ಸಾಂಸ್ಕೃತಿಕ ನಾಯಕ ಬಸವಣ್ಣನವರು / ಡಾ. ವಿಜಯಕುಮಾರ ಕಮ್ಮಾರ, ತುಮಕೂರು.

ಹೊತ್ತಾರೆ ಎದ್ದು, ಅಗ್ಫವಣಿ ಪತ್ರೆಯ ತಂದು,
ಹೊತ್ತು ಹೋಗದ ಮುನ್ನ ಪೂಜಿಸು ಲಿಂಗವ.
ಹೊತ್ತು ಹೋದ ಬಳಿಕ ನಿನ್ನನಾರು ಬಲ್ಲರು?
ಹೊತ್ತು ಹೋಗದ ಮುನ್ನ, ಮೃತ್ಯುವೊಯ್ಯದ ಮುನ್ನ
ತೊತ್ತುಗೆಲಸವ ಮಾಡು ಕೂಡಲಸಂಗಮದೇವನ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-24 / ವಚನ ಸಂಖ್ಯೆ-172)

Pre-Classic ಯುಗದಿಂದಲೂ ಅಂದರೆ 3/4/5 ನೇ ಶತಮಾನದಿಂದಲೂ ಭಕ್ತ ಮತ್ತು ಭಗವಂತನ ನಡುವಿನ ಸಂಬಂಧವನ್ನು ಕಂಡುಕೊಳ್ಳಲು ಸಂಸ್ಕೃತವನ್ನೇ ಅಪ್ಪಿಕೊಳ್ಳಲಾಗಿತ್ತು ಮತ್ತು ಬಳಸಿಕೊಂಡು, ಆಡಿಕೊಂಡು ಬರಲಾಗಿತ್ತು. ಕನ್ನಡ ಭಾಷೆ ಮತ್ತು ಭಾಷಿಕರೂ ಕೂಡ ಸಂಸ್ಕೃತ ಭಾಷೆಯನ್ನು ಅವಲಂಬಿಸಿದ್ದ ಕಾಲವದು. ಈ ಅವಲಂಬನೆಯನ್ನು ಹಾಗೂ ಹುನ್ನಾರಗಳನ್ನು ಛಿದ್ರಗೊಳಿಸಿದ್ದು 12 ನೇ ಶತಮಾನದ ವಚನ ಚಳುವಳಿ. ನಿರಾಕಾರ ಶಿವನ ಸಾಕ್ಷಾತ್ಕಾರ ಮಾಡಿಕೊಳ್ಳಲು ನನ್ನ ಮಾತೃಭಾಷೆಯಲ್ಲಿಯೇ ಸಾಧ್ಯವಿದೆ ಅನ್ನುವುದನ್ನು ಇಡೀ ಭಾರತಕ್ಕೆ ತಿಳಿಸಿಕೊಟ್ಟವರು ಬಸವಾದಿ ಶರಣ ವಚನಕಾರರು. ಆ ಕಾಲಘಟ್ಟದಲ್ಲಿನ ಸಂಘರ್ಷಮಯ ಶ್ರೇಣೀಕೃತ ಸಮಾಜದಲ್ಲಿ ಇದು ಸಣ್ಣ ವಿಷಯವೇನಲ್ಲಾ. “ದೇವರಿಗೇ ಕನ್ನಡ ಕಲಿಸಿದವರು ವಚನಕಾರರು”. ನಂಬಿ ಕರೆದರೆ ಓ ಎಂಬನೇ ಶಿವನು” ಅಂತಾ ಕನ್ನಡದಲ್ಲಿಯೇ ಹೇಳತಾರೆ. ಹಾಗಾಗಿ ಎಲ್ಲ ವಚನಕಾರರ ದೇವರಿಗೆ ಕನ್ನಡ ಬರುತ್ತಿತ್ತು. ಇದು ನಮಗೆ ಇವತ್ತಿಗೂ ಮಾದರಿ. ಆದರೆ ಇಂದು ನಮ್ಮ ಮಕ್ಕಳಿಗೇನೆ ಕನ್ನಡ ಕಲಿಸಲಾಗುತ್ತಿಲ್ಲ ಇದು ದುರಂತ.

ಕನ್ನಡದಲ್ಲಿಯೇ ಚಿಂತನೆ ಮಾಡಿ ಬದುಕನ್ನು ಹಸನು ಮಾಡಿಕೊಂಡವರು ವಚನಕಾರರು. ಇದು ಸಂಸ್ಕೃತ ಭಾಷೆಯ ಹಿಡಿತದಿಂದ ಕನ್ನಡವು ಹೊರಬರುವ ಮತ್ತು ಪಾರಾಗುವ ಪ್ರಕ್ರಿಯೆಯ ಮೊದಲ ಘಟ್ಟ. ಪ್ರಾದೇಶಿಕವಾಗಿ ಹರಿದು ಹಂಚಿ ಹೋಗಿದ್ದ ಕನ್ನಡ ಪ್ರದೇಶಗಳ ಸನ್ನಿವೇಶವನ್ನು ಬದಲಿಸಿ ಒಟ್ಟುಗೂಡಿಸಿದ್ದು ವಚನ ಚಳುವಳಿ. ವಚನಕಾರರು 12 ನೇ ಶತಮಾನದಲ್ಲಿ ಕನ್ನಡದಲ್ಲಿಯೇ ವಚನಗಳನ್ನು ರಚಿಸಿದೇ ಹೋಗಿದ್ದರೆ ಬಹುಶಃ ಕನ್ನಡ ನಶಿಸಿ ಹೋಗುತ್ತಿತ್ತೋ ಏನೋ. ಈಗ ನಾವು ಕನ್ನಡಕ್ಕಾಗಿ ಮಾಡುತ್ತಿರುವ ಹೋರಾಟ ಮತ್ತು ಹಾರಾಟಕ್ಕಿಂತ ನಾಲ್ಕು ಪಟ್ಟು ಹೆಚ್ಚು ಮಾಡಬೇಕಾಗಿತ್ತು.

ಕಳೆದ ಮೂರು ದಶಕಗಳ ನನ್ನ ವಚನ ಸಾಹಿತ್ಯದ ಅಧ್ಯಯನದಲ್ಲಿ ಕಂಡುಕೊಂಡ ಸತ್ಯ ಅಂದರೆ ವಚನ ಬೇರೆ ಅಲ್ಲ ವಾಸ್ತವತೆ ಬೇರೆ ಅಲ್ಲ. ವಚನಕ್ಕೆ ಸರಿಯಾಗಿ ನಿರ್ವಚನ ಆಗಿ ಅದು ಕಾಲ ಕಾಲಕ್ಕೆ ಪಚನಗೊಳ್ಳತಾನೆ ಇದೆ.

 ಓದಿದಷ್ಟೂ ಓದಿಸಿಕೊಳ್ಳುವ
 ಬರೆದಷ್ಟೂ ಬರೆಸಿಕೊಳ್ಳುವ
 ಚಿಂತಿಸಿದಷ್ಟೂ ಚಿಂತನೆಗೆ ಹಚ್ಚಿಕೊಳ್ಳುವ
 ವಿವರಿಸಿದಷ್ಟೂ ವಿಹಂಗಮ ನೋಟಕ್ಕೆ ಎಡೆ ಮಾಡಿಕೊಳ್ಳುವ
ಯೋಗ ಮತ್ತು ಯೋಗ್ಯತೆ ವಚನ ಸಾಹಿತ್ಯಕ್ಕೆ ಇದೆ ಅಂತ ನಾನು ಅಂದುಕೊಂಡಿದ್ದೇನೆ. (ಡಾ. ಶ್ರೀಪತಿ ಹಳಗುಂದ ಸರ್‌ ಹೇಳಿದ್ದು):

 ಕಾಲವಾಗಿ 12 ನೇ ಶತಮಾನ.
 ಪುಣ್ಯಕ್ಷೇತ್ರವಾಗಿ ಕಲ್ಯಾಣ.
 ರಾಜನಾಗಿ ಬಿಜ್ಜಳ.
 ವ್ಯಕ್ತಿಯಾಗಿ ಬಸವಣ್ಣ.
 ಭಾಷೆಯಾಗಿ ಕನ್ನಡ.
 ವಿದ್ಯಮಾನವಾಗಿ ವಚನ ಚಳುವಳಿ.
 ಶಕ್ತಿಯಾಗಿ ವಚನಗಳು.
 ಭಾವನೆಯಾಗಿ ಅನುಭವ.
 ಅಭಿವ್ಯಕ್ತಿಯಾಗಿ ಅನುಭಾವ.

ಹೀಗೆ ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಜಾತಿ-ಜನಾಂಗವನ್ನೂ ಮೀರಿದ ಒಂದು ಸಾಹಿತ್ಯವೆಂದರೆ ಅದು ವಚನ ಸಾಹಿತ್ಯ. ಅದಕ್ಕಾಗಿಯೇ ಸರಿ ಸುಮಾರು 900 ವರ್ಷಗಳದರೂ ಇಂದಿಗೂ ಅತ್ಯಂತ ಶ್ರದ್ಧಾ-ಭಕ್ತಿಯಿಂದ ಮತ್ತು ಗೌರವದಿಂದ ವಚನ ಸಾಹಿತ್ಯವನ್ನು ನಾವು ಆರಾಧಿಸುತ್ತೇವೆ. ಗೋಪಾಲ ಕೃಷ್ಣ ಅಡಿಗರು ಹೇಳುವ ಹಾಗೆ:

ಹೊಸ ನೆತ್ತರು ಉಕ್ಕಿ ಉಕ್ಕಿ ಆರಿ ಹೋಗುವ ಮುನ್ನ
ಹರೆಯದೀ ಮಾಂತ್ರಿಕನ ಮಾಟ ಮುಸುಳುವ ಮುನ್ನ
ಉತ್ಸಾಹ ಸಾಹಸದ ಉತ್ತುಂಗ ವೀಚಿಗಳ
ಈ ಕ್ಷುಬ್ದ ಸಾಗರವು ಬತ್ತಿ ಹೋಗುವ ಮುನ್ನ
ಕಟ್ಟುವೆವು ನಾವು ಹೊಸ ನಾಡೊಂದನು ರಸದ ಬೀಡೊಂದನು

ಹೀಗೆ ವಚನಕಾರರು ತಮ್ಮ ರಕ್ತ ಆರಿ ಹೋಗುವ ಮುನ್ನ ಹೊಸ ನಾಡನ್ನು ಕಟ್ಟಿದ್ದಾರೆ. ಈ ಕನ್ನಡ ನಾಡಿನಲ್ಲಿ ಅವರ ರಕ್ತ ಇನ್ನೂ ಆರಿ ಹೋಗಿಲ್ಲ ಎನ್ನುವುದಕ್ಕೆ ಇಡೀ ವರ್ಷಪೂರ್ತಿಯಾಗಿ ನಡೆಯುವ ಇಂಥ ಕನ್ನಡ ನಾಡು-ನುಡಿಯ ಉತ್ಸವಗಳು ಸಾಕ್ಷೀಭೂತವಾಗಿವೆ.

ಕನ್ನಡ ಮತ್ತು ಕನ್ನಡಿಗರ ಅಸ್ಮಿತೆಯನ್ನು ಎತ್ತಿ ಹಿಡಿದ ಬಸವಣ್ಣನವರು ಸಾಮಾಜಿಕ ನ್ಯಾಯದ ಮೊದಲ ಹರಿಕಾರರು. ಬಸವಣ್ಣನವರನ್ನು ಕರ್ನಾಟಕದ “ಸಾಂಸ್ಕೃತಿಕ ನಾಯಕ” ಎಂದು ಕರ್ನಾಟಕ ಸರ್ಕಾರ ದಿನಾಂಕ 10.02.2024 ರಂದು ಘೋಷಣೆ ಮಾಡಿತು. ಹಾಗಾಗಿ ಈ ವರ್ಷ ಅತ್ಯಂತ ವಿಶೇಷ ಸಂದರ್ಭವನ್ನು ನಿರ್ಮಾಣ ಮಾಡಿದೆ. ಸಾಂಸ್ಕೃತಿಕ ನಾಯಕ ಎನ್ನುವಲ್ಲಿ ಎರಡು ಶಬ್ದಗಳನ್ನು ನಾವು ನೋಡತೀವಿ. ಒಂದು ಸಂಸ್ಕೃತಿ ಮತ್ತು ಇನ್ನೊಂದು ನಾಯಕ. ಈ ಎರಡೂ ಶಬ್ದಗಳ ಮೂಲಕ ಬಸವಣ್ಣನವರನ್ನು ಅರ್ಥ ಮಾಡಿಕೊಳ್ಳುವದು ಈ ಸಣ್ಣ ಪ್ರಯತ್ನ.

ಈ ಸಂಸ್ಕೃತಿ ಎನ್ನುವ ವಿಷಯವೇ ಬಹಳ ವಿಸ್ತೃತವಾದದ್ದು. ಸಂಸ್ಕೃತಿ ಎನ್ನುವ ಶಬ್ದ ಬಹಳಷ್ಟು ಬಳಕೆಗೆ ಬಂದಿದ್ದು ತೀರ ಇತ್ತೀಚೆಗೆ, ಮೊದಲು ಇರಲಿಲ್ಲ ಅಂತಲ್ಲಾ, ಅಂದರೆ ಸರಿ ಸುಮಾರು 175 ರಿಂದ 200 ವರ್ಷಗಳಲ್ಲಿ ರೂಢಿಗತವಾಗಿ ಬಂದಿದೆ. ಸಂಸ್ಕೃತಿಯನ್ನು ಇಂಗ್ಲೀಷ್‌ ಭಾಷೆಯಲ್ಲಿ Culture ಎಂದು ಕರೆಯುತ್ತಾರೆ. ಇದು Culer ಎನ್ನುವ Latin ಭಾಷೆಯಿಂದ ಎರವಲು ಪಡೆದ ಶಬ್ದ. ಬೆಳೆಸುವುದು, ಪೋಷಣೆ ಮಾಡುವುದು, ಭೂಮಿಯನ್ನು ಉತ್ತುವುದು-ಬಿತ್ತುವುದು ಎನ್ನುವ ಹೀಗೆ ಹತ್ತು ಹಲವಾರು ಅರ್ಥಗಳು ಈ ಸಂಸ್ಕೃತಿ ಶಬ್ದಕ್ಕೆ ಇವೆ. ನಡವಳಿಕೆಗಳು, ನಂಬಿಕೆಗಳು, ಮೌಲ್ಯಗಳು ಸಾಂಕೇತಿಕ ತತ್ವ ಸಿದ್ಧಾಂತಗಳು ಹೀಗೆ ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಸಾಗುತ್ತಾ ಹೋಗುವ ಒಂದು ಜೀವನ ಕ್ರಮ.

ಪೋಲಂಡ್‌ ಸಂಜಾತ ಬ್ರಿಟೀಷ್‌ ಮಾನವಶಾಸ್ತ್ರ ವಿಜ್ಞಾನಿ ಬ್ರೋನಿಸ್ಲಾವ್‌ ಮಾಲಿನೋವಸ್ಕಿ ಪ್ರಕಾರ:

“ಸಂಸ್ಕೃತಿ ಎಂದರೆ ಮಾನವ ತನ್ನ ಬದುಕಿನ ಗುರಿಗಳನ್ನು ರೂಪಿಸಿಕೊಳ್ಳಲು ಸಾಧಿಸಿಕೊಳ್ಳಲು ರೂಢಿಸಿಕೊಂಡ ಸಾಧನವೇ ಸಂಸ್ಕೃತಿ. ಪ್ರಕೃತಿದತ್ತವಾದಂಥ ಪದಾರ್ಥಗಳನ್ನು ಮನುಷ್ಯ ತನ್ನ ವಿವೇಕ ಮತ್ತು ವಿವೇಚನೆಯಿಂದ ಯಾವ ರೀತಿಯಾಗಿ ಬಳಸಿಕೊಳ್ಳುತ್ತಾನೆ ಅಥವಾ ರೂಪಾಂತರಿಸಿಕೊಳ್ಳುತ್ತಾನೆ ಎನ್ನವುದೇ ಸಂಸ್ಕೃತಿ”

ಎಂದು ಒಂದು ನಿರೂಪವನ್ನು ನೀಡಿದ್ದಾರೆ. ಶರಣರು ಪ್ರಕೃತಿದತ್ತವಾದ ಸಂಸ್ಕೃತಿಗಳನ್ನು ಸಂಸ್ಕರಿಸಿ ಕೊಟ್ಟರು. ಬೇಸಾಯವನ್ನು ಮಾಡಿದರು, ಆಯಗಾರರು ಅಥವಾ ವಿವಿಧ ಕುಶಲ ಕರ್ಮಿಗಳು ಅನೇಕ ಉತ್ಪನ್ನಗಳನ್ನು ತಯಾರು ಮಾಡಿದರು, ಆಧ್ಯಾತ್ಮವಾದಿಗಳಾದರು, ಸಂಗೀತಗಾರರಾದರ, ಕಲಾವಿದರಾದರು. ಹೀಗೆ ಶರಣರ ಬದುಕಿನ ವಿವಿಧ ಮುಖಗಳನ್ನು ನೋಡತಾ ಹೋದಂತೆಲ್ಲಾ ಸಂಸ್ಕೃತಿಯ ಒಂದು ವೈಶಿಷ್ಠ್ಯಪೂರ್ಣ ಬದುಕು ನಮ್ಮ ಮುಂದೆ ಅನಾವರಣಗೊಳ್ಳುತ್ತಾ ಸಾಗುತ್ತದೆ. ಇಂಥ ಅಭೂತಪೂರ್ವ ಸಂಸ್ಕೃತಿಗೆ ಮುನ್ನುಡಿ ಬರೆದವರು ಬಸವಣ್ಣನವರು.

ಸಂಸ್ಕೃತಿ ಸಮಾಜದ ಪ್ರತಿಯೊಬ್ಬ ಪ್ರಜೆಗಳಿಗೂ ನಂಬಿಕೆಗಳನ್ನು, ಮೌಲ್ಯಗಳನ್ನು ಮತ್ತು ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಲು ಅವಕಾಶ ನೀಡುವುದರ ಮೂಲಕ ಎಲ್ಲ ಸಂಪ್ರದಾಯಗಳನ್ನು, ನೈತಿಕ ನಿಯಮಗಳನ್ನು ಸಮಾಜದಲ್ಲಿ ಬಿತ್ತುವದನ್ನು ಬೆಳೆಸುತ್ತದೆ. ಹುಟ್ಟಿದ ಮನುಷ್ಯ ಪ್ರಕೃತಿದತ್ತವಾಗಿ ಬಂದಂತಹ ಜ್ಞಾನವನ್ನು ಹೊರತು ಪಡಿಸಿ ವಿದ್ಯೆಯನ್ನು ಕಲಿತು ನಾಗರೀಕತೆಯನ್ನು ಬೆಳೆಸಿಕೊಂಡು ಬದುಕಿನಲ್ಲಿ ಏನಾದರೂ ಬದಲಾವಣೆ ಮಾಡಿಕೊಂಡು ಸಮಾಜದ ಜೊತೆಗೆ ಸಾಗುವುದು ಸಂಸ್ಕೃತಿ.

ಸಂಸ್ಕೃತಿ ಅಂತ ಬಂದಾಗ, ಬಸವಾದಿ ಶರಣರು ಈ ದೇವಾಲಯ ಸಂಸ್ಕೃತಿಯನ್ನು ವಿರೋಧ ಮಾಡಿದಂಥವರು. ದೇವರನ್ನ ವಿರೋಧ ಮಾಡಿದ್ದು ಬಹಳ ಕಡಿಮೆ. ಸ್ಥಾವರ ದೇವರನ್ನು ನಿರಾಕರಣೆ ಮಾಡತಾರೆ. ಅಂತರಂಗದ ಅರಿವಿನ ದೇವರನ್ನಲ್ಲ. ಸ್ಥಾವರ ಸಂಸ್ಕೃತಿಯನ್ನು ಮೌಢ್ಯದ ಪರಿಧಿಯೊಳಗೆ ವಿರೋಧ ಮಾಡತಾರೆ. ಈ ಕುರಿತು ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ವೀರೇಶ ಬಡಿಗೇರ ಅವರು ಅನೇಕ ಶಾಸನಗಳನ್ನು ಸಂಶೋಧನೆಗಳನ್ನು ಮಾಡುವಾಗ ಕಂಡುಕೊಂಡಂಥ ಅದ್ಭುತ ವಿಷಯವನ್ನು ತಿಳಿಸಿದರು. ಅವರಿಗೆ ಬಹಳಷ್ಟು ಕಾಡಿದಂಥ ಎರಡು ವಚನಗಳನ್ನು ಉಲ್ಲೇಖ ಮಾಡಿದರು.

ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ,
ಸುಳಿದು ಬೀಸುವ ವಾಯು ನಿಮ್ಮ ದಾನ,
ನಿಮ್ಮ ದಾನವನುಂಡು ಅನ್ಯರ ಹೊಗಳುವ
ಕುನ್ನಿಗಳನೇನೆಂಬೆ, ರಾಮನಾಥ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1276 / ವಚನ ಸಂಖ್ಯೆ-734)

ಆಗಿನ ಕಾಲಘಟ್ಟದಲ್ಲಿ ಅಂದರೆ 10 ನೇ ಶತಮಾನದಿಂದ 12 ನೇ ಶತಮಾನದವರೆಗೆ ಅಂದರೆ ಬಸವಣ್ಣನವರು ಬದುಕಿದ್ದಾಗಲೂ ಕೂಡ ಬಹಳ ದೊಡ್ಡ ಮಟ್ಟದಲ್ಲಿ ಭೂದಾನದ ಉಲ್ಲೇಖ ಬರುತ್ತದೆ. ಈ ಭೂದಾನ ಮಾಡುವಂಥ ಒಂದು ದೊಡ್ಡ ಸಂಸ್ಕೃತಿ ಪರಂಪರೆ ಬೆಳೆದು ಬಂದದ್ದನ್ನು ನಾವು ಅನೇಕ ಶಾಸನಗಳ ಮೂಲಕ ಕಾಣುತ್ತೇವೆ. ಬಸವಣ್ಣನವರು ತಮ್ಮ ಬಹಳ ಜನಜನಿತವಾದ ಒಂದು ವಚನದಲ್ಲಿ ನಿರೂಪಣೆ ಮಾಡತಾರೆ.

ಉಳ್ಳವರು ಶಿವಾಲಯವ ಮಾಡಿಹರು, ನಾನೇನ ಮಾಡುವೆ ಬಡವನಯ್ಯಾ,
ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರ ಹೊನ್ನಕಲಶವಯ್ಯಾ,
ಕೂಡಲಸಂಗಮದೇವಾ, ಕೇಳಯ್ಯಾ
ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲಾ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-74 / ವಚನ ಸಂಖ್ಯೆ-821)

“ನಾನೇನು ಮಾಡಲಿ ಬಡವನಯ್ಯ” ಎನ್ನುವ ವಚನದ ಸಾಲುಗಳನ್ನು ನಾವು ಗಮನಿಸಿದರೆ ಯಾಕೆ ಇಂಥ ಮಾತು ಅವರ ಬಾಯಲ್ಲಿ ಬಂತು ಎನ್ನುವುದು ಅತ್ಯಂತ ಕುತೂಹಲಕಾರಿ ವಿಷಯ. ಅತ್ಯಂತ ವಿಶಿಷ್ಠವಾದ ಮತ್ತು ಬೃಹತ್‌ ಕ್ರಾಂತಿಯನ್ನು ಹುಟ್ಟು ಹಾಕಿರುವ ಬಸವಣ್ಣನವರು ಯಾಕೆ ಕೈ ಚೆಲ್ಲುವಂಥ ನಿರಾಶಾದಾಯಕ ಮಾತುಗಳನ್ನು ಆಡತಾರೆ ಎನ್ನುವುದಕ್ಕೆ ಶಾಸನಗಳಲ್ಲಿ ನಮಗೆ ಸ್ಪಷ್ಟ ಉತ್ತರ ಸಿಗುತ್ತದೆ. ಆಗಿನ ಕಾಲಘಟ್ಟದಲ್ಲಿ ಹಾವೇರಿ ಜಿಲ್ಲೆ ಒಂದರಲ್ಲಿಯೇ 210 ದೇವಾಲಯಗಳ ನಿರ್ಮಾಣ ಆಗತಾವೆ. ಬಸವ ಕಲ್ಯಾಣದ ಸುತ್ತಮುತ್ತ 152 ದೇವಸ್ಥಾನಗಳನ್ನು ಜೀರ್ಣೋದ್ಧಾರ ಮಾಡತಾರೆ. ಹಾಗಾಗಿ ಹಲವಾರು ವಚನಗಳಲ್ಲಿ “ಇಳೆ ನಿಮ್ಮ ದಾನ” “ನಾನೇನು ಮಾಡಲಿ ಬಡವನಯ್ಯಾ” ಇಂಥ ಸಾಲುಗಳ ಉಲ್ಲೇಖ ಬರುತ್ತದೆ.

ಹಂಗಾರ ಈ ದೇವಸ್ಥಾನಗಳನ್ನು ಕಟ್ಟಲು ಭೂಮಿ, ಹೊನ್ನು ಇತ್ಯಾದಿಗಳನ್ನು ದಾನ ಮಾಡಲು ಅದು ನಿನ್ನ ಸ್ವಂತ ಆಸ್ತಿಯೇ ಎನ್ನುವ ಮಾತುಗಳನ್ನು ಈ ವಚನಗಳಲ್ಲಿ ನಿರೂಪಣೆ ಮಾಡತಾರೆ. “ಅನ್ಯರ ಹೊಗಳುವ” ಈ ವಾಕ್ಯ ಇದೆಯಲ್ಲಾ ಅದರಲ್ಲಿ ರಾಜನ ಹೊಗಳುವದಕ್ಕೆ ವಿರೋಧದ ಧ್ವನಿ ಪ್ರಸ್ಥಾನವಿದೆ. ದಾನ ಕೊಡುವವನ ಮತ್ತು ತೆಗೆದುಕೊಳ್ಳುವವನ ಭೂಮಿ ಅಲ್ಲ. ಜೇಡರ ದಾಸಿಮಯ್ಯ ಇದನ್ನು ಪ್ರಶ್ನೆ ಮಾಡತಾರೆ. ರಾಜನನ್ನು ಹೊಗಳುವ ಈ ಸಂಸ್ಕೃತಿಯನ್ನು ವಿರೋಧ ಮಾಡಿದ್ದಕ್ಕಾಗಿ ಇವರಿಗೆ ರಾಜಾಶ್ರಯ ತಪ್ಪಿ ಹೋಗತಾವೆ. ಇಂಥ ವಿರೋಧಗಳ ನಡುವೆಯೂ ಒಂದು ಆಂದೋಲನವನ್ನ, ಒಂದು ಕ್ರಾಂತಿಯನ್ನು ಬಸವಣ್ಣನವರು ಮಾಡತಾರೆ. ಇದು ಜನಪರ ಕಾಳಜಿಯುಳ್ಳ ಒಂದು ಸಂಸ್ಕೃತಿ. ಹಾಗಾಗಿ ಬಸವಣ್ಣನವರು ಸಾಂಸ್ಕೃತಿಕ ನಾಯಕ.

ಸಂಸ್ಕೃತಿ ಎನ್ನುವುವುದು ವ್ಯಕ್ತಿಗತವಾಗಿ ಬೆಳದು ಸಮಷ್ಠಿಯಲ್ಲಿ ತನ್ನ ಫಲವನ್ನು ಕೊಡತಾ ಹೋಗುತ್ತದೆ. ಹೀಗೆ ಸಂಸ್ಕೃತಿ ಅನ್ನುವಂಥಾದ್ದು ಬೆಳೆದು ಬೆಳದು ಪ್ರತಿಯೊಂದು ಸಮುದಾಯಗಳಲ್ಲಿ, ಪ್ರದೇಶಗಳಲ್ಲಿ, ರಾಜ್ಯಗಳಲ್ಲಿ, ರಾಷ್ಟ್ರಗಳಲ್ಲಿ ಬೆಳೆದು ನಿಲ್ಲುತ್ತದೆ. ಇಂಥ ಸಂಸ್ಕೃತಿ ಬಸವಣ್ಣನವರ ಬದುಕಿನುದ್ದಕ್ಕೂ ಪ್ರತಿಫಲನವಾದದ್ದನ್ನು ನಾವು ಕಾಣಬಹುದು. ಬಸವಣ್ಣನವರ ಒಂದು ವಚನ ಇಲ್ಲಿ ಬಹಳ ಪ್ರಸ್ತುತ ಅನಿಸತದೆ.

ಭಕ್ತಿ ಸುಭಾಷೆಯ ನುಡಿಯ ನುಡಿವೆ, ನುಡಿದಂತೆ ನಡೆವೆ,
ನಡೆಯೊಳಗೆ ನುಡಿಯ ಪೂರೈಸುವೆ,
ಮೇಲೆ ತೂಗುವ ತ್ರಾಸು ಕಟ್ಟಳೆ ನಿಮ್ಮ ಕೈಯಲ್ಲಿ.
ಒಂದು ಜವೆ ಕೊರತೆಯಾದಡೆ
ಎನ್ನನದ್ದಿ ನೀನೆದ್ದು ಹೋಗು, ಕೂಡಲಸಂಗಮದೇವಾ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-43 / ವಚನ ಸಂಖ್ಯೆ-441)

“ಭಕ್ತಿ ಸುಭಾಷೆ” ಅಂತ ಹೇಳತಾರೆ ಬಸವಣ್ಣನವರು. ಸುಭಾಷೆ ಅನ್ನುವ ಅರ್ಥದಲ್ಲಿ. ಅವರ ಈ ವಚನದಲ್ಲಿ “ಭಕ್ತಿ ಸುಭಾಷೆಯ ನುಡಿಯ ನುಡಿವೆ, ನುಡಿದಂತೆ ನಡೆವೆ, ನಡೆಯೊಳಗೆ ನುಡಿಯ ಪೂರೈಸುವೆ”. ಇದು ಭಾಷೆಯ ಸಂಸ್ಕೃತಿ. ನಡೆಯೊಳಗೆ ನನ್ನ ನುಡಿಯನ್ನ ಪೂರೈಸುವೆ ಅಥವಾ ನಡೆ ನುಡಿ ಒಂದಾಗಿರುವೆ ಅಂತ ಹೇಳಿ ಮಾತು ಕೊಡೋದು ಅಷ್ಟೇ ಅಲ್ಲಾ ನಡೆಯೋದು. ಇಷ್ಟಕ್ಕೆ ಅಲ್ಲಾ ಇದು ಬರೀ ಹೇಳಿಕೆಗಳಲ್ಲಾ. “ಮೇಲೆ ತೂಗುವ ತ್ರಾಸು ಕಟ್ಟಳೆ ನಿಮ್ಮ ಕೈಯಲ್ಲಿ”. ಈ ತ್ರಾಸು ಕಟ್ಟಳೆ ತಕ್ಕಡಿ ಅಂತೀವಲ್ಲಾ ಅದನ್ನು ನಿನ್ನ ಕೈಯಲ್ಲಿ ಹಿಡಿದುಕೋ. ನಾನು ಹೇಳಿದ ಮಾತಿನಲ್ಲಿ ಒಂದು “ಜವೆ ವ್ಯತ್ಯಾಸವಾದರೂ ಎನ್ನನದ್ದಿ ನೀನೆದ್ದು ಹೋಗಾ”. ನನ್ನನ್ನ ಮುಗಿಸಿ ಬಿಡು ನೀನು ಹೋಗು. ಇಷ್ಟು ಪ್ರಮಾಣಬದ್ಧವಾಗಿ ಇಷ್ಟು ಆತ್ಮ ಸ್ಥೈರ್ಯದಿಂದ ಹೇಳುವ ಶಕ್ತಿ ಬಸವಣ್ಣನವರಲ್ಲಿ ಇತ್ತಲ್ಲಾ ಅದು ಇವತ್ತು ಎಷ್ಟು ಜನರಿಗೆ ಇದೆ ಎನ್ನುವ ಅರ್ಥದಲ್ಲಿ ನಾವಿವತ್ತು ಇದನ್ನ ಕೇಳಬೇಕು. ಬಸವಣ್ಣನವರು ಪ್ರಸ್ತುತ ಆಗೋದು ಈ ಕಾರಣಕ್ಕಾಗಿ. ನುಡಿದಂತೆ ನಡೆಯಬೇಕು. ಅದು ಭಕ್ತಿ ಸುಭಾಷೆ ಇರಬೇಕು. ಅದು ಬರೀ ಭಾಷೆ ಆಗಬಾರದು. ನಡೆ ಕೂಡ ಆಗಬೇಕು ಅನ್ನೋ ಅರ್ಥದಲ್ಲಿ ಆ ಮಾತನ್ನು ಕೇಳಬೇಕು. ಇದು ಬಸವಣ್ಣನವರು ತಮ್ಮ ಬದುಕಿನುದ್ದಕ್ಕೂ ಅಳವಡಿಸಿಕೊಂಡು ಒಂದು ಕ್ರಾಂತಿಯ ಸ್ವರೂಪದಲ್ಲಿ ಬಂದಂಥ ಒಂದು ಸಂಸ್ಕೃತಿ.

ಶರಣರನ್ನು ಕುರಿತು ಮಾತನಾಡುವಾಗ ನಾವು ಶರಣ ಕ್ರಾಂತಿ ಅಥವಾ ಶರಣ ಸಂಸ್ಕೃತಿ ಅನ್ನೋ ಶಬ್ದವನ್ನು ಪದೆ ಪದೆ ಬಳಸುತ್ತೇವೆ. ಕ್ರಾಂತಿಯ ಬಗ್ಗೆ ನಮಗೆ ಚಿತ್ರ ವಿಚಿತ್ರವಾದ ಪರಿಕಲ್ಪನೆಗಳಿದಾವೆ. ಜಗತ್ತಿನಲ್ಲಿ ಹಲವಾರು ಕ್ರಾಂತಿಗಳು ನಡೆದು ಹೋಗಿವೆ. ಕ್ರಾಂತಿ ಅಂದ ಕೂಡಲೇ ನಮ್ಮ ಬುದ್ಧಿಗೆ ತಿಳಿದಂತೆ ಇವತ್ತು ಚೀರಾಡೋದು ಅಥವಾ ಒದರಾಡೋದು, ಮುಂದೆ ಪ್ರತಿಭಟನೆ ಮಾಡೋದು, ಇನ್ನೂ ಮುಂದೆ ಹೋಗಿ ನೋಡಿದರೆ ತಕ್ಷಣ ನಮಗೆ ಅದರ ಫಲ ಸಿಗಬೇಕು ಅಂತ ಬಯಸೋದು. ಇದು ನಮ್ಮ ಕ್ರಾಂತಿಯ ಪರಿಕಲ್ಪನೆ. ಆದರ ಕ್ರಾಂತಿ ಅನ್ನೋದು ಇಷ್ಟು ಸೀಮಿತ ಆಗಿರೋದಿಲ್ಲ ಅಂತ ಭಾಳ thinkers’ ಹೇಳತಾರೆ. ನಿಜವಾದ ಕ್ರಾಂತಿ ಅನ್ನೋದು ಅದು ಎಲ್ಲ ಸ್ಥಾವರಗಳನ್ನು ನಿರಂತರವಾಗಿ ಪ್ರಶ್ನೆ ಮಾಡುತ್ತಾ ಮತ್ತೆ ಮತ್ತೆ ಕೆಣಕುತ್ತಾ ಹೋಗತಾನೆ ಇರುತ್ತದೆ. ಅದಕ್ಕೆ ಅಂತ್ಯ ಅನ್ನೋದೇ ಇರೋದಿಲ್ಲ.

900 ವರ್ಷಗಳ ಹಿಂದೆ ಬಸವಣ್ಣನ ನೇತೃತ್ವದಲ್ಲಿ ಹಲವಾರು ಶರಣರು ನಡೆಸಿದ ಆ ಕ್ರಾಂತಿಯ ಸಂಸ್ಕೃತಿಯ ಅಗತ್ಯತೆ ಇವತ್ತಿಗೂ ಇದೇ ಅಂದರೆ ಅಥವಾ ಇವತ್ತಿಗೂ ನಾವು ಮಾತನಾಡತಾ ಇದೀವಿ ಅಂದರೆ ಅದರ ಅರ್ಥ ಆ ಕ್ರಾಂತಿ ಅವತ್ತೇ ಮುಗಿದು ಹೋಗಲಿಲ್ಲ ಅಥವಾ ಅವತ್ತೇ ಅದರ ಎಲ್ಲ ಪರಿಣಾಮಗಳೂ ಬಂದು ಹೋಗಿಲ್ಲ. ಇವತ್ತು ಅದು ಪ್ರಸ್ತುತ ಆಗತಾ ಇದೆ ಅಂದರ ಅದರ ಅರ್ಥ ಆ ಸಂಸ್ಕೃತಿಯ ಬೀಜಗಳಲ್ಲಿ ಎಲ್ಲ ಕಾಲಕ್ಕೂ ಸಲ್ಲುವಂಥಾ ತತ್ವ ಸಿದ್ಧಾಂತಗಳಿವೆ ಅನ್ನೋದನ್ನ ನಾವು ಗಮನಿಸಬೇಕು.

ಅಂದರೆ ಕಾಲದ ನಿರಂತರತೆಯ ಜೊತೆಗೆ ಸಾಗತಾ ಸಾಗತಾ ಸ್ಥಗಿತತೆಯನ್ನು ಚಲನಶೀಲಗೊಳಿಸಿ ಒಂದು ಹೊಸ ಸಂಸ್ಕೃತಿಯನ್ನು ಹುಟ್ಟು ಹಾಕೋದು. ಕಾರ್ನಾಡ ಅವರು ಇನ್ನೊಂದು ಅದ್ಭುತ ಮಾತನ್ನ ಹೇಳತಾರೆ. “ನಿಜವಾದ ಕ್ರಾಂತಿಯು ಸಂಸ್ಕೃತಿಯ ಕೊನೆಯಿಲ್ಲದ ಒಂದು ಪ್ರಕ್ರಿಯೆ Endless Process of Developing a Culture” ಎನ್ನುವ ಅರ್ಥದಲ್ಲಿ. ಒಂದು ಕ್ರಾಂತಿಗೆ ಕೊನೆ ಅನ್ನೋದೆ ಇರೋದಿಲ್ಲ. ನಿಜವಾದ ಕ್ರಾಂತಿ ಒಂದು ಕೊನೆಯಿಲ್ಲದ ಪ್ರಕ್ರಿಯೆ.

ಗಿರೀಶ ಕಾರ್ನಾಡ ಅವರು ಬಸವಣ್ಣನವರ ಬಗ್ಗೆ ಇನ್ನೊಂದು ಮಾತನ್ನು ಹೇಳತಾರೆ “ತಾನು ಹುಟ್ಟು ಹಾಕಿದ ಕ್ರಾಂತಿ ಒಂದಿಲ್ಲೊಂದು ದಿನ ಯಶಸ್ವಿಯಾಗುತ್ತದೆ ಎಂದು ಬಸವಣ್ಣ ನಂಬಿದ್ದ”. ಈ ನಂಬಿಕೆ ಅನ್ನೋದು ಬಹಳ ದೊಡ್ಡದು. ಇವತ್ತಲ್ಲಾ ಅಥವಾ ಮುಂದೆ ಎಂದಾದರೂ ಒಂದು ದಿನ ಇದು ಯಶಸ್ವಿಯಾಗತದೆ ಅನ್ನುವ ದೊಡ್ಡ ನಂಬಿಕೆ ಮತ್ತು ಭರವಸೆ ಬಸವಣ್ಣನವರದು. ಒಂದು ದಿವಸ ಈ ವರ್ಣಾಶ್ರಮ ಧರ್ಮ, ಜಾತಿ ವ್ಯವಸ್ಥೆ ಇವೆಲ್ಲಾ ಅಳಿದು ಹೋಗತಾವೆ ಎಂಬ ಗಟ್ಟಿಯಾದ ವಿಶ್ವಾಸ ಆವರದಾಗಿತ್ತು ಅಂತಾ ಅವರು ಹೇಳತಾರೆ. ಈ ವಿಶ್ವಾಸಾನೇ ಇವತ್ತಿನವರೆಗೂ ಶರಣ ಕ್ರಾಂತಿಯನ್ನು ಮುನ್ನಡೆಸಿಕೊಂಡು ಬಂದಿದೆ. ಇವತ್ತು ನಾವು ಮತ್ತೆ ಮತ್ತೆ ಆ ವಿಷಯವನ್ನು ಪ್ರಸ್ತಾಪಿಸುವುದರ ಹಿಂದಿರುವುದು ಆ ಕ್ರಾಂತಿಯ ನಿರಂತರತೆ ಅನ್ನೋದನ್ನ ನಾವು ಗಮನಿಸಬೇಕು.

ಇಂಥ ಒಂದು ಮಹಾನ್‌ ಕ್ರಾಂತಿಗೆ ಬಸವಣ್ಣನವರು ಕರೆ ಕೊಡೋದಕ್ಕೆ ಅಥವಾ ಒಂದು ಕ್ರಾಂತಿಯನ್ನ ಆರಂಭ ಮಾಡಿದ್ದಕ್ಕೆ ಆವತ್ತಿನ ಒತ್ತಾಸೆಗಳು, ಒತ್ತಡಗಳು ಏನಿದ್ದವು ಅನ್ನೋದನ್ನ ಈಗಾಗಲೇ ಸಾಕಷ್ಟು ವಿದ್ವಾಂಸರು ಗುರುತಿಸಿದ್ದಾರೆ. ಒಂದು ವ್ಯವಸ್ಥೆಯನ್ನು ಸ್ಥಗಿತಗೊಳಿಸಿದಾಗ ಒಂದು ಉದಾಹರಣೆಯನ್ನು ಕೊಡುವುದಾದರೆ ಹರಿಯದೇ ನಿಂತ ನೀರು ಹ್ಯಾಗೆ ಅದು ಕೊಳೆತು ಹೊಲಸು ನಾರತದಲ್ಲಾ ಅಂಥಾ ಒಂದು Static System ಎನ್ನುವ ಸ್ಥಗಿತ ಸ್ಥಿತಿಯನ್ನು ಚಲನಶೀಲಗೊಳಿಸುವ ಸಲುವಾಗಿ ಅಥವಾ ಜಂಗಮಶೀಲಗೊಳಿಸುವ ಸಲುವಾಗಿ ಅಂದರೆ Dynamic System ನ್ನಾಗಿ ಮಾರ್ಪಾಡು ಮಾಡುವಲ್ಲಿ ಬಸವಣ್ಣನವರು ಕ್ರಾಂತಿ ಮಾಡಿದರು.

ಹೀಗೆ ಸ್ಥಾವರವನ್ನು ಜಂಗಮಗೊಳಿಸೋದು ಆ ಕ್ರಾಂತಿಯ ಮುಖ್ಯ ಉದ್ದೇಶ ಆಗಿತ್ತು ಅನ್ನೋದನ್ನು ನಾವು ಬಹು ಮುಖ್ಯವಾಗಿ ಗಮನಿಸಬೇಕು. ಮುಖ್ಯವಾಗಿ ಜಾತೀಯತೆ, ವರ್ಣ ವ್ಯವಸ್ಥೆ, ಪುರೋಹಿತಶಾಹಿ ಮತ್ತು ವರ್ಗ, ವರ್ಣ, ಲಿಂಗ ತಾರತಮ್ಯವಿರುವಂಥಾ ಒಂದು ವ್ಯವಸ್ಥೆ ಇತ್ತಲ್ಲಾ ಅದನ್ನು ಕಣ್ಣಾರೆ ನೋಡಿದ ಬಸವಣ್ಣನವರು ಅದರ ವಿರುದ್ಧವಾಗಿ ಒಂದು ಕ್ರಾಂತಿಯನ್ನು ಸಾರಿದರು. ತನ್ನ ಸಹ ಚಿಂತಕರಾದ ಶ್ರಮಜೀವಿಗಳನ್ನು ಅಥವಾ ಕಾಯಕ ಜೀವಿಗಳನ್ನು ಕಟ್ಟಿಕೊಂಡು ಆ ಇಡೀ ಸಂಘಟನೆಯನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಸಿದರು. ಈ ಅಪೂರ್ವ ಕ್ರಾಂತಿಗೆ ನಾಂದಿ ಹಾಡಿದ ಆತನ ಕ್ರಾಂತಿಯ ಬಹು ಮುಖ್ಯ ನಡೆಗಳನ್ನು ನಾನು ನಾಲ್ಕು ಮುಖ್ಯವಾದ ಅಂಶಗಳಲ್ಲಿ ಗುರುತಿಸಬಹುದು. ಆ ಕ್ರಾಂತಿಯ ನಡೆ ಅದರ ಚಲನಶೀಲತೆ ಹೇಗಿತ್ತು ಇವೆಲ್ಲಾ ಪ್ರಸ್ತುತ ಆಗೋ ಹಿನ್ನೆಲೆಯಲ್ಲಿ ನಾನು ಹೇಳತಾ ಇದೀನಿ.

ಒಂದನೇಯದ್ದು ಸ್ಥಾವರ ವ್ಯವಸ್ಥೆಯನ್ನು ಪ್ರಶ್ನಿಸೋದು. Questioning ಇದೆಯಲ್ಲಾ ಅದು ಭಾಳ ಮುಖ್ಯ. ಕ್ರಾಂತಿಯ ಮೊದಲನೇಯ ಘಟ್ಟ ಇದು ಪ್ರಶ್ನೆ ಮಾಡೋದು.
 ಈ ಪ್ರಶ್ನೆಗೆ ಉತ್ತರಾ ಸಿಗಲಿಲ್ಲಾ ಅಂದರೆ ಪ್ರತಿಭಟನೆ ಮಾಡೋದು ಎರಡನೇಯದ್ದು.
 ಪ್ರಶ್ನಿಸುವುದು ಪ್ರತಿಭಟನೆ ಮಾಡೋದು ಇವೆರಡಕ್ಕೂ ಬಗ್ಗಲಿಲ್ಲಾ ಅಂದರೆ ನಿರಾಕರಿಸುವುದು ಅಥವಾ ನನಗಿದು ಬೇಡಾ ಅನ್ನೋದು ಮೂರನೇಯದ್ದು.
 ಈ ಮೂರೂ ಹಂತಗಳನ್ನು ದಾಟಿ ಪ್ರಶ್ನೆ, ಪ್ರತಿಭಟನೆ, ನಿರಾಕರಣೆ ಇವುಗಳನ್ನು ದಾಟಿದ ಮೇಲೆ ಒಂದು ಖಾಲಿ ಜಾಗ ಅಥವಾ ನಿರ್ವಾತ (Vacuum) ಆಗುತ್ತಲ್ಲಾ ಅಲ್ಲಿ ಒಂದು ಪರ್ಯಾಯವನ್ನು ಕಟ್ಟಿ ಕೊಡೋದು ನಾಲ್ಕನೇಯ ಆಯಾಮ.

ನಾಲ್ಕನೇಯದ್ದು ಭಾಳ ಮುಖ್ಯವಾದದ್ದು. ಬಸವಣ್ಣನವರು ಬರೀ ಪ್ರಶ್ನೆ ಪ್ರತಿಭಟನೆ ನಿರಾಕರಣೆ ಮಾಡಲಿಲ್ಲಾ ಅದರ ಜೊತೆಗೆ ಹೊಸದನ್ನ ಕಟ್ಟಿಕೊಡುವ ಕೆಲಸವನ್ನು ಶುರು ಮಾಡತಾರೆ. ಇದು ಕ್ರಾಂತಿಯ ಪ್ರಸ್ತುತತೆ. ಸಂಸ್ಕೃತಿಯ ಪ್ರಸ್ತುತತೆ. ಇವತ್ತು ನಾವೇನಾದರೂ ಹೊಸದನ್ನ ಮಾಡಬೇಕು ಅಂತಾ ಯಾರಾದರೂ ಮಾತಾಡತಾ ಇದಾರೆ ಅಂದರೆ ಬರೀ ಮಾತಿನಿಂದ ಏನೂ ಆಗೋದಿಲ್ಲಾ. ಪ್ರಶ್ನೆ ಮಾಡೋದರಿಂದ ಪ್ರತಿಭಟನೆ ಮಾಡೋದರಿಂದ ನಿರಾಕರಣೆ ಮಾಡೋದರಿಂದ ಅಲ್ಲಾ. ಇದನ್ನು ಒಂದಷ್ಟು ವಚನಗಳ ಹಿನ್ನೆಲೆಯಲ್ಲಿ ಇಟ್ಟುಕೊಂಡಾಗ ಅದು ನಮಗೆ ಸ್ಪಷ್ಟ ಆಗತದೆ.

ಬಸವಣ್ಣನವರ ಹಲವಾರು ವಚನಗಳಲ್ಲಿ ಈ ತರಹದ ಒಂದು Process ನ್ನ ನಾವು ಕಾಣತೇವೆ. ಬಸವಣ್ಣನ ವ್ಯಕ್ತಿತ್ವ ಮತ್ತು ವೈಯಕ್ತಿಕ ಬದುಕಿನಲ್ಲಿ ಇಂಥವುದನ್ನು ಗುರುತಿಸಬಹುದು. ಬಸವಣ್ಣನವರು ಪ್ರಶ್ನೆ, ಪ್ರತಿಭಟನೆ, ನಿರಾಕರಣೆ ಮತ್ತು ಪರ್ಯಾಯ ಈ ನಾಲ್ಕೂ ಅಂಶಗಳನ್ನ ತಮ್ಮ ಬದುಕಿನಲ್ಲಿ ಹೇಗೆ ಅಳವಡಿಸಿಕೊಂಡರು ಅನ್ನೋದಕ್ಕೆ ಒಂದು ಉದಾಹರಣೆ ಕೊಡತೇನೆ.

ಅದು ತಾನು ಹುಟ್ಟಿದ ಧರ್ಮ ಎಲ್ಲರಿಗೂ ಸಮಾನ ಅವಕಾಶ ಕೊಡೋದಿಲ್ಲಾ ಅನ್ನೋ ಕಾರಣಕ್ಕೆ ಅವರನ್ನು ನೇರವಾಗಿ ಪ್ರಶ್ನಿಸತಾರೆ. ನನಗೆ ಜನಿವಾರ ಹಾಕತಾ ಇದೀರಲ್ಲಾ ಅಕ್ಕನಿಗೆ ಯಾಕೆ ಇಲ್ಲಾ ಅಂತಾ ಪ್ರಶ್ನೆ ಮಾಡತಾರೆ. ಹೌದು ಯಾಕೆ ಎಲ್ಲರಿಗೂ ಸಮಾನ ಅವಕಾಶ ಕೊಡೋದಿಲ್ಲಾ. So, ಈ ಪ್ರಶ್ನೆಗಳಿಗೆ ಉತ್ತರಾ ಕೊಡದೇ ಇರುವ ಸಮಾಜಕ್ಕೆ ಅವರು ಪ್ರಶ್ನಿಸುತ್ತಾರೆ. ನಂತರ ಅದನ್ನು ಪ್ರತಿಭಟಿಸತಾರೆ. ಹಾಗಿದ್ದರೆ ನಾನ್ಯಾಕೆ ಇಲ್ಲಿರಬೇಕು ನನಗೂ ಈ ಜನಿವಾರ ಬೇಡ ಅಂತ ಪ್ರತಿಭಟನೆ ಮಾಡತಾರೆ. ಅದಕ್ಕೂ ಬಗ್ಗದೇ ಇದ್ದಾಗ ನಿರಾಕರಿಸತಾರೆ. ಕೊನೇಯ ಹಂತದಲ್ಲಿ ಈ ಮೂರೂ ಹಂತಗಳು ದಾಟಿದ ಮೇಲೆ ಇದು ನಿಮ್ಮ ಧರ್ಮದಲ್ಲಿ ಸಾಧ್ಯ ಇಲ್ಲಾ ಅಂದಾಗ ಒಂದು ಹೊಸದಾದ ಪರ್ಯಾಯ ಧರ್ಮವನ್ನು ಕಟ್ಟಿ ಕೊಡತಾರೆ. ಲಿಂಗಾಯತ ಧರ್ಮವನ್ನು ಅಥವಾ ಶರಣ ಧರ್ಮವನ್ನು ಅಥವಾ ಸಕಲ ಜೀವಾತ್ಮರಗೂ ಲೇಸನ್ನೇ ಬಯಸುವಂಥ ಒಂದು ಹೊಸ ಪರ್ಯಾಯ ಧರ್ಮವನ್ನು ಕಟ್ಟಿ ಕೊಡತಾರೆ. ಇದು ಸಮಾನತೆಯನ್ನು ಸಮಾಜದಲ್ಲಿ ಬಿತ್ತುವ ಕಾಂತಿ. ಇಂಥದ್ದೊಂದು ಕ್ರಾಂತಿ ಪ್ರಪಂಚದಲ್ಲಿ ಎಲ್ಲಿಯೂ ಸಿಗಲಾರದಂತ ಒಂದು ಉತ್ಕೃಷ್ಠ ಕ್ರಾಂತಿ.

ಇಡೀ ಪ್ರಪಂಚದ ದಾರ್ಶನಿಕರನ್ನು ನಾವು ಗಮನಿಸಿದರೆ ಎಲ್ಲರೂ ಹುಟ್ಟಿದ ಜಾತಿ ಅಥವಾ ಧರ್ಮದ ಕಟ್ಟೆಯ ಮೇಲೆ ಕುಳಿತೇ ಸಮಾಜ ಸುಧಾರಣೆಯನ್ನು ಮಾಡಲು ಪ್ರಯತ್ನಿಸಿದಂಥವರು. ಬಸವಣ್ಣನವರು ಒಬ್ಬರೇ ತಾವು ಹುಟ್ಟಿದ ಜಾತಿಯ ಕಟ್ಟೆಯನ್ನು ಬಿಟ್ಟು ಕೆಳಗಿಳಿದು ಬಂದು ಸಮಾಜದ ತೀರ ತೀರ ಕಟ್ಟ ಕಡೆಯ ವ್ಯಕ್ತಿಯನ್ನೂ ಕೂಡ ಅಪ್ಪಿಕೊಂಡು ಸಮ-ಸಮಾಜವನ್ನು ಕಟ್ಟಿದ್ದು ಇಡೀ ವಿಶ್ವಕ್ಕೇ ಮಾದರಿ. ಇದು ಶರಣ ಕ್ರಾಂತಿ ಅಥವಾ ಶರಣ ಸಂಸ್ಕೃತಿ ಅಥವಾ ಸಾಮಾಜಿಕ ಸುಧಾರಣೆಯ ಮಹತ್ವದ ಸಿದ್ಧಾಂತ.

ಇದನ್ನು ಪುಷ್ಟೀಕರಿಸುವಂತೆ ಬಸವಣ್ಣನವರ ಒಂದು ವಚನ ಇಲ್ಲಿ ಅತ್ಯಂತ ಪ್ರಸ್ತುತ ಅಂತ ನನಗನಿಸತದೆ. ಈಗಿನ ಪ್ರಸ್ತುತ ಕಾಲಘಟ್ಟದಲ್ಲಿ ನಮ್ಮ ಧರ್ಮವೇ ಶ್ರೇಷ್ಠ ಅಂತಾ ಎಲ್ಲಾ ಧರ್ಮಗಳೂ ಹೊಡದಾಡತಾ ಇದಾವಲ್ಲಾ ಯಾವ ಧರ್ಮದಲ್ಲಿ ನಿಜವಾಗಿಯೂ ಮನುಷ್ಯತ್ವವನ್ನು ಪ್ರೀತಿಸುವ ಶ್ರೇಷ್ಠತೆ ಇದೇ ಅನ್ನೋದನ್ನ ಗುರುತಿಸುವುದು ಸಂಸ್ಕೃತಿ. ಅಂಥಾ ಸಂಸ್ಕೃತಿಯನ್ನು ಬೆಂಬಲಿಸುವುದು ಅದು ನಿಜವಾದ ಧರ್ಮ. ತಮ್ಮ ಧರ್ಮ ಅಥವಾ ಜಾತಿಯನ್ನು ಬಿಟ್ಟ ಹೊರಗೆ ನಡೆಯಲು ಬಸವಣ್ಣನವರಿಗೆ ಎಷ್ಟು ಕಷ್ಟ ಆಗಿರಬೇಕು. ಅದಕ್ಕಾಗಿ ಬಸವಣ್ಣನವರ ಪ್ರಸ್ತುತತೆ ಮತ್ತೆ ನಮಗೆ ಇಲ್ಲಿ ಹೆಚ್ಚಾಗತದೆ.

ಉತ್ತಮಕುಲದಲ್ಲಿ ಹುಟ್ಟಿದೆನೆಂಬ ಕಷ್ಟತನದ ಹೊರೆಯ ಹೊರಿಸದಿರಯ್ಯಾ,
ಕಕ್ಕಯ್ಯನೊಕ್ಕುದನಿಕ್ಕ ನೋಡಯ್ಯಾ,
ದಾಸಯ್ಯಾ ಶಿವದಾನವನೆರೆಯ ನೋಡಯ್ಯಾ,
ಮನ್ನಣೆಯ ಚೆನ್ನಯ್ಯನೆನ್ನುವ ಮನ್ನಿಸ.
ಉನ್ನತ ಮಹಿಮ, ಕೂಡಲಸಂಗಮದೇವಾ, ಶಿವಧೋ ಶಿವಧೋ!
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-36 / ವಚನ ಸಂಖ್ಯೆ-344)

ನಾನು ಶ್ರೇಷ್ಠ ಕುಲದಲ್ಲಿ ಹುಟ್ಟಿದೆ ಅನ್ನೋದು ಅದು ನಿಜವಾದ ಕಷ್ಟದ್ದು. ಅದರ ಹೊರೆಯನ್ನು ಹೊರಲಾರೆ. ಅದು ಸಾಧ್ಯನೇ ಇಲ್ಲಾ ಅನ್ನುವಂಥಾ ಒಂದು ಸಂಸ್ಕೃತಿಯನ್ನು ಬೆಳೆಸುವುದು ಇದೆಯಲ್ಲಾ ಅದು ನಿಜವಾದ ಸಂಸ್ಕೃತಿ. ಅದನ್ನು ಬಸವಣ್ಣನವರು ನಿಭಾಯಿಸಿದ ರೀತಿ with Persevernce, Patience, Commitment & Compassion ಅದ್ಭುತವಾದದ್ದು. ಅದಕ್ಕೇನೆ 900 ವರ್ಷಗಳಾದರೂ ಕೂಡ ನಾವು ಪದೇ ಪದೇ ಬಸವಣ್ಣನವರನ್ನು ನೆನಪಿಸಿಕೊಳ್ಳತಾ ಇರೋದು.

ಸೆಟ್ಟಿಯೆಂಬೆನೆ ಸಿರಿಯಾಳನ? ಮಡಿವಾಳನೆಂಬೆನೆ ಮಾಚಯ್ಯನ?
ಡೋಹರನೆಂಬೆನೆ ಕಕ್ಕಯ್ಯನ? ಮಾದಾರನೆಂಬೆನೆ ಚೆನ್ನಯ್ಯನ?
ಆನು ಹಾರುವನೆಂದಡೆ ಕೂಡಲಸಂಗಯ್ಯ ನಗುವನಯ್ಯಾ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-36 / ವಚನ ಸಂಖ್ಯೆ-345)

ಡೋಹಾರನೆಂಬೆನೆ ಕಕ್ಕಯ್ಯನ, ನೋಡಿ ಶೂದ್ರರು ಅಸ್ಪೃಷ್ಯರು ಇದ್ದರಲ್ಲಾ ಇವರು ಡೋಹಾರ ಅನ್ನಲಿಕ್ಕೆ ಸಾಧ್ಯವೇ. ಆತ ನಿಜವಾದ ದೊಡ್ಡ ಕುಲದವನು. ಮಾದಾರನೆಂಬೆನೆ ಚನ್ನಯ್ಯನ ಆನು ಹಾರುವನೆಂದಡೆ ಕೂಡಲಸಂಗಯ್ಯ ನಗುವನಯ್ಯಾ. ಹೀಗೆ ತನ್ನನ್ನು ತಾನು ಅಪವರ್ಣೀಕರಣಗೊಳಿಸುವುದು ಅಥವಾ ಅಪವರ್ಗೀಕರಣಗೊಳಿಸಿಕೊಳ್ಳುವುದು ಇದೆಯಲ್ಲಾ ಅದು ಭಾಳ ದೊಡ್ಡ ಸಂಸ್ಕೃತಿ. ಇದು ಎಲ್ಲಾ ಮನಸ್ಸುಗಳಿಗೆ ಎಲ್ಲಾ ವ್ಯಕ್ತಿತ್ವಕ್ಕೆ ಬರೋದು ಸಾಧ್ಯ ಇಲ್ಲ. ಇದಕ್ಕಾಗಿ ಬಸವಣ್ಣನವರು ಮಾಡಿದ ಕ್ರಾಂತಿ ಭಾಳ ದೊಡ್ಡದು. ಆ Inclusive Culture ಆ Inclusive Religion ಗೆ ಇರುವಂಥಾ ಮುಖ್ಯ ಲಕ್ಷಣ ಅಂದರೆ ಎಲ್ಲರನ್ನೂ ಒಳಗೊಳ್ಳುವ ಸಂಸ್ಕೃತಿ.

ಅತ್ಯಂತ ಸಧೃಢ ಸಮಾಜವನ್ನು ನಿರ್ಮಿಸುವ ಸಲುವಾಗಿ ಬಸವಣ್ಣನವರು ಹಾಕಿ ಕೊಟ್ಟ ಆರ್ಥಿಕ ಸುಧಾರಣೆಗಳ ಸಿದ್ಧಾಂತಗಳು ಅಥವಾ ಸಮ ಸಮಾಜದ ಪರಿಕಲ್ಪನೆಯನ್ನು ಗಮನಿಸಿದರೆ ಬಸವಣ್ಣನವರು ಒಬ್ಬ Great Social Scientist ರೀತಿಯಲ್ಲಿ ನಮಗೆ ಕಂಡು ಬರುತ್ತಾರೆ. ಕಾಯಕ ಮತ್ತು ದಾಸೋಹ ಎನ್ನುವ ಎರಡು ತತ್ವ ಸಿದ್ಧಾಂತಗಳು ಈ ನಿಟ್ಟಿನಲ್ಲಿ ನಮ್ಮ ಕಣ್ಣ ಮುಂದೆ ಬಂದು ನಿಲ್ಲತಾವೆ. ಈ ತತ್ವ ಸಿದ್ಧಾಂತಗಳೆ ಕರ್ನಾಟಕದ ಕಾಯಕದ ಜೀವಿಗಳ ಶ್ರಮ ಸಂಸ್ಕೃತಿ.

ಬಸವಣ್ಣನವರ ಅತಿ ದೊಡ್ಡ ಕನಸು ಅಂದರೆ ದುಡಿಯುವ ಕೈಗಳಿಗೆ ನಿರಂತರ ಕೆಲಸ ಮತ್ತು ಹಸಿವು ಮುಕ್ತ ಸಮಾಜ. ಇದಕ್ಕಾಗಿ ಬಸವಣ್ಣನವರು ಆಯ್ದುಕೊಂಡಿದ್ದು ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯ Model ಆದ ಆಯಗಾರರ ಪರಿಕಲ್ಪನೆ. ಆಯಗಾರರು ಅಂದ್ರೆ ಕಮ್ಮಾರರು, ಕುಂಬಾರರು, ಹೂಗಾರರು, ಅಕ್ಕಸಾಲಿಗರು, ಗಾಣಿಗೇರರು ಮುಂತಾದ ವೃತ್ತಿಯವರು. ಒಟ್ಟು 99 ಕ್ಕೂ ಹೆಚ್ಚು ಆಯಗಾರರನ್ನು ಒಟ್ಟುಗೂಡಿಸಿ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಕ್ರಾಂತಿಯನ್ನು ಬಸವಣ್ಣನವರು 12 ನೇ ಶತಮಾನದಲ್ಲಿ ಮಾಡತಾರೆ. ಶ್ರೇಣೀಕೃತ ಸಮಾಜದಲ್ಲಿ ಅತ್ಯಂತ ನಿಕೃಷ್ಟವಾಗಿ ಕಂಡಂಥ ಜನರಿಗೆ ಅಡ್ರೆಸ್ಸೇ ಇರಲಿಲ್ಲ. ಅವರ ವೃತ್ತಿಗೇನೆ ದೈವತ್ವವನ್ನು ಕೊಟ್ಟು ಅದನ್ನೇ Sir Name ಅಥವಾ Address ಮಾಡಿದಂಥ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ.

Communist ಸಿದ್ಧಾಂತವನ್ನು ಮುಂಚೂಣಿಗೆ ತಂದ ಕಾರ್ಲ ಮಾರ್ಕ್ಸ ಕಾಯಕಕ್ಕೆ ಗೌರವ ತಂದು ಕೊಟ್ಟರೆ ಬಸವಣ್ಣನವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕಾಯಕವನ್ನು ದೈವತ್ವಕ್ಕೆ ಹೋಲಿಸುತ್ತಾರೆ.

ಜರ್ಮನಿಯ ತತ್ವಜ್ಞಾನಿ ಮತ್ತು ಕಮ್ಯುನಿಸ್ಟ್‌ ಸಿದ್ಧಾಂತದ ಪ್ರತಿಪಾದಕರಾದ ಫ್ರೆಡರಿಕ್‌ ಏಂಜಲ್ಸ್‌ ಮತ್ತು ಕಾರ್ಲ್‌ ಮಾರ್ಕ್ಸ್ ಇವರಿಬ್ಬರ ಆರ್ಥಿಕ ಚಿಂತನೆಗಳ ಮತ್ತು ಆರ್ಥಿಕ ನೀತಿಗಳ ಅಪಾರ ಪ್ರಭಾವ ಭಾರತದ ಮೇಲೆ ಅಪಾರವಾಗಿದೆ. 1845 ರಲ್ಲಿ ಕಾರ್ಲ್‌ ಮಾರ್ಕ್ಸ ಜೊತೆಗೂಡಿ “The Communist Manifesto” ಬಿಡುಗಡೆ ಮಾಡತಾರೆ. ಇವರಿಬ್ಬರೂ ಬಸವಣ್ಣನವರ ಸಾಮಾಜಿಕ ಚಳುವಳಿಗಳನ್ನು ಮತ್ತು ಸಮಾಜೋ-ಧಾರ್ಮಿಕ ಚಳುವಳಿಗಳನ್ನೂ ಸಹ ಆಳವಾಗಿ ಅಭ್ಯಾಸ ಮಾಡಿದ್ದಾರೆ.

Friedrich Engels Says:
“Labour Created Man”. Basavanna declared “Work is Worship”. By doing so, he exalted physical labour into a religious ideology and gave a severe blow to a society which looked down upon different professions since labour was fundamentally woven fabric of caste.

ಫ್ರೆಡರಿಕ್‌ ಏಂಜಲ್ಸ್‌ ಹೇಳತಾರೆ:
ಕಾಯಕವೇ ಕೈಲಾಸ ಎಂದ ಬಸವಣ್ಣನವರು “ಕಾಯಕ ಯೋಗಿಗಳ ನಾಯಕ” ಎನ್ನುವ ಮೂಲಕ ಶ್ರೇಣೀಕೃತ ಸಮಾಜದಲ್ಲಿ ತುಳಿತಕ್ಕೊಳಗಾದ ಕಾಯಕ ಯೋಗಿಗಳಿಂದ ಆರ್ಥಿಕ ಮತ್ತು ಸಮಾಜೋ-ಧಾರ್ಮಿಕ ಚಳುವಳಿಯನ್ನು ಹುಟ್ಟು ಹಾಕಿದರು. ಶ್ರಮಿಕ ವರ್ಗದವರನ್ನು ಮೇಲಕ್ಕೆತ್ತುವ ಕೆಲಸವನ್ನು ಬಸವಣ್ಣನವರು ಮಾಡಿದರು. ಅವರ ಕಾಯಕಕ್ಕೆ ದೈವತ್ವವನ್ನು ಕೊಡುವ ಮೂಲಕ ಅವರ ಕಾಯಕಕ್ಕೆ ನ್ಯಾಯ ಒದಗಿಸಿದರು.

ದೇವ ಸಹಿತ ಭಕ್ತ ಮನೆಗೆ ಬಂದಡೆ
ಕಾಯಕವಾವುದೆಂದು ಬೆಸಗೊಂಡೆನಾದಡೆ
ನಿಮ್ಮಾಣೆ ನಿಮ್ಮ ಪುರಾತರಾಣೆ
ತಲೆದಂಡ ತಲೆದಂಡ ಕೂಡಲಸಂಗಮದೇವಾ
ಭಕ್ತರಲ್ಲಿ ಕುಲವನರಸಿದಡೆ
ನಿಮ್ಮಾಣೆ ನಿಮ್ಮ ರಾಣೀವಾಸದಾಣೆ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-44 / ವಚನ ಸಂಖ್ಯೆ-453)

ಬಸವಣ್ಣನವರ ಈ ವಚನ ಕಾಯಕ ಸಿದ್ಧಾಂತದ ದೈವತ್ವಕ್ಕೆ ಹಿಡಿದ ಕನ್ನಡಿ ಎನ್ನಬಹುದು. ಭಕ್ತರೇ ಆಗಲಿ ಅಥವಾ ದೇವರೇ ಆಗಲಿ ನನ್ನ ಮನೆಗೆ ಬಂದರೆ ಅವನ ಕುಲ, ಜಾತಿ ಹಾಗು ಕಾಯಕವನ್ನು ನಾನು ಕೇಳಿದರೆ ಕೂಡಲಸಂಗಮನ ಮೇಲೆ ಆಣೆ ಅಂತಾರೆ ಬಸವಣ್ಣನವರು. ಇದು ಕಾಯಕವನ್ನು ದೈವತ್ವಕ್ಕೇರಿಸಿದ ಪ್ರಪಂಚದ ಮೊಟ್ಟ ಮೊದಲನೇ ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯ Economic Model. ಇದರ Total Application ನಾವು ಕಾಣಬೇಕಾದರೆ ಜಪಾನ್‌ ದೇಶ ಆರ್ಥಿಕವಾಗಿ ದೈತ್ಯ ಶಕ್ತಿಯಾಗಿ ಬೆಳೆದದ್ದನ್ನು ನಪಿಸಿಕೊಳ್ಳಬೇಕಾಗುತ್ತದೆ.

ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಜಪಾನ್‌ ಮೇಲೆ ಅಣುಬಾಂಬ್‌ ದಾಳಿಯಾದಾಗ ಇಡೀ ಜಪಾನ್‌ ದೇಶ ಛಿದ್ರ ಛಿದ್ರವಾಗಿ ಹೋಗತದೆ. ಆದರೆ, ಅಲ್ಲಿಂದ 50 ವರ್ಷಗಳಲ್ಲಿ ಜಪಾನ್‌ ದೇಶ ಆರ್ಥಿಕವಾಗಿ ಬಲಾಢ್ಯ ರಾಷ್ಟ್ರವಾಗಿ ಬೆಳೀತದೆ. ಅದೇ ಒಂದು ಸಾಹಸ ಗಾಥೆ.

ಫ್ರಾನ್ಸ್‌ ದೇಶದಲ್ಲರುವ OECD (Organization of Economic Co-Operation & Development) ಎನ್ನುವ ಸಂಸ್ಥೆ ಇದೆ. ಇಂಥ ಅಭೂತಪೂರ್ವ ಸಾಧನೆ ಮಾಡಿದ್ದು ಹೇಗೆ ಎನ್ನುವದನ್ನು 1998 ರಲ್ಲಿ ಈ ಸಂಸ್ಥೆ ಜಪಾನ್‌ ದೇಶವನ್ನು ಕೇಳತದೆ. ಈ ಪ್ರಶ್ನೆಗೆ 2001 ರಲ್ಲಿ ಜಪಾನ್‌ ದೇಶ ಬೃಹತ್ 20 volume ಗಳಲ್ಲಿ ವರದಿಗಳ ಮೂಲಕ ಉತ್ತರ ನೀಡತದೆ. ಎಲ್ಲ 20 Volume ಗಳನ್ನೂ ಇಂಗ್ಲೀಷಿಗೆ ಭಾಷಾಂತರಿಸಿ ಪ್ಯಾರಿಸ್ ನ OECD ಕಛೇರಿಯಲ್ಲಿ ಇಡಲಾಗಿದೆ. 2004 ರಲ್ಲಿ ನಾನು ಪ್ಯಾರಿಸ್‌ಗೆ ಹೋದಾಗ ಮೊದಲನೇಯ ಪ್ರತಿಯನ್ನು ಓದಿದಾಗ ಅದ್ಭುತ ಮತ್ತು ಆಶ್ಚರ್ಯಕರ ಸಂದೇಶ ಸಿಗತದೆ. ಅದರ ಮೊದಲನೇ ಪ್ಯಾರಾದಲ್ಲಿ ಅವರು ಹೇಳತಾರೆ.

 After the destruction we have not started Engg or Medical colleges or any other technical training centres to rebuild our country.
 In fact, we gave responsibility to our own people who are Carpenters, Masons, Blacksmiths, Weavers and so on and depended on them.
 These people built an economically strong nation and much more than that is they went on to start Engg & Medical Colleges, which the younger generation carried forward the legacy of nation building.

ಇದು ಆಯಗಾರ ಪರಿಕಲ್ಪನೆಯ Model. ಇದನ್ನು ಅಳವಡಿಸಿಕೊಂಡು ಜಪಾನ್‌ ದೇಶ ಆರ್ಥಿವಾಗಿ ಸಧೃಢವಾಗಿದ್ದು ನಮ್ಮ ಕಣ್ಣ ಮುಂದೆಯೇ ಇದೆ. ಇದು ಆರ್ಥಿಕ ಮತ್ತು ಸಾಮಾಜಿಕ ಸಮಾನತೆಯ ಪರಿಕಲ್ಪನೆಯ ಒಂದು ಉದಾಹರಣೆ.

ಇದನ್ನೇ ಬಸವಣ್ಣನವರು 12 ನೇ ಶತಮಾನದಲ್ಲಿ ಹೇಳಿದ್ದರು ಎನ್ನುವುದು ಆಶ್ಚರ್ಯಕರ ಮತ್ತು ಭಾರತದಲ್ಲಿ ಇದನ್ನು ನಾವು ಗಮನಿಸಲಿಲ್ಲ ಎನ್ನುವುದು ಅಷ್ಟೇ ಖೇದಕರವಾದದ್ದು. ಅವರ ಒಂದು ವಚನ ನಮ್ಮನ್ನು ಈ ದಿಸೆಯಲ್ಲಿ ಚಿಂತನೆಗೆ ಹಚ್ಚುತ್ತದೆ. ಇದು ಆಯಗಾರರ ಕೌಶಲ್ಯದ ತಾಕತ್ತು. ಇದನ್ನು ಬಸವಣ್ಣನವರು 12 ನೇ ಶತಮಾನದಲ್ಲಿ ಗುರುತಿಸಿದ್ದರು.

ಕಾಸಿ ಕಮ್ಮಾರನಾದ ಬೀಸಿ ಮಡಿವಾಳನಾದ
ಹಾಸನಿಕ್ಕಿ ಸಾಲಿಗನಾದ ವೇದವನೋದಿ ಹಾರುವನಾದ
ಕರ್ಣದಲ್ಲಿ ಜನಿಸಿದವರುಂಟೆ ಜಗದೊಳಗೆ?
ಇದು ಕಾರಣ ಕೂಡಲಸಂಗಮದೇವ
ಲಿಂಗಸ್ಥಲವನರಿದವನೆ ಕುಲಜನು
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-55 / ವಚನ ಸಂಖ್ಯೆ-590)

ಈ ವಚನವನ್ನು ಓದಿದರೆ ಮೈನವಿರೇಳುವಂತಾಗುತ್ತದೆ. ಎಂಥ ಅದ್ಭುತ ಕೌಶಲ್ಯಾಭಿವೃದ್ಧಿಯ (Skill Development) ಸಂಕೇತವನ್ನು ಬಸವಣ್ಣನವರು ನಮಗೆ ತಿಳಿಸಿಕೊಟ್ಟದ್ದಾರೆ. ಪ್ರತಿಯೊಬ್ಬ‌ ಮಾನವರಲ್ಲಿರುವಯೂ ಕೌಶಲ್ಯವಿರುವುದು. ಹುಟ್ಟಿನಿಂದ ಯಾರೂ ಕೀಳಲ್ಲವೆಂದು ಹೇಳುವ ವಚನವಿದು. ಇಂಥ ಸಮ ಸಮಾಜದ ಪರಿಕಲ್ಪನೆಯ ಶ್ರಮ ಸಂಸ್ಕೃತಿಯನ್ನು ಹುಟ್ಟು ಹಾಕಿದ ಬಸವಣ್ಣನವರು ಸಾಂಸ್ಕೃತಿಕ ನಾಯಕರಾಗಿ ನಮ್ಮ ಮುಂದೆ ಬೆಳೆದು ನಿಲ್ಲುತ್ತಾರೆ.

ಇನ್ನು ಅಭಿವ್ಯಕ್ತಿ ಸ್ವಾತಂತ್ರ್ಯ ಅಥವಾ ಸಂಸ್ಕೃತಿ ಹೇಗಿರಬೇಕು. ಈಗಿನ ಸಾಮಾಜಿಕ ವ್ಯವಸ್ಥೆಯಲ್ಲಿ ಅಭಿವ್ಯಕ್ತಿ ಸಂಸ್ಕೃತಿ ಅಂದರೆ ಬಾಯಿಗೆ ಬಂದದ್ದು ಮಾತಾಡೋದಲ್ಲಾ. ಬಸವಣ್ಣನವರು ಬಹಳ ಅರ್ಥಪೂರ್ಣವಾಗಿ ತಮ್ಮ ಮಾತಲ್ಲಿ ಹೇಳತಾರೆ.

ತಾಳ ಮಾನ ಸರಿಸವನರಿಯೆ,
ಓಜೆ ಬಜಾವಣೆ ಲೆಕ್ಕವನರಿಯೆ,
ಅಮೃತಗಣ ದೇವಗಣವನರಿಯೆ,
ಕೂಡಲಸಂಗಮದೇವಾ,
ನಿನಗೆ ಕೇಡಿಲ್ಲವಾಗಿ ಆನು ಒಲಿದಂತೆ ಹಾಡುವೆ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-47 / ವಚನ ಸಂಖ್ಯೆ-494)

ಇನ್ನೊಬ್ಬರಿಗೆ ನೋವು ಮಾಡಿ ಮಾತಾಡೋದಲ್ಲಾ, “ಕೂಡಲಸಂಗಮದೇವಾ ನಿನಗೆ ಕೇಡಿಲ್ಲವಾಗಿ ಆನು ಒಲಿದಂತೆ ಹಾಡುವೆನು” ಎದುರಿಗೆ ಇದ್ದವರಿಗೆ ಕೇಡು ಆಗಲಾರದ ರೀತಿಯಲ್ಲಿ ಹಾಗೆ ಮಾತಾಡುವುದು ಅಭಿವ್ಯಕ್ತಿ ಸಂಸ್ಕೃತಿ. ಈ ನಾನು ಒಲಿದಂತೆ ಹಾಡುವೆನು ಅನ್ನೋದೆ ನಿಜವಾದ ಸಂಸ್ಕೃತಿ ಅಥವಾ ಸ್ವಾತಂತ್ರ್ಯದ ಪರಿಕಲ್ಪನೆ. ಮೌಖಿಕ ಅಥವಾ ಮಾತಿನ ಸ್ವಾತಂತ್ರ್ಯ, ವಾಕ್‌ ಸ್ವಾತಂತ್ರ್ಯ, ಅಂತ ಇವತ್ತು ನಾವು ಸಂವಿಧಾನದಲ್ಲಿ ಹೇಳತೇವಲ್ಲಾ ಆ ವಾಕ್‌ ಸ್ವಾತಂತ್ರ್ಯದ ಹರಿಕಾರರು ಬಸವಣ್ಣನವರು. ಮಾತಾಡುವ ಸಂಸ್ಕೃತಿಯನ್ನು ಬಸವಣ್ಣನವರು ನಮಗೆ ಹೇಳಿಕೊಟ್ಟರು. ಆದರೆ ಸ್ವಾತಂತ್ರ್ಯದಲ್ಲಿ ಇನ್ನೊಬ್ಬರಿಗೆ ನೋವು ಆಗಲಾರದ ಹಾಗೆ ಮಾತನಾಡುವಂಥ ಒಂದು ಎಚ್ಚರಿಕೆಯನ್ನೂ ಕೊಟ್ಟರು. ಇವತ್ತಿನ ಭಾಷೆಯನ್ನು ನೋಡತೇವೆ ನಾವು ಬಾಯಿ ತೆಗೆದರೆ ಇನ್ನೊಬ್ಬರಿಗೆ ನೋವು ಮಾಡೋದೆ ನಮ್ಮ ಉದ್ದೇಶ ಇರುವಾಗ ಬಸವಣ್ಣನವರ ಈ ಮಾತು ನಿಜವಾಗಿಯೂ ಪ್ರಸ್ತುತ ಆಗತದೆ ಅನ್ನೋದನ್ನ ನಾವು ಗಮನಿಸಬೇಕು. ಇದು ವಚನ. ಈ ರೀತಿಯಾಗಿ ವಚನಗಳನ್ನು ಕಟ್ಟಿಕೊಟ್ಟು ಬಸವಣ್ಣನವರು ನಮಗೆ ನಿತ್ಯ ಪ್ರಸ್ತುತ ಆಗತಾರೆ ಅನ್ನೋದು ನಾನಿಲ್ಲಿ ಹೇಳಬೇಕಾಗಿದೆ. ಹಾಗಾಗಿ ಬಸವಣ್ಣನವರು ನಮ್ಮ ನಾಡಿನ ಸಾಂಸ್ಕೃತಿಕ ನಾಯಕರು.

12 ನೇ ಶತಮಾನದಲ್ಲಿ ಹಲವಾರು ಪ್ರದೇಶಗಳಿಂದ ಜಾನಪದ ಕಲಾವಿದರು ಮತ್ತು ಸಂಗೀತಗಾರರು ಕಲ್ಯಾಣಕ್ಕೆ ಆಗಮಿಸಿ ಶರಣರಾಗಿದ್ದರು. ಕಾಯಕ ಮತ್ತು ದಾಸೋಹ ತತ್ವ ಸಿದ್ಧಾಂತಗಳನ್ನು ಅಪ್ಪಿಕೊಂಡು ಒಪ್ಪಿಕೊಂಡು ಬದುಕು ಕಟ್ಟಿಕೊಳ್ಳಲು ಪ್ರಾರಂಭಿಸಿದರು. ಭಾಷೆ, ಉಡುಗೆ-ತೊಡುಗೆ, ಆಚಾರ-ವಿಚಾರ, ಆಹಾರ-ವಿಹಾರ, ನಡೆ-ನುಡಿ, ಸಂಗೀತ-ನೃತ್ಯ, ಕುಲಕಸುಬು ಹೀಗೆ ಶರಣ ಸಂಸ್ಕೃತಿಯಲ್ಲಿ ವಿಶೇಷವಾದ ಶೈಲಿ ಅಥವಾ ಬದುಕಿನ ಕ್ರಮ ಹಾಸು ಹೊಕ್ಕಾಗಿತ್ತು. ಶಿವಶರಣರ ಸಾಮಾಜಿಕ ಸಮಾನತೆಯ ದೃಷ್ಟಿಕೋನ ಮತ್ತು ಆಧ್ಯಾತ್ಮ ಚಿಂತನೆಗಳು ಅನೇಕ ಜನಪದ ಕಲಾವಿದರನ್ನು ತೀವ್ರಗತಿಯಲ್ಲಿ ಆಕರ್ಷಿಸಿ ಅವರಲ್ಲಿ ಆತ್ಮ ವಿಶ್ವಾಸವನ್ನು ಬೆಳಸಿದ್ದು 12 ನೇ ಶತಮಾನದ ಕಾಲಘಟ್ಟ. ಹಾಗಾಗಿ ಈ ಸಂಸ್ಕೃತಿಯ ಮುಂದುವರೆದ ಭಾಗವಾಗಿ ವಚನಗಳಲ್ಲಿಯೂ ಕೂಡ ಸಂಗೀತದ ಉಲ್ಲೇಖವನ್ನು ನಾವು ಕಾಣಬಹುದು.

ವಚನಕಾರರು ಅಥವಾ 12 ನೇ ಶತಮಾನದಲ್ಲಿದ್ದಂಥ ಶರಣರು ಶಾಸ್ತ್ರೀಯ ಸಂಗೀತವನ್ನು ಕಲಿತಿದ್ದರು ಎನ್ನುವುದಕ್ಕೆ ಸ್ಪಷ್ಟ ಉಲ್ಲೇಖಗಳು ನಮಗೆ ಲಭ್ಯವಾಗುವುದಿಲ್ಲ. ಆದರೆ ವಚನಕಾರರಲ್ಲಿ ಕೆಲವರು ತಮ್ಮ ಬದುಕಿನಲ್ಲಿ ಕಲೆಯನ್ನು ಅಳವಡಿಸಿಕೊಂಡಿದ್ದರು ಮತ್ತು ಹಲವಾರು ಸಂಗೀತಗಾರರು, ವಾದ್ಯ ನುಡಿಸುವ ಕಲಾವಿದರು ಇದ್ದರು. ಶರಣರ ಈ ಕಲಾ ತಪಸ್ಸು ಕೇವಲ ಮನರಂಜನೆಯಾಗಿರದೆ ಆತ್ಮ ರಂಜನೆಯಾಗಿತ್ತು. ಅನುಭವ ಮಂಟಪದ ಕೆಲವು ಸಂಗೀತಕಾರರನ್ನು ಇಲ್ಲಿ ಉಲ್ಲೇಖ ಮಾಡಲಾಗಿದೆ.

 ಬಸವಣ್ಣ : ದಂಡಿಗೆ (ತಂಬೂರಿ) ವಾದ್ಯ ನುಡಿಸುವವರು.
 ಅಲ್ಲಮ ಪ್ರಭು : ಮದ್ದಳೆ ವಾದಕರು ಮತ್ತು ನಾಟ್ಯಾಚಾರ್ಯರು.
 ಸಕಳೇಶ ಮಾದರಸ : ವೀಣಾ ವಾದಕರು.
 ಕಿನ್ನರಿ ಬ್ರಹ್ಮಯ್ಯ : ಗಮಕಿಗಳು.
 ಕಂಕರಿ ಕಕ್ಕಯ್ಯ : ತುಂತುಣಿ (ಚೌಡಿಕೆ) ವಾದ್ಯ ನುಡಿಸುವವರು.
 ರಾಗದ ಸಂಕಣ್ಣ : ಗಾಯಕರು.
 ಕುಂಬಾರ ಗುಂಡಯ್ಯ : ಘಟವಾದ್ಯ ನುಡಿಸುವವರು.
 ತಾಳದ ಬ್ರಹ್ಮಯ್ಯ : ದಯತಾಲ ಗಾಯಕರು (ದಯತಾಲ ಮಾರ್ತಾಂಡ).
 ಮುರುಘದೇವ : ಕೊಳಲುವಾದಕರು.
 ಘಟ್ಟಿವಾಳಯ್ಯ : ನೃತ್ಯಪಟು.
 ಬಹುರೂಪಿ ಚೌಡಯ್ಯ : ಬಹುರೂಪ ನಟನಾ ಶಾಸ್ತ್ರಜ್ಞ.
 ಸಿದ್ಧಬುದ್ಧಯ್ಯ : ಭದ್ರಗಾಯಕರು.
 ಗಂಗಮ್ಮತಾಯಿ : ದಂಡಿಗೆ (ತಂಬೂರಿ) ವಾದ್ಯ ನುಡಿಸುವವರು.
 ನೀಲಾಂಬಿಕೆ : ವೀಣಾವಾದಕರು.
 ಬಾಚಲಾದೇವಿ : ಮದ್ದಳೆವಾದಕಿ.
 ಲಿಂಗದೇವ : ಚಂಗುವಾದ್ಯಕಾರರು.
 ಬೊಂತಾದೇವಿ : ತಾರಕೇರಿ ಗಾಯಕಿ.
 ಬೋಚಲಾದೇವಿ : ದಂಡಿಗೆ (ತಂಬೂರಿ) ವಾದ್ಯ ನುಡಿಸುವವರು.
 ವೀರಮ್ಮದೇವಿ : ತತ್ವಪದದ ಹಾಡುಗಾರ್ತಿ.
 ಶಿವಮಾಯಿ : ಜನಪದ ಗಾಯಕಿ.
 ಸಿದ್ಧಾದೇವಿ : ತುಂತುಣಿ (ಚೌಡಿಕೆ) ವಾದ್ಯ ನುಡಿಸುವವರು.

ಹೀಗೆ ಅನುಭವ ಮಂಟಪದಲ್ಲಿ ಬಹಳಷ್ಟು ಕಲೆ ಹಾಗೂ ಸಂಗೀತಕ್ಕೆ ತಮ್ಮನ್ನು ತಾವು ಅರ್ಪಿಸಿಕೊಂಡ ಶಿವಶರಣರ ಪ್ರಮಥರ ತಿಂಥಿಣಿ ಸಂಗೀತ ಯೋಗದಲ್ಲಿ ಪರಶಿವನನ್ನು ಕಂಡುಕೊಂಡಿದ್ದರು. ಕಲೆಯನ್ನೇ ತಮ್ಮ ಉಪಜೀವನದ ಮಾಧ್ಯಮವನ್ನಾಗಿ ಮಾಡಿಕೊಂಡ ಶರಣರಿದ್ದರು. ಅದನ್ನು ಬಸವಣ್ಣನವರ ಈ ಒಂದು ವಚನ ಪುಷ್ಟೀಕರಿಸುತ್ತದೆ.

ಆಡಿಹರಯ್ಯಾ ಹಾಡಿಹರಯ್ಯಾ ಮನಬಂದ ಪರಿಯಲಿ,
ಶಿವಶರಣರ ಮುಂದೆ ಆಡಿಹರಯ್ಯಾ ಹಾಡಿಹರಯ್ಯಾ.
ಕೋಡಂಗಿಯಾಟವನಾಡಿದ ಭಕ್ತಂಗೆ ಬೇಡಿತ್ತನೀವ,
ನಮ್ಮ ಕೂಡಲಸಂಗಮದೇವ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-24 / ವಚನ ಸಂಖ್ಯೆ-179)

ಮಹಾಜ್ಞಾನಿ ಶಿವಶರಣರ ಮುಂದೆ ಆಡಿದ ಆಟ ಹಾಡುಗಳೆಲ್ಲವೂ ಕೋಡಂಗಿಯಂತೆ ಹಾಸ್ಯ ಪಾತ್ರಗಳು. ತನು ರಂಗಭೂಮಿಯಾದರೆ ಮನಸ್ಸು ಪಾತ್ರಧಾರಿ. ಅರಿವು ಅದರ ಸೂತ್ರಧಾರಿ. ಹೀಗೆ ನೃತ್ಯವನ್ನು ಬಸವಣ್ಣನವರು ಆಧ್ಯಾತ್ಮ ಚಿಂತನೆಯ ಜೊತೆಗೆ ಸಮೀಕರಿಸಿ ಬರೆದಿದ್ದು ಸಂಗೀತ ಮತ್ತು ನೃತ್ಯ ಕಲೆಗೆ ಅಪಾರವಾದ ಪ್ರೋತ್ಶಾಹವನ್ನು ನೀಡುತ್ತಿದ್ದರೆಂದು ತಿಳಿದು ಬರುತ್ತದೆ.

ಇನ್ನು ರಾಜಕೀಯ ಮತ್ತು ಪುರೋಹಿತಶಾಹಿಯ ಪ್ರಭುತ್ವ ಇದ್ದ ಕಾಲದಲ್ಲಿ ಆ ಸಮಾಜದ ವ್ಯವಸ್ಥೆ ಹೇಗಿತ್ತು, ರಾಜಕೀಯ ವ್ಯವಸ್ಥೆ ಹೇಗಿತ್ತು. ಬಸವಣ್ಣ ಒಂದು ಅದ್ಭುತವಾದ ವಚನದ ಮೂಲಕ ಅದಕ್ಕೆ ಎಚ್ಚರಿಕೆಯನ್ನು ಕೊಡತಾನೆ. ಇವತ್ತು ತುಂಬಾ ಮಹತ್ವದ ವಚನ ಇದು. ಯಾಕೆ ಅಂದರೆ ಬಸವಣ್ಣ ಮೊಟ್ಟ ಮೊದಲ ಬಾರಿಗೆ 12 ನೇ ಶತಮಾನದಲ್ಲೇ ಬಸವಣ್ಣ ತನ್ನ ಒಂದು ವಚನದಲ್ಲಿ “ರಾಜಬೀದಿ” ಅನ್ನೋ ಶಬ್ದ ಬಳಸತಾನೆ. ಈ ರಾಜಬೀದಿ ಅನ್ನೋ ಶಬ್ದಾನೇ ಇವತ್ತು ಪ್ರಜಾಪ್ರಭುತ್ವಕ್ಕೆ ಸಂವಾದಿಯಾಗಿರುವಂಥಾದ್ದು. ಇದನ್ನ ಭಾಳ ಜನ ಇಂಥ ವಚನಗಳನ್ನು ನಾವು ಗಮನಿಸಿಲ್ಲ. ಆ ವಚನ ಕೇಳಿದರೆ ಅನಸತದೆ ಎಚ್ಚರಿಕೆಯನ್ನೂ ಹೇಗೆ ಕೊಡತಾನೆ, ಪ್ರೀತಿಯನ್ನು ಹೇಗೆ ಕೊಡತಾನೆ ಅನ್ನೋದು.

ಭೂತಿಕನ ಸೀರೆಯ ಸಾತ್ವಿಕ ನೆರೆ ಉಟ್ಟಡೆ
ಭೂತಿಕ ಸಾತ್ವಿಕನಾದ, ಸಾತ್ವಿಕ ಭೂತಿಕನಾದ.
ಈ ಮಾತು ಬಿದ್ದುದು ನೋಡಾ, ರಾಜಬೀದಿಯಲ್ಲಿ.
ಅಯ್ಯಾ, ಭೂತಿಕ ಕೆಣಕಿದಡಿಲ್ಲ, ಮಾತ ಮುಚ್ಚಿದಡಿಲ್ಲ
ಓತು ಕೂಡುವ ಅನುವ, ಕೂಡಲಸಂಗಮದೇವ ತಾನೇ ಬಲ್ಲ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-81 / ವಚನ ಸಂಖ್ಯೆ-911)

ನೋಡಿ ಈ ಅದಲು ಬದಲು ಕಂಚೀ ಬದಲು ಆಟ ನಡದೇ ಇರುತ್ತದೆ. ರಾಜಕೀಯದಲ್ಲಂತೂ ನಡದೇ ಇರತದೆ. So, ಅಧಿಕಾರದಲ್ಲಿದ್ದವನು ಓಲೈಸುವಂಥಾ ಒಂದು ಪುರೋಹಿತಶಾಹಿ ವರ್ಗ ಇರತದೆ. ಇವರಿಗೆ ಅವರು ಬೇಕು ಅವರಿಗೆ ಇವರು ಬೇಕು. ನನ್ನ ಬಟ್ಟೆ ನೀನು ಹಾಕ್ಕೋ ನಿನ್ನ ಬಟ್ಟೆ ನಾನು ಹಾಕ್ಕೋ ಅದಲು ಬದಲು ಮಾಡಕೊಂಡು ವ್ಯವಹಾರ ಮಾಡತಾರಲ್ಲಾ ಇಂಥ ಒಂದು ಸ್ಥಿತಿಯನ್ನು ಆವತ್ತು ಗಮನಿಸಿದ ಬಸವಣ್ಣನವರು ಈ ವಚನವನ್ನು ಆ ಸಂದರ್ಭದಲ್ಲಿ ಬರೆದದ್ದು. ಐತಿಹಾಸಿಕವಾಗಿ ಇದು ಬಹಳ ಮುಖ್ಯವಾಗಿದೆ ಅನ್ನೋದನ್ನ ನಾವು ಗಮನಿಸಬೇಕು.

ಭೂತಿಕನ ಸೀರೆಯ ಸಾತ್ವಿಕ ನೆರೆ ಉಟ್ಟಡೆ ಭೂತಿಕ ಸಾತ್ವಿಕನಾದ ಸಾತ್ವಿಕ ಭೂತಿಕನಾದ. ಈ ಬಟ್ಟೆ ಬದಲಾಯಿಸಿಕೊಂಡ ಮಾತ್ರಕ್ಕೆ ಏನಾಗಿಬಿಡತು. ನಾನು ಅವನಾಗಿ ಬಿಡತೇನೆ ಅವನು ನಾನಾಗಿ ಬಿಡತಾನೆ. ಆದರೆ ಈ ಮಾತು ಬಿದ್ದುದು ನೋಡಾ ರಾಜಬೀದಿಯಲ್ಲಿ ಅಂತ ಹೇಳತಾರೆ. ಇದೆಲ್ಲಾ ಭೋಗಸ್ಸು. ಇದು ನಡೆಯೋದಿಲ್ಲಾ ಈ ರಾಜಬೀದಿಯಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಂತಾ ಹೇಳತಾರೆ. ಇವತ್ತು ಹೇಳುವಂಥಾ ಮಾತನ್ನು ಬಸವಣ್ಣನವರು ಅವತ್ತೇ ಹೇಳಿದ್ದಾರೆ. ಅಯ್ಯಾ ಭೂತ ಕೆಣಕಿದಡಿಲ್ಲ ಮಾತ ಮುಚ್ಚಿದಡಿಲ್ಲ. ನಿಮ್ಮ ಭೂತಗಳು ಏನು ಅದಾವಲ್ಲಾ ಅದಲು ಬದಲು ಮಾಡಕೊಂಡು ರೂಪ ಬದಲಾವಣೆ ಮಾಡಕೊಂಡು ವ್ಯವಹರಿಸತಾ ಇದೀರಲ್ಲಾ ಈ ರೂಪ ನಿಮ್ಮ ಭೂತದ ರೂಪಗಳನ್ನು ಕೆಣಕಿ ಬಿಟ್ಟರೆ ನೀವು ಉಳಿಯೋದೇ ಇಲ್ಲ ಅನ್ನೋ ಎಚ್ಚರಿಕೆ ಇದು.

ನೋಡಿ ಇಂದಿನ ರಾಜಕೀಯಕ್ಕೂ ಅಂದಿನ ವ್ಯವಸ್ಥೆಗೂ ಕೊಡುವಂಥ ಎಚ್ಚರಿಕೆ ಇದು. ನಿಮ್ಮ ಮಾತು ಮುಚ್ಚಿ ಬಿಟ್ಟರೆ ಅದೂ ನಡೆಯೋದಿಲ್ಲ. ಎರಡೂ ಅರ್ಥದಲ್ಲಿ ಹೇಳತಾರೆ. ಒಂದು ಕಡೆ ಹೀಗೆ ಎಚ್ಚರಿಕೆ ಕೊಡುವ ಬಸವಣ್ಣನವರು ವಚನದ ಕೊನೇಯ ಸಾಲಿನಲ್ಲಿ ಬಹಳ ಅದ್ಭುತವಾದ ಪ್ರೀತಿಯ ತತ್ವವನ್ನು ಹೇಳತಾರೆ. “ಓತು ಕೂಡುವ ಅನುವ ಕೂಡಲಸಂಗಮದೇವ”. ಇದೆಲ್ಲಾ ಬಿಡರಿಪಾ ಸಾಕು ಎಲ್ಲರೂ ಪ್ರೀತಿಯಿಂದ ಅಪ್ಪಿಕೊಂಡು ಬದುಕುವುದು ಇದೆಯಲ್ಲಾ ಅದು ಕೂಡಲಸಂಗನಿಗೆ ಮಾತ್ರ ಗೊತ್ತಿದೆ. ಅಂಥ ಪ್ರೀತಿಯನ್ನು ನಾವು ಸಂಪಾದಿಸಿಕೊಳ್ಳೋಣ. ಈ ಅದಲು ಬದಲಿನ ಆಟ ಸಾಕು. ಅದರ ಮೂಲಕ ಸಮಾಜವನ್ನು ಶೋಷಿಸುವುದು ಸಾಕು. ನಾವು ಎನಿದ್ದೇವೆ ಅದನ್ನೇ ತೋರಿಸಿಕೊಂಡು ಎಲ್ಲರೂ ಅಪ್ಪಿಕೊಂಡು ಬದುಕಬೇಕು. ಇದನ್ನ ಮಾಡಾಕ ಹೋದರಿ ಅಂದರ ನಿಮಗೆ ಎಚ್ಚರಿಕೆ ಅಂತ ಹೇಳೀ ಎಚ್ಚರಿಕೆಯನ್ನೂ ಕೊಡತಾರೆ. ಅದು ಬ್ಯಾಡಾ. ಎಲ್ಲರೂ ಪ್ರೀತಿಯಿಂದ ಬಾಳೋಣ ಅಂತ ಹೇಳಿ ಪ್ರೀತಿಯನ್ನೂ ಕೂಡ ಹಂಚಿಕೊಳ್ಳತಾರೆ. ಇದು ಶರಣ ಸಂಸ್ಕೃತಿಯ ಅದ್ಭುತ ನಿದರ್ಶನ. ಹಾಗಾಗಿ ಬಸವಣ್ಣನವರು ಸಾಂಸ್ಕೃತಿಕ ನಾಯಕ.

ಇನ್ನು ನಾಯಕ ಹೇಗಿರಬೇಕು ಎನ್ನುವುದನ್ನು ತುಲನಾತ್ಮಕವಾಗಿ ನೋಡೋಣ.
ತಮ್ಮ ಈ ಸಾಮಾಜಿಕ, ಅರ್ಥಿಕ, ಸಾಂಸ್ಕೃತಿಕ, ಸಾಹಿತ್ಯಿಕ ಉನ್ನತ ಸಿದ್ಧಾಂತಗಳನ್ನು ಪ್ರತಿಪಾದಿಸಿ ಒಂದು ಅದ್ಭುತವಾದ ಪರಿವರ್ತನೆಗೊಂಡ ಸಮಾಜವನ್ನು ಎರಡೇ ಎರಡು ದಶಕಗಳಲ್ಲಿ ಕಟ್ಟಿ ನಿಲ್ಲಿಸಿದಂತಹ ಮಹಾನ್‌ ದಾರ್ಶನಿಕರು ಬಸವಣ್ಣನವರು. ಇದು ಇಡೀ ವಿಶ್ವಕ್ಕೇ ಒಂದು ಮಾದರಿ ನಾಯಕತ್ವ. Universal Model of Leadership, ಒಂದು Prototype Model.

ಬಸವಣ್ಣನವರನ್ನು ಅತೀ ಹತ್ತಿರದಿಂದ ಕಂಡವರು ಅಲ್ಲಮಪ್ರಭುಗಳು. ಕಲ್ಯಾಣದ ಕ್ರಾಂತಿಯಲ್ಲಿ ನಡೆದದ್ದನ್ನು ಕಣ್ಣಾರೆ ಕಂಡಂಥವರು. ಅವರ ಒಂದು ವಚನ ಇಡೀ ಬಸವಣ್ಣನವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ ಅನ್ನಬಹುದು.

ಕಲ್ಯಾಣವೆಂಬ ಪ್ರಣತೆಯಲ್ಲಿ ಭಕ್ತಿರಸವೆಂಬ ತೈಲವನೆರೆದು,
ಆಚಾರವೆಂಬ ಬತ್ತಿಯಲ್ಲಿ ಬಸವಣ್ಣನೆಂಬ ಜ್ಯೋತಿಯ ಮುಟ್ಟಿಸಲು
ತೊಳಗಿ ಬೆಳಗುತ್ತಿದ್ದಿತಯ್ಯಾ ಶಿವನ ಪ್ರಕಾಶ!
ಆ ಬೆಳಗಿನೊಳಗೆ ಒಪುತ್ತಿದ್ದರಯ್ಯಾ ಅಸಂಖ್ಯಾತ ಭಕ್ತಗಣಂಗಳು.
ಶಿವಭಕ್ತರಿರ್ದ ಕ್ಷೇತ್ರವೆ ಅವಿಮುಕ್ತ ಕ್ಷೇತ್ರವೆಂಬುದು ಹುಸಿಯೆ?
ಶಿವಭಕ್ತರಿರ್ದ ದೇಶ ಪಾವನವೆಂಬುದು ಹುಸಿಯೆ?
ಗುಹೇಶ್ವರ ಲಿಂಗದಲ್ಲಿ ಎನ್ನ ಪರಮಾರಾಧ್ಯ ಸಂಗನಬಸವಣ್ಣನ ಕಂಡು
ಬದುಕಿದೆನು ಕಾಣಾ ಸಿದ್ಧರಾಮಯ್ಯಾ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-236 / ವಚನ ಸಂಖ್ಯೆ-1060)

ಕಲ್ಯಾಣವನ್ನೇ ದೀಪ ಅಂತಾ ಕರೀತಾರೆ ಅಲ್ಲಮ ಪ್ರಭುಗಳು. ಆ ದೀಪಕ್ಕೆ ಭಕ್ತಿರಸವೆಂಬ ತೈಲವನೆರೆದು, ಎಂಥ ಅದ್ಭುತ ಶಬ್ದ ಪ್ರಯೋಗ. ಇಡೀ ಸಾಮಾಜಿಕ ಸಮರಸವನ್ನೇ ಈ ತೈಲ ಸೂಚಿಸುತ್ತದೆ. ಅಚಾರವೆಂಬ ಬತ್ತಿ ಸಂಸ್ಕೃತಿಯನ್ನು ಸೂಚಿಸಿದರೆ, ಬಸವಣ್ಣನೆಂಬ ಜ್ಯೋತಿ ಬೆಳಕನ್ನು ಹುಟ್ಟು ಹಾಕುವ ಅರಿವು ಮತ್ತು ಪ್ರಜ್ಞೆಯನ್ನು ನೀಡುತ್ತದೆ.

ಬಸವಣ್ಣನೆಂಬ ಜ್ಯೋತಿಯ ಸ್ಪರ್ಷದಿಂದ ತೊಳಗಿ ಬೆಳಗುತ್ತಿದ್ದಿತ್ತಯ್ಯಾ ಶಿವನ ಪ್ರಕಾಶ. ಶಿವನ ಪ್ರಕಾಶ ಅಂದರೇನೆ ಅದು ಆಧ್ಯಾತ್ಮ ಲೋಕದ ಬೆಳಕು. ಅತ್ಯಂತ ಪವಿತ್ರವಾದ ಬೆಳಕು. ಅಂಥಾ ಶಿವನ ಪ್ರಕಾಶ ಬಸವಣ್ಣನವರ ಸ್ಪರ್ಷ ಮಾತ್ರದಿಂದಲೇ ತೊಳಗಿ ಬೆಳಗಿತು ಅಂದರೆ ಪ್ರಜ್ವಲವಾಗಿ ಅಗಾಧ ಪರಿಣಾಮ ಬೀರಿ ಇಡೀ ಕಲ್ಯಾಣವನ್ನೆ ಸಾಮಾಜಿಕವಾಗಿ ಪರಿವರ್ತನೆ ಮಾಡುವಲ್ಲಿ ಯಶಸ್ವಿಯಾಯಿತು ಅನ್ನುವುದರ ಸಾಂಕೇತ.

ಇದು ಬಸವಣ್ಣನವರ ನಾಯಕತ್ವದ ಹಿನ್ನೆಲೆಯಲ್ಲಿ ನೋಡಿದಾಗ ಎಂಥ ಪರಿಣಾಮ ಬೀರಿತ್ತು ಎನ್ನುವುದರ ಕಲ್ಪನೆ ನೀಡುತ್ತದೆ. ಕೆಳ ವರ್ಗದ ಶೋಷಿತ ಸಮುದಾಯಕ್ಕೆ ಶಿಕ್ಷಿತರನ್ನಾಗಿ ಮಾಡಿದರು ಮತ್ತು ಅದರ ಜೊತೆಗೆ ಸಂಸ್ಕಾರವನ್ನೂ ನೀಡಿದರು ಎನ್ನುವುದರ ಸಂಕೇತಿಕ ಶಬ್ದ ಈ ಶಿವನ ಪ್ರಕಾಶ. ಬಸವಣ್ಣನವರನ್ನು ಬಹಳ ಹತ್ತಿರದಿಂದ ಕಂಡಂಥ ಅಲ್ಲಮ ಪ್ರಭುಗಳ ದೃಷ್ಟಿಕೋಣ ಇದು.

ಮುಂದುವರೆದು ಅಲ್ಲಮ ಪ್ರಭುಗಳು ಹೇಳತಾರೆ, ಆ ಬೆಳಕಿನಲ್ಲಿ ಅಸಂಖ್ಯಾತ ಭಕ್ತ ಗಣಂಗಳು ಒಪ್ಪುತ್ತಿದ್ದರಯ್ಯಾ. ಆ ಪರಿವರ್ತನೆಯ ಬೆಳಕಿನಲ್ಲಿ ಪರಿವರ್ತನೆಗೊಂಡಂಥ ಜನರು ಸಾಮೂಹಿಕವಾಗಿ ಎಲ್ಲವನ್ನೂ ಒಪ್ಪಿಕೊಂಡರು ಎನ್ನುವ ಸಂದೇಶ. ಇದು ಬಸವಣ್ಣನವರ ನಾಯಕತ್ವದ ಆಕರ್ಷಕ ಗುಣ. ಎಲ್ಲರನ್ನು ತಮ್ಮೊಂದಿಗೆ ಸೆಳದುಕೊಳ್ಳುವ ಗುಣ.
ಅವಿಮುಕ್ತ ಕ್ಷೇತ್ರ ಅಂದರೆ ಎಲ್ಲ ಕಡೆಯಿಂದ ತೆರೆದಿಟ್ಟಂಥಾ ಸಮಾಜ. ಅಲ್ಲಿ ಎಲ್ಲ ಪ್ರಕ್ರಿಯೆಗಳು ಅಂದರೆ ಸಾಮಾಜಿಕ, ಧಾರ್ಮಿಕ, ಆರ್ಥಿಕ ಮತ್ತು ಸಾಹಿತ್ಯಿಕ ವಿಚಾರಧಾರೆಗಳ ಚಿಂತನೆಗಳಿಗೂ ಅವಕಾಶ ಇತ್ತು ಎನ್ನುವುದರ ಸಾಂಕೇತಿಕ ಶಬ್ದ “ಅವಿಮುಕ್ತ ಕ್ಷೇತ್ರ”. ಯಾವುದಕ್ಕೂ restriction ಇಲ್ಲ. ಎಲ್ಲವೂ ಮುಕ್ತ ಮುಕ್ತ ಮುಕ್ತ. ಅಂಥ ಕ್ಷೇತ್ರ ಪಾವನವಾಗುತ್ತದೆ. ಎಂಥ ಅಗಾಧ ಕಲ್ಪನೆ ಬಸವಣ್ಣನವರದು. ಈ ಮುಕ್ತ ಚಿಂತನೆಯನ್ನು ಅಲ್ಲಮ ಪ್ರಭುಗಳು ಈ ವಚನದಲ್ಲಿ ಅದ್ಭುತವಾಗಿ ಚಿತ್ರಣ ಮಾಡಿದ್ದಾರೆ.

“ಬದುಕಿದೆನು” ಇದು ಅನುಭೂತಿ ಚರಿತ್ರೆ ಅಥವಾ ವಚನ ಸಾಹಿತ್ಯದಲ್ಲಿ ಬರುವ ಅತ್ಯಂತ ಶ್ರೇಷ್ಠ ಶಬ್ದ ಅಂತ ನನಗನಿಸತದ. ಗುಹೇಶ್ವರ ಲಿಂಗದಲ್ಲಿ ಬಸವಣ್ಣನನ್ನು ಕಂಡು ಬದುಕಿದೆನು ಎನ್ನುವಲ್ಲಿ ಬಸವಣ್ಣನವರಿಗೆ ಗೌರವ ಸೂಚಿಸುವ ಅಲಂಕಾರವೇ ಅಗಾಧ ಮತ್ತು ಅತ್ಯಂತ ವಿಶಿಷ್ಠ ಶಬ್ದ ಪ್ರಯೋಗ. ಇದು ಬಸವಣ್ಣನವರ ನಾಯಕತ್ವ ಎಂಥ ಪರಿಣಾಮ ಬೀರಿತ್ತು ಎನ್ನುವದರ ಕಲ್ಪನೆ. ಇದು ಕಲ್ಯಾಣ ಕ್ರಾಂತಿಯ ಅತ್ಯಂತ ಶೇಷ್ಠ ಕೊಡುಗೆ. ಅಂಥ ಅಲ್ಲಮ ಪ್ರಭುಗಳೇ ಬದುಕಿದೆನು ಎಂದರೆ ಉಳಿದ ಶರಣರು ಬಸವಣ್ಣನವರ ನಾಯಕತ್ವದಲ್ಲಿ ಬದುಕನ್ನು ಕಂಡುಕೊಂಡರು ಅನ್ನುವುದರ ಸಂಕೇತ.

ಕಲ್ಯಾಣದ ಕ್ರಾಂತಿ ಬಹಳ ಸಂಕೀರ್ಣವಾದದ್ದು.
ಒಂದು ಕಡೆ ಅರಸೊತ್ತಿಗೆ ಮತ್ತು ಬಸವಣ್ಣನವರ ಚಿಂತನೆಗಳ ವಿರೋಧಿಗಳು.
 ಇನ್ನೊಂದು ಕಡೆ ಶ್ರೇಣೀಕೃತ ಸಮಾಜದ ಮೇಲು ಕೀಳೆಂಬ ದಬ್ಬಾಳಿಕೆ.
 ಮತ್ತೊಂದು ಕಡೆ ವಿಚಾರಶೀಲರು ಮತ್ತು ಅವಿದ್ಯಾವಂತರು.
 ಆರ್ಥಿಕ ಬಲವುಳ್ಳವರು ಮತ್ತು ಬಡವರು.
 ಕಾಯಕವನ್ನೇ ನಂಬಿದಂಥವರು ಮತ್ತು ಅವರ ಶೋಷಣೆಯನ್ನೇ ಉಪಜೀವನ ಮಾಡಿಕೊಂಡಂಥವರು.

ಎಂಥಾ ಗೋಜಲು ಗೋಜಲು ಪರಿಸ್ಥಿತಿ ಎಂದರೆ ವ್ಯಷ್ಠಿ (ವೈಯಕ್ತಿಕ) ಪ್ರಜ್ಞೆಯಿಂದ ಸಮಷ್ಠಿ (ಸಾಮೂಹಿಕ) ಪ್ರಜ್ಞೆಯವರೆಗೆ ತಲೆಕೆಟ್ಟು ಓಡಿಹೋಗುವಂಥಾ ಪರಿಸ್ಥಿತಿ. ಒಟ್ಟಾರೆ ಕಠಿಣ ಹಾದಿಯನ್ನು ಸವೆಸಿದರು ಬಸವಣ್ಣ.

ನೆಲ್ಸನ್‌ ಮಂಡೇಲಾ ತಮ್ಮ ಪುಸ್ತಕ “A Long Walk to Freedom” ದಲ್ಲಿ ಹೇಳತಾರೆ:
Lead from the back, let others believe they are in front. There go my people, who are in front of me. I must follow them, Because I am their leader. Even if I fall, they will not fall. Even if I fail, they know where to go.

ನನ್ನ ಎಲ್ಲ ಸಹೋದರ ಸಹೋದರಿಯರು ಮಾತೆಯರು ಮುಂದೆ ಇರಲಿ. ನಾನು ಅವರ ಹಿಂದೆ ನಿಂತು ಮುನ್ನಡೆಸುತ್ತೇನೆ. ಅಗೋ ನೋಡಿ ಅಲ್ಲಿ ಹೋಗುತ್ತಿದ್ದಾರೆ ನನ್ನ ಜನರು, ನಾನು ಅವರ ನಾಯಕನಾದ್ದರಿಂದ ನಾನು ಅವರನ್ನು ಹಿಂಬಾಲಿಸಬೇಕು. ಒಂದು ವೇಳೆ ನಾನು ಎಡವಿ ಬಿದ್ದರೂ ಅವರು ಎಡವಿ ಬೀಳುವುದಿಲ್ಲ. ನಾನು ಸೋಲನ್ನು ಅನುಭವಿಸಿದರೂ ಅವರರು ದಾರಿ ತಪ್ಪುವುದಿಲ್ಲ. ಯಶಸ್ಸಿನ ದಾರಿ ಹೇಗೆ ಅಂತ ಅವರಿಗೆ ಗೊತ್ತು.

ಇಡೀ ಸಮುದಾಯವನ್ನು ಮುಂದಿಟ್ಟುಕೊಂಡು, ಸಮಾಜವನ್ನು ಮುಂದಿಟ್ಟುಕೊಂಡು ನಾಯಕನಾದವನು ಮುನ್ನಡೆಸಬೇಕಾಗುತ್ತದೆ. ನೆಲ್ಸನ್‌ ಮಂಡೇಲಾ ಅವರ ಈ statement ನಾಯಕತ್ವ ಹೇಗಿರಬೇಕೆಂಬುದರ definition. ಅಂದ್ರ ಸಮಾಜ ಅಥವಾ ಜನರು ಹೋಗತಾ ಇರೋ ದಾರಿ ಸರಿಯಾಗಿದೆಯೇ ಎನ್ನುವುದನ್ನು ಖಾತ್ರಿ ಪಡಿಸಿಕೊಳ್ಳೊದು.

ಈ ವಿಚಾರಧಾರೆಯನ್ನು ತೀವ್ರವಾಗಿ ಪ್ರತಿಪಾದಿಸಿದವರಲ್ಲಿ ಬಸವಣ್ಣನವರು ಅಗ್ರಗಣ್ಯರು. ವರ್ಗ ರಹಿತ, ವರ್ಣ ರಹಿತ, ಲಿಂಗಭೇದ ರಹಿತ, ಆಶ್ರಮಭೇದ ರಹಿತ, ಸಾಂಸ್ಥೀಕರಣವಲ್ಲದ, ಪೌರೋಹಿತ್ಯವಲ್ಲದ ಸಮಾಜವನ್ನು ಕಟ್ಟಿ ಮುನ್ನಡೆಸುವಲ್ಲಿ ಕ್ರಾಂತಿಕಾರಿ ಹೆಜ್ಜೆಯಿಟ್ಟವರು. The only philosopher who advocated “Metamorphosis” in the society is Basavanna. ಅವರ ಒಂದು ವಚನದ ಮೂಲಕ ಈ ನಾಯಕತ್ವದ ಮೂಲವನ್ನು ನೋಡುವ ಪ್ರಯತ್ನ ಮಾಡೋಣ.

ಭಕ್ತಿಯಿಲ್ಲದ ಬಡವ ನಾನಯ್ಯ
ಕಕ್ಕಯ್ಯನ ಮನೆಯಲ್ಲೂ ಬೇಡಿದೆ
ಚೆನ್ನಯ್ಯನ ಮನೆಯಲ್ಲೂ ಬೇಡಿದೆ
ದಾಸಯ್ಯನ ಮನೆಯಲ್ಲೂ ಬೇಡಿದೆ
ಎಲ್ಲ ಪುರಾತರು ನೆರೆದು
ಭಕ್ತಿ ಭಿಕ್ಷೆಯನಿಕ್ಕಿದೊಡೆ
ಎನ್ನ ಪಾತ್ರೆ ತುಂಬಿತ್ತು
ನೋಡಾ ಕೂಡಲಸಂಗಮದೇವಾ
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-36 / ವಚನ ಸಂಖ್ಯೆ-350)

ಇಡೀ ಜಗತ್ತಿನಲ್ಲಿ ಎಲ್ಲಿಯೂ ಕಾಣಲಿಕ್ಕೆ ಸಾಧ್ಯವಾಗದ, ಎಲ್ಲಿಯೂ ಕೇಳಲು ಸಿಗದ ಒಂದು ಸಮಾಜಮುಖಿ ಚಿಂತನೆಯುಳ್ಳ ನಾಯಕತ್ವ ಬಸವಣ್ಣನವರಲ್ಲಿತ್ತು. ಬಸವಣ್ಣವರ ನಾಯಕತ್ವವನ್ನು ಮತ್ತು ವ್ಯಕ್ತಿತ್ವವನ್ನು ಒಂದೇ ವಚನದಲ್ಲಿ ಹಿಡಿದಿಡಬಹುದಾದಂಥ ವಚನ ಅಂದರೆ ನನ್ನ ದೃಷ್ಟಿಯಲ್ಲಿ ಇದೇನೆ.

Robert Greenleaf (1904–1990) was the founder of “Servant leadership movement” and the “Greenleaf Center for Servant Leadership”. Greenleaf was born in Terre Haute, Indiana (USA) in 1904. After graduating from Carleton College in Minnesota, he went to work for AT&T. For the next forty years he researched management, development & education. In 1964 he took an early retirement to found the Greenleaf Center for Servant Leadership (first called the “Center for Applied Ethics”).

“Good leaders must first become good servants.”

  • Robert Greenleaf.

“ಭಕ್ತಿಯಿಲ್ಲದ ಬಡವ ನಾನಯ್ಯಾ” ಅಂತ ಭಿಕ್ಷಾಪಾತ್ರೆ ಹಿಡಕೊಂಡು ಶ್ರೇಣಿಕೃತ ಸಮಾಜದ ನಿಕೃಷ್ಠ ಜನರ ಮುಂದೆ ನಿಂತು ಭಿಕ್ಷೆ ಕೇಳಿದಾಗ ಅವರ ಮನಸ್ಥಿತಿಯನ್ನು ಒಮ್ಮೆ ಯೋಚಿಸಿ ನೋಡಿ. ನಿಮ್ಮ ಮನೆಯ ಮಗ ನಾನು ಅಂದಾಗ ಶೋಷಣೆಗೆ ಒಳಗಾಗಿದ್ದಂಥ ಅತ್ಯಂತ ಕೀಳು ಮಟ್ಟದಲ್ಲಿಂದಂಥಾ ಜನರ ಅಂತರಂಗದೊಳಗೆ ಅಡಗಿದ್ದ ಸಚೇತಕ ಶಕ್ತಿಯನ್ನು ಎಬ್ಬಿಸಿ ಹೊರಗೆ ತರುವಂಥಾ ಶಕ್ತಿ ಈ ಶಬ್ದಗಳಿಗಿದೆ.

ಅತ್ಯಂತ ಕೀಳುಮಟ್ಟದಲ್ಲಿ ನೋಡುತ್ತಿದ್ದಂಥಾ ಕಾಲಘಟ್ಟದಲ್ಲಿ ಆ ಜನಗಳ ಎದುರು ನಿಂತುಕೊಂಡು, ನೀವೆಲ್ಲರೂ ನನ್ನ ಜೊತೆ ಬನ್ನಿ ನಿಮಗೆ ದಾರಿ ತೋರಿಸುತ್ತೇನೆ ನಾನು ನಿಮ್ಮ ನಾಯಕ ಅಂತ ಏನಾದರೂ ಬಸವಣ್ಣ ಅಂದುಬಿಟ್ಟಿದ್ದರೆ ಜನರು ಬಸವಣ್ಣವರನ್ನು ಹೋಲಿಕೆ ಮಾಡತೊಡಗುತ್ತಿದ್ದರು. Literally Speaking Comparison ಗೆ ಇಳಿದು ಬಿಡತಿದ್ದರು ಅಂತ ಅನಿಸುತ್ತೆ.

ಭಕ್ತಿ ಭಂಡಾರಿ ಬಸವಣ್ಣನವರೆಲ್ಲಿ ಕನಿಷ್ಠರಾದ ನಾವೆಲ್ಲಿ?
 ಬಸವಣ್ಣನವರ ಜ್ಞಾನವೆಲ್ಲಿ ನಮ್ಮ ಜ್ಞಾನವೆಲ್ಲಿ?
 ಬಸವಣ್ಣನವರ ಕುಲವೆಲ್ಲಿ ನಮ್ಮ ಕುಲವೆಲ್ಲಿ?
 ಬಸವಣ್ಣನವರ ಗೌರವ ಘನತೆಯೆಲ್ಲಿ ನಮ್ಮ ಗೌರವ ಘನತೆಯೆಲ್ಲಿ?

ಹೀಗೆ ಬಸವಣ್ಣವರ ಮತ್ತು ಸಮಾಜದ ನಡುವೆ ಒಂದು ಕಂದಕ ನಿರ್ಮಾಣ ಆಗುತ್ತಿತ್ತು. ಇದನ್ನೇ ಸಮಾಜ ಶಾಸ್ತ್ರದಲ್ಲಿ “ಮಾನಸಿಕ ಕಂದಕ” (Psychological Distancing) ಅನ್ನೋದು. ಯಾವಾಗ ನಾಯಕ ಮತ್ತು ಸಮಾಜದ ನಡುವೆ ಒಂದು ಕಂದಕ ಏರ್ಪಡುತ್ತದೆಯೋ ಅಲ್ಲಿಗೆ ಆ ಕ್ರಾಂತಿ ಸತ್ತೇ ಹೋಗತದ. ಈ ಒಂದು ವಚನದಿಂದ ಬಸವಣ್ಣನವರು ಅನಾಮತ್ತಾಗಿ ಈ ಮಾನಸಿಕ ಕಂದಕವನ್ನು ಕಿತ್ತು ಬಿಸಾಕತಾರೆ.

ಅದೇ Motivational Leadership Theory. ಮನೋ ಮಂದಿರದಲ್ಲಿ ನಡೆದ ಕಲ್ಯಾಣ ಕ್ರಾಂತಿಯ ಅದ್ಭುತ ಪರಿವರ್ತನೆ ಅಂದರೆ ಬಸವಣ್ಣನವರು ಒಬ್ಬರೇ ನಾಯಕರಲ್ಲಾ “ನಾವೆಲ್ಲರೂ ನಾಯಕರು” ಮತ್ತು we are bound to do it ಎನ್ನುವ soft command ನ್ನು ಎಲ್ಲರೂ ಸ್ವೀಕರಿಸಿದ್ದರು. ಅಂದರೆ ಇಡೀ ಸಮಾಜ ತಮ್ಮ ಕೀಳರಿಮೆಯ ಚಿಪ್ಪಿನಿಂದ ಹೊರಬಂದು ಮಾನಸಿಕವಾಗಿ ಸಿದ್ಧವಾಗಿ ಕಲ್ಯಾಣದ ಕ್ರಾಂತಿಯಲ್ಲಿ ಭಾಗವಹಿಸುತ್ತಾರೆ. ಇದು ಜಾಗತಿಕ ಇತಿಹಾಸದಲ್ಲಿ ಬಸವಣ್ಣನವರು ಹುಟ್ಟು ಹಾಕಿದ ಹೊಚ್ಚ ಹೊಸ ಪ್ರಯೋಗ. ಇಂದಿಗೂ ಈ ಪ್ರಯೋಗವನ್ನು ಸುಧಾರಿಸುವುದಕ್ಕೆ ಸಾಧ್ಯ ಆಗಿಲ್ಲಾ ಯಾಕೆಂದರೆ ಅದು ಅತ್ಯಂತ ಸುಧಾರಿತ ಸೂತ್ರ (Modified & Modernized Theory) ಯನ್ನು ಬಸವಣ್ಣನವರು ಜಗತ್ತಿಗೆ ಕೊಟ್ಟಿದ್ದಾರೆ.

ಇಂದಿನ ಸಂದಿಗ್ಧ ಕಾಲಘಟ್ಟದಲ್ಲಿ ಸಮಾಜದಲ್ಲಿ ಜಾತಿ-ಧರ್ಮಗಳ ನಡುವೆ ಘರ್ಷಣೆಗಳು ನಡೆಯುತ್ತಿರುವಾಗ ಬಸವಾದಿ ಶರಣರ ವಚಗಳು ಹೇಳುವ ಮೌಲ್ಯಗಳು ಮತ್ತು ತತ್ವ ಸಿದ್ಧಾಂತಗಳು ಎಂದಿಗಿಂತಲೂ ಹೆಚ್ಚು ಪ್ರಸ್ತುತವಾಗುತ್ತಿವೆ. ಮಣ್ಣಿಗಾಗಿ ಬದುಕಿದವರು ಮಣ್ಣಾಗಿ ಹೋದರು. ಶುದ್ಧ ಮನಸ್ಸಿನಿಂದ ಬದುಕಿದವರು ಇನ್ನೂ ನಮ್ಮ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದ್ದಾರೆ ಎನ್ನುವ ಆಶಯದೊಂದಿಗೆ:

ಹಾವೇರಿಯ‌ ಬ್ಯಾಡಗಿ ತಾಲೂಕಿನ ಚಿಕ್ಕ ಬಾಸೂರಿನ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನ ಉಪನ್ಯಾಸಕಿ ಡಾ. ಪುಷ್ಪಾವತಿ ಶಲವಡಿಮಠ ಅವರು ಬರೆದ “ಬಸವನ ಕಾಗೆ” ಎನ್ನುವ ವಿಡಂಬನಾತ್ಮ ಕವನದ ಮೂಲಕ ಈ ಲೇಖನಕ್ಕೆ ವಿರಾಮ ಹೇಳುತ್ತೇನೆ.

ಹಂಚಿಕೊಂಡು ತಿನ್ನಬೇಕು
ಹಂಚಿಕೊಂಡಷ್ಟು
ಹುಲುಸಾಗುವುದು ಸಕಲವೂ
ನಿತ್ಯ ಸತ್ಯವಾದ ತತ್ವವೊಂದನು
ನಿತ್ಯವೂ ಕಲಿಯುತ್ತಿತ್ತು ಮಗುವೊಂದು


ಕಾಗೆ ಒಂದಗಳು ಕಂಡರೆ
ಕರೆಯದೇ ತನ್ನ ಬಳಗವನ್ನೆಲ್ಲಾ
ಬಸವನ ವಚನ ನಿತ್ಯವೂ
ತಪ್ಪದೆ ಕಂಠ ಪಾಠ ಮಾಡುತ್ತಿತ್ತು ಬಿಡದೆಒಂದು ದಿನ ಮಗುವಿನ ಮಗ್ಗುಲಲಿ
ರೊಟ್ಟಿಯ ತುಣುಕೊಂದು ಬಿದ್ದಿತ್ತು
ರೊಟ್ಟಿಗಾಗಿ ಹಾರಿ ಬಂದ ಕಾಗೆ
ಕರೆಯಿತು ತನ್ನ ಬಳಗವನ್ನೆಲ್ಲ
ಬಸವನ ವಚನವ ನೆನೆಯಿತು
ಮುಗ್ದ ಮಗುವಿನ ಮನಸು


ಕಾಗೆಯ ಬಳಗವೆಲ್ಲ
ರೊಟ್ಟಿಯ ಆಸೆಗೆ ಒಂದುಗೂಡಿತು
ಬಳಗವೆಲ್ಲ ಸೇರಿ ರೊಟ್ಟಿ ಆಸೆಗೆ ಬಾಯಿ ಹಾಕಲು
ಕರೆದ ಕಾಗೆ ತುಣುಕು ರೊಟ್ಟಿ ಬಿಡದೆ
ಕಚ್ಚಿಕೊಂಡು ಹಾರಿ ಹೋಯಿತು
ಇದ ನೋಡಿದ ಮಗುವಿಗೀಗ ಗೊಂದಲ
ಓಡಿ ಬಂದು ಅಮ್ಮನಿಗೆಂದಿತು
ಈ ಕಾಗೆ ಹೀಗೇಕೆ ಅಮ್ಮಾ?!
ನಾ ಓದಿದ ವಚನದ ವಿರುದ್ದ!


ನಸು ನಗುತಾ ಅಮ್ಮನೆಂದಳು
ಮಗು ಇದು ಕಲಿಯುಗದ ಕಾಗೆ
ಅಲ್ಲ ಅದು ಬಸವನ ಕಾಗೆ
ಸಿಕ್ಕಷ್ಟು ಬಾಚಿಕೊಂಡು ಯಾರಿಗೂ ದಕ್ಕದಂತೆ
ಕಸಿದೊಯ್ಯುವುದೇ ಅದರ ಗುಣ.


ಬಸವನ ಕಾಗೆಯಂತೆ
ಹಂಚಿಕೊಳ್ಳುವ ಗುಣ
ಅದಕ್ಕೆಲ್ಲಿ ಬಂದೀತು?ಈಗ ಏನಿದ್ದರೂ ಬಸವ ವಚನ
ಓದಲು ಹಾಡಲು ಹೊಗಳಲು
ಕಂಠ ಪಾಠ ಮಾಡಲು ಮಾತ್ರ … …


ಹೋಗು ಮಗು ನೀನೂ ಕಂಠ ಪಾಠ ಮಾಡು
ನಾಳೆ ನಿನಗಿದೆ ವಚನ ಕಂಠ ಪಾಠ ಸ್ಪರ್ಧೆ!

ಸಂಗ್ರಹ ಮತ್ತು ಲೇಖನ:
ಡಾ. ವಿಜಯಕುಮಾರ ಕಮ್ಮಾರ
“ಸವಿಚರಣ” ಸುಮತಿ ಇಂಗ್ಲೀಷ್‌ ಶಾಲೆಯ ಹತ್ತಿರ
ಸುಭಾಷ್‌ ನಗರ, ಕ್ಯಾತ್ಸಂದ್ರ
ತುಮಕೂರು – 572 104
ಮೋಬೈಲ್. ನಂ : +91 9741 357 132.
ಈ-ಮೇಲ್‌ : vijikammar@gmail.com

ಸಹಾಯಕ ಗ್ರಂಥಗಳು:
• ಹಿಂದೂ ಶಾಸ್ತ್ರಗಳೂ ಮತ್ತು ಸಂಸ್ಕಾರಗಳು : ವಿ. ವಿ. ಕೆ. ಅಯ್ಯರ್ ಅನುವಾದ-ಎಚ್‌ ಎಲ್ ಚಂದ್ರಶೇಖರ.
• 12 ನೇ ಶತಮಾನದ ಶರಣ ಸ್ಮಾರಕಗಳು : ಡಾ. ವೀರಣ್ಣ ದಂಡೆ, ಡಾ. ಜಯಶ್ರೀ ದಂಡೆ.
• ಮರುಳಶಂಕರದೇವರು-ಅನುಭಾವ ಯಾತ್ರೆ : ಡಾ. ದಯಾನಂದ ಈ. ನೂಲಿ.
• ಹರಿಹರನ ರಗಳೆಗಳ ಸಾಹಿತ್ಯಕ ಅಧ್ಯಯನ : ಡಾ. ಕೆ. ಪಿ. ಮಹಾದೇವಯ್ಯ.
• ವಚನ ಬೆಳಕು : ರಂಜಾನ್‌ ದರ್ಗಾ.
• ವಚನ ವೈಭವ : ಶ್ರೀ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು.
• ಬೃಹದ್ದೇಶಿ : ಪ್ರೊ. ದ್ವಾರಂಭಾವ ನಾರಾಯಣ ರಾವ್, ಕೆ. ಸಾಂಬಶಿವ ಶಾಸ್ತ್ರಿ.
• ಹರಿದಾಸ ಆಂದೋಲನ-ಒಂದು ಅಧ್ಯಯನ : ಡಾ. ನಿ. ಕೃ. ರಾಮಶೇಷನ್.
• ವಚನಕೋಗಿಲೆ-ಚಕ್ರಕೋಡಿ ನಾರಾಯಣ ಶಾಸ್ತ್ರಿ : ಡಾ. ಅರುಣ್‌ ಕುಮಾರ. ಎಸ್.

 ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
 ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in

Loading

Leave a Reply