
ಹನ್ನೆರಡನೇ ಶತಮಾನದ ಶಿವಯೋಗಿ ಶ್ರೀ ಸಿದ್ಧರಾಮೇಶ್ವರರ ಕರ್ಮಭೂಮಿ ಸೊನ್ನಲಿಗೆ. ಬಹಳ ಪ್ರಾಚೀನ ಇತಿಹಾಸವಿರುವ ಈ ನಗರ ಯಾದವರ ಆಳ್ವಿಕೆಯವರೆಗೂ ಸೊನ್ನಲಿಗೆ, ಸೊನ್ನಲಾಪುರ, ಸಂದಲಾಪುರ ಎಂಬ ಹೆಸರಿನಿಂದ ಗುರುತಿಸಲಾಗುತ್ತಿತ್ತು. ಹದಿಮೂರನೇ ಶತಮಾನದ ಅಂತ್ಯಭಾಗದಲ್ಲಿ ಸೊಲ್ಲಾಪುರ ಹೆಸರನ್ನು ಪಡೆಯಿತು ಎಂದು ಶಿಲಾ ಶಾಸನಗಳಿಂದ ತಿಳಿದು ಬರುತ್ತದೆ. ಭಾರತಕ್ಕೆ ಸ್ವಾತಂತ್ರ್ಯ ಬರುವುದಕ್ಕಿಂತಲೂ ಮುಂಚೆ, ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಸೊಲ್ಲಾಪುರದಲ್ಲಿ 06.04.1930 ರಲ್ಲಿ ನಗರಸಭೆಯ ಮೇಲೆ ಪ್ರಪ್ರಥಮ ಬಾರಿ ತ್ರಿವರ್ಣ ಧ್ವಜವನ್ನು ಹಾರಿಸಿದ ಕೀರ್ತಿ ಸೊಲ್ಲಾಪುರಕ್ಕೆ ಸಲ್ಲಬೇಕು. ತದನಂತರ ಧ್ವಜ ಹಾರಿಸಿದ ನಾಲ್ಕೂ ಜನರನ್ನು ನೇಣಿಗೇರಿದ್ದು ಇತಿಹಾಸ. ಅದಕ್ಕೆಂದೆ ಸೊಲ್ಲಾಪುರಕ್ಕೆ ಹುತಾತ್ಮ ನಗರವೆಂದೂ ಕರೆಯಲಾಗುತ್ತದೆ. ಸೊಲ್ಲಾಪುರ ಅತ್ಯಂತ ಸುಂದರ ಚಾದರಗಳ ಉತ್ಪಾದನೆಗೆ ಸುಪ್ರಸಿದ್ಧ. ಈ ಪೀಠಿಕೆಯ ಉದ್ದೇಶ, ಇಂಥ ಧೀರೋದ್ದಾತ, ಪ್ರಾಚೀನ ಮತ್ತು ಸಾಂಸ್ಕೃತಿಕ ನಗರದವರಾದ ಶ್ರೀಮತಿ ರಾಜಶ್ರೀ ಥಳಂಗೆಯವರ ಪರಿಚಯವನ್ನು ಮಾಡಿಕೊಳ್ಳೋಣ.
ಹಿರಿಯ ಸಾಹಿತಿ, ಚಿಂತಕರಾದ ದಿ|| ಡಾ. ಮ. ನಿ. ತೋಳನೂರ ಅವರ ಸುಪುತ್ರಿ ಶ್ರೀಮತಿ ರಾಜಶ್ರೀ ಥಳಂಗೆ. ಶರಣ ಪರಂಪರೆ, ಸಂಗೀತ ಮತ್ತು ಸಾಹಿತ್ಯದ ವಾತಾವರಣವಿರುವ ಕುಟುಂಬದಲ್ಲಿ ಜನಿಸಿದ ಶ್ರೀಮತಿ ರಾಜಶ್ರೀ ಥಳಂಗೆ ಅವರಿಗೆ ಸಹಜವಾಗಿ ಸಂಗೀತ, ಸಾಹಿತ್ಯದ ಕಡೆಗೆ ಒಲವು ಜಾಸ್ತಿ ಇದೆ. ಅದರಲ್ಲೂ ಅಕ್ಕ ಮಹಾದೇವಿಯವರನ್ನ ಆರಾಧಿಸಿ ಅವರ ಜೀವನ ಚರಿತ್ರೆ ಮತ್ತು ವಚನ ಸಾಹಿತ್ಯವನ್ನು ಆಳವಾಗಿ ಅಭ್ಯಾಸ ಮಾಡಿದ್ದಾರೆ.
ಇವರು ಸೊಲ್ಲಾಪುರದಲ್ಲಿ ಶಿಕ್ಷಣವನ್ನು ಪೂರೈಸಿದ್ದಾರೆ. ಹರಿಭಾಯಿ ದೇವಣಕರ ಹೈಸ್ಕೂಲ್ ನಲ್ಲಿ ಮಾಧ್ಯಮಿಕ ಶಿಕ್ಷಣವನ್ನು ಪಡೆದು, ಶಿವಾಜಿ ವಿಶ್ವ ವಿದ್ಯಾಲಯದಿಂದ ಪದವಿಯನ್ನು ಪಡೆದಿದ್ದಾರೆ. ಮುಂದೆ ಅತ್ಯಂತ ಪ್ರತಿಷ್ಠಿತ ಮನೆತನದವರಾದ ಮತ್ತು ಸೊಲ್ಲಾಪುರದ ಅತ್ಯಂತ ಪ್ರಸಿದ್ದ ಚಾದರ ವ್ಯಾಪಾರಿಗಳಾದ ಥಳಂಗೆ ಮನೆತನದ ಶ್ರೀ ಮಲ್ಲಿನಾಥ ಥಳಂಗೆ ಅವರನ್ನು ವಿವಾಹವಾದರು. ಇವರ ಮಗ ಗಂಗಾಧರ ಥಳಂಗೆ ವೃತಿಯಲ್ಲಿ Software Engineer ಆಗಿದ್ದಾರೆ. ಸಧ್ಯ ಬೆಂಗಳೂರಿನ ನಿವಾಸಿಯಾಗಿದ್ದಾರೆ. ಇಬ್ಬರು ಹೆಣ್ಣುಮಕ್ಕಳು ನಮ್ರತಾ ಗುಣಕಿ ಮತ್ತು ಪೌರ್ಣಿಮಾ ತಡಲಗಿ.
ಅತ್ಯಂತ ವೈಶಿಷ್ಠ್ಯಪೂರ್ಣವಾದದ್ದು ಅಂದರೆ ಇವರ ಇಡೀ ಕುಟುಂಬ ನಾಟ್ಯ ಮತ್ತು ಸಂಗೀತಮಯ. ಇತ್ತೀಚೆಗೆ Corona Lockdown ಸಮಯದಲ್ಲಿ ಕುಟುಂಬದ ಹನ್ನೆರಡು ಮಹಿಳೆಯರು ಸೇರಿ Online ಭರತ ನಾಟ್ಯವನ್ನು ಪ್ರದರ್ಶಿಸಿದ್ದಾರೆ.
ಇವರ ಸಾರ್ವಜನಿಕ ಸೇವೆ ವಿಭಿನ್ನ ಮತ್ತು ಹಲವಾರು ಕ್ಷೇತ್ರಗಳಲ್ಲಿ ವಿಸ್ತರಿಸಿದೆ. “ಶಂಕರಲಿಂಗ ಮಹಿಳಾ ಮಂಡಳ” ದ ಮೂಲಕ ಮಹಿಳೆಯರ ಸಂಘಟನೆಯನ್ನು ಮಾಡಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಲಾಗುತ್ತದೆ. “ಆದರ್ಶ ಕನ್ನಡ ಬಳಗ” ದ ಮೂಲಕ ಕನ್ನಡದ ಭಾಷೆಯನ್ನು ಮಹಾರಾಷ್ಟ್ರದಲ್ಲಿ ಬೆಳೆಸುತ್ತಿದ್ದಾರೆ.
ಐತಿಹಾಸಿಕ ಮತ್ತು ಪೌರಾಣಿಕ ಚಿತ್ರಗಳು ಮಾಯವಾಗಿರುವ ಈ ಆಧುನಿಕ ಕಾಲದಲ್ಲಿ “ಅಮರಜ್ಯೋತಿ ಅಕ್ಕಮಹಾದೇವಿ” ಚಿತ್ರವನ್ನು ಚಿತ್ರರಂಗಕ್ಕೆ ಅರ್ಪಿಸಿದ್ದಾರೆ. ಈ ಚಲನಚಿತ್ರದ ವೈಶಿಷ್ಠ್ಯವೇನೆಂದರೆ ಎಲ್ಲ ಪಾತ್ರಗಳನ್ನೂ ಸ್ತ್ರೀಯರೆ ನಿರ್ವಹಿಸಿದ್ದೂ ಶ್ರೀಮತಿ ರಾಜಶ್ರೀ ಥಳಂಗೆಯವರ ಸ್ತ್ರೀ ಸಮಾನತೆಗೆ ನೀಡಿರುವ ಜ್ವಲಂತ ಉದಾಹರಣೆ. ಸ್ವತಃ ಅಕ್ಕಮಹಾದೇವಿಯವರ ಪಾತ್ರವನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸುವುದರ ಮೂಲಕ ಪಾತ್ರಕ್ಕೆ ಜೀವಕಳೆ ತುಂಬಿದ್ದಾರೆ. ಇನ್ನೊಂದು ಆಪ್ಯಾಯಮಾನವಾದ ವಿಷಯ ಅಂದರೆ, ಅಕ್ಕಮಹಾದೇವಿಯವರ ಬಾಲ್ಯ ಪಾತ್ರಧಾರಿ ಕುಮಾರಿ ಋತು ಇವರ ಮೊಮ್ಮಗಳು.
ಅದ್ಭುತ ಚಿತ್ರೀಕರಣವಿರುವ ಈ ಚಿತ್ರದ ವೈಷಿಷ್ಠ್ಯತೆ ಅಂದರೆ ಸುಂದರ ಮತ್ತು ಸುಸಂಸ್ಕೃತ ವಸ್ತ್ರ ವಿನ್ಯಾಸ. ಹನ್ನೆರಡನೇ ಶತಮಾನದ ಸಂಸ್ಕಾರ, ಸಂಸ್ಕೃತಿಯನ್ನು ಹಿಡಿದಿಟ್ಟುಕೊಳ್ಳುವಲ್ಲಿ ಈ ಚಿತ್ರ ಅತ್ಯಂತ ಯಶಸ್ವಿಯಾಗಿದೆ. ವಚನಗಳ ಆಯ್ಕೆ ಮತ್ತು ವಚನಗಾಯನ ಅದ್ಭುತವಾಗಿದೆ.
ಶ್ರೀಮತಿ ರಾಜಶ್ರೀ ಥಳಂಗೆಯವರಿಗೆ ಸನ್ಮಾನ ಮತ್ತು ಸಂಪ್ರೀತಿಗಳು ಇವರನ್ನು ಹುಡುಕಿಕೊಂಡು ಬಂದಿವೆ. ಅವುಗಳಲ್ಲಿ ಕೆಲವನ್ನು ಇಲ್ಲಿ ನೀಡಲಾಗಿದೆ. ವೀರಶೈವ ಮಹಿಳಾ ಮಂಡಳ ವತಿಯಿಂದ ಸನ್ಮಾನಿಸಲಾಗಿದೆ. ಬೀದರದಲ್ಲಿ ನಡೆದ ವಚನ ವಿಜಯೋತ್ಸವದ ಕಾರ್ಯಕ್ರಮವನ್ನು ಧರ್ಮ ಧ್ವಜಾರೋಹಣ ಶ್ರೀಮತಿ ರಾಜಶ್ರೀ ಥಳಂಗೆಯವರ ಕೈಯಲ್ಲಿ ಮಾಡಿಸಿ ಸನ್ಮಾನಿಸಲಾಗಿದೆ. ವೀರಶೈವ ವಿಜನ್ ಮಹಿಳಾ ಆಘಾಡಿಯವರು ಸನ್ಮಾನಿಸಿದ್ದಾರೆ. ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಡಾ. ಪಾಟೀಲ ಪುಟ್ಟಪ್ಪನವರ ನೇತೃತ್ವದಲ್ಲಿ ಸನ್ಮಾನ ಮಾಡಲಾಗಿದೆ. ಎವರೆಸ್ಟ್ ಶಿಖರವನ್ನೇರಿ ಅಲ್ಲಿ ಬಸವಣ್ಣ ಮತ್ತು ಶಿವಾಜಿ ಮಹಾರಾಜರ ಪ್ರತಿಮೆಗಳನ್ನು ಪೂಜಿಸಿದ ಪ್ರಪ್ರಥಮ ಅಪ್ರತಿಮ ಸಾಹಸಿ. ಇದಕ್ಕಾಗಿ ಶ್ರೀಮತಿ ರಾಜಶ್ರೀ ಥಳಂಗೆಯವರಿಗೆ “ಡಾ. ಜಯದೇವಿತಾಯಿ ಲಿಗಾಡೆ ಮಹಿಳಾ ಪ್ರಶಸ್ತಿ” ನೀಡಿ ಗೌರವಿಸಲಾಗಿದೆ.
ಇಂಥ ಅದಮ್ಯ ಉತ್ಸಾಹದ ಮತ್ತು ಅದ್ಭುತ ಸಾಧಕಿ ಶ್ರೀಮತಿ ರಾಜಶ್ರೀ ಥಳಂಗೆಯವರು ನಮ್ಮ “ವಚನ ಮಂದಾರ” ವೇದಿಕೆಯ ಸದಸ್ಯೆ ಎನ್ನುವುದು ಹೆಮ್ಮೆಯ ವಿಚಾರ.
ವಿಜಯಕುಮಾರ ಕಮ್ಮಾರ
“ವಚನ ಮಂದಾರ” ವೇದಿಕೆ.
ಸಾಧಕಿಯರೀರ್ವರು ಶರಣ ಧರ್ಮ ಸಂಸ್ಕ್ರತಿಯ ಮೇಲೆ
ಬೆಳಕು ಚೆಲ್ಲಿದವರು.ಇವರ ಮಾಹಿತಿಪೂಣ೯ ಪರಿಚಯ
ಮತ್ತೊಮ್ಮೆ ಮೆಲುಕು ಹಾಕಲು ಸಾದ್ಯವಾಯಿತು.
ಶರಣು ಶರಣಾರ್ಥಿಗಳು.
ಶರಣು ಶರಣಾರ್ಥಿಗಳು ಒಳ್ಳೆಯ ಕಾರ್ಯಗಳನ್ನು ಮಾಡುತ್ತಿದ್ದಾರೆ ಅವರಿಗೆ ಶುಭವಾಗಲಿ