
ಅಮೃತ ಗಂಗಾ: ಅಮೃತ ಮಹೋತ್ಸವದ ವಿಶೇಷ ಸಂಚಿಕೆಯಲ್ಲಿ ಡಾ. ಎಂ.ಎನ್. ಚನ್ನಬಸಪ್ಪ, ಪ್ರಾಂಶುಪಾಲರು, ಎಸ್.ಐ. ಟಿ., ತುಮಕೂರು ಇವರು ಬರೆದ ಲೇಖನ.
ಕೆಲವು ಸ್ನೇಹಿತರು ನನ್ನ ಬಗ್ಗೆ ನೀನು ತುಂಬಾ ಅದೃಷ್ಟವಂತ ಎಂದು ಹೇಳುತ್ತಾರೆ. ಇದು ನಿಜ. ನಮ್ಮ ಊರು ಮೈಸೂರು ಜಿಲ್ಲೆ ಟಿ. ನರಸೀಪುರ ತಾಲ್ಲೂಕಿನ ಮಾಡರಹಳ್ಳಿ. 1940 ರ ದಶಕದಲ್ಲಿ ನಮ್ಮ ಹಳ್ಳಿಯ ಮಟ್ಟಕ್ಕೆ ಹೋಲಿಸಿದರೆ ನಮ್ಮದು ಮಧ್ಯಮ ವರ್ಗದ ಕುಟುಂಬ ಅನ್ನಬಹುದಾಗಿತ್ತು. ಬೆಂಗಳೂರಿನ ಆರ್. ವಿ. ವಿದ್ಯಾ ಸಂಸ್ಥೆಯ ಸ್ಥಾಪನೆ ಮತ್ತು ಬೆಳವಣಿಗೆಗೆ ಕಾರಣಕರ್ತರಾದ ಶ್ರೀ ಎಂ. ಸಿ. ಶಿವಾನಂದಶರ್ಮರು (ಅವರ ಪೂರ್ವ ನಾಮ ಮಲ್ಲೇದೇವರು), ಶ್ರೀ ಮಠದ ಹಳೆಯ ವಿದ್ಯಾರ್ಥಿ ಹಾಗೂ ನಮ್ಮ ಊರಿನವರು, ನಮ್ಮ ಸಂಬಂಧಿಗಳೂ ಕೂಡ. ಪ್ರೈಮರಿ ನಾಲ್ಕನೇ ಕ್ಲಾಸನ್ನು ಮುಗಿಸಿದ್ದ ಬಸವಣ್ಣ ಮತ್ತು ಕೆಂಚಪ್ಪ ನಮ್ಮ ಊರಿನ ಈ ಇಬ್ಬರು ವಿದ್ಯಾರ್ಥಿಗಳನ್ನು 1941 ರಲ್ಲಿ ಶ್ರೀ ಮಠಕ್ಕೆ ಸೇರಿಸಲು ಶ್ರೀ ಶಿವಾನಂದಶರ್ಮರು ಪೂಜ್ಯ ಪಾದರಿಗೆ ಪತ್ರ ಬರೆದು ಅನುಮತಿಯನ್ನು ಪಡೆದುಕೊಂಡಿದ್ದರು. ಆ ಸಮಯದಲ್ಲಿ ನಾನು ನಮ್ಮ ಹಳ್ಳಿಯಲ್ಲಿ 3 ನೇ ಕ್ಲಾಸನ್ನು ಮಾತ್ರ ಮುಗಿಸಿದ್ದೆ. ಶ್ರೀ ಶರ್ಮರು ಪಡೆದುಕೊಂಡಿದ್ದ ಅನುಮತಿಯ ಬಗ್ಗೆ ನನಗಾಗಲೀ ನಮ್ಮ ತಂದೆಯವರಿಗಾಗಲೀ ಮಾಹಿತಿ ದೊರಕಿರಲಿಲ್ಲ. ಬಸವಣ್ಣ, ಕೆಂಚಪ್ಪರು ಸಿದ್ಧಗಂಗೆಗೆ ಹೊರಟು ನಿಂತಾಗ “ನಾನೂ ಸಿದ್ದಗಂಗೆಗೆ ಹೋಗಬೇಕು” ಎಂದು ಹಠ ಮಾಡಿ ಅತ್ತದ್ದು ನನಗೆ ಜ್ಞಾಪಕವಿದೆ. ನನ್ನ ಹಠಕ್ಕೆ ಸೋತ ನಮ್ಮ ತಂದೆಯವರು ನನ್ನ ಜೊತೆ 1940 ರ ಮೇ ತಿಂಗಳ ಎರಡನೇ ವಾರದಲ್ಲೊಂದು ದಿನ ಸಿದ್ದಗಂಗೆ ತಲುಪಿದಾಗ ರಾತ್ರಿ 8 ಗಂಟೆ. ಶ್ರೀ ಮಠದ ಆವರಣಕ್ಕೆ ಬರುತ್ತಿದ್ದಂತೆಯೇ ಸಿದ್ದಗಂಗೆಯ ಪವಿತ್ರ ಮಂತ್ರದ ಪರಿಚಯವಾಯಿತು. ಗುರುಕುಲದ ವಿದ್ಯಾರ್ಥಿಯೊಬ್ಬನಿಂದ ಶ್ರೀ ಮಠದ ಮುಂದಿದ್ದ ನಗಾರಿಯನ್ನು ಬಾರಿಸುವುದರೊಂದಿಗೆ “ಊಟಕ್ಕೆ ಬರೋರೆಲ್ಲಾ ಬನ್ರಪ್ಪೋ’ ಎಂಬ ಘೋಷಣೆ. ಆ ರಾತ್ರಿ ಊಟ ಮುಗಿಸಿ ವಿಶ್ರಾಂತಿ ಪಡೆದೆವು.
ಮಾರನೇ ದಿನ ಬೆಳಿಗ್ಗೆ ಶ್ರೀ ಪೂಜ್ಯಪಾದರ ಭೇಟಿ. ಮೊದಲೇ ಅನುಮತಿಯನ್ನು ದೊರಕಿಸಿಕೊಂಡಿದ್ದ ಕೆಂಚಪ್ಪ ಮತ್ತು ಬಸವಣ್ಣನವರ ಪ್ರವೇಶ ಪ್ರಕ್ರಿಯೆ ಬೇಗ ಮುಗಿದು ನನ್ನ ಸರದಿ ಬಂದಾಗ ಶ್ರೀಗಳವರು ನನ್ನ ಚಿಕ್ಕ ವಯಸ್ಸಿನ ಬಗ್ಗೆ (8+) ಮತ್ತು ನಾನಿನ್ನೂ ಪ್ರೈಮರಿ ಸ್ಕೂಲನ್ನು ಮುಗಿಸದಿರುವ ಬಗ್ಗೆ ನಮ್ಮ ತಂದೆಯವರಿಗೆ ತಿಳುವಳಿಕೆ ನೀಡಿದರು. ಆಗಿನ್ನೂ ಶ್ರೀ ಮಠಕ್ಕೆ ಪ್ರೈಮರಿ ಸ್ಕೂಲಿನ ಹುಡುಗರನ್ನು ಸೇರಿಸಿಕೊಳ್ಳುತ್ತಿರಲಿಲ್ಲ. ನಮ್ಮ ತಂದೆಯವರು “ನಮ್ಮ ಹುಡುಗ ಚೆನ್ನಾಗಿ ಓದುತ್ತಾನೆ ಬುದ್ಧಿ; ನಮ್ಮ ಊರಿನ ಸ್ಕೂಲಿನಲ್ಲಿ ಇವನೇ ಫಷ್ಟು” ಎಂಬುದಾಗಿ ಶ್ರೀಗಳವರಲ್ಲಿ ಅರಿಕೆ ಮಾಡಿಕೊಂಡರು. ಆಗ ನನಗೆ ಒಂದು ಕಿರು ಪರೀಕ್ಷೆ ನಡೆಯಿತು. ಶ್ರೀಗಳವರು ಡಿಕ್ಟೇಷನ್ ಬರೆಸಿದರು; ಲೆಕ್ಕ ಮಾಡಿಸಿದರು. ಯಾವುದೇ ತಪ್ಪಿಲ್ಲದೆ ಪರೀಕ್ಷೆಯಲ್ಲಿ ತೇರ್ಗಡೆ, “ನಿಮ್ಮ ತಂದೆಯವರು ಊರಿಗೆ ಹಿಂದಿರುಗಿದಾಗ ನೀನು ಅಳುವುದಿಲ್ಲ ತಾನೆ” ಎಂಬುದಾಗಿ ಶ್ರೀಗಳು ನನ್ನನ್ನು ಕೇಳಿದಾಗ “ಇಲ್ಲ” ಎಂಬುದಾಗಿ ಧೈರ್ಯವಾಗಿಯೇ ಹೇಳಿದೆ. ಅಂದಿನಿಂದ ಇಂದಿನವರೆಗೂ ಪೂಜ್ಯರ ಆಶೀರ್ವಾದದಿಂದ ಒಂದು ದಿನವೂ ಆಳಲೇ ಇಲ್ಲ. ಈ ರೀತಿ 1941 ರ ಮೇ ತಿಂಗಳಿನಲ್ಲಿ ಶ್ರೀಮಠಕ್ಕೆ ಪ್ರವೇಶ ಪಡೆದು 1955 ರವರೆಗೆ ಸತತ 14 ವರ್ಷಗಳ ಕಾಲ ಶ್ರೀಮಠದಲ್ಲಿ ಶ್ರೀಗಳವರ ಸನ್ನಿಧಿಯಲ್ಲಿ ಅಭ್ಯಾಸ ಮಾಡಿದ ಭಾಗ್ಯ ನನ್ನದಾಗಿದೆ. ನನ್ನ ಸ್ನೇಹಿತರು ಹೇಳುವಂತೆ ನಾನು ಅದೃಷ್ಟವಂತನೇ ಹೌದು.
ಆ ಕಾಲದಲ್ಲಿ ಶ್ರೀಮಠದ ಪರಿಸ್ಥಿತಿಯ ಬಗ್ಗೆ ನನಗೆ ಜ್ಞಾಪಕವಿರುವ ಒಂದೆರಡು ಸಂಗತಿಗಳು. ಪರಮಪೂಜ್ಯ ಶ್ರೀ ಉದ್ದಾನ ಸ್ವಾಮಿಗಳು ಕೈಲಾಸವಾಸಿಗಳಾಗಿ ಸುಮಾರು ಆರು ತಿಂಗಳಾಗಿತ್ತು. ಶ್ರೀಮಠದ ಸಂಪೂರ್ಣ ಜವಾಬ್ದಾರಿ 33 ವರ್ಷದ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳದವರಾಗಿತ್ತು. ಆಗ ಶ್ರೀ ಕ್ಷೇತ್ರದ ಆವರಣದಲ್ಲಿದ್ದ ಕಟ್ಟಡಗಳೆಂದರೆ ಹಳೇಮಠ (ಅಲ್ಲಿ ಸುತ್ತು ಮುತ್ತು ಈಗ ಆಗಿರುವ ಯಾವುದೇ ಕಟ್ಟಡಗಳಿರಲಿಲ್ಲ), ಛತ್ರ, ದೊಡ್ಡ ಸ್ವಾಮಿಗಳ ಗದ್ದುಗೆ, ಆಟವೀಸ್ವಾಮಿಗಳ ಗದ್ದುಗೆ, ಹಳೇ ಮಹಡಿ, ಹೊಸ ಮಹಡಿ, ಮಠದ ಮಹಡಿ, ಗಾರೆ ಮನೆ, ಇವುಗಳ ಹೊರತು ಬೇರೆ ಯಾವುದೇ ಕಟ್ಟಡಗಳು ಕ್ಷೇತ್ರದಲ್ಲಿ ಇರಲಿಲ್ಲ.
ಹಳೇ ಊಟದ ಮನೆ ಎಂದು ಈಗ ಗುರುತಿಸಲ್ಪಡುವ 100 X 50 ವಿಸ್ತೀರ್ಣದಲ್ಲಿ 1941 ರಲ್ಲಿ ಆಗಿನ ಅಡುಗೆ ಮನೆ ಮತ್ತು ಊಟದ ಮನೆ ವ್ಯವಸ್ಥೆ. ಅಲ್ಲಿಯೇ ನೀರು ಶೇಖರಿಸಲು ಎರಡು ಕಲ್ಲು ತೊಟ್ಟಿಗಳು (ಚಿಕ್ಕ ತೊಟ್ಟಿ, ದೊಡ್ಡ ತೊಟ್ಟಿ), ಆ ತೊಟ್ಟಿಗಳ ಪಕ್ಕದಲ್ಲಿಯೇ ನಮ್ಮ ಸ್ನಾನಕ್ಕೆ ವ್ಯವಸ್ಥೆ, ಆಗಿನ ನಮ್ಮ ಊಟದ ಮನೆ ನೆಲ ಸಗಣಿಯಿಂದ ಸಾರಿಸಿದ್ದು. ಈಗಿನ ಹಳೇ ಅಡಿಗೆ ಮನೆ ಹಾಗೂ ಹೊಸ ಪ್ರಸಾದ ನಿಲಯ ಯಾವುವೂ ಆಗ ಇರಲಿಲ್ಲ. ಆ ಜಾಗದಲ್ಲಿ ಇದ್ದುದು ತೆಂಗಿನ ತೋಟ. ಆ ಜಾಗದಲ್ಲಿದ್ದ ಮಿಷನ್ ಬಾವಿ ಮತ್ತು ತೋಟದ ಬಾವಿಯಿಂದ ನಮಗೆ ನೀರು ಸರಬರಾಜು. ಮೊದಲನೆಯದಕ್ಕೆ ಎಲೆಕ್ಟಿಕ್ ಪಂಪ್ ಜೋಡಿಸಿದ್ದರು. ಎರಡನೇ ಬಾವಿಯಿಂದ ಬಾನಿಯಿಂದ ನೀರು ಎಳೆಯುತ್ತಿದ್ದರು. ಈ ಎರಡು ಬಾವಿಗಳ ನೀರು ಮೇಲಿನ ಎರಡು ತೊಟ್ಟಿಗಳಿಗೆ ನೇರವಾಗಿ ತಲುಪುವ ವ್ಯವಸ್ಥೆ ಇತ್ತು. ಮೈದಾಳದ ಕೆರೆಯ ನೀರೂ ಕೂಡಾ ದೊಡ್ಡ ಕಲ್ಯಾಣಿಗೆ ಹಾಗೂ ಅಡಿಗೆ ಮನೆಗೆ ಹರಿಯುವ ವ್ಯವಸ್ಥೆಯಿತ್ತು. ಶ್ರೀಮಠದಲ್ಲಿ ಆಗ ನಲ್ಲಿಯ ವ್ಯವಸ್ಥೆ ಇರಲಿಲ್ಲ.
ಶ್ರೀಮಠದಲ್ಲಿದ್ದ ಸಂಸ್ಕೃತ ಕಾಲೇಜೊಂದನ್ನು ಬಿಟ್ಟರೆ ಶ್ರೀಮಠದ ವತಿಯಿಂದ ಬೇರೆ ಯಾವುದೇ ಸ್ಕೂಲು ಯಾ ಕಾಲೇಜು ನಡೆಯುತ್ತಿರಲಿಲ್ಲ. ಪ್ರೈಮರಿ ಸ್ಕೂಲು ಹಾಗೂ ಮಿಡ್ಸ್ ಸ್ಕೂಲು ವಿದ್ಯಾರ್ಥಿಗಳು ಕ್ಯಾತ್ಸಂದ್ರಕ್ಕೂ, ಹೈಸ್ಕೂಲು ಮತ್ತು ಕಾಲೇಜು ವಿದ್ಯಾರ್ಥಿಗಳು ತುಮಕೂರಿಗೂ ಹೋಗುತ್ತಿದ್ದರು. ಆಗ ನಾನೊಬ್ಬನೇ ಪ್ರೈಮರಿ ಸ್ಕೂಲು ವಿದ್ಯಾರ್ಥಿ. ಮಾರನೇ ವರ್ಷವೇ 1942-43 ರಲ್ಲಿ ಶ್ರೀಮಠದಲ್ಲಿ ಮಿಡ್ಲ್ ಸ್ಕೂಲ್ ಹಾಗೂ ಮೂರು ವರ್ಷಗಳ ನಂತರ ತುಮಕೂರಿನಲ್ಲಿ ಸಿದ್ಧಗಂಗಾ ಹೈಸ್ಕೂಲ್ ಪ್ರಾರಂಭವಾದವು.
ಆಗಿನ ಕಾಲದ ಸಿದ್ಧಗಂಗೆಯ ಹುಡುಗರ ಜೀವನ ಶೈಲಿ ಬಹಳ ಸರಳ ಹಾಗೂ ಅನುಕೂಲಕರ. ಎಸ್. ಎಸ್. ಎಲ್. ಸಿ ಮುಗಿಯುವವರೆಗೂ ಕ್ರಾಫ್ ಬಿಡುತ್ತಿರಲಿಲ್ಲ. ಪೂರ್ಣ ಬೋಳು ತಲೆ. ಹಾಗಾಗಿ ಖರ್ಚು ಮತ್ತು ಸಮಯದ ಉಳಿತಾಯ, ಎಣ್ಣೆ, ಸೀಗೇಕಾಯಿ (ಅಥವಾ ಸೋಪು) ಇವು ಬೇಕೆಂದಿಲ್ಲ. ಬಾಚಣಿಗೆ ಕನ್ನಡಿಗಳ ಅವಶ್ಯಕತೆಯಿಲ್ಲ ಸ್ಕೂಲಿಗೆ ಹೋಗುವಾಗ ಟೋಪಿ (ಬಿಳಿ ಅಥವಾ ಕಪ್ಪು ಧರಿಸುತ್ತಿದ್ದೆವು. ಆಗಿನ ಕಾಲದಲ್ಲಿ ನಮ್ಮ ಉಡುಗೆ ಬಹೂಪಯೋಗಿ ಪಂಚೆ ಮಾತ್ರ. ಪ್ಯಾಂಟ್ ಯಾರೂ ಧರಿಸುತ್ತಿರಲಿಲ್ಲ.
ಎಸ್. ಎಸ್. ಎಲ್. ಸಿ ಮುಗಿಯುವವರೆಗೆ ನಾವೆಲ್ಲರೂ ತುಮಕೂರು ಹೈಸ್ಕೂಲಿಗೆ ಬರಿಗಾಲಲ್ಲೇ ನಡೆದು ಹೋಗಿ ಬರುತ್ತಿದ್ದೆವು. ಆ ಕಾಲದಲ್ಲಿ ಶ್ರೀಗಳವರು ಭಿಕ್ಷೆಗಾಗಿ ಹಳ್ಳಿಗಳ ಪ್ರವಾಸ ಮಾಡಲು ಉಪಯೋಗಿಸುತ್ತಿದ್ದ ವಾಹನವೆಂದರೆ ಎತ್ತಿನ ಗಾಡಿ. ಕೆಲವು ವೇಳೆ ಶ್ರೀ ಸ್ವಾಮಿಗಳು ಕುದುರೆಯ ಮೇಲೆಯೂ ಹಳ್ಳಿಗಳಲ್ಲಿ ಪ್ರವಾಸ ಮಾಡುತ್ತಿದ್ದರು. ಬೆಂಗಳೂರಿಗೆ ಹೋಗಬೇಕಾದಾಗ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಸಿದ್ದಗಂಗೆಯ ಇಂದಿನ ಸೇವಾ ವೈಭವವನ್ನು ಅಂದಿನ (1940 ರ) ಪರಿಸ್ಥಿತಿಗೆ ಹೋಲಿಸಿದಾಗ ಪರಮಪೂಜ್ಯರ 75 ಸಂವತ್ಸರಗಳ ಪರಿಶ್ರಮದ ಅಗಾಧತೆಗೆ ಶಿರಬಾಗಿ ಭಕ್ತಕೋಟಿ ಕೃತಜ್ಞತೆಯನ್ನು ಸಲ್ಲಿಸುತ್ತಿದೆ.
ನನ್ನ ನೆನಪುಗಳನ್ನು ಮುಂದುವರಿಸುತ್ತಾ ನನ್ನ ವೈಯಕ್ತಿಕ ಒಂದೆರಡು ವಿಚಾರಗಳನ್ನು ಪ್ರಸ್ತಾಪ ಮಾಡುವುದು ಅನಿವಾರ್ಯ. ಕ್ಯಾತ್ಸಂದ್ರದಲ್ಲಿ ಪ್ರೈಮರಿ ನಾಲ್ಕನೇ ಕ್ಲಾಸು ಹಾಗೂ ಶ್ರೀಮಠದಲ್ಲಿ ಮಿಡ್ ಸ್ಕೂಲ್ 4 ವರ್ಷಗಳ ಅಭ್ಯಾಸವನ್ನು ಮುಗಿಸಿ ತುಮಕೂರಿನ ಸಿದ್ದಗಂಗಾ ಹೈಸ್ಕೂಲಿಗೆ 1946 ರಲ್ಲಿ ಸೇರಿದೆ. ಅಲ್ಲಿಯವರೆಗೆ ನಮ್ಮ ಮನೆಯ ನಂತರ ನಮ್ಮ ಮನೆಯ ಕಡೆಯಿಂದ ನನಗೆ ಬೇಕಾದ ಹಣದ ಸಹಾಯ ದೊರೆಯುತ್ತಿತ್ತು. 1946 ರ ನಂತರ ನಮ್ಮ ಮನೆಯ ಕಡೆ ಆರ್ಥಿಕ ಮುಗ್ಗಟ್ಟು ಉಂಟಾಯಿತು. ತಮಗೆ ತೊಂದರೆಯಾದರೂ, ಬೇರೆಯವರಿಗೆ ಅನುಕೂಲ ಮಾಡಿಕೊಡುವ ನಮ್ಮ ತಂದೆಯವರ ಮನೋವೃತ್ತಿ ಇದಕ್ಕೆ ಕಾರಣ. ಅದು ಅವರ ಸ್ವಭಾವ. ಅವರ ಈ ಸ್ವಭಾವದ ಬಗ್ಗೆ ನನಗೆ ಅಪಾರ ಮೆಚ್ಚುಗೆ ಹಾಗೂ ಗೌರವ. ಈ ಬಗ್ಗೆ ಪೂಜ್ಯ ಪಾದರಲ್ಲಿ ಅರಿಕೆಮಾಡಿಕೊಂಡಾಗ ಅವರಿಗೆ ನಂಬಿಕೆ ಉಂಟಾಗಲು ಸ್ವಲ್ಪ ಸಮಯವೇ ಹಿಡಿಯಿತು. ಏಕೆಂದರೆ ಮೈಸೂರು ಕಡೆಯ ರೈತ ಕುಟುಂಬಗಳು ರೇಷ್ಮೆ ಬೆಳೆಯಿಂದಾಗಿ ಬೇರೆಯವರಿಗಿಂತ ಅನುಕೂಲವುಳ್ಳವರೆಂಬ ಭಾವನೆ. ಆದರೂ ನನ್ನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿದ ಪೂಜ್ಯರು ಹೈಸ್ಕೂಲ್ ಎರಡನೇ ತರಗತಿಯಿಂದ ನನ್ನ ವಿದ್ಯಾಭ್ಯಾಸದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡು ಆಶೀರ್ವದಿಸಿದರು. ನಾನಾದರೂ ಕೂಡ ಅವಶ್ಯವೆನಿಸಿದಾಗ ಮಾತ್ರ ಶ್ರೀಗಳವರ ಸಹಾಯ ಪಡೆಯುತ್ತಿದ್ದೆ. ಈ ನನ್ನ ಸಂಕೋಚ ಸ್ವಭಾವವನ್ನು ಗಮನಿಸಿದ ಶ್ರೀ ಸ್ವಾಮಿಗಳವರು, ಶ್ರೀ ಮಠದ ಹಣಕಾಸು ವ್ಯವಹಾರಗಳನ್ನು ನೋಡುತ್ತಿದ್ದ ಬೆಂಗಳೂರು ದೊಡ್ಡಮಠದ ಶ್ರೀ ಚನ್ನವೀರ ಸ್ವಾಮಿಗಳಿಗೆ ಈ ರೀತಿ ಅಪ್ಪಣೆ ಕೊಡಿಸಿದ್ದರು. “ಚನ್ನಬಸಪ್ಪನು ದುಡ್ಡು ಕೇಳಿದರೆ ಕೊಡಿರಿ; ಯಾವ ಖರ್ಚಿಗಾಗಿ ಎಂಬುದಾಗಿ ಕೇಳುವ ಅವಶ್ಯಕತೆಯಿಲ್ಲ”. ಶ್ರೀ ಚನ್ನವೀರ ಸ್ವಾಮಿಗಳು “ಏನಯ್ಯ ಚನ್ನಬಸಪ್ಪ, ಶ್ರೀಗಳವರು ಈ ರೀತಿ ಹೇಳಿದ್ದಾರೆ. ನೀನು ದುಡ್ಡು ಕೇಳೋದೇ ಇಲ್ವಲ್ಲೋ” ಎಂದು ತಮಾಷೆ ಮಾಡಿದ್ದುಂಟು, ನಾನು ಹೈಸ್ಕೂಲ್ ಮೂರನೇ ವರ್ಷದಲ್ಲಿದ್ದಾಗ ಒಂದು ದಿನ ಪೂಜ್ಯ ಪಾದರು ನನ್ನನ್ನು ಕರೆಸಿ ಐದು ರೂಪಾಯಿಗಳ ನೋಟೊಂದನ್ನು ಕೊಟ್ಟು ಪುಸ್ತಕ ವಗೈರೆ ಖರ್ಚಿಗಾಗಿ ಎಂದು ಅಪ್ಪಣೆ ಕೊಡಿಸಿದಾಗ ನನ್ನ ಆಶ್ಚರ್ಯ ಆನಂದಗಳಿಗೆ ಪಾರವೇ ಇರಲಿಲ್ಲ. ಈ ರೀತಿ ಪೂಜ್ಯಪಾದರು ನನ್ನ ಬಗ್ಗೆ ಇರಿಸಿಕೊಂಡಿರುವ ನಂಬಿಕೆ ವಾತ್ಸಲ್ಯಗಳನ್ನು ನೆನೆಸಿಕೊಂಡಾಗಲೆಲ್ಲಾ ಕಂಠ ಬಿಗಿದು ಬರುತ್ತದೆ.
1949 ಎಸ್. ಎಸ್. ಎಲ್. ಸಿ ಪಾಸಾಗಿ ತುಮಕೂರಿನ ಪ್ರಥಮದರ್ಜೆ ಕಾಲೇಜಿಗೆ ಸೇರ್ಪಡೆ. ಸಿದ್ಧಗಂಗೆಯ ಹುಡುಗರು ಕಾಲೇಜಿಗೆ ಸೇರುವುದೆಂದರೆ ದೊಡ್ಡ ಬದಲಾವಣೆ, ತಲೆಗೆ ಕ್ರಾಪು, ಕಾಲಿಗೆ ಚಪ್ಪಲಿ, ಪ್ಯಾಂಟ್ ಹಾಕುವವರು ಹಾಕಬಹುದು. ಆಗ ಪ್ರಥಮ ದರ್ಜೆ ಕಾಲೇಜು ನಮ್ಮ ಈಗಿನ ಸಿದ್ಧಗಂಗಾ ಕಾಲೇಜಿನ ಆವರಣದಲ್ಲಿತ್ತು. ಕ್ಯಾತ್ಸಂದ್ರದಿಂದ ಕಾಲೇಜಿಗೆ ರೈಲಿನಲ್ಲಿ ಪ್ರಯಾಣ, ರೈಲ್ವೆ ಪಾಸಿಗೆ ತಿಂಗಳೊಂದಕ್ಕೆ ಎರಡು ರೂಪಾಯಿಗಳು. ಆಗ ಕಾಲೇಜಿನ ಪ್ರಿನ್ಸಿಪಾಲರಾಗಿದ್ದವರು ಗಣಿತಶಾಸ್ತ್ರದ ಪ್ರೊಫೆಸರ್ ಪಿ. ಹೆಚ್. ನಾಗಪ್ಪನವರು. ನಾನು ಅವರಿಗೆ ಅತ್ಯಂತ ಪ್ರಿಯನಾದ ಶಿಷ್ಯ. 1953 ರಲ್ಲಿ ಇಂಟರ್ ಮೀಡಿಯೆಟ್ ಪರೀಕ್ಷೆಯಲ್ಲಿ (ಎಂದಿನಂತೆ) ಫಸ್ಟ್ ಕ್ಲಾಸಿನಲ್ಲಿ ತೇರ್ಗಡೆ ಹೊಂದಿದೆ. ಬೆಂಗಳೂರಿನ ಗೌರ್ನಮೆಂಟ್ ಇಂಜಿನಿಯರಿಂಗ್ ಕಾಲೇಜಿನಲ್ಲಿ (ಈಗಿನ ಯು. ವಿ. ಸಿ. ಇ) ಸೀಟ್ ಸಿಕ್ಕಿತ್ತು. ಇಂಜಿನಿಯರಿಂಗ್ ಓದಲು ಪೂಜ್ಯಪಾದರು ಅನುಮತಿಯನ್ನೂ ಕೊಟ್ಟಿದ್ದರು. “ಇಂಜಿನಿಯರಿಂಗ್ ಯಾರಾದರೂ ಓದಬಹುದು; ನೀನು ಗಣಿತಶಾಸ್ತ್ರವನ್ನು ಅಭ್ಯಾಸ ಮಾಡು” ಎಂಬ ನನ್ನ ಹಿತೈಷಿಗಳಾದ ಪ್ರೊ. ನಾಗಪ್ಪನವರ ಸಲಹೆಯಂತೆ ತುಮಕೂರಿನಲ್ಲಿಯೇ ಬಿ. ಎಸ್ಸಿ ತರಗತಿಗೆ ಸೇರಿದೆ. ಗಣಿತಶಾಸ್ತ್ರದಲ್ಲೇ ವಿಶೇಷ ತರಬೇತಿ ನೀಡುವ ಕೋರ್ಸು ಸೆಂಟ್ರಲ್ ಕಾಲೇಜು ಬೆಂಗಳೂರಿನಲ್ಲಿ ಮಾತ್ರ ಇತ್ತು. ಪ್ರಯುಕ್ತ ಪ್ರೊ. ನಾಗಪ್ಪನವರು ನನಗೋಸ್ಕರ ಹೆಚ್ಚು ಗಣಿತಶಾಸ್ತ್ರದ ಪಿ. ಎ೦-1, ಎ೦-2 (ಪಿಸಿಕ್ಸ್, ಪ್ಯುರ್ ಮ್ಯಾಥಮ್ಯಾಟಿಕ್ಸ್, ಅಪ್ಲೈಡ್ ಮ್ಯಾಥೆಮ್ಯಾಟಿಕ್ಸ್) ಎಂಬ ವಿಶೇಷವಾಗಿ ಕೋರ್ಸ್ ಒಂದನ್ನು ರೂಪಿಸಿ ಮೈಸೂರು ವಿದ್ಯಾಲಯದಿಂದ ಅದಕ್ಕೆ ಅನುಮತಿಯನ್ನು ಪಡೆದುಕೊಂಡು ಹೊಸ ಕೋರ್ಸನ್ನು ತುಮಕೂರು ಕಾಲೇಜಿನಲ್ಲಿಯೇ 1953 ರಲ್ಲಿ ಪ್ರಾರಂಭ ಮಾಡಿಸಿದರು. ಆ ಕೋರ್ಸಿಗೆ ನನ್ನನ್ನು ಸೇರಿ 10 ಜನ ಮಾತ್ರ ಸೇರಿದೆವು. 1953 ರಲ್ಲಿ ನನ್ನ ಬಿ. ಎಸ್.ಸಿ ಡಿಗ್ರಿ ಮೊದಲನೇ ಶ್ರೇಣಿಯಲ್ಲಿ ಪೂರ್ತಿಯಾಯಿತು. ಕೂಡಲೇ ಗಣಿತಶಾಸ್ತ್ರ ವಿಭಾಗದಲ್ಲಿ ಅದೇ ಕಾಲೇಜಿನಲ್ಲಿ ಅಧ್ಯಾಪಕನಾಗಿ ಕೆಲಸವು ಸಿಕ್ಕಿತು. ಡಿಗ್ರಿ ಮುಗಿಯುವವರೆಗೆ ನನಗೆ ಪ್ಯಾಂಟ್ ದರಿಸುವ ಪ್ರಮೇಯವೇ ಬಂದಿರಲಿಲ್ಲ. ಶ್ರೀಗಳವರು “ಕಾಲೇಜಿಗೆ ಹೋಗುವಾಗ ಒಳ್ಳೆ ಡ್ರೆಸ್ ನಲ್ಲಿ ಹೋಗಬೇಕು” ಎಂದು ಅಪ್ಪಣೆ ಕೊಡಿಸಿ, ಸೂಟ್ ಹೊಲಿಸಿಕೊಳ್ಳಲು 50 ರೂಪಾಯಿಗಳನ್ನು ಕೊಟ್ಟು ಆಶೀರ್ವದಿಸಿದರು. 1953 ರಿಂದ 1955 ರವರೆಗೆ ತುಮಕೂರು ಕಾಲೇಜಿನಲ್ಲಿ ನನ್ನ ಅಧ್ಯಾಪಕ ವೃತ್ತಿ ಚೆನ್ನಾಗಿಯೇ ನಡೆಯಿತು. ಆಗ ನನ್ನ ಸಂಬಳ ತಿಂಗಳಿಗೆ 123 ರೂಪಾಯಿಗಳು.
ಸಿದ್ಧಗಂಗೆಯಲ್ಲಿ ಅಭ್ಯಾಸ ಮಾಡುವ ವಿದ್ಯಾರ್ಥಿಗಳ ಅದೃಷ್ಟ ತುಂಬಾ ದೊಡ್ಡದು. ಚಿಕ್ಕ ವಯಸ್ಸಿನಲ್ಲಿಯೇ ಸಂಸ್ಕೃತವನ್ನು ಕಲಿಯುವ ಸುವರ್ಣಾವಕಾಶ 1941 ರಿಂದ 1952 ರವರೆಗೆ ನನ್ನ ಸಂಸ್ಕೃತ ಅಭ್ಯಾಸ ನಡೆದು, 1952 ರಲ್ಲಿ ಅಲಂಕಾರ ಮಧ್ಯಮದಲ್ಲಿ ತೇರ್ಗಡೆ ಹೊಂದಿದೆ. ಆ ಕಾಲದಲ್ಲಿ ಸಂಸ್ಕೃತ ಓದುವವರಿಗೆ ಸರ್ಕಾರದ ಕಡೆಯಿಂದ ಪ್ರೋತ್ಸಾಹವಿತ್ತು. ಅದರ ಅಂಗವಾಗಿ ಸಿದ್ಧಗಂಗೆಯಿಂದ ಮಧ್ಯಮ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದ ನನಗೆ ಮತ್ತು ಡಿ. ಗಂಗಾಧರಯ್ಯನವರಿಗೆ 1953 ರಲ್ಲಿ ಮೈಸೂರು ಅರಮನೆಯಲ್ಲಿ ನಡೆದ ರಾಜಸಭೆಯಲ್ಲಿ 50 ರೂಪಾಯಿ ಬಹುಮಾನದೊಂದಿಗೆ ಸನ್ಮಾನ. ನಮಗೆ ಸಂಸ್ಕೃತವನ್ನು ಕಲಿಸಿದ ವಿದ್ವಾಂಸರುಗಳಾದ ಬಿ. ಗಂಗಪ್ಪನವರು, ರುದ್ರಾರಾಧ್ಯ ಶರ್ಮರು, ಕಾಶಿ ಶ್ರೀನಿವಾಸ ಐಯ್ಯಂಗಾರ್ಯರು, ಶ್ರೀಪತಿಶರ್ಮರು, ವಾಸುದೇವಾಚಾರ್ಯರು ಮತ್ತು ವಿಶ್ವನಾಥಭಟ್ಟರು ಇವರೆಲ್ಲರನ್ನೂ ಕೃತಜ್ಞತೆಯಿಂದ ನೆನೆಯುತ್ತೇನೆ. ಗಣೇಶೋತ್ಸವ ಕಾಲದಲ್ಲಿ ಎಲ್ಲರೂ ಅತ್ಯಂತ ಕುತೂಹಲದಿಂದ ನಿರೀಕ್ಷಿಸುತ್ತಿದ್ದ ಕಾರ್ಯಕ್ರಮ ಅಂತ್ಯಾಕ್ಷರೀ ಸ್ಪರ್ಧೆ. ಸಿನಿಮಾ ಹಾಡುಗಳಲ್ಲ: ಸಂಸ್ಕೃತ ಶ್ಲೋಕಗಳದ್ದು. ನಮ್ಮ ವಿದ್ಯಾರ್ಥಿಗಳದ್ದೇ ಎರಡು ಪಾರ್ಟಿಗಳು. ನಮ್ಮ ಉಪಾಧ್ಯಾಯರುಗಳೇ ತೀರ್ಪುಗಾರರು, ಸತತ ಆರೇಳು ಬಾರಿ ನಮ್ಮ ಪಾರ್ಟಿಯವರೇ ಜಯಶಾಲಿಗಳಾಗಿದ್ದೆವು.
ಗುರುಕುಲದ ಮಕ್ಕಳ ಮೇಲೆ ಶ್ರೀಗಳವರದು ಅಪಾರ ಕರುಣೆ. ಅನೇಕ ಬಾರಿ ಶ್ರೀಗಳವರೇ ಅಡಿಗೆ ಮನೆಯಲ್ಲಿ ಮುದ್ದೆ ತಿರುವಿ, ಅನ್ನ ಬಸಿದು ನಮಗೆ ಉಣಬಡಿಸಿದ್ದಾರೆ. ಪ್ರತಿ ಸಂಜೆ ಶ್ರೀ ಕ್ಷೇತ್ರದ ಶ್ರಮದಾನದಲ್ಲಿ ನಮ್ಮ ಜೊತೆ ಕೆಲಸ ಮಾಡಿ ಶ್ರೇಷ್ಠ ಮಾದರಿಯಾಗುವ ಮೂಲಕ ಕಾಯಕದ ಮಹತ್ವದ ಬಗ್ಗೆ ನಮಗೆ ಅರಿವು ಮೂಡಿಸಿದ್ದಾರೆ. ನಾವೆಲ್ಲಾ ಹಳ್ಳಿಯ ಸ್ಕೂಲುಗಳಿಂದ ಬಂದ ಮಕ್ಕಳಾದ್ದರಿಂದ, ಹೊಸ ವಿಷಯಗಳ ಕಲಿಕೆ ಕಷ್ಟವೆನಿಸಬಹುದಾದ್ದರಿಂದ, ಸ್ವತಃ ಶ್ರೀಗಳೇ ಬೆಳಿಗ್ಗೆ 6 ರಿಂದ 7 ಗಂಟೆಯವರೆಗೆ ವಿಶೇಷ ತರಗತಿಗಳಲ್ಲಿ ನಮಗೆ ಸಂಸ್ಕೃತ ಮತ್ತು ಇಂಗ್ಲಿಷ್ ವಿಷಯಗಳಲ್ಲಿ ಪಾಠವನ್ನು ಹೇಳಿದ್ದಾರೆ. ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಕ್ರಿಯೆಯ ಅಂಗವಾಗಿ ಶ್ರೀಗಳವರ ಅಧ್ಯಕ್ಷತೆಯಲ್ಲಿ ಪ್ರತಿ ಭಾನುವಾರ ಮಧ್ಯಾಹ್ನ ಚರ್ಚಾಸ್ಪರ್ಧೆ ನಡೆಯುತ್ತಿತ್ತು. ಸ್ಪರ್ಧೆಯ ಕೊನೆಯಲ್ಲಿ ಚರ್ಚಿತ ವಿಷಯದ ಬಗ್ಗೆ ಶ್ರೀಗಳವರಿಂದ ಟಿಪ್ಪಣಿ.
1947-1953 ಈ ಅವಧಿಯಲ್ಲಿ ರಜಾ ಕಾಲವನ್ನು ಹೆಚ್ಚು ನಾನು ಶ್ರೀ ಕ್ಷೇತ್ರದಲ್ಲಿ ಕಳೆದಿರುತ್ತೇನೆ. ರಜಾ ವೇಳೆಯಲ್ಲಿ ಶ್ರೀ ಮಠದಲ್ಲಿ ನನ್ನ ಕಾಯಕ ಊಟಕ್ಕೆ ನೀಡುವುದು. ವಿದ್ವಾನ್ ಎನ್. ಕೆ. ನೀಲಕಂಠಾರಾಧ್ಯರು ಆ ಕಾರ್ಯದಲ್ಲಿ ನನ್ನ ಜೊತೆಗಿರುತ್ತಿದ್ದರು. ಒಮ್ಮೆ ಜಾತ್ರೆಯಲ್ಲಿ ನನಗೆ ಸಾದರ ಕೊಪ್ಪಲಿನಲ್ಲಿ ಊಟಕ್ಕೆ ನೀಡುವ ಮತ್ತು ದಿನದ ಕೊನೆಯಲ್ಲಿ ಬಕೀಟು ಮುಂತಾದ ಸಲಕರಣೆಗಳನ್ನು ಸುರಕ್ಷಿತ ಜಾಗದಲ್ಲಿಡುವ ಜವಾಬ್ದಾರಿಯನ್ನು ವಹಿಸಲಾಗಿತ್ತು. ಅದೊಂದು ದಿನ ಈ ಕೆಲಸಗಳನ್ನೆಲ್ಲಾ ಮುಗಿಸಿ ಹಳೇ ಮಹಡಿಯ ನನ್ನ ರೂಮಿಗೆ ಬರುವಾಗ ಸುಮಾರು ರಾತ್ರಿ 11 ಗಂಟೆಯಾಗಿತ್ತು. ಹಾಲಿನಲ್ಲಿ ಸುಮಾರು 20 ಜನ ಮಲಗಿ ನಿದ್ರಿಸುತ್ತಿದ್ದರು. ನನ್ನ ಹಾಸಿಗೆಯಲ್ಲಿಯೂ ಯಾರೋ ಅಪರಿಚಿತರು (ಸುಮಾರು 50 ವರ್ಷ ವಯಸ್ಸಿರಬಹುದು) ಮಲಗಿ ಸುಖ ನಿದ್ರೆಯಲ್ಲಿದ್ದರು. ಅವರನ್ನು ಅಷ್ಟು ಹೊತ್ತಿನಲ್ಲಿ ಎಬ್ಬಿಸುವ ಮನಸ್ಸಾಗದೆ ನಾನೇ ಜಾಗವಿದ್ದ ಕಡೆ ಪಂಚೆಯನ್ನು ಹೊದ್ದುಕೊಂಡು ಮಲಗಿದೆ. ನಿದ್ರೆಯೂ ಬಂತು. ಬೆಳಗ್ಗೆ 6 ಗಂಟೆಗೆ ಎದ್ದು ನೋಡುವಾಗ ನನ್ನ ಹಾಸಿಗೆಯಲ್ಲಿ ಮಲಗಿದ್ದ ಆಸಾಮಿಯೂ ಇಲ್ಲ. ಹಾಸಿಗೆಯೂ ಇಲ್ಲ. ನನ್ನ ದಡ್ಡತನಕ್ಕೆ ನನಗೆ ನಗು ಬಂತು. ಈ ಪ್ರಕರಣದಿಂದ ಕಲಿಯಬಹುದಾದ ಪಾಠ; ಸ್ವಂತಕ್ಕೆ ತೊಂದರೆ ಮಾಡಿಕೊಂಡು ಬೇರೆಯವರಿಗೆ ಉಪಕಾರ ಮಾಡಬಾರದು!
1954 ರ ಸೆಪ್ಟೆಂಬರ್ ತಿಂಗಳಲ್ಲಿ ನಾವು ಕೆಲವು ಸ್ನೇಹಿತರು ಶ್ರೀಮಠದ ಹಳೆಯ ವಿದ್ಯಾರ್ಥಿಗಳ ಸಂಘವನ್ನು ಸ್ಥಾಪಿಸುವ ಬಗ್ಗೆ ಶ್ರೀಗಳವರಲ್ಲಿ ಅರಿಕೆ ಮಾಡಿಕೊಂಡಾಗ ಪೂಜ್ಯರು ಅನುಮತಿ ನೀಡಿ, ಆರಂಭದ ಖರ್ಚಿಗಾಗಿ 25 ರೂಪಾಯಿಗಳನ್ನು ಕೊಟ್ಟು ಆಶೀರ್ವದಿಸಿದರು. ಮೊದಲನೆಯ ಸಮಾವೇಶಕ್ಕೆ ಆಹ್ವಾನ ಪತ್ರಿಕೆಗಳನ್ನು ಕಳುಹಿಸುವ ಸಲುವಾಗಿ ನನ್ನನ್ನು “ಕನ್ವಿನರ್” ಆಗಿ ನೇಮಿಸಿದರು. ಪೋಸ್ಟ್ ಕಾರ್ಡಿನಲ್ಲಿ ಮುದ್ರಿತವಾದ ಆಹ್ವಾನ ಪತ್ರಗಳನ್ನು ಆಗ ನಮ್ಮಲ್ಲಿ ಲಭ್ಯವಿದ್ದ ಸುಮಾರು 400 ವಿಳಾಸಗಳಿಗೆ ಕಳುಹಿಸಿಕೊಟ್ಟೆವು. ನಿಗದಿತ ದಿನಾಂಕ 04.10.1954 ರಂದು ಬೆಳಿಗ್ಗೆ 11 ಗಂಟೆಗೆ ಪರಮಪೂಜ್ಯರ ಅಧ್ಯಕ್ಷತೆಯಲ್ಲಿ ಸೇರಿದ್ದ ಹಳೆಯ ವಿದ್ಯಾರ್ಥಿಗಳ ಮೊದಲನೇ ಸಮಾವೇಶದಲ್ಲಿ ಶ್ರೀ ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳ ಸಂಘವು ಶಾರದಾ ಪೂಜೆಯ ಆ ಶುಭದಿನದಂದು ಜನ್ಮ ತಾಳಿತು. ಸಂಸ್ಥಾಪನಾ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಸುಮಾರು ಮುನ್ನೂರು ಹಳೆಯ ವಿದ್ಯಾರ್ಥಿಗಳು ತುಂಬಾ ಉತ್ಸಾಹ ಹಾಗೂ ಸಂಭ್ರಮದಿಂದ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಅಂದಿನಿಂದ ಇಂದಿನವರೆಗೆ ಸಂಘವು ವರ್ಷೇ ವರ್ಷೇ ಅಭಿವೃದ್ಧಿಯನ್ನು ಹೊಂದಿ ಶ್ರೀಮಠಕ್ಕೆ ತನ್ನ ಅಳಿಲು ಸೇವೆಯನ್ನು ಸಲ್ಲಿಸುತ್ತಾ ಬಂದಿದೆ. ಸಂಘದ ಕೆಲಸ ಕಾರ್ಯಗಳಿಂದ ಶ್ರೀಗಳವರೂ ಕೂಡ ಪ್ರಸನ್ನಚಿತ್ತರಾಗಿರುವುದು ಹಳೇ ವಿದ್ಯಾರ್ಥಿಗಳ ಸೌಭಾಗ್ಯ, ಇತ್ತೀಚೆಗೆ ಸಂಘದ ಕೆಲಸ ಕಾರ್ಯಗಳನ್ನು ಮೆಚ್ಚಿಕೊಂಡಿರುವ ಹಲವು ಸಾರ್ವಜನಿಕರು ಹಿತೈಷಿಗಳ ರೂಪದಲ್ಲಿ ನಮ್ಮ ಸಂಘಕ್ಕೆ ಸದಸ್ಯರಾಗಿ ಸಂಘದ ಚಟುವಟಿಕೆಗಳಲ್ಲಿ ಕೈಜೋಡಿಸುತ್ತಿರುವುದು ತುಂಬಾ ಸಂತೋಷದ ವಿಷಯ.
ಸಂಸ್ಥಾಪನಾ ಅಧಿವೇಶನದ ಅಧ್ಯಕ್ಷ ಪೀಠದಿಂದ ಶ್ರೀಗಳು ಸಂಘದ ಸ್ಥಾಪನೆಯ ಬಗ್ಗೆ ಹರ್ಷ ವ್ಯಕ್ತಪಡಿಸುತ್ತಾ ಅಂದಿನ ಮಠದ ಪರಿಸ್ಥಿತಿಯ ಬಗ್ಗೆ ಈ ರೀತಿ ವಿವರಿಸಿದರು.
“ಅಂದಂದಿನ ಕಾರ್ಯ ನಿರ್ವಹಣೆ ಹೊರತು, ಖಾಯಂ ಉತ್ಪತ್ತಿ ಯಾವುದೂ ಇಲ್ಲ. 47,000 ರೂಪಾಯಿ ನಿಧಿ ಇದೆ. ಖಾಯಂ ಉತ್ಪತ್ತಿ ಬಾಯ್ತು ವರ್ಷಕ್ಕೆ 15,000 ರೂಪಾಯಿ ಮಾತ್ರ. ವಾರ್ಷಿಕ ಖರ್ಚು ಒಂದೂವರೆ ಲಕ್ಷ ರೂಪಾಯಿಗಳು. ಇದು ನಿಜವಾದ ಚಿತ್ರಣ. ಸಂಸ್ಥೆ ವ್ಯಕ್ತಿಯ ಮೇಲೆ ನಿಂತಿರುವುದು ಅಪಾಯಕರ. ಆದ್ದರಿಂದ ಖಾಯಂ ಆದಾಯದ ಮೇಲೆ ಸಂಸ್ಥೆಯನ್ನು ಸ್ವಾವಲಂಬಿಯನ್ನಾಗಿ ಮಾಡುವುದು ನಮ್ಮೆಲ್ಲರ ಕರ್ತವ್ಯ”
ಎಂಬುದಾಗಿ ಪೂಜ್ಯರು ಪ್ರಾಂಜಲ ಮನಸ್ಸಿನಿಂದ ಹಳೆಯ ವಿದ್ಯಾರ್ಥಿಗಳ ಜೊತೆ ತಮ್ಮ ಇಂಗಿತವನ್ನು ಹಂಚಿಕೊಂಡರು.
ಶ್ರೀಮಠದ ನಿಜವಾದ ಪರಿಸ್ಥಿತಿ ಇಂದೂ ಹಾಗೆಯೇ ಇದೆಯಲ್ಲವೇ!
1955 ರಲ್ಲಿ ನನಗೆ ತುಮಕೂರಿನ ಪ್ರಥಮದರ್ಜೆ ಕಾಲೇಜಿನಿಂದ ಸೆಂಟ್ರಲ್ ಕಾಲೇಜು, ಬೆಂಗಳೂರಿಗೆ ವರ್ಗಾವಣೆ. 14 ವರ್ಷಗಳ ನಂತರ ಮಠವನ್ನು ಬಿಟ್ಟು ಹೋಗುತ್ತಿದ್ದ ನನಗೆ ಪರಮ ಪೂಜ್ಯರ ಅಧ್ಯಕ್ಷತೆಯಲ್ಲಿ ಬೀಳ್ಕೊಡುಗೆ ಸಮಾರಂಭ. ಶ್ರೀಮಠದಿಂದ ನನಗಾಗಿರುವ ಎಲ್ಲಾ ಒಳಿತನ್ನು ಕೃತಜ್ಞತೆಯಿಂದ ನೆನೆಯುವುದಷ್ಟೇ ನನಗೆ ಸಾಧ್ಯ.
ಮಾರನೇ ವರ್ಷ ಅಂದರೆ 1956 ರಲ್ಲಿ ನನ್ನ ಮದುವೆ. ತುಮಕೂರಿನ ಗಣ್ಯ ವರ್ತಕರೂ ಶ್ರೀಮಠದ ಸದ್ಭಕ್ತರೂ ಆದ ಶ್ರೀ ಟಿ. ಎನ್. ಕೆಂಪಹೊನ್ನಯ್ಯನವರ ಮಗಳ ಜೊತೆಯಲ್ಲಿ. ಇದು ಸಾಧ್ಯವಾಗಿದ್ದು ಶ್ರೀಗಳವರ ಅಶೀರ್ವಾದದಿಂದ ಮಾತ್ರ ಎಂದು ಬೇರೆ ಹೇಳಬೇಕಾಗಿಲ್ಲ. ಏಕೆಂದರೆ ಶ್ರೀ ಕೆಂಪಹೊನ್ನಯ್ಯನವರು ಆ ಕಾಲಕ್ಕೆ ತುಮಕೂರು ಜಿಲ್ಲೆಯ ಆನಭಿಷಿಕ್ತ ದೊರೆ, ಸಿರಿವಂತರು. ಕೇವಲ ಬಿ. ಎಸ್ಸಿ ಮುಗಿಸಿ ತಿಂಗಳಿಗೆ 123 ರೂಪಾಯಿ ಸಂಬಳ ಬರುವ ಹಾಗೂ ಮನೆಯ ಕಡೆ ಯಾವುದೇ ರೀತಿ ಆರ್ಥಿಕ ಬಲವೂ ಇಲ್ಲದ ಹುಡುಗನೊಬ್ಬನಿಗೆ ಮಗಳನ್ನು ಕೊಡಲು ಒಪ್ಪಿದ ಶ್ರೀಮಾನ್ ಕೆಂಪಹೊನ್ನಯ್ಯನವರ ಧೈರ್ಯವನ್ನು ಮೆಚ್ಚಬೇಕು. ಅವರ ಸಿರಿತನವಾಗಲೀ ನಮ್ಮ ಬಡತನವಾಗಲೀ ಒಂದು ದಿನವೂ ಕೂಡ ನಮ್ಮ 50 ವರ್ಷಗಳ ಪ್ರೀತಿ ವಿಶ್ವಾಸಗಳಿಗೆ ಧಕ್ಕೆ ಬಾರದಂತೆ ನಡೆದುಕೊಂಡಿರುವ ಆ ಸುಸಂಸ್ಕೃತ ಕುಟುಂಬದ ಎಲ್ಲಾ ಸದಸ್ಯರಿಗೂ ನಾನು ಋಣಿ.
ನಂತರ ನನ್ನ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಕಾಶಿ, ಜರ್ಮನಿ, ದೆಹಲಿ ಈ ಸ್ಥಳಗಳಿಗೆ ಹೋದದ್ದು ನಂತರ ಸುರತ್ಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ 31 ವರ್ಷಗಳ ಕಾಲ ಪ್ರಾಧ್ಯಾಪಕನಾಗಿ ಕೆಲಸ ಮಾಡಿದ್ದು ಇವೆಲ್ಲಾ ನಾನು ಶ್ರೀಮಠವನ್ನು ಬಿಟ್ಟ ನಂತರದ ಘಟನಾವಳಿಗಳು. ಸುರತ್ಕಲ್ಲಿನಲ್ಲಿ ನನಗೆ ವಿಶೇಷ ಗೌರವ, ಸಿದ್ಧಗಂಗೆಯಲ್ಲಿ ನನಗೆ ಸಿಕ್ಕಿದ್ದ ವಿಶೇಷ ಸಂಸ್ಕಾರದಿದಾಗಿ 1991 ರಲ್ಲಿ ಸುರತ್ಕಲ್ ಎಂಜಿನಿಯರಿಂಗ್ ಕಾಲೇಜಿನಿಂದ ನಿವೃತ್ತಿ ಹೊಂದಿದ ನಂತರ ಪುನಃ ಶ್ರೀಮಠದ ಆಶ್ರಯ. ಪೂಜ್ಯರ ಆಶೀರ್ವಾದದಿಂದ ಕಳೆದ 12 ವರ್ಷಗಳಿಂದ ಎಸ್. ಐ. ಟಿ ಯಲ್ಲಿ ಪ್ರಾಚಾರ್ಯ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇನೆ.
ಪೂಜ್ಯಪಾದರ ಜೊತೆ ಹಠ ಮಾಡಿದ ಒಂದೇ ಒಂದು ಪ್ರಸಂಗದ ಬಗ್ಗೆ ಹೇಳಿ ನನ್ನ ಈ ಕಥೆಯನ್ನು ಮುಗಿಸುತ್ತೇನೆ. 1945 ಇಸವಿಯಲ್ಲಿ ಶ್ರೀಗಳವರ ಆಫೀಸಿನ ಬಾಗಿಲಿನಲ್ಲಿ ಡ್ಯೂಟಿಯಲ್ಲಿದ್ದ ಸೇವಕ ಬಾಷಾ (ಬಿಳೀ ಪೈಜಾಮ, ಬಿಳೇ ಪರ್ಟು ಮತ್ತು ಕಪ್ಪು ಟೋಪಿ) ಶ್ರೀಮಠದ ಕಲ್ಯಾಣಿಯಲ್ಲಿ ಈಜಾಡುವುದಕ್ಕೆ ಯಾರಿಗೂ ಅವಕಾಶವಿಲ್ಲ, ಆದರೂ ಒಂದು ದಿನ ಕೆಲವು ವಿದ್ಯಾರ್ಥಿಗಳು ಮುಸ್ಸಂಜೆಯ ವೇಳೆ ಈಜಾಡುತ್ತಿದ್ದುದನ್ನು ಕಂಡ ಬಾಷಾ ಈಜಾಡುತ್ತಿದ್ದವರ ಹೆಸರಿನ ಪಟ್ಟಿಯನ್ನು ಪೂಜ್ಯಪಾದರಿಗೆ ಒಪ್ಪಿಸಿದ ಪರಿಣಾಮವಾಗಿ ಅ ಪಟ್ಟಿಯಲ್ಲಿದ್ದ ಎಲ್ಲರಿಗೂ ಶ್ರೀಗಳು ಎರಡಾಣೆ ಜುಲ್ಮಾನೆ ವಿಧಿಸಿದರು. ಈ ಪಟ್ಟಿಯಲ್ಲಿ ನನ್ನ ಹೆಸರೂ ಇತ್ತು, ಆದರೆ ನಾನು ಈಜಾಡಿರಲಿಲ್ಲ. ಮುಸ್ಸಂಜೆಯಾಗಿದ್ದರಿಂದ ಬಾಷಾ ಯಾರನ್ನೋ ನೋಡಿ ನನ್ನ ಹೆಸರನ್ನು ಬರೆದಿದ್ದ. ಇದನ್ನು ಸ್ವಾಮೀಜಿಯವರಿಗೆ ಆರಿಕೆ ಮಾಡಿ ಜುಲ್ಮಾನೆಯನ್ನು ವಜಾ ಮಾಡಬೇಕೆಂದು ಕೇಳಿಕೊಂಡಿದ್ದೆ. ಶ್ರೀಸ್ವಾಮೀಜಿಯವರು ಕೊನೆಗೆ “ನಾನು ಎರಡಾಣೆಯನ್ನು ನಿನಗೆ ಕೊಡುತ್ತೇನೆ ಅದನ್ನು ಜುಲ್ಮಾನೆ ಕೊಟ್ಟುಬಿಡು” ಎಂದು ಹೇಳಿದಾಗ, ನಾನು ತಪ್ಪು ಮಾಡಿಲ್ಲ. ತಾವು ದುಡ್ಡು ಕೊಟ್ಟರೂ ನಾನು ಜುಲ್ಮಾನೆ ಕೊಡುವುದಿಲ್ಲ ಎಂದು ಹಠ ಮಾಡಿದಾಗ ಪೂಜ್ಯರು ಜುಲ್ಮಾನೆಯನ್ನು ವಜಾ ಮಾಡಿದರು.
ಪರಮಪೂಜ್ವರ 98 ನೇ ಜನ್ಮದಿನೋತ್ಸವ ಮತ್ತು ವಿರಕ್ತಾಶ್ರಮದ ಅಮೃತೋತ್ಸವದ ಶುಭ ಸಂದರ್ಭದಲ್ಲಿ ಶ್ರೀ ಚರಣಕ್ಕೆ ಭಕ್ತಿಯಿಂಬ ನಮಿಸುತ್ತಿರುವ ಸಾವಿರ ಸಾವಿರ ಹಳೆಯ ವಿದ್ಯಾರ್ಥಿಗಳ ಜೊತೆ ಸೇರಿಕೊಂಡು ಈ ನನ್ನ ಅನುಭವ ಕಥನವನ್ನು ಮುಗಿಸುತ್ತಿದ್ದೇನೆ.
ತ್ರಿವಿಧ ದಾಸೋಹಮೂರ್ತಿ, ಶ್ರೀಮನ್ನಿರಂಜನ ಪ್ರಣವಸ್ವರೂಪಿ ಪರಮಪೂಜ್ಯ ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ವಿರಕ್ತಾಶ್ರಮ ಸ್ವೀಕಾರದ ಅಮೃತ ಮಹೋತ್ಸವ ಸಂದರ್ಭ ಸಂಚಿಕೆಯಲ್ಲಿ ಪ್ರಕಟವಾದ ಲೇಖನ (24, 25 ಏಪ್ರಿಲ್ 2005)
ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in and admin@vachanamandara.in