ಹಾಲುಮತ ಕುಲಗುರು ಶ್ರೀ ರೇವಣಸಿದ್ದೇಶ್ವರರನ್ನು ಹೈಜಾಕ್‌ ಮಾಡಿರುವ ವೀರಶೈವರು: ಸತ್ಯದ ಅನಾವರಣ / ಡಾ. ವಡ್ಡಗೆರೆ ನಾಗರಾಜಯ್ಯ, ಬೆಂಗಳೂರು.

ಇದು ಹಾಲುಮತ ಕುಲಗುರು, ಶಾಂತ ಸಿಂಹಾಸನಾರೂಢ ಶ್ರೀ ರೇವಣಸಿದ್ದೇಶ್ವರ ಮಹಾಸಂಸ್ಥಾನ ಮಠ, ಸರವೂರು ಶಾಖಾ, ಅಣತಿ, ಚನ್ನರಾಯಪಟ್ಟಣ ತಾಲ್ಲೂಕು, ಹಾಸನ ಜಿಲ್ಲೆ, ಇದಕ್ಕೆ ಸಂಬಂಧಿಸಿದ ತಾಮ್ರಪಟ್ಟಿಕೆ. ಚರಿತ್ರೆಯಲ್ಲಿ ಸುಳ್ಳನ್ನು ಕೂಡಾ ರಾಜಠಸ್ಸೆಯೊಂದಿಗೆ ನಿಜವೆಂದೇ ನಂಬಿಸುವ ಯಡವಟ್ಟುಗಳು ಕೂಡಾ ನಡೆದಿವೆ ಎಂಬುದಕ್ಕೆ ಈ ತಾಮ್ರಬಿಲ್ಲೆಯೇ ಸಾಕ್ಷಿಯಾಗಿದೆ. ಕುರುಬರ ಕುಲಗುರು ಶ್ರೀ. ರೇವಣಸಿಸಿದ್ಧೇಶ್ವರರನ್ನು ಹೈಜಾಕ್ ಮಾಡಿಕೊಂಡು ಶ್ರೀ ರೇಣುಕಾಚಾರ್ಯ ಎಂದು ಅಯೋನಿಜ ಕಾಲ್ಪನಿಕ ವ್ಯಕ್ತಿಯನ್ನು ಸೃಷ್ಟಿಸಿ ಪುರಾಣವನ್ನೇ ಹೊಸೆಯಲಾಗಿದೆ.

ದಕ್ಷಿಣ ಕರ್ನಾಟಕದ ಕುರುಬರ ಐತಿಹಾಸಿಕ ಮತ್ತು ಸಾಂಸ್ಕೃತಿಕ ಅಸ್ಮಿತೆಗಳನ್ನು ವೀರಶೈವರ ಪಂಚಾಚಾರ್ಯರಿಗೆ ಪರಭಾರೆ ಮಾಡಿದ ಧರ್ಮಪೀಠದ ಸತ್ಯವನ್ನು ಈ ತಾಮ್ರಬಿಲ್ಲೆಯು ಅಡಗಿಸಿಕೊಂಡಿದೆ. ಹಾಲುಮತದ ಶ್ರೀ ರೇವಣಸಿದ್ಧೇಶ್ವರರ ಮೂಲ ಗುರುಪೀಠದ ಅಸ್ಮಿತೆಗಳನ್ನು ವೀರಶೈವರು ಹೇಗೆಲ್ಲಾ ಹಾಳು ಮಾಡಿದ್ದಾರೆಂಬುದು ಸ್ವತಃ ಹಾಲುಮತ ಕುರುಬರಿಗೆ ಅರಿವಿಗಿಲ್ಲದಂತಾಗಿದೆ. ಕುರುಬರ ಇತಿಹಾಸವನ್ನು ನಾಡಿನಾದ್ಯಂತ ಪ್ರಚುರಪಡಿಸಬೇಕಾದವರು ತಮ್ಮದಲ್ಲದ ವೀರಶೈವ ಪಂಚಚಾರ್ಯರ ಇತಿಹಾಸವನ್ನು ಸಾರುವ ಸಾಂಸ್ಕೃತಿಕ ಹೇರಿಕೆಗೆ ಕುರುಬರು ಒಳಗಾಗಿದ್ದಾರೆ.

ಹಾಲುಮತ ಕುರುಬ ಸಮುದಾಯದ ಲಿಂಗದಬೀರರ ಕುಣಿತವು ವೀರಶೈವರ ಕೈವಶವಾಗಿ ಬಿನ್ನಾಯ ಮಾಡುವ ಜಂಗಮರ ಪುರವಂತಿಕೆಯಾಯಿತು. ಸಾದ ಲಿಂಗಾಯತರ ಕುಲಗುರು ಎನ್ನಿಸಿದ ವಿಶ್ವಬಂಧು ಶ್ರೀ ಮಾದಾರ ಮರುಳಸಿದ್ಧೇಶ್ವರರಿಗೆ ಇದೇ ಕುರುಬ ಮೂಲದ ಶ್ರೀ ರೇವಣಸಿದ್ಧರು ಗುರುವಾಗಿದ್ದಾರೆ. ಇಂತಹ ರೇವಣಸಿದ್ಧರನ್ನು ವೀರಶೈವರು ಕಾಲ್ಪನಿಕ ಅಯೋನಿಜ ಪಂಚಾಚಾರ್ಯರ ರೇಣುಕಾಚಾರ್ಯನನ್ನಾಗಿ ಬಿಂಬಿಸಿ ಸುಳ್ಳು ಪುರಾಣ ಹೊಸೆದಿದ್ದಾರೆ. ಹೀಗೆಯೇ ಕುರುಬರ ಬೀರಲಿಂಗನು ವೀರಭದ್ರನಾಗಿ ಹಾಗೂ ಲಿಂಗದಬೀರರ ಕುಣಿತವು ವೀರಗಾಸೆಯಾಗಿ ವೀರಶೈವರಿಂದ ಉನ್ನಯನಗೊಂಡಿತು. ಹೀಗಾಗಿ ವೀರಗಾಸೆಯ ವಚನ ಪಲುಕುಗಳು ಲಿಂಗಿ ಬ್ರಾಹ್ಮಣರ ಶ್ಲೋಕಗಳೇ ಆಗಿರುತ್ತವೆ. ಕನ್ನಡ ಜಾಯಮಾನಕ್ಕೆ ಎರವಾಗಿ ಸಂಸ್ಕೃತದ ಸಿದ್ಧಾಂತ ಶಿಖಾಮಣಿಯ ಪ್ರಭಾವಲಯದಲ್ಲಿ ಶರಣರ ವಚನಗಳನ್ನು ಕೂಡಾ ಪ್ರಕ್ಷಿಪ್ತಗೊಳಿಸಿದ ಬ್ರಾಹ್ಮಣ್ಯವನ್ನು ನಾವಿಲ್ಲಿ ನೋಡಬಹುದು.

ಹೆಸರುಗಳೇ ಸೂಚಿಸುವಂತೆ ರೇವಣಸಿದ್ಧ ಮತ್ತು ಮರುಳಸಿದ್ಧರು ಸಿದ್ಧ ಪರಂಪರೆಗೆ ಸೇರಿದವರು. ಸಿದ್ದ ಪರಂಪರೆಯ ಸಿದ್ದರನ್ನು, ವೀರಶೈವರು ಆಚಾರ್ಯ ಪರಂಪರೆಗೆ ಪಲ್ಲಟಿಸಿಕೊಂಡಿದ್ದರಿಂದಾಗಿ ಕುರುಬರ ಕುಲಗುರು ರೇವಣಸಿದ್ಧನು ವೀರಶೈವರ ರೇಣುಕಾಚಾರ್ಯನಾಗಿದ್ದಾನೆ. ಶ್ರೀ ರೇಣುಕಾಚಾರ್ಯ ಎಂಬುವವನು ಆಂಧ್ರಪ್ರದೇಶದಿಂದ ಬಂದ ತೆಲುಗು ಬಾಳು ಆರಾಧ್ಯ ಜಂಗಮರ ಸುಳ್ಳು ಸೃಷ್ಟಿಯ ಕಾಲ್ಪನಿಕ ನಾಯಕ. ಕುರುಬ ಜಾತಿ ಮೂಲದ ಘನಶರಣ ರೇವಣಸಿದ್ದನನ್ನು ವೀರಶೈವರು ರೇಣುಕಾಚಾರ್ಯನನ್ನಾಗಿ ಹೈಜಾಕ್ ಮಾಡಿದ್ದಾರೆಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ.

ಹಾಲುಮತಸ್ಥ ಕುರುಬರ ಘನಶರಣ, ಐತಿಹಾಸಿಕ ಪುರುಷ ರೇವಣಸಿದ್ಧನು ವೀರಶೈವರ ಪಾಲಿಗೆ ಅಯೋನಿಜ ಹುಟ್ಟಿನಲ್ಲಿ ಪೌರಾಣಿಕ, ಕಾಲ್ಪನಿಕ ರೇಣುಕಾಚಾರ್ಯ ಎಂಬ ಹೆಸರಿನ ಗುರುವಾಗುತ್ತಾನೆ. ಸರಳ ಕೌಪೀನ-ಲಂಗೋಟಿ-ಪುಟಗೋಸಿ ಧರಿಸಿದ ಸಿದ್ಧ ಪರಂಪರೆಯ ಇಷ್ಟಲಿಂಗಧಾರಿಯಾದ ರೇವಣಸಿದ್ಧನು, ಆಡಂಬರದ ಪಟ್ಟೆ ಪೀತಾಂಬರ ಒಡವೆ ವಜ್ರ-ವೈಡೂರ್ಯಗಳನ್ನು ಧರಿಸಿದ ಸ್ಥಾವರ ಲಿಂಗಧಾರಿಯಾದ ರೇಣುಕಾಚಾರ್ಯನಾಗಿ ಬದಲಾಗುತ್ತಾನೆ. ದ್ರಾವಿಡ ಜನಭಾಷೆಯ ಕನ್ನಡ ವಚನಪಾಲಕ ಶರಣ ಪಥಿಕನು ವೀರಶೈವರ ಕೈಗಳಲ್ಲಿ ಪ್ರಭುತ್ವ ಸಂಸ್ಕೃತ ಭಾಷೆಯ ವೇದಾಗಮಶಾಸ್ತ್ರ ಪಾಲಕನಾಗಿ ಆರ್ಯ ಪಥಿಕನಾಗುವುದು ಒಂದು ಮಹಾ ಮೋಸವೇ ಸರಿ.

ಸಿದ್ಧ ಪರಂಪರೆಯ ಲಿಂಗವಂತ ಸಾಧಕನಾದ ರೇವಣಸಿದ್ಧನು ವೀರಶೈವರ “ಸಿದ್ಧಾಂತ ಶಿಖಾಮಣಿ” ಎಂಬ ಸಂಸ್ಕೃತ ಗ್ರಂಥದಲ್ಲಿ ರೇಣುಕಾಚಾರ್ಯನಾಗಿ ಚಿತ್ರಣಗೊಂಡಿದ್ದಾನೆ. ವಾಸ್ತವವಾಗಿ ರೇವಣಸಿದ್ಧನು ಯಾವುದೇ ಮಠವಿಲ್ಲದೆ ಕೊಲ್ಲಿಪಾಕಿಯ ಬೆಟ್ಟದ ಕಲ್ಲುಗವಿಯಲ್ಲಿ ತಪಸ್ಸಾಧನೆ ಮಾಡುತ್ತಾ ಮಹಾಚಾರಣಿಗನಾಗಿ ತನ್ನ ಶಿಷ್ಯನಾದ ಮಾದಿಗರ ಮರುಳಸಿದ್ಧನ ಜೊತೆಗೂಡಿ ಕರ್ನಾಟಕದ ದಕ್ಷಿಣಕ್ಕೆ ಬರುತ್ತಾನೆ. ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಸಿದ್ಧರಬೆಟ್ಟ, ಬೂದಗವಿ ಮತ್ತು ರಾಮನಗರ ಜಿಲ್ಲೆಯ ರಾಮನಗರ ಹತ್ತಿರದ ಅವ್ವೇರಹಳ್ಳಿಯ ರೇವಣಸಿದ್ಧೇಶ್ವರ ಬೆಟ್ಟದ ಗವಿಗಳು ರೇವಣಸಿದ್ಧನು ತಪಸ್ಸಾಧನೆ ಮಾಡಿದ ಗವಿಗಳಾಗಿ ಪ್ರಸಿದ್ಧಿ ಪಡೆದಿವೆ. ಇಂತಹ ಸಾಧಕ ಸಿದ್ಧನಾದ ರೇವಣಸಿದ್ಧನು ವೀರಶೈವರ ಸುಳ್ಳು ಸೃಷ್ಟಿಯ ಕಥನಗಳ ಪ್ರಕಾರ ಕೊಲ್ಲಿಪಾಕಿಯ ಸೋಮೇಶ್ವರ ಗುಡಿಯ ಸ್ಥಾವರಲಿಂಗದಲ್ಲಿ ಅಯೋನಿಜನಾಗಿ ಉದ್ಭವಿಸಿ ಬಂದು ವೀರಶೈವ ಪಂಚಾಚಾರ್ಯರ ಪ್ರಮಥ ಜಗದ್ಗುರುವಾಗುತ್ತಾನೆ. ಇಂತಹ ಅಯೋನಿಜ ಜನನದ ಕಲ್ಪನೆಯನ್ನು ಬಸವಣ್ಣನವರು:

ಹೊಲೆಗಂಡಲ್ಲದೆ ಪಿಂಡದ ನೆಲೆಗಾಶ್ರಯವಿಲ್ಲ.
ಜಲ-ಬಿಂದುವಿನ ವ್ಯವಹಾರ ಒಂದೇ,
ಆಶೆಯಾಮಿಷ ರೋಷಹರುಷ ವಿಷಯಾದಿಗಳೆಲ್ಲಾ ಒಂದೇ.
ಏನನೋದಿ, ಏನ ಕೇಳಿ, ಏನು ಫಲ?
ಕುಲಜನೆಂಬುದಕ್ಕೆ ಆವುದು ದೃಷ್ಟ?
“ಸಪ್ತಧಾತುಸಮಂ ಪಿಂಡಂ ಸಮಯೋನಿಸಮದ್ಭವಮ್‌ |
ಆತ್ಮಜೀವಸಮಾಯುಕ್ತಂ ವರ್ಣಾನಾಂ ಕಿಂ ಪ್ರಯೋಜನಮ್‌ ||” ಎಂದುದಾಗಿ,
ಕಾಸಿ ಕಮ್ಮಾರನಾದ, ಬೀಸಿ ಮಡಿವಾಳನಾದ,
ಹಾಸನಿಕ್ಕಿ ಸಾಲಿಗನಾದ, ವೇದವನೋದಿ ಹಾರುವನಾದ.
ಕರ್ಣದಲ್ಲಿ ಜನಿಸಿದರುಂಟೆ ಜಗದೊಳಗೆ?
ಇದು ಕಾರಣ ಕೂಡಲಸಂಗಮದೇವಾ,
ಲಿಂಗಸ್ಥಲವನರಿದವನೆ ಕುಲಜನು.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-160/ವಚನ ಸಂಖ್ಯೆ-590)

“ಕರ್ಣದೊಳಗೆ ಜನಿಸಿದವರುಂಟೇ ಜಗದೊಳಗೆ?” ಎಂದು ಪ್ರಶ್ನಿಸುತ್ತಾರೆ. ಸಿದ್ಧ ಸಿದ್ಧರಿಗೆಲ್ಲಾ ಘನಸಿದ್ಧನಾದ ಐತಿಹಾಸಿಕ ಪುರುಷ ರೇವಣಸಿದ್ಧನನ್ನು ಹಾಲುಮತ ಕುರುಬ ಸಮುದಾಯದವರು ತಮ್ಮ ಕುಲಗುರುವೆಂದು ಹೇಳಿಕೊಳ್ಳುತ್ತಿರುವಾಗಲೇ ವೀರಶೈವರ ಕಾಲ್ಪನಿಕ ಜಗದ್ಗುರು ರೇಣುಕಾಚಾರ್ಯನ ಹೆಸರನ್ನು ಅತ್ಯಂತ ಮುಗ್ಧತೆಯಿಂದ ಜಪಿಸುತ್ತಿದ್ದಾರೆ.

ಈ ತಾಮ್ರಬಿಲ್ಲೆಯು:

“ಶ್ರೀಮತ್ಕುರುಬ ಮತ ಸ್ಥಾಪಕ ಶ್ರೀ ರೇಣುಕಾಚಾರ್ಯರ ವಂಶೀಯ ಶ್ರೀ ಸರವೂರ ಮಹಾಸಂಸ್ಥಾನ ಶಾಖಾ, ಶ್ರೀ ಅಣತಿ ಮಠ ಸಿಂಹಾಸನ, ಮೈಸೂರು ದೇಶ-109”

ಎಂದು ಹೇಳುತ್ತದೆ. ಇಲ್ಲಿ ಕುರುಬ ಕುಲದ ಸ್ಥಾಪಕ ಶ್ರೀ ರೇಣುಕಾಚಾರ್ಯರ ಎಂದು ಹೇಳಲಾಗಿದೆಯೇ ಹೊರತು ಅಸಲಿ ಕುರುಬರ ಕುಲಗುರು ರೇವಣಸಿದ್ಧನ ಹೆಸರು ಇರುವುದಿಲ್ಲ. ಮೈಸೂರು ಒಡೆಯರ್ ಅವರ ಆಳ್ವಿಕೆಯ ಕಾಲದಲ್ಲಿ ಕರ್ನಾಟಕವನ್ನು ಮೈಸೂರು ದೇಶ ಎಂದು ಕರೆಯಲಾಗಿದೆ. ಆ ಕಾಲದ ಮೈಸೂರು ಒಡೆಯರು ಅಣತಿ ಮಠಕ್ಕೆ ನೀಡಿದ್ದ 109 ನೇ ಸಂಖ್ಯೆಯ ತಾಮ್ರದ ಸರ್ಕೀಟು ಬಿಲ್ಲೆ ಇದು. ಇಂತಹ ಬಿಲ್ಲೆಗಳನ್ನು ಯಾವ ಯಾವ ಮಠಗಳಿಗೆ ಒದಗಿಸಲಾಗಿತ್ತೋ ಅಂತಹ ಮಠಗಳಿಗೆ ರಾಜಮರ್ಯಾದೆಯೂ ಇರುತ್ತಿತ್ತು. ಹಾಲುಮತ ಕುಲಗುರು ಶ್ರೀ ರೇವಣಸಿದ್ಧೇಶ್ವರನ ಅಣತಿ ಮಠ ಮೈಸೂರು ಒಡೆಯರ ಕಾಲದಲ್ಲಿ ರಾಜಮರ್ಯಾದೆಗೆ ಪಾತ್ರವಾಗಿತ್ತು. ಈಗ ಕುರುಬರ ಕುಲಗುರು ಶ್ರೀ ರೇವಣಸಿದ್ಧನೇ ಹೊರತು ವೀರಶೈವ ಪಂಚಾಚಾರ್ಯರ ಶ್ರೀ ರೇಣುಕಾಚಾರ್ಯನಲ್ಲ ಎಂಬುದನ್ನು ಮನಗಾಣುವಂತಾಗಲಿ.

ಡಾ. ವಡ್ಡಗೆರೆ ನಾಗರಾಜಯ್ಯ,
#12, ಮಡಿಲು, 8 ನೇ ಅಡ್ಡರಸ್ತೆ,
ಆರ್.‌ ಆರ್.‌ ಲೇ ಔಟ್‌, ಜ್ಞಾನಭಾರತಿ ಅಂಚೆ,
ಬೆಂಗಳೂರು – 560 056
ಮೋಬೈಲ್‌ ಸಂ. 87227 21471

  • ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
  • ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in / admin@vachanamandara.in

Loading

Leave a Reply