
ಹರರೂಪಿ ಹರಳಯ್ಯ ಮತ್ತು ಅವರ ಮಡದಿ ಕಲ್ಯಾಣಮ್ಮನವರ ಬಲ ಮತು ಎಡತೊಡೆಯ ಚರ್ಮವು ತೆಗೆದು ಮಾಡಿದ್ದ ಚರ್ಮಾವುಗಳಿಗೆ ಪೃಥ್ವಿಯು ಸಮಬಾರದು ಎಂಬ ಬಸವಣ್ಣನವರ ವಚನದ ನುಡಿಗೆ ಸಾಕ್ಷಿಯಾಗಿದೆ. ಬಸವಣ್ಣ ಮತ್ತು ಶರಣರ ನಡುವೆ ಎಂತಹ ಸಂಬಂಧವಿತ್ತು ಎನ್ನುವುದಕ್ಕೆ ಈ ಚಮ್ಮಾವುಗೆಗಳು ಸಾಕ್ಷಿಯಾಗಿವೆ. ಸಮಾನತೆ ಕೇವಲ ಆಡುವ ನುಡಿಯಲ್ಲ ಅದಕ್ಕೆ ಶರಣರು ಬದ್ಧರಾಗಿದ್ದರು ಎನ್ನುವುದಕ್ಕೆ ಈ ಚಮ್ಮಾವುಗೆಗಳು ನಿದರ್ಶನವಾಗಿವೆ.
ಅನುಭವ ಮಂಟಪದ ಮಹಾನುಭವಿಗಳು ಹರಳಯ್ಯ ಕಲ್ಯಾಣಮ್ಮ ಶರಣರು.
ಕಲ್ಯಾಣ ಊರಾಗ ಅರ್ಹೆಂತ ಸತಿಪತಿ
ನಿಲ್ಲದೆ ಚಪ್ಪಲಿ ತಾ ಹೊಲಿದು | ಮಾಡ್ಯಾರ
ಮನಮುಟ್ಟಿ ಅವರು ದಾಸೋಹ
ಅವರ ಕಾಯಕ ಚಪ್ಪಲಿ ಹೊಲಿಯುವದು ಅದನ್ನು ಪವಿತ್ರ ಎಂದು ಭಾವಿಸಿ, ಅದರಲ್ಲಿ ಪಾವಿತ್ರ್ಯತೆಯನ್ನು ಕಂಡವರು. ಅವರ ಕಾಯಕದ ಪಾವಿತ್ರ್ಯತೆಗೆ ಜಾತಿ ಅಡ್ಡಿಯಾಗಲಿಲ್ಲ. ಜನಪದರು ಅವರ ಶ್ರೇಷ್ಠ ಗುಣ ಹೊಗಳುತ್ತಾರೆಯೆ ವಿನಹ ಕುಲವನ್ನು ಹಾಡುವುದಿಲ್ಲ. ಒಂದು ವೇಳೆ ಯಾರಾದರೂ ಅವರ ಜಾತಿಯ ಬಗ್ಗೆ ಅಡ್ಡಿಯಾದರೆ ಏನಾಗುತ್ತದೆಂಬ ಎಚ್ಚರಿಕೆಯು ಕೊಡುತ್ತಾರೆ.
ಹರರೂಪಿ ಹರಳಯ್ಯ ಹೊಲೆಯೆಂದರ್ಯಾರ?
ಕೊಳತಾವ ನಾಲಿಗೆ ಹುಳಬಿದ್ದು | ಆ ದ್ಯಾಹ
ನರಿನಾಯಿ ಎಳೆದು ತಿಂದಾವು.
ಬಸವಣ್ಣನವರನ್ನು ಗುರು ಎಂದು ತಿಳಿದು ಅರಿತು ಬಾಳುತ್ತಿದ್ದರು. ಎಲೆಯ ಮರೆಯ ಕಾಯಿಯಾಗಿದ್ದ ಈ ಶರಣರು ಅಹಂಮಿಕೆಯಿಂದ ದೂರ ಉಳಿದವರು. ತಾವಾಯಿತು ತಮ್ಮ ಕಾಯಕ ದಾಸೋಹವಾಯಿತು. ಬಸವಣ್ಣನವರಿಗೆ ಇವರನ್ನು ಕಂಡರೆ ಬಹಳ ಪ್ರೀತಿ ಗೌರವವಿತ್ತು ಎನ್ನುತ್ತಾರೆ ಜನಪದರು.
ಬಸವನ ಮನದಾಗ ಖುಸಿಯೇಟು ತುಂಬ್ಯಾದ
ಹರಸುತಾ ಬಂದು ನೋಡ್ಯಾರ | ನಿಂತಲ್ಲಿ
ಕರವೆತ್ತಿ ಮುಗಿದು ಇಬ್ಬರಿಗಿ
ಬಸವಣ್ಣನವರು ತಮ್ಮ ಕಾಯಕಕ್ಕೆ ಹೋಗುತ್ತಿರುವಾಗ ಒಂದು ದಿನ ಅಲ್ಲಲ್ಲಿ ನಿಂತ ಶರಣರಿಗೆ ನಮಿಸುತ್ತಾ ಮುಂದಕ್ಕೆ ಹೋಗುತ್ತಿರುತ್ತಾರೆ.
ಧರಿಮಗ ಬಸವಣ್ಣ ದರ್ಬಾರಕ್ಕ ಹೊಂಟಾರ
ದಾರ್ಯಾಗ ನಿಂತ್ಹಂತ ಶರಣರಿಗೆ | ತಾ ಕಂಡು
ನಮಿಸ್ಯಾರ ಭಕ್ತೀಲಿ ಬಸವಣ್ಣ
ಬಸವಗ ಕಾಣುತಲಿ ಖುಸಿಯೇಟು ಹರಳಗ
ಉದರ್ಯಾರ ಮಾತು ಬಾಯಾಗ | ಹರಳಯ್ಯ
ಶರಣು ಎಂದು ನುಡಿದಾನ
ಆಗ ಬಸವಣ್ಣನವರು
ಕಣ್ಣೀರು ಹರದಾವ ಹರಳಯ್ಯಗ ಆಗಳಿಗೆ
ತಣ್ಣೀರು ಮ್ಯಾಲ ಸುರದ್ಹಾಂಗ | ಬಾಯಾಗ
ಮಾತೆಂಬುದ ಜರ ಬರವಲ್ದು
ಗೋಣೆತ್ತಿ ಬಸವಯ್ಯ ಹರಳಯ್ಯಗ ನೋಡ್ಯಾರ
ಕಣ್ಣಾಗ ಕಣ್ಣಿಟ್ಟು ನುಡಿತಾರೆ | ಬಸವಣ್ಣ
ಶರಣು ಶರಣಾರ್ಥಿ ಶರಣರ
ಕುದುರೆಯ ಮೇಲೆ ಕುಳಿತು ಹೊರಟ ಬಸವಣ್ಣನವರಿಗೆ ಹರಳಯ್ಯನವರು ‘ಶರಣು ಬಸವಣ್ಣ’ ಎಂದು ಕೈ ಮುಗಿಯುವಷ್ಟರಲ್ಲಿಯೇ ಬಸವಣ್ಣನವರು ಭಕ್ತಿಯಿಂದ ‘ಶರಣು ಶರಣಾರ್ಥಿ ಹರಳಯ್ಯನವರೆ’ ಎಂದು ಹೇಳಿ ಮುಂದಕ್ಕೆ ಹೋಗುತ್ತಾರೆ ಆಗ ಹರಳಯ್ಯನವರ ಸ್ಥಿತಿ ಏನಾಗಿತ್ತು.
ದಂಗಾಗಿ ತಾ ನಿಂತ ಹರಳಯ್ಯ ಅದಕೇಳಿ
ಅಂಗವು ಎಲ್ಲ ಬೆವತಾದ | ಹರಳಯ್ಯಗ
ಕಂಗಳು ತುಂಬಿ ಬಂದಾವ
ಇದೊಂದು ಹೆಚ್ಚಿನ ಚಿಂತೆಯಾಯಿತು ಅವರಿಗೆ ಬಸವಣ್ಣನವರು ಹೇಳಿದ್ದ ಒಂದು ಶರಣಾರ್ಥಿ ಅವರಿಗೆ ಬಹಳ ಭಾರವಾಯಿತು. ಆ ಭಾರ ಹೇಗೆ ಇಳಿಸಿಕೊಳ್ಳಬೇಕೆಂಬುದು ತಿಳಿಯಲಿಲ್ಲ. ಈ ಚಿಂತೆಯಲ್ಲಿ ಮನೆ ಮರೆತರು, ದುಃಖ ಇಮ್ಮಡಿಕೊಂಡಿತು. ಏನು ಮಾಡದೆ ತೋಚಲಿಲ್ಲ. ಕುಂತು ನಿಂತು ಭಾರವಾದ ಮನದಿಂದ ತಮ್ಮ ಮನೆಯ ಕಡೆಗೆ ಹೊರಟರು. ದೂರದಿಂದಲೇ ಗಂಡ ಬರುವುದನ್ನು ಕಂಡು ಕಲ್ಯಾಣಮ್ಮ ಗಾಬರಿ ಆಗತ್ತಾರೆ. ಮನದಲ್ಲಿ ದುಃಖ ಕಣ್ಣಲ್ಲಿ ನೀರು
ಗಂಡನ ಮಾರಿಯೂ ದಿಟ್ಟಿಸಿ ನೋಡ್ಯಾಳ
ಗಂಡನ ಕೈಹಿಡಿದು ಕೇಳ್ಯಾಳ | ಕಲ್ಯಾಣಮ್ಮ
ಎಂದಿಲ್ಲದ ದುಃಖ ಇಂದ್ಯಾಕ
ಎಂಬ ಮಡದಿಯ ಮಾತಿಗೆ ಹರಳಯ್ಯನವರು
ಎಂಬ ಗಂಡನ ಮಾತಿಗೆ ಕಲ್ಯಾಣಮ್ಮ ಕೂಡ ಗಾಬರಿಯಾಗುತ್ತಾಳಲ್ಲದೆ ಅಂತಹ ಯಾವ ತಪ್ಪು ಅವರಿಂದ ನಡೆಯಿತು ‘ಯಾತಪ್ಪು ಮಾಡಿರಿ, ಯಾರಿಗಿ ಬೈದಿರಿ’ ಎಂದು ಕೇಳುತ್ತಾಳೆ.
ಗುರು ನನ್ನ ಬಸುವಗ ಶರಣಾರ್ಥಿಎಂದರೆ
ಶರಣು ಶರಣಾರ್ಥಿ ಹರಳಯ್ಯ | ಎನ್ನುತ್ತಾ
ಕರವೆತ್ತಿ ನನಗೆ ಹರಸ್ಯಾರ
ನಾನೊಂದು ಶರಣೆಂದೆ ಬಸವನ ವಾದಕ್ಕೆ
ಅವರೆರಡು ಶರಣಾರ್ಥಿ ನನಗ ಹೇಳಿ | ಕಲ್ಯಾಣ
ಮಾಡ್ಯಾರ ನನಗೆ ದೊಡ್ಡವರು.
ಎಂದು ಹರಳಯ್ಯನವರು ಎಳೆ ಎಳೆಯಾಗಿ ಬಿಚ್ಚಿ ಹೇಳುತ್ತಾ ಕಣ್ಣೀರು ಸುರಿಸುತ್ತಲೇ ನುಡಿದಾಗ ಕಲ್ಯಾಣಮ್ಮ ನಗುತ್ತಾ ಗಂಡನ ಕಣ್ಣೀರನ್ನು ಒರೆಸುತ್ತಾಳಲ್ಲದೆ ಗಂಡನ ಗುಡ್ಡದಂತಹ ಸಮಸ್ಯೆಯನ್ನು ಮಂಜಿನ ಹಾಂಗ ಕರಗಿಸುತ್ತಾಳೆ.
ನಗುತಾಳ ಮಡದಿಯು ಗಂಡನ ಮಾತಿಗೆ
ಇದಕ್ಯಾಕ ದುಃಖ ನನ ರಾಯ | ಗುರುವಿನ
ಪಾದಕ್ಕ ಮಾಡಿರಿ ಪಾದುಕೆ
ಎಡತೊಡೆಯ ನನ್ನದು ಬಲತೊಡೆಯ ನಿಮ್ಮದು
ಚರ್ಮವು ಸುಲಿದು ತೆಗೆಯಿರಿ | ಗುರುವಿಗೆ
ನದರಾಗೋ ಪಾದುಕಮಾಡಿರಿ
ಮಡದಿಯ ನುಡಿಕೇಳಿ ಗಂಡನಾ ಮನತುಂಬಿ
ಗುಡದ್ಹಂತ ಭಾರ ಇಳಿಸಿದಿ | ನೀ ಎನಗ
ಗುರುವಾದಿ ನೋಡು ಕಲ್ಯಾಣಿ
ತನ್ನ ಎಡ ತೊಡೆಯ ಗಂಡನ ಬಲ ತೊಡೆಯ ಚರ್ಮವು ಸುಲಿದು ಗುರು ಬಸವನ ಪಾದಕ್ಕೆ ಒಪ್ಪುವ ಚರ್ಮಾವುಗೆಗಳನ್ನು ಮಾಡಿ ಅರ್ಪಿಸೋಣ ಎನ್ನುತ್ತಾಳೆ ಕಲ್ಯಾಣಮ್ಮ. ಜಗತ್ತಿನಲ್ಲಿ ಕಂಡು ಕೇಳರಿಯದ ಘಟನೆ. ಬಸವಣ್ಣನವರಲ್ಲಿ ಇವರೆಲ್ಲರೂ ಎಂತಹ ಭಕ್ತಿ ಇಟ್ಟುಕೊಂಡಿರೆಂಬ ಅರಿವು ನಾವು ಮಾಡಿಕೊಳ್ಳಬೇಕಾಗಿದೆ. ಅಂತೆಯೇ ಬಸವಣ್ಣನವರು ಇಂತಹ ಶರಣರನ್ನು ನುಡಿಗೊಮ್ಮೆ ನೆನೆಯುತ್ತಾರೆ. ಇವೆಲ್ಲ ಕೇವಲ ನುಡಿಗಳಲ್ಲ. ಅನುಭವಿಸಿ ಆಡಿದ ಮಾತುಗಳು ಆಡಿದಂತೆ ಮಾಡಿ ತೋರಿಸಿದ ಮಾತುಗಳು. ಶರಣರು ನುಡಿದರೆ ಲಿಂಗ ಮೆಚ್ಚಿ ಅಹುದಹುದು ಎಂದು ತಲೆ ಹಾಕುತ್ತಿತ್ತು. ಮಾತಿಗೊಮ್ಮೆ ಅವರ ಬಾಯೊಳಗೆ ಶರಣು ಶರಣಾರ್ಥಿ. ಈ ನುಡಿಯಲ್ಲಿ ಅವರ ಸಾಂಸ್ಕೃತಿಕ ನಿಲುವು ಎತ್ತಿ ತೋರುತ್ತದೆ ಅಂತೆಯೆ ಬಸವಣ್ಣನವರು ಶರಣಾರ್ಥಿ.
ಡಾ. ನೀಲಾಂಬಿಕಾ ಪೊಲೀಸಪಾಟೀಲ,
“ಗುರು ಶರಣ ನಿಲಯ”
ಮನೆ ನಂ. 1495/101 ಮತ್ತು 102/310,
ಗೋದುತಾಯಿ ನಗರ,
ನ್ಯೂ ಜೇವರ್ಗಿ ರಸ್ತೆ,
ಕಲಬುರಗಿ – 585 102.
ಮೋಬೈಲ್ ನಂ. 94821 47084
ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್
ನಂ. 9741 357 132 / e-Mail ID: info@vachanamandara.in.
ತುಂಬಾ ಸೊಗಸಾಗಿ ಮೂಡಿ ಬಂದಿದೆ
ತುಂಬಾ ಸೊಗಸಾಗಿ ಮೂಡಿಬಂದಿದೆ