ಶಿವಯೋಗಿ ಸಿದ್ಧರಾಮರ ವಚನಗಳಲ್ಲಿ ಜಂಗಮ / ಶ್ರೀಮತಿ. ಸುನಿತಾ ಮೂರಶಿಳ್ಳಿ, ಧಾರವಾಡ.

ಯುಗಯುಗಗಳು ಸಂದರೂ ಇನ್ನೂ ಸಾವಿರಾರು ಯುಗಗಳು ಸಂದರೂ ಈ ಜಗತ್ತು ಬದುಕಿರುವವರೆಗೂ ಶರಣರು ಬದುಕಿರುತ್ತಾರೆ. ಅಂತಹ ಅಪರೂಪವಾದ ಮೌಲಿಕವಾದ, ಅಸ್ಖಲಿತವಾದ ಕಾಲಘಟ್ಟ ಅದುವೆ ಹನ್ನೆರಡನೆಯ ಶತಮಾನ. ಎಲ್ಲಾ ಧರ್ಮಗಳೂ ಸತ್ಯ, ಆನಂದ, ಮೋಕ್ಷಗಳನೆ ಮೂಲಬೇರಾಗಿಸಿದವು. ಎಲ್ಲವುದರ ಆಚರಣೆ, ಸಂಸ್ಕೃತಿ, ಶೈಲಿ, ವಿಭಿನ್ನವೆ. ಎಲ್ಲವುಗಳಲ್ಲೂ ಅವುಗಳದೇ ಆದ ಋಣಾತ್ಮಕ ಹಾಗೂ ಧನಾತ್ಮಕ ಅಂಶಗಳೂ ಕೂಡಾ ಇದ್ದೇ ಇವೆ. ಹಾಗೆ ಎಲ್ಲವೂ ವ್ಯಕ್ತಿಗತ ಆನಂದದ ಮೋಕ್ಷದ ಪಥವ ತೋರಿದರೆ ಸಮಗ್ರತೆಯ ಸಾರವಾದ ಬಸವ ಪ್ರಣೀತ ಶರಣಧರ್ಮವು ಆ ಎಲ್ಲ ಚೌಕಟ್ಟುಗಳ ತೆಕ್ಕೆಗೆ ಸೇರದೆ ವ್ಯಕ್ತಿಗತ ಆನಂದದ ಪಾತಳಿಯ ಸಮಷ್ಠಿಯ ಆನಂದದಲ್ಲಿ ಅಡಗಿದೆ ಎಂಬ ವಿಭಿನ್ನವಾದ, ಲೋಕೋತ್ತರವಾದ, ಉತ್ಕೃಷ್ಟವಾದ ಬೆಳವಣಿಗೆಗೆ ಕಾರಣವಾಯಿತು. ಅರಿವಿನ ಕುರುಹಾದ ಲಿಂಗವು ಕರಸ್ಥಲದಲ್ಲಿ ಸ್ಥಾಪಿತವಾದರೂ ಅದಕ್ಕೆ ಜಂಗಮ ಎಂಬ ಅಭಿನ್ನ ಮುಖವಿದೆ. ಹೇಗೆಂದರೆ ಲಿಂಗದ ಬಾಯಿ ಜಂಗಮ, ಲಿಂಗದ ಬೇರು ಜಂಗಮ ಅಂದರೆ ವ್ಯಕ್ತಿಗತವಾಗಿ ಪೂಜೆಗೊಳ್ಳುವ ಲಿಂಗದ ಸಾರ್ಥಕತೆ ಇರುವದು ಜಂಗಮ ಚೈತನ್ಯದಲ್ಲಿ ಅಂದರೆ ಸಮಷ್ಟಿಯ ಏಳಿಗೆಯಲ್ಲಿ.

ಲಿಂಗವ ಪೂಜಿಸಿ ಫಲವೇನಯ್ಯಾ,
ಸಮರತಿ ಸಮಕಳೆ ಸಮಸುಖವನರಿಯದನ್ನಕ್ಕ?
ಲಿಂಗವ ಪೂಜಿಸಿ ಫಲವೇನಯ್ಯಾ,
ಕೂಡಲಸಂಗಮದೇವರ ಪೂಜಿಸಿ
ನದಿಯೊಳಗೆ ನದಿ ಬೆರಸಿದಂತಾಗದನ್ನಕ್ಕ?
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-265/ವಚನ ಸಂಖ್ಯೆ-930)


ಎಂದು ಸಮದೃಷ್ಟಿ ಕಾಣದ ಲಿಂಗ ಪೂಜೆ ಕೂಡ ವ್ಯರ್ಥ ಎಂಬ ಭಾವವು ಕಾಣುವುದು. ಆ ಲಿಂಗ ಪೂಜೆಯ ಸಾರ್ಥಕತೆ ಸಕಲ ಜೀವಾತ್ಮರ ಲೇಸಿನಲ್ಲಿ ಅಡಗಿದೆ ಎಂಬ ನಿಷ್ಕಾಮ, ನಿಸ್ಪೃಹ ಭಾವ, ಇದಕಿಂತ ಮೌಲಿಕವಾದುದು ಯಾವುದಿರಲು ಸಾಧ್ಯ. ಇದು ಲಿಂಗದಿಂದ ಲಿಂಗವಾಗುವ, ಲಿಂಗದಿಂದ ಜಂಗಮವಾಗುವ ಒಂದು ದಿವ್ಯಯಾನ. ಲಿಂಗವು ವ್ಯಕ್ತಿ ಚೈತನ್ಯದ ಅರಿವಿನ ಕುರುಹಾದರೆ ಜಂಗಮ ಸಮಷ್ಠಿ ಚೈತನ್ಯ. ಇದೇ ಲಿಂಗ ಜಂಗಮದ ಅಭಿನ್ನ ಸಂಬಂಧ. ಇದನ್ನೆ ಈ ವಚನದ ಭಾವ ಸ್ಫುರಿಸುತ್ತಿದೆ.

ಒಳಗೆ ಲಿಂಗದ ಕೂಟ ಹೊರಗೆ ಜಂಗಮದ ಮಾಟ,
ಒಳಹೊರಗೆ ಭಿನ್ನವಿಲ್ಲದೆ ನಿಂದನು,
ಅಳಿವ ಮಾಯಾ ತನುವ ಕಳೆದು ನಿರ್ವಯಲಾದ
ನಿಳಯಪತಿ ಬಸವನೈ ಯೋಗಿನಾಥಾ.
(ಸಿದ್ಧರಾಮೇಶ್ವರರ ಬಸವ ತ್ರಿವಿಧಿ/ಪುಟ ಸಂಖ್ಯೆ-13/ತ್ರಿವಿಧಿ ಸಂಖ್ಯೆ-66)

ಹೀಗೆ ಅಂತರಂಗದಲ್ಲಿ ಬೆಳಕನ್ನು ಕಾಣಲು ಪೂಜೆಗೊಳ್ಳುವ ಲಿಂಗ ಬಹಿರಂಗದಲ್ಲಿ ಸಮಾಜದೊಂದಿಗೆ ಬೆರೆತು ಒಳಹೊರಗಿನ ಬದುಕಿಗೆ ನಿರ್ಮಲವಾದ ಸೇತುವೆಯನ್ನು ಬೆಸೆದು ನಿಸ್ವಾರ್ಥಮಯವಾಗಿ ವಿಶ್ವದೇಹಿಯಾಗಿ, ವಿಶ್ವಚೇತನವಾಗಿ ಬಯಲಾದರು ಅಪ್ಪ ಬಸವಣ್ಣ ಎಂಬ ಸಿದ್ದರಾಮೇಶ್ವರರ ನುಡಿ ಬಸವನ ಮಾಟಕ್ಕೆ ಮೈಲುಗಲ್ಲಾಗಿ ನಿಲ್ಲುವದು.

ಲಿಂಗ ಜಂಗಮಗಳು ಒಂದೇ ನಾಣ್ಯದ ಎರಡು ಮುಖಗಳು. ಇದನ್ನು ಸಿದ್ಧರಾಮೇಶ್ವರರ ಉಪಮೆಗಳ ಮೂಲಕ ನಿರೂಪಣೆ ಮಾಡೋಣ:

ಸಕ್ಕರೆಯ ಬಿಟ್ಟು ರುಚಿಯ ತೆಗೆಯಬಹುದೆ?
ಬೆಣ್ಣೆಯ ಬಿಟ್ಟು ಘೃತವ ತೆಗೆಯಬಹುದೆ?
ಭೂಮಿಯ ಬಿಟ್ಟು ಜಗವ ಮಾಡಬಹುದೆ?
ಜಂಗಮವಿರಹಿತ ಲಿಂಗವಿಲ್ಲ,
ಲಿಂಗವಿರಹಿತ ಜಂಗಮವಿಲ್ಲ ಕೇಳಾ,
ಕಪಿಲಸಿದ್ಧಮಲ್ಲಿಕಾರ್ಜುನಾ.
(ಸಮಗ್ರ ವಚನ ಸಂಪುಟ: ನಾಲ್ಕು-2021/ಪುಟ ಸಂಖ್ಯೆ-327/ವಚನ ಸಂಖ್ಯೆ-1048)

ಸಕ್ಕರೆಯೊಳಗಣ ರುಚಿಯಂತೆ, ಮಜ್ಜಿಗೆಯೊಳಗಣ ಬೆಣ್ಣೆಯಂತೆ, ಲಿಂಗಜಂಗಮದ ಸಂಬಂಧ, ಎರಡೂ ಒಂದೇ ಆಗಿವೆ. ವ್ಯಷ್ಟಿಯಲ್ಲಿ ಚೈತನ್ಯದ ಸ್ವರೂಪ ದರ್ಶನಕ್ಕಾಗಿ ಪೂಜೆಗೊಳ್ಳುವ ಲಿಂಗ, ಸಮಷ್ಟಿಯಲ್ಲಿ ಸಕಲ ಚರಾತರದ ಒಳಿತಿಗಾಗಿ ಮಿಡಿಯುವದೂ ಹಾಗೂ ಮಡಿಯುವದೂ ಆಗಿದೆ.

ಇನ್ನು ಜಂಗಮ ಪ್ರಸಾದವೆಂದರೆ ಯಾವದು? ಈವಚನದ ಮೂಲಕ ನೋಡೋಣ:

ಅಂಗಗುಣವಳಿದು ಲಿಂಗಗುಣವುಳಿದಲ್ಲಿ
ಜಂಗಮಪ್ರಸಾದ ಸಾಧ್ಯವಾಯಿತ್ತು.
ಅಂಗೇಂದ್ರಿಯಗಳು ಲಿಂಗೇಂದ್ರಿಯಗಳಾಗೆ
ಲಿಂಗ ನಾ ನೀನಾದೆ ಯೋಗಿನಾಥಾ.
(ಸಿದ್ಧರಾಮೇಶ್ವರರ ಬಸವ ತ್ರಿವಿಧಿ/ಪುಟ ಸಂಖ್ಯೆ-/ತ್ರಿವಿಧಿ ಸಂಖ್ಯೆ-)

ಅಂಗಭಾವವಳಿದು ಲಿಂಗ ಭಾವ ಉದಿಸಿದಾಗ ನೋಡುವ ಕಾಣುವ ದೃಷ್ಟಿಯೆಲ್ಲವೂ ಲಿಂಗದೃಷ್ಟಿಯೇ ಆದಾಗ ಜ್ಞಾನದ ಅಮೃತ, ಆನಂದದ ಪ್ರಸನ್ನತೆಯೆಂಬ ಅಮೃತ ಸುರಿವದು, ಅದುವೆ ಜಂಗಮ ಪ್ರಸಾದ.

ಜಂಗಮದ ಪಾದೋದಕ ಯಾವುದು? ಸ್ಪಷ್ಟವಾಗಿ ನೋಡೋಣ ಈ ಒಂದು ವಚನದೊಂದಿಗೆ:

ಭಕ್ತಂಗೆ ಜಂಗಮಂಗೆ
ರೂಪದಿಂದ ಭೇದವೊ, ಆಚರಣೆಯಿಂದ ಭೇದವೊ? ಅಲ್ಲಲ್ಲ.
ಭಕ್ತನಾದರೊ, ಮೂರಕ್ಕೆ ಒಳಗು;
ಜಂಗಮವಾದರೊ, ಮೂರಕ್ಕೆ ಹೊರಗು.
ಒಳಗಾದವರಿಗೆ ಹೊರಗಾದವರ ಪಾದೋದಕವಲ್ಲದೆ
ಒಳಗಾದವರ ಪಾದೋದಕ ಸಲ್ಲದು.
ತೆಗೆದುಕೊಂಡವರಿಗೆ ನರಕ ತಪ್ಪದು;
ಕೊಟ್ಟವಂಗೆಯೂ ಭವ ಹಿಂಗದು ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ.
(ಸಮಗ್ರ ವಚನ ಸಂಪುಟ: ನಾಲ್ಕು-2021/ಪುಟ ಸಂಖ್ಯೆ-384/ವಚನ ಸಂಖ್ಯೆ-1234)

ಭಕ್ತ ಜಂಗಮಗಳು ಒಂದೇ ದೇಹ ಎರಡು ಮುಖಗಳು ಅಂದಮೇಲೆ ರೂಪ ಹಾಗೂ ಆಚರಣೆಯಿಂದ ಭೇದವಿಲ್ಲ. ಆದರೆ ಭಕ್ತನಿಗೆ ಸೀಮೆಗಳಿವೆ. ಈ ಬದುಕಿಗೆ ಬೇಕಾದ ಹೆಣ್ಣು, ಹೊನ್ನು, ಮಣ್ಣು ಎಂಬೆಲ್ಲವನ್ನೂ ಅವಶ್ಯಕತೆಗನುಸಾರ ಮಿತಿಯೊಳಗೆ ಬಳಸುವವನು ಭಕ್ತ. ಆದರೆ ಜಂಗಮ ಇವೆಲ್ಲವುಗಳನು ಮೀರಿ ನಿಂತವ. ಈ ಮೂರಕ್ಕೆ ಒಳಗಾದ ಭಕ್ತರು ಸುಜ್ಞಾನದ ಸುಧೆಯೆಂಬ ಪಾದೋದಕವನ್ನು ನಿರಾಭಾರಿ ಜಂಗಮರಿಂದ ಮಾತ್ರ ಸ್ವೀಕರಿಸಬೇಕು.

ನಿಜವಾದ ಜ್ಞಾನ ಜಂಗಮ ಹೇಗಿರುವನು? ನೋಡೋಣ:

ನಿಂದಿಸಿದಲ್ಲಿ ಕುಂದುವನಲ್ಲ ಜಂಗಮನು.
ವಂದಿಸಿದಲ್ಲಿ ಆನಂದಮಯನಲ್ಲ ಜಂಗಮನು.
ಬಂದುಪಚಾರದಲ್ಲಿ ಸಂದುಗೊಳ್ಳುವನಲ್ಲ ಜಂಗಮನು.
ಬಂದಲ್ಲಿ ನೀಡರೆ ಕ್ರೋಧಿಯಲ್ಲ ಜಂಗಮನು.
ಇಂದುಧರ ಕಪಿಲಸಿದ್ಧಮಲ್ಲನೆಂಬೆ
ಇಂತಪ್ಪ ಜಂಗಮನು.
(ಸಮಗ್ರ ವಚನ ಸಂಪುಟ: ನಾಲ್ಕು-2021/ಪುಟ ಸಂಖ್ಯೆ-458/ವಚನ ಸಂಖ್ಯೆ-1462)

ಜಗದ ಎಲ್ಲ ಆಗುಹೋಗುಗಳಿಗೆ ನಿಶ್ಚಿಂತನಾಗಿ, ಹೊಗಳಿಕೆಗೆ ಹಿಗ್ಗದೆ, ತೆಗಳಿಕೆಗೆ ಕುಗ್ಗದೆ, ಪೂಜಿಸಿದಲ್ಲಿ ಆನಂದಿಸದೆ, ನೀಡದಿದ್ದಾಗ ಕೋಪಗೊಳ್ಳದೆ, ಎಲ್ಲವನ್ನು ಸಮಚಿತ್ತ, ಸಮಭಾವ, ಸಮಸ್ಥಿತಿ ಯಿಂದ ಬಂದಂತೆ ಸ್ವೀಕರಿಸುವವನು, ಸ್ಥಿತಪ್ರಜ್ಞನಾಗಿ ಇರುವವನೇ ನಿಜವಾದ ಜಂಗಮ.

ಮುಂದಿನ ವಚನದಲ್ಲಿ ಜಂಗಮದ ವ್ಯಾಪಕತೆ ಇನ್ನೂ ಸ್ಪಷ್ಟವಾಗುವದು:

ಜನನ ಮರಣ ದೇಹಧರ್ಮವಲ್ಲದೆ ಜಂಗಮಕ್ಕೆಲ್ಲಿಹದೋ!
ಕ್ಷುದಾ-ತೃಷೆ ಪ್ರಾಣಧರ್ಮವಲ್ಲದೆ ಜಂಗಮಕ್ಕೆಲ್ಲಿಹದೊ!
ಸುಖ-ದುಃಖ ಮನೋಧರ್ಮವಲ್ಲದೆ ಜಂಗಮಕ್ಕೆಲ್ಲಿಹದೊ!
ಜ್ಞಾನಾಜ್ಞಾನಂಗಳು ಮುಮುಕ್ಷುವಿಂಗಲ್ಲದೆ,
ನಿಮ್ಮಲ್ಲಿ ಸಮರಸವಾದ ಸಚ್ಚಿದಾನಂದ ಶಿವಯೋಗಿ
ಜಂಗಮಕ್ಕೆಲ್ಲಿಹದೊ, ಕಪಿಲಸಿದ್ಧಮಲ್ಲಿಕಾರ್ಜುನಾ!
(ಸಮಗ್ರ ವಚನ ಸಂಪುಟ: ನಾಲ್ಕು-2021/ಪುಟ ಸಂಖ್ಯೆ-451/ವಚನ ಸಂಖ್ಯೆ-1443)

ಹೀಗೆ ಜನನ-ಮರಣ, ಹಸಿವು-ತೃಷೆ, ಸುಖ-ದುಃಖ, ಜ್ಞಾನ-ಅಜ್ಞಾನ ಎಲ್ಲವುಗಳಿಗೆ ಮೀರಿದ ಜಗದ ಹಂಗು ತೊರೆದ ನಿಶ್ಚಿಂತ, ನಿರಾಳ ಜಂಗಮ, ಎಲ್ಲ ಉಪಾಧಿಗಳನೂ ಮೀರಿ ನಿಂತವನು ನಿರುಪಾಧಿಕ ಜಂಗಮ‌. ತನ್ನೆಲ್ಲಾ ಸಾಧನೆಗಳನ್ನೂ ಸಾಧಿಸಿ ಐಕ್ಯಸ್ಥಲವ ಮೆಟ್ಟಿ ನಿಂತು ಅವಶ್ಯವಿರುವ ಭಕ್ತರಿಗಾಗಿ ತನ್ನ ಜ್ಞಾನವನ್ನು ಹಂಚುತ್ತಾ ವಿಶ್ವದೇಹಿಯಾಗಿ ಚರಿಸುವವನೆ ಜಂಗಮ.

ಹೀಗೆ ಜಂಗಮ ಎಂಬುದು ಒಂದು ತತ್ವ, ಚಲನಶೀಲತೆ, ಸಮಾಜ ಚೈತನ್ಯ, ಜ್ಞಾನ ಅಲ್ಲದೆ ಜ್ಞಾನ ಹಂಚುವವ ಎಂಬೆಲ್ಲ ವಿಶಾಲವಾದ ಅರ್ಥ ವ್ಯಾಪ್ತಿಯನ್ನು ಒಳಗೊಂಡದ್ದು. ಇದು ಮೊಗೆದಷ್ಟೂ ತನ್ನ ವ್ಯಾಪ್ತಿಯನ್ನು ವಿಸ್ತರಿಸುವ ಮೌಲಿಕ ಶರಣ ಕೊಡುಗೆಯಾಗಿದೆ.

ಸುನಿತಾ ಮೂರಶಿಳ್ಳಿ,
“ಶಿವಶಕ್ತಿ” ಮಂಜುನಾಥ ಪುರ,
ಮಾಳಮಡ್ಡಿ, ಧಾರವಾಡ.
ಫೋ ನಂ. 9986 437 474

 ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
 ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in / admin@vachanamandara.in

Loading

Leave a Reply