ಷಣ್ಮುಖಸ್ವಾಮಿಗಳ ವಚನ “ಎನ್ನ ಸ್ಥೂಲತನುವೆಂಬ ಮನೆಯಲ್ಲಿ”ವಚನ ವಿಶ್ಲೇಷಣೆ

ಎನ್ನ ಸ್ಥೂಲತನುವೆಂಬ ಮನೆಯಲ್ಲಿ
ಲಿಂಗವೆಂಬ ಜ್ಯೋತಿಯ ತುಂಬಿದೆನಯ್ಯ.
ಎನ್ನ ಸೂಕ್ಷ್ಮತನುವೆಂಬ ಮನೆಯಲ್ಲಿ
ಮಂತ್ರವೆಂಬ ಜ್ಯೋತಿಯ ತುಂಬಿದೆನಯ್ಯ.
ಎನ್ನ ಕಾರಣ ತನುವೆಂಬ ಮನೆಯಲ್ಲಿ
ಜ್ಞಾನವೆಂಬ ಜ್ಯೋತಿಯ ತುಂಬಿದೆನಯ್ಯ.
ಎನ್ನ ಒಳಹೊರಗೆ ತುಂಬಿ ಬೆಳಗುವ
ಜ್ಯೋತಿಯ ಬೆಳಗಿನೊಳಗೆ ಸುಳಿಯುತಿರ್ದೆನಯ್ಯ.
ಅಖಂಡೇಶ್ವರಾ.
(ಸಮಗ್ರ ವಚನ ಸಂಪುಟ: ಎರಡು-2016 / ಪುಟ ಸಂಖ್ಯೆ-1035 / ವಚನ ಸಂಖ್ಯೆ-237)

ಬಸವೋತ್ತರ ಯುಗದ ಪ್ರಮುಖ ವಚನಕಾರರು ಶ್ರೀ ಷಣ್ಮುಖಸ್ವಾಮಿಗಳು. 17 ನೇ ಶತಮಾನದ ಅಂತ್ಯಭಾಗದಲ್ಲಿದ್ದ ಇವರ ಜೀವಿತದ ಕಾಲಘಟ್ಟ ಸುಮಾರು ಕ್ರಿ. ಶ. 1639 ರಿಂದ ಕ್ರಿ. ಶ. 1711 ಎಂದು ತಿಳಿದು ಬರುತ್ತದೆ. ಇವರು ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನವರಾದ ಇವರ ತಂದೆ ಶರಣ ಮಲ್ಲಪ್ಪ ಶೆಟ್ಟಿ ಮತ್ತು ತಾಯಿ ಶರಣೆ ದೊಡ್ಡಮಾಂಬೆ. ಇವರ ಗುರುಗಳು ಜೇವರ್ಗಿಯ ವಿರಕ್ತ ಮಠದ ಗುರು ಅಖಂಡೇಶ್ವರ. ಆರಂಭದಲ್ಲಿ ಜೇವರ್ಗಿಯ ಗುರು ಅಖಂಡೇಶ್ವರ ಮಠದ ಭಕ್ತರಾಗಿದ್ದುಕೊಂಡು ಶ್ರೀ ಗುರು ಅಖಂಡೇಶ್ವರರ ನಂತರ ಜೇವರ್ಗಿಯ ವಿರಕ್ತ ಮಠದ ಪೀಠಾಧಿಪತಿಗಳಾಗುತ್ತಾರೆ. ಆರಂಭದಲ್ಲಿ ಚರಜಂಗಮರಾಗಿ ಧರ್ಮತತ್ವ ಬೋಧನೆ ಮತ್ತು ವಚನ ಸಾಹಿತ್ಯ ಪ್ರಚಾರಕ್ಕಾಗಿ ಲೋಕ ಸಂಚಾರ ಕೈಗೊಂಡು ಬಳಿಕ ಜೇವರ್ಗಿಗೆ ಬಂದು ಅಲ್ಲಿಯೇ ಲಿಂಗೈಕ್ಯರಾಗುತ್ತಾರೆ.

12 ನೇ ಶತಮಾನ ವಚನ ಸಾಹಿತ್ಯದ ಉದಯೋನ್ಮುಖ ಕಾಲಘಟ್ಟವಾದರೆ 15 ನೇ ಶತಮಾನ ಕಾಲಘರ್ಭದಲ್ಲಿ ಹುದುಗಿ ಹೋಗಿದ್ದ ವಚನಗಳ ಸಂಕಲನ ಯುಗವಾಗಿದೆ. ಈ ಎರಡೂ ಕಾಲಘಟ್ಟಗಳು ವಚನ ಸಾಹಿತ್ಯದ ಸುವರ್ಣ ಯುಗವೆಂದು ಹೇಳಬಹುದು. ಇದರ ಜೊತೆಗೆ ವಚನ ವಾಙ್ಮಯದ 3 ನೇ ಕಾಲಘಟ್ಟವು ವಚನ ಸಾಹಿತ್ಯವನ್ನು ನಾಡಿನೆಲ್ಲೆಡೆ ಪಸರಿಸಲು ಅತ್ಯಂತ ಪ್ರಮುಖ ಪಾತ್ರವನ್ನು ವಹಿಸಿತು. ಇಂತಹ 3 ನೇ ಕಾಲಘಟ್ಟದ ಪ್ರಮುಖ ಶರಣರು ಶ್ರೀ ಷಣ್ಮುಖಸ್ವಾಮಿಗಳು. ಇವರು ಕನ್ನಡ ಮತ್ತು ಸಂಸ್ಕೃತ ಭಾಷೆಗಳಲ್ಲಿ ಪ್ರಬುದ್ಧತೆಯನ್ನು ಹೊಂದಿದ್ದ ವಚನಕಾರರು.

12 ನೇ ಶತಮಾನದ ವಚನಕಾರರ ಸಮಗ್ರ ಸ್ವರೂಪವನ್ನು ಮತ್ತು ಲಕ್ಷಣಗಳನ್ನು ಪ್ರತಿನಿಧಿಸುವಂತೆ ವಚನಗಳನ್ನು ರಚಿಸಿದ್ದಾರೆ. ಇವರ ವಚನಗಳನ್ನು ಪ್ರಮುಖವಾಗಿ ಷಟ್ ಸ್ಥಲಕ್ಕನುಗುಣವಾಗಿ ವಿಂಗಡಣೆ ಮಾಡಲಾಗಿದೆ. ಅವರ ವಚನಗಳಲ್ಲಿ ಅನುಭಾವ ತತ್ವ – ಸಾಹಿತ್ಯವನ್ನು ಬಹಳ ಮಾರ್ಮಿಕವಾಗಿ ಚಿತ್ರಿಸಲಾಗಿದೆ. ಶ್ರೀ ಷಣ್ಮುಖಸ್ವಾಮಿಗಳು 717 ವಚನಗಳನ್ನು, “ಅಖಂಡೇಶ್ವರ ಜೋಗುಳ” ಎನ್ನುವ 41 ಚೌಪದಿಗಳನ್ನು, ಪರಿವರ್ಧಿನೀ ಷಟ್ಪದಿಯಲ್ಲಿ “ಪಂಚಸಂಜ್ಞೆಗಳಪದ” ಎನ್ನುವ 7 ಪದಗಳನ್ನು ಹಾಗೂ ಭಾಮಿನೀ ಷಟ್ಪದಿಯಲ್ಲಿ “ನಿರಾಳ ಸದ್ಗುರು ಸ್ತೋತ್ರ” ಎನ್ನುವ ಕೃತಿಯನ್ನು ರಚಿಸಿದ್ದಾರೆ. ಜೋಗುಳ ಪದ್ಯಗಳಲ್ಲಿ ಲಿಂಗಯ್ಯನನ್ನೇ ಶಿಶುವನ್ನಾಗಿಸಿಕೊಂಡಿ ಷಣ್ಮುಖಸ್ವಾಮಿಗಳೇ ತಾಯಿಯಾಗಿ ಮಗುವನ್ನು ಮಲಗಿಸುವ ಪದ್ಯಗಳಲ್ಲಿ ಕಾವ್ಯಾತ್ಮಕ ನಿರೂಪಣೆ ದೊರೆಯುತ್ತದೆ.

ಪ್ರಸ್ತುತ ಈ ವಚನವನ್ನು ಷಣ್ಮುಖಸ್ವಾಮಿಗಳವರ ವಚನಗಳಲ್ಲಿ ಪಂಚಾಕ್ಷರಿ ಸ್ಥಲದಿಂದ ಆಯ್ದುಕೊಳ್ಳಲಾಗಿದೆ. ಮೇಲ್ನೋಟಕ್ಕೆ ಪ್ರಸ್ತುತ ಈ ವಚನ ಮೂರು ಶರೀರಗಳ ಗುಣಲಕ್ಷಣಗಳನ್ನು ಕುರಿತು ಮಾತನಾಡುತ್ತದೆಯಾದರೂ ಶರಣರ ನಡೆ-ನುಡಿ, ಅಂತರಂಗ-ಬಹಿರಂಗ ಹಾಗೂ ಅರಿವು-ಆಚಾರವನ್ನು ಪ್ರಬುದ್ಧವಾಗಿ ಚಿತ್ರಣ ಮಾಡುತ್ತದೆ. ಇದರ ಜೊತೆಗೆ ಅಷ್ಟಾವರಣದ ಗುರು-ಲಿಂಗ-ಜಂಗಮದ ನಿರೂಪವನ್ನೂ ಸಹ ನೀಡುತ್ತದೆ.

ವಚನ ಸಾಹಿತ್ಯದಲ್ಲಿ ಸ್ಥೂಲ, ಸೂಕ್ಷ್ಮ ಮತ್ತು ಕಾರಣ ಶರೀರಗಳ ಪ್ರಸ್ತಾಪ ಬರುತ್ತದೆ.

ಸ್ಥೂಲ ಶರೀರ ಅಂದರೆ ಕಣ್ಣಿಗೆ ಗೋಚರವಾಗುವ ನಮ್ಮ ದೇಹ.
ಸೂಕ್ಷ್ಮ ಶರೀರ ಅಂದರೆ ಪಂಚೇಂದ್ರಿಯಗಳು. ಪಂಚೇಂದ್ರಿಯಗಳು ಅಂದರೆ ಪಂಚಭೂತಗಳಾದ ಆಕಾಶ, ವಾಯು, ಅಗ್ನಿ, ನೀರು ಮತ್ತು ಪೃಥ್ವಿಯಿಂದ ಹುಟ್ಟಿದ ಶ್ರೋತೃ (ಕಿವಿ), ತ್ವಕ್‌ (ಚರ್ಮ), ಚಕ್ಷು (ಕಣ್ಣು), ಜಿಹ್ವಾ (ನಾಲಿಗೆ) ಮತ್ತು ಘ್ರಾಣ (ಮೂಗು) ಎನ್ನುವ ಸಮಷ್ಠಿ ಅಹಂಕಾರದಿಂದ ಹುಟ್ಟಿದ ಗುಣಗಳು. ಇದನ್ನು ಮನಸ್ಸು ಅಂತಾನೂ ಹೇಳಬಹುದು.
ಕಾರಣ ಶರೀರ ಅಂದರೆ ಆದಿ ಅಂತ್ಯವಿಲ್ಲದ, ವಿವರಿಸಲಾಗದ ಅಜ್ಞಾನದ ನಿರ್ವಿಕಲ್ಪರೂಪ.
ನಾವು ನಿಧನರಾದಾಗ ಸ್ಥೂಲ ಶರೀರ ಮಣ್ಣಾಗುತ್ತದೆ. ಸೂಕ್ಷ್ಮ ಶರೀರ ಅಗ್ನಿ, ವಾಯು ಮತ್ತು ಪೃಥ್ವಿಯನ್ನು ಸೇರುತ್ತದೆ. ಕಾರಣ ಶರೀರ ಮುಂದೆ ಪ್ರಯಾಣ ಬೆಳೆಸುತ್ತದೆ.

ಈ ವಚನದಲ್ಲಿ “ಜ್ಯೋತಿ” ಎನ್ನುವ ಅರಿವಿನ ಪ್ರಜ್ಞೆ ಅಥವಾ ಸಂಸ್ಕಾರದ ಬೆಳಕು ಎನ್ನುವ ಅರ್ಥದಲ್ಲಿ ತೆಗೆದುಕೊಳ್ಳಲಾಗಿದೆ.

“ಎನ್ನ ಸ್ಥೂಲತನುವೆಂಬ ಮನೆಯಲ್ಲಿ ಲಿಂಗವೆಂಬ ಜ್ಯೋತಿಯ ತುಂಬಿದೆನಯ್ಯ” ಎಂದು ಪ್ರಾರಂಭವಾಗುವ ಈ ವಚನದಲ್ಲಿ ಸ್ಥೂಲ ಶರೀರದಲ್ಲಿ ಲಿಂಗವೆಂಬ ಜ್ಯೋತಿಯನ್ನು ತುಂಬಬೇಕು ಎನ್ನುವುದನ್ನು ತಿಳಿಸಲಾಗಿದೆ. ಇಲ್ಲಿ ಲಿಂಗ ಎನ್ನುವ ಶಬ್ದಕ್ಕೆ ಪಂಚಾಚಾರದಲ್ಲಿ ಲಿಂಗಾಚಾರ ಮತ್ತು ಅಷ್ಟಾವರಣದಲ್ಲಿ ಲಿಂಗ ಎನ್ನುವ ತತ್ವ ನಿರೂಪಣೆ ಮಾಡಲಾಗಿದೆ. ಲಿಂಗಾಚಾರ ಎಂದರೆ ಏಕದೇವೋಪಾಸನೆ. ಅಷ್ಟಾವರಣದ ಲಿಂಗತತ್ವವು ನಡೆ-ನುಡಿ ಶುದ್ಧವಾಗಿರುವುದರ ಸಂಕೇತ. ಈ ವಚನದ ಮೊದಲನೇಯ ಸಾಲು ಸ್ಥೂಲ ಶರೀರದಲ್ಲಿ ಶರಣರು ಏಕದೇವೋಪಾಸನೆ ಮತ್ತು ನಡೆ-ನುಡಿಗಳಲ್ಲಿ ಶುದ್ಧವಾಗಿರಬೇಕೆನ್ನುವದನ್ನು ಪ್ರತಿಪಾದಿಸುತ್ತದೆ.

“ಎನ್ನ ಸೂಕ್ಷ್ಮತನುವೆಂಬ ಮನೆಯಲ್ಲಿ ಮಂತ್ರವೆಂಬ ಜ್ಯೋತಿಯ ತುಂಬಿದೆನಯ್ಯ” ಎನ್ನುವ ಎರಡನೇಯ ಸಾಲುಗಳಲ್ಲಿ ಕಾರಣ ಶರೀರ ಮತ್ತು ಮಂತ್ರವೆನ್ನುವ ಅಷ್ಟಾವರಣದ ಮಂತ್ರದ ಮಹತ್ವವನ್ನು ತಿಳಿಸಲಾಗಿದೆ. ಮಂತ್ರ ಎನ್ನುವುದು ತನ್ನ ಅಂತರಂಗದಲ್ಲಿ ಅರಳುವ ಅರಿವಿನ ಸಾಕ್ಷಾತ್ಕಾರದ ಧ್ವನಿ ಪ್ರಸ್ಥಾನ ಅಥವಾ ತರಂಗಗಳ ಮಾಧ್ಯಮ. ಸೂಕ್ಷ್ಮ ಶರೀರವನ್ನು ಮಾಯೆಯಿಂದ ರಕ್ಷಿಸಿಕೊಳ್ಳಬೇಕಾದರೆ ಈ ಮಂತ್ರವೆಂಬ ಧ್ವನಿ ಪ್ರಸ್ಥಾನ ಬಹಳ ಮುಖ್ಯ ಪಾತ್ರವನ್ನು ವಹಿಸುತ್ತದೆ. ಯಾವ ಮಾಯೆಗೂ ಒಳಗಾಗಿ ನನ್ನ ಸೂಕ್ಷ್ಮ ಶರೀರ ಅಥವಾ ಮನಸ್ಸನ್ನು ಕೆಡಿಸಿಕೊಳ್ಳದೆ ಸಾತ್ವಿಕ ಮನಸ್ಸುಳ್ಳವನಾಗಲು ಸಹಾಯ ಮಾಡುತ್ತದೆ ಎನ್ನುವುದನ್ನು ಸೂಚ್ಯವಾಗಿ ಈ ವಚನದಲ್ಲಿ ನಿರೂಪಣೆ ಮಾಡಲಾಗಿದೆ.

“ಎನ್ನ ಕಾರಣ ತನುವೆಂಬ ಮನೆಯಲ್ಲಿ ಜ್ಞಾನವೆಂಬ ಜ್ಯೋತಿಯ ತುಂಬಿದೆನಯ್ಯ” ಎನ್ನುವ ಮೂರನೇಯ ಸಾಲುಗಳಲ್ಲಿ ಕಾರಣ ಶರೀರ ಮತ್ತು ಜ್ಞಾನ ಅಥವಾ ಜಂಗಮ ತತ್ವದ ಮಹತ್ವವನ್ನು ವಿವರಿಸಲಾಗಿದೆ. ಜ್ಞಾನ ಅಥವಾ ಜಂಗಮ ಅಂದರೆ ಯಾವುದಕ್ಕೆ ಚೈತನ್ಯ ಅಥವಾ ಚಲನಶೀಲತೆ ಇದೆಯೋ ಅದೇ ಜ್ಞಾನ ಅಥವಾ ಜಂಗಮ. ಇದು ವ್ಯಕ್ತಿಯೂ ಅಲ್ಲ, ಜಾತಿಯೂ ಅಲ್ಲ, ಸಮೂಹವೂ ಅಲ್ಲ, ಪಂಗಡ ಅಲ್ಲ. ಅದೊಂದು ಅನಂತ ಮತ್ತು ನಿರಂತರ ಚಲನಶೀಲ ಚೈತನ್ನ ಮತ್ತು ಅರಿವಿನ ತತ್ವ. ಚೈತನ್ಯವನ್ನು ಒಳಗೊಂಡ ಇಡೀ ಸಮಷ್ಟಿ. ಸಮಾಜಮುಖಿಯಾದ ಯಾವುದೇ ಚೈತನ್ಯ ಜ್ಞಾನ ಅಥವಾ ಜಂಗಮ. ಈ ಮೇಲೆ ತಿಳಿಸಿದ ಹಾಗೆ ಕಾರಣ ಶರೀರ ಅಂದರೆ ಆದಿ ಅಂತ್ಯವಿಲ್ಲದ, ವಿವರಿಸಲಾಗದ ಅಜ್ಞಾನದ ನಿರ್ವಿಕಲ್ಪರೂಪ. ಇಂಥ ಅಜ್ಞಾನವಿರುವ ಕಾರಣ ಶರೀರದಲ್ಲಿ ಜ್ಞಾನ ಅಥವಾ ಅದರ ಮೂರ್ತರೂಪವಾದ ಜಂಗಮ ತತ್ವವೆನ್ನುವ ಜ್ಯೋತಿಯನ್ನು ಅಥವಾ ಅರಿವನ್ನು ತುಂಬಬೇಕೆನ್ನುವ ತತ್ವವನ್ನು ಹೇಳಲಾಗಿದೆ.

“ಎನ್ನ ಒಳಹೊರಗೆ ತುಂಬಿ ಬೆಳಗುವ ಜ್ಯೋತಿಯ ಬೆಳಗಿನೊಳಗೆ ಸುಳಿಯುತಿರ್ದೆನಯ್ಯ” ಎನ್ನುವ ಕೊನೇಯ ಸಾಲುಗಳು ಇಡೀ ಅಷ್ಟಾವರಣ ಮತ್ತು ಪಂಚಾಚಾರಗಳಿಂದ ಸ್ಥೂಲ, ಸೂಕ್ಷ್ಮ ಮತ್ತು ಕಾರಣ ಶರೀರಗಳು ಶುದ್ಧವಾಗಿರುವ ಸಂಕೇತವನ್ನು ನೀಡುತ್ತದೆ. ಶರಣನ ಅಂತರಂಗ ಮತ್ತು ಬಹಿರಂಗದಲ್ಲಿ ಉಂಟಾಗುವ ಮೋಹ-ಮಾಯೆಗಳೆಂಬ ತರಂಗಗಳ ಬಲೆಗೆ ಸಿಲುಕದಂತೆ ಮಾಡುವಲ್ಲಿ ಈ ತತ್ವ ಸಿದ್ಧಾಂತದ ಆಚರಣೆಗಳು ಪ್ರಮುಖವಾದವು. ಭಕ್ತನಾದವನು ಶರಣನಾಗುವ ಹಾದಿಯಲ್ಲಿ ಈ ತತ್ವ ಸಿದ್ಧಾಂತಗಳ ಆಚರಣೆಗಳು ಅತ್ಯಂತ ಪ್ರಮುಖ ಪಾತ್ರವಹಿಸುತ್ತವೆ ಎನ್ನುವುದನ್ನು ಅತ್ಯಂತ ಸರಳ ಶಬ್ದಗಳಲ್ಲಿ ನಿರೂಪಣೆ ಒದಗಿಸಿರುವುದು ಷಣ್ಮುಖಸ್ವಾಮಿಗಳ ಈ ವಚನದ ವಿಶೇಷತೆ ಅಂತ ಹೇಳತಾ ಈ ವಚನ ವಿಶ್ಲೇಷಣೆಗೆ ವಿರಾಮವನ್ನು ಹೇಳುತ್ತೇನೆ.

ಶರಣು ಶರಣಾರ್ಥಿಗಳು.

ವಿಜಯಕುಮಾರ ಕಮ್ಮಾರ
“ಸವಿಚರಣ” ಸುಮತಿ ಶಾಲೆಯ ಹತ್ತಿರ,
ಕ್ಯಾತ್ಸಂದ್ರ, ತುಮಕೂರು – 572 104.
ಮೋಬೈಲ್‌ ನಂ : 9741 357 132.
ಈ-ಮೇಲ್‌ : vijikammar@gmail.com

Loading

Leave a Reply