಿನಿಂದ ಯಾರೂ ಕೀಳಲ್ಲವೆಂದು ಹೇಳುವ ವಚನವಿದು.

ಇನ್ನು ವಚನಗಳಲ್ಲಿ ಆರ್ಥಿಕ ಚಿಂತನೆಯಲ್ಲಿ ಇನ್ನೊಂದು Background ನ್ನು ನೋಡಿಕೊಂಡು ಮುಂದೆ ಹೋಗೋಣ.

ಮತ್ತೆ ನಾನು ಎರಡನೇ ಮಹಾಯುದ್ಧದ ಸಂದರ್ಭಕ್ಕೆ ಬರತೀನಿ. ಎರಡನೇ ಮಹಾಯುದ್ಧ ಆದ ನಂತರ ಬಹುತೇಕ ರಾಷ್ಟ್ರಗಳಲ್ಲಿ ಹಾಹಾಕಾರ, ಹಸಿವು, ಬಡತನ ಉಗ್ರರೂಪ ತಾಳಿದಂಥ ಸಂದರ್ಭದಲ್ಲಿ ಅಸ್ತಿತ್ವಕ್ಕೆ ಬಂದಿದ್ದೇ United Nations ಎಂಬ ಸಂಸ್ಥೆ. ಇದರ ಮೂಲ ಉದ್ದೇಶ ದೇಶ ದೇಶಗಳ ನಡುವೆ ಸೌಹಾರ್ದಯುತ ವಾತಾವರಣ ನಿರ್ಮಾಣ ಮಾಡುವುದು ಮತ್ತು ಹಸಿವು ಮುಕ್ತ ಸಮಾಜವನ್ನು ನಿರ್ಮಿಸುವುದು.

How to develop under developed Countries ಎಂಬ ವಿಷಯದ ಬಗ್ಗೆ ಚರ್ಚೆ ಮಾಡುವುದಕ್ಕಾಗಿ 1951 ರಲ್ಲಿ United Nations ನ ಅಧ್ಯಕ್ಷರಾದಂಥ Luis Nervo ಮತ್ತು World Bank ನ Chairman ರಾದಂಥ Ugine Black ಒಂದು ಸಭೆಯನ್ನು ಕರೀತಾರೆ. ಸುಮಾರು 65 ದೇಶಗಳ ಪ್ರತಿನಿಧಿಗಳು ಈ ಸಭೆಯಲ್ಲಿ ಭಾಗವಹಿಸುತ್ತಾರೆ.

ಮೂರು ದಿನ ಚರ್ಚಿಸಿದ ನಂತರ 03.05.1951 ರಂದು ಒಂದು Resolution pass ಮಾಡತಾರೆ. ಅದನ್ನು The United Nations Policy Statement: Measures for Economic Development of Under Developed Countries ಅಂತಾ ಕರೆಯುತ್ತಾರೆ. To understand the intensity of the statement ಅದನ್ನೆ ಯಥಾವತ್ತಾಗಿ ಓದತೀನಿ.

 There is a sense in which rapid economic progress is impossible without painful re-adjustments.
 Ancient philosophies have to be scrapped; old social institutions have to disintegrate; bonds of caste, creed and race have to be burst.
 We propose the Western Model of Economy driven by Market or Banked Economy.
 In Economics Terminology it is called Anthropological Modernity of the west.

ಈ ಸಭೆಯಲ್ಲಿ ಅವರು ಹೇಳಿದ್ದು ಇಷ್ಟೇ:
ಸಂಪ್ರದಾಯಿಕ ಆಯಗಾರರ ಪದ್ಧತಿ, ಬಸವಣ್ಣ, ಶಂಕರಾಚಾರ್ಯ, ಬುದ್ಧ ಮುಂತಾದ ವೈಚಾರಿಕ ಪ್ರಜ್ಞೆಯುಳ್ಳವರು ಮಂಡಿಸಿದ ಸಂಸ್ಕೃತಿ, ಪರಂಪರೆ, ಒಟ್ಟು ಕುಟುಂಬ ಪದ್ಧತಿ, ಸಹಕಾರಿ ಬೇಸಾಯ ಪದ್ಧತಿಗಳನ್ನು ಬಿಟ್ಟು ಪಾಶ್ಚಿಮಾತ್ಯ ಆರ್ಥಿಕ ಪದ್ಧತಿಗಳನ್ನು ಅಳವಡಿಸಿಕೊಳ್ಳಿ ಅಂತ ಹೇಳತಾರೆ.

ಹಸಿವು ಬಡತನದಿಂದ ಕಂಗೆಟ್ಟಿದ್ದ ಬಹುತೇಕ ರಾಷ್ಟ್ರಗಳು ಈ Economic Model ನ್ನ ಕಾರ್ಯರೂಪಕ್ಕೆ ತರಲು ಪ್ರಾರಂಭಿಸಿದವು.

50 ವರ್ಷಗಳ ನಂತರ ಏನೂ ಬದಲಾವಣೆ ಕಾಣದಿದ್ದಾಗ 2001 ರಲ್ಲಿ United Nations ಮತ್ತೊಂದು ಸಭೆಯನ್ನು ಕರೀತಾರೆ. ಒಟ್ಟು 165 ದೇಶಗಳು ಈ ಸಭೆಯಲ್ಲಿ ಭಾಗವಹಿಸುತ್ತವೆ. ಬಹಳಷ್ಟು ಚಿಂತನ ಮಂಥನ ಆದ ಮೇಲೆ ಮತ್ತೆ ತನ್ನ ನಿಲುವನ್ನು ಬದಲಿಸಿ ಇನ್ನೋದು Revised Policy Statement ನ್ನು ಬಿಡುಗಡೆ ಮಾಡತದೆ.

 There is no unique universal set of rules for the growth & development.
 Sustained growth depends on key functions that needs to be fulfilled over a period of time.
 Every country has its own culture and this culture is the chief driver of the economy.

ಇದನ್ನ ಹೇಳೋದಿಕ್ಕೆ United Nations ನವರಿಗೆ 50 ವರ್ಷ ಬೇಕಾಯಿತು. ಇದನ್ನೇ ನಮ್ಮ ಬಸವಣ್ಣನವರು 12 ನೇ ಶತಮಾನದಲ್ಲಿಯೇ ತಮ್ಮ ಒಂದು ವಚನದ ಮೂಲಕ ಹೇಳಿದ್ದು.

ಕಾಂಚನವೆಂಬ ನಾಯ ನೆಚ್ಚಿ ನಿಮ್ಮ ಮರೆದನಯ್ಯಾ.
ಕಾಂಚನಕ್ಕೆ ವೇಳೆಯಿದೆಯಲ್ಲದೇ, ಲಿಂಗಪೂಜೆಗೆ ವೇಳೆ [ಯಿ] ಲ್ಲ,
ಹಡಿಕೆಗೆ ಮೆಚ್ಚಿದ ಸೊಣಗ
ಅಮೃತದ ರುಚಿಯ ಬಲ್ಲುದೇ ಕೂಡಲಸಂಗಮದೇವ?
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-34 / ವಚನ ಸಂಖ್ಯೆ-314)

ಈ ಒಂದೇ ಒಂದು ವಚನ ಎಲ್ಲ Modern Macro-Economic Theory ಗಳಿಗೆ ಸಮಾನಾಂತರವಾಗಿ ನಿಲ್ಲಬಲ್ಲದು. ಈ ವಚನ ಕೇಳಿದರೇನೆ ಮೈ ರೋಮಾಂಚನವಾಗುತ್ತದೆ.
ಕಾಂಚನ ಅಂದರೆ ಆರ್ಥಿಕ ವ್ಯವಸ್ಥೆ. ಲಿಂಗಪೂಜೆ ಅಂದರೆ ನಮ್ಮ ಸಂಸ್ಕೃತಿ, ಪರಂಪರೆ. ನಮ್ಮ ಪರಂಪರೆಯನ್ನು ಮರೆತರೆ ಆರ್ಥಿಕವಾಗಿ ಕೆಳ ಮಟ್ಟಕ್ಕೆ ಹೋಗುತ್ತೇವೆ ಎನ್ನುವುದು ಈ ವಚನದ ಆಶಯ.

ಸೊಣಗ ಅಂದರೆ ಕಾಂಚನವನ್ನು ಬೆನ್ನು ಹತ್ತಿ ನಮ್ಮ ಪರಂಪರೆ ಮತ್ತು ಸಂಸ್ಕೃತಿಯನ್ನು ಮರೆತಾಗ ಆರ್ಥಿಕವಾಗಿ ನಾವು ಅತ್ಯಂತ ಕೀಳು ಮಟ್ಟಕ್ಕೆ ಹೋಗತೀವಿ ಅನ್ನೋದನ್ನ ಬಸವಣ್ಣನವರು ಈ ವಚನದಲ್ಲಿ ಹೇಳತಾರೆ.

United Nations ಮತ್ತು 165 ದೇಶದವರು ಸೇರಿ ಕೊಟ್ಟಂಥ Policy Statement ಗಿಂತ ಉತ್ತಮ ಸಂದೇಶವನ್ನು ನಮ್ಮ ಬಸವಣ್ಣನವರು 12 ನೇ ಶತಮಾನದಲ್ಲಿಯೇ ನೀಡಿದ್ದಾರೆ. ಇದು ಬಸವಣ್ಣನವರ ದೂರದೃಷ್ಟಿಯ ಒಂದು ಉದಾಹರಣೆ.

ಇಂಥ ಆಧುನಿಕ ಆರ್ಥಿಕ ವ್ಯವಸ್ಥೆಯ ಕಾಲಘಟ್ಟದಲ್ಲಿ ಬಸವಣ್ಣನವರ ಈ ವಚನ ಇಂದಿಗೂ ಪ್ರಸ್ತುತ. ಎಷ್ಟೇ ಆಧುನಿಕವಾಗಿದ್ದೇವೆ ಎಂದರೂ ಸಹ ನಮ್ಮ ಪರಂಪರೆ ಸಂಸ್ಕೃತಿಯನ್ನು ಮರೆತರೆ ನಾಯಿಗಿಂತ ಕಡೆಯಾಗುತ್ತೇವೆ ಎನ್ನುವುದನ್ನು ಅರಿವು ಮೂಡಿಸುವ ಕೆಲಸವಾಗಬೇಕಾಗಿದೆ. ಇದು ಜಾಗತೀಕರಣ ಮತ್ತು ಉದಾರೀಕರಣ ಎನ್ನುವ ಆಧುನಿಕ ಅರ್ಥ ವ್ಯವಸ್ಥೆಯ ಒಂದು ಕೆಟ್ಟ ಪರಿಣಾಮ. ಯಾವುದೋ ಆಧುನಿಕ ಸಂಸ್ಕೃತಿಯ ಬೆನ್ನು ಹತ್ತಿ ಅದನ್ನು ಅನುಕರಿಸುವ ಹುಚ್ಚು ಉನ್ಮಾದದಿಂದ ನಮ್ಮ ಮುಂದಿನ ಪೀಳಿಗೆಯನ್ನು ತಪ್ಪುದಾರಿಗೆ ಎಳೆಯುವದನ್ನು ತಪ್ಪಿಸಬೇಕಾದ ತುರ್ತು ಅನಿವಾರ್ಯತೆ ಇದೆ.

ನಮ್ಮ ಈಗಿನ ಸಾಮಾಜಿಕ ವ್ಯವಸ್ಥೆಯಲ್ಲಿ, ಪರಂಪರೆ ಮತ್ತು ಸಂಸ್ಕೃತಿಯನ್ನು ಎಷ್ಟು ದೂರ ಮಾಡಿದ್ದೇವೋ ಅಷ್ಟು ಆಧುನಿಕರಾಗಿದ್ದೇವೆ ಎನ್ನುವ ಸಂಕೀರ್ಣ ಕಾಲಘಟ್ಟದಲ್ಲಿ ನಾವಿದ್ದೇವೆ. ಇಲ್ಲಿ ಡಾ. ಎಮ್. ಎಮ್. ಕಲಬುರ್ಗಿಯವರು ಪದೇ ಪದೇ ಹೇಳುತ್ತಿದ್ದ “ಸುಸಂಸ್ಕೃತ ಮನೆಗಳ ವಾತಾವರಣ ಹೇಗಿರಬೇಕು” ಎನ್ನುವ ಮಾತನ್ನು ನಾವು ನೆನಪಿಸಿಕೊಳ್ಳಬೇಕು. ಆರ್ಥಿಕವಾಗಿ ಸಬಲರಾಗಿಲ್ಲದಿದ್ದರೂ ಸಾಂಸ್ಕೃತಿಕವಾಗಿ “ಮಹಾಮನೆ” ಯಾಗಿರಬೇಕು.

ಮನೆ ನೋಡಾ ಬಡವರು; ಮನ ನೋಡಾ ಘನ.
ಸೋಂಕಿನಲ್ಲಿ ಶುಚಿ; ಸರ್ವಾಂಗ ಕಲಿಗಳು.
ಪಸರಕ್ಕನುವಿಲ್ಲ; ಬಂದ ತತ್‌ ಕಾಲಕೆ ಉಂಟು,
ಕೂಡಲಸಂಗನ ಶರಣರು ಸ್ವತಂತ್ರಧೀರರು.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-35 / ವಚನ ಸಂಖ್ಯೆ-326)

“ಮನೆ ನೋಡಾ ಬಡವರು ಮನ ನೋಡಾ ಘನ” ಎನ್ನುವ ವಚನವನ್ನು ಸಾಮಾನ್ಯವಾಗಿ ಡಾ. ಎಮ್. ಎಮ್. ಕಲಬುರ್ಗಿಯವರು ಎಲ್ಲ ಭಾಷಣಗಳಲ್ಲಿ ಹೇಳತಿದ್ದರು. ಯಾವ ಮನೆಯಲ್ಲಿ ಗುರುಸೇವೆ ಅಂದರೆ ಜ್ಞಾನ ಸೇವೆ, ಲಿಂಗಪೂಜೆ ನಂತರ ಜಂಗಮ ದಾಸೋಹ ಎನ್ನುವ ಸಾಮಾಜಿಕ ಪರಿಕಲ್ಪನೆಯಂತಹ ತ್ರಿವಿಧ ತತ್ವಗಳ ಅನುಷ್ಠಾನ ಇರತದೆಯೋ ಅದು ಮಹಾಮನೆ ಎನ್ನುವ ಬೆಳಕನ್ನು ನೀಡತದೆ ಅನ್ನುವಂತಹ ಮಾತನ್ನು ಹೇಳತಿದ್ದರು. ಇದು ಅವರ ಸಾಮಾಜಿಕ ಕಳಕಳಿಗೆ ಹಿಡಿದಂಥಾ ಕನ್ನಡಿ ಎನ್ನಬಹುದು.

ಜಾಗತಿಕ ಮಟ್ಟದಲ್ಲಿ ಒಂದು Comparison ಮಾಡೋದಕ್ಕೆ ಅಂದರೆ ತುಲನಾತ್ಮಕ ಅಧ್ಯಯನ ಮಾಡೋದಕ್ಕೆ ಮತ್ತೊಂದು ಉದಾಹರಣೆ ಸ್ಕಾಟ್‌ ಲ್ಯಾಂಡ್‌ನ ಆಡಮ್‌ ಸ್ಮಿತ್. ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಹೃದಯಕ್ಕೆ ಪ್ರವೇಶ ಮಾಡುವಂಥ ಸೂಕ್ಷ್ಮ ಮತ್ತು ತೀಕ್ಷ್ಣ ವಿಚಾರಧಾರೆ ನಾಯಕನಾದವನಿಗೆ ಇರಬೇಕು ಎನ್ನುವುದು ಈ ಉದಾಹರಣೆಯ ಉದ್ದೇಶ.

ಆಡಮ್‌ ಸ್ಮಿತ್‌ ಸ್ಕಾಟ್‌ ಲ್ಯಾಂಡ್‌ನ ಪ್ರಖ್ಯಾತ ಅರ್ಥಶಾಸ್ತ್ರಜ್ಞ, ತತ್ವಜ್ಞಾನಿ ಮತ್ತು ಶ್ರೇಷ್ಠ ಲೇಖಕ. ಇವರನ್ನು “ಅರ್ಥಶಾಸ್ತ್ರದ ಜನಕ” (The Father of Economics) ಅಂತಲೂ ಕರಿತಾರೆ. ಆಡಮ್‌ ಸ್ಮಿತ್‌ ಅವರ ಎರಡು ಪುಸ್ತಕಗಳು ಒಂದು “The Theory of Moral Sentiments (1759)” ಮತ್ತೊಂದು “Inquiry into the Nature and Causes of the Wealth of Nations (1776)” ಅತ್ಯಂತ ಪ್ರಸಿದ್ಧವಾದವುಗಳು.

ಅವರುಗಳ ಒಂದು ಪುಸ್ತಕಗಳ ವಿಮರ್ಶೆಯನ್ನು ಮಾಡುವಾಗ ಸುಪ್ರಸಿದ್ಧ ಲೇಖಕರು ಬಸವಣ್ಣವರ ಆರ್ಥಿಕ ನೀತಿಗಳಿಗೆ ಹೋಲಿಸಿ ಬೆರೆದಿದ್ದಾರೆ.

Basavanna’s economic thoughts emerging from Vachana Literature stands on a much higher plane in relation to those of Adam Smith. Because, the economic ideas enshrined in the Vachana Literature stand on ethical spiritual plane as against just a materialistic plane on which others stand. Hence, they have an everlasting value and significance.

ವಚನ ಸಾಹಿತ್ಯದಲ್ಲಿ ಕಂಡು ಬರುವಂಥ ಆರ್ಥಿಕ ನೀತಿಯಲ್ಲಿ ಬರುವ ಕಾಯಕ ಸಿದ್ಧಾಂತವು ನೈತಿಕ ಮತ್ತು ಆಧ್ಯಾತ್ಮಿಕ ತಳಹದಿಯ ಮೇಲೆ ಪ್ರತಿಪಾದಿತವಾಗಿದೆ. ಯಾವುದೇ ಭೌತಿಕ ವಸ್ತು ಅಥವಾ ವ್ಯಕ್ತಿಯ ಮೇಲೆ ಪ್ರತಿಪಾದಿತವಾಗಿಲ್ಲ.

ಇದು ವಚನ ಸಾಹಿತ್ಯದ ಶ್ರೇಷ್ಠತೆಯ ಉದಾಹರಣೆ. ಕಾಯಕದ ಶ್ರೇಷ್ಠತೆ ಮತ್ತು ಜ್ಯೇಷ್ಠತೆಯನ್ನು ತಿಳಿಸುವ ನುಲಿಯ ಚಂದಯ್ಯನವರ ಮತ್ತು ಆಯ್ದಕ್ಕಿ ಮಾರಯ್ಯನವರ ವಚನಗಳು ಅತ್ಯಂತ ಸೂಕ್ತವಾಗಿವೆ.

ನುಲಿಯ ಚಂದಯ್ಯ:
ಗುರುವಾದಡೂ ಕಾಯಕದಿಂದವೆ ಜೀವನ್ಮುಕ್ತಿ.
ಲಿಂಗವಾದಡೂ ಕಾಯಕದಿಂದವೆ ವೇಷದ ಪಾಶ ಹರಿವುದು.
ಗುರುವಾದಡೂ ಚರಸೇವೆಯ ಮಾಡಬೇಕು.
ಲಿಂಗವಾದಡೂ ಚರಸೇವೆಯ ಮಾಡಬೇಕು.
ಜಂಗಮವಾದಡೂ ಚರಸೇವೆಯ ಮಾಡಬೇಕು
ಚನ್ನಬಸವಣ್ಣಪ್ರಿಯ ಚಂದೇಶ್ವರಲಿಂಗದ ಅರಿವು.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1334 / ವಚನ ಸಂಖ್ಯೆ-1303)

ಆಯ್ದಕ್ಕಿ ಮಾರಯ್ಯ:
ತವನಿದ್ಥಿಯ ಬೆಳೆವಂಗೆ ಕಣಜದ ಹಂಗುಂಟೆ?
ವಿರಕ್ತಂಗೆ ಆರೈಕೆಗೊಂಬವರುಂಟೆ?
ಕಾಯಕವ ಮಾಡುವ ಭಕ್ತಂಗೆ ಇನ್ನಾರುವ ಕಾಡಲೇತಕ್ಕೆ?
ಆ ಗುಣ ಅಮರೇಶ್ವರಲಿಂಗಕ್ಕೆ ದೂರ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1069 / ವಚನ ಸಂಖ್ಯೆ-1173)

ಆಯಗಾರರು ಎಂಬ ಕಾಯಕ ಕೇಂದ್ರೀಕೃತ ಸಾಮಾಜಿಕ ವ್ಯವಸ್ಥೆಯನ್ನು ಹುಟ್ಟು ಹಾಕಿದ ಬಸವಣ್ಣನವರು ವಿಶ್ವನಾಯಕರು ಎನ್ನಲು ಇದಕ್ಕಿಂತ ಉತ್ತಮ ಉದಾಹರಣೆ ಬೇಕಾಗಿಲ್ಲ ಅಂತ ನನಗೆ ಅನಿಸುತ್ತದೆ. ಕಾಯಕವೇ ಕೈಲಾಸ ಎನ್ನುವ ಉದಾತ್ತ ಮತ್ತು ಶ್ರೇಷ್ಠ ಪರಿಕಲ್ಪನೆ ಬಹುಶಃ ಜಗತ್ತಿನಲ್ಲಿ ಎಲ್ಲಿಯೂ ಕಾಣೋದಕ್ಕೆ ಸಾಧ್ಯವಿಲ್ಲ. ಇದು ಶರಣರ ಮತ್ತು ವಚನ ಸಾಹಿತ್ಯದ ಮಹತ್ವ.

ಆಧುನಿಕ ಅರ್ಥ ವ್ಯವಸ್ಥೆ ಹುಟ್ಟುಹಾಕುವ ಇನ್ನೊಂದು ಕ್ರೂರ ಮುಖವೆಂದರೆ ಭ್ರಷ್ಟಾಚಾರ. ಭ್ರಷ್ಠಾಚಾರ ಇವತ್ತು ಯಾವ ಮಟ್ಟಕ್ಕೆ ಹೋಗಿದೆ ಅನ್ನೋದನ್ನ ಹೇಳೋದಿಕ್ಕೆ ಸಾಧ್ಯವಿಲ್ಲ. ಯಾವಾಗ ಅನೈತಿಕವಾಗಿ ಗಳಿಸಿದ ಹಣದ ಸಂಗ್ರಹ ಮತ್ತು ಚಲಾವಣೆ ಪ್ರಮುಖವಾಗುತ್ತದೆಯೋ ಅದು ಭ್ರಷ್ಟಾಚಾರಕ್ಕೆ ಮುನ್ನುಡಿಯಾಗುತ್ತದೆ. ಇದನ್ನೇ ಶರಣೆ “ಕನ್ನಡಿ ಕಾಯಕದ ರೇಮಮ್ಮ” ಎಷ್ಟು ಅದ್ಭುತವಾಗಿ ಚಿತ್ರಿಸಿದ್ದಾರೆ. ಮೊದಲು ನನ್ನನ್ನು ನಾನು ಅರಿಯಬೇಕು ಆವಾಗಲೇ ಸಮಷ್ಠಿ ಪ್ರಜ್ಞೆಯ ಅರಿವಾಗುವುದು. ಆವಾಗಲೇ ಭ್ರಾಷ್ಟಾಚಾರವೆಂಬ ಮುಳ್ಳನ್ನು ಕಿತ್ತು ಹಾಕಬಹುದು.

ಕೈಯಲ್ಲಿ ಕನ್ನಡಿಯಿರಲು ತನ್ನ ತಾ ನೋಡಬಾರದೆ?
ಲಿಂಗಜಂಗಮದ ಪ್ರಸಾದಕ್ಕೆ ತಪ್ಪಿದಲ್ಲಿ ಕೊಲ್ಲಬಾರದೆ?
ಕೊಂದಡೆ ಮುಕ್ತಿಯಿಲ್ಲವೆಂಬವರ ಬಾಯಲ್ಲಿ
ಪಡಿಹಾರನ ಪಾದರಕ್ಷೆಯನಿಕ್ಕುವೆ
ಮುಂಡಿಗೆಯನೆತ್ತಿರೊ ಭ್ರಷ್ಟ ಭವಿಗಳಿರಾ?
ಎತ್ತಲಾರದಡೆ ಸತ್ತ ಕುನ್ನಿ ನಾಯ ಬಾಲವ
ನಾಲಗೆ ಮುರುಟಿರೋ
ಸದ್ಗುರುಸಂಗ ನಿರಂಗಲಿಂಗದಲ್ಲಿ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-870 / ವಚನ ಸಂಖ್ಯೆ-747)

ಆರ್ಥಿಕ ಕ್ರಾಂತಿ ಮಾಡಿದ ಬಸವಣ್ಣ. ಬಸವಣ್ಣ ಆರ್ಥಮಂತ್ರಿಯಾಗಿದ್ದ ಅನ್ನೋದನ್ನ ನಾವು ಗಮನಿಸಬೇಕು. ಹಣ ಚಲಾವಣೆ, ಸಂಪತ್ತಿನ ಕ್ರೋಢೀಕರಣ. ನಿಜವಾದ ಸಂಪತ್ತು ಅಂದರೆ Human Resource ಅಂತ ಇವತ್ತು ಹೇಳತೀವಿ. ಮಾನವ ಸಂಪನ್ಮೂಲ ಅಂತ ಇವತ್ತ ಏನ ಹೇಳತೀವಲ್ಲಾ ಅದನ್ನ ಬಸವಣ್ಣ ಅವತ್ತೇ ಗುರುತಿಸಿದ್ದರು. ಅಂದು ಕಾಯಕದ ಮೂಲಕ ಆ ಮಾನವ ಸಂಪನ್ಮೂಲವನ್ನು Extract ಮಾಡೋದು, ಹಣವನ್ನು ಸಂಪಾದನೆ ಮಾಡೋದು. ಅದರಿಂದ ಗಳಿಸಿದ್ದನ್ನ ತಾನೊಬ್ಬನೇ ತಿನ್ನದೇ ಅದನ್ನ ಅದಕ ಸಮಾಜಕ್ಕೆ ದಾಸೋಹದ ಮೂಲಕ ವಿತರಿಸುವುದು. ನೋಡಿ ಇವೆರಡೂ ಪರಿಕಲ್ಪನೆಗಳು ಜಗತ್ತಿನಲ್ಲಿ ಎಲ್ಲಿಯೂ ಇರಲಾರದ ಪರಿಕಲ್ಪನೆಗಳು. ಇಂಥಾ ಹಂತದಲ್ಲಿ ದುಡಿದು ಇಟ್ಟುಕೊಂಡವರು ಸಾಕಷ್ಟು ಗಳಿಸಿ ಇಟ್ಟಿಕೊಂಡವರು ಏನೇನು ಮಾಡೋಕ್ಕೆ ಸಾಧ್ಯ ಇದೆ ಮತ್ತೆ ಬಸವಣ್ಣ ಪ್ರಸ್ತುತ ಆಗತಾನೆ. ಆತ ಕೇಳತಾನೆ:

ಆಯುಷ್ಯವುಂಟು ಪ್ರಳಯವಿಲ್ಲೆಂದು ಅರ್ಥವ ಮಡುಗುವಿರಿ;
ಆಯುಷ್ಯ ತೀರಿ ಪ್ರಳಯ ಬಂದಡೆ ಆ ಅರ್ಥವನುಂಬುವರಿಲ್ಲ.
ನೆಲನನಗೆದು ಮಡುಗದಿರಾ, ನೆಲ ನುಂಗಿದಡುಗುಳುವುದೆ?
ಕಣ್ಣಿನಲ್ಲಿ ನೋಡಿ, ಮಣ್ಣಿನಲ್ಲಿ ನೆರಹಿ, ಉಣ್ಣದೆ ಹೋಗದಿರಾ!
ನಿನ್ನ ಮಡದಿಗಿರಲೆಂದಡೆ, ಆ ಮಡದಿಯ ಕೃತಕ ಬೇರೆ;
ನಿನ್ನ ಒಡಲು ಕೆಡೆಯಲು ಮತ್ತೊಬ್ಬನಲ್ಲಿಗೆ ಅಡಕದೆ ಮಾಬಳೆ?
ಹೆರರಿಗಿಕ್ಕಿ ಹೆಗ್ಗುರಿಯಾಗಿ ಕೆಡಬೇಡ,
ಕೂಡಲಸಂಗನ ಶರಣರಿಗೆ ಒಡನೆ ಸವೆಸುವುದು.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-26 / ವಚನ ಸಂಖ್ಯೆ-201)

ಇವತ್ತು ನಾವೆಲ್ಲಾ ನೋಡತಾ ಇದೀವಿ. ಒಬ್ಬೊಬ್ಬರ ಆಸ್ತಿ ಸಾವಿರ ಲಕ್ಷ ಕೋಟಿ. ಭ್ರಷ್ಠಾಚಾರದಲ್ಲಿ ತೊಡಗಿರತಕ್ಕಂಥವರ ಮನೆಗಳಲ್ಲಿ ಮುನ್ನೂರು ಕೋಟಿ ಹಣ ಆಸ್ತಿ ಸಿಕ್ಕಿ ಹಾಕೋದು ಸನ್ನಿವೇಶಗಳು ಇದಾವಲ್ಲಾ ಅವರಿಗೆ ಕೇಳೋ ಪ್ರಶ್ನೆ ಇದು. ಆಯುಷ್ಯವುಂಟು ಪ್ರಳಯವಿಲ್ಲೆಂದು ಅರ್ಥವ ಮಡುಗುವಿರಿ ಆಯುಷ್ಯ ತೀರಿ ಪ್ರಳಯ ಬಂದರೆ ಅರ್ಥವನುಂಬುವರಿಲ್ಲ. ಇದನ್ನ ಭಾಳ ಮನದಟ್ಟ ಮಾಡಿಕೊಡತಾರೆ ವಚನಕಾರರು. ಎಷ್ಟ ಹಣ ಗಳಸತೀಯಪಾ ನೀನು. ನೀನು ಎನು ಆಯುಷ್ಯ ಇದೆ ಅಂತಾ ತಿಳಕೊಂಡು ಇಷ್ಟೆಲ್ಲಾ ಗಳಸತೀಯಾ. ಪ್ರಳಯ ಅಂದರೆ ಸಾವು ಬರೋದೇ ಇಲ್ಲಾ ನಮಗ ಅಂತ ಗಳಸತೀಯಾ ಅರ್ಥ ಸಂಗ್ರಹಿಸಿಟ್ಟುಕೊಳ್ಳತೀಯಾ. ಆಯುಷ್ಯ ತೀರಿ ಪ್ರಳಯ ಬಂದರೆ ಅರ್ಥವನುಂಬುವರೆ. ನಿನ್ನ ಆಯುಷ್ಯ ಮುಗದ ಮ್ಯಾಲ ಯಾರ ತಿಂತಾರೆ ನಿನ್ನ ದುಡ್ಡನ್ನ ಅಂತ ಬಸವಣ್ಣನವರು ಎಚ್ಚರಿಕೆ ಕೊಡತಾರೆ.

ನೀನಿಕ್ಕಿದ ಬೀಯದಲ್ಲಿ ವಂಚನೆಯುಳ್ಳಡೆ
ಸಂಗಾ, ನಿಮ್ಮ ತೊತ್ತುತನಕ್ಕೆ ದೂರವಯ್ಯಾ.
ಕದ್ದು ತಿಂದಡೆ ಕೈಹಿಡಿದೊಮ್ಮೆ
ಬಡಿದು ತುಡುಗುಣಿತವ ಬಿಡಿಸಯ್ಯಾ.
ಜಂಗಮ ಮನೆಗೆ ಬಂದಲ್ಲಿ ಒಸರಿಸಿದಡೆ
ಹಿಡಿದು ಮೂಗ ಕೊಯ್ಯಯ್ಯಾ ಕೂಡಲಸಂಗಮದೇವಾ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-42 / ವಚನ ಸಂಖ್ಯೆ-434)

“ಕದ್ದು ತಿಂದಡೆ ಕೈಹಿಡಿದೊಮ್ಮೆ ಬಡಿದು ತುಡುಗುಣಿತವ ಬಿಡಿಸಯ್ಯಾ” ಎನ್ನುವ ವಚನದ ಮೂಲಕ ಬಸವಣ್ಣನವರು ಈ ಎಲ್ಲ ಅಸಮರ್ಪಕ ಧೋರಣೆಗಳನ್ನು ಧಿಕ್ಕರಿಸಿದವರು.

ಮಹಾಭಾರತದಲ್ಲಿ “ಬಾಹುಕ” ಎನ್ನುವ ಆರ್ಥಿಕ ಸಲಹೆಗಾರನ ವರ್ಣನೆ ಬರುತ್ತದೆ. ಕಂಸನ ಮಾವನಾದ ಜರಾಸಂಧನ ಆಸ್ಥಾನದ ಆರ್ಥಿಕ ಸಲಹೆಗಾರ ಈ ಬಾಹುಕ. ಪ್ರಜೆಗಳನ್ನು ನನ್ನ ಹಿಡಿತದಲ್ಲಿ ಹೇಗೆ ಇಟ್ಟುಕೊಳ್ಳಬೇಕು ಎನ್ನುವುದಕ್ಕೆ ಬಾಹುಕನ ಸಲಹೆಯನ್ನು ಕೇಳತಾನೆ ಕಂಸ.

ನಿನ್ನ ಭಂಡಾರವನ್ನು ಪ್ರಜೆಗಳಿಗೊಸ್ಕರ ತೆರೆದಿರಿಸು. ಪ್ರಜೆಗಳು ತಿಂದು ಕುಡಿದು ಮೋಜು ಮಸ್ತಿಯಲ್ಲಿ ಕಳೆಯುವಂತೆ ಮಾಡು. ಪ್ರಜೆಗಳು ಅವರ ತಂದೆ ತಾಯಿಯರನ್ನು ಪ್ರಯೋಜನವಿಲ್ಲದವರಂತೆ ನೋಡುವ ರೀತಿಯಲ್ಲಿ ಪ್ರಜೆಗಳನ್ನು ಬೆಳೆಸು. ಕಾಯಕ, ಪ್ರೀತಿ ಮತ್ತು ಕರುಣೆಯಿಂದ ನೋಡುವವರನ್ನು ಅಪಹಾಸ್ಯ ಮಾಡುವಂಥ ಗುಣಗಳನ್ನು ಅವರಲ್ಲಿ ಹಾಸುಹೊಕ್ಕಾಗಿ ಮಾಡುವಂತೆ ಬೆಳೆಸು. ಹಸುವಿಗೆ ನಿಂತಲ್ಲೇ ಹುಲ್ಲು ಹಾಕಿ ಬೆಳೆಸಿದಾಗ ನಿನ್ನ ಕರುಣೆಗಾಗಿ ಕಾಯುವ ಪರಿಸ್ಥಿತಿ ಉಂಟಾಗುವ ರೀತಿಯಿಂದ ಪ್ರಜೆಗಳು ಬೆಳೆದಾಗ ಎಲ್ಲದಕ್ಕೂ ತಲೆಯಾಡಿಸುವ ಅಪ್ರಯೋಜಕ ಪ್ರಜೆಗಳು ನಿನ್ನ ಹಂಗಿನಲ್ಲಿ ಇರುತ್ತಾರೆ.

ಇಂಥಹದ್ದೇ ಒಂದು ಆರ್ಥಿಕ ನೀತಿಯನ್ನು 2008 ರ ನೋಬೆಲ್‌ ಪುರಸ್ಕೃತ ಮತ್ತು ಅಮೇರಿಕಾದ ಪ್ರಖ್ಯಾತ ಆರ್ಥಿಕ ತಜ್ಞ “ಅಲೆನ್‌ ಗ್ರೀನ್‌ಸ್ಪಾನ್” ಅನುಷ್ಠಾನಕ್ಕೆ ತಂದಿದ್ದರು. ಈ ಆರ್ಥಿಕ ನೀತಿಯ ಮೂಲಕ “ಕೌಟುಂಬಿಕ ರಕ್ಷಣೆ” (Social Security) ಮತ್ತು “ಆರೋಗ್ಯ ರಕ್ಷಣೆ” (Health Security) ಎಂಬ ನೀತಿಗಳನ್ನು ಜಾರಿಗೆ ತರಲಾಯಿತು. ಇದರ ಪರಿಣಾಮ ಅರ್ಧದಷ್ಟು ಅಮೇರಿಕಾದ ಕುಟುಂಬಗಳು ಜೀವನ ನಿರ್ವಹಣೆಗಾಗಿ ಸರ್ಕಾರವನ್ನೇ ಅವಲಂಬಿಸಬೇಕಾಯಿತು. ಆಧುನಿಕ ಆರ್ಥಿಕ ಸೂತ್ರಗಳ ಅಡ್ಡ ಪರಿಣಾಮವಿದು.

ಇಂಥ ಅರ್ಥಶಾಸ್ತ್ರದ ಸೂತ್ರಗಳನ್ನು ಬಸವಾದಿ ಶರಣರು 12 ನೇ ಶತಮಾನದಲ್ಲಿ ಕಿತ್ತೊಗೆದು ಸಮ ಸಮಾಜವನ್ನು ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದರು ಎನ್ನುವುದಕ್ಕೆ ಬಸವಣ್ಣನವರ ಈ ವಚನವೇ ಸಾಕ್ಷಿ.

ಊರ ಮುಂದೆ ಹಾಲಹಳ್ಳ ಹರಿವುತ್ತಿರಲು
ಒರೆಯಾವಿನ ಬೆನ್ನಲಿ ಹರಿಯಲದೇಕಯ್ಯಾ?
ಲಜ್ಜೆಗೆಡಲೇಕೆ? ನಾಣುಗೆಡಲೇಕೆ?
ಕೂಡಲಸಂಗಮದೇವರುಳ್ಳನ್ನಕ್ಕ
ಬಿಜ್ಜಳನ ಭಂಡಾರವೆನಗೇಕಯ್ಯಾ.
(ಬಸವಣ್ಣನವರ ವಚನಗಳು -1968 / ಡಾ. ಆರ್‌ ಸಿ ಹಿರೇಮಠ / ಪು. ಸಂ.301 / ವ. ಸಂ.754)

ಇಡೀ ಸಮಾಜದಿಂದ ನೆರವು ಹರಿದು ಬರುತ್ತಿರುವಾಗ ಬಿಜ್ಜಳನ ಧನವನ್ನು ನಾನ್ಯಾಕೆ ಆಶ್ರಯಿಸಲಿ ಎನ್ನುವುದನ್ನು ಬಸವಣ್ಣನವರು “ಊರ ಮುಂದೆ ಹಾಲ ಹಳ್ಳ ಹರಿವುತ್ತಿರಲು ಒರೆಯಾವಿನ ಬೆನ್ನಲಿ ಹರಿಯಲದೇಕಯ್ಯಾ” ಎನ್ನುವುದರ ಮೂಲಕ ಸ್ಪಷ್ಟಪಡಿಸಿದ್ದಾರೆ. ಅರ್ಥಶಾಸ್ತ್ರಜ್ಞ ಅಲೆನ್‌ ಗ್ರೀನ್‌ಸ್ಪಾನ್ ಮತ್ತು ಮಹಾಭಾರತದ ಆರ್ಥಿಕ ಸಲಹೆಗಾರ ಬಾಹುಕನ ನೀತಿಗಳನ್ನು ಬಸವಾದಿ ಶರಣರು ಸಾರಾಸಗಟಾಗಿ ತಿರಸ್ಕರಿಸಿರುವುದನ್ನು ನಾವು ಅವರ ವಚನಗಳ ಮೂಲಕ ಗಮನಿಸಬಹುದು. ಅನ್ಯಾಯದಿಂದ ಬಂದ ಧನವನ್ನು ಬಸವಾದೀ ಶರಣರು ಯಾವತ್ತೂ ಮನ್ನಿಸಲಿಲ್ಲ.

ಇಂಥ ಅದ್ಭುತ ಸಂದೇಶಗಳ ಗಣಿ 12 ನೇ ಶತಮಾನ.

ಬಸವಾದಿ ಶರಣರು ಕಾಲ, ವರ್ಷ, ದೇಶ, ಭಾಷೆ ಎಲ್ಲ ಸೀಮೆಗಳನ್ನೂ ದಾಟಿ ನಾವು ಯೋಚಿಸಿದ ಕಲ್ಪನೆಗೂ ನಿಲುಕದೆ ಗಗನದೆತ್ತರಕ್ಕೆ ಬೆಳೆದು ನಿಲ್ಲುತ್ತಾರೆ.

ವಚನ ಸಾಹಿತ್ಯದಲ್ಲಿ ಕಂಡು ಬರುವ ತತ್ವಗಳು ಸೂರ್ಯನಷ್ಟೇ ಸತ್ಯ. ಯಾರು ಏನೇ ಮಾಡಿದರೂ ಈ ಜಗತ್ತು ಇರುವವರೆಗೂ ಅವು ಬದುಕುತ್ತವೆ. ಅವು ಸಮಯವನ್ನು ಮೀರಿದ ನಿಸ್ಸೀಮ ತತ್ವಗಳು.

ಅಂಥಾ ಒಂದು ಚೇತನವನ್ನು ಶಬ್ದಗಳಲ್ಲಿ ಹಿಡಿಯುವುದು ಕಷ್ಟ. ನನಗೆ ನಿಲುಕಿದಷ್ಟು ಪ್ರಸಾದವನ್ನು ತಮ್ಮೊಂದಿಗೆ ಹಂಚಿಕೊಂಡಿದ್ದೇನೆ.


 ಇಡೀ ಪ್ರಪಂಚದ ಎಲ್ಲ ದೇಶಗಳು ಪರಂಪರೆ ಮತ್ತು ಸಂಸ್ಕೃತಿಯನ್ನು ಆಧಾರವಾಗಿಟ್ಟುಕೊಂಡು ಆರ್ಥಿಕ ನೀತಿಗಳನ್ನು ರೂಪಿಸುವುದರಲ್ಲಿ ತೊಡಗಿಸಿಕೊಂಡಿವೆ. ಭಾರತದ ಆರ್ಥಿಕ ಮಾದರಿಗಳು ಮತ್ತು ನೀತಿಗಳು ಸರಿ ಸುಮಾರು 7500 ವರ್ಷಗಳಿಂದ ಇದೇ ತಳಹದಿಯ ಮೇಲೆ ನಡೆದು ಬಂದಿರುವುದನ್ನು ನಾವು ಕಾಣಬಹುದು.
 We have 1,800 years of glorious economy is the testimony for the world.
 ಪ್ರಪಂಚದ ಆರ್ಥಿಕ ವ್ಯವಸ್ಥೆಗಳು ತಲ್ಲಣಗೊಂಡಿರುವ ಈ ಸಂಕಷ್ಟ ಕಾಲದಲ್ಲಿ ಎಲ್ಲ ದೇಶಗಳು ಭಾರತದ ಆರ್ಥಿಕ ಮಾದರಿಗಳತ್ತ ನೋಡುವಂತಾಗಿದೆ.
 We are in a very very difficult times but very very interesting time.
 ಮುಂದಿನ 20 ವರ್ಷಗಳು ಭಾರತಕ್ಕೆ ಪರೀಕ್ಷೆಯ ಸಮಯ.
 ಪಾಶ್ಚಾತ್ಯ ರಾಷ್ಟ್ರಗಳು ಆರ್ಥಿಕವಾಗಿ ತಡಬಡಾಯಿಸುತ್ತಿರುವ ಇಂಥ ಕಾಲಘಟ್ಟದಲ್ಲಿ ಭಾರತವು ಉನ್ನತ ಮಟ್ಟಕ್ಕೇರುವ ಎಲ್ಲ ಅವಕಾಶಗಳೂ ಇವೆ.
 We are seeing the rise of India, but, India is not rising enough as expected is a challenge.
 ಆದರೆ ಭಾರತ ನಿರೀಕ್ಷಿಸಿದ ಮಟ್ಟದಲ್ಲಿ ಬೆಳೆಯುತ್ತಿಲ್ಲ ಎನ್ನುವುದೇ ಸಧ್ಯದ ಸವಾಲು.
 ಭಾರತದ ಎಲ್ಲ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಉನ್ನತ ಮಟ್ಟಕ್ಕೇರೋಣ ಅಂತಾ ಹೇಳತಾ

ನನ್ನ ಮಾತಿಗೆ ವಿರಾಮ ಹೇಳುತ್ತೇನೆ.

ಶರಣು ಶರಣಾರ್ಥಿಗಳು.

ಸಂಗ್ರಹ ಮತ್ತು ಲೇಖನ:
ಡಾ. ವಿಜಯಕುಮಾರ ಕಮ್ಮಾರ
“ಸವಿಚರಣ” ಸುಮತಿ ಶಾಲೆಯ ಹತ್ತಿರ
ಕ್ಯಾತ್ಸಂದ್ರ, ತುಮಕೂರು – 572 104
ಮೋಬೈಲ್‌ ನಂ : 9741 357 132
ಈ-ಮೇಲ್‌ : vijikammar@gmail.com

 ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
 ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in

Loading

This Post Has 2 Comments

  1. ಡಾ. ಕಮಲಾ ದೇಶಿಕ

    ಶರಣ ಸಂಸ್ಕೃತಿಯ ಆರ್ಥಿಕ ಮೌಲ್ಯಗಳು ಮತ್ತು ವಾಸ್ತವ ನೆಲೆಯ ಆರ್ಥಿಕತೆಯ ತುಂಬಾ ಅರ್ಥಪೂರ್ಣವಾಗಿ ವಿಶ್ಲೇಷಣೆ ಮಾಡಿದ್ದೀರಿ ಸರ್ .

  2. ಶರಣರ ಆರ್ಥಿಕತೆಯನ್ನು ವಿದೇಶಿ ವಿದ್ವಾಂಸರ ಹೇಳಿಕೆಗಳ
    ಮೂಲಕ ತೌಲನಿಕ ತೆಯನ್ನು ಬಿಂಬಿಸುವುದು ಅಷ್ಟು
    ಸರಳವಲ್ಲ ಆದರೆ ಅದನ್ನು ನಿಮ್ಮ ಲೇಖನದಲ್ಲಿ
    ಧಾಖಲಿಸಿ ಸಮರ್ಥಿಸಿದ್ದೀರಿ. ಅಭಿನಂದನೆಗಳು

Leave a Reply