ಸಿದ್ಧರಾಮೇಶ್ವರರ ವಚನಗಳಲ್ಲಿ ಸದಾಚಾರ/ಶಿವಶರಣಪ್ಪ ಮದ್ದೂರ್,ಬೆಂಗಳೂರು

ಬಸವ ಪೂರ್ವದಲ್ಲಿ ಕೇವಲ ಜ್ಞಾನಕ್ಕೆ ಬಹಳ ಪ್ರಾಮುಖ್ಯತೆಯನ್ನು ಕೊಡಲಾಗಿತ್ತು. ಜ್ಞಾನ ಮತ್ತು ಕ್ರಿಯೆ ಎರಡಕ್ಕೂ ಸಮಾನ ಪ್ರಾಮುಖ್ಯತೆ ಬಂದದ್ದು ಬಸವಣ್ಣವರಿಂದ. ಏನಯ್ಯಾ ವಿಪ್ರರು ನುಡಿದಂತೆ ನಡೆಯರು ತಮಗೊಂದು ಬಟ್ಟೆ ಶಾಸ್ತ್ರಕ್ಕೊಂದು ಬಟ್ಟೆ, ನುಡಿಯೊಳಗಾಗಿ ನಡೆಯದಿದ್ದರೆ ಕೂಡಲಸಂಗಮದೇವ ನೆಂತೊಲಿವನನಯ್ಯ ಎಂದು ನುಡಿ(ಜ್ಞಾನ) ಮತ್ತು ನಡೆ (ಕ್ರಿಯೆ) ಎರಡಕ್ಕೂ ಸಮತ್ವವನ್ನು ತಂದು ಕೊಟ್ಟರು.

ಜ್ಞಾನವು ಸತ್ಯದ ಅರಿವಾದರೆ ಕ್ರಿಯೆಯು ಸದಾಚಾರ (ಸತ್ಯದ-ಆಚಾರ) ವಾಯಿತು. ಜ್ಞಾನವೇ ಕ್ರಿಯೆ, ಕ್ರಿಯೆಯೇ ಜ್ಞಾನ ಎನ್ನುವಷ್ಟರ ಮಟ್ಟಿಗೆ ಸಮನ್ವಯವಾಯಿತು. ಅಲ್ಲಮರೊಂದಿಗೆ ಕಲ್ಯಾಣಕ್ಕೆ ಬಂದ ಸೊನ್ನಲಿಗೆ ಸಿದ್ಧರಾಮರು, ಅರಿವು ಮತ್ತು ಆಚಾರದ ಸಮನ್ವಯತೆಯ ಮಹತ್ವವನ್ನು ಕಂಡು ಸದಾಚಾರಿಗಳಾದರು. ನಾನೆಂಬ ಮನಸ್ಸೂತಕ ಕಳೆದುಕೊಂಡು ನಿರ್ಮಳ ಜ್ಞಾನಿಯಾದರು. ಕರ್ಮಯೋಗಿ ಯಾಗಿದ್ದ ಸಿದ್ಧರಾಮರು ಶಿವಯೋಗಿಯಾದರು. ಅರಿವು-ಆಚಾರದಿಂದೊಡಗೂಡಿದ ಸದಾಚಾರಿಗಳಾದರು. ಅವರ ಅನುಭಾವವನ್ನು ಶಬ್ದಕ್ಕೆ ತಂದರು. ಕೇವಲ ಜ್ಞಾನಿಯಾಗುವದರಿಂದ ಯಾರಿಗೂ ಏನೂ ಪ್ರಯೋಜನವಿಲ್ಲ. ಅರಿವಿನಿಂದೊಡಗೂಡಿದ ಆಚಾರವೊಂದೇ  ಸತ್ಯದ ಮಾರ್ಗವೆಂದು ಸಾರಿದರು. 

ವೇದ ವೇದಾಂತವನೋದಿದಡೇನು ಮನಸ್ಸೂತಕವಳಿಯದನ್ನಕ್ಕ ? ಸಿದ್ಧ ಸಿದ್ಧಾಂತವ ಶ್ರಮಬಟ್ಟಡೇನು ಸಾಧಿಸು ಕೀರ್ತಿಯ ಪಡೆಯದನ್ನಕ ? ಇವೆಲ್ಲ ಹೊರಗಣ ಮಾತು. ಮಾತೊಂದೆ ನಮ್ಮ ಕಪಿಲಸಿದ್ಧಮಲ್ಲೇಶನಲ್ಲಿ ಸದಾಚಾರ ಸನ್ಮಾರ್ಗವಯ್ಯಾ.

ಜ್ಞಾನಕ್ಕೆ ತಕ್ಕ ಕ್ರಿಯೆಯಿಲ್ಲದೆ ಬರಿಯ ತತ್ವದ ಮಾತನಾಡಿದರೆ ಅದು ಪೊಳ್ಳು ಜ್ಞಾನ, ಢಂಬಾಚಾರ. ನುಡಿದಂತೆ ನಡೆಯುವ, ನಡೆದಂತೆ ನುಡಿಯುವ ಸಧ್ಭಕ್ತಿಯೇ ಸದಾಚಾರ.

ನುಡಿಯಬಹುದು ಅದ್ವೈತವನೊಂದುಕೋಟಿ ವೇಳೆಒಮ್ಮೆ ನಡೆಯಬಹುದೆ ನಿರ್ಧರವಾಗಿ ಸದ್ಭಕ್ತಿ ಸದಾಚಾರವ? ನುಡಿದಂತೆ ನಡೆವ, ನಡೆದಂತೆ ನುಡಿವ ಸದ್ಭಕ್ತಿ ಸದಾಚಾಯುಕ್ತ ಮಹಾತ್ಮರ ಪಾದವ ಹಿಡಿದು ಬದುಕಿಸಯ್ಯಾ, ಪ್ರಭುವೆ, ಕಪಿಲಸಿದ್ಧಮಲ್ಲಿಕಾರ್ಜುನಾ.

ಸುಜ್ಞಾನದಿಂದ ತನ್ನ ತಾನರಿತ ಸಾಧಕನಲ್ಲಿ ನಾನು ನನದೆಂಬ ಕೋಡುಗಳಿರುವ ಅಹಂಕಾರ (ಕೋಣ) ವಿಲ್ಲ, ಮನದಲ್ಲಿ ಚಂಚಲತೆಯಿಲ್ಲ, ನಾನು ನನದೆಂಬ ಕೋಡುಗಳುಳ್ಳ ಅಹಂಕಾರವಿಲ್ಲದೆ, ಮಾಡುವ ಮಾಟದಲ್ಲಿ ನಾನೆಂಬ ಭಾವವಿಲ್ಲವಾಗಿ ಆತ ಸದಾಚಾರಿ. ಅಂಗಗುಣಗಳಳಿದ ಮನವೇ ಲಿಂಗವಾದ ಕಾರಣ, ಆತ ಪ್ರಾಣಲಿಂಗಿ.

ನಿತ್ಯ ನಿತ್ಯ ಕೋಣವ ತಿನ್ನಬಲ್ಲಡೆ, ಸದಾಚಾರಿ ಜಂಗಮವೆಂಬೆ. ನಿತ್ಯ ನಿತ್ಯ ಕೋಡಗನ ಹಿಡಿದು ಆಡುಗಳ ತಿನಬಲ್ಲಡೆ ಪ್ರಾಣಲಿಂಗಿ ಎಂಬೆ ಕಪಿಲಸಿದ್ಧಮಲ್ಲಿಕಾರ್ಜುನ.

ತನ್ನ ತಾನರಿತ ಸಿದ್ಧರಾಮರು, ಇಷ್ಟ-ಪ್ರಾಣ-ಭಾವಲಿಂಗಗಳ ಮೂಲವನ್ನು ಕಂಡರು. ಲಿಂಗಕ್ಕೆ ಕೇವಲ ಮಜ್ಜನವನೆರೆಯದೆ ಮೌಢ್ಯತೆಗೊಳಗಾಗದೆ, ಸದಾಚಾರಿಗಳಾದರು. ಅರಿವು-ಆಚಾರದಲ್ಲಿಯೇ ಲಿಂಗವನ್ನು ಕಂಡರು.

ಸುಜ್ಞಾನದಲ್ಲಿ ಸದಾಚಾರ ಸಮನಿಸಬೇಕಾಯಿತ್ತಾದರೆ ಲಿಂಗತ್ರಯದ ನೆಲೆಯನರಿ, ಪಾದೋದಕ ಬ್ರಹ್ಮದ ಪ್ರಮಾಣವನರಿ, ಮಜ್ಜನಕ್ಕೆರೆವ ಭೇದವನರಿ, ಅಲ್ಲದ್ದಡೆ ನಿನಗನುಮಿಷತ್ವವನರಿ. ಅರಿಯದ್ದರೆ ಅಭ್ಯಾಸದಲ್ಲಿ ಎಲ್ಲರಂತಪ್ಪೆ, ಕಪಿಲಸಿದ್ಧಮಲ್ಲಿಕಾರ್ಜುನನಿಪ್ಪಿರವ ಕಾಣೆ

ಅಷ್ಟಾಂಗಯೋಗ ಮಾರ್ಗದಲ್ಲಿ ಸತ್ಯದರ್ಶನ ಸಾಧನೆ ಮಾಡಿದವರು ಎಲ್ಲೋ ಒಬ್ಬರು. ಎಲ್ಲರಿಗೂ ಅದು ಸುಲಭ ಸಾಧ್ಯವಲ್ಲ. ಆದರೆ ಸರಳವಾದ ಶಿವಯೋಗ ಮಾರ್ಗದಿಂದ ಸಾಧನೆ ಸುಲಭ. ತನ್ನ ಶಿವ-ಚೈತನ್ಯ ಸ್ವರೂಪದ ದರ್ಶನ ಮಾಡಿದ ಸಾಧಕನಿಗೆ  ಎಲ್ಲ ಜೀವ ಜಾಲಗಳಲ್ಲಿ ಅದೇ ಶಿವ-ಚೈತನ್ಯ ಕಾಣಬರುತ್ತದೆ. ಎಲ್ಲ ಜೀವ-ಜಂತುವಿನ ಮೇಲೆ ದಯೆ ಮೂಡಿ, ದಯೆಯೇ ಧರ್ಮದ ಮೂಲವಾಗಿ, ಸಕಲ ಜೀವಾತ್ಮರಿಗೆ ಲೇಸನೆ ಬಯಸುವ ಸದಾಚಾರಿಯಾಗುತ್ತಾನೆ. ಅರಿವಿನಿಂದ ಲಿಂಗ ಸ್ವರೂಪರಾದ ಭಕ್ತರು, ಸದಾಚಾರದಿಂದ ಲಿಂಗವೇ ಆಗುತ್ತಾರೆ,

ಯಮನಿಯಮಾಸನಧ್ಯಾನರೂಢ ಪ್ರಾಣಾಯಾಮ ಪ್ರತ್ಯಾಹಾರವೆಂಬ ಪಂಚಸಮಾಧಿಯಿಂ ಸಿಕ್ಕಿ ಅಜಲೋಕದ ಸುದ್ದಿಯನರಿವವರು ಎತ್ತಾನೊಬ್ಬರು. ಸುಲಭವೆ ಎಲ್ಲರಿಗೆ ಶಿವಲಿಂಗಭಕ್ತಿ? ಸುಲಭವೆ ಎಲ್ಲರಿಗೆ ಗುರುಚರಭಕ್ತಿ? ಸುಲಭವೆ ಎಲ್ಲರಿಗೆ ಜೀವ ಜಂತುವಿನ ಮೇಲೆ ದಯವುಳ್ಳದು? ಶಿವಂಗಾರ್ಚನೆಯ ಮಾಡಿ ಗುರುಚರಭಕ್ತಿ ಅಳವಟ್ಟ ಬಳಿಕ ಸರ್ವವು ತಾನಾಗಿರಬೇಕು. ಸದಾಚಾರ ಶಿವಾಚಾರ ನಿಹಿತಾಚಾರ ದಯಾಚಾರವುಳ್ಳವರಿಗೆ ಸರ್ವಯೋಗವಪ್ಪುದು; ಅವ್ಯಯಂಗೆ ಯೋಗ್ಯರಪ್ಪರು ನಿಮ್ಮ ಕೂಡಿ ದ್ವಯವಿಲ್ಲದೆ ಏಕವಪ್ಪರಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ

ಭೂಮಿಯ ಮೇಲಿನ ಹಾಳು ಬೆಟ್ಟವನ್ನೇ ಕೈಲಾಸವೆಂದು ತಿಳಿದು ಕೊಂಡು ತೀರ್ಥಯಾತ್ರೆ ಮಾಡುತ್ತಿದ್ದ ಮೂಢರಿಗೆ ಸದಾಚಾರವೇ ಕೈಲಾಸವೆಂಬುದನ್ನು ತೋರಿಸಿಕೊಟ್ಟರು.

ಕೈಲಾಸ ಕೈಲಾಸವೆಂದು ಬಡಿದಾಡುವ ಅಣ್ಣಗಳಿರಾ, ಕೇಳಿರಯ್ಯಾ. ಕೈಲಾಸವೆಂಬುದೊಂದು ಭೂಮಿಯೊಳಿರುವ ಹಾಳುಬೆಟ್ಟ. ಅಲ್ಲಿರುವ ಮುನಿಗಳೆಲ್ಲ ಜೀವಗಳ್ಳರು. ಅಲ್ಲಿರ್ದ ಚಂದ್ರಶೇಖರನು ಬಹು ಎಡ್ಡ. ಇದರಾಡಂಬರವೇಕಯ್ಯಾ? ಎಮ್ಮ ಪುರಾತರಿಗೆ ಸದಾಚಾರದಿಂದ ವರ್ತಿಸಿ, ಲಿಂಗಾಂಗ ಸಾಮರಸ್ಯವ ತಿಳಿದು, ನಿಮ್ಮ ಪಾದಪದ್ಮದೊಳು ಬಯಲಾದ ಪದವೆ ಕೈಲಾಸವಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.

ಲಿಂಗಾಂಗ ಸಾಮರಸ್ಯ ಮತ್ತು ಸದಾಚಾರದಿಂದ ತಾವಿರುವ ತಾಣವನ್ನೇ ಕೈಲಾಸವನ್ನಾಗಿ ಪರಿವರ್ತಿಸಿದ ಸಿದ್ಧರಾಮರು ಅಘಟಿತ ಘಟಿತರು, ವಿಪರೀತ ಚರಿತ್ರರು!

ಶಿವಶರಣಪ್ಪ ಮದ್ದೂರ್
ಬೆಂಗಳೂರು
ಫೋನ್ ನಂ:+91 89046 56742

Loading

Leave a Reply