🌷ಅಕ್ಕಮಹಾದೇವಿ ಜಯಂತಿ🌷/ಪ್ರೊ. ಜಿ ಎ. ತಿಗಡಿ.,ಧಾರವಾಡ

ಇಂದು ವೈರಾಗನಿಧಿ, ವೀರ ವಿರಾಗಿನಿ, ಶರಣ ಸಂಕುಲದ ಧ್ರುವತಾರೆ, ಮಹಾನ್ ಶರಣೆ ಅಕ್ಕಮಹಾದೇವಿಯ ಜಯಂತಿ. ಆ ಮಹಾತಾಯಿಯ ಜೀವನ ಗಾಥೆಯನ್ನು ಒತ್ತಟ್ಟಿಗೆ ಇರಿಸಿ, ತನ್ನ ಜೀವನಾನುಭವದಿಂದ ಪಡೆದ ಉನ್ನತ ಮೌಲ್ಯಗಳನ್ನು ವಚನಗಳ ಮೂಲಕ ಹಾಡಿಕೊಂಡಿದ್ದಾರೆ. ಅವುಗಳಲ್ಲಿ ಒಂದೆರಡನ್ನಾದರೂ ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡುಜೀವನವನ್ನು ಸಾರ್ಥಕ ಪಡಿಸಿಕೊಳ್ಳೋಣ.

ಒಂದೆರಡು ಅಕ್ಕನ ವಚನಗಳನ್ನು ನೋಡೋಣ.

ಅರ್ಥಸನ್ಯಾಸಿಯಾದಡೇನಯ್ಯಾ,
ಆವಂಗದಿಂದ ಬಂದಡೂ ಕೊಳದಿರಬೇಕು.
ರುಚಿಸನ್ಯಾಸಿಯಾದಡೇನಯ್ಯಾ,
ಜಿಹ್ವೆಯ ಕೊನೆಯಲ್ಲಿ ಮಧುರವನರಿಯದಿರಬೇಕು.
ಸ್ತ್ರೀ ಸನ್ಯಾಸಿಯಾದಡೇನಯ್ಯಾ,
ಜಾಗ್ರ ಸ್ವಪ್ನ ಸುಷುಪ್ತಿಯಲ್ಲಿ ತಟ್ಟಿಲ್ಲದಿರಬೇಕು.
ದಿಗಂಬರಿಯಾದಡೇನಯ್ಯಾ,
ಮನ ಬತ್ತಲೆ ಇರಬೇಕು.
ಇಂತೀ ಚತುರ್ವಿಧದ
ಹೊಲಬರಿಯದೆ ವೃಥಾ ಕೆಟ್ಟರು
ಕಾಣಾ ಚೆನ್ನಮಲ್ಲಿಕಾರ್ಜನ.


ಸಂಪತ್ತನ್ನು ನಿರಾಕರಿಸಿ ಧನ ಕನಕಗಳ ವಿಷಯದಲ್ಲಿ ಸನ್ಯಾಸಿಯಾದರೆ ಸಾಲದು. ತನಗೆ ಯಾವುದೇ ರೂಪದಿಂದ ಬಂದರೂ ಧನವನ್ನು ಸ್ವೀಕರಿಸಬಾರದು. ನಾಲಿಗೆಯು ತನ್ನ ರುಚಿಯನ್ನು ಕಳೆದುಕೊಳ್ಳಬೇಕು. ಸ್ತ್ರೀಯರ ವಿಷಯದಲ್ಲಿ ಅವರನ್ನು ತ್ಯಜಿಸಿ, ನಿರಾಕರಿಸಿ ಸನ್ಯಾಸಿಯಾದರೆ ಸಾಲದು. ಜಾಗ್ರತ, ಸುಷುಪ್ತಿ, ಸ್ವಪ್ನದಲ್ಲಿಯೂ ಕೂಡ ಅವರ ನೆನಪು ಬರಕೂಡದು. ದೈಹಿಕವಾಗಿ ದಿಗಂಬರರಾದರೆ ಸಾಲದು. ಮನಸ್ಸು ಬತ್ತಲೆಯಾಗಿ ಸ್ವಚ್ಛವಾಗಿರಬೇಕು. ಹೀಗೆ ಅರ್ಥ, ರುಚಿ, ಸ್ತ್ರೀ, ದಿಗಂಬರತ್ವ ಈ ನಾಲ್ಕು ವಿಧದ ತತ್ವಗಳ ನಿಜವನ್ನರಿಯದೆ ಮನುಜರು ಹಾಳಾಗಿ ಹೋಗುತ್ತಿದ್ದಾರೆ ಎಂದು ಅಕ್ಕ ಮಹಾದೇವಿ ಹೇಳುತ್ತಾಳೆ.

ಇದಕ್ಕೆ ಸಂವಾದಿಯಾಗಿ, ಸನ್ಯಾಸತ್ವ ಕುರಿತಾದ ಅಲ್ಲಮರ ಮಾತುಗಳು ಹೀಗಿವೆ.

ತನು ಬತ್ತಲಿದ್ದರೇನೊ ಮನ ಶುಚಿಯಾಗದನ್ನಕ್ಕರ?
ಮಂಡೆ ಬೋಳಾದಡೇನೊ, ಭಾವ ಬಯಲಾಗದನ್ನಕ್ಕರ ?
ಕೌಪು ಕಾಷಾಯಾಂಬರವ ಕಟ್ಟಿ,
ಮಂಡೆ ಬೋಳಾದಡೇನಯ್ಯಾ.
ಎನ್ನಲ್ಲಿ ನಿಜವಿಲ್ಲದನ್ನಕ್ಕ?
ಹೊನ್ನು ಹೆಣ್ಣು ಮಣ್ಣು ತ್ರಿವಿಧವ ತೊರೆದ ಬುಡೇನಯ್ಯಾ
ಮನದಲ್ಲಿ ವ್ರತಿಯಾಗದನ್ನಕ್ಕ?
ಹಸಿವು ತೃಷೆ ವ್ಯಸನಾದಿಗಳ ಬಿಟ್ಟಡೇನಯ್ಯಾ
ಅರ್ಥದಿಚ್ಛೆ ಮನದಲ್ಲಿ ಹಿಂಗದನ್ನಕ್ಕ


ಕೇವಲ ದೈಹಿಕ ಬದಲಾವಣೆ ಮಾಡಿಕೊಳ್ಳುವುದರಿಂದಾಗಲಿ, ದೇಹದ ಮೇಲೆ ಧರಿಸುವ ಲಾಂಛನಗಳಿಂದಾಗಲಿ, ನಿಜವಾದ ಸನ್ಯಾಸಿ, ವಿರಕ್ತನಾಗಲು ಸಾಧ್ಯವಿಲ್ಲ. ಅಂತರಂಗದ ಮನ ಭಾವಗಳು ಶುಚಿಯಾಗಬೇಕು ವಿಶಾಲವಾಗಬೇಕು. ಹೆಣ್ಣು, ಹೊನ್ನು, ಮಣ್ಣು ಗಳೆಂಬ ಮಾಯೆಗಳನ್ನು ಜಯಿಸಬೇಕು. ಹಸಿವು, ತೃಷೆ, ವ್ಯಸನಾದಿಗಳಿಂದ ಸಂಪೂರ್ಣವಾಗಿ ಮುಕ್ತನಾಗಬೇಕೆಂದು ಅಲ್ಲಮರು ಹೇಳುತ್ತಾರೆ.
ಸಕಲ ಐಹಿಕ ದೈಹಿಕ ಭೋಗಗಳನ್ನು ತ್ಯಜಿಸುವವನೇ ಸನ್ಯಾಸಿ, ಆತ ಸದಾ ಸತ್ಯಾನ್ವೇಷಿ. ದೇಹ ಪೋಷಣೆಗೆ ತೀರಾ ಅಗತ್ಯವಿರುವಷ್ಟನ್ನು ಮಾತ್ರ ನಿರ್ಭಾವದಿಂದ ಸ್ವೀಕರಿಸಬೇಕು. ಯಾವುದರ ಮೇಲೂ ಅತಿ ಆಸೆ, ಅಪೇಕ್ಷೆ, ಅವಲಂಬನೆಗಳಿರಕೂಡದು. ಪಾರಮಾರ್ಥಿಕ ಆನಂದಕ್ಕಾಗಿ ಮನ ತುಡಿಯಬೇಕೆ ಹೊರತು, ದೈಹಿಕಾನಂದದ ಭಾವ ಎಂದಿಗೂ ಮನದಲ್ಲಿ ಬರಬಾರದು. ನಿತ್ಯ ಜೀವನದಲ್ಲಿ ನಾಲ್ಕು ವಿಧದ ಸನ್ಯಾಸತ್ವಗಳ ಕುರಿತು ಅಕ್ಕಮಹಾದೇವಿ ಈ ವಚನದಲ್ಲಿ ವಿವರಿಸಿದ್ದಾಳೆ. ಸಂಪತ್ತು, ಬಾಯಿರುಚಿ, ಪರಸ್ತ್ರಿಯರ ವಿಷಯ ಹಾಗೂ ದಿಗಂಬರತ್ವ ಈ ನಾಲ್ಕು ವಿಧಗಳು ಲೌಕಿಕ ಜೀವನದಲ್ಲಿ ಅತ್ಯಂತ ಮಹತ್ವದ ಪಾತ್ರಗಳನ್ನಾಡುತ್ತವೆ. ಇವುಗಳಿಲ್ಲದೆ ಸುಖಗಳ ಅಸ್ತಿತ್ವವೇ ಇರಲಾರದು. ಹೀಗಾಗಿ ಇವುಗಳನ್ನು ಸಂಪೂರ್ಣವಾಗಿ ತ್ಯಜಿಸುವುದು ಸಾಮಾನ್ಯರಿಗೆ ಕಷ್ಟ ಸಾಧ್ಯವಾದುದಾಗಿದೆ.

ಈ ನಾಲ್ಕು ವಿಷಯಗಳನ್ನು ತ್ಯಜಿಸಿ ಸನ್ಯಾಸಿಯಾಗಿದ್ದೇವೆ ಎಂದು ಬಹಳಷ್ಟು ಜನ ಹೇಳಿಕೊಳ್ಳುವುದನ್ನು ನೋಡುತ್ತಿದ್ದೇವೆ. ಎಷ್ಟೋ ಜನ ಸಾಧು ಸಂತರು, ಮಹಾಂತರು ಸನ್ಯಾಸಿಗಳು, ಕಾಷಾಯ ಲಾಂಛನಧಾರಿಗಳು ಅಕ್ಕ ಹೇಳಿದ ಮೇಲಿನ ನಾಲ್ಕು ವಿಷಯಗಳನ್ನು ಮೀರಿ ವಿರಾಗಿಗಳಾಗಿದ್ದೇವೆ ಎಂದು ಬಹಿರಂಗದಲ್ಲಿ ತೋರ್ಪಡಿಸಿಕೊಳ್ಳುತ್ತಿರುವುದನ್ನು ಕಾಣುತ್ತಿದ್ದೇವೆ. ಆದರೆ ಅಂತರಂಗದಲ್ಲಿಯೂ ಸನ್ಯಾಸವನ್ನು ಧಾರಣೆ ಮಾಡಿದ್ದಾರೆಯೇ ? ಎಂದು ಅವರು ತಮ್ಮನ್ನು ತಾವೇ ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ. ಬಹಿರಂಗದಲ್ಲಿ ತೋರಿಕೆಯ ಸನ್ಯಾಸಿಯಾದರೆ ಸಾಲದು ಅಂತರಂಗದಲ್ಲಿಯೂ ನಿಜ ಸನ್ಯಾಸತ್ವ ಬರಬೇಕೆಂಬುದು ಅಕ್ಕಮಹಾದೇವಿಯ ಒತ್ತಾಸೆ. ಸಂಪತ್ತಿನ ನಿರಾಕರಣೆ ಬರಿ ಬಾಯಿಮಾತಿನಲ್ಲಿದ್ದರೆ ಸಾಲದು. ಅಕ್ಷರಶಃ ಅದು ಕಾರ್ಯರೂಪಕ್ಕಿಳಿಯಬೇಕು. ಯಾವುದೇ ಮೂಲದಿಂದ, ಯಾವುದೇ ರೂಪದಿಂದ ಬಂದರೂ ಅದನ್ನು ತೆಗೆದುಕೊಳ್ಳಬಾರದು. ಆಹಾರ ಪದಾರ್ಥಗಳ ಮೇಲಿನ ವೈರಾಗ್ಯ ಹೇಗಿರಬೇಕೆಂದರೆ ನಾಲಿಗೆ ಯಾವುದೇ ವಸ್ತುವಿನ ರುಚಿಯನ್ನು ಅರಿಯದಂತೆ ನಿರ್ಲಿಪ್ತವಾಗಿರಬೇಕು. ಜಾಗೃತಾವಸ್ಥೆ, ಸ್ವಪ್ನಾವಸ್ಥೆ, ಸುಷುಪ್ತಿಗಳಲ್ಲಿಯೂ ಹೆಣ್ಣಿನ ಬಗ್ಗೆ ಕಿಂಚಿತ್ತೂ ನೆನೆಹು, ಭಾವಗಳು ಸುಳಿಯಬಾರದು. ಮನವು ದೈಹಿಕ ಬೇಕು ಬೇಡಗಳನ್ನು, ಅಂತರಂಗಿಕ ಬಯಕೆ ವಾಂಛೆಗಳನ್ನು ಸಂಪೂರ್ಣವಾಗಿ ತ್ಯಜಿಸಬೇಕು. ಮನಸ್ಸು ಸ್ಪಟಿಕದಂತೆ ಪರಿಶುದ್ಧವಾಗಿ ದಿಗಂಬರವಾಗಬೇಕು. ಬಹಿರಂಗವಾಗಿ ವಸ್ತ್ರ ತ್ಯಜಿಸಿದ ದಿಗಂಬರತ್ವಕ್ಕೆ ಯಾವ ಅರ್ಥವೂ ಇಲ್ಲ, ಬೆಲೆಯೂ ಇಲ್ಲ. ಬಾಹ್ಯ ದಿಗಂಬರತ್ವವನ್ನು ಸಾರಾಸಗಟಾಗಿ ಖಂಡಿಸಿ ತಿರಸ್ಕರಿಸಿದ ಅಕ್ಕಳನ್ನು ದಿಗಂಬರಿಯಾಗಿ ಚಿತ್ರಿಸುತ್ತಾ ಬಂದಿರುವುದು ಖಂಡನೀಯ. ಹೀಗೆ ನಾಲ್ಕು ಅಂಶಗಳನ್ನು ಚೆನ್ನಾಗಿ ಅರಿತುಕೊಂಡರೆ ಜೀವನ ಪಾವನ. ಒಂದು ವೇಳೆ ಅರಿಯದೆ ಹೋದರೆ ಬದುಕು ನರಕ.

ಭಕ್ತಿಯ ಮಾರ್ಗದಲ್ಲಿ ನಡೆಯುವ ಸಾಧಕರಿಗೆ ನೂರೆಂಟು ವಿಘ್ನಗಳು, ತೊಂದರೆ ತಾಪತ್ರಯಗಳು ಬಂದೇ ಬರುತ್ತವೆ. ಅಂತಹ ಪ್ರಸಂಗದಲ್ಲಿ ಕುಗ್ಗಿ ಹೋಗಬಹುದಾದ ನಮ್ಮೆಲ್ಲರ ಮನ – ಮನಗಳಿಗೆ ಸಾಂತ್ವನ ಹೇಳುವ ಅಕ್ಕನ ರೀತಿ ಬೆರಗುಗೊಳಿಸುವಂತಹದು. ನಮ್ಮೆಲ್ಲರ ಬದುಕಿನಲ್ಲಿ ಬೇಕಾಬಿಟ್ಟಿ ಆಟವಾಡುವ ಮನಸ್ಸಿಗೆ ಸಾಂತ್ವನ ಹೇಳಿ ಅದನ್ನು ಭಕ್ತಿಯ ಮಾರ್ಗದತ್ತ ಎಳೆತಂದು ಕೇಂದ್ರೀಕರಿಸಿ, ಜೊತೆಯಾಗಿರಿಸಿಕೊಂಡು ಹೋಗುವ ವಿವರವನ್ನು ಹೇಳುವ ಅಕ್ಕಳ ಅಪರೂಪದ ವಚನವಿದು.

ಹೆದರದಿರು ಮನವೆ, ಬೆದರದಿರು ತನುವೆ,
ನಿಜವನರಿತು ನಿಶ್ಚಿಂತನಾಗಿರು.
ಫಲವಾದ ಮರನ ಕಲ್ಲಲಿ ಇಡುವುದೊಂದು ಕೋಟಿ,
ಎಲವದ ಮರನ ಇಡುವರೊಬ್ಬರ ಕಾಣೆ.
ಭಕ್ತಿಯುಳ್ಳವರ ಬೈವರೊಂದು ಕೋಟಿ,
ಭಕ್ತಿಯಿಲ್ಲದವರ ಬೈವರೊಬ್ಬರ ಕಾಣೆ.
ನಿಮ್ಮ ಶರಣರ ನುಡಿಯೆ ಎನಗೆ ಗತಿ, ಸೋಪಾನ!
ಚೆನ್ನಮಲ್ಲಿಕಾರ್ಜುನಾ.


ಹಣ್ಣುಗಳಿಂದ ತುಂಬಿರುವ ಮರವನ್ನು ಕಂಡರೆ ಹಣ್ಣಿಗಾಗಿ ಕೋಟಿಗಟ್ಟಲೆ ಜನ ಆ ಮರಕ್ಕೆ ಕಲ್ಲು ಹೊಡೆಯುತ್ತಾರೆ. ಆದರೆ ಯಾವುದೇ ಹಣ್ಣು ಇಲ್ಲದ ಬೂರಲದ ಮರಕ್ಕೆ ಯಾರೊಬ್ಬರೂ ಕಲ್ಲು ಹೊಡೆಯುವುದಿಲ್ಲ. ಅದೇ ರೀತಿ ಭಗವಂತನಲ್ಲಿ ಭಕ್ತಿ ಉಳ್ಳವರಾಗಿ ನಿತ್ಯವೂ ಭಕ್ತಿಯ ಮಾರ್ಗದಲ್ಲಿ ನಡೆಯುವವರನ್ನು ಕೋಟಿಗಟ್ಟಲೆ ಜನ ನಿಂದಿಸುತ್ತಿರುತ್ತಾರೆ. ಆದರೆ ಭಕ್ತಿಹೀನರನ್ನು. ಭವಿಗಳನ್ನು ಯಾರೊಬ್ಬರೂ ನಿಂದಿಸಲಾರರು. ಇಂತಹ ಲೋಕರೂಢಿಯ ಸಂಗತಿಯ ಒಂದೆರಡು ದೃಷ್ಟಾಂತಗಳನ್ನು ಉದಾಹರಿಸುವ ಅಕ್ಕಮಹಾದೇವಿ ಯಾವುದೇ ನಿಂದೆ, ಬೈಗುಳಗಳಿಗೆ ತಲೆಕೆಡಿಸಿಕೊಳ್ಳದೆ ಶರಣರ ನುಡಿಗಳೆ ನನಗೆ ಗತಿ ಎಂದು ನಂಬಿ ಅವರ ಮಾರ್ಗದರ್ಶನದಲ್ಲಿ ಮುನ್ನಡೆಯುವುದಾಗಿ ಹೇಳುತ್ತಾಳೆ. ಈ ಸಂದರ್ಭದಲ್ಲಿ ಹೆದರದಿರು, ಅಂಜದಿರು ಎಂದು ತನ್ನ ಮನಸ್ಸಿಗೆ ಧೈರ್ಯ ತುಂಬುತ್ತಾಳೆ. ಏನೇ ಬಂದರೂ ಧೈರ್ಯಗೆಡದಿರು, ಕಂಗೆಡದಿರು, ಎಂದು ಶರೀರಕ್ಕೆ ಹೇಳುತ್ತಾಳೆ. ತನು ಮನಗಳಿಗೆ ನಿಶ್ಚಿಂತರಾಗಿರಲು ತಿಳಿಸುತ್ತಾ ತನಗೆ ತಾನೇ ಸಾಂತ್ವನ ಹೇಳಿಕೊಳ್ಳುತ್ತಾಳೆ.

ಮನವೆಂಬ ಮುಗ್ಧ ಮಗುವೊಂದನ್ನು ಎದುರಿಗೆ ಕೂಡಿಸಿಕೊಂಡು ಅಂಜದಿರು, ಹೆದರದಿರು ಎಂದು ಧೈರ್ಯ ಹೇಳುವ ಅಕ್ಕಮಹಾದೇವಿಯ ರೀತಿ ಅಚ್ಚರಿ ಹುಟ್ಟಿಸುತ್ತದೆ. ಹಣ್ಣಿನ ಮರಕ್ಕೆ ಕಲ್ಲು ಹೊಡೆಯುವುದು ಮತ್ತು ಹಣ್ಣಿಲ್ಲದ ಮರಕ್ಕೆ ಕಲ್ಲು ಹೊಡೆಯದಿರುವುದು, ಇವೆರಡೂ ತೀರ ಸಾಮಾನ್ಯ ಸಂಗತಿಗಳು. ಭಕ್ತ ಮತ್ತು ಭವಿಗಳನ್ನು ಈ ಲೋಕ ನಡೆಸಿಕೊಳ್ಳುವ ರೀತಿಗೆ ಈ ಉದಾಹರಣೆಯನ್ನು ಅಕ್ಕಮಹಾದೇವಿ ತನ್ನ ಮನಸ್ಸಿಗೆ ವಿವರಿಸುತ್ತಾ ಧೈರ್ಯ ತುಂಬುತ್ತಾಳೆ. ಹಣ್ಣಿಗಾಗಿ ಹಣ್ಣಿನ ಮರಕ್ಕೆ ಜನ ಕಲ್ಲು ಹೊಡೆಯುತ್ತಾರೆ. ಆದರೆ ಇಲ್ಲಿ ಭಕ್ತಿಯ ಮಾರ್ಗದಲ್ಲಿ ನಡೆಯುವವರಿಗೆ ತೊಂದರೆ ಕೊಡಲಿಕ್ಕೆoದು ನಿಂದಿಸುತ್ತಾರೆ. ಅವರು ಕಲ್ಲು ಹೊಡೆದು ಹಣ್ಣು ಬೀಳಿಸಿ ಹಣ್ಣು ತಿಂದು ಸಂತೋಷಪಟ್ಟರೆ; ಭಕ್ತರನ್ನು ನಿಂದಿಸಿ ಭಕ್ತಿ ಮಾರ್ಗದಿಂದ ಅವರನ್ನು ವಿಚಲಿತರನ್ನಾಗಿಸಿ ನೊಂದುಕೊಳ್ಳುವಂತೆ ಮಾಡಿ ಸುಖಿಸುವ ವಿಘ್ನಸಂತೋಷಿಗಳು ಇವರಾಗಿದ್ದಾರೆ. ಈ ರೀತಿ ಭಕ್ತರನ್ನು ನಿಂದಿಸುತ್ತ ಲೇವಡಿ ಮಾಡುವ ಅಸಂಖ್ಯಾತ ಭಕ್ತಿಹೀನರು, ಆಷಾಢಭೂತಿಗಳು, ಅಂದೂ ಇದ್ದರು, ಇಂದೂ ಇದ್ದಾರೆ, ಮುಂದೆಯೂ ಇರುತ್ತಾರೆ. ಫಲ ಬಿಡದ ಬೂರಲದ ಮರದಂತಿರುವ ನಾಸ್ತಿಕರನ್ನು, ಡಾಂಬಿಕರನ್ನು ಯಾರಾದರೂ ನಿಂದಿಸಿದರೆ ಅವರು ಜಗಳಕ್ಕೆ ನಿಲ್ಲುವುದು ಶತಸಿದ್ಧ. ಹೀಗಾಗಿ ಇಂಥವರಿಗೆ ಯಾರೂ ಏನೂ ಅನ್ನಲಾರರು.

ಕಾರಣ ಅಂತರಂಗಿಕವಾಗಿ ಹಾಗೂ ಬಹಿರಂಗವಾಗಿ ಭಕ್ತಿಯ ಮಾರ್ಗ ಅಷ್ಟು ಸುಲಭವಾದುದಲ್ಲ. ಇಲ್ಲಿ ಹೆಜ್ಜೆ ಹೆಜ್ಜೆಗೂ ಅಡ್ಡಿ ಆತಂಕಗಳು ಬರುತ್ತವೆ. ಹೀಗಾಗಿಯೇ ಬಸವಣ್ಣನವರು ಭಕ್ತಿಯೆಂಬುದನ್ನು ಮಾಡಬಾರದು. ಅದೆಷ್ಟು ಕಷ್ಟಕರ ಎಂಬುದನ್ನು ಹೀಗೆ ಹೇಳುತ್ತಾರೆ.

” ಭಕ್ತಿಯೆಂಬುದ ಮಾಡಬಾರದು:
ಗರಗಸದಂತೆ ಹೋಗುತ್ತ ಕೊಯ್ವುದು, ಬರುತ್ತ ಕೊಯ್ವುದು!
ಘಟಸರ್ಪನಲ್ಲಿ ಕೈದುಡುಕಿದರೆ ಹಿಡಿವುದ ಮಾಣ್ಬುದೆ,
ಕೂಡಲಸಂಗಮದೇವಾ! “


ಹೀಗೆ ಒಂದೆಡೆ ಭಕ್ತಿಯ ಸಾಧನೆಯ ಕಠಿಣ ಮಾರ್ಗ, ಇನ್ನೊಂದೆಡೆ ನಿಂದಿಸುವ, ಹೆದರಿಸುವ, ಲೌಕಿಕರ ಜನ ಸಮೂಹ. ಹೀಗಾಗಿ ಜರ್ಜರಿತಗೊಂಡ ಮನಸ್ಸು ಹೆದರೀತೆಂದು ಅಕ್ಕಮಹಾದೇವಿ ಮೇಲಿನ ದೃಷ್ಟಾಂತಗಳನ್ನು ಹೇಳುವುದರ ಮೂಲಕ ‘ಅಂಜದಿರು, ಅಂಜದಿರು, ‘ ಎಂದು ತನ್ನ ಮನಸ್ಸಿಗೆ ಸಾಂತ್ವನ ಹೇಳುತ್ತಾಳೆ. ಇಂತಹ ಸಂದರ್ಭದಲ್ಲಿ ಮನದ ದೃಢತೆಗೆ ಏಕಾಗ್ರತೆಗೆ ಶರಣರ ಸೂಳ್ನುಡಿಗಳ ಮೊರೆಹೋಗುತ್ತಾಳೆ. ಅವರ ಅಮೃತ ಸಮಾನ ನುಡಿಗಳನ್ನು ನಂಬಿ, ನನ್ನ ಮುಕ್ತಿಗೆ, ಮೋಕ್ಷಕ್ಕೆ ಅವು ದಾರಿದೀಪವೆಂದು ಗಟ್ಟಿಯಾಗಿ ಹಿಡಿದುಕೊಂಡಿರುವೆನೆಂದು ಹೇಳುತ್ತಾಳೆ.

ಅಕ್ಕಮಹಾದೇವಿಯ ವಚನಗಳ ರಾಶಿಯಲ್ಲಿ ಇಂತಹ ಸಹಸ್ರಾರು ಸ್ವಾನುಭವದ ಅಮೃತ ಬಿಂದುಗಳಿವೆ. ಅವುಗಳ ಆಯ್ಕೆ, ಅನುಸಂಧಾನ, ಆಚರಣೆ ನಮಗೆ ಬಿಟ್ಟಿದ್ದು! ಅಲ್ಲವೇ !!

ಪ್ರೊ. ಜಿ ಎ. ತಿಗಡಿ
ಧಾರವಾಡ
ಮೋಬೈಲ್‌ ನಂ. +91 99026 71015

Loading

This Post Has 2 Comments

  1. ಸೋಮಶೇಖರ ಬಸಪ್ಪನವರ

    ಶರಣರ ವಚನಗಳ ಭಾವಾರ್ಥ ಅರಿತು ಅವುಗಳ ನಿರಂತರ ಅನುಷ್ಠಾನ ನಮ್ಮೆಲ್ಲರ ಜೀವನದಲ್ಲಿ ಬಹಳ ಮುಖ್ಯ.
    ಬರೀ ಓದುವುದರಿಂದ ಅಥವಾ ಕೇಳುವದರಿಂದ ನಮ್ಮ ಜೀವನ ಹಸನಾಗುವದಿಲ್ಲ.
    ಅದು ಮೊದಲು ನನ್ನಿಂದಲೇ ಶುರುವಾಗಬೇಕು. ಕೆಲವು ವಿಷಯಗಳಲ್ಲಿ ಆಗಿದೆ.ಇನ್ನು ಎರಡು ವಿಷಯಗಳಲ್ಲಿ ಅನುಷ್ಠಾನಕ್ಕೆ ದಿನ ನಿತ್ಯವೂ ಪರಿಶ್ರಮ ಸಾಗಿದೆ.
    ಶರಣು ಶರಣಾರ್ಥಿಗಳು

  2. Rajashekaraiah B

    Vachana sahitya adbhutavagide tumba channagi bandiruthade

Leave a Reply