ಶ್ರಾವಣ ವಚನ ಚಿಂತನ-09: ವ್ಯೋಮಕಾಯ ಅಲ್ಲಮ ಪ್ರಭುಗಳ ವಚನ ವಿಶ್ಲೇಷಣೆ / ಡಾ. ಯಲ್ಲಪ್ಪ ಯಾಕೊಳ್ಳಿ, ಯಕ್ಕುಂಡಿ, ಬೆಳಗಾವಿ ಜಿಲ್ಲೆ.

ಕಾಯಕ್ಕೆ ಮಜ್ಜನ, ಪ್ರಾಣಕ್ಕೆ ಓಗರ, ಇದ ಮಾಡಲೆ ಬೇಕು.
ಸುಳಿವು ಸುಳುಹುನ್ನಕ್ಕ ಇದ ಮಾಡಲೆ ಬೇಕು.
ಗುಹೇಶ್ವರನೆಂಬ [ಲಿಂಗಕ್ಕೆ]
ಆತ್ಮವುಳ್ಳನ್ನಕ್ಕ ಭಕ್ತಿಯ ಮಾಡಲೇಬೇಕು.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-145 / ವಚನ ಸಂಖ್ಯೆ-82)

ಕಾಯ ಇರುವವರೆಗೆ ಕಾಯಗುಣವ ಬಿಡಲಾಗದು‌. ಕಾಯಕ್ಕೆ ಏನೇನು ಬೇಕೊ ಅದೆಲ್ಲವನ್ನು ಕೊಡುತ್ತಲೇ ಹೋಗಬೇಕಾಗುತ್ತದೆ. ಕಾಯವೆಂಬುದು ಹಾಗೆಯೆ ಇರದು. ಗಾಳಿಯನ್ನು ತಿಂದು ಬದುಕಲಾಗದು. ಎಂಥ ಮಹಾತ್ಮನ ಶರೀರವಾದರೂ ಅದರದೇ ಆದ ನಿಯಮಗಳನ್ನು ಹೊಂದಿರುತ್ತದೆ. ಇಷ್ಟು ದಿನ ಆಹಾರವಿಲ್ಲದೆ ಬದುಕಿದರು, ಅಷ್ಟು ದಿನ ನಿರಾಹಾರಿಗಳಾಗಿ ಬದುಕಿದರು ಎಂಬಂಥ ಉದಾಹರಣೆಗಳನ್ನು ನಾವು ನೋಡಬಹುದು‌. ಇವನ್ನು ತಳ್ಳಿಹಾಕಲಾಗದು. ಜಗತ್ತಿನಲ್ಲಿ ಎಲ್ಲ ಬಗೆಯ ಅಚ್ಚರಿಗಳಿಗೂ ಅವಕಾಶವಿದೆ. ಆದರೆ ಅದು ಸಾಮಾನ್ಯರಾದ ನಮ್ಮಿಂದ ಸಾಧ್ಯವಿಲ್ಲದ ಮಾತು. ನಾವು ಕಾಯದ ಮೂಲಕ ಬದುಕ ಬೇಕಾದರೆ ಕಾಯಕ್ಕೆ ಏನು ಕೊಡಬೇಕೋ ಅದನ್ನು ಕೊಡಲೇಬೇಕು. ಈ ಬಗೆಯ ಚಿಂತನೆಯನ್ನು ವಾಸ್ತವಿಕ ನೆಲೆಯ ಚಿಂತಕರಾದ ಅಲ್ಲಮಪ್ರಭುಗಳ ಪ್ರಸ್ತು ವಚನ‌ ಚಿಂತನೆ ಮಾಡುತ್ತದೆ.

ಮೂರು ನೆಲೆಯ ಚಿಂತನೆಗಳು ಈ ವಚನದಲ್ಕಿವೆ.
೧.
ಬಹಿರಂಗದ ಸ್ವಚ್ಛತೆ.
೨. ಪ್ರಾಣದ ಹಸಿವು.
೩. ಆತ್ಮವುಳ್ಳನ್ನಕ್ಕ ಭಕ್ತಿ ಮಾಡುವದು.

ಮನುಷ್ಯ ಬದುಕುವದು ಎರಡು ನೆಲೆಯಲ್ಲಿ. ಬಹಿರಂಗದಲ್ಲಿ‌ ಮತ್ತು ಅಂತರಂಗದಲ್ಲಿ. ಬಹಿರಂಗದ ಇರುವಿಕೆ ಹೊರಗಿನವರಿಗೆ ಇಷ್ಟಕ್ಕೆ ಕಾರಣವಾಗಬೇಕಾಗುತ್ತದೆ. ನಾನು ಮಾನಸಿಕವಾಗಿ ಆತ್ಮಿಕವಾಗಿ ತುಂಬಾ ಪರಿಶುದ್ಧನಿದ್ದೇನೆ. ನಾನ್ಯಾಕೆ ಸ್ನಾನ ಮಾಡಲಿ? ಎಂದು ಪ್ರಶ್ನೆ ಬರಬಹುದು. ಆದರೆ ನಾವು ಬದುಕುವದು ಎಲ್ಲಿ? ಎನ್ನುವದು ಬಹು ಮುಖ್ಯ. ಲೋಕದಲ್ಲಿರಬೇಕಾದ ನಾವು ಲೋಕಕ್ಕೆ ಯೋಗ್ಯವಾಗಿ ಬದುಕಬೇಕು ತಾನೆ? ಇಲ್ಲವಾದರೆ ಶರಣರು ಬಹರಂಗ ಶುದ್ದಿಯ ಬಗ್ಗೆ ಮಾತನಾಡುತ್ತಿರಲಿಲ್ಲ. ದೇಹ ಹೊಂದಿದ ಮೇಲೆ ಅದು ಹೊಲಸಾಗುವದೇ. ಆದ್ದರಿಂದ ದೇಹವುಳ್ಳನ್ನಕ್ಕ ಸ್ನಾನ ಬಹಿರಂಗಕ್ಕೆ ಅಗತ್ಯ.

ಇನ್ನು ಓಗರದ ಪ್ರಶ್ನೆ. ಹಸಿದ ಹೊಟ್ಟೆ ಏನನ್ನೂ ಮಾಡದು. ಮೊದಲು ಹಸಿವನ್ನು ಪೂರೈಸುವದು ಮುಖ್ಯ. ಸ್ವಾಮಿ ವಿವೇಕಾನಂದರು ಹಸಿದ ಹೊಟ್ಟೆ ಯಾವುದೆ ತತ್ವಗಳನ್ನು ಸ್ವೀಕರಿಸದು ಎಂದಿದ್ದರು. ಅದನ್ನೆ ಪ್ರಭುಗಳು ಪ್ರಾಣವುಳ್ಳನ್ನಕ್ಕ ಓಗರ ಇಕ್ಕು ಎಂದರು. ಹಸಿವು ಕಾಯದ ಮೂಲ ಗುಣ. ಅದಕ್ಕೆ ಓಗರವಿಕ್ಕದೆ ಬದುಕಲಾಗದು. ಇದನ್ನೇ ಶರಣರು “ಹಸಿವೆಂಬ ಹೆಬ್ಬಾವು ಬಸಿರ ಬಂದು ಹಿಡಿದಡೆ ವಿಷವೇರಿತ್ತಯ್ಯ ಆಪಾದ ಮಸ್ತಕಕ್ಕೆ, ಹಸಿವಿಗನ್ನವನಿಕ್ಕಿ ವಿಷವನಿಳುಹುಬಲ್ಲಡೆ ಅದೆ ಗಾರುಡ” ಎಂದಿದ್ದರು.

ಮೂರನೆಯದು ಭಕ್ತಿ‌ ಮಾಡಬೇಕಾದ ಅಗತ್ಯ. ಮನುಷ್ಯ ಬದುಕಲು‌ ನೀರು ಗಾಳಿಯಷ್ಟೇ ಅವಶ್ಯಕವಾದದ್ದು ಆತ್ಮಕ್ಕೆ ಭಕ್ತಿ. ಭಕ್ತಿ ಇರದೆ ನಿಮಿಷ ಮಾತ್ರವೂ ಇರಬಾರದು ಎನ್ನುವದು ಭಕ್ತಿ ಸಿದ್ಧಾಂತ. ಇದನ್ನು ಆತ್ಮವುಳ್ಳನ್ನಕ್ಕ ಭಕ್ತಿ ಮಾಡುವದು ಎನ್ನುತ್ತಾರೆ ಪ್ರಭುಗಳು.

ಹೀಗೆ ಮೂರು ನೆಲೆಯಲ್ಲಿ ಆಲೋಚಿಸುವ ಈ ವಚನ ಸುಂದರವಾಗಿದೆ.

ಡಾ. ಯಲ್ಲಪ್ಪ ಯಾಕೊಳ್ಳಿ.
ಪ್ರಾಚಾರ್ಯರು,
ಸರ್ಕಾರಿ ಪದವಿ ಪೂರ್ವ ಕಾಲೇಜು,
ಯಕ್ಕುಂಡಿ, ಬೆಳಗಾವಿ ಜಿಲ್ಲೆ.
ಮೋಬೈಲ್‌ ಸಂ. 97319 70857

ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
 ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in

Loading

Leave a Reply