ಹಡಪದ ಅಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮನವರ ವಚನ ವಿಶ್ಲೇಷಣೆ / ಪ್ರೊ. ಜಿ. ಎ.ತಿಗಡಿ, ಧಾರವಾಡ.

ದೇಹವನ್ನು ದಂಡಿಸಿ ಮರುಗಿಸಿ, ನಿದ್ರಾಹೀನರಾಗಿ, ವಿದ್ಯೆ ಕಲಿತು ಮನವನ್ನು ಗೆದ್ದನೆಂಬ ಬುದ್ಧಿಹೀನರೇ, ನೀವು ಕೇಳಿರೋ! ಶರಣರು ಮನವ ಗೆಲುವ ರೀತಿಯನ್ನು. ಕಾಮ ಕ್ರೋಧಾದಿಗಳನ್ನು ಇಲ್ಲವಾಗಿಸಿ ಲೋಭ, ಮೋಹ, ಮದ, ಮತ್ಸರಗಳನ್ನು ಕತ್ತರಿಸಿ ಹಾಕಿ, ಆಸೆ-ರೋಷಗಳನ್ನು ನಾಶಮಾಡಿ ಜಗದ ಬಂಧನವನ್ನು ತ್ಯಜಿಸಿದರು. ಮರುಗಿಸುವ ಕಾಯವನ್ನೇ ಪ್ರಸಾದ ಕಾಯವನ್ನಾಗಿ ಮಾಡಿದವರು ಶರಣರು. ಕೆಡುಕನ್ನುಂಟು ಮಾಡುವ ನಿದ್ರೆಯನ್ನೇ ಯೋಗ ಸಮಾಧಿಯನ್ನಾಗಿಸಿದರು. ಸುಖವನ್ನು ಹೀಯಾಳಿಸುತ್ತಾ ಜಗವನ್ನೇ ಗೆದ್ದ ನಮ್ಮ ಧೀರ ಶರಣರನ್ನು ನಿಮ್ಮಂಥ ಬುದ್ಧಿ ಹೀನರು ಅರಿಯಲು ಸಾಧ್ಯವೇ ಇಲ್ಲ ಎನ್ನುತ್ತಾರೆ ಹಡಪದ ಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮನವರು.

ಮನವನ್ನು ಗೆಲ್ಲುವ ಇಲ್ಲವೇ ಹತೋಟಿಯಲ್ಲಿಟ್ಟುಕೊಳ್ಳುವ ಬಗೆಯ ರೀತಿಯನ್ನು ಹಡಪದ ಅಪ್ಪಣ್ಣ ಪುಣ್ಯಸ್ತ್ರೀ ಲಿಂಗಮ್ಮನವರು ಈ ವಚನದಲ್ಲಿ ವಿವರಿಸಿದ್ದಾರೆ. ಮರ್ಕಟ ಸ್ವರೂಪಿ ಮನದ ಕುರಿತು ಋಷಿಮುನಿಗಳು, ಸಾಧುಸಂತರು, ಶರಣರು, ದಾಸರು, ಕವಿಗಳು, ಕೋವಿದರು, ಬಲ್ಲಿದರು ಮುಂತಾದವರು ಹಲವು ಬಗೆಯಲ್ಲಿ ಚಿಂತನ ಮಂಥನ ನಡೆಸಿದ್ದಾರೆ.   ಪ್ರತಿಯೊಬ್ಬರು ತಮ್ಮದೇ ಆದ ರೀತಿಯಲ್ಲಿ ಮನವನ್ನು ನಿಯಂತ್ರಿಸುವ ಅರಿವಿನ ಡಿಯಾಳಾಗಿ ವರ್ತಿಸುವದನ್ನು ಕುರಿತು ವಿವರಿಸಿದ್ದಾರೆ. ದೇಹವನ್ನು ದಂಡಿಸಿ ವೃತ ನಿಯಮಾದಿಗಳಿಂದ ಶರೀರವನ್ನು ಕರಗಿಸುತ್ತ ನಿದ್ದೆಯನ್ನು ನೈವೇದ್ಯ ಮಾಡಿ ಮನವ ಗೆಲ್ಲುವ ವಿದ್ಯೆಯನ್ನು ಕರಗತ ಮಾಡಿಕೊಂಡೆನೆಂದು ಜಂಬ ಕೊಚ್ಚುವವರನ್ನು ಲಿಂಗಮ್ಮನವರು ಬುದ್ಧಿಹೀನರೆಂದು ಜರೆಯುತ್ತಾರೆ. ನಮ್ಮ ಶರಣರು ಹೇಳಿದ ಮನವ ಗೆಲ್ಲುವ ರೀತಿಯನ್ನು ಹೇಳುತ್ತೇನೆ  ಕೇಳಿರೆಂದು  ಕರೆಯುತ್ತಾರೆ.

ಮನವನ್ನು ಗೆಲ್ಲುವುದು ಅಷ್ಟು ಸುಲಭವಲ್ಲ. ಬಹಿರಂಗದ ದೇಹ ದಂಡನೆಯಿಂದ ಇದು ಸಾಧ್ಯವಾಗದು. ಅಂತರಂಗದಲ್ಲಿದ್ದು ಮನವನ್ನು ದಿಕ್ಕು ತಪ್ಪಿಸುತ್ತಿರುವ ಅರಿಷಡ್ವರ್ಗಾದಿಗಳನ್ನುಆಶೆ ಆಮಿಷಗಳನ್ನು ಮೊದಲು ನಿಯಂತ್ರಿಸಬೇಕು. ಕಾಮಕ್ರೋದಾದಿಗಳನ್ನು ಇಲ್ಲವಾಗಿಸಿಕೊಳ್ಳಬೇಕು. ಆಸೆಯನ್ನು ಸಂಪೂರ್ಣವಾಗಿ ತ್ಯಜಿಸಿ ಕೋಪ, ತಾಪ, ಸಿಟ್ಟುಗಳನ್ನು ಸುಟ್ಟು ಹಾಕಬೇಕು. ಲೋಭ, ಮೋಹ, ಮದ, ಮತ್ಸರಗಳನ್ನು ಕತ್ತರಿಸಿ ಬಿಸಾಕಬೇಕು. ಸೃಷ್ಟಿಯ ಚರಾಚರ ವಸ್ತು ಪ್ರಾಣಿಗಳೆಲ್ಲವೂ ಭಗವಂತನ ಅಂಶವೆಂದಾಗ     ಕಾಮ, ಕ್ರೋಧಾದಿ, ಅರಿಷಡ್ವರ್ಗಗಳು ನಮ್ಮಿಂದ ತಕ್ಷಣ ದೂರವಾಗುತ್ತವೆ. ಯಾವುದರ ಮೇಲೂ ಆಸೆ, ಮೋಹ, ಕ್ರೋಧ, ಮದ, ಮತ್ಸರಗಳಿರಲು ಸಾಧ್ಯವೇ ಇಲ್ಲ. ಹೀಗೆ ಆಸೆ, ರೋಷಗಳನ್ನು ಹೂತು ಹಾಕಿ ಜಗತ್ತಿನ ಭವ ಪಾಶದ ಬಂಧನವನ್ನು ಹರಿದೊಗೆದು, ಕಾಯವನ್ನು ಮರುಗಿಸಲಾರದೆ ಪ್ರಸಾದ ಕಾಯವಾಗಿಸಿ ಪೋಷಿಸಿದ್ದಾರೆ.

ಮನವ ನಿಲ್ಲಿಸುವುದಕ್ಕೆ ಶರಣರ ಸಂಗಬೇಕು, ಜನನ ಮರಣವ ಗೆಲಬೇಕು. ಗುರು, ಲಿಂಗ, ಜಂಗಮದಲ್ಲಿ ವಂಚನೆಯಿಲ್ಲದೆ, ಮನಸಂಚಲವ ಹರಿದು,……” ನಿಶ್ಚಿಂತವಾಗಿರಬೇಕೆಂದು ಮತ್ತೊಂದು ವಚನದಲ್ಲಿ ಹೇಳಿದ್ದಾರೆ. ಹೀಗಾದಾಗ ಮನವೆಂಬುದು, “ಗಾಳಿ ಬೀಸದ ಜಲದಂತೆ, ಮೋಡವಿಲ್ಲದ ಸೂರ್ಯನಂತೆ, ಬೆಳಗಿದ ದರ್ಪಣದಂತೆ” ನಿರ್ಮಲವಾಗುತ್ತದೆ. ಆಗ ಮಾತ್ರ ಆ ಮಹಾಘನವನ್ನು ಕಾಣಲು ಸಾಧ್ಯವೆನ್ನುತ್ತಾರೆ.

ಎಲ್ಲ ಸತ್ಕಾರ್ಯಗಳಿಗೆ ಅಡ್ಡಿಯುಂಟು ಮಾಡುವ ನಿದ್ದೆಯನ್ನೇ ನೈವೇದ್ಯ ಮಾಡಿ ಯೋಗ ಸಮಾಧಿಯನ್ನಾಗಿಸಿಕೊಂಡು ಕ್ಷಣಿಕವಾದ ಬಾಹ್ಯ ಸುಖವನ್ನು ಹೀಯಾಳಿಸುತ್ತಾ ಜಗತ್ತನ್ನೇ ಗೆದ್ದ ಶರಣರ ಪರಿ ನಿಮ್ಮಂತ ಬುದ್ಧಿಗೇಡಿಗಳಿಗೆ ಪಾರಮಾರ್ಥಿಕದ ನೆಲೆ, ಸ್ವರೂಪ ಹೇಗೆ ತಿಳಿದಾವು ಎಂದು ಲಿಂಗಮ್ಮನವರು ಮತ್ತೊಮ್ಮೆ ಛೇಡಿಸುತ್ತಾರೆ.

ಪ್ರೊ. ಜಿ. ಎ, ತಿಗಡಿ.
ಧಾರವಾಡ.
ಫೋನ್ ನಂ:9902671015

Loading

Leave a Reply