ಬಸವಣ್ಣನವರ ವಚನ “ಶರಣ ನಿದ್ರೆಗೈದೊಡೆ ಜಪ ಕಾಣಿರೋ”ವಚನ ವಿಶ್ಲೇಷಣೆ

ಶರಣ ನಿದ್ರೆಗೈದಡೆ ಜಪ ಕಾಣಿರೊ,
ಶರಣನೆದ್ದು ಕುಳಿತಡೆ ಶಿವರಾತ್ರಿ ಕಾಣಿರೊ,
ಶರಣ ನಡೆದುದೆ ಪಾವನ ಕಾಣಿರೊ,
ಶರಣ ನುಡಿದುದೆ ಶಿವತತ್ವ ಕಾಣಿರೊ,
ಕೂಡಲಸಂಗನ ಶರಣನ ಕಾಯವೆ ಕೈಲಾಸ ಕಾಣಿರೊ!
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-78 / ವಚನ ಸಂಖ್ಯೆ-873)

ಶರಣನ ಶರಣಸ್ಥಲದ ವಿವರಣೆ ಇರುವ ಈ ವಚನ ಬಸವಣ್ಣನವರ ಬೆಡಗಿನ ಹಾಗೂ ಟೀಕಿನ ವಚನಗಳಲ್ಲೊಂದು. ಈ ವಚನದಲ್ಲಿ ಶರಣ, ನಿದ್ರೆ, ಜಪ, ತಪ, ಶಿವರಾತ್ರಿ, ನಡೆದುದು, ನುಡಿದುದು ಮತ್ತು ಕಾಯ ಕೈಲಾಸ ಎನ್ನುವ ಶಬ್ದಗಳನ್ನು ಬಳಸಿದ್ದಾರೆ.

ಮಾನವನಾಗಿ ಮರ್ತ್ಯಕ್ಕೆ ಆಗಮಿಸಿ‌ ಶಿವಜ್ಞಾನ ಸಂಪನ್ನನಾಗಿ ಮಹದೇವನಾಗಿ ಮಹದಲ್ಲಿ ನಿಂದವನೇ ಶರಣ. ಅರಿವನ್ನೆ ಗುರುವನ್ನಾಗಿ, ಆಚಾರವನ್ನೆ ಲಿಂಗವಾಗಿ, ಅನುಭಾವವನ್ನೆ ಜಂಗಮವನ್ನಾಗಿ ಮಾಡಿಕೊಂಡವನು ಶರಣ. ಶರಣ ಯಾರು ಎನ್ನುವುದಕ್ಕೆ ತೋಂಟದ ಶ್ರೀ ಸಿದ್ಧಲಿಂಗ ಶಿವಯೋಗಿಗಳು ತಮ್ಮ ಒಂದು ವಚನದಲ್ಲಿ ತಿಳಿಸಿದ್ದಾರೆ.

ಲಿಂಗವೇ ಪತಿಯಾಗಿ ತಾನೆ ಸತಿಯಾಗಿ
ಅನ್ಯವನರಿಯದೆ ಪಂಚೇಂದ್ರಿಯರಹಿತನಾಗಿ
ತೆರಹಿಲ್ಲದರುಹು ತಾನಾಗಿ
ನೆರೆ ಅರುಹಿನೊಳು ನಿಬ್ಬೆರಗಾಗಿ
ಹೃದಯ ಕಮಲ ಮಧ್ಯದಲ್ಲಿ ಪರಮೇಶ್ವರನೊಳಗಣ
ಸಮರಸ ಸ್ನೇಹವೆರಸಿ
ಅಗಲದಿಪ್ಪುದೀಗ ಶರಣಸ್ಥಲವಿದೆಂಬೆನಯ್ಯ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೆ.
(ಸ. ವ. ಸಂಪುಟ: ಹನ್ನೊಂದು-2021 / ಪುಟ ಸಂಖ್ಯೆ-200 / ವಚನ ಸಂಖ್ಯೆ-443)

ಶರಣ ಮತ್ತು ಶರಣ ಸ್ಥಲದ ಗುಣಲಕ್ಷಣಗಳನ್ನು ಈ ವಚನದಲ್ಲಿ ವಿವರಿಸಲಾಗಿದೆ. ಲಿಂಗವೇ ಪತಿ ತಾನೇ ಸತಿಯೆಂಬ ಭಾವದಲ್ಲಿ ಆಚರಿಸಿ ಪಂಚಭೂತಾತ್ಮಕವಾದ ಈ ದೇಹ ತಾನಲ್ಲ, ಅಂತಃಕರಣ ಚತುಷ್ಟಯ ತಾನಲ್ಲ, ಪ್ರಕೃತಿ ಪುರುಷ ತಾನಲ್ಲ, ಅಂಗದ ಅಶುದ್ಧ ತತ್ವಗಳನ್ನೂ ಮೀರಿ ವ್ಯವಹರಿಸುತ್ತಿರುವವನು ಶರಣ. ಪಂಚಾಚಾರಗಳನ್ನು ತನ್ನಲ್ಲಿ ಅಳವಡಿಸಿಕೊಂಡ ಶರಣ ಏಕದೇವೊಪಾಸನೆಯೊಂದಿಗೆ ತನು ಶುದ್ಧಿ ಮಾಡಿಕೊಂಡು ಲಿಂಗಾಚಾರವನ್ನು ಅನುಸರಿಸಿದವನು, ದಾಸೋಹಿಯಾಗಿರುವುದರ ಜೊತೆಗೆ ಮನ ಶುದ್ಧಿ ಮಾಡಿಕೊಂಡು ಸದಾಚಾರಿಯಾದವನು, ಎಲ್ಲರೂ ಸಮಾನರು ಎನ್ನುವ ಜೊತೆಗೆ ಭಾವ ಶುದ್ಧಿ ಹೊಂದಿ ಶಿವಾಚಾರಿಯಾದವನು, ಲಿಂಗಾಯತ ತತ್ವಗಳ ಪಾಲನೆ-ಪೋಷಣೆ ಮತ್ತು ರಕ್ಷಣೆ ಜೊತೆಗೆ ನಡೆ ಶುದ್ಧಿ ಹೊಂದಿ ಗಣಾಚಾರಿಯಾದವನು, ಲಿಂಗಭಕ್ತರ ಸೇವೆಯ ಜೊತೆಗೆ ನುಡಿ ಶುದ್ಧಿ ಹೊಂದಿ ಭೃತ್ಯಾಚಾರಿಯಾದವನು. ಇದು ಶರಣನ ಪರಿಚಯ ನೀಡುವ ಈ ವಚನದ ಪರಿಧಿಯೊಳಗೆ ನೀಡುವ ವಿವರಣೆ.

ಲೌಕಿಕವಾಗಿ ನೋಡಲಾಗಿ ಶರಣನು ನಿದ್ರೆ ಮಾಡಿದರೂ, ಎದ್ದು ಕುಳಿತರೂ, ನಡೆದರೂ, ನುಡಿದರೂ ಎಲ್ಲವೂ ಶಿವಮಯವಾಗುವುದು ಎನ್ನುವುದು ಈ ವಚನದ ಸ್ಥೂಲ ಸಾರಾಂಶ.
ಅಲೌಕಿಕವಾಗಿ ವಿಶ್ಲೇಷಣೆ ಮಾಡಿದರೆ ತಾನೇ ಪರಂಜ್ಯೋತಿ ಸ್ವರೂಪನಾಗಿ ನಡೆ-ನುಡಿ, ನಿದ್ರೆ, ಎಚ್ಚರಿಕೆ ಮೊದಲಾದವೆಲ್ಲವುಗಳೂ ಶಿವಮಯವಾಗುವ ತತ್ವ ಸಿದ್ಧಾಂತ. ಶಿವಾಂಶಿಕನಾಗಿ ಅಂಗ ಲಿಂಗಸಂಗಿಯಾದ, ಅವಿರಳ ಜ್ಞಾನಿಯಾದ ಶರಣನ ನಿದ್ರೆ, ಜಪ, ಜಾಗರಣೆ, ನಡೆ-ನುಡಿಗಳೆಲ್ಲವೂ ಪಾವನ.

ದುಗುಡ ದುಮ್ಮಾನಗಳಿಲ್ಲದ ಶರಣನ ಅಂಗವು ಕೂಡಲಸಂಗಮನಾಥನ ಸ್ವಕ್ಷೇತ್ರ. ದೇಹವನ್ನು ಆವರಿಸಿದ ಮನಸ್ಸು ದೇಹದಲ್ಲಿಯೇ ಅಡಕವಾದ ಅರಿವನ್ನು ಬೆರೆತ ಬಳಿಕ ಈ ದೇಹವೆನ್ನುವುದೆಲ್ಲವೂ ಶಿವಮಯ. ನಿದ್ರೆ, ಜಪ, ತಪಾದಿಗಳು ಶಿವತತ್ವ. ಪಂಚೇಂದ್ರಿಯಗಳಿರುವ ಕಾಯದಲ್ಲಿ ಅರಿವೆಂಬುದು ತನ್ಮಯವಾಗಿದೆ. ಆ ತನ್ಯತೆಯಲ್ಲಿ ಶಿವಸ್ವರೂಪ ಅಡಗಿದೆ. ಇದರ ನಿ ಅರಿವನ್ನು ಪಡೆದ ತನು ಕೈಲಾಸವಾಯಿತ್ತು ಎನ್ನುವುದು ಬಸವಣ್ಣನವರು ಸಾಂಕೇತಿಕವಾಗಿ ನಿರೂಪಣೆ ಮಾಡಿದ್ದಾರೆ.

ಇಂಥ ಶರಣನ ಶರೀರವು ಕೈಲಾಸದ ಸ್ವರೂಪವನ್ನು ಪಡೆದುಕೊಂಡು ತಾನೇ ಶಿವನಾಗುವ ತತ್ವವನ್ನು ಬಸವಣ್ಣನವರು ಈ ವಚನದಲ್ಲಿ ಕಟ್ಟಿಕೊಟ್ಟಿದ್ದಾರೆ.

ಶರಣು ಶರಣಾರ್ಥಿಗಳು.

ವಿಜಯಕುಮಾರ ಕಮ್ಮಾರ
“ಸವಿಚರಣ” ಸುಮತಿ ಶಾಲೆಯ ಹತ್ತಿರ,
ಕ್ಯಾತ್ಸಂದ್ರ, ತುಮಕೂರು – 572 104.
ಮೋಬೈಲ್‌ ನಂ : 9741 357 132.
ಈ-ಮೇಲ್‌ : vijikammar@gmail.com

Loading

Leave a Reply