ಶ್ರೀ. ವಿ. ಬಿ. ಚಿನಿವಾಲ ಎಂಬ ದೈತ್ಯ ಉದ್ಯಮಿ‌ / ಡಾ. ಸಿದ್ದು ಯಾಪಲಪರವಿ, ಕಾರಟಗಿ

ಕಾರಟಗಿಯ ಉದ್ಯಮದ ಹಾದಿ ಸಾವಿರಾರು ಕೋಟಿ ತಲುಪಲು ಪ್ರಮುಖ ಕಾರಣೀಕರ್ತರಾದ ಶ್ರೀ. ವೀರಭದ್ರಪ್ಪ ಚಿನಿವಾಲ ಸದಾ ಸ್ಮರಣೀಯರು. ಕಳೆದ ಲೇಖನದಲ್ಲಿ ಪ್ರಸ್ತಾಪಿಸಿದ ನಮ್ಮೂರಿನ ಪಂಚ ಪಾಂಡವರಲ್ಲಿ ಈ ವೀರಭದ್ರಪ್ಪ ಚಿನಿವಾಲ ಹಿರಿಯರು. ಜಗತ್ತಿನ ಪ್ರಸಿದ್ಧ ಹಾರ್ವರ್ಡ್ ಬಿಸಿನೆಸ್ ಸ್ಕೂಲ್ ಅಧ್ಯಯನಕ್ಕೆ ಮಾದರಿಯಾಗುವ ವ್ಯಕ್ತಿತ್ವ ಇವರದು. ಕಲಿತದ್ದು ತುಂಬ ಕಡಿಮೆ. ಆದರೆ ಅಪಾರ ಸ್ಮರಣೆ ಶಕ್ತಿ ಮತ್ತು ವ್ಯವಹಾರ ಜ್ಞಾನ. ಪ್ರತಿಯೊಬ್ಬ ವ್ಯಕ್ತಿಯ ಬದುಕನ್ನು ನಾವು ಹಲವಾರು ಆಯಾಮಗಳಲ್ಲಿ ಅವಲೋಕಿಸಬಹುದು. ಮೊದಲನೆಯದು ವೈಯಕ್ತಿಕ, ಔದ್ಯೋಗಿಕ, ಸಾಮಾಜಿಕ ಹಾಗೂ ಸಾರ್ವಜನಿಕ.

ವೈಯಕ್ತಿಕವಾಗಿ ನೋಡುವುದಾದರೆ ಇವರದು ಅತ್ಯಂತ ಸರಳ ಬದುಕು. ತಮ್ಮ ಉದ್ಯಮ ನೂರಾರು ಕೋಟಿ ದಾಟಿದರೂ ವಾಹನ ಬಳಸಲಿಲ್ಲ. ಸದಾ ನಡೆದುಕೊಂಡು ಹೋಗುವ ಅಜಾನುಬಾಹು. ಬಿಳಿ ಜುಬ್ಬಾ ಹಾಗೂ ಬಿಳಿ ಧೋತರ ಉಟ್ಟುಕೊಂಡು ಅದರ ಚುಂಗನ್ನು ಕೈಯಲ್ಲಿ ಹಿಡಿದುಕೊಂಡು ಗಂಭೀರವಾಗಿ ಸಾಗುತ್ತಿದ್ದ ನೆನಪು ಈಗಲೂ ಹಚ್ಚ ಹಸಿರು. ಕಿರಾಣಿ ಹಾಗೂ ಫರ್ಟಿಲೈಜರ್ ವ್ಯಾಪಾರ ಇವರ ಆರಂಭದ ಉದ್ಯಮವಾಗಿತ್ತು. ಸಹೋದರ ಶ್ರೀ. ಬಸ್ಸೆಟ್ಟೆಪ್ಪ ಚಿನಿವಾಲ ಅವರು ವ್ಯಾಪಾರದ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದರು. ಆದರೆ ಪ್ರತಿಯೊಂದು ನಿರ್ಣಯಗಳನ್ನು ಶ್ರೀ. ವೀರಭದ್ರಪ್ಪ ಚಿನಿವಾಲ ಅವರೇ ತೆಗೆದುಕೊಳ್ಳುತ್ತಿದ್ದರು. ಕಾರಟಗಿಯ ಸಣ್ಣ ಪುಟ್ಟ ವ್ಯಾಪಾರಸ್ಥರಿಗೆ ನೆರವು ನೀಡುತ್ತಿದ್ದ ಇವರು ಪಾಲಿಸುತ್ತಿದ್ದ ಆರ್ಥಿಕ ಶಿಸ್ತನ್ನು ನಮ್ಮ ತಂದೆ ಹೇಳುತ್ತಿದ್ದರು. ಆಗ ಜವಳಿ, ಯಾಪಲಪರವಿ ಹಾಗೂ ಹಿಂದಪುರ ಕುಟುಂಬಗಳು ಬೇರೆ ಬೇರೆ ವ್ಯಾಪಾರಗಳಲ್ಲಿ ತೊಡಗಿದ್ದ ಕಾಲವದು.

ಜವಳಿ ಪಂಪಣ್ಣ ಅವರ ರೈಸ್ ಮಿಲ್ ಶುರುವಾಗಿತ್ತು. ನೀರಾವರಿ ಪ್ರದೇಶದಲ್ಲಿ ಪ್ರಮುಖ ಬೆಳೆ ಭತ್ತ ಅಂದರೆ ನೆಲ್ಲನ್ನು ರೈತರು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಿದ್ದರು. ಅವರು ತಾವು ಬೆಳೆದ ನೆಲ್ಲನ್ನು ಮಿಲ್ಲಿಂಗ್ ಮಾಡಿಸದೇ ನೇರವಾಗಿ ಮಾರಾಟ ಮಾಡುತ್ತಿದ್ದರು. ರೈತರು ಬೆಳೆದ ನೆಲ್ಲನ್ನು ನಾಡಿನ ಇತರ ಪ್ರದೇಶದ ರೈಸ್ ಮಿಲ್ಲುಗಳಿಗೆ ಮಾರಾಟ ಮಾಡುವ ಪದ್ಧತಿ ಆಗ ಇತ್ತು. ಆಗ ಕಾರಟಗಿಯಲ್ಲಿ ಈಗಿನ ಹಾಗೆ ಹಲವಾರು ಮಿಲ್ಲುಗಳು ಇರಲಿಲ್ಲ. ಕಾರಟಗಿ ಪ್ರದೇಶದ ನೆಲ್ಲನ್ನು ಸರ್ಕಾರಕ್ಕೆ ಲೆವಿ ಕಟ್ಟಿ, ಊರಿಂದ ಲಾರಿಯಲ್ಲಿ ಕಳಿಸುತ್ತಿದ್ದರು. ಎಲ್ಲ ವ್ಯಾಪಾರದ ಮೂಲ ದ್ರವ್ಯ ಹಣ, ರೊಕ್ಕ, ದುಡ್ಡು… ಆದರೆ ಅದನ್ನು ವ್ಯಾಪಾರಸ್ಥರು ಹೊಂದಿಸುವುದು ಹೇಗೆ? ಅದೇ ಪ್ರತಿಯೊಂದು ವ್ಯಾಪಾರದ ಟಾಪ್ ಸೀಕ್ರೇಟ್.

ರೈತರು ನೆಲ್ಲು ಬೆಳೆಯಲು ಬೇಕಾಗುವ ಗೊಬ್ಬರ ಅಂದರೆ ಫರ್ಟಿಲೈಜರ್ ಸರಬರಾಜು ಮಾಡುವ ಜವಾಬ್ದಾರಿಯನ್ನು ಮೊದಲು ತೆಗೆದುಕೊಂಡವರೇ ಶ್ರೀ. ವೀರಭದ್ರಪ್ಪ ಚಿನಿವಾಲ. ಅವರ ತಂಗಿಯ ಯಜಮಾನರಾದ ಶ್ರೀ. ಸಾಲಗುಂದಿ ಸಿದ್ದಪ್ಪ ಮಾಷ್ಟ್ರು ಆಗ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದರು, ಅವರ ಹುದ್ದೆಗೆ ರಾಜೀನಾಮೆ ಕೊಡಿಸಿ, ಗೊಬ್ಬರದ ಅಂಗಡಿ ಜವಾಬ್ದಾರಿ ಕೊಡಲು ಕಾರಣ ಅವರು ಅತ್ಯಂತ ಸಂಭಾವಿತ ಪ್ರಾಮಾಣಿಕರು, ಯಶಸ್ವಿ ವ್ಯಾಪಾರ ಬಯಸುವದೇ ಆ ಪ್ರಾಮಾಣಿಕತೆಯನ್ನು. ಇವರು ಆರಂಭಿಸಿದ ವಿ. ಬಿ. ಚಿನಿವಾಲ ಫರ್ಟಿಲೈಜರ್ ಆಂಡ್ ಪೆಸ್ಟಿಸೈಡ್ಸ್ ಎಂಬ ಫರ್ಮನ್ನು ರೈತರಿಗೆ ಗೊಬ್ಬರ ಸರಬರಾಜು ಮಾಡುವ ಉದ್ದೇಶದಿಂದ ಆರಂಭಿಸಿದರು. ಆಗ ಹಲವಾರು ವಿದೇಶಿ ಮೂಲದ ಗೊಬ್ಬರ ಕಂಪನಿಗಳು ಇವರ ವ್ಯಾಪಾರ ಕುಶಲತೆಯನ್ನು ಮೆಚ್ಚಿಕೊಂಡು ಇವರಿಗೆ ಪ್ರಮುಖ ಡೀಲರ್ ಶಿಪ್ ನೀಡಿದವು.

ಇವರು ಉದ್ರಿ ರೂಪದಲ್ಲಿ ರೈತರಿಗೆ ಗೊಬ್ಬರ ಸರಬರಾಜು ಮಾಡಿ ನೆರವಾಗುತ್ತಿದ್ದರು. ರೈತರು ಬೆಳೆ ಬಂದ ಮೇಲೆ, ಅದನ್ನು ರೈಸ್ ಮಿಲ್ಲುಗಳಿಗೆ ಮಾರಾಟ ಮಾಡಿ, ಗೊಬ್ಬರದ ಹಣಕ್ಕೆ ಸ್ವಲ್ಪ ಬಡ್ಡಿ ಸೇರಿಸಿ ಕೊಡುತ್ತಿದ್ದರು.

ಆಗ ವೀರಭದ್ರಪ್ಪ ಅವರಿಗೆ ವಿನೂತನ ವಿಚಾರ ಹೊಳೆಯಿತು. ರೈತರ ನೆಲ್ಲನ್ನು ಬೇರೆ ಮಿಲ್ಲುಗಳಿಗೆ ಮಾರುವುದನ್ನು ತಡೆಯಲು ತಾವೇ ದಲಾಲಿ ಅಂಗಡಿ ಆರಂಭಿಸಿದರು.

ಆದ್ದರಿಂದ ಇವರ ವ್ಯಾಪಾರ ಕಿರಾಣಿ, ಗೊಬ್ಬರ ಅಂಗಡಿಯ ಜೊತೆಗೆ ದಲಾಲಿ ಅಂಗಡಿ ಕೂಡ ಆರಂಭವಾಯಿತು. ಆಗ ರೈತರು ಕಡ್ಡಾಯವಾಗಿ ಇವರ ಅಂಗಡಿಗೆ ನೆಲ್ಲನ್ನು ಮಾರಲಾರಂಭಿಸಿದರು. ಒಂದು ಕಡೆಗೆ ಗೊಬ್ಬರ ಮಾರಿದ ಲಾಭ, ಅದಕ್ಕೆ ಪೂರಕವಾದ ಆದಾಯ, ನಂತರ ರೈತರಿಂದ ಖರೀದಿಸಿದ ನೆಲ್ಲನ್ನು ಇಟ್ಟುಕೊಂಡು ಮಿಲ್ಲುಗಳಿಗೆ ಮಾರಿದ ಲಾಭ.

ಇದೊಂದು ರೀತಿಯಲ್ಲಿ ಸನ್ಯಾಸಿಯೊಬ್ಬ ಸಂಸಾರಿಯಾದ ಕತೆ ಇದ್ದ ಹಾಗೆ. ರೈಸ್ ಮಿಲ್ ಮಾಲೀಕರು ಹಣ ಬೇಗ ಕೊಡದೇ ಇದ್ದಾಗ ಇವರಿಗೆ ಆರ್ಥಿಕ ಹಿನ್ನಡೆಯಾಗುತ್ತಿತ್ತು. ಅಂದರೆ ಅವರು ಹಣ ಕೊಡುವುದು ವಿಳಂಬವಾದರೆ ಹಾನಿಯಾಗಿ, ಬಡ್ಡಿಯ ಹೊರೆ ಬೀಳುತ್ತಿತ್ತು. ಇದನ್ನು ತಪ್ಪಿಸಲು ತಾವೇ ಒಂದು ರೈಸ್ ಮಿಲ್ ಕಟ್ಟುವ ಹೊಸ ಆಲೋಚನೆ ಇವರಿಗೆ ಹೊಳೆದ ಪ್ರತಿಫಲವೇ ಲಕ್ಷ್ಮಿ ರೈಸ್ ಇಂಡಸ್ಟ್ರೀಸ್.

ಗದುಗಿನ ತೋಂಟದಾರ್ಯ ಮಠದ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಆಗ ಶರಣಬಸವೇಶ್ವರರ ಪುರಾಣ ಮಂಗಲ ಕಾರ್ಯಕ್ರಮಕ್ಕೆ ಕಾರಟಗಿಗೆ ಬರುತ್ತಿದ್ದರು. ನಮ್ಮ ತಂದೆ ಶ್ರೀ. ಬಸವರಾಜಪ್ಪ ಯಾಪಲಪರವಿ ಅವರ ಒಡನಾಟದಿಂದ ಪೂಜ್ಯರಿಗೆ ಕಾರಟಗಿ ಆಪ್ತವಾಯಿತು. ಅಂದಿನ ಸರಕಾರದ ಪ್ರಾಮಾಣಿಕೆ ಸಚಿವರಾಗಿದ್ದ ಶ್ರೀ ವಿಶ್ವನಾಥ ರೆಡ್ಡಿ ಮುದ್ನಾಳ ಸಾಹೇಬರು ರೈಸ್ ಮಿಲ್ ಆರಂಭಿಸಲು ಇವರಿಗೆ ಅನುಮತಿ ಕೊಡಿಸಿದರು. ಇವರು ಅಂದುಕೊಂಡಂತೆ 17.08.1985 ರಂದು ಲಕ್ಷ್ಮಿ ಇಂಡಸ್ಟ್ರೀಸ್ ಆಂಡ್ ರಾಯಿಸ್ ಮಿಲ್ ಪೂಜ್ಯ ತೋಂಟದಾರ್ಯ ಮಠದ ಪೂಜ್ಯರ ಸಾನಿಧ್ಯದಲ್ಲಿ, ಸಚಿವರಾಗಿದ್ದ ಶ್ರೀ. ವಿಶ್ವನಾಥ ಮುದ್ನಾಳ ಅವರು ಉದ್ಘಾಟನೆ ಮಾಡಿದ್ದು ಚಿನಿವಾಲ ಅವರ ಉದ್ಯಮ ಪಯಣ ಹೊಸ ಆಯಾಮ ಪಡೆಯಿತು.

ಈಗ ಅವರದೇ ಕಿರಾಣಿ ಅಂಗಡಿ, ಅವರದೇ ದಲಾಲಿ ಅಂಗಡಿ, ಅವರದೇ ಗೊಬ್ಬರದ ಅಂಗಡಿ ಮತ್ತು ಅವರದೇ ರೈಸ್ ಮಿಲ್. ಇದನ್ನು ನಾನು ಕಾರಟಗಿಯ ಮೊದಲ ಸಿಂಗಲ್ ವಿಂಡೋ ಪದ್ಧತಿ ಎಂದು ಗುರುತಿಸ ಬಯಸುತ್ತೇನೆ. ಇಂದಿನ ಕಾರ್ಪೊರೇಟ್ ದುನಿಯಾದ ಆಶಯ ಆಗ ನಮ್ಮೂರಲ್ಲಿ ಆರಂಭವಾಗಿರುವುದು ಹೆಮ್ಮೆಯ ವಿಷಯ. ಮಾ‌ಲ್ ಸಂಸ್ಕೃತಿಯ ಮೊದಲ ಹೆಜ್ಜೆ ಇದಾಗಿದೆ.

ತಾವಷ್ಟೆ ಬೆಳೆದರೆ ಸಾಲದು ಎಂಬಂತೆ ಇತರ ಯುವಕರನ್ನು ವ್ಯಾಪಾರ ಮಾಡಲು ಉತ್ತೇಜನ ನೀಡಿದರು. ಯುವ ಉದ್ಯಮಿ ಶ್ರೀ. ಕೆ. ಸಣ್ಣ ಸೂಗಪ್ಪ ಅವರನ್ನು ವ್ಯಾಪಾರಕ್ಕೆ ಸೇರಿಸಿಕೊಂಡು ಅವರಿಗೊಂದು ದಲಾಲಿ ಅಂಗಡಿ ಆರಂಭಿಸಿ ಕೊಟ್ಟರು.

ನಂತರ ಅಮರೇಶ್ವರ ಇಂಡಸ್ಟ್ರೀಸ್ ಎಂಬ ಎರಡನೇ ರೈಸ್ ಮಿಲ್ ಆರಂಭವಾಯಿತು. ಆಗ ಕಾರಟಗಿ, ಸಿಂಧನೂರು, ಗಂಗಾವತಿ ಭಾಗದಲ್ಲಿ ರೈತರು ನೆಲ್ಲಿನ ಜೊತೆಗೆ ಹೈಬ್ರೀಡ್ ಹತ್ತಿ ಬೆಳೆಯಲಾರಂಭಿಸದ್ದನ್ನು ಗಮನಿಸಿ ಲಕ್ಷ್ಮಿ ಕಾಟನ್ ಮಿಲ್ ತಲೆ ಎತ್ತಿ ನಿಂತಿತು. ಇದು ಪೂರ್ಣ ಪ್ರಮಾಣದಲ್ಲಿ ಆರಂಭಗೊಂಡ ಮೊದಲ ಜಿನ್ನಿಂಗ್ ಫ್ಯಾಕ್ಟರಿ.

ಉದ್ಯಮದ ವ್ಯಾಪ್ತಿ ಹಿಗ್ಗಿದಂತೆ ವೀರೇಶ್ವರ ಅಗ್ರೋ ಇಂಡಸ್ಟ್ರೀಸ್ ಮೂಲಕ ಬೀಜಗಳ ಮಾರಾಟ ಆರಂಭ ಮಾಡಿ ನಮ್ಮೂರಿನ ಅತ್ಯಂತ ಶ್ರೇಷ್ಠ ಉದ್ಯಮಿಗಳ ಸಾಲಿಗೆ ವಿ.ಬಿ.ಚಿನವಾಲ ಸೇರಿದರು.

ಪಕ್ಕದ ಸಿಂಧನೂರು, ಗಂಗಾವತಿ ಹಾಗೂ ಸಿರಗುಪ್ಪಾದ ವ್ಯಾಪಾರಿಗಳಿಗೆ ಬಡ್ಡಿ ಇಲ್ಲದೆ ನೆಲ್ಲು, ಗೊಬ್ಬರ ಹಾಗೂ ಹಣ ನೀಡಿದ್ದನ್ನು ಹೆಸರಾಂತ ಉದ್ಯಮಿ ಸಿರಗುಪ್ಪಾದ ಶ್ರೀ. ಬಸವರಾಜಪ್ಪ ಗಟ್ಟಿ ನಾಗಲಾಪೂರ ಅವರು ಸ್ಮರಿಸಿಕೊಳ್ಳುತ್ತಾರೆ. ಅನೇಕ ವ್ಯಾಪಾರದ ಪಟ್ಟುಗಳನ್ನು ಇವರಿಂದ ಕಲಿತ ಶ್ರೀ. ಕೆ. ಸಣ್ಣ ಸೂಗಪ್ಪನವರು ತಮ್ಮದೇ ಆದ ಹೊಸ ಉದ್ಯಮ ಆರಂಭಿಸಿ, ಲಕ್ಷ್ಮಿ ಜೊತೆಗೆ ವೆಂಕಟೇಶ್ವರ ಸೇರಿಸಿ ಎಲ್. ವಿ. ಟಿ. ಸಮೂಹ ಸಂಸ್ಥೆಯನ್ನು ಆರಂಭ ಮಾಡಲು ಶ್ರೀ. ವೀರಭದ್ರಪ್ಪ ಚಿನಿವಾಲ ಅವರ ಸ್ಪೂರ್ತಿಯೇ ಕಾರಣ. ಮುಂದೆ ತಮ್ಮದೇ ವಾಹನಗಳಿಗೆ ಇಂಧನ ತುಂಬಿಸಲು ಅನುಕೂಲವಾಗುವ ರೀತಿಯಲ್ಲಿ ಲಕ್ಷ್ಮಿ ಪೆಟ್ರೋಲಿಯಂ ಹಾಗೂ ವೀರೇಶ್ವರ ಪೆಟ್ರೋಲಿಯಂ, ಸಾಲದು ಎಂಬಂತೆ ಸುಸಜ್ಜಿತವಾದ ಲಕ್ಷ್ಮಿ ಟಾಕೀಸ್ ಆರಂಭಿಸಿ ಎಲ್ಲಾ ಕ್ಷೇತ್ರದಲ್ಲಿ ಯಶ ಸಾಧಿಸಿದರು.

ಇವರ ಮಗ ಶ್ರೀ. ಸಣ್ಣ ವೀರೇಶಪ್ಪ ಹಾಗೂ ತಮ್ಮನ ಮಗ ಶ್ರೀ. ದೊಡ್ಡ ವೀರೇಶಪ್ಪ ಹಾಗೂ ಸಹೋದರರು ಇಂದಿಗೂ ಅದೇ ಗುಣಮಟ್ಟ ಕಾಪಾಡಿಕೊಂಡು ಹೋಗಿರುವುದು ಕಾರಟಗಿ ಉದ್ಯಮ ಲೋಕದ ವಿಸ್ಮಯ.

ಚಿನಿವಾಲ ಪರಿವಾರದ ಇನ್ನೊಂದು ವಿಶೇಷತೆಯೆಂದರೆ ಅವರ ಮಕ್ಕಳು ಅದೇ ಗುಣಮಟ್ಟದ ವ್ಯಾಪಾರವನ್ನು ಮುಂದುವರೆಸಿಕೊಂಡು ಸಾಗಿರುವುದು. ನಮ್ಮ ಊರಿನ ಅದೇ ಪರಂಪರೆ ಹೊಂದಿದ್ದ ವ್ಯಾಪಾರಿ ಪರಿವಾರಗಳು ಕಾಲನ ಗರ್ಭದಲ್ಲಿ ಮಾಯವಾಗಿ ಹೋಗಿವೆ. ಉದಾಹರಣೆಗೆ ನಮ್ಮ ಪರಿವಾರದ ತಾತನ Legacy ಯನ್ನು ನಾವು ಉಳಿಸಿಕೊಳ್ಳಲಾಗದೇ ಚದುರಿ ಹೋಗಿದ್ದೇವೆ.

ಆದರೆ ಶ್ರೀ. ವಿ. ಬಿ. ಚಿನಿವಾಲ ಹಾಗೂ ಶ್ರೀ. ಬಸ್ಸೆಟ್ಟೆಪ್ಪ ಚಿನಿವಾಲ ಅವರ ಮಕ್ಕಳು ವ್ಯಾಪಾರವನ್ನು ಇನ್ನೂ ವೃದ್ಧಿಗೊಳಿಸಿರುವುದು ವಿಶೇಷ. ಕೋಟಿಗಟ್ಟಲೆ ಹಣ, ಆಸ್ತಿ ಹೊಂದಿದ್ದರೂ ಅವರ ಹಿರಿಯರ ಸರಳತೆಯನ್ನು ಕಾಪಾಡಿಕೊಂಡಿದ್ದಾರೆ. ಭೇಟಿ ಆದಾಗಲೆಲ್ಲ ನಿರಹಂಕಾರಿಗಳಾಗಿ ನಡೆದುಕೊಳ್ಳುತ್ತಾರೆ. ತಮ್ಮ ಸಮಕಾಲೀನ ಗೆಳೆಯರ ಜೊತೆಗೆ ಸರಳವಾಗಿ ಲಭ್ಯವಾದರೂ ವ್ಯಾಪಾರದ ನಿಯಮಗಳನ್ನು ಮುರಿಯುವುದಿಲ್ಲ. ಇತ್ತೀಚೆಗೆ ಅವರು ಪಕ್ಕದ ರಾಜ್ಯ ಆಂಧ್ರಪ್ರದೇಶದ ಆದವಾನಿಯಲ್ಲಿ ಜಿನ್ನಿಂಗ್ ಫ್ಯಾಕ್ಟರಿ ಆರಂಭ ಮಾಡಿದ್ದಾರೆ. ಕಾರಟಗಿಯ ಶಿಕ್ಷಣ ಸಂಸ್ಥೆ ಹಾಗೂ ಧಾರ್ಮಿಕ ಚಟುವಟಿಕೆಗಳಲ್ಲಿ ಇಬ್ಬರೂ ವೀರೇಶಪ್ಪ ಅವರು ಅಗತ್ಯವಿದ್ದಷ್ಟು ಭಾಗವಹಿಸುತ್ತಾರೆ. ಆಧುನಿಕ ಕಾಲದ ಅಗತ್ಯಗಳನ್ನು ಮೀರಿ ಬದುಕುವ ಶಕ್ತಿ ಅವರಿಗಿದೆ. ದುಂದು ವೆಚ್ಚ, ದೌಲತ್ತುಗಳಿಂದ ಅಂತರ ಕಾಪಾಡಿಕೊಂಡ ಕಾರಣ ಅವರ ಮನೆಯಲ್ಲಿ ಭಾಗ್ಯದ ಲಕ್ಷ್ಮಿ ಶುಕ್ರವಾರ ಅಲ್ಲ, ಪ್ರತಿದಿನ ಬರುತ್ತಲೇ ಇದ್ದಾಳೆ.

ಫರ್ಟಿಲೈಜರ್ ಕಂಪನಿಗಳು ಕೊಡ ಮಾಡುವ ಎಲ್ಲಾ ಬಹುಮಾನಗಳನ್ನು ಅನೇಕ ಬಾರಿ ಪಡೆದುಕೊಳ್ಳುತ್ತಲೇ ಇರುತ್ತಾರೆ. “ನೂರು ವರ್ಷವಾದರೂ ಸಾಯೋದು, ಬ್ಯಾರೆ ಆಗೋದು ತಪ್ಪಲ್ಲ” ಎಂಬ ಗ್ರಾಮೀಣ ಗಾದೆ ಮಾತಿದೆ. ಆದರೆ ಇವರು ಮನೆಗಳ ಅನುಕೂಕ್ಕಾಗಿ ಬ್ಯಾರೆ ಆಗಿದ್ದಾರೆ, ಆದರೆ ಒಗ್ಗಟ್ಟಾಗಿ ವ್ಯಾಪಾರ ಸರಿ ದೂಗಿಸಿಕೊಂಡು ಸಾಗಿದ್ದಾರೆ. ಈಗ ಅವರ ಮಕ್ಕಳು ಕೂಡ ಕಾಲಕ್ಕೆ ತಕ್ಕಂತೆ ಉನ್ನತ ವ್ಯಾಸಂಗ ಪಡೆದು ಹೊಸ ಹೊಸ ವೃತ್ತಿಗಳನ್ನು ಆರಂಭ ಮಾಡಿದ್ದಾರೆ. ವೈದ್ಯಕೀಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಕಾಲಿಟ್ಟಿದ್ದಾರೆ. ಅವರ ಮನೆತನದ ಸಾಧಕರ ಹೆಸರುಗಳು ಪಟ್ಟಿ ಬೆಳೆಯುತ್ತಲೇ ಸಾಗಿದೆ.

ಡಾ. ಸಿದ್ದು ಯಾಪಲಪರವಿ, ಕಾರಟಗಿ
ಪ್ರಾಚಾರ್ಯರು (ನಿ),
ಕೆ.ವಿ.ಎಸ್.ಆರ್ ಕಾಲೇಜು,
ತಿಮ್ಮಾಪುರ. ಗದಗ ಜಿಲ್ಲೆ.
ಮೋಬೈಲ್‌ ನಂ. 94483 58040

 ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
 ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in / admin@vachanamandara.in

Loading

Leave a Reply