
12 ನೇ ಶತಮಾನದ ಶರಣರ ಷಟ್ ಸ್ಥಲಗಳು ಆಧ್ಯಾತ್ಮಿಕ ಬದುಕಿನ ಧಾರ್ಮಿಕ ತತ್ವಗಳನ್ನು ಪ್ರೇರೇಪಿಸುತ್ತದೆ. ಶರಣ ಧರ್ಮದ ಸಾಧನೆ, ನಡೆ ನುಡಿಗಳು ಹಾಗೂ ಭಕ್ತಿ ಜ್ಞಾನ ಸಾಮರಸ್ಯವನ್ನು ಬಿಂಬಿಸುವ ತತ್ವಗಳೇ ಷಟ್ ಸ್ಥಲಗಳಾಗಿವೆ. ಶರಣರು ತಮ್ಮ ಧರ್ಮದ ತಾತ್ವಿಕ ಸ್ವಾತಂತ್ರ್ಯದ ಸ್ಥಲಗಳ ವಿವೇಚನೆಯಲ್ಲಿ ಲಿಂಗಾಯತ ಧರ್ಮದ ವಿವೇಚನೆಯನ್ನು ಕಟ್ಟಿಕೊಟ್ಟಿದ್ದಾರೆ.
- ಭಕ್ತನಾದರೆ ತನು ಮನದ ಮೇಲಣ ಆಸೆ ಅಳಿದಿರಬೇಕು.
- ಮಾಹೇಶ್ವರನಾದರೆ ಪರಧನ ಪರಸತಿ ಆಸೆ ಅಳಿದಿರಬೇಕು.
- ಪ್ರಸಾದಿಯಾದರೆ ಪ್ರಸಾದವ ಕೊಂಡ ಕಾಯ ಅಳಿಯದೇ ಉಳಿದಿರಬೇಕು.
- ಪ್ರಾಣಲಿಂಗಯಾದರೆ ಸುಖ-ದುಃಖಾದಿಗಳನ್ನು ಮರೆತು ಪ್ರಾಣ ಲಿಂಗಸ್ಥಲದಲ್ಲಿ ಸುಸ್ಥಿರನಾಗಿರಬೇಕು.
- ಶರಣನಾದರೆ ಸತಿಪತಿ ಭಾವವಳಿದಿರ ಬೇಕು.
- ಐಕ್ಯನಾದರೆ ಬಯಲು ಬಯಲಾಗಿರಬೇಕು.
“ಸ್ಥಲ” ಎನ್ನುವ ಶಬ್ದಕ್ಕೆ ಸ್ಥಾನ ಮೆಟ್ಟಿಲು ಎಂಬ ಲೌಕಿಕ ಅರ್ಥಗಳಿವೆ. ಆದರೆ ಶರಣರು ಕಂಡುಕೊಂಡಂತೆ ಸ್ಥಲ ಎಂಬ ಶಬ್ದಕ್ಕೆ ಒಂದು ವಿಶಿಷ್ಟ ಅರ್ಥವನ್ನು ಕೊಡುತ್ತಾರೆ. ಈ ಜಗತ್ತು ಯಾವುದರಲ್ಲಿ ಹುಟ್ಟಿ ಯಾವುದರಲ್ಲಿ ಲಯವಾಗುತ್ತದೊ ಏಕಮೆವಾದ್ವಿತೀಯವಾದ ಪರಶಿವನ ಜ್ಞಾನವನ್ನು ಸ್ಥಲ ಎಂದು ಕರೆಯಲಾಗುತ್ತದೆ. ಮಗ್ಗೆಯ ಮಾಯಿದೇವ ಹೇಳುವಂತೆ “ಸ್ಥ” ಕಾರ ಸ್ಥಾನವಾಚಕ. “ಲ” ಕಾರ ಲಯವಾಚಕ. ಸೃಷ್ಟಿ-ಸ್ಥಿತಿ-ಲಯಗಳಿಗೆ ಕಾರಣವಾದ ಪರಶಿವ ತತ್ವವೇ ಸ್ಥಲ. ಸ್ಥಲವೆಂದರೆ ಶಿವತತ್ವ ಹಾಗೂ ಲಿಂಗಸ್ಥಲ ಅಂಗಸ್ಥಲವಾಗುವ ಪರಿಯದು.
12 ನೇ ಶತಮಾನದ ವಚನ ಭಾಷೆ ಧರ್ಮದ ಭಾಷೆಯಾದರೆ 15 ನೇ ಶತಮಾನ ವಚನಗಳ ಸಂಗ್ರಹ ಮತ್ತು ಸಂಕಲನದ ಯುಗವಾಗಿದೆ. ವ್ಯವಸ್ಥಿತವಾಗಿ ವಚನಗಳನ್ನು ಜೋಡಿಸುವ ಕೆಲಸದ ಜೊತೆಗೆ ವಚನಗಳನ್ನು ಟೀಕುಗಳ ಮೂಲಕ ವ್ಯಾಖ್ಯಾನಿಸುವ ಕಾಲವು ಇದಾಗಿತ್ತು. 15 ನೇ ಶತಮಾನದ ಸಂಪಾದನೆ ಎನ್ನುವುದು ಒಂದು ಸಂಪ್ರದಾಯ ಒಂದು ಪರಂಪರೆಯನ್ನು ಸೂಚಿಸುವ ಪದ ಕೂಡ ಹೌದು. ವಚನ ಸಂಪಾದನೆ ಎಂದರೆ ಕೇವಲ ದಾಖಲೆಯಲ್ಲ. ನಿರ್ದಿಷ್ಟ ಕ್ರಮದ ದಾಖಲೆ ಎನ್ನುವುದನ್ನು ಸೂಚಿಸುತ್ತದೆ. ವಚನಗಳ ಕ್ರಮಬದ್ಧತೆಯನ್ನು ಮರಳಿ ಪಡೆಯುವ ಪ್ರಯತ್ನದ ಹಿಂದೆ ಷಟ್ ಸ್ಥಲಗಳ ನಿರೂಪಣೆಯನ್ನು ಕಾಣಬಹುದು.
ಷಟ್ ಸ್ಥಲಗಳಲ್ಲಿ ಆರು ಸ್ಥಲಗಳಿವೆ.
- ಭಕ್ತಸ್ಥಲ
- ಮಹೇಶ್ವರ ಸ್ಥಲ
- ಪ್ರಸಾದಿ,ಸ್ಥಲ
- ಪ್ರಾಣ ಲಿಂಗಸ್ಥಲ
- ಶರಣ ಸ್ಥಲ
- ಐಕ್ಯಸ್ಥಲ
ಆಧುನಿಕ ಓದುಗರಿಗೆ ಷಟ್ ಸ್ಥಲಗಳು ಬಹು ಗಂಭೀರ ಸ್ಪೂರ್ತಿದಾಯಕ ಒಳನೋಟಗಳಾಗಿವೆ. ಸಾಧಕ ಮನಸ್ಸುಳ್ಳವರಿಗೆ ಮನಃಶಾಸ್ತ್ರದ ಅಧ್ಯಯನ ಇದಾಗಿದೆ. ಇಂತಹ ವೈಚಾರಿಕ ತಾದಾತ್ಮಕತೆಯಲ್ಲಿ ಸಂದೇಹ ತಳಮಳ ಕುತೂಹಲ ನಿಷ್ಠೆ ಎಲ್ಲಾ ಭಾವಗಳು ಪ್ರತಿಧ್ವನಿಸುತ್ತವೆ. ಬಸವಣ್ಣನವರ ಈ ವಚನ:
ಭಕ್ತ, ಮಾಹೇಶ್ವರ, ಪ್ರಸಾದಿ, ಪ್ರಾಣಲಿಂಗಿ, ಶರಣನೈಕ್ಯನು
ಮೆಲ್ಲ ಮೆಲ್ಲನೆ ಆದೆಹೆನೆಂಬನ್ನಬರ ನಾನು ವಜ್ರದೇಹಿಯೆ?
ನಾನೇನು ಅಮೃತವ ಸೇವಿಸಿದೆನೆ?
ಆನು ಮರುಜವಣಿಯ ಕೊಂಡೆನೆ?
ನುಡಿದ ನುಡಿಯೊಳಗೆ ಷಡುಸ್ಥಲ ಬಂದು
ಎನ್ನ ಮನವನಿಂಬುಗೊಳ್ಳದಿದ್ದಡೆ,
ಸುಡುವೆನೀ ತನುವ ಕೂಡಲಸಂಗಮದೇವಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-253/ವಚನ ಸಂಖ್ಯೆ-897)
ದೇಹ ಮತ್ತು ಮನಸ್ಸುಗಳಿಂದ ಶಿವನನ್ನು ಸ್ತುತಿಸಬೇಕು. ಶುದ್ದ ಭಕ್ತಿ ಇಲ್ಲದ ಸಕಲವು ನಿಷ್ಪಲ. ಕಲ್ಮಶ ಭಕ್ತಿಯುಳ್ಳವನು ಸಹಿತ ಭಕ್ತಸ್ಥಲದಲ್ಲಿ ಶುದ್ಧಾತ್ಮನಾಗಬೇಕಾಗುತ್ತದೆ. ಭಕ್ತನು ತನ್ನನ್ನು ತಾನು ಪರಿಶುಭ್ರ ಎಂದು ಭಾವಿಸಬೇಕು. ಕರಣದ ಕಂಗಳಲ್ಲಿ ನೋಡುವ ಭಕ್ತನಿಗೆ ಶಿವಭಾವವಾದಾಗ ಇಂದ್ರಿಯಗಳು ತಮ್ಮ ಇಂದ್ರಿತ್ವವನ್ನು ಕಳೆದುಕೊಳ್ಳುತ್ತವೆ. ಭಕ್ತ ಮಹೇಶ ಪ್ರಸಾದ ಪ್ರಾಣಲಿಂಗಿ ಶರಣ ಐಕ್ಯಸ್ಥಲಗಳಲ್ಲಿ ನಾನು ಭಕ್ತನಾಗಿ ಎಂಬ ಒಂದೇ ವಾಕ್ಯದಲ್ಲಿ ಷಟ್ ಸ್ಥಲದ ಪ್ರಭೆಯನ್ನು ವ್ಯಾಖ್ಯಾನಿಸುತ್ತಾನೆ. ಭಕ್ತ ನಿರೂಪಕನಾಗಿ ಧ್ಯಾನಸ್ತ ಸ್ಥಿತಿಯಲ್ಲಿ ಮನ ತರ್ಕಿಸುವ ಅವಸ್ಥೆಯಾಗಿದೆ. ನಮ್ಮ ನಡೆ ನುಡಿಯಲ್ಲಿ ಶ್ರದ್ಧಾ ಭಕ್ತಿ ನಿಶಬ್ದವಾಗಿ ಸುಪ್ತವಾಗಿರುತ್ತದೆ. ಹೂವಿನ ಪರಿಮಳದಂತೆ ಈ ಕಾಯವನ್ನು ಆವರಿಸಿರುತ್ತದೆ. ನಡೆ ನುಡಿ ಆಚಾರಗಳು ಪ್ರಜ್ಞಾಪೂರ್ವಕವಾಗಿರಬೇಕು. ಭಕ್ತ ಮಹೇಶ ಸ್ಥಾನಗಳನ್ನು ಒಪ್ಪಿಕೊಂಡು ಅಹಂ ಪಡುವ ವಾಸ್ತವತೆ ಇಲ್ಲಿ ಇಲ್ಲ. ಬಸವಣ್ಣನವರು ನಾನು ವಜ್ರದೇಹವನ್ನು ಪಡೆದಿಲ್ಲ. ಅಮೃತವನ್ನು ಸೇವಿಸಿಸಿ ದೈವತ್ವವನ್ನು ಪಡೆಯಬೇಕೆಂಬ ಹಂಬಲವೂ ನನಗಿಲ್ಲ. ಮರುಜವಣಿ ಎಂಬ ಮರು ಹುಟ್ಟನ್ನು ಪಡೆಯಬೇಕೆಂಬ ಹಂಬಲವೂ ನನಗಿಲ್ಲ. ನಮ್ಮ ನಡೆ ನುಡಿ ಆಚಾರಗಳನ್ನು ಈ ಲೋಕ ಒಪ್ಪುವಂತಿರಬೇಕು. ಷಟ್ ಸ್ಥಲಗಳು ಭಕ್ತನ ಮನ ಮುಟ್ಟಬೇಕು. ಮಹೇಶನಿಗೆ ಅರ್ಪಿತವಾಗಿರಬೇಕು. ಇಲ್ಲವಾದರೆ ನನ್ನ ಕಾಯವನ್ನೇ ಸುಡುವೆನೆಂಬ ಕಠೋರತೆಯಾಗಿದೆ.
ಶರಣ ದಾಸೋಹದ ಸಂಗಣ್ಣನವರು ಧಾರ್ಮಿಕವಾಗಿ, ವೈಚಾರಿಕವಾಗಿ ಷಟ್ ಸ್ಥಲಗಳನ್ನು ವಿಶೇಷವಾಗಿ ಸ್ವೀಕರಿಸಿದ್ದನ್ನು ಕಾಣಬಹುದು. ಶರಣ ಧರ್ಮದ ಮೌಲ್ಯಗಳನ್ನು ಗಟ್ಟಿಗೊಳಿಸುವ ಆಂತರಿಕ ಮನಸ್ಥಿತಿ ಅದು. ಶಿವ ನಿರಾಕಾರ ಮಾತ್ರ. ಷಟ್ ಸ್ಥಲಗಳೆಂಬ ಅಸ್ತ್ರಗಳನ್ನು ಭಕ್ತನ ಮಾನಸಿಕ ಸಂವೇದನೆಯ ಮನಃಶಾಸ್ತ್ರೀಯ ನೆಲೆಯಲ್ಲಿ ಸ್ಪಷ್ಟಪಡಿಸಿದರು.
ಭಕ್ತನ ಕ್ರೀ, ಮಾಹೇಶ್ವರನ ನಿಶ್ಚಯ, ಪ್ರಸಾದಿಯ ನಿಷೆ,
ಪ್ರಾಣಲಿಂಗಿಯ ಯೋಗ, ಶರಣನ ನಿಬ್ಬೆರಗು, ಐಕ್ಯದ ನಿರ್ಲೇಪ.
ಇಂತೀ ಆರುಸ್ಥಲವನವಗವಿಸಿ ಕಲೆದೋರದೆ ನಿಂದುದು
ವಿರಕ್ತನ ಏಕಸ್ಥಲದಾಟ, ನಿಜತತ್ವದ ಕೂಟ!
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು.
(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-393/ವಚನ ಸಂಖ್ಯೆ-1129)
ಭಕ್ತನಿಗೆ ಶಿವನ ಅನುಗ್ರಹದಿಂದ ಜ್ಞಾನವುಂಟಾಗುತ್ತದೆ. ಕ್ರಿಯಾ ಜ್ಞಾನಕ್ಕೆ ಶ್ರದ್ಧೆ ಶರಣಾಗತಿ ಗುರೂಪದೇಶಗಳು ತಾತ್ವಿಕವಾಗಿ ಪ್ರತಿಕ್ರಿಯಿಸುತ್ತವೆ. ಮಹೇಶ್ವರನಿಗೆ ನಿಶ್ಚಯ ಭಕ್ತಿಯುಂಟಾಗಬೇಕಾದರೆ ವೀರ ವ್ರತಾಚರಣೆಯ ಉಪಾಸನೆ ಮಾಡಬೇಕಾಗುತ್ತದೆ. ಷಟ್ ಸ್ಥಲಗಳ ವಿಸ್ತಾರತೆಯಲ್ಲಿ ಇಲ್ಲಿಯ ತತ್ವಗಳು ಆಧ್ಯಾತ್ಮಿಕ ಉತ್ತುಂಗ ಪ್ರವೇಶದ ಪ್ರಾಣಲಿಂಗಸ್ಥಲದಲ್ಲಿ ಅನುಭವದ ಭಕ್ತಿ. ಅನುಭವದ ಭಕ್ತಿ ಅನುಭಾವ ಸಾಧನೆಯ ಮಾರ್ಗದಲ್ಲಿ ಲಿಂಗವೇ ಪ್ರಾಣ – ಪ್ರಾಣವೇ ಲಿಂಗವಾಗುತ್ತದೆ. ಸೂರ್ಯ ಚಂದ್ರ ನಾಡಿಗಳ ವಿಘಟನೆಯಿಂದ ಪ್ರಾಣವು ಎಲ್ಲಿ ಲಯ ಹೊಂದುವುದೋ ಪ್ರಾಣಲಿಂಗ ಯೋಗ ಸ್ಪರ್ಶತೆಯಿಂದ ಕೂಡಿರುತ್ತದೆ. ಶರಣ ಎನ್ನುವ ಪದ ಶಿವನಿಗೆ ಶರಣಾಗುವ ಪರಿಯದು. ಶಿವಯೋಗದ ತುತ್ತ ತುದಿಯಲ್ಲಿ ನಿಂತ ಅನುಭವಿ ಎಂಬ ಅರ್ಥ ಬರುತ್ತದೆ. ಅಂಗ ಲಿಂಗ ಸಂಗಿಯಾದ ಶರಣನ ಕಾಯವೆಲ್ಲವೂ ಲಿಂಗವೇ ಆಗಿರುತ್ತದೆ. ದಾಸೋಹದ ಸಂಗಣ್ಣನು ಧಾರ್ಮಿಕವಾಗಿ ವೈಚಾರಿಕವಾಗಿ ಕಂಡುಕೊಂಡ ಷಟ್ ಸ್ಥಲಗಳ ಅನುಸಂಧಾನ ಶರಣ ಧರ್ಮದ ಮೌಲ್ಯಗಳನ್ನು ಉನ್ನತೀಕರಿಸುವ, ಗಟ್ಟಿಗೊಳಿಸುವ ಸೂಕ್ಷ್ಮಾನುಸಂಧಾನವೆಂದು ಸ್ಪಷ್ಟಪಡಿಸಬಹುದು. ಷಟ್ ಸ್ಥಲ ಪ್ರಧಾನ ಮೌಲ್ಯಗಳೆಂದರೆ ಆಧ್ಯಾತ್ಮದ ಮನಃಶಾಸ್ತ್ರೀಯ ತೀವ್ರತೆಯನ್ನು ಕಾಣುತ್ತೇವೆ.
ಡಾ. ಸರ್ವಮಂಗಳ ಸಕ್ರಿ.
ಕನ್ನಡ ಉಪನ್ಯಾಸಕರು (ನಿ).
ಅಧ್ಯಕ್ಷರು. ಜಾಗತಿಕ ಲಿಂಗಾಯತ ಮಹಾ ಸಭಾ
ಮಹಿಳಾ ಘಟಕ-ರಾಯಚೂರು ಜಿಲ್ಲೆ
ರಾಯಚೂರು.
ಮೋಬೈಲ್ ಸಂ. 94499 46839.
ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in and admin@vachanamandara.in