
ಅಕ್ಷರವ ಬಲ್ಲೆವೆಂದು ಅಹಂಕಾರವೆಡೆಗೊಂಡು, ಲೆಕ್ಕಗೊಳ್ಳರಯ್ಯಾ.
ಗುರು ಹಿರಿಯರು ತೋರಿದ ಉಪದೇಶದಿಂದ;
ವಾಗದ್ವೈತವನೆ ಕಲಿತು ವಾದಿಪರಲ್ಲದೆ, ಆಗು-ಹೋಗೆಂಬುದನರಿಯರು.
ಭಕ್ತಿಯನರಿಯರು ಮುಕ್ತಿಯನರಿಯರು,
ಮತ್ತೂ ವಾದಕೆಳಸುವರು,
ಹೋದರು, ಗುಹೇಶ್ವರಾ ಸಲೆ ಕೊಂಡಮಾರಿಗೆ.
(ಸಮಗ್ರ ವಚನ ಸಂಪುಟ: ಎರಡು-2016 / ಪುಟ ಸಂಖ್ಯೆ-144 / ವಚನ ಸಂಖ್ಯೆ-69)
ಅಕ್ಷರ ಕಲಿಕೆಯ ಮಿತಿಯನ್ನು ಅಲ್ಲಮಪ್ರಭುಗಳು ಹೇಳುವ ರೀತಿ ಅರ್ಥಪೂರ್ಣವಾಗಿದೆ. ವಿದ್ಯೆ ವಿನಯವನ್ನು ಕೊಡಬೇಕು. ನಮ್ಮ ಹಿರಿಯರೇನೋ “ವಿದ್ಯಾ ದದಾತಿ ವಿನಯಂ” ಎಂದಿದ್ದರು. ಆದರೆ ವಿದ್ಯೆ ಪಡೆದ ಕೆಲವರು ವಿದ್ಯೆಗೆ ವಿನಯ ವೇಭೂಷಣ ಎಂಬುದನ್ನರಿಯದೆ ತಾವು ಕಲಿತವರೆಂಬ ಅಹಮ್ಮಿನಲ್ಲಿ ತಿರುಗುತ್ತಿರುವ ಸಂಗತಿಗಳು ಆಗಲೂ ಇದ್ದುವೆಂದು ಕಾಣಿಸುತ್ತದೆ. ಆದ್ದರಿಂದಲೇ ಚಿಂತಕರಾದ ಅಲ್ಲಮಪ್ರಭುಗಳು ವಿದ್ಯೆಯ ಮಿತಿಗಳನ್ನು ಒಂದು ವಚನದಲ್ಲಿ ಹೇಳುತ್ತಾರೆ.
ಇಡೀ ವಚನ ಅಕ್ಕರ ಬಲ್ಲ ಅಹಂಕಾರಿಗಳನ್ನು ತರಾಟೆಗೆ ತಗೆದುಕೊಳ್ಳುತ್ತದೆ. ಎಲ್ಲ ಅಹಂಕಾರಿಗಳಂತೆ ಅಕ್ಕರ ಬಲ್ಲೆವೆಂಬುದೂ ಒಂದು ಅಹಂಕಾರವೇ ಆಗಿರುವದು ಇಂದಿನ ದುರಂತ. ಅದು ಅಂದಿಗೂ ಅಷ್ಟೇ ಸತ್ಯವಾಗಿತ್ತು ಎನಿಸುತ್ತದೆ. ನಾನು ಕಲಿತವನು ಎಂಬ ಹಮ್ಮು ತಲೆಗೇರಿದರೆ ಅವನನ್ನು ಹಿಡಿಯುವವರಾರು ಇರರು. ಅದನ್ನೆ “ಅಹಂಕಾರವೆಡೆಗೊಂಡು ಲೆಕ್ಕಗೊಳ್ಳರಯ್ಯಾ” ಎಂಬ ಮಾತಿನಲ್ಲಿ ಸೂಚಿಸುತ್ತಾರೆ. ಅಂತೆಯೆ ಇಂತಹ ಡಂಬಕೋರರನ್ನು ಅಲ್ಲಮಪ್ರಭುಗಳು ಅಕ್ಷರ ಬಲ್ಲವರು ಎಂದು ಟೀಕಿಸುತ್ತಾರೆ. ಅವರು ಕಲಿತದ್ದು ಗುರುಹಿ-ರಿಯರ ವಿದ್ಯೆ ನೀಡುವಿಕೆಯಿಂದಲೇ ಹೊರತು ಸ್ವಂತ ಅರ್ಜನೆಯೇನಲ್ಲ. ಆದರೂ ನಾನು ಎಂಬ ಅಹಮ್ಮು ಬಂದು ಬಿಟ್ಟಿರುತ್ತದೆ. ಇವರಿಗೆ ಆಗು ಹೋಗೆಂಬುದು ತಿಳಿಯದು.
ಭಕ್ತಿಯೂ ಸಾಧ್ಯವಾಗದು, ಯುಕ್ತಿಯೂ ಸಾಧ್ಯವಾಗದು, ಮುಕ್ತಿಯೂ ಸಾಧ್ಯವಾಗದು. ಅಂದರೆ ಲೌಕಿಕ ಪಾರಲೌಕಿಕಗಳು ಸಾಧ್ಯವಾಗಲಾರವು. ಆದರೂ ವಾದಿಸುವದು ಬಿಡುವದಿಲ್ಲ. ಅದು ಕೇವಲ ವಾಗ್ವದೈತ ಅಷ್ಠೇ. ಇಂತಹ ಜನರನ್ನು ಅಲ್ಲಮ ಪ್ರಭುಗಳು ಉಗ್ರವಾಗಿಯೇ ಮತ್ತು ವಾದಕೆಳಸುವ ಇವರನ್ನು ಮಾರಿಕೊಂಡು ಹೋಗಲಿ ಎನ್ನುತ್ತಾರೆ.
ಒಟ್ಟಾರೆ ವಚನದ ಅರ್ಥ ಇರುವುದೆ ಅಕ್ಕರ ಕಲಿತ ಮಾತ್ರಕ್ಕೆ ಅಹಂಕಾರಿಗಳಾದ ಡಂಬಿಕರನ್ನು ವಿಡಂಬಿಸುವುದರ ಕುರಿತು.
ಡಾ. ಯಲ್ಲಪ್ಪ ಯಾಕೊಳ್ಳಿ.
ಪ್ರಾಚಾರ್ಯರು,
ಸರ್ಕಾರಿ ಪದವಿ ಪೂರ್ವ ಕಾಲೇಜು,
ಯಕ್ಕುಂಡಿ, ಬೆಳಗಾವಿ ಜಿಲ್ಲೆ.
ಮೋಬೈಲ್ ಸಂ. 97319 70857
ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in