ಶ್ರಾವಣ ವಚನ ಚಿಂತನ-04: ವ್ಯೋಮಕಾಯ ಅಲ್ಲಮ ಪ್ರಭುಗಳ ವಚನ ವಿಶ್ಲೇಷಣೆ / ಡಾ. ಯಲ್ಲಪ್ಪ ಯಾಕೊಳ್ಳಿ, ಯಕ್ಕುಂಡಿ, ಬೆಳಗಾವಿ ಜಿಲ್ಲೆ.

ಎಣ್ಣೆ ಬೇರೆ ಬತ್ತಿ ಬೇರೆ; ಎರಡೂ ಸೇರಿ ಸೊಡರಾಯಿತ್ತು.
ಪುಣ್ಯ ಬೇರೆ‌ ಪಾಪ ಬೇರೆ; ಎರಡೂ ಕೂಡಿ ಒಡಲಾಯಿತ್ತು.
ಮಿಗಬಾರದು, ಮಿಗದಿರಬಾರದು,
ಒಡಲಿಚ್ಛೆಯ ಸಲಿಸದೆ ಸಲಿಸದೆ ನಿಮಿಷವಿರಬಾರದು.
ಕಾಯಗುಣವಳಿದು ಮಾಯಾಜ್ಯೋತಿ ವಾಯುವ ಕೂಡುವ‌ ಮುನ್ನ,
ಭಕ್ತಿಯ ಮಾಡಬಲ್ಲಡೆ ಆತನೆ ದೇವ ಗುಹೇಶ್ವರಾ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-144 / ವಚನ ಸಂಖ್ಯೆ-71)

ಭಕ್ತಿ ಮಾಡಲು ಸಮಯಾಸಮಯವಿಲ್ಲ. ಸಾಧ್ಯವಿದ್ದಾಗಲೇ ಮಾಡಿ ಮುಗಿಸಬೇಕು. ನಾಳೆ ನಾಡದು ಎಂದರೆ ಅದು ಸಾಧಗುವಾಗುವದಿಲ್ಲ. ಭಕ್ತಿಯನ್ನು ಮಾಡುವ ಅವಕಾಶವನ್ನು ಆದಷ್ಟೂ ಮುಂದೂಡುವ ಸ್ವಭಾವ ನಮ್ಮದು. ಇಂಥಹ ಸ್ವಭಾವವನ್ನು ವಿರೋಧಿಸುವ ಅಲ್ಲಮಪ್ರಭುಗಳು ಭಕ್ತಿ‌ಮಾಡುವಲ್ಕಿ ಹಿಂಜರಿಯಬಾರದು ಎಂಬುದನ್ನು ಹೇಳುತ್ತಾರೆ.

ಭಕ್ತಿ ಮಾಡಿದಾಗಲೇ ಕಾಯಗುಣವಳಿದು ಮಾಯಾಜ್ಯೋತಿ ವಾಯುವ ಕೂಡುವ ಮುನ್ನ ಭಕ್ತಿ ಮಾಡಿದರೆ ಅವನು ದೇವನೇ ಆಗುತ್ತಾನೆ ಎನ್ನುತ್ತಾರೆ ಅಲ್ಲಮಪ್ರಭುಗಳು. ಭಕ್ತಿ ಎಂಬುದರ ಸಾಧನೆ ಸಾಮಾನ್ಯವಾದುದಲ್ಲ. ಅದು ಸವೆಯೆ ಬಳಸುವದು. ಹೋಗುತ್ತಲು ಕೋಯ್ವ ಬರುತ್ತಲೂ ಕೊಯ್ವ ಇಬ್ವಾಯ ಕರಗಸ ಎನ್ನುತ್ತಾರೆ ಬಸವಣ್ಣನವರು. ಭಕ್ತಿಯನ್ನು ಮಾಡುವದರಿಂದ ನೀ ದೇವನೇ ಆಗುವೆ ಎನ್ನುವ ಪ್ರಭುಗಳು ಇನ್ನೊಂದೆಡೆ ನಾ ದೇವ ಎಂದು ಘೊಷಿಸಿದ್ದು ಉಂಟು. ಭಕ್ತಿಯ ಬಲವೇ ಅವರಿಗೆ ಆ ಶಕ್ತಿ ಕೊಟ್ಟಿತು ಎನ್ನಬೇಕು. ಈ ಚಿಂತನೆ ಅವರ ಪ್ರಸ್ತುತ ವಚನದಲ್ಲಿದೆ.

ಭಕ್ತಿಯೇ ಬೇರೆ ನಮ್ಮ ಬದುಕೇ ಬೇರೆ ಎನ್ನುವ ದ್ವಂದ್ವವಾದಿಗಳನ್ನು ಇಲ್ಲಿ ಟೀಕಿಸುವ ಪ್ರಭುಗಳು ಅದು ಜೀವನದ ಒಂದು ಭಾಗವೇ ಎಂದರಿಯಬೇಕು ಎನ್ನುವ ಎಚ್ಚರಿಕೆಯನ್ನು‌ ಕೊಡುತ್ತಾರೆ. ಅದಕ್ಕೆ ದೀಪದ ರೂಪಕವನ್ನು‌ ನೀಡುತ್ತಾರೆ. ಎಣ್ಣೆ ಬೇರೆ ಬತ್ತಿ ಬೇರೆ ಎಂದು ಅಂತರ ಮಾಡಿದರೆ ದೀಪ ಉರಿದು ಬೆಳಕು ಕೊಡದು. ನೋಡುವದಕ್ಕೆ ಎರಡೂ ಬೇರೇ ಆದ ದೀಪ ಎಣ್ಣೆಗಳು ಪಣತಿಯಲ್ಲಿ ಕೂಡಿ ಉರಿದು ಕಾಂತಿ‌ ಕೊಡುತ್ತವೆ. ಹಾಗೆಯೇ ಮನುಷ್ಯ ತನ್ನ ಇರುವಿಕೆಯಲ್ಲಿಯೆ ಭಕ್ತಿಯನ್ಬು ಅಂದರೆ ಲೌಕಿಕದ ಜೊತೆ ಜೊತೆಗೆ ಭಕ್ತಿಯನ್ನು ಅನುಸರಿಸಬೇಕು. ಪಾಪ ಬೇರೆ, ಪುಣ್ಯ ಬೇರೆ ಇಲ್ಲ. ಎರಡನ್ನೂ‌ ಮಾಡುವ ಒಡಲು ಒಂದೆ ಇದೆ. ಹಾಗೆಯೆ ಈ ಒಡಲಾಸೆಯನ್ನು ಸಲಿಸುತ್ತಲೇ ಪಾರಮಾರ್ಥದ ದಾರಿಯೆಡೆ ಸಾಗಬೇಕು. ಅದುವೆ‌ ಜಾಣ್ಮೆ. ಅದನ್ನು ಬಿಟ್ಟು ಇದು ಇದನ್ನು ಬಿಟ್ಟು ಅದು ಇಲ್ಲ. ಹೀಗೆ ಎರಡನ್ನೂ ಬಾಳು ಇರುವಾಗಲೇ ಹೊಂದಿಸಿಕೊಂಡು ಹೋಗಬೇಕು. ಮಿಗಬಾರದು ಮಿಗದಿರಬಾರದು ಎನ್ನುವ ಮಾತು ಬಹಳ ಸುಂದರವಾಗಿ ಎರಡರ ಒಳಗೊಳ್ಳುವಿಕೆ ಮಹತ್ವ ಸಾರಿದೆ. ಕಾಯ ಧರಿಸಿ ಬಂದ ಮೇಲೆ ಅದರ ಆಶೆಗಳನ್ನು‌ ಪೂರೈಸದೆ ಹೋದರೆ ಅದು ಅತೃಪ್ತವಾಗಿ ಪರಿವರ್ತಿತವಾಗಿತ್ತದೆ. ದೇಹದ ಇಚ್ಛೆಗಳ ವಿರುದ್ಧ ಹೋಗಲಾಗದು. ಅದನ್ನು ಪೂರೈಸುತ್ತ ಅದರ ಗುಣ ಅಳಿಯುವದು. ಕಾಯಗುಣ ಅಳಿದು ಒಳಗಿರುವ ಪ್ರಾಣವೆಂಬ ಜ್ಯೋತಿ ಆ ಪರಂಜ್ಯೋತಿ ಸೇರುವ ಮುನ್ನವೆ ಭಕ್ತಿ ಸಾಧನೆ ಸಾಧ್ಯವಾದರೆ ನೀನೂ ದೇವನಾಗುವೆ ಎನ್ನುವ ಸರಳ ಹಾದಿಯನ್ನು ಸೂಚಿಸುತ್ತಾರೆ. ಇರುವ ಬಾಳನ್ನು ದೈವದ ಪಥವನ್ನಾಗಿಸುವದು ಭಕ್ತಿಯೊಂದೇ ಎಂದು ಸಾರುತ್ತಾರೆ.

ಡಾ. ಯಲ್ಲಪ್ಪ ಯಾಕೊಳ್ಳಿ.
ಪ್ರಾಚಾರ್ಯರು,
ಸರ್ಕಾರಿ ಪದವಿ ಪೂರ್ವ ಕಾಲೇಜು,
ಯಕ್ಕುಂಡಿ, ಬೆಳಗಾವಿ ಜಿಲ್ಲೆ.
ಮೋಬೈಲ್‌ ಸಂ. 97319 70857

ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
 ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in

Loading

Leave a Reply