“ಸಾವಿರ ವ್ರತ-ಸಾಧನೆಯ ಫಲಗಳನ್ನೂ ಮಣ್ಣುಗೂಡಿಸುವ ಒಂದು ಹಾದರ” ಡಾ. ಬಸವರಾಜ ಸಾದರ,ಬೆಂಗಳೂರು.

ಅಮಾಯಕ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಎಸಗಿದ ಆರೋಪಕ್ಕೆ ಗುರಿಯಾದ ‘ಕೆಲವು’ ಮಠಾಧಿಪತಿಗಳ ಬಗ್ಗೆ ಇತ್ತೀಚೆಗೆ ಸಾಮಾಜಿಕ ಜಾಲತಾಣವೊಂದರಲ್ಲಿ ಮುಕ್ತ ಚರ್ಚೆ ನಡೆಯುತ್ತಿತ್ತು. ಸಹಜವಾಗಿಯೇ ಅಲ್ಲಿ ಪರ ಮತ್ತು ವಿರೋಧದ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದವು. ಅದರಲ್ಲಿ ಒಂದು ಪಕ್ಷದವರು ಅತ್ಯಾಚಾರಿ ಸ್ವಾಮಿಗಳನ್ನು ಅವಾಚ್ಯ ಶಬ್ದಗಳಿಂದ ಬಯ್ಯುತ್ತಿದ್ದರೆ, ಮತ್ತೊಂದು ಕಡೆಯವರು ಅವರನ್ನೇ ಸಮರ್ಥಿಸಿಕೊಳ್ಳುತ್ತಿದ್ದರು. ಸಮರ್ಥನೆ ಮಾಡಿಕೊಳ್ಳುತ್ತಿದ್ದವರು ತಮ್ಮ ಮಾತುಗಳಿಗೆ ಕೊಡುತ್ತಿದ್ದ ಸಾಕ್ಷಿಗಳು ಅಚ್ಚರಿ ಮೂಡಿಸುವಂತಿದ್ದವು. ಕೆಲವೆಂದರೆ:

• ಪಟ್ಟಾಭಿಷೇಕವಾದ ದಿನದಿಂದ ಈವರೆಗೂ ನಮ್ಮ ಸ್ವಾಮಿಗಳು ಮಾಡಿರುವ ಸಮಾಜೋಪಯೋಗಿ ಕೆಲಸಗಳು ಸಾವಿರಾರು.
• ನೂರಾರು ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿದ್ದಾರೆ.
• ಉಚಿತ ಪ್ರಸಾದ ನಿಲಯಗಳನ್ನು ನಡೆಸುತ್ತಿದ್ದಾರೆ.
• ನಿರಂತರ ದಾಸೋಹ ಮಾಡುತ್ತಿದ್ದಾರೆ.
• ಸಾಮೂಹಿಕ ಮತ್ತು ವಿಧವಾ ವಿವಾಹಗಳನ್ನು ಏರ್ಪಡಿಸಿದ್ದಾರೆ.
• ಪುಸ್ತಕಗಳನ್ನು ಬರೆದಿದ್ದಾರೆ.
• ಸರ್ವಧರ್ಮ ಸಭೆಗಳನ್ನು ನಡೆಸಿದ್ದಾರೆ.
• ಪಾದಯಾತ್ರೆ ಮಾಡಿದ್ದಾರೆ.
• ಲಕ್ಷಾಂತರ ಜನರಿಗೆ ದೀಕ್ಷೆ ಕೊಟ್ಟಿದ್ದಾರೆ.

ಇತ್ಯಾದಿ ಇತ್ಯಾದಿ. ಈ ಯಾದಿಗೆ ಪೂರಕವಾಗಿ ಸಾಕಷ್ಟು ಅಂಕಿ-ಸಂಖ್ಯೆಗಳನ್ನೂ ಒದಗಿಸುತ್ತಿದ್ದ ಅವರು, ಕೊನೆಗೆ ಹೇಳಿದ ಮಾತೆಂದರೆ – ಇಷ್ಟೆಲ್ಲ ಮಾಡಿದ ನಮ್ಮ ಸ್ವಾಮಿಗಳು ಕೇವಲ ಅದೊಂದೇ ಒಂದು (ಅತ್ಯಾಚಾರದ) ಸಣ್ಣ ತಪ್ಪು ಮಾಡಿದ್ದನ್ನು ನಮ್ಮ ಜನ ಹೊಟ್ಟೆಯಲ್ಲಿ ಹಾಕಿಕೊಳ್ಳುತ್ತಿಲ್ಲವಲ್ಲ?’ ಎಂಬುದು!

ಆ ಚರ್ಚೆಯಲ್ಲಿ ಒಂದೆಡೆ ಅತಿಯಾದ ಆಕ್ರೋಶವೇ ಇದ್ದರೆ, ಮತ್ತೊಂದು ಕಡೆ ಇದ್ದದ್ದು ಎಲ್ಲಿಲ್ಲದ ಅಂಧಾಭಿಮಾನ. ಇಂಥ ಅತಿರೇಕಗಳ ಗದ್ದಲದಲ್ಲಿ, ಅತ್ಯಾಚಾರವೆಸಗಿದ ಸ್ವಾಮಿಗಳ ಕುಕೃತ್ಯವನ್ನು ಮಠವೆಂಬ ಪವಿತ್ರ ಸ್ಥಾನದ ಹಿನ್ನೆಲೆಯಲ್ಲಿ ತೂಗುವ ಹಾಗೂ ಪೀಠದಲ್ಲಿ ಕುಳಿತವರು ಪಾಲಿಸಲೇಬೇಕಾದ ನೈತಿಕತೆಯ ನೆಲೆಯಲ್ಲಿ ವಿವೇಚಿಸಿ, ಸಮಚಿತ್ತದ ಅಭಿಪ್ರಾಯಗಳನ್ನು ಮಂಡಿಸುವ ಶುದ್ಧ ವಿವೇಕ ಎರಡೂ ಪಕ್ಷಗಳ ಜನರಲ್ಲಿ ಇದ್ದಿರಲಿಲ್ಲವೆಂಬುದು ದುರಂತದ ಸಂಗತಿ. ಕೊನೆಯಪಕ್ಷ, ಆ ಸ್ವಾಮಿಗಳು ಶರಣ ಪರಂಪರೆಯ ಮಠಗಳ ಪೀಠಾಧಿಪತಿಗಳು, ಅಲ್ಲಿ ಸನ್ಯಾಸತ್ವಕ್ಕೆ ಅವಕಾಶವೇ ಇಲ್ಲ, ಶರಣ ಧರ್ಮವು ಸಾಂಸಾರಿಕ ಬದುಕಿಗೇ ಅತ್ಯಂತ ಮಹತ್ವ ಕೊಡುತ್ತದೆ, ಇವರಿಗೆ ಸನ್ಯಾಸಿಯಾಗಲು ಹೇಳಿದವರು ಯಾರು? ಕೂಡಲೇ ಮಠ ಬಿಟ್ಟು ಹೋಗಿ ಮದುವೆಯಾಗಿ ಸುಂದರ ಬದುಕು ಕಟ್ಟಿಕೊಂಡರೆ ಅವರ ಮಾನವೂ ಉಳಿಯುತ್ತದೆ, ಶರಣ ಪರಂಪರೆಗೂ ಗೌರವ ಸಿಗುತ್ತದೆ – ಎಂಬಂಥ ವೈಚಾರಿಕ ವಾಸ್ತವಗಳ ಬಗ್ಗೆ ಅಲ್ಲಿ ಚರ್ಚೆ ನಡೆದಿದ್ದರೆ ಅದಕ್ಕೊಂದು ತಾರ್ಕಿಕ ನೆಲೆಗಟ್ಟು ಪ್ರಾಪ್ತವಾಗಬಹುದಿತ್ತು. ಆದರೆ, ಅಲ್ಲಿ ಹಾಗಿರಲಿಲ್ಲ. ಅಲ್ಲಿದ್ದದ್ದು ಪರ ಮತ್ತು ವಿರೋಧ ಹಾಗೂ ಸ್ವಕೀಯ ಮತ್ತು ಪರಕೀಯವೆಂಬ ಹಿತಾಸಕ್ತಿಗಳು ಮಾತ್ರ. ಹೀಗಾಗಿ ಇಡೀ ಚರ್ಚೆ ಒಂದು “ಮೋಜಿನ” ನಾಟಕದಂತೆಯೇ ಭಾಸವಾಗುತ್ತಿತ್ತು. ಅದು ಮೋಜಿನದಾಗಲು ಮುಖ್ಯ ಕಾರಣ, ಸ್ವಾಮಿಗಳು ಎಸಗಿದ ಅತ್ಯಾಚಾರವೇ ಎಂಬುದನ್ನು ಮರೆಯದೇ ಪ್ರಸ್ತಾಪಿಸಲೇಬೇಕು.

ಕನಿಷ್ಠ ಮಟ್ಟದ ವಿವೇಚನೆಯೂ ಇಲ್ಲದೆ ನಡೆಯುತ್ತಿದ್ದ ಆ ಚರ್ಚೆಯನ್ನು ಗಮನಿಸುತ್ತಿದ್ದಾಗ, ಥಟ್ಟನೆ ನೆನಪಿಗೆ ಬಂದದ್ದು ಸ್ವತಂತ್ರ ಸಿದ್ಧಲಿಂಗೇಶ್ವರರ ಒಂದು ವಚನ. ವರ್ತಮಾನದ ಸಂದರ್ಭದಲ್ಲಿ ನೂರಕ್ಕೆ ನೂರು ಪ್ರಸ್ತುತವಾಗುವ ಆ ವಚನ ಹೀಗಿದೆ.

ನಿಚ್ಚ ಸಾವಿರ ನೋಂಪಿಯ ನೋಂತು,
ಒಂದು ದಿನ ಹಾದರವನಾಡಿದರೆ,
ಆ ನೋಂಪಿಯು ತನಗೆ ಫಲಿಸುವುದೇ ಅಯ್ಯಾ?
ಹಲವು ಕಾಲ ಗುರು ಲಿಂಗ ಜಂಗಮವನರ್ಚಿಸಿ ಆರಾಧಿಸುತ್ತ,
ಒಮ್ಮೆಯಾದರು ದೂಷಣೆಯ ಮಾಡಿದಡೆ,
ಆ ಪೂಜಾಫಲ ತಮಗೆ ಸಿದ್ಧಿಸುವುದೇ? ಸಿದ್ಧಿಸದಾಗಿ.
ಅನೇಕ ಆಯಾಸದಲ್ಲಿ ಗಳಿಸಿದ ಧನವ,
ನಿಮಿಷದಲ್ಲಿ ಅರಸು ದಂಡವ ಕೊಂಡಂತಾಯಿತ್ತು ಇವರ ಭಕ್ತಿ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ
ನಿಮ್ಮ ಒಲವಿಲ್ಲದ ಕಾರಣ.
(ಸಮಗ್ರ ವಚನ ಸಂಪುಟ: ಹನ್ನೊಂದು-2021/ಪುಟ ಸಂಖ್ಯೆ-456/ವಚನ ಸಂಖ್ಯೆ-894)


ಈ ವಚನದಲ್ಲಿ ಬರುವ ಶಬ್ದಗಳ ಪಾರಿಭಾಷಿಕ ಅರ್ಥ.
ನಿಚ್ಚ: ಪ್ರತಿದಿನ, ಸಂದು ಬಿಡದೆ.
ನೋಂಪಿ: ವೃತ.
ಆಯಾಸ: ಅಡ್ಡಮಾರ್ಗ (ಈ ವಚನದ ಆಶಯದಂತೆ)

ಸ್ವಾಮಿಗಳೇ ಇರಲಿ, ಸಾಮಾನ್ಯರೇ ಇರಲಿ, ಶ್ರದ್ಧೆ-ನಿಷ್ಠೆಗಳಿಂದ ನಿರಂತರ ವ್ರತ ಮತ್ತು ಸಾಧನೆಗಳನ್ನು ಮಾಡುತ್ತ ಬಂದವರು, ಕೊನೆಗೆ ಒಮ್ಮೆ ಮಾತ್ರ ಹಾದರ ಮಾಡಿದರೂ ಆ ದೀರ್ಘಕಾಲದ ವ್ರತಗಳಿಗೆ ಯಾವ ಫಲವೂ ದೊರೆಯಲಾರದು ಎಂಬುದೇ ಇಲ್ಲಿರುವ ಪ್ರಧಾನ ಚಿಂತನೆ. ಸ್ವತಂತ್ರ ಸಿದ್ಧಲಿಂಗೇಶ್ವರರು ಅದನ್ನೇ ಇಲ್ಲಿ ‘ಆ ನೋಂಪಿಯು ತನಗೆ ಫಲಿಸುವುದೇ ಅಯ್ಯ?’ ಎಂದು ಕೇಳಿ, ಅದು ‘ಸಾಧ್ಯವಿಲ್ಲ’ ಎಂಬ ಉತ್ತರವನ್ನು ಆ ಪ್ರಶ್ನೆಯಲ್ಲಿಯೇ ಧ್ವನಿಸುತ್ತಾರೆ. ಸತ್ಯ ಸ್ಥಿತಿ ಹೀಗಿರುವಾಗ, ‘ಅಷ್ಟೆಲ್ಲ ಸಾಧನೆ ಮಾಡಿದ್ದಾರೆ, ಒಮ್ಮೆ ಅತ್ಯಾಚಾರ ಮಾಡಿದರೆ ಏನಾಯ್ತು?’ ಎನ್ನುತ್ತ, ಅತ್ಯಾಚಾರಿಗಳ ಕುಕೃತ್ಯಗಳನ್ನೂ ಸಮರ್ಥಿಸುವ ನಿರ್ಲಜ್ಜರಿದ್ದಾರಲ್ಲ! ಅದೇ ಅಚ್ಚರಿ ಮತ್ತು ಸೋಜಿಗ!! ಇಂಥ ನಡೆ ಪರೋಕ್ಷವಾಗಿ ಅತ್ಯಾಚಾರಕ್ಕೆ ಪ್ರೇರಣೆ ಒದಗಿಸಿದಂತೆಯೇ. ಅಷ್ಟೇ ಅಲ್ಲ, ಹಾದರಕ್ಕೆ ರಿಯಾಯತಿ ತೋರಿಸುವುದು ಮತ್ತೊಂದು ಹಾದರ ಮಾಡಿದ್ದಕ್ಕೇ ಸಮನಾಗಲಾರದೆ? ‘ಎಲ್ಲ ಬಣ್ಣಗಳನ್ನೂ ಮಸಿಯೇ ನುಂಗಿತು’ ಎನ್ನುವಂತೆ, ಒಬ್ಬ ವ್ಯಕ್ತಿ ಏನೇ ಸಾಧನೆ ಮಾಡಿದರೂ ಒಮ್ಮೆ ಎಸಗುವ ಅತ್ಯಾಚಾರವೂ ಆತನ ಇಡೀ ವ್ಯಕ್ತಿತ್ವಕ್ಕೇ ಕಳಂಕ ತರುತ್ತದೆಯೆಂಬುದು ಸತ್ಯವಲ್ಲವೆ? ಇದನ್ನೇ ಸ್ವತಂತ್ರ ಸಿದ್ಧಲಿಂಗೇಶ್ವರರು ತಮ್ಮ ಈ ವಚನದಲ್ಲಿ ನೇರ ಶಬ್ದಗಳಲ್ಲಿ ಸಾರಿ ಸಾರಿ ಹೇಳಿದ್ದಾರೆ.

ವಚನದ ಮುಂದಿನ ಭಾಗವೆಲ್ಲವೂ ಮೊದಲಿನ ಎರಡು ಪಂಕ್ತಿಗಳಲ್ಲಿರುವ ಚಿಂತನೆಯನ್ನೇ ಅತ್ಯಂತ ಸೂಕ್ತ, ವೈಚಾರಿಕ ಮತ್ತು ತಾರ್ಕಿಕ ಉದಾಹರಣೆಗಳೊಂದಿಗೆ ಪುಷ್ಠೀಕರಿಸುತ್ತದೆ. ಇಲ್ಲಿ ಧಾರ್ಮಿಕ ಮತ್ತು ರಾಜಕೀಯ ಎರಡೂ ವಲಯಗಳನ್ನು ಪ್ರಸ್ತಾಪಿಸುವ ಸ್ವತಂತ್ರ ಸಿದ್ಧಲಿಂಗೇಶ್ವರರು, ಆ ಮೂಲಕ ಯಾವ ಕ್ಷೇತ್ರದಲ್ಲಾದರೂ ನೈತಿಕತೆ ಮತ್ತು ಶುದ್ಧ ನಡೆ ಅತ್ಯಗತ್ಯವೆಂಬುದನ್ನು ಅರ್ಥಪೂರ್ಣವಾಗಿ ಧ್ವನಿಸುತ್ತಾರೆ. ದೀರ್ಘಕಾಲದಿಂದ ಗುರು, ಲಿಂಗ, ಜಂಗಮರನ್ನು ಭಕ್ತಿ-ಗೌರವದಿಂದ ಪೂಜಿಸುತ್ತ ಬಂದು, ಕೊನೆಗೊಮ್ಮೆ ಅವರನ್ನು ನಿಂದಿಸಿದರೆ, ಅಷ್ಟೂ ದಿನಗಳ ಪರ್ಯಂತ ಮಾಡಿದ ಭಕ್ತಿ ಮತ್ತು ಆರಾಧನೆ ನಿಷ್ಫಲವಾಗುತ್ತದೆ ಎನ್ನುತ್ತಾರೆ ಅವರು. ಇದನ್ನು ಒಬ್ಬ ವ್ಯಕ್ತಿಯು ಅನೇಕ ಆಯಾಸದಲ್ಲಿ (ಅನೇಕ ಆಯಾಸದಲ್ಲಿ ಎಂಬ ಶಬ್ದವು, ಅಡ್ಡಮಾರ್ಗಗಳಲ್ಲಿ ಎಂಬ ಅರ್ಥವನ್ನೂ ಒಳಗೊಳ್ಳುವುದನ್ನು ಗಮನಿಸಬೇಕು) ಗಳಿಸಿದ ಕಳ್ಳ ಸಂಪಾದನೆಯನ್ನು ರಾಜನು ಒಂದೇ ಕ್ಷಣದಲ್ಲಿ ದಂಡದ ರೂಪದಲ್ಲಿ ಕಿತ್ತುಕೊಳ್ಳುವುದಕ್ಕೆ ಹೋಲಿಸುತ್ತಾರೆ. ಅಂದರೆ, ಅಡ್ಡಮಾರ್ಗದ (ಹಾದರದಂತೆಯೇ) ಸಂಪಾದನೆಯು ಒಮ್ಮೆ ಮಾಡಿದ್ದಾದರೂ ಅದು ಎಂದಿಗೂ ಅನರ್ಥಕಾರಿಯೇ ಆಗುತ್ತದೆಯೆಂಬುದು ಇಲ್ಲಿರುವ ಪ್ರಧಾನ ಅರ್ಥ. ಅದರಿಂದ ಅತ್ಯಾಚಾರಿಗಳ ಮಾನ-ಮರ್ಯಾದೆ ಎಲ್ಲವೂ ಹರಾಜಾಗುವುದಂತೂ ಖಚಿತ.

ವಚನದ ಅಂತಿಮ ಆಶಯವೆಂದರೆ, ಪ್ರತಿಯೊಬ್ಬ ವ್ಯಕ್ತಿ ತನ್ನ ಜೀವನದುದ್ದಕ್ಕೂ ಶುದ್ಧ ಶ್ರದ್ಧೆಯಿಂದ ಬದುಕು ನಡೆಸಬೇಕು, ಎಲ್ಲಿಯೂ ಅಡ್ಡದಾರಿ ತುಳಿಯಬಾರದು ಎಂಬುದು. ತನ್ನ ವ್ಯಕ್ತಿತ್ವ, ಸಮಾಜವು ತನಗೆ ಕೊಟ್ಟಿರುವ ಸ್ಥಾನ, ತಾನು ಉಳಿಸಿಕೊಳ್ಳಬೇಕಾದ ಮಾನ, ಇಟ್ಟುಕೊಳ್ಳಬೇಕಾದ ಉನ್ನತ ಗುರಿ, ಸಾಗಬೇಕಾದ ನೈತಿಕ ಮಾರ್ಗ, ಮಾಡಬೇಕಾದ ಎತ್ತರದ ಸಾಧನೆ-ಎಲ್ಲವುಗಳಲ್ಲೂ ಆತ ನಿಷ್ಠೆಯುಳ್ಳವನೂ, ಪ್ರಾಮಾಣಿಕನೂ ಆಗಿರಬೇಕೆಂಬುದೇ ಇಲ್ಲಿನ ಒಟ್ಟು ಆಶಯ-ಅಪೇಕ್ಷೆ. ಒಂದಿಷ್ಟು ಒಳ್ಳೆಯ ಕೆಲಸಗಳನ್ನು ಮಾಡಿ, ಅವುಗಳ ಛಾಯೆಯಲ್ಲಿಯೇ ಹಾದರದಂಥ ಕೆಟ್ಟ ಕೃತ್ಯಗಳಿಗೆ ಕೈಹಾಕುವುದು ಅನೀತಿಯಷ್ಟೇ ಅಲ್ಲ, ಅದು ಅವಮರ್ಯಾದೆಗೂ ಕಾರಣವಾಗುತ್ತದೆ. ಇದನ್ನೆಲ್ಲ ಮರೆತು, ಅಡ್ಡದಾರಿ ಹಿಡಿದವರಿಗೆ ಎಂಥ ಗತಿಯಾಗುತ್ತದೆಯೆಂಬುದು ಎಲ್ಲರಿಗೂ ತಿಳಿದ ಸಂಗತಿಯೆ. ಇಲ್ಲಿ ರಾಜಕೀಯದಲ್ಲಿರುವವರಿಗೆ ಹಾಗೂ ಧರ್ಮಪೀಠದಲ್ಲಿ ಕುಳಿತವರಿಗೆ ಇನ್ನೂ ಹೆಚ್ಚಿನ ಜವಾಬ್ದಾರಿ ಇರುತ್ತದೆ. ವಚನಕಾರ ಕಿನ್ನರಿ ಬ್ರಹ್ಮಯ್ಯನವರು ಇದನ್ನೇ ‘ಅರಮನೆ ಗುರುಮನೆ ಹಿರಿದಾದ ಕಾರಣ ಹಾದರ ಸಲ್ಲದು ಕಾಣಾ ತ್ರಿಪುರಾಂತಕಲಿಂಗವೆ!’ ಎಂದು ತುಂಬ ಅರ್ಥವತ್ತಾಗಿ ಹೇಳುತ್ತಾನೆ. ಅರಮನೆ-ಗುರುಮನೆಗಳನ್ನು ಜನ ಮತ್ತು ಸಮಾಜ ಅತ್ಯಂತ ಸೂಕ್ಷ್ಮವಾಗಿ ಗಮನಿಸುವ ಕಾರಣಕ್ಕೆ ಅಲ್ಲಿರುವವರು ಸದಾ ಎಚ್ಚರದಿಂದ ಇರಬೇಕಾಗುತ್ತದೆ. ಅಲ್ಲಿ ಹಾದರ ನಡೆದರೆ, ಜಗತ್ತೇ ನಗುತ್ತದೆ, ಅಪಹಾಸ್ಯ ಮಾಡುತ್ತದೆ.

ಈ ಸತ್ಯಗಳನ್ನೆಲ್ಲ ಅನುಭಾವಿಕ ನೆಲೆಯಲ್ಲಿಯೇ ಬಿಚ್ಚಿ ಹೇಳುವ ಸ್ವತಂತ್ರ ಸಿದ್ಧಲಿಂಗೇಶ್ವರರು, ಏನೆಲ್ಲ ಸಾಧನೆ ಮಾಡಿದ ಮಹಾನ್ ವ್ಯಕ್ತಿಯೂ ಒಮ್ಮೆ ಅತ್ಯಾಚಾರದಂಥ ಕುಕೃತ್ಯವನ್ನು ಎಸಗಿದರೂ ಆಗುವ ಪರಿಣಾಮ ಎಂಥದ್ದು ಎಂಬುದನ್ನು ಮುಕ್ತ ಮತ್ತು ವೈಚಾರಿಕ ಉದಾಹರಣೆಗಳೊಂದಿಗೆ ಕಟ್ಟಿಕೊಡುತ್ತಾರೆ ಈ ವಚನದಲ್ಲಿ. ಇದುವೇ ಶರಣರ ‘ವ್ಯಕ್ತಿ‌ ನೀತಿ ಸಂಹಿತೆ.’ ಅದು ಸಮಾಜದ ‘ಸುವ್ಯವಸ್ಥೆಯ ನೀತಿ ಸಂಹಿತೆ’ ಯೂ ಕೂಡ. ಇದನ್ನು ಪ್ರಚುರಪಡಿಸಿ, ವ್ಯಕ್ತಿ ಮತ್ತು ಸಮಾಜ ಎರಡರಲ್ಲೂ ನೈತಿಕತೆಯನ್ನು ಬಿತ್ತಿದ ಶರಣರು ಆ ಮೂಲಕ ಸಾಮುದಾಯಿಕ ಬದುಕನ್ನು ಶುದ್ಧ ಮತ್ತು ಹಸನಾಗಿಡುವ ಅನನ್ಯ ಕಾರ್ಯ ಮಾಡಿದರು. ಅತ್ಯಾಚಾರ ಎಸಗಿ ಜೇಲು ಸೇರುವ ಯಾವುದೇ ಹಾದರಿಗರಿಗೆ ಸ್ವತಂತ್ರ ಸಿದ್ಧಲಿಂಗೇಶ್ವರರ ಈ ಎಲ್ಲ ಚಿಂತನೆಗಳು ಪಾಠವಾಗಬೇಕು. ಹಾಗಾದರೆ ಅವರಿಗೂ ಹಿತ, ಸಮಾಜಕ್ಕೂ ಹಿತ. ಹಾಗೆ ಪಾಠವಾಗಲಿ ಎಂಬುದೇ ಇಲ್ಲಿರುವ ಗಾಢ ಅಪೇಕ್ಷೆ ಕೂಡ.

ಡಾ. ಬಸವರಾಜ ಸಾದರ.
ನಿಲಯದ ನಿರ್ದೇಶಕರು (ನಿ), ಆಕಾಶವಾಣಿ, ಬೆಂಗಳೂರು.
303, ಎಸ್. ಎಲ್. ವಿ. ತೇಜಸ್‌, 3 ನೇ ಮಹಡಿ,
2 ನೇ ಅಡ್ಡ ರಸ್ತೆ, ಭುವನೇಶ್ವರಿ ನಗರ,
(ಹೆಬ್ಬಾಳ-ಕೆಂಪಾಪೂರ)
ಬೆಂಗಳೂರು – 560 024
ಮೋಬೈಲ್‌ ಸಂ. +91 98869 85847

 ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
 ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in

Loading

This Post Has One Comment

  1. ಗೀತಯೋಗಿ

    ಮನತಟ್ಟುವ ಲೇಖನ. ವಂದನೆಗಳು ಸರ್.

Leave a Reply