ಶ್ರಾವಣ ವಚನ ಚಿಂತನ-07: ವ್ಯೋಮಕಾಯ ಅಲ್ಲಮ ಪ್ರಭುಗಳ ವಚನ ವಿಶ್ಲೇಷಣೆ / ಡಾ. ಯಲ್ಲಪ್ಪ ಯಾಕೊಳ್ಳಿ, ಯಕ್ಕುಂಡಿ, ಬೆಳಗಾವಿ ಜಿಲ್ಲೆ.

ಕಾಣದುದನರಸುವದಲ್ಲೆ ಕಂಡುದದನರಸುವರೇ ಹೇಳಾ!
ಘನಕ್ಕೆ ಘನವಾದ ವಸ್ತು;
ತಾನೆ ಗುರುವಾದ, ತಾನೆ ಲಿಂಗವಾದ, ತಾನೆ ಜಂಗಮವಾದ,
ತಾನೆ ಪ್ರಸಾದವಾದ, ತಾನೆ ಮಂತ್ರವಾದ, ತಾನೇ ಯಂತ್ರವಾದ,
ತಾನೆ ಸಕಲವಿದ್ಯಾರೂಪನಾದ
ಇಂತಿವೆಲ್ಲವನೊಳಕೊಂಡು ಎನ್ನ ಕರಸ್ಥಲಕ್ಕೆ ಬಂದ
ಇನ್ನು ನಿರ್ವಿಕಾರ ಗುಹೇಶ್ವರ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-142 / ವಚನ ಸಂಖ್ಯೆ-55)

ಅಂಗ ಮತ್ತು ಲಿಂಗ ಎರಡೂ ಶರಣ ಸಾಹಿತ್ಯದಲ್ಲಿ ಆಧಾರಭೂತ ಅಂಶಗಳು. ಲಿಂಗವ ಕಾಣಲು ಅಂಗಬೇಕು. ಅಂಗವು ಉದಧರಿಸಲು ಲಿಂಗವೂ ಬೇಕು. ಹಾಗೆ ನೋಡಿದರೆ ಅಂಗವೂ ಲಿಂಗಮಯ ಶರೀರವೇ ತಾನಾಗಬೇಕು ಎನ್ಬುವದು ಒಂದು ಆದರ್ಶವಾದರೆ ಅದು ಒಡಮೂಡಿದ್ದೇ ಲಿಂಗದ ಮೂಲಕ ಎಂಬುದೊಂದು ಪ್ರಮೇಯ ಇದ್ದೇ ಇದೆ.

ಭಕ್ತನಾದವನು ಅಂಗದ ಮೂಲಕವೇ ಲಿಂಗವನ್ನು ಸಾಧಿಸಬೇಕು. ಶರೀರವು ಲಿಂಗಮಯ ಶರೀರ ಆಗಬೇಕು ಇದು ಆದರ್ಶ. ಅಂಗವಿಲ್ಲದೆ ಲಿಂಗಕ್ಕೂ ಆಶ್ರಯವಿಲ್ಲ. ಹಾಗಾಗಿಯೇ ಶರಣರು ಶರೀರವನ್ನು ತುಚ್ಛವಾಗಿ ಕಾಣದೇ ಪ್ರಸಾದ ಕಾಯ ಎಂದು ಕರೆದರು.

ಲಿಂಗವು ಬಹಿರಂಗದಲ್ಲಿ ಧರಿಸುವದು ಎಷ್ಡು ಮುಖ್ಯವೋ ಅದನ್ನು ಅಂತರಂಗದಲ್ಲಿಯೂ ಭರಿಸುವದು ಅಷ್ಟೇ ಮುಖ್ಯ. ಲಿಂಗರೂಪಿಯಾದ ಶಿವನು ನಮ್ಮೊಳಗೆ ಅಂತರ್ನಿಹೀತವಾಗಿ ಇರುವ ರೀತಿಯೂ ಉಪಾದಿಯನ್ನೂ ಮೀರಿದ್ದು. ಇದನ್ನು ಒಂದು ವಚನದಲ್ಲಿ ಪ್ರಭುಗಳು:

ಕಲ್ಲೊಣಗಣ ಕಿಚ್ಚು ಉರಿಯದಂತೆ,
ಬೀಜದೊಳಗಣ ವೃಕ್ಷ ಉಲಿಯದಂತೆ,
ತೋರಲಿಲ್ಲಾಗಿ ಬೀರಲಿಲ್ಲಾರಿಗೆಯು,
ಗುಹೇಶ್ವರ ನಿಂದ ನಿಲವನನುಭವಸುಖಿ ಬಲ್ಲ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-138 / ವಚನ ಸಂಖ್ಯೆ-2)

ಎಂದಿದ್ದಾರೆ. ಲಿಂಗವೇ ಎಲ್ಲವೂ ತಾನಾಗುವ ಪರಿಯನ್ನು ಅಲ್ಲಮಪ್ರಭುಗಳು ಪ್ರಸ್ತುತ ಈ ವಚನದಲ್ಲಿ ಹೀಗೆ ಅನುಭಾವಿಸುತ್ತಾರೆ.

ಮನುಷ್ಯನ ಹುಡುಕಾಟ ಯಾವಾಗಲೂ ಕಾಣದುದನು ಹುಡುಕುವದರತ್ತಲೇ ಇರಬೇಕು. ಕಂಡದ್ದನ್ಬು ಯಾರೂ ಹುಡುಕುವದಿಲ್ಲ. ತಾನು ಲಿಂಗ ಸ್ವರೂಪಿ ಎನ್ನುವುದನ್ನು ಮರೆತು ಕಾಣುವ ಕಷ್ಟ ನಷ್ಟಗಳ ಜಂಜಡದಲ್ಲಿ ಮುಳುಗಿರುವ ನಮಗೆ ಅವರು ಹೇಳುವದು ಕಂಡದುದನರಸುವ ನೀನು ಅದನ್ನು ಬಿಟ್ಟು‌ ನಿನ್ನೊಳಗೆ ಇದ್ದೂ‌ ನಿನಗೆ‌ ಕಾಣದಿರುವ, ನೀನು ಮರೆತಿರುವ ಆ ಲಿಂಗವನ್ನು ಹುಡುಕು ಎನ್ನುತ್ತಾರೆ. ಹುಡುಕುವ ದಾರಿಯಲ್ಲಿದ್ದವನಿಗೆ ಅದರ ಮಹಿಮೆ ಅರ್ಥವಾಗುತ್ತಾ ಹೋಗುತ್ತದೆ. ಗುಹೇಶ್ವರನೇ ನಾನಾ ರೂಪವನ್ನು ಧರಿಸಿ ನಿಲ್ಲುವ ಪರಿ ಅವರ್ಣನೀಯ. ಎಲ್ಲವೂ ತಾನಾದ ಆ ಅಸಾಧ್ಯವೇ ಕೊನೆಗೂ ಲಿಂಗ ರೂಪವಾಗಿ ಅಂಗೈಯೊಳಗೆ ಬಂದು‌ ನಿಲ್ಲುವ ವಿಸ್ಮಯ ಸದಾ ಇರುವಂಥದೆ.

ಗುರು ಲಿಂಗ ಜಂಗಮ‌ ಪ್ರಸಾದ ಎಲ್ಲವೂ ಆಗಿರುವ‌ ಅವನು ಸಕಲವೂ ಆಗಿ ಕೊನೆಗೆ ಭಕ್ಯನ‌ ಕೈಗೆ ಬಂದು‌ ಲಿಂಗರೂಪಿಯೂ ತಾನೆ ಆಗುತ್ತಾನೆ ಮತ್ತು‌ ಭಕ್ತನ‌ ಕೈಗೆ ಬಂದು ಪೂಜಿಸಲ್ಪಡುತ್ತಾನೆ. ಇದೇ ಲಿಂಗದ ಮಹಿಮೆ ಎನ್ನುತ್ತಾರೆ‌ ಪ್ರಭುಗಳು.

ಡಾ. ಯಲ್ಲಪ್ಪ ಯಾಕೊಳ್ಳಿ.
ಪ್ರಾಚಾರ್ಯರು,
ಸರ್ಕಾರಿ ಪದವಿ ಪೂರ್ವ ಕಾಲೇಜು,
ಯಕ್ಕುಂಡಿ, ಬೆಳಗಾವಿ ಜಿಲ್ಲೆ.
ಮೋಬೈಲ್‌ ಸಂ. 97319 70857

ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
 ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in

Loading

Leave a Reply