ಶ್ರಾವಣ ವಚನ ಚಿಂತನ-01: ವ್ಯೋಮಕಾಯ ಅಲ್ಲಮ ಪ್ರಭುಗಳ ವಚನ ವಿಶ್ಲೇಷಣೆ / ಡಾ. ಯಲ್ಲಪ್ಪ ಯಾಕೊಳ್ಳಿ, ಯಕ್ಕುಂಡಿ, ಬೆಳಗಾವಿ ಜಿಲ್ಲೆ.

ಮೇರುವ ಸಾರಿದ ಕಾಗೆ ಹೊಂಬಣ್ಣವಾಗದಿದ್ದಡೆ,
ಆ ಮೇರುವಿಂದತ್ತಣ ಹುಲು ಮೊರಡಿಯೆ ಸಾಲದೆ?
ದೇವಾ, ನಿಮ್ಮ ಪೂಜಿಸಿ ಧಾವತಿಗೊಂಬಡೆ,
ಆ ಧಾವತಿಯಿಂದ ಮುನ್ನಿನ ವಿಧಿ [ಯೆ] ಸಾಲದೇ?
ಗುಹೇಶ್ವರಾ, ನಿಮ್ಮ ಪೂಜಿಸಿ ಸಾವಡೆ,
ನಿಮ್ಮಿಂದ ಹೊರಗಣ ಜವನೆ ಸಾಲದೇ?
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-143 / ವಚನ ಸಂಖ್ಯೆ-66)

ಇದು ಶ್ರಾವಣ ಮಾಸದ ಕಾಲ. ಪ್ರತಿ ದಿನ ಒಂದು ಪವಿತ್ರವಾದ ಚಿಂತನೆಯನ್ನು ಮಾಡುವದು ಈ ಮಾಸದ ವೈಶಿಷ್ಟ್ಯ. ಪವಿತ್ರವಾದ ಚಿಂತನೆಯನ್ನು ಮಾಡಲು ಯಾವುದೇ ಮಾಸದ ಅಗತ್ಯವಿಲ್ಲ, ಆದರೂ ಇದೊಂದು ಕಾರಣವಷ್ಟೇ. ಹೀಗೆ ಅಲೋಚಿಸಲು ನಾವು ಹೊರಟಾಗ ನಮಗೆ ಅತ್ಯಂತ ಮಾರ್ಗದರ್ಶಕವಾಗಿ ಸಿಗುವ ಸಾಹಿತ್ಯ ಪ್ರಕಾರ ವಚನ ಸಾಹಿತ್ಯ. ಲೋಕದ ಜನರು ತಮ್ಮ ಬದುಕನ್ನು ಸರಿಯಾದ ದಾರಿಯಲ್ಲಿ ನಡೆಸಲು ಶರಣರು ನೀಡಿದ ಅಮೂಲ್ಯ ಸಾಹಿತ್ಯ ಪ್ರಕಾರವೇ ಶರಣರ ವಚನ ಸಾಹಿತ್ಯ. ಅವು ಜನ ಬದುಕಬೇಕೆಂದು ಶರಣರು ನೀಡಿದ ಅಮೂಲ್ಯ ನಿಧಿಗಳು. ವಚನಗಳನ್ನು ಕುರಿತು ಎಷ್ಟು ಸಾವಿರ ಜನ ಎಷ್ಟು ಬರೆದರೂ ಅದು ತೀರಲಾಗದ ತವನಿಧಿ. ಈ ಶ್ರಾವಣವನ್ನು ನೆಪವಿರಿಸಿಕೊಂಡು ಒಂದು ವಚನದ ಚಿಂತನೆ ಇಲ್ಲಿ ನಾನು ಪ್ರಯತ್ನಿಸಿದ್ದೇನೆ.

ಶರಣ ಗಣದಲ್ಲಿ ಅಲ್ಲಮ ಪ್ರಭುಗಳದು ಮೇರು ವ್ಯಕ್ತಿತ್ವ. ಸಕಲ ಶರಣರಿಗೆ ಗುರುವಾಗಿ. ಮಾರ್ಗದರ್ಶಕರಾಗಿ, ಅನುಭವ ಮಂಟಪದ ಪೀಠಾಧ್ಯಕ್ಷರಾಗಿ ಬಸವಣ್ಣನವರು ಕೈಗೊಂಡ ಅಭೂತಪೂರ್ವವಾದ ಕ್ರಾಂತಿಗೆ ಹೆಗಲಿಗೆ ಹೆಗಲು ಕೊಟ್ಟು ದುಡಿದವರು ಅಲ್ಲಮ ಪ್ರಭುಗಳು. ಅವರು ರಚಿಸಿದ ಸುಮಾರು 1600 ಕ್ಕೂ ಅಧಿಕ ವಚನಗಳನ್ನು ಶರಣರ ಸಮಗ್ರ ವಚನಗಳ ಸಂಪುಟ ಮಾಲಿಕೆಯಲ್ಲಿ ಪೂಜ್ಯ ಗುರುಗಳಾದ ಡಾ. ಬಿ.ವಿ. ಮಲ್ಲಾಪೂರ ಅವರು ಸಂಪಾದಿಸಿ ಕೊಟ್ಟು ಉಪಕರಿಸಿದ್ದಾರೆ. ಆ ಸಂಪುಟದಿಂದ ಈ ವಚನವನ್ನು ಆಯ್ದುಕೊಂಡಿದ್ದೇನೆ. ಶರಣ ಮತ್ತು ದೈವ ಸಂಬಂಧ ಏನು ಪರಿಣಾಮವನ್ನು ಮಾಡಬೇಕು ಎಂಬುದರ ಚಿಂತನೆ ಈ ವಚನದಲ್ಲಿದೆ.

ಭಕ್ತನಾದವನು ಪರಮತ್ಮನ ಪೂಜೆಯಲ್ಲಿ ಪ್ರಮಾಣಿಕ ವಾಗಿ ತೊಡಗಿಕೊಂಡ ಮೇಲೆ ಅವನು ಆ ದೈವದ ಸನ್ನಿಧಿಯ ಸಂಬಂಧವನ್ನು ಹೊಂದಿದ ಮೆಲೆ ಅವನ ಬದುಕು ಪಾವನವಾಗಬೇಕು. ಪರಿವರ್ತಿತವಾಗಬೇಕು. ಸಂಕಟ ದೂರವಾಗಬೇಕು. ಒಂದು ವೇಳೆ ಸಂಕಟಗಳು ದೂರವಾಗಿ ಶಾಶ್ವತ ಸಮಾಧಾನ, ಶಾಂತಿ ಅವನಿಗೆ ದೊರಕದಿದ್ದರೆ ಆ ಪೂಜೆಯಿಂದ ಏನೂ ಲಾಭವಿಲ್ಲ ಎಂಬುದನ್ನು ಇಲ್ಲಿ ಅಲ್ಲಮ ಪ್ರಭಗಳು ಹೇಳುತ್ತಿದ್ದಾರೆ.

ಇದನ್ನು ಪ್ರತ್ಯಕ್ಷಗೊಳಿಸಲು ಮೇರು ಪರ್ವತವನ್ನು ಸಾರಿದ ಕಾಗೆಯ ಉದಾಹರಣೆಯನ್ನು ತಗೆದುಕೊಳ್ಳುತ್ತಾರೆ. ಮೇರು ಪರ್ವತವೆಂದರೆ ತನ್ನ ಹತ್ತಿರ ಬಂದವರಿಗೆಲ್ಲ ಸುವರ್ಣಮಯವಾಗುವ ಅವಕಾಶ ಕೊಡುವ ಪರ್ವತ. ಅಲ್ಲಿಗೆ ಹೋದ ಕಾಗೆ ತನ್ನ ಮುನ್ನಿನ ಬಣ್ಣವನ್ನು ಕಳೆದುಕೊಂಡು ಹೊನ್ನಿನ ಬಣ್ಣವನ್ನು ಹೊಂದಬೇಕು. ಹಾಗಾದಿದ್ದರೆ ಅದು ಅಲ್ಲಿಗೆ ಹೋಗಿ ಲಾಭವಿಲ್ಲ. ಅದು ತನ್ನ ಹುಲ್ಲು ಮೊರಡಿಯಲ್ಲಿಯೇ ಇರುವದು ಒಳಿತು. ಹಾಗೆಯೇ ಭಕ್ತನಾದವನು ಲಿಂಗ ಪೂಜೆ ಎಂಬ ಮಹಾ ಆನಂದಕರವಾದ ಕ್ರಿಯೆಯಲ್ಲಿ ತೊಡಗಿದ ಮೇಲೆ ಅವನಲ್ಲಿ ಲೋಕದ ಸಂಕಟ ಬಾಧೆಗಳು ದೂರವಾಗಿ ಸಣ್ಣತನ, ಕೀಳು ಗುಣಗಳು ಅವನಿಂದ ಮಾಯವಾಗಿ ಅವನು ತನ್ನ ಧಾವತಿಗಳನ್ನು ಕಳೆದುಕೊಂಡು ಸಮಾಧಾನಿಯೂ ಶಾಶ್ವತ ಆನಂದದಲ್ಲಿ ಓಲಾಡುವವನೂ ಆಗಬೇಕು. ಹಾಗಾಗದೇ ಹೋದರೆ ಅವನು ಮಾಡುವ ಪೂಜೆಗೆ ಅರ್ಥವಿಲ್ಲ. ಆಗ ಪೂಜೆಯೂ ಧಾವತಿಯೇ ಎನಿಸುತ್ತದೆ. ಅಂಥ ಧಾವತಿಗಿಂದ ಮೊದಲಿನ ಸ್ಥಿತಿಯೇ ಒಳಿತು ಎನಿಸುತ್ತದೆ. ಆದ್ದರಿಂದಲೇ ಅವರು “ಗುಹೇಶ್ವರಾ, ನಿಮ್ಮ ಪೂಜಿಸಿ ಸಾವಡೆ ನಿಮ್ಮಿಂದ ಹೊರಗಣ ಜವನೇ ಸಾಲದೇ?” ಎಂದು ಸಾರುತ್ತಾರೆ. ಇಲ್ಲಿ ಭಕ್ತನ ಭಕ್ತಿ ಅಷ್ಟು ದೃಢವಾದುದಾಗಿರಬೆಕು ಎಂದು ಹೇಳುವದು ಮುಖ್ಯವಾಗಿದೆ. ಒಟ್ಟಾರೆ ನಾವು ಮಾಡುವ ಪೂಜೆ, ಭಕ್ತಿ ನಮ್ಮನ್ನು ಉನ್ನತಿಯತ್ತ ಒಯ್ಯಬೇಕು, ಸಮಾಧಾನಿಗಳನ್ನಾಗಿ ಶಾಂತರನ್ನಾಗಿ ಮಾಡಬೇಕು. ಇಲ್ಲದಿದ್ದರೆ ಅಂಥ ಸ್ಥಿತಿಯಿಂದ ಲಾಭವಿಲ್ಲ ಎನ್ನುವದನ್ನು ಸಾರುತ್ತಾರೆ.

ಡಾ. ಯಲ್ಲಪ್ಪ ಯಾಕೊಳ್ಳಿ.
ಪ್ರಾಚಾರ್ಯರು,
ಸರ್ಕಾರಿ ಪದವಿ ಪೂರ್ವ ಕಾಲೇಜು,
ಯಕ್ಕುಂಡಿ, ಬೆಳಗಾವಿ ಜಿಲ್ಲೆ.
ಮೋಬೈಲ್‌ ಸಂ. 97319 70857

ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in

Loading

Leave a Reply