
ದೇವಲೋಕದವರಿಗೂ ಬಸವಣ್ಣನೆ ದೇವರು
ಮರ್ತ್ಯಲೋಕದವರಿಗೂ ಬಸವಣ್ಣನೆ ದೇವರು
ನಾಗಲೋಕದವರಿಗೂ ಬಸವಣ್ನನೆ ದೇವರು,
ಮೇರುಗಿರಿ ಮಂದರಗಿರಿ
ಮೊದಲಾದವೆಲ್ಲಕ್ಕೂ ಬಸವಣ್ಣನೆ ದೇವರು,
ಚೆನ್ನಮಲ್ಲಿಕಾರ್ಜುನಯ್ಯಾ, ನಿಮಗೂ ಎನಗೂ
ನಿಮ್ಮ ಶರಣರಿಗೂ ಬಸವಣ್ಣನೆ ದೇವರು.
ಎಂಬ ಅಕ್ಕನ ವಚನವು ಬಸವಣ್ಣನವರ ಘನ ಮಹಿಮೆಯನ್ನು ಸಾರುತ್ತದೆ.
ʼವಚನಗಳುʼ ಶಿವಶರಣರು ಪ್ರಯೋಗಿಸಿದ ಆತ್ಮಸಾಕ್ಷಿಯ ನುಡಿಗಡಣಗಳು. ೧೨ನೇ ಶತಮಾನದ ಶರಣರು ನಡಿದಂತೆ ನುಡಿದರು; ನುಡಿದಂತೆ ನಡೆದ ಇವರ ಬದುಕಿನ ರೀತಿ ಅನನ್ಯ. ಅಂತೆಯೇ ೯೦೦ ವರ್ಷಗಳಾದರೂ ಅವರ ಪ್ರತಿಜ್ಞೆ- ಆತ್ಮ ಸಾಕ್ಷಿಯ ನುಡಿಗಡಣಗಳು ನಮ್ಮ ನಾಡಿನ ಕೀರ್ತಿ ಕಲಶಗಳಾಗಿ ಲೋಕಮಾನ್ಯಗೊಂಡಿವೆ. ಇದೆಲ್ಲದಕ್ಕೂ ಮುಖ್ಯ ರೂವಾರಿ ನಮ್ಮ ಸಾಂಸ್ಕೃತಿಕ ನಾಯಕ, ಮಹಾನ್ ಮಾನವತಾವಾದಿ, ವಿಶ್ವಗುರು, ಜಗಜ್ಯೋತಿ, ಅಣ್ಣ ಬಸವಣ್ಣ.
ಸಮಾಜವು ನಾನಾ ರೀತಿಯ (ಜಾತಿ, ಮತ, ಧರ್ಮ, ಲಿಂಗತಾರತಮ್ಯ, ರಾಜಕೀಯ, ಆರ್ಥಿಕ, ಬಡವ- ಬಲ್ಲಿದ) ಸಾಮಾಜಿಕ ಅಸ್ಥಿರತೆಯ ಧೋರಣೆಯಿಂದ ನಲಗುತ್ತಿತ್ತು. ಆ ಸಂದರ್ಭದಲ್ಲಿ ಸಮಾಜ ಮತ್ತು ರೈತನ ಪರಿಸ್ಥಿತಿ ಕುರಿತು ಡಾ. ಆರ್ ಸಿ ಮುದ್ದೇಬಿಹಾಳರು ತಮ್ಮ ʼಬಸವ ಬೆಳಗುʼ ಮಹಾಕಾವ್ಯದಲ್ಲಿ “ಉಳುಮೆಯಲ್ಲಿ ಬೆಳೆದದ್ದು ಉಳಿಲಿಲ್ಲ ರೈತನಿಗೆ, ಉಳಿದ್ಹೋಯ್ತು ಎಲ್ಲ ವಿಪ್ರನಿಗೆ| ಹೀಗಾಗಿ ಅಳಿಗಾಲ ಬಂತು ರೈತನಿಗೆ||” ಎನ್ನುವಲ್ಲಿ ರೈತನ ಧಾರುಣ ಸ್ಥಿತಿಯನ್ನು ಉಲ್ಲೇಖಿಸಿದ್ದಾರೆ. ಅಂತಹ ಸಂದರ್ಭದಲ್ಲಿ ಸಕಲ ಜೀವಾತ್ಮರಿಗೂ ಲೇಸನೇ ಬಯಸುವ ಬಸವಣ್ಣನೆಂಬ ʼಜ್ಞಾನ ಜ್ಯೋತಿʼ, ʼಚಿನ್ಮಯ ಜ್ಯೋತಿʼ ಕನ್ನಡ ನಾಡಿನಲ್ಲಿ ಉದಯಿಸಿತು. ಆ ಜ್ಯೋತಿಯೇ “ಸಮಷ್ಠೀ ಮಾನವ ಕುಲತಿಲಕ: ಬಸವಣ್ಣ” ಬಾಲಕನಿರುವಾಗಲೇ ತಮ್ಮ ಕುಟುಂಬದಲ್ಲಿಯೆ ಲಿಂಗ ತಾರತಮ್ಯವನ್ನು ಅಂದರೆ ತಮಗೆ ಉಪನಯನ ಶಾಸ್ತ್ರ ನಡೆಯುವ ಸಂದರ್ಭದಲ್ಲಿ ಅಕ್ಕ ನಾಗಲಾಂಬಿಕೆ ತಮಗಿಂತಲೂ ದೊಡ್ಡವಳು ಅವಳಿಗೇಕೆ ಉಪನಯನವಿಲ್ಲ ಎಂದು ಪ್ರಶ್ನಿಸುತ್ತಾನೆ. ಮತ್ತು ಸಮಾಜದಲ್ಲಿಯ ಜಾತಿವ್ಯವಸ್ಥೆ ಬಹಳಷ್ಟು ಪ್ರಕರವಾಗಿತ್ತು. ಆಗ ಬಾಲಕ ಬಸವಣ್ಣ ಕೇರಿಯ ಹುಡುಗರ ಜೊತೆ ಸ್ನೇಹ ಬೆಳೆಸಿ ಅವರೊಡನೆ ಆಟವಾಡುತ್ತಾ, ತಾನು ಕಲಿತ ವಿದ್ಯೆಯನ್ನು ಹೇಳಿಕೊಡುತ್ತಿರುವುದನ್ನು ತಿಳಿದ ಅಗ್ರಹಾರದ ಜನರೆಲ್ಲ ಬಾಲಕ ಬಸವಣ್ಣನಿಗೆ ಬುದ್ಧಿವಾದ ಹೇಳಿ ಹೀಗೆ ಆಡಿದರೆ ಧರ್ಮದ್ರೋಹಿಯಾಗುವಿರಿ ಎಂದಾಗ ಬಾಲಕ ಬಸವಣ್ಣ ಅವರಿಗೆ ಉತ್ತರಕೊಟ್ಟ ರೀತಿಯನ್ನು-
“ಮಾತು ಮಾತಿಗೆಯಿತ್ತು, ಜಾತಿಗಳ ಜಂಜಾಟ,
ಯಾತಕ್ಕ ಬೇಕು ಹೋರಾಟ| ಸಾಕಿನ್ನು
ಜಾತಿಗಿರುವಂತ ತಿಕ್ಕಾಟ||”
ಎಂದು ʼಬಸವ ಬೆಳಗುʼ ಮಹಾಕಾವ್ಯದ ರಚನಕಾರ ಅರ್ಥವತ್ತಾಗಿ ಚಿತ್ರಿಸಿರುವುದನ್ನು ಸ್ಮರಣೀಯವಾದುದು, ಈ ರೀತಿ ವರ್ಣಭೇದ, ವರ್ಗಭೇದ ಲಿಂಗಭೇದ ಮತ್ತು ಧಾರ್ಮಿಕ ಅಸ್ಥಿರತೆಯಂಥ ಅನೇಕ ವಿಷಯಗಳನ್ನು ಕಂಡು, ಗುರು ಹಿರಿಯರಲ್ಲಿ ಆಚಾರ- ವಿಚಾರಗಳಲ್ಲಿ ಭಿನ್ನತೆ ಕಂಡು ಜಿಗುಪ್ಸೆಗೊಂಡರು. ಹರಿಹರನು ಹೇಳುವಂತೆ- “ಶಿವಭಕ್ತಿಯುಂ ಕರ್ಮಮುಂ ಎಂದುಮೊಂದಾಗಿರದು” ಎಂದು ತನ್ನ ಜನಿವಾರವನ್ನು ಕಿತ್ತೆಸೆದು ಮನೆ ಬಿಟ್ಟು ಹೊರ ನಡೆದನು. ಅಲ್ಲಿಯೇ ಮಾನವ ಕಲ್ಯಾಣಕ್ಕಾಗಿ ಅವರ ಮನದ ತುಡಿತವು ಕಂಡು ಬರುತ್ತದೆ.
“ಮಾನವ ಜನ್ಮ ದೊಡ್ಡದಲ್ಲ, ಮಾನವೀಯತೆ ದೊಡ್ಡದು” ಎಂಬ ಅವರ ಉದಾತ್ತ ತೆಯ ದ್ಯೇಯವುಳ್ಳ ಅವರ ಮಾರ್ಗವು ಲಿಂಗಧರ್ಮದಿಂದ ಜಂಗಮತ್ವದ ಕಡೆಗೆ ಸಾಗಿ ಕಲ್ಯಾಣದಲ್ಲಿ ಅನುಭವ ಮಂಟಪ ಸ್ಥಾಪಿಸಿ, ಸಮಷ್ಠೀ ಮಾನವ ಕುಲದ ಸಮುದ್ಧರಣ ಗುರಿ ಹೊಂದಿ, ಸಮಾಜದ ಎಲ್ಲ ಜನಾಂಗವನ್ನು ಮೇಲು ಕೀಳೆನ್ನದೆ ತನ್ನ ತೆಕ್ಕೆಗೆ ತೆಗೆದುಕೊಂಡು ತಮ್ಮ ಸರಳ ಸಜ್ಜನಿಕೆಯ ಭಾಷೆ, ಸರ್ವ ಸಮ್ಮತವಾದ ಸರ್ವಕಾಲಕ್ಕೂ ಒಪ್ಪಿತವಾದ ಸತ್ಯಾಂಶಗಳನ್ನು “ಭಕ್ತಿ ಶುಭಾಶಯವ ನುಡಿವೆ, ನುಡಿದಂತೆ ನಡೆವೆ, ನಡೆಯಲ್ಲಿ ನುಡಿ ಪೂರೈಸುವೆ” ಎಂದರು. ಹೀಗೆ ತಮ್ಮ ನಡೆ ನುಡಿಗಳ ಮೂಲಕ ಮಾನವ ಬದುಕಿನ ದಿಕ್ಕನ್ನು ಬದಲಿಸಿ, ಸಮಸಮಾಜವನ್ನು ಕಟ್ಟಿ ಎಲ್ಲರಲ್ಲೂ “ಸಮಬಾಳು, ಸಮಪಾಲು” ಎಂಬ ಚಿಂತನೆಯನ್ನು ಬಿತ್ತಿ ಬೆಳೆದ ವೈಚಾರಿಕ ಚಿಂತಕ, ಮಹಾನ್ ದಾರ್ಶನಿಕ ಅಣ್ಣ ಬಸವಣ್ಣ.
ಸಮಾಜದಲ್ಲಿ ವರ್ಗ ಸಮಾನತೆ, ವರ್ಣಸಮಾನತೆ, ಲಿಂಗ ಸಮಾನತೆಯನ್ನು ತರಲು ಆತ್ಮಕಲ್ಯಾಣ ಮತ್ತು ಸಮಾಜಕಲ್ಯಾಣ ಒಟ್ಟೊಟ್ಟಿಗೆ ಆಗಬೇಕೆಂಬುದು ಅವರ ನಿಲುವಾಗಿತ್ತು. ಅದು ಸತ್ಯ ಕೂಡ. ಅಂತರಂಗ ಶುದ್ಧಿ ಆಗದ ಹೊರತು ಬಹಿರಂಗಶುದ್ಧಿ ಸಾಧ್ಯವಿಲ್ಲ.ನಮ್ಮ ದೇಶದ ರೂಢಿಗತ ಸಿದ್ಧಾಂತಗಳು ವ್ಯಕ್ತಿ ಶುದ್ಧತೆಗೆ ಪ್ರಾಮುಖ್ಯತೆ ನೀಡಿದರೆ ಸಮಾಜ ಶುದ್ಧಿತೆಯನ್ನು ನಿರ್ಲಕ್ಷಿಸಿವೆ, ಇನ್ನೂ ಕೆಲವು ಸಿದ್ಧಾಂತಗಳು ಸಮಾಜ ಶುದ್ಧತೆಗೆ ಪ್ರಾಮುಖ್ಯತೆ ನೀಡಿ ವ್ಯಕ್ತಿಶುದ್ಧತೆಯನ್ನು ನಿರ್ಲಕ್ಷಿಸಿರುವುದು ತಿಳಿದುಬರುತ್ತದೆ. ಆದರೆ ಬಸವಣ್ಣನವರ ಸಿದ್ಧಾಂತವು ವ್ಯಕ್ತಿ ಶುದ್ಧಿಯಾಗಿ ಅಂತರಂಗ ಅರಳಿದರೆ, ಸಮಾಜ ಶುದ್ಧಿ ಸಾಧ್ಯ. ಈ ಎರಡೂ ಒಂದನ್ನು ಬಿಟ್ಟು ಮತ್ತೊಂದು ಶುದ್ಧಿಯಾಗಲು ಸಾಧ್ಯವಿಲ್ಲ. ಆ ನಿಟ್ಟಿನಲ್ಲಿ ಎಲ್ಲ ಕೆಳಸ್ತರದ, ದಲಿತ, ಶ್ರಮಿಕ ವರ್ಗಗಳನ್ನು ಸಂಘಟಿಸಿ ಅವರ ಮೇಲಾಗುವ ಶೋಷಣೆಯನ್ನು ಆಧ್ಯಾತ್ಮಿಕ ಮತ್ತು ಸಾಮಾಜಿಕ ಸಿದ್ಧಾಂತದ ನೆಲೆಯಲ್ಲಿ ಪ್ರತಿಭಟಸಿದರು. ಈ ಮೊದಲಿದ್ದ ಸತ್ವಹೀನವಾಗಿ ಗುರು, ಲಿಂಗ, ಜಂಗಮದ ಆಚರಣೆಯನ್ನು ತಳ್ಳಿ ಹಾಕಿ ʼಅರಿವೇ ಗುರು ನುಡಿ ಜ್ಯೋತಿರ್ಲಿಂಗʼ ಎನ್ನುವಂತೆ ಅಂತರಂಗದಲ್ಲಿರುವ ಅರಿವೆ ಗುರುವಾಗಿ, ಶ್ರೀ ಬಸವಣ್ಣನವರ ಕೊಟ್ಟ ಕಂತೆಯ ರೂಪವಾದ ಕರಸ್ಥಲದ ಲೀಂಗವೇ ಸುಜ್ಞಾನ ಗುರುವಾಗಿ ಒಳಹೊರಗೂ ಭೋದಿಸುವ ಗುರುಲಿಂಗವಾದ; ಲಿಂಗ ಒಳಹೊರಗೆನ್ನದೆ ತನು, ಮನ, ಭಾವದಲಿ ಬೆಳಗಿ ಮಹಾಶಿವಲಿಂಗವಾಗಿ ಪರಿಣಮಿಸಿತ್ತು. ಅಷ್ಟಾವರಣಗಳು (ಗುರು, ಲಿಂಗ, ಜಂಗಮ, ವಿಭೂತಿ, ರುದ್ರಾಕ್ಷಿ, ಮಂತ್ರ, ಪಾದೋದಕ, ಪ್ರಸಾದ) ಅಂಗ; ಪಂಚಾಚಾರಗಳು (ಲಿಂಗಾಚಾರ- ಸದಾಚಾರ, ಶಿವಾಚಾರ, ಗಣಾಚಾರ,ಮತ್ತು ಭೃತ್ಯಾಚಾರ) ಪ್ರಾಣ, ಷಟಸ್ಥಲಗಳು(ಭಕ್ತ, ಮಹೇಶ, ಪ್ರಸಾದಿ, ಪ್ರಾಣಲಿಂಗಿ, ಶರಣ, ಐಕ್ಯ) ಆತ್ಮವೆಂದು ಮರುವ್ಯಾಖ್ಯಾನಿಸಿದರು.
ಶ್ರೀ ಚೆನ್ನಬಸವಣ್ಣನವರು-”ಲಿಂಗದ ಪೂರ್ವಾಶ್ರಯವ ಕಳೆದು, ಇದು ಪ್ರಾಣ ಲಿಂಗವೆಂದು, ತೋರ ಬಂದನಯ್ಯಾ, ಬಸವಣ್ಣ! ಎಂದಿದ್ದಾರೆ. ಬ್ರಹ್ಮಾಂಡ ಮತ್ತು ಪಿಂಡಾಂಡ ಸ್ವರೂಪವೂ ಆಗಿರವ ಲಿಂಗವು ಚೈತನ್ಯಮಯವಾಗಿದೆ. ಇಂತಹ ಲಿಂಗವನ್ನು ಕೊಡುವ ಮೂಲಕ ತನು-ಮನ ಸಾಮರಸ್ಯಗೊಂಡು ಆತ್ಮೋನ್ನತಿ ಹೊಂದಲು ಸಾಧ್ಯವೆಂದು ಅರುಹಿದರು.
“ಅಂತರಂಗದೊಳಗಿರ್ದ ನಿರವಯಲಿಂಗವನ್ನು ಸಾವಯವ ಲಿಂಗನ ಮಾಡಿ
ಶ್ರೀ ಗುರುಸ್ವಾಮಿ ಕರಸ್ಥಲಕ್ಕೆ ತಂದು ಕೊಟ್ಟ ಇಷ್ಟಲಿಂಗವು
ಅಂತರಂಗವನ್ನಾವರಿಸಿ ಅಂತರಂಗದ ಕರಣಂಗಳೆ ಕಿರಣಮಗಳಾಗಿ
ಬೆಳಗುವ ಚಿದಂಶವೆ ಪ್ರಾಣ ಲಿಂಗವು
ಆ ಮೂಲ ಚೈತನ್ಯವೇ ಭಾವಲಿಂಗವು
ಇದನರಿದು ನೋಡುವ ನೋಟ ಭಾವ ಪರಿಪೂರ್ಣವಾಗಿ
ತಾನು ತಾನಾದನಲ್ಲದೇ ಇದಿರಿಟ್ಟು ತೋರುವುದಿಲ್ಲಾವಾಗಿ
ಅಖಂಡ ಪರಿಪೂರ್ಣವಪ್ಪ ನಿಜವು ತಾನೇ ಕೂಡಲ ಸಂಗಮದೇವಾ.”
ಅಂತೆಯೇ ತಾವು ಕಂಡುಕೊಂಡ ಚೈತನ್ಯಮಯ ಲಿಂಗವನ್ನು ಯಾವುದೇ ಲಿಂಗ, ಮತ, ಧರ್ಮವೆನ್ನದೆ ಸರ್ವರಿಗೂ ಲಿಂಗಧೀಕ್ಷೆಯನ್ನು ನೀಡುವ ಮೂಲಕ “ಮಾನವ ಕುಲಂ, ತಾನೊಂದೆ ವಲಂ” ಎಂಬಂತೆ ಒಂದೇ ಸೂರಿನಡಿಯಲ್ಲಿ (ಅನುಭವ ಮಂಟಪ) ಬಾಳುವ ಪರಿಕಲ್ಪನೆಯನ್ನು ತಂದು ಅವರನ್ನು ಶಿವ ಶರಣರೆಂದರು. ಹೀಗೆ ಸರ್ವರಲ್ಲು ಸಮಾನತೆಯನ್ನು ತಂದರು.
ಶರಣರೊಬ್ಬರು ಹೇಳುವ ಹಾಗೇ “ಮರ್ತ್ಯಲೋಕದ ಮಹಾಮನೆ ಹಾಳಾಗಬಾರದೆಂದು, ಆದಿಯ ಲಿಂಗವ ಮೇದಿನಿಗೆ ತಂದ ಬಸವಣ್ಣ; ಆದಿಯ ಜಂಗಮವ ಮೇದಿನಿಗೆ ತಂದ ಬಸವಣ್ಣ; ಆದಿಯ ಜಂಗಮ ದಾಸೋಹವ ಮೇದಿನಿಗೆ ತಂದ ಬಸವಣ್ಣ; ಆದಿಯ ಪ್ರಸಾದವ ಮೇದಿನಿಗೆ ತಂದ ಬಸವಣ್ಣ; ಕರಸ್ಥಲಕೆ ಬಂದ ಇಷ್ಟ ಲಿಂಗದ ಪ್ರಾಣ ಮಹತ್ವವನ್ನು ಕಂಡು ಸದ್ಭಕ್ತಿಯಿಂದ ಅರ್ಚಿಸಿ ಪೂಜಿಸಿ ಇಷ್ಟ ಬ್ರಹ್ಮದ ಘನವನ್ನು ಲೋಕದಲ್ಲಿ ಹರವಿದ ಬಸವಣ್ಣ ಗುರು:” ಎಂದಿದ್ದಾರೆ. ಈ ರೀತಿ ಸರ್ವರಲ್ಲೂ ಗುರು, ಲಿಂಗ, ಜಂಗಮವೆಂಬ ಶರಣ ಸಿದ್ಧಾಂತವನ್ನು ಮೂಲತತ್ವವನ್ನಾಗಿಸಿದರು. ವ್ಯಕ್ತಿಯೇ ಸ್ವಯಂ ಗುರು(ಜ್ಞಾನಿ)ವಾಗಬೇಕು, ಆ ಜ್ಞಾನವನ್ನು ತನ್ನ ಸತ್ಯ ಶುದ್ಧ ಕಾಯಕದಲ್ಲಿ ಅಳವಡಿಸಿಕೊಂಡು ಲಿಂಗವಾಗಬೇಕು, ಆ ಜ್ಞಾನ ಮತ್ತು ಸತ್ಯಶುದ್ಧ ಕಾಯಕ ಒಗ್ಗೂಡಿ ಜಂಗಮವಾಗಬೇಕು ಅಂದರೆ ಸಮಾಜಮುಖಿ ಸೇವೆಯಲ್ಲಿ ತೊಡಗಬೇಕೆಂಬುವಲ್ಲಿ ಆತ್ಮಕಲ್ಯಾಣವೂ ಅಡಗಿದೆ ಮತ್ತು ಸಮಾಜ ಕಲ್ಯಾಣವೂ ಅಡಗಿದೆ.
ಸತ್ಯಶುದ್ಧ ಕಾಯಕ ಮತ್ತು ದಾಸೋಹ ಎಂದರೆ- “ನಾನು ದುಡಿಯಬೇಕು, ನಾವು ಉಣ್ಣಬೇಕು” ಎಂಬ ತತ್ವದಡಿಯಲ್ಲಿ ದುಡಿದುದನ್ನು ಸಂಗ್ರಹಿಸದೇ ಸಮಾಜಮುಖಿ ಕಾರ್ಯಗಳಿಗೆ ವ್ಯಯಿಸಬೇಕು ಆ ಮೂಲಕ ಸಮಾಜ ಕಲ್ಯಾಣ ಸಾಧ್ಯ. ಅವರು ಅರ್ಥಮಂತ್ರಿಯಾಗಿ ಅರ್ಥವ್ಯವಸ್ಥೆ ಸಬಲತೆ ಬಗೆಗೆ ತುಂಬಾ ಚೆನ್ನಾಗಿ ಅರಿತವರಾಗಿದ್ದರು. ಅಂತೆಯೇ ಆರ್ಥಿಕ ಸಬಲಗೊಳ್ಳಲು ದುಡಿಮೆ ಮುಖ್ಯ. ಕಾಯಕವೇ ಕೈಲಾಸವೆಂಬ ಧೋರಣೆಯಲ್ಲಿ ಕಾಯಕದ ಮೂಲಕ ದೇವರನ್ನು ಕಾಣಬಹುದೆಂಬುದನ್ನು ಬಿತ್ತರಿಸಿದರು. ಈ ರೀತಿ ಬಸವಣ್ಣನವರ ಚಿಂತನೆಗಳ ವಾಹಕಗಳಾಗಿ ವಚನಗಳು ಸಮರ್ಪಕವಾಗಿ ಜನಮಾನಸವನ್ನು ತಲುಪಿವೆ.
ವ್ಯಕ್ತಿತ್ವಶೋಧ ಮತ್ತು ಸಮಾಜಶೋಧ ಎರಡನ್ನೂ ಅರುಹಿದ ಬಸವಣ್ಣನವರ ವಚನಗಳು ಸರ್ವಕಾಲಕ್ಕೂ ಸಮ್ಮತವಾಗಿ ಉತ್ತರವಾಗಿ ನಿಲ್ಲುತ್ತವೆ.
“ದಯವಿಲ್ಲದ ಧರ್ಮವದಾವುದಯ್ಯಾ ದಯೆವೇ ಬೇಕು ಸಕಲ ಪ್ರಾಣಿಗಳೆಲ್ಲರಲ್ಲಿ” ಸಮಷ್ಠಿ ಒಳಿತನ್ನು ಬಯಸಬೇಕಾದರೆ ದಯೆ ಇರಬೇಕು. ಅದು ಪ್ರಾಣಿ, ಪಕ್ಷಿ ಸಕಲ ಜೀವ ಸಂಕುಲಗಳಲ್ಲಿ ಧರ್ಮದ ಮೂಲವೇ ದಯೆ. ಆದರೆ ಇಂದು…….?, ಧರ್ಮದ ಅರ್ಥವೆ ಬೇರೆಯಾಗಿದೆ, ಯಾರೊಬ್ಬರಲ್ಲೂ ದಯೆ ಕರುಣೆ ಎಂಬುದಕ್ಕೆ ಅರ್ಥಕಳೆದುಕೊಂಡಿದೆ. ಅದನ್ನು ಪುನರ್ಮನನ ಮಾಡಬೇಕಾದ ತುರ್ತು ಇದೆ.
“ಕಳಬೇಡ, ಕೊಲಬೇಡ ಹುಸಿಯ ನುಡಿಯಲುಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ ತನ್ನ ಬಣ್ಣಿಸಬೇಡ, ಇದಿರು ಹಳಿಯಲುಬೇಡ ಇದೇ ಅಂತರಂಗ ಶುದ್ಧಿ ಇದೇ ಬಹಿರಂಗಶುದ್ಧಿ ಇದೇ ನಮ್ಮ ಕೂಡಲ ಸಂಗಮನೊಲಿಸುವ ಪರಿ||
ಕಳ್ಳತನ, ಕೊಲೆ, ಸಿಟ್ಟು, ಪರರ ನಿಂದೆ ಆತ್ಮ ಪ್ರಶಂಸೆಯನ್ನು ಮಾಡಬೇಡ.ಇದರಿಂದ ವ್ಯಕ್ತಿತ್ವ ನಾಶಗೊಳ್ಳುತ್ತದೆ. ಅಂತರಂಗ ಬಹಿರಂಗ ಶುದ್ಧಿಗೊಳ್ಳುವ ನೀತಿಯು ಕಂಡುಬರುತ್ತದೆ. “ಸತ್ಯವ ನುಡಿಯುವುದೇ ದೇವಲೋಕ, ಮಿಥ್ಯವ ನುಡಿಯುವುದೇ ಮರ್ತ್ಯಲೋಕ, ಆಚಾರವೇ ಸ್ವರ್ಗ, ಅನಾಚಾರವೇ ನರಕ” ಸ್ವರ್ಗವೆನ್ನುವುದು ನಮ್ಮನ್ನು ಬಿಟ್ಟು ಹೊರಗೆ ಇಲ್ಲ. ನಮ್ಮ ಸತ್ಯವಾದ ನಡೆ-ನುಡಿ, ಆಚಾರ-ವಿಚಾರಗಳಲ್ಲಿ ಇದೆ. ಅದನ್ನು ಆಚರಿಸುವುದರಿಂದ ನಮ್ಮ ಸುತ್ತಲೂ ಸುಖ ಶಾಂತಿ ನೆಮ್ಮದಿ ನೆಲೆಸಿ, ಸ್ವರ್ಗ ಸುಖ ಕಾಣುವುದಾಗಿದೆ. ಇದರಿಂದ ಆತ್ಮೋನ್ನತಿಯಾಗುತ್ತದೆ. ದೇವರ ಮಾರ್ಗ ಸುಲಬವಾಗುತ್ತದೆ. ಎಂಬುದನ್ನು ಸರ್ವೇಸಾಮಾನ್ಯರಿಗೂ ತಿಳಿವ ರೀತಿ ಬಸವಣ್ಣನವರು ಹೇಳಿದ್ದಾರೆ. ಮಾನವೀಯ ಮೌಲ್ಯ, ಸಾಮಾಜಿಕ ಮೌಲ್ಯ ಕುಸಿಯುತ್ತಿರುವ ಈ ಸಂದರ್ಭದಲ್ಲಿ ಮಕ್ಕಳಲ್ಲಿ ಇಂತಹ ವಚನ ಹೇಳಿ, ಅವರ ಚಿತ್ಜೋತಿಯನ್ನು ಹೊತ್ತಿಸುವ ಅವಶ್ಯಕತೆ ತುಂಬಾ ಇದೆ.
ಲೋಕದ ಡೊಂಕ ನೀವೇಕೆ ತಿದ್ದುವಿರಿ
ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ
ಇಂತಹ ವಚನಗಳು ಆತ್ಮಶೋಧನೆಗೆ ದಾರಿ ದೀಪವಾಗಿ ಪ್ರತಿವ್ಯಕ್ತಿಯು ಇನ್ನೊಬ್ಬರ ತಪ್ಪುಗಳನ್ನು ತಿದ್ದುವ ಮೊದಲು ತಾನೆ ತನ್ನ ಅರಿವಿನಾಳದಿಂದ ಪರಿಶುದ್ಧನಾದರೆ, ವ್ಯಕ್ತಿತ್ವ ಶುದ್ಧಿಗೊಂಡು ಸಮಾಜಶುದ್ಧಿ ತನ್ನಿಂದ ತಾನೇ ಆಗುತ್ತದೆ ಎಂಬ ನಿಲುವು ಅಡಗಿದೆ. “ಎನ್ನ ಚಿತ್ತವು ಅತ್ತಿಯ ಹಣ್ಣು ನೋಡಯ್ಯ, ವಿಚಾರಿಸಿದರೇನು ಹುರುಳಿಲ್ಲವಯ್ಯ” “ಕೊಂಬೆಯ ಮೇಲಣ ಮರ್ಕಟನಂತೆ ಲಂಘಿಸುವುದೆನ್ನ ಮನವು” ಇಂತಹ ವಚನಗಳು ಆತ್ಮಶೋಧಗಳಾಗಿವೆ.
“ಇವನ್ಯಾರವ, ಇವನ್ಯಾರವ ಇವನ್ಯಾರವನೆಂದೆನಿಸದಿರಯ್ಯಾ”,” ನೆಲವೊಂದೆ ಹೊಲಗೇರಿ ಶಿವಾಲಯಕ್ಕೆ, ಜಲವೊಂದೇ ಶೌಚಾ ಚಮನಕ್ಕೆ” ಎಂಬ ಮಾತು ಆಚರಣೆಯಿಂದ ಅದಮ ಮತ್ತು ಉತ್ತಮನೆನಿಸಿಕೊಳ್ಳುವುದೆ ಹೊರತು ಜಾತಿಯಿಂದಲ್ಲ. ಅಂತಯೇ ಮಾನವ ದೊಡ್ಡವನೆನಿಸಿಕೊಳ್ಳುವುದು ಅವನ ಮಾಡುವ ಕಾರ್ಯದಿಂದ ಎನ್ನುತ್ತಾರೆ. ಹೀಗೆ ಇನ್ನು ಅನೇಕ ನುಡಿಗಳ ಮೂಲಕ ಸಮಾಜದ ಕುಂದು ಕೊರತೆಗಳನ್ನು ತಮ್ಮ ನವಿರಾದ ಭಾಷೆ, ಸಜ್ಜನಿಕೆಯ ನಡೆಯಿಂದ ಸಮಷ್ಠೀ ಮಾನವ ಕುಲವೊಂದೆ ಎಂಬ ಭಾವಾಂತರಂಗ ತುಂಬಿ ಸಮಾನತೆಯ ಬೀಜ ಬಿತ್ತಿದರು.
ಉಳ್ಳವರು ಶಿವಾಲಯವ ಮಾಡುವರು;
ನಾನೇನ ಮಾಡವೆ ಬಡವನಯ್ಯಾ,
ಎನ್ನ ಕಾಲೆ ಕಂಭ, ದೇಹವೆ ದೇಗುಲ,
ಶಿರವೆ ಹೊನ್ನ ಕಲಶವಯ್ಯಾ,
ಕೂಡಲಸಂಗಮದೇವಾ, ಕೇಳಯ್ಯಾ
ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ.”
ಎನ್ನುವಲ್ಲಿ ಹಣ, ಆಸ್ತಿವುಳ್ಳ ಸಿರಿವಂತರು ಕಟ್ಟಡ ಕಟ್ಟಿ ವಿಗ್ರಹರೂಪಿ ಶಿವನನ್ನು ಸ್ಥಾಪಿಸಿ, ಶಿವಾಲಯ ಮಾಡುವರು, ಆದರೆ ಅದು ನನ್ನಿಂದ ಸಾಧ್ಯವಿಲ್ಲ ಕಾರಣ ನಾನು ಸಿರಿವಂತನಲ್ಲ. ಅಂತೆಯೇ ನಾನು ನಿನ್ನನ್ನು ನನ್ನ ಕಾಲನ್ನೆ ಕಂಬಗಳಾಗಿಸಿ ದೇಹವನ್ನೆ ದೇವಾಲಯವನ್ನಾಗಿಸಿ, ನನ್ನ ತಲೆಯನ್ನೇ ಚಿನ್ನದ ಕಲಶವನ್ನಾಗಿಸಿ, ನನ್ನಂತರಂಗದಲ್ಲಿ ಸ್ಥಿರವಾಗಿ ನೆಲೆಸುವಂತೆ ಕಾಪಾಡಿಕೊಳ್ಳುತ್ತೇನೆ. ಕೇಳು ದೇವಾ, ಉಳ್ಳವರು ನಿನಗಾಗಿ ಕಟ್ಟಿದ ದೇಗುಲ ಕಾಲಕ್ರಮೇಣ ನಶಿಸಿ (ಸ್ಥಾವರ) ಹೋಗುತ್ತದೆ. ಆದರೆ ಚೇತನ್ಯಶೀಲವಾದ ಜಂಗಮಸ್ವರೂಪಿಯಾಗಿ ಅಂತರಂಗದಲ್ಲಿರುವ ನೀನು ಶಾಸ್ವತವಾಗಿದ್ದು, ಕಾಲಕಾಲಕ್ಕು, ತಲೆಮಾರಿನಿಂದ ತಲೆಮಾರಿಗೂ ಜನರಲ್ಲಿ ಅರಿವು ಮತ್ತು ಮಾನವೀಯ ಮೌಲ್ಯಗಳ ಸಾಕಾರ ಮೂರ್ತಿಯಾಗಿ ಮಾನವ ಕುಲ ಉದ್ಧಾರಕನಾಗಿರುತ್ತಿ. ಇಲ್ಲಿ ಬಾಹ್ಯ ಆಡಂಬರದ ಭಕ್ತಿಗಿಂತ, ದೇವರನ್ನು ಮನದಲ್ಲೆ ಆರಾಧಿಸುತ್ತ ಸನ್ಮಾರ್ಗದಲ್ಲಿ ನಡೆಯಲು ಜಂಗಮ ಮಾರ್ಗವನ್ನು ಅನುಸರಿಸಬೇಕೆಂಬ ಉದಾತ್ತ ಆಶಯ ಬಸವಣ್ಣನವರದ್ದಾಗಿದೆ.
ಎನ್ನ ನಡೆಯೊಂದು ಪರಿ; ಎನ್ನ ನುಡಿಯೊಂದು ಪರಿ;
ಎನ್ನಳಗೇನೂ ಶುದ್ಧವಿಲ್ಲ ನೋಡಯ್ಯಾ,
ನುಡಿಗೆ ತಕ್ಕ ನಡೆಯ ಕಂಡಡೆ
ಕೂಡಲ ಸಂಗಮದೇವನೊಳಗಿಪ್ಪನಯ್ಯಾ.
ಹೀಗೆ ಅನೇಕ ಆತ್ಮವಿಮರ್ಶೆ ವಚನಗಳ ಮೂಲಕ ನುಡಿದಂತೆ ನಡೆದು ಮಾನವನ ಆತ್ಮ ಕಲ್ಯಾಣದ ಮೂಲಕ ಸಮಾಜ ಕಲ್ಯಾಣದ ಮಾರ್ಗ ತೋರಿದ ಕಾಮಧೇನು ಬಸವಣ್ಣನವರು ಕರುನಾಡಿನ ಸಾಂಸ್ಕೃತಿಕ ನಾಯಕನಷ್ಟೇ ಅಲ್ಲದೆ ವಿಶ್ವದ “ಸಮಷ್ಠೀ ಮಾನವ ಕುಲತಿಲಕ”ವಾಗಿ ಹಿಂದು, ಇಂದು, ಮುಂದೆಂದೂ ಚಂದ್ರಾರ್ಕಸ್ಥಾಯಿಯಾಗಿ ರಾರಾಜಿಸುತ್ತಾರೆ.
ಶ್ರೀ ಗುರು ಬಸವಣ್ಣನವರ ವಚನಗಳಲ್ಲಿ ಏನಿಲ್ಲ? ಎಲ್ಲವೂ ಇದೆ. ಅಧ್ಯಯನ ಮಾಡುತ್ತಾ ಹೋದರೆ, ಧಾರ್ಮಿಕ, ಆಧ್ಯಾತ್ಮಿಕ ಚಿಂತನೆಗಷ್ಟೇ ಸೀಮಿತವಾಗಿರದೆ, ಎಲ್ಲ ಕಾಲಕ್ಕೂ ಸರಿಹೊಂದುವ ವೈಚಾರಿಕ ಚಿಂತನೆ, ವೈದ್ಯ ವಿಜ್ಞಾನ, ಭೌತವಿಜ್ಞಾನ, ಕೃಷಿ ವಿಜ್ಞಾನ, ಖಗೋಳವಿಜ್ಞಾನ, ಜೀವಶಾಸ್ತ್ರ, ರಸಾಯನ ಶಾಸ್ತ್ರ, ಲೆಕ್ಕಶಾಸ್ತ್ರ ಹೀಗೆ ಸಾವಿರಾರು ವಿಚಾರಗಳು ಗರಿಬಿಚ್ಚಿಕೊಳ್ಳುತ್ತವೆ. ಆದರೆ ಓದಿ ಅಧ್ಯಯನದ ಮೂಲಕ ಅರ್ಥೈಸಿಕೊಳ್ಳುವ ಅರಿವನ್ನು ಇಂದಿನ ಪೀಳಿಗೆಯಲ್ಲಿ ತುಂಬಬೇಕಾದ ಗುರುತರ ಜವಾಬ್ಧಾರಿ ಎಲ್ಲರದ್ದಾಗಿದೆ.
ಡಾ. ಕಮಲಾಬಾಯಿ ಎಸ್ ಕೆ
# B ೦೧-೦೧
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ,
ಬೆಳಗಾವಿ- ೫೯೦೦೧೮
ಜಂಗಮವಾಣಿ ಸಂಖ್ಯೆ – ೯೪೮೦೦೬೯೩೭೩
E-mail- kamalabaisk@gmail.com