ಸಾಂಸ್ಕೃತಿಕ ನಾಯಕ ಬಸವಣ್ಣ | ಶ್ರೀಮತಿ. ಅನುಪಮಾ ಪಾಟೀಲ, ಹುಬ್ಬಳ್ಳಿ.

ಬಸವಣ್ಣನೇ ತಾಯಿ, ಬಸವಣ್ಣನೇ ತಂದೆ,
ಬಸವಣ್ಣನೇ ಪರಮಬಂಧುವೆನಗೆ.
ವಸುಧೀಶ ಕಪಿಲಸಿದ್ಧಮಲ್ಲಿಕಾರ್ಜುನ,
ನಿಮ್ಮ ಹೆಸರಿಟ್ಟ ಗುರು ಬಸವಣ್ಣನಯ್ಯಾ.
(ಸಮಗ್ರ ವಚನ ಸಂಪುಟ: ನಾಲ್ಕು-2021/ಪುಟ ಸಂಖ್ಯೆ-244/ವಚನ ಸಂಖ್ಯೆ-798)

ಶಿವಯೋಗಿ ಸಿದ್ಧರಾಮರ ಈ ವಚನದೊಂದಿಗೆ ಬಸವಾದಿ ಶಿವಶರಣರನ್ನು ಸ್ಮರಿಸುತ್ತ ಸರ್ವ ಶರಣ ಸಂಕುಲಕ್ಕೆ ಬಸವ ಜಯಂತಿಯ ಶುಭಾಶಯಗಳು

ಬಸವ, ಬಸವಣ್ಣ, ಬಸವೇಶ್ವರ ಎಂಬ ಹೆಸರೇ ಒಂದು ಬಗೆಯ ರೋಮಾಂಚನ. ಸಮ ಸಮಾಜದ ಕನಸುಗಾರ, ಪ್ರಗತಿಪರ ಚಿಂತಕ, ಶರಣ ಪರಂಪರೆಯ ಹರಿಕಾರ ವಚನ ಸಾಹಿತ್ಯದ ನೇತಾರ. ಕನ್ನಡ ಭಾಷೆಗೆ ಅಸಾಮಾನ್ಯ ಶಕ್ತಿ ತುಂಬಿದ ವಿದ್ವಾಂಸ. ಜನರ ಆಡು ಭಾಷೆಯಲ್ಲಿ ವಚನಗಳ ಮೂಲಕ ಜನಪದವೂ ಬಸವಣ್ಣನೆ. ಹೀಗೆ ಬಸವಣ್ಣನವರು ನಮ್ಮ ಮನೆ ಮನಸ್ಸುಗಳಲ್ಲಿ ಒಂದಾಗಿದ್ದಾರೆ ಉಸಿರಿನಲ್ಲಿ ಬೆರೆತಿದ್ದಾರೆ.

ಸಾಂಸ್ಕೃತಿಕ ನಾಯಕ ಬಸವಣ್ಣ ಇದು ಕರ್ನಾಟಕ ಸರ್ಕಾರದಿಂದ ಕೊಡ ಮಾಡಲ್ಪಟ್ಟ ಗೌರವ. ತಡವಾಗಿಯಾದರೂ ಅವರಿಗೆ ಸಂದ ಗೌರವ ನಮಗೆಲ್ಲರಿಗೂ ಅತ್ಯಂತ ಸಂತೋಷ ಹೆಮ್ಮೆ ತಂದಿದೆ.

ಈಗ ಸಾಂಸ್ಕೃತಿಕ ನಾಯಕ ಅಂದ್ರೆ ಏನು? ಯಾರಿಗೆ ಅನ್ನಬಹುದು? ಅಂತ ನೋಡೋಣ. ಸಾಂಸ್ಕೃತಿಕ ನಾಯಕ ಅಂದರೆ ಆವಿಷ್ಕಾರ ಅಥವಾ ಆವಿಷ್ಕಾರದ ಮೂಲಕ ಜಗತ್ತನ್ನು ಸಮಾಜವನ್ನು ಬದಲಾಯಿಸುವ ವ್ಯಕ್ತಿ ಅಥವಾ ಒಂದು ಗುಂಪಿಗೆ ಸಾಂಸ್ಕೃತಿಕ ನಾಯಕ ಅನ್ನಬಹುದು. ಅನೇಕ ಸಾಂಸ್ಕೃತಿಕ ನಾಯಕರು ಹೊಸ ಪ್ರಪಂಚದ ಸೃಷ್ಠಿಗೆ ಸಹಾಯ ಮಾಡಿದರೂ ಹೆಚ್ಚಿನ ನಾಯಕರು ಸೃಷ್ಠಿಯ ನಂತರ ಪ್ರಪಂಚದ ಮೇಲೆ ಬೀರುವ ಪರಿಣಾಮದಿಂದ ಮುಖ್ಯರಾಗುತ್ತಾರೆ.

ಸಾಂಸ್ಕೃತಿಕ ನಾಯಕ ಎಂಬ ಪದಕ್ಕೆ ಜರ್ಮನಿಯ ಇತಿಹಾಸಕಾರರಾದ ಕರ್ಟ ಬ್ರೇಸಿಗ್ (1866-1940) ವ್ಯಾಖ್ಯಾನವನ್ನು ನೀಡುತ್ತಾರೆ. ಸಾಂಸ್ಕೃತಿಕ ನಾಯಕ ಎನ್ನುವ ಸಮಾನಾಂತರ ಪದಕ್ಕೆ ಜರ್ಮನ್ ನಲ್ಲಿ “ಹೀಲ್‌ಬ್ರಿಂಗರ್” ಪದ ಬಳಕೆ ಇದೆ. ಇದರ ಅರ್ಥ ಸಂರಕ್ಷಕ ಅಂತ. ಬಸವಣ್ಣನವರು ಸಾರ್ವತ್ರಿಕವಾದ ಸಾರ್ವಕಾಲಿಕವಾದ, ಸರ್ವಜನ ಸಮಭಾವದ ತಾತ್ವಿಕತೆಗಳ ಮೂಲಕ ಕಲ್ಯಾಣ ಸಮಾಜವನ್ನು ಕಟ್ಟುವುದಕ್ಕೆ ಬೇಕಾದ ನೀತಿಯನ್ನು ಭೋದಿಸಿದರು. ಅಷ್ಟೆ ಅಲ್ಲ ಅದನ್ನು ಆಚರಣೆಗೂ ಕೂಡ ತಂದರು. ನಮ್ಮ ದೇಶದ ಸಂವಿಧಾನದ ಆಶಯಗಳಿಗೆ ಅನುರೂಪವಾದ ಚಿಂತನೆಗಳು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಅನ್ನಲು ಸಮರ್ಥನೆ ನೀಡುತ್ತದೆ. ಭಾರತದ ಸಂವಿಧಾನ ಪ್ರಸ್ತುತ ಎತ್ತಿ ಹಿಡಿದಿರುವ ಜಾತಿ ಭೇದವಿಲ್ಲದ ವರ್ಗ ತಾರತಮ್ಯ ವಿಲ್ಲದೆ, ಲಿಂಗ ತಾರತಮ್ಯವಿಲ್ಲದ ಸಮಾಜವನ್ನು ರೂಪಿಸುವ ಕೆಲಸ 12 ನೇ ಶತಮಾನದಲ್ಲಿಯೆ ನಡೆದಿತ್ತು. ಬಸವಣ್ಣನವರ ನಾಗರೀಕ ಸಮಾನತೆ ಎಲ್ಲಾ ಎಲ್ಲೆಗಳನ್ನು ಮೀರಿದ್ದು. ಅದು ಚಿಂತನೆಯ ರೂಪದಲ್ಲಿ ಮಾತ್ರವಲ್ಲದೆ ಪ್ರಾಯೋಗಿಕವಾಗಿಯೂ ಸಹ ಆಚರಣೆಯ ಮಹತ್ವ ಪಡೆದಿದೆ. ಈ ನೆಲದ ಮಣ್ಣಿನ ಗುಣವನ್ನು ಹೊಂದಿದೆ. ಕಾಯಕ ಸಂಸ್ಕೃತಿಯನ್ನು ಎತ್ತಿ ಹಿಡಿದಿದೆ. ಭಾರತದ ಜೀವ ನಾಡಿಯಾದ ಕೃಷಿ ಕಾಯಕಕ್ಕೆ ಶ್ರೇಷ್ಠತೆ ನೀಡಿದೆ. ತುಕ್ಕು ಹಿಡಿದಿದ್ದ ಸಾಮಾಜಿಕ ಮತ್ತು ಧಾರ್ಮಿಕ ವ್ಯವಸ್ಥೆಯನ್ನು ಧಿಕ್ಕರಿಸಿ ಘನ ಬದಲಾವಣೆಯನ್ನು ತರಲು ಹೊರಟರು. ಸಮತೋಲನಕ್ಕಾಗಿ ಹೋರಾಡಿದ ದಾರ್ಶನಿಕರು ಬಸವಣ್ಣನವರು. ಜಾಗತಿಕ ಇತಿಹಾಸವನ್ನು ನಾವು ಅವಲೋಕಿಸಿದಾಗ, ಹೊಸ ಧರ್ಮಗಳ ಉದಯದ ಹಿಂದೆ ಆಯಾಕಾಲದ ಸಾಮಾಜಿಕ ಧಾರ್ಮಿಕ ಕಹಿ ಘಟನೆಗಳು ಕಾರಣವಾಗಿವೆ. ಹಾಗೆಯೇ ಬಸವಣ್ಣನವರಿಗೂ ಕೂಡ ಅವರು ಹುಟ್ಟಿದ್ದ ಕಾಲವೂ ಅಂತಹ ಸನ್ನಿವೇಶ ಉಳ್ಳದ್ದಾಗಿದೆ.

ಅದು ಕಲ್ಯಾಣ ಚಾಲುಕ್ಯ ಅರಸರ ಆಡಳಿತದ ಉತ್ತುಂಗ ಕಾಲ. ಅದರಲ್ಲೂ 6 ನೇ ವಿಕ್ರಮಾದಿತ್ಯನ ಆಳ್ವಿಕೆಯಲ್ಲಿ ಧರ್ಮ, ದೇವಾಲಯ, ಅಗ್ರಹಾರ ಮತ್ತು ಮತಗಳ ಅತಿಯಾದ ಬೆಳವಣಿಗೆ ಮತ್ತು ಅವುಗಳ ಬೆಳವಣಿಗೆಗೆ ಪೋಷಣೆಗೆ ನೀಡಿದ ಮಿತಿ ಮೀರಿದ ದಾನ ಪ್ರವೃತ್ತಿಗೆ ನೂರಾರು ದೇವಾಲಯಗಳು ಮತ್ತು ಸಾವಿರಾರು ಶಿಲಾ ಶಾಸನಗಳು ಸಾಕ್ಷಿಯಾಗಿವೆ. ಈ ಹಿನ್ನಲೆಯಲ್ಲಿ ಜನ ಮಾನಸದಲ್ಲಿ ನೆಲೆಯೂರಿದ್ದ ದೇವರು–ಧರ್ಮದ ನಂಬಿಕೆ, ಆಚರಣೆಗಳು, ದೇವಾಲಯ, ದೇವರು, ಧರ್ಮ, ಅಗ್ರಹಾರ ಮಠೀಯ ಸಂಸ್ಕೃತಿಗಳ ಉನ್ಮಾದ ಸ್ಥಿತಿ, ಅವುಗಳ ಹೆಸರಿನಲ್ಲಿ ನಡೆಯುತ್ತಿದ್ದ ಶೋಷಣೆ ಎಲ್ಲೆ ಮೀರಿತ್ತು. ಆಗಿನ ಕಾಲ ಘಟ್ಟದಲ್ಲಿ ದುಡಿಯು ವರ್ಗವೇ ಬೇರೆ, ದುಡಿಸಿಕೊಳ್ಳವವರ ವರ್ಗವೇ ಬೇರೆ ಬೇರೆಯಾಗಿ ನಡುವೆ ಆಗಾಧವಾದ ಅಂತರವಿತ್ತು. ಜನರ ನಡುವೆ ಮೇಲು–ಕೀಳು, ಬಡವ ಬಲ್ಲಿದ, ವರ್ಣ–ವರ್ಗಗಳ ಬಹು ದೊಡ್ಡ ಕಂದಕವೇ ಏರ್ಪಟ್ಟಿತ್ತು.

ಈ ಎಲ್ಲ ಸಂದರ್ಭಗಳು ಬಸವಣ್ಣನವರ ಮನ ಕಲುಕಿ ಹೊಸ ಕ್ರಾಂತಿಗೆ ನಾಂದಿಯಾಯಿತು. ಬಸವಣ್ಣನವರ ತತ್ವಗಳು ವಚನಗಳ ರೂಪದಲ್ಲಿ ಹೊರ ಹೊಮ್ಮಿದವು. ಅವರು ಸಾರಿದ ತತ್ವಗಳು ಅನುಸರಣೆಗೆ ಅತ್ಯಂತ ಸರಳವಾದವುಗಳು. ಕಾಯಕ ತತ್ವದ ಹಿನ್ನೆಲೆಯಲ್ಲಿ ಸ್ವರ್ಗ, ನರಕ, ಕೈಲಾಸ ವೈಕುಂಠಗಳನ್ನು ಬೇರಿಲ್ಲವೆಂದು ಸಾರಿ ಕಾಯಕವನ್ನು ಕೈಲಾಸವನ್ನಾಗಿಸಿದರು. ಸಾವಿರಾರು ದೇವಾಲಯಗಳು ಇದ್ದರೂ ಕೂಡ ಅವುಗಳ ಪ್ರವೇಶಕ್ಕೆ ಇದ್ದ ನಿಷೇಧವನ್ನು ತೆಡೆಯಲು ನಮ್ಮ ಅಂಗೈಗೆ ಇಷ್ಠಲಿಂಗವನ್ನು ಕೊಟ್ಟರು. ಈ ಮೂಲಕ “ಸ್ಥಾವರಕ್ಕೆ ಅಳಿವುಂಟ್ಟು ಜಂಗಮಕ್ಕೆ ಅಳಿವಿಲ್ಲ” ಅಂತ ಸಾರಿದರು. ಈ ಮೂಲಕ ನಮ್ಮ “ಶಿರವನ್ನೆ ಹೂನ್ನಿನ ಕಳಸ” ವನ್ನಾಗಿ ಮಾಡಿ ಪುರೋಹಿತಶಾಹಿಗಳ ದೇವಾಲಯಗಳ ಸಂಸ್ಕೃತಿಯನ್ನೆ ಧಿಕ್ಕರಿಸಿದರು, ಮಾದಾರ ಚನ್ನಯ್ಯ, ಡೋಹರ ಕಕ್ಕಯ್ಯ, ಕುಂಬಾರ ಗುಂಡಯ್ಯ, ಮಡಿವಾಳ ಮಾಚಯ್ಯ, ಅಂಬಿಗರ ಚೌಡಯ್ಯ, ಶರಣೆ ಸತ್ಯಕ್ಕ, ಸೂಳೆ ಸಂಕವ್ವೆ ಮುಂತಾದ ಅನೇಕ ಕೆಳಸ್ಥರದ ವ್ಯಕ್ತಿಗಳನ್ನು ಮುನ್ನೆಲೆಗೆ ತಂದು ಶರಣರ ಪಟ್ಟಕ್ಕೇರಿಸಿ ಅನುಭವ ಮಂಟಪದಲ್ಲಿ ಭಾಗಿಯಾಗುವಂತೆ ಮಾಡಿದರು.

ಹೊಲೆಗಂಡಲ್ಲದೆ ಪಿಂಡದ ನೆಲೆಗಾಶ್ರಯವಿಲ್ಲ,
ಜಲ-ಬಿಂದುವಿನ ವ್ಯವಹಾರ ಒಂದೇ,
ಆಶೆಯಾಮಿಷ ರೋಷಹರುಷ ವಿಷಯಾದಿಗಳೆಲ್ಲಾ ಒಂದೇ.
ಏನನೋದಿ, ಏನ ಕೇಳಿ, ಏನು ಫಲ?
ಕುಲಜನೆಂಬುದಕ್ಕೆ ಆವುದು ದೃಷ್ಟ?
“ಸಪ್ತಧಾತುಸಮಂ ಪಿಂಡಂ ಸಮಯೋನಿಸಮದ್ಭವಮ್‌ |
ಆತ್ಮಜೀವಸಮಾಯುಕ್ತಂ ವರ್ಣಾನಾಂ ಕಿಂ ಪ್ರಯೋಜನಮ್‌ || ಎಂದುದಾಗಿ,
ಕಾಸಿ ಕಮ್ಮಾರನಾದ, ಬೀಸಿ ಮಡಿವಾಳನಾದ,
ಹಾಸನಿಕ್ಕಿ ಸಾಲಿಗನಾದ, ವೇದವನೋದಿ ಹಾರುವನಾದ.
ಕರ್ಣದಲ್ಲಿ ಜನಿಸಿದರುಂಟೆ ಜಗದೊಳಗೆ?
ಇದು ಕಾರಣ ಕೂಡಲಸಂಗಮದೇವಾ,
ಲಿಂಗಸ್ಥಲವನರಿದವನೆ ಕುಲಜನು.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-160/ವಚನ ಸಂಖ್ಯೆ-590)

ಎನ್ನುವ ಮೂಲಕ ವೃತ್ತಿ ಹುಟ್ಟಿನಿಂದ ಬಂದಿದ್ದಲ್ಲವೆಂದು ಸಾರಿ, ದುಡಿದ ಸಂಪಾದನೆಯನ್ನು ದಾಸೋಹದಿಂದ ಹಂಚಿ ತಿನ್ನುವ ಪರಿಕಲ್ಪನೆಯನ್ನು ಸಾಕಾರಗೊಳಿಸಿದರು. ಮಾತನ್ನು ವಚನವಾಗಿಸಿದ ಕೀರ್ತಿ ಬಸವಣ್ಣನವರದ್ದು. ನುಡಿಗೆ ಶ್ರೇಷ್ಠತೆ ನೀಡಿ “ನುಡಿದಡೆ ಲಿಂಗ ಮೆಚ್ಚಿ ಅಹುದಹುದೆನಬೇಕು” ಎಂದು ಸಾರಿದರು.

ದೇವಸಹಿತ ಭಕ್ತ ಮನೆಗೆ ಬಂದಡೆ
ಕಾಯಕವಾವುದೆಂದು ಬೆಸಗೊಂಡೆನಾದಡೆ
ನಿಮ್ಮಾಣೆ! ನಿಮ್ಮ ಪುರಾತರಾಣೆ! ತಲೆದಂಡ! ತಲೆದಂಡ!
ಕೂಡಲಸಂಗಮದೇವಾ, ಭಕ್ತರಲ್ಲಿ ಕುಲವನರಸಿದಡೆ
ನಿಮ್ಮ ರಾಣಿವಾಸದಾಣೆ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-118/ವಚನ ಸಂಖ್ಯೆ-453)

ಹೀಗೆ ಬಸವಣ್ಣನವರು ಭಕ್ತರಲ್ಲಿ ಸರ್ವಸಮಾನತೆ ಕಾಣುತ್ತಾರೆ.

ಇವನಾರವ, ಇವನಾರವ,
ಇವನಾರವನೆಂದೆಣಿಸದಿರಯ್ಯಾ.
ಇವನಮ್ಮವ, ಇವನಮ್ಮವ,
ಇವ ನಮ್ಮನೆಂದೆನಿಸಯ್ಯಾ.
ಕೊಡಲಸಂಗಮದೇವಾ
ನಿಮ್ಮ ಮನೆಯ ಮಗನೆಂದೆನಿಸಯ್ಯ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-20/ವಚನ ಸಂಖ್ಯೆ-62)

ಎನ್ನುವ ಮೂಲಕ ಸಮಾಜದ ಎಲ್ಲ ಸ್ಥರದವನ್ನೂ ಒಂದು ಕೂಡಿಸಿದ ಕೀರ್ತಿ ಬಸವಣ್ಣನವರದ್ದು.

ಲೋಕದ ಡೊಂಕ ನೀವೇಕ ತಿದ್ದುವಿರಿ?
ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ;
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ.
ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ
ಕೊಡಲಸಂಗಮದೇವ
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-36/ವಚನ ಸಂಖ್ಯೆ-124)

ಎಂದು ನಮ್ಮ ಆತ್ಮ ವಿಮರ್ಷೆಗೆ ಒತ್ತು ನೀಡುತ್ತಾರೆ.

ಮಡಕೆ ದೈವ, ಮೊರ ದೈವ, ಬೀದಿಯ ಕಲ್ಲು ದೈವ,
ಹಣಿಗೆ ದೈವ, ಬಿಲ್ಲನಾರಿ ದೈವ ಕಾಣಿರೂ!
ಕೊಳಗ ದೈವ, ಗಿಣ್ಣಿಲು ದೈವ, ಕಾಣಿರೋ!
ದೈವ ದೈವವೆಂದು ಕಾಲಿಡಲಿಂಬಿಲ್ಲ,
ದೈವನೊಂಬೆನೆ ಕೊಡಲಸಂಗಮದೇವ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-151/ವಚನ ಸಂಖ್ಯೆ-562)

ಎನ್ನುವ ಮೂಲಕ ಏಕದೇವೋಪಾಸನೆಗೆ ನಮ್ಮ ಅಂಗದಲ್ಲಿ ಸಾಹಿತ್ಯವಾದ ಇಷ್ಟ ಲಿಂಗ ಉಪಾಸನೆಗೆ ನೀಡಿದ್ದಾರೆ.

ವಾರವೆಂದರಿಯೆ, ದಿನವೆಂದರಿಯೆ,
ಏನೆಂದರಿಯೆನಯ್ಯಾ.
ಇರುಳೆಂದರಿಯೆ, ಹಗಲೆಂದರಿಯೆ,
ಏನೆಂದರಿಯೆನಯ್ಯಾ.
ನಿಮ್ಮ ಪೂಜಿಸಿ ಎನ್ನುವ ಮರೆದೆ
ಕೂಡಲಸಂಗಮದೇವಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-127/ವಚನ ಸಂಖ್ಯೆ-490)

ಎಂದು ವಾರ ತಿಥಿ ನಕ್ಷತ್ರ ಮತ್ತು ಶುಭ ಅಶುಭ ದಿನವೆನ್ನುವ ಮೌಡ್ಯತೆಯನ್ನು ನಿರಾಕರಿಸ್ತಾರೆ ಅದರ ಬದಲು …

ಎಮ್ಮವರು ಬೆಸಗೊಂಡಡೆ ಶುಭಲಗ್ನವೆನ್ನಿರಯ್ಯಾ,
ರಾಶಿಕೂಟ ಋಣಸಂಬಂಧವುಂಟೆಂದು ಹೇಳಿರಯ್ಯಾ,
ಚಂದ್ರಬಲ ತಾರಾಬಲವುಂಟೆಂದು ಹೇಳಿರಯ್ಯಾ,
ನಾಳಿನ ದಿನಕಿಂದನ ದಿನ ಲೇಸೆಂದು ಹೇಳಿರಯ್ಯಾ,
ಕೂಡಲಸಂಗಮದೇವನ ಪೂಜಿಸಿದ ಫಲ ನಿಮ್ಮದಯ್ಯಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-26/ವಚನ ಸಂಖ್ಯೆ-83)

ಎನ್ನುವ ಮೂಲಕ ಕಾಯಕಕ್ಕೆ ಇಂದಿನ ದಿನವೇ ಶುಭವಾದದ್ದು ಅಂತ ಹೇಳಿದ್ದಾರೆ.

ಹೀಗೆಯ ಬಸವಣ್ಣನವರ ವ್ಯಕ್ತಿತ್ವವನ್ನು ಒಂದು ಚೌಕಟ್ಟಿನಲ್ಲಿ ಹೇಳಲು ಅಸಾಧ್ಯ. ನವ ಸಮಾಜದ, ಸಮ ಸಮಾಜದ ನಿರ್ಮಾಣಕ್ಕೆ ಇದ್ದ ಅಡೆ ತಡೆಗಳನ್ನು ಒತ್ತಿ ಹೇಳಿ ಅವುಗಳನ್ನು ನಿರ್ಣಾಮ ಮಾಡಲು ಒಂದು ಉದಾತ್ತ ಮಾರ್ಗವನ್ನು 900 ವರ್ಷಗಳ ಹಿಂದೆಯ ಹಾಕಿ ಕೊಟ್ಟಿರುವದು ಗಮನಾರ್ಹ. ಅದನ್ನು ಉಳಿಸಿ ಬೆಳೆಸಬೇಕಾಗಿದ್ದು ನಮ್ಮ ನಿಮ್ಮೆಲ್ಲರ ಕರ್ತವ್ಯ. ಇಂದಿನ ದಿನದಿಂದಲೆ ನಿಜವಾದ ಬಸವ ಅನುಯಾಯಿಗಳ ಜವಾಬ್ದಾರಿ ಹೆಚ್ಚಾಗುತ್ತದೆ. ಈ ಪ್ರಸ್ತುತ ವಿದ್ಯಮಾನಗಳಲ್ಲಂತೂ ನಾವೆಲ್ಲರು ಒಗ್ಗಟ್ಟಿನಿಂದ ತುಂಬಾ ಎಚ್ಚರಿಕೆಯಿಂದ ಹೆಜ್ಜೆ ಹಾಕಬೇಕಾಗಿದೆ.

ಶ್ರೀಮತಿ. ಅನುಪಮ ಪಾಟೀಲ,
ನಂ. 10, ದೇಸಾಯಿ ಪಾರ್ಕ್‌,
ಕುಸೂಗಲ್‌ ರಸ್ತೆ, ಕೇಶ್ವಾಪೂರ,
ಹುಬ್ಬಳ್ಳಿ – 580 023.
ಮೋ. ಸಂ. +91 9845810708.

 ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
 “ವಚನಸಾಹಿತ್ಯ ಮಂದಾರ ಫೌಂಡೇಶನ್” ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in / admin@vachanamandara.in

Loading

Leave a Reply