
ಬೆವಸಾಯವ ಮಾಡಿ ಮನೆಯ ಬೀಯಕ್ಕೆ ಬತ್ತವಿಲ್ಲದಿರ್ದಡೆ
ಆ ಬೆವಸಾಯದ ಘೋರವೇತಕ್ಕಯ್ಯಾ?
ಕ್ರಯವಿಕ್ರಯವ ಮಾಡಿ ಮನೆಯಸಂಚ ನಡೆಯದನ್ನಕ್ಕ
ಆ ಕ್ರಯವಿಕ್ರಯದ ಘೋರವೇತಕ್ಕಯ್ಯಾ?
ಒಡೆಯನನೋಲೈಸಿ ತನುವಿಂಗೆ ಅಷ್ಟಭೋಗವ ಪಡೆಯದಿರ್ದಡೆ
ಆ ಓಲಗದ ಘೋರವೇತಕ್ಕಯ್ಯಾ?
ಭಕ್ತನಾಗಿ ಭವಂ ನಾಸ್ತಿಯಾಗದಿರ್ದಡೆ
ಆ ಉಪದೇಶವ ಕೊಟ್ಟ ಗುರು ಕೊಂಡ ಶಿಷ್ಯ
ಇವರಿಬ್ಬರ ಮನೆಯಲಿ ಮಾರಿ ಹೊಗಲಿ
ಗುಹೇಶ್ವರನೆಂಬವನತ್ತಲೆ ಹೋಗಲಿ
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-143 / ವಚನ ಸಂಖ್ಯೆ-65)
ಶರಣರು ಈ ಬದುಕನ್ನು ಕುರಿತು ಮಾಡಿದ ಚಿಂತನೆ ಸದಾ ಧನಾತ್ಮಕವಾಗಿ ಇರುತ್ತಿತ್ತು. ಇಲ್ಲಿರುವ ಬದುಕನ್ನು ಸುಂದರ ವಾಗಿಸದೆ. ಅಲ್ಲಿನ ಬದುಕನ್ನು ಸುಂದರಗೊಳಿಸುವತ್ತಲೇ ಚಿಂತಿಸುವ ವಿಧಾನವನ್ನು ಅವರು ಒಪ್ಪಲಿಲ್ಲ. ಮೊದಲು ಇಹದ ಬದುಕು ಸುಂದರವಾಗಬೇಕು ಎಂಬುದು ಅವರ ಅಭಿಮತವಾಗಿತ್ತು. ಈ ಅರ್ಥದಲ್ಲಿ ಅವರ ವಚನಗಳಿಗೆ ಎಲ್ಲ ಕಾಲಕ್ಕೂ ಸಲ್ಲುವ, ಯೋಗ್ಯವೆನಿಸುವ ಅರ್ಥವಂತಿಕೆಯಿದೆ.
ಅಲ್ಲಮಪ್ರಭುಗಳ ವಚನಗಳು ಅಲೌಕಿಕ ಘನತೆಯಿಂದ ಕೂಡಿದಷ್ಟೇ ಪಾತ್ರದಲ್ಲಿ ಲೌಕಿಕ ಚಿಂತನೆಯನ್ನೂ ನಡೆಸಿವೆ. ಅವರ ಆಲೋಚನೆ ನಮ್ಮ ಇಹದ ಬದುಕನ್ನು ಅರ್ಥಪೂರ್ಣವಾಗಿ ಕಳೆಯುವದರತ್ತಲೇ ಇರುವದನ್ನು ಅನೇಕ ವಚನಗಳ ಓದು ನಮಗೆ ಮನಗಾಣಿಸುತ್ತದೆ. ಈ ಲೋಕದಲ್ಲಿರುವವರೆಗೆ ಈ ಲೋಕದಿಂದ ಸಂತಸವನ್ನು ಪಡೆಯಬೇಕು ಮತ್ತು ಲೋಕವೂ ಅಷ್ಟೇ ಆನಂದವನ್ನು ಅನುಭವಿಸಬೇಕು ಎಂಬ ವಿಚಾರವನ್ನು ಅವರ ವಚನಗಳು ಸಾರುತ್ತವೆ.
ಭಕ್ತಿಯಾಗಲಿ, ಲೌಕಿಕದ ಯಾವುದೆ ಕಾಯಕವಾಗಲಿ ನಮಗೆ ನೀಡುವ ಫಲ ಸಾರ್ಥಕವಾಗಿರಬೇಕು. ಇರದಿದ್ದರೆ ಆ ಭಕ್ತಿಗೂ ಆ ಕಾಯಕಕ್ಕೂ ಅರ್ಥವೇ ಇಲ್ಲ ಎನ್ನುತ್ತಾರೆ ಅಲ್ಲಮ ಪ್ರಭುಗಳು. ಭಕ್ತಿಯ ಅಂತಿಮ ಉದ್ದೇಶ ಭವ ನಾಸ್ತಿಯಾಗುವದು ಎನ್ನುವದನ್ನು ಹೇಳಲು ಲೌಕಿಕ ಉದಾಹರಣೆಗಳ ಸಮೇತ ಉದಾಹರಿಸುತ್ತಾರೆ.
ಇಡೀ ವಚನ ಸಾಹಿತ್ಯ ಲೌಕಿಕದ ಉದಾಹರಣೆಗಳಿಂದ ತುಂಬಿಕೊಂಡು ತಾತ್ವಿಕ ಚಿಂತನೆಯತ್ತ ಸಾಗುತ್ತದೆ. ಕೃಷಿ, ಅಸಿ, ಮಸಿ, ವ್ಯಾಪಾರ ಇವು ಅಂದಿನ ಕಾಯಕಗಳಾಗಿದ್ದವು. ನಾವು ಏನನ್ನೇ ಮಾಡಲಿ ಅದರಿಂದ ನಮ್ಮ ಇಹದ ಬದುಕನ್ನು ಬದುಕಲು ಲಾಭ ಇರಬೇಕಲ್ಲವೆ? ಒಂದು ವೇಳೆ ನೀವು ಕೃಷಿಕರಾದ ಮೇಲೆ ನಿಮ್ಮ ದಿನದ ಇರುವಿಕೆಗೆ ಖರ್ಚಿಗೆ ಹಣ ದೊರಕಲೆ ಬೇಕು. ಮನೆಯ ವ್ಯಯಕ್ಕೆ ಅಗತ್ಯವಾದ ಧನ ಕೊಡದಿದ್ದರೆ ಆ ಕೃಷಿಯಿಂದ ಏನೂ ಲಾಭವಿಲ್ಲ. ಹಾಗೆಯೇ ಮಾರುವದು ತೆಗೆದುಕೊಳ್ಳುವದು ಈ ಕ್ರಯ ವಿಕ್ರಯವ ಮಾಡಿ ನಮಗೆ ಒಂದಿಷ್ಟಾದರೂ ಬದುಕು ನಡೆಸಲು ಲಾಭವಿರದಿದ್ದರೆ ಆ ವ್ಯಾಪಾರ ಘೋರ ಎನಿಸುತ್ತದೆ. ಮೂರನೆಯದಾಗಿ ಅವರು ಕೊಡುವ ಕಾಯಕದ ಉದಾಹರಣೆ ರಾಜನ ಊಳಿಗದಲ್ಲಿ ಮಾಡುವ ಸೇವೆಯದು. ಒಡೆಯರನ್ನು ಅಂದರೆ ದೊರೆಗಳ ಸೇವೆಯನ್ನು ಮಾಡಿದಾಗ ಅವನಿಗೆ ಸಂಬಳದ ರೂಪದಲ್ಲಿ ಬರಬೇಕಾದ ಹಣ ಅವನ ವೈಯಕ್ತಿಕ ಕೌಟುಂಬಿಕ ಬದುಕನ್ನು ಅರ್ಥಪೂರ್ಣವಾಗಿ ಸಾಗಿಸುವಷ್ಟಾದರೂ ದೊರಕಬೇಕು. ಹಾಗೆ ದೊರಕದಿದ್ದರೆ ಆ ಊಳಿಗದ ಸೇವೆಗೆ ಅರ್ಥವೇ ಇಲ್ಲ.
ಹೀಗೆ ನಾಲ್ಕು ಉದಾಹರಣೆಗಳನ್ನು ನೀಡಿದ ಪ್ರಭುಗಳು ತಾವು ಹೇಳಬೇಕಾದ ಮುಖ್ಯ ವಿಷಯಕ್ಕೆ ಬರುತ್ತಾರೆ. ಅದೆಂದರೆ ಭಕ್ತ ಗುರುವಿನ ಹತ್ತಿರ ಹೋಗಿ ತನ್ನ ಭವ ನಾಶವಾಗಲಿ ಎಂದು (ಸಂಕಟಗಳೆಲ್ಲ ಕಳೆದು ತನ್ನ ದೈವದ ಸ್ಮರಣೆಯ ಸಂತೋಷ ಒದಗಬೇಕು) ಅಲ್ಲಿದ್ದು ಅಧ್ಯಯನ ಮಾಡುತ್ತಿರುತ್ತಾನೆ. ಗುರುವಿನ ಸಾಮಿಪ್ಯದಿಂದ ಆ ಸಂತೋಷ ದೊರಕದಿದ್ದರೆ ಅದು ವ್ಯರ್ಥ ಎನ್ನುವಲ್ಲಿ:
ಭಕ್ತನಾಗಿ ಭವ ನಾಶವಾಗದಿದ್ದಡೆ
ಆ ಉಪದೇಶವ ಕೊಟ್ಟ ಗುರು ಕೊಂಡ ಶಿಷ್ಯ
ಇವರಿಬ್ಬರ ಮನೆಯಲ್ಲಿ ಮಾರಿ ಹೋಗಲಿ
ಎನ್ಜುವ ತೀರ್ಮಾನಕ್ಕೆ ಬರುತ್ತಾರೆ. ಕಾರಣ ಭಕ್ತನಾದವನು ಗುರುವಿನ ಹತ್ತಿರ ಇದ್ದು ಪಡೆಯಬೇಕಾದ ಲಾಭ ಅವನ ಬದುಕನ್ನು ಸಾರ್ಥಕ ಮಾಡಿಕೊಂಡು ಶಾಶ್ವತವಾದ ಆನಂದವನ್ನು ಪಡೆಯುವದು ಸಾರ್ಥಕವಾದದ್ದು ಎನ್ನುತ್ತಾರೆ. ಹೀಗೆ ಭಕ್ತಿಯಿಂದ ಮಾತ್ರವಲ್ಲ ಬದುಕಿನ ವಿಧಾನವು ಸಾರ್ಥಕತೆಯನ್ನು ಲಾಭಗಳನ್ನು, ಲೌಕಿಕದ ಕಾರ್ಯವನ್ನು ಸಸಾರಗೊಳಿಸುವದಾಗಬೇಕು ಎನ್ನುವದನ್ನು ಈ ವಚನ ಸಾರುತ್ತದೆ.
ಡಾ. ಯಲ್ಲಪ್ಪ ಯಾಕೊಳ್ಳಿ.
ಪ್ರಾಚಾರ್ಯರು,
ಸರ್ಕಾರಿ ಪದವಿ ಪೂರ್ವ ಕಾಲೇಜು,
ಯಕ್ಕುಂಡಿ, ಬೆಳಗಾವಿ ಜಿಲ್ಲೆ.
ಮೋಬೈಲ್ ಸಂ. 97319 70857
ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in