
ಹರನ ಕರುಣೋದಯದ ತೆರದಲಿ ಬೆಳಗು ತೆರೆಯುವ ಹೊತ್ತಿಗೆ
ವೇದಘೋಷದ ದಿವ್ಯಲಹರಿಯು ಮನವು ತೊಳೆಯಲು ಮೆಲ್ಲಗೆ
ಬರುವ ಶ್ರೀಗುರು ಪಾದುಕೆಯ ದನಿ ಅನುರಣಿತವಾಗಲು ಮೌನಕೆ
ಸಿದ್ಧಗಂಗೆಯ ನೆಲವು ಜಲವೂ ನಮಿಸಿ ನಿಲುವುದು ಸುಮ್ಮಗೆ || 01 ||
ಬೆಟ್ಟ ಬಂಡೆಯ ನಡುವೆ ಗಿಡ ಮರ ಹೂವನೆತ್ತಿರೆ ಪೂಜೆಗೆ
ದೇಗುಲದ ಪೂಜಾರತಿಯ ಗಂಟೆಯ ಮೊಳಗು ಮುಟ್ಟಲು ಬಾನಿಗೆ
ಧೂಪಗಂಧವು ಮಂದಮಂದಾನಿಲ ಜೊತೆಯೊಳು ಮನಸಿಗೆ
ಸಂಭ್ರಮವನುಕ್ಕಿಸೆ ಬೆಳಗು ಇಳಿವುದು ಸಿದ್ಧಗಂಗೆಯ ಕ್ಷೇತ್ರಕೆ || 02 ||
ಇಲ್ಲಿ ಇಲ್ಲ ಪವಾಡದದ್ಭುತ ಅಥವ ಉತ್ಸವದಬ್ಬರ
ಮುಡಿಯನೆತ್ತಿದೆ ಸರಳ ಸಾಧಾರಣ ನದುಕಿನ ಗೋಪುರ
ದರ ಮೇಲಿದೆ ತ್ಯಾಗಧ್ವಜ ಕೈಬೀಸಿ ಕರೆವುದು ಪಥಿಕರ
ಪರಮ ನಿರಪೇಕ್ಷೆಯಲ್ಲಿ ದಿನವೂ ಸೇವೆಗಾಗಿದೆ ಸರ್ವರ || 03 ||
ಭಿಕ್ಷೆ ಹೊರಟಿದೆ ಜಂಗಮದ ಜೋಳಿಗೆ ಲಕ್ಷಜನಗಳ ಪೊರೆದಿದೆ
ತೀರ್ಥವಾಗಿದೆ ಭಕ್ತರಿಗೆ ಜೊತೆಗೇ ಸ್ಪೂರ್ತಿಯಾಗಿದೆ ಬುದ್ಧಿಗೆ
ಬಂದ ಹಣತೆಗೆ ಎಣ್ಣೆ-ಬತ್ತಿಯ ದೀಪ್ತದಾನವ ಮಾಡಿದೆ
ರಕ್ಷೆಯಾಗಿದೆ ಮುಗಿಲನೇರಿದ ಎಷ್ಟೋ ರೆಕ್ಕೆಯ ಹಾದಿಗೆ || 04 ||
ಸದ್ದುಗದ್ದಲವಿಲ್ಲದ ಸಾಧನೆ ಇಲ್ಲಿ ಗದ್ದುಗೆಯೇರಿದೆ
ಕಾಯಕವೇ ಕೈಲಾಸವೆನ್ನುವ ಮಾತು ಕೃತಿಯೊಳು ಮೂಡಿದೆ
ಕಾವಿಯುಡುಗೆಯನುಟ್ಟು ನಭವೇ ಕಿರಣ ಹಸ್ತವ ಚಾಚಿದೆ
ಎಲ್ಲ ನನ್ನವರೆನ್ನುವ ಭಾವದ ಕರುಣೆಯೇ ಕಣ್ತೆರೆದಿದೆ || 05 ||
ಡಾ. ಜಿ. ಎಸ್. ಶಿವರುದ್ರಪ್ಪ.
ಕಲ್ಯಾಣದಲ್ಲಿ ಬಿಜ್ಜಳನ ಆಸ್ಥಾನಕ್ಕೆ ಹೋಗುವ ದಾರಿಯಲ್ಲಿ ಬಸವಣ್ಣನವರು ಊರ ಮುಂದಿನ ಒಂದು ವೃತ್ತಕ್ಕೆ ಬಂದಾಗ ಅಲ್ಲಿದ್ದ ಜನರನ್ನು ನೋಡಿ ಶರಣು ಶರಣಾರ್ಥಿಗಳು ಎನ್ನುತ್ತಾರೆ. ಆಗ ಕಲ್ಯಾಣದ ಜನರು ಅವರನ್ನು ಸುತ್ತುವರೆದು ನಿಂತ ಚಿತ್ರಣ ನಮ್ಮ ಕಣ್ಣ ಮುಂದೆ ಬರಬೇಕು. ಶ್ರೇಣೀಕೃತ ಸಮಾಜದ ವರ್ಣಾಶ್ರಮ ವ್ಯವಸ್ಥೆಯಲ್ಲಿ ತುಳಿತಕ್ಕೊಳಗಾದಂಥ ಜನಗಳು ತಮ್ಮ ಕರಗಳನ್ನು ಜೋಡಿಸಿ ಅವರನ್ನು ಸುತ್ತುವರೆದು ನಿಂತ ದೃಶ್ಯ ಎಂಥವರಿಗೂ ಮುದ ನಿಡುವಂತಿದೆ. ಎಲ್ಲರ ಕಷ್ಟ ಕಾರ್ಪಣ್ಯಗಳನ್ನು ದೂರ ಮಾಡುವ ವ್ಯಕ್ತಿಯ ದರ್ಶನ ಭಾಗ್ಯದಿಂದ ಅವರ ಕಣ್ಣುಗಳಲ್ಲಿರುವ ಮಿಂಚನ್ನು ಒಂದು ಬಾರಿ ಕಲ್ಪಿಸಿಕೊಂಡು ನೋಡಿ, ಹೃದಯದಲ್ಲಿ ಒಂದು ತಂಗಾಳಿಯ ಸಿಂಚನ ಇಡೀ ತನುವನ್ನು ತಂಪಾಗಿಸುತ್ತದೆ. ಮೇಲು-ಕೀಳೆಂಬ ಭಾವನೆಯನ್ನು ಕಿತ್ತೆಸೆದು ಸಮ ಸಮಾಜವನ್ನು ನಿರ್ಮಿಸುವ ನಿಟ್ಟಿನಲ್ಲಿ ಬಸವಣ್ಣನವರು ಮಾಡಿದ ಕ್ರಾಂತಿ ಇಡೀ ಪ್ರಪಂಚದಲ್ಲಿಯೇ ಒಂದು ಅದ್ಭುತ ನಿದರ್ಶನ. ಇಂದಿಗೂ ಬಸವಣ್ಣನವರನ್ನು ನೆನೆಸಿಕೊಂಡರೆ ಮೈಯಲ್ಲಿ ಮಿಂಚಿನ ಸಂಚಾರವಾಗುವುದಂತೂ ಸೂರ್ಯ-ಚಂದ್ರರಷ್ಟೇ ಸತ್ಯ.

ಇದೇ ಚಿತ್ರಣವನ್ನು ಕಣ್ಣಾರೆ ಕಂಡದ್ದನ್ನು ಇಲ್ಲಿ ದಾಖಲಿಸುವ ಸೌಭಾಗ್ಯ ಈ ಉಪನ್ಯಾಸದ ಮೂಲಕ ನನಗೆ ಲಭಿಸಿದೆ. ಆಗ ಏಪ್ರಿಲ್-ಮೇ ದಿನಗಳು. ನನ್ನ ಅಪಾರ್ಟಮೆಂಟ್ ಉದ್ಘಾಟನೆಗೆ ಶ್ರೀಗಳನ್ನು ಆಮಂತ್ರಿಸಲು ಬೆಳಗಿನ ಜಾವ 5:30 ಕ್ಕೆ ಶ್ರೀಗಳನ್ನು ನೋಡಲು ನಾನು ಮತ್ತು ನನ್ನ ಶ್ರೀಮತಿಯವರು ಹೋಗಿದ್ದೆವು. ವಿದ್ಯಾರ್ಥಿಗಳನ್ನು ಶೈಕ್ಷಣಿಕ ಸಾಲಿಗೆ ಪ್ರವೇಶ ಪಡೆದುಕೊಳ್ಳಲು ಮಠದ ಮುಂದೆ ಜನನಂಗುಳಿ ಈ ದಿನಗಳಲ್ಲಿ ಸಾಮಾನ್ಯ ವಿಷಯ. ನಾವು ಹೋದಾಗಲೂ ಕೂಡ ಈ ದೃಶ್ಯ ನಮಗೆ ಕಂಡು ಬಂದಿತು. ತಮ್ಮ ಪೀಠದಲ್ಲಿ ಆಸೀನರಾಗಿದ್ದ ಶ್ರೀಗಳು ವಿದ್ಯಾರ್ಥಿಗಳ ಅರ್ಜಿಗಳನ್ನು ಪರಿಶೀಲಿಸಿ ಆ ಪತ್ರಕ್ಕೆ ರುಜು ಹಾಕಿ ಪ್ರವೇಶವನ್ನು ನೀಡುತ್ತಿದ್ದರು.
ಎಲ್ಲ ವರ್ಗದ ಎಲ್ಲ ಧರ್ಮದ ಮತ್ತು ಎಲ್ಲ ಜಾತಿಯ ಜನರೂ ಅಲ್ಲಿ ಇದ್ದರು. ನನಗೆ ಕಲ್ಯಾಣದಲ್ಲಿ ಬಸವಣ್ಣನವರು ಎಲ್ಲ ಜನರ ಮಧ್ಯೆ ಇರುವ ಸಾಕ್ಷಾತ್ ದೃಶ್ಯ ಕಣ್ಣಿಗೆ ಕಟ್ಟಿತ್ತು. ಆಣತಿ ದೂರದಲ್ಲಿ ನಿಂತಿದ್ದ ಮುಗ್ಧ ದಂಪತಿಗಳನ್ನು ಹತ್ತಿರಕ್ಕೆ ಕರೆದು ಅವರನ್ನು ಅತ್ಯಂತ ಪ್ರೀತಿಯಿಂದ ಮಾತಾಡಿಸುವ ಚಿತ್ರಣ ನಮ್ಮ ಮನಸ್ಸನ್ನು 12 ನೇ ಶತಮಾನಕ್ಕೆ ಕರೆದುಕೊಂಡು ಹೋಗಿತ್ತು. Irrespective of Caste, Creed and Financial Status ಅವರನ್ನು ಮಾತಾಡಿಸುವ ಮತ್ತು ಅವರ ಯೋಗಕ್ಷೇಮವನ್ನು ವಿಚಾರಿಸುತ್ತಿದ್ದ ರೀತಿ ನಮ್ಮನ್ನು ಮಂತ್ರಮುಗ್ಧರನ್ನಾಗಿಸಿತ್ತು. ಬಸವಣ್ಣನವರ ಒಂದು ವಚನ ಈ ಕ್ಷಣಕ್ಕೆ ಸಾಕ್ಷೀಭೂತ ವಾಗಬಹುದು.
ದೇವಸಹಿತ ಭಕ್ತ ಮನೆಗೆ ಬಂದರೆ
ಕಾಯಕವಾವುದೆಂದು ಬೆಸಗೊಂಡೆನಾದಡೆ
ನಿಮ್ಮಾಣೆ! ನಿಮ್ಮ ಪುರಾತರಾಣೆ! ತಲೆದಂಡ! ತಲೆದಂಡ!
ಕೂಡಲಸಂಗಮದೇವಾ, ಭಕ್ತರಲ್ಲಿ ಕುಲವನರಸಿದೆಡೆ
ನಿಮ್ಮ ರಾಣೀವಾಸದಾಣೆ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-44 / ವಚನ ಸಂಖ್ಯೆ-453)
ಇದೇ ಅಲ್ಲವಾ ಭಾವೈಕ್ಯತೆಯ ಸಂದೇಶ. ಒಂದಷ್ಟು ಕಾಲ ಈ ದೃಶ್ಯವನ್ನು ಕಣ್ತುಂಬಿಸಿಕೊಳ್ಳುವಷ್ಟರಲ್ಲಿ ನಮ್ಮನ್ನು ಹತ್ತಿರಕ್ಕೆ ಕರೆದ ಶ್ರೀಗಳು ಏನು ಬಂದದ್ದು ಅಂತ ವಿಚಾರಿಸಿದರು. ನಮ್ಮ ಕಾರ್ಯಕ್ರಮದ ವಿಷಯ ತಿಳಿಸಿದಾಗ ಈ ಎಲ್ಲ ಮಕ್ಕಳೂ ಶಾಲೆಗೆ ಸೇರಿಸಿದಾಗ ಬರುತ್ತೇನೆ ಕಾಯಬಹುದೇ ಎಂದು ಹೇಳಿದಾಗ ಆಗಲಿ ಗುರುಗಳೆ ಅಂತ ಹೇಳಿ ಬಂದೆವು. ಇಂಥ ಮಕ್ಕಳನ್ನು ಪ್ರೀತಿಸುವಲ್ಲಿ ಸ್ವಾಮೀಜಿಗಳು ಯಾವಾಗಲೂ ನಿರತರಾಗಿರುತ್ತಿದ್ದರು ಎನ್ನುವುದೇ ನಮಗೆ ಅಪ್ಯಾಯಮಾನವಾದ ವಿಷಯವಾಗಿತ್ತು.
ಸಿದ್ಧಗಂಗೆಯಲ್ಲಿ ಈ ವರ್ಷ ಸರಿ ಸುಮಾರು 10,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆಂದರೆ ಶ್ರೀಮಠದ ಅಗಾಧತೆಯನ್ನು ನಾವು ಮನಗಾಣಬೇಕು. ಅತ್ಯಂತ ವಿಸ್ಮಯ ಮತ್ತು ಆಶ್ಚರ್ಯಕರ ಸಂಗತಿ ಎಂದರೆ ಧರ್ಮ ಜಾತಿಗಳ ವ್ಯತ್ಯಾಸವನ್ನು ನಾವು ಇಲ್ಲಿ ಕಾಣಲಾರೆವು. ಎಲ್ಲ ಜಾತಿ-ಜನಾಂಗದ ವಿದ್ಯಾರ್ಥಿಗಳು ಇಲ್ಲಿನ ವಿದ್ಯಾರ್ಥಿ ನಿಲಯದಲ್ಲಿ ಆಶ್ರಯ ಪಡೆದಿದ್ದನ್ನು ನಾವು ನೋಡಬಹುದು. ಭವ್ಯ ಭಾರತದ ಭಾವೈಕ್ಯತೆಯ ಸರ್ವಸಮಾನತೆ ಪ್ರತೀಕವಾಗಿದೆ ಶ್ರೀ ಸಿದ್ಧಗಂಗಾ ಕ್ಷೇತ್ರ. ಅದನ್ನು ಪುಷ್ಠೀಕರಿಸುವಂತೆ ಭಾರತದ ಪ್ರಧಾನ ಮಂತ್ರಿಗಳಾಗಿದ್ದ ಭಾರತರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿಯವರು ಹೇಳಿದ್ದನ್ನು ನಾವು ಇಲ್ಲಿ ಸ್ಮರಿಸಿಕೊಳ್ಳಬೇಕು.
ಉತ್ತರದಲ್ಲಿ ಗಂಗೆ ದಕ್ಷಿಣದಲ್ಲಿ ಸಿದ್ಧಗಂಗೆ. ಇಲ್ಲಿನ ಪರಿಸರ ತ್ರಿವಿಧ ದಾಸೋಹಕ್ಕೆ ಮತ್ತು ಮಾನವೀಯತೆಗೊಂದು ಸಾಕ್ಷಿಪ್ರಜ್ಞೆ. ಇಂಥ ಕ್ಷೇತ್ರಗಳು ಭವ್ಯ ಭಾರತದ ಪರಂಪರೆಯನ್ನು ಉಳಿಸಿ ಬೆಳೆಸಿ ಇಡೀ ಪ್ರಪಂಚದಾದ್ಯಂತ ಭಾರತದ ಘನತೆಯನ್ನು ಹೆಚ್ಚಿಸಿವೆ. ನಮ್ಮ ಮುಂದಿನ ಪೀಳಿಗೆಗೆ ಮಾರ್ಗದರ್ಶನ ನೀಡುತ್ತದೆ. ಇಂಥ ಕ್ಷೇತ್ರದಲ್ಲಿ ನಾನು ಓಡಾಡಿದ್ದು ನನ್ನ ಜನ್ಮ ಸಾರ್ಥಕವಾಯಿತು.
ಎಂಥ ಅದ್ಭುತ ಮಾತುಗಳು. ಶ್ರೀ ಸಿದ್ಧಗಂಗಾ ಮಠದ ಭವ್ಯ ಭಾವೈಕ್ಯತೆಯನ್ನು ಈ ಮಾತುಗಳು ನಮ್ಮನ್ನು ಮಂತ್ರಮುಗ್ಧರನ್ನಾಗಿ ಮಾಡುತ್ತವೆ.
ಸಾಂಸ್ಕೃತಿಕವಾಗಿ, ಆಧ್ಯಾತ್ಮಿಕತೆಯ ಜೊತೆಗೆ ಸರ್ವಧರ್ಮದ ನೆಲೆಬೀಡಾಗಿ ಶ್ರೀ ಮಠದ ಉನ್ನತ ಪರಂಪರೆಯನ್ನು ಅಭೂತಪೂರ್ವವಾಗಿ ಪುನರುತ್ಥಾನಗೊಳಿಸಿದವರು ಸಿದ್ಧಗಂಗೆಯ ಸಿದ್ಧಪುರುಷ ಮತ್ತು ನಡೆದಾಡುವ ದೇವರೆಂದೆ ಪ್ರಖ್ಯಾತಿಯನ್ನು ಪಡೆದ ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳು. ಅವರ ಬಗ್ಗೆ ಒಂದಷ್ಟು ವಿವರಣೆಯನ್ನು ನೋಡೋಣ.
ಶ್ರೀ ಅಟವಿ ಉದ್ದಾನ ಶಿವಯೋಗಿಗಳ ನಂತರ ಶ್ರೀಮಠದ ಪೀಠಾಧಿಪತಿಯಾದವರು ಶ್ರೀ ಮರುಳಾಧ್ಯ ಮಹಾಸ್ವಾಮಿಗಳು. 1930 ರಲ್ಲಿ ಪರಮ ಪೂಜ್ಯ ಶ್ರೀ ಮರುಳಾರಾಧ್ಯರು ಲಿಂಗೈಕ್ಯರಾದಾಗ ಶಿವಣ್ಣನವರನ್ನು ಉತ್ತರಾಧಿಕಾರಿಯೆಂದು ಘೋಷಿಸಿದರು. 03.03.1930 ರಂದು ಉದ್ದಾನ ಶಿವಯೋಗಿಗಳು ಅವರಿಗೆ ಶ್ರೀ ನಿರಂಜನ ಪ್ರಣವ ಸ್ವರೂಪಿ ಶ್ರೀ ಶಿವಕುಮಾರ ಮಹಾಸ್ವಾಮಿಗಳೆಂದು ನಾಮಕರಣ ಮಾಡಿ ನಿರಂಜನ ಜಂಗಮ ವಿರಕ್ತಾಶ್ರಮ ದೀಕ್ಷೆ ನೀಡಿದರು. ಅಂದಿನಿಂದ ಜೀವನ ಪರ್ಯಂತ ನಾಡಿನ ಲಕ್ಷಾಂತರ ವಿದ್ಯಾರ್ಥಿಗಳ ಜೀವನವನ್ನು ರೂಪಿಸುವಲ್ಲಿ ನಿರತರಾದರು. ಇವರ ಉನ್ನತ ವಿರಕ್ತ ಪರಂಪರೆಯನ್ನು ನಾವು ಕಂಡಾಗ ಅಕ್ಕಮಹಾದೇವಿಯವರ ಒಂದು ವಚನ ನೆನಪಾಗತದೆ.
ಅರ್ಥ ಸನ್ಯಾಸಿಯಾದಡೇನಯ್ಯಾ, ಆವಂಗದಿಂದ ಬಂದಡೂ ಕೊಳದಿರಬೇಕು.
ರುಚಿ ಸನ್ಯಾಸಿಯಾದಡೇನಯ್ಯಾ, ಜಿಹ್ವೆಯ ಕೊನೆಯಲ್ಲಿ ಮಧುರವನರಿಯದಿರಬೇಕು.
ಸ್ತ್ರೀ ಸನ್ಯಾಸಿಯಾದಡೇನಯ್ಯಾ, ಜಾಗ್ರ ಸ್ವಪ್ನ ಸುಷುಪ್ತಿಯಲ್ಲಿ ತಟ್ಟಿಲ್ಲದಿರಬೇಕು.
ದಿಗಂಬರಿಯಾದಡೇನಯ್ಯಾ, ಮನ ಬತ್ತಲೆಯಾಗಿರಬೇಕು.
ಇಂತೀ ಚತುರ್ವಿಧದ ಹೊಲಬನರಿಯದೆ ವೃಥಾ ಕೆಟ್ಟರು,
ಕಾಣಾ ಚೆನ್ನಮಲ್ಲಿಕಾರ್ಜುನಾ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-791 / ವಚನ ಸಂಖ್ಯೆ-45)
“ಅರ್ಥ ಸನ್ಯಾಸಿಯಾದಡೇನಯ್ಯಾ ಆವಂಗದಿಂದ ಬಂದಡೂ ಕೊಳದಿರಬೇಕು” ಯಾವ ಕಡೆಯಿಂದ ಬಂದರೂ ಮುಟ್ಟದೇ ಇರುವಂಥಾ ಒಂದು ಮನಸ್ಥಿತಿ ಇರಬೇಕು.
“ರುಚಿ ಸನ್ಯಾಸಿಯಾದಡೇನಯ್ಯಾ ಜಿಹ್ವೆಯ ಕೊನೆಯಲ್ಲಿ ಮಧುರವನರಿಯದಿರಬೇಕು”. ಸಾಧ್ಯ ಇದೆಯಾ ಇದು? ನಾಲಿಗೆಗೆ ಏನ್ ತಿಂತಾ ಇದೀವಿ ಅನ್ನೋದರ ರುಚಿ ಗೊತ್ತಾಗದೇ ಇರುತ್ತಾ? ನಾನು ನನ್ನ ಇಂದ್ರಿಯವನ್ನ ನಿಗ್ರಹ ಮಾಡಿದ್ದೇನೆ ಅಂತ ಅಂದರೆ ನಾವು ಏನು ತಿಂದರೂ ಕೂಡ ನಾಲಿಗೆಯ ಕೊನೆಯಲ್ಲೂ ಅದರ ರುಚಿಯ ಅನುಭವ ನನ್ನ ನಾಲಿಗೆಗೆ ಬರಕೂಡದು. ಅದು ನಿಜವಾದ ಸನ್ಯಾಸತ್ವ ಅಥವಾ ಇಂದ್ರಿಯ ನಿಗ್ರಹ. ಅಂಥ ಸ್ಥಾನದಲ್ಲಿ ನಿಂತಿದ್ದವರು ಪರಮ ಪೂಜ್ಯ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರು.

1917 ರಲ್ಲಿ ಪ್ರಾರಂಭವಾದ ಶ್ರೀ ಸಿದ್ಧಲಿಂಗೇಶ್ವರ ಉಚಿತ ವಿದ್ಯಾರ್ಥಿ ನಿಲಯದಲ್ಲಿ ವಿವಿಧ ಜಾತಿ-ಧರ್ಮದ 10,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಸತಿ, ಊಟ ಸಹಿತ ಇಲ್ಲಿ ಆಶ್ರಯ ಪಡೆದಿದ್ದಾರೆ. ಈ ಮಠವು ಜಾತಿ-ಧರ್ಮ ಭೇಧವಿಲ್ಲದೆ, ಪ್ರಾಂತ-ಪ್ರದೇಶ ತಾರತಮ್ಯ ಮಾಡದೇ ಲಕ್ಷಾಂತರ ಮಕ್ಕಳಿಗೆ ಆಶ್ರಯ ನೀಡಿದೆ. 5 ವಯಸ್ಸಿನಿಂದ 18 ವರ್ಷ ವಯಸ್ಸಿನ ಯಾವುದೇ ಹಂತದಲ್ಲಿ ಅನ್ನ ದಾಸೋಹ, ಜ್ಞಾನ ದಾಸೋಹ ಮತ್ತು ಆಶ್ರಯ ದಾಸೋಹ (ತ್ರಿವಿಧ ದಾಸೋಹ) ವನ್ನು ಒದಗಿಸುತ್ತ ಎಲ್ಲ ಧರ್ಮ, ಜಾತಿ ನೋಡದೆ ಎಲ್ಲಾ ಮಕ್ಕಳಿಗೂ ಅವಕಾಶವಿರುತ್ತದೆ. 1963 ರಲ್ಲಿ ಸ್ಥಾಪನೆಯಾದ ಸಿದ್ಧಗಂಗಾ ವಿದ್ಯಾಸಂಸ್ಥೆ 132 ಕ್ಕೂ ಹೆಚ್ಚು ಅಧಿಕ ಶಾಲಾ ಕಾಲೇಜುಗಳನ್ನು ಹೊಂದಿದೆ. ಪ್ರಖ್ಯಾತ ಇಂಜನೀಯರಿಂಗ್ ಕಾಲೇಜು ಮತ್ತು ಇತ್ತೀಚೆಗೆ ಪ್ರಾರಂಭವಾದ ಮೆಡಿಕಲ್ ಕಾಲೇಜು ಸಿದ್ಧಗಂಗಾ ಮಠದ ಶಿಕ್ಷಣ ಪ್ರೀತಿಯನ್ನು ತೋರಿಸುತ್ತದೆ.
ಪ್ರತೀ ಮುಂಜಾನೆ ಮತ್ತು ಸಂಜೆಯ ವೇಳೆಗೆ ಶ್ರೀಮಠದ ಆವರಣದಲ್ಲಿ ನಡೆಯುವ ಸಾಮೂಹಿಕ ಪ್ರಾರ್ಥನೆಯಲ್ಲಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಂದ ಹಿಡಿದು ಪದವಿ ಓದುತ್ತಿರುವ ತರುಣರವರೆಗೆ ಪಾಲ್ಗೊಳ್ಳುತ್ತಾರೆ. ಸಾವಿರಾರು ಮಕ್ಕಳು ಒಟ್ಟಿಗೆ ಪ್ರಾರ್ಥನೆಯನ್ನು ಮಾಡುವುದನ್ನು ನೋಡುವುದೇ ಒಂದು ಸೌಭಾಗ್ಯ ಮತ್ತು ಭಾವೈಕ್ಯತೆಯ ಪ್ರತೀಕ.
ಶ್ರೀ ಸಿದ್ಧಗಂಗಾ ಮಠವು ಮಾಡಿದ ಸೇವೆ, ಸಾಧನೆ, ತ್ಯಾಗ, ಕಟ್ಟಿ ಬೆಳೆಸಿದ ಸಂಸ್ಥೆಗಳು ಎಲ್ಲಕ್ಕಿಂತ ಮಿಗಿಲಾಗಿ ಸಾಮಾಜಿಕ ಸಾಮರಸ್ಯ ಮತ್ತು ಭಾವೈಕ್ಯತೆಗೆ ಹೆಸರಾದದ್ದು ಈ ಕ್ಷೇತ್ರವನ್ನು ಅಜರಾಮರಗೊಳಿಸಿವೆ. ಇದನ್ನು ಅಕ್ಕಮಹಾದೇವಿಯವರ ಒಂದು ವಚನ ಅತ್ಯುತ್ತಮ ಹೋಲಿಕೆ ಅಂತ ನನ್ನ ಅನಿಸಿಕೆ.
ಎನ್ನ ಮನ ಪ್ರಾಣ ಭಾವ ನಿಮ್ಮಲ್ಲಿ ನಿಂದ ಬಳಿಕ
ಕಾಯದ ಸುಖವ ನಾನೇನೆಂದರಿಯೆನು.
ಆರು ಸೋಂಕಿದರೆಂದರಿಯೆನು.
ಚೆನ್ನಮಲ್ಲಿಕಾರ್ಜುನನ ಮನದೊಳಗೆ ಒಚ್ಚತವಾದ ಬಳಿಕ
ಹೊರಗೇನಾಯಿತ್ತೆಂದರಿಯೆನು.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-797 / ವಚನ ಸಂಖ್ಯೆ-100)
ತಮ್ಮ ಇಡೀ ಜೀವನವನ್ನು ಮಕ್ಕಳ ಮತ್ತು ಮನುಕುಲದ ಉದ್ಧಾರಕ್ಕೆ ಮುಡುಪಿಟ್ಟವರು ಪರಮ ಪೂಜ್ಯ ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳು. ಅವರಿಗೆ ದೇವರು ಅಂದರೆ ಮಕ್ಕಳೇ ಆಗಿದ್ದರು ಅನ್ನೋದು ಉತ್ಪ್ರೇಕ್ಷೆ ಅಲ್ಲಾ ಅಂತ ನನ್ನ ಅನಿಸಿಕೆ. ಕಾಯಕ ಯೋಗಿ ಶರಣ ಮೋಳಿಗೆ ಮಾರಯ್ಯನವರ ಈ ವಚನ ನನ್ನ ಹೃದಯಕ್ಕೆ ಅತ್ಯಂತ ಹತ್ತಿರವಾದಂಥ ವಚನ. ಈ ವಚನದ ಮೂಲಕ ಈ ಉಪನ್ಯಾಸಕ್ಕೆ ವಿರಾಮ ಹೇಳುತ್ತೇನೆ.
ಆನೆ ಕುದುರೆ ಭಂಡಾರವಿರ್ದಡೇನೊ?
ತಾನುಂಬುದು ಪಡಿಯಕ್ಕಿ, ಒಂದಾವಿನ ಹಾಲು, ಮಲಗುವುದರ್ಧ ಮಂಚ.
ಈ ಹುರುಳಿಲ್ಲದ ಸಿರಿಯ ನೆಚ್ಚಿ ಕೆಡಬೇಡ ಮನುಜಾ.
ಒಡಲು ಭೂಮಿಯ ಸಂಗ, ಒಡವೆ ತಾನೇನಪ್ಪುದೊ?
ಕೈವಿಡಿದ ಮಡದಿ ಪರರ ಸಂಗ, ಪ್ರಾಣ ವಾಯುವಿನ ಸಂಗ.
ಸಾವಿಂಗೆ ಸಂಗಡವಾರೂ ಇಲ್ಲ ಕಾಣಾ, ನಿಃಕಳಂಕ ಮಲ್ಲಿಕಾರ್ಜುನಾ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-44 / ವಚನ ಸಂಖ್ಯೆ-453)
ಸಂಗ್ರಹ ಮತ್ತು ಲೇಖನ:
ಡಾ. ವಿಜಯಕುಮಾರ ಕಮ್ಮಾರ
“ಸವಿಚರಣ” ಸುಮತಿ ಇಂಗ್ಲೀಷ್ ಶಾಲೆಯ ಹತ್ತಿರ
ಸುಭಾಷ್ ನಗರ, ಕ್ಯಾತ್ಸಂದ್ರ
ತುಮಕೂರು – 572 104
ಮೋಬೈಲ್ ನಂ: 9741 357 132
ಈ-ಮೇಲ್: vijikammar@gmail.com
ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in / admin@vachanamandara.in