
ಕಳ್ಳಗಂಜಿ ಕಾಡಹೊಕ್ಕಡೆ ಹುಲಿ ತಿಂಬುದ ಮಾಬುದೇ?
ಹುಲಿಗಂಜಿ ಹುತ್ತವ ಹೊಕ್ಕಡೆ ಸರ್ಪ ತಿಂಬುದ ಮಾಬುದೆ?
ಕಾಲಗಂಜಿ ಭಕ್ತನಾದಡೆ ಕರ್ಮ ತಿಂಬುದ ಮಾಬುದೇ?
ಇಂತೀ ಮೃತ್ಯುವಿನ ಬಾಯ ತುತ್ತಾದ,
ವೇಷಡಂಬಕರ ನಾನೇನೆಂಬೆ ಗುಹೇಶ್ವರಾ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-144 / ವಚನ ಸಂಖ್ಯೆ-73)
ಭಕ್ತಿಯ ಕುರಿತು ಶರಣರು ಮಾಡಿದ ಚಿಂತನೆ ವೈಜ್ಞಾನಿಕ ಮತ್ತು ಆಧಾರಪೂರ್ವಕವಾಗಿದೆ. ಭಕ್ತಿಯನ್ನು ಹೇಗೆ ಮಾಡಬೇಕು? ಇದು ಶರಣರು ತಮ್ಮನ್ನು ತಾವು ಕೇಳಿಕೊಂಡ ಪ್ರಶ್ನೆ. ಅವರಿಗಿಂತ ಪೂರ್ವ ಕಾಲದಿಂದಲೂ ಮತ್ತು ಅವರ ಕಾಲಘಟ್ಟದಲ್ಲೂ ಸಹಿತ ಧಾರ್ಮಿಕ ವ್ಯವಸ್ಥೆ ಭಕ್ತಿಗೆ ಆಡಂಬರದ ವೇಷವನ್ನು ತೊಡಿಸಿ ದೇವರ ಹೆಸರಿನಲ್ಲಿ ಢಂಬಾಚಾರ ಮಾಡುವವರು ತಮ್ಮ ಶ್ರೀಮಂತಿಕೆಯ ಮೂಲಕ ಭಕ್ತರೆಂದು ಗೌರವಿಸಲ್ಪಡುತ್ತಿದ್ದರು. ದೇವರ ಹೆಸರಿನಲ್ಲಿ ಪ್ರಾಣಿ ಬಲಿ ಕೊಟ್ಟು ಭಕ್ತರೆನ್ನಿಸಿಕೊಳ್ಳುವ ಕ್ರೂರ ವ್ಯವಸ್ಥೆ ಇದ್ದಿತು. ಆದರೆ ಮಾನವೀಯ ನೆಲೆಯ ಮೇಲೆ ಭಕ್ತಿಯನ್ನು ಅರ್ಥೈಸಲು ಕಲಿಸಿಕೊಟ್ಟವರು ಬಸವಾದಿ ಶರಣರು.
ಅವರ ಭಕ್ತಿಯ ವ್ಯಾಖ್ಯಾನ ಬಡವ-ಶ್ರೀಮಂತ, ಬಲಿಷ್ಠ-ಕನಿಷ್ಠ ಎಂಬ ಭೇದಗಳನ್ನು ಮಾಡದೇ ಅದು ಮನುಷ್ಯನ ಸಹಜ ಅರ್ಪಣೆಯನ್ನು ಮಾಡುವದಾಗಿತ್ತು. ದೇವರಿಗೆ ಹೆದರಿ ಭಕ್ತಿ ಮಾಡುವುದನ್ನು ಶರಣರು ವಿರೋಧಿಸುತ್ತಾರೆ. ಭಯ ಮೂಲವಾದುದು ಭಕ್ತಿಯಲ್ಲ, ಬದಲಾಗಿ ಅದು ನಿಜವಾದ ಪ್ರೇಮ ಸ್ವರೂಪ. ಯಾರ ಒತ್ತಾಯಕ್ಕೂ ಒತ್ತಾಸೆಗೂ ಮಾಡುವಂಥದಲ್ಲ. ಹಾಗೆ ಒತ್ತಾಯಮಾಡಿ ಮಾಡುವ ಭಕ್ತಿಯನ್ನು ಅಲ್ಲಮಪ್ರಭುಗಳು ತಮ್ಮ ಈ ಪ್ರಸ್ತುತ ವಚನದಲ್ಲಿ ವಿವರಿಸಿದ್ದಾರೆ.
ಇಲ್ಲಿ ಪ್ರಭುಗಳು ಅವರಿವರ ಒತ್ತಾಯ, ಹೆದರಿಕೆಗೆ ಭಕ್ತಿ ಮಾಡುವವರ ಪರಿಯನ್ನು ವಿವರಿಸುತ್ತಾ ಅದು ವಿಫಲವಾಗುತ್ತದೆ ಎಂಬುದನ್ನು ನಿರೂಪಣೆ ಮಾಡಿದ್ದಾರೆ. ಒಂದು ರೂಪಕದಿಂದ ಈ ವಚನ ಆರಂಭವಾಗುತ್ತದೆ. ಕಳ್ಳನೊಬ್ಬ ನಮ್ಮ ವಸ್ತು ಅಪಹರಿಸುತ್ತಾನೆಂದು ಅವನಿಗೆ ಹೆದರಿ ಕಾಡನ್ನು ಹೊಕ್ಕರೆ ಅಲ್ಲಿ ಹುಲಿಯಂಥ ಕ್ರೂರ ಪ್ರಾಣಿಗಳು ಕೊಲ್ಲದೆ ಬಿಡುವದಿಲ್ಲ. ಹಾಗೆಯೆ ಹುಲಿಗೆ ಹೆದರಿ ಹುತ್ತವನು ಹೊಕ್ಕರೆ ಸರ್ಪ ಕಚ್ಚದೇ ಬಿಡದು. ಹಾಗೆಯೆ ಭಕ್ತಿಯ ಸ್ಥಿತಿಕೂಡಾ. ಕಾಲಕ್ಕೆ ಹೆದರಿ ಭಕ್ತನಾದಡೆ, ಅದು ಅರ್ಥಹೀನ. ಅಂಥಹ ಡಾಂಬಿಕ ಭಕ್ಕಿ ಮೃತ್ಯುವನ್ನು ತರುವುದು. ಇಂತಹ ಭಕ್ತರು ವೇಷಡಂಬಕರು ಎಂದು ವಿಡಂಬನೆಯ ಮೂಲಕ ವಿವರಣೆ ನೀಡಿದ್ದಾರೆ.
ಇಡೀ ವಚನ ಅರ್ಥದೃಷ್ಟಿಯಿಂದ ಮಾತ್ರವಲ್ಲದೆ ಸೌಂದರ್ಯದ ದೃಷ್ಟಿಯಿಂದಲೂ ಗಮನ ಸೆಳೆಯುತ್ತದೆ.
ಡಾ. ಯಲ್ಲಪ್ಪ ಯಾಕೊಳ್ಳಿ.
ಪ್ರಾಚಾರ್ಯರು,
ಸರ್ಕಾರಿ ಪದವಿ ಪೂರ್ವ ಕಾಲೇಜು,
ಯಕ್ಕುಂಡಿ, ಬೆಳಗಾವಿ ಜಿಲ್ಲೆ.
ಮೋಬೈಲ್ ಸಂ. 97319 70857
ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in