
ವಚನಗಳು ಕನ್ನಡ ಸಾಹಿತ್ಯಕ್ಕೆ ಒಲಿದು ಬಂದ ವರ. 12 ನೇ ಶತಮಾನದ ವರ್ತಮಾನದ ತಲ್ಲಣಗಳಿಗೆ ನಾಂದಿಯಾದ ವಚನಗಳು ನಡೆ-ನುಡಿ ಸಾಮರಸ್ಯದಿಂದಾಗಿ ೨೧ನೇ ಶತಮಾನದಲ್ಲೂ ಪ್ರಸ್ತುತವಾಗುತ್ತವೆ, ಮೊಗೆ ಮೊಗೆದಷ್ಟು ನವ ನವೀನ ವಿಚಾರಗಳಿಗೆ ಅವಾಸ್ಥಾನವಾದ ವಚನಗಳು ತಮ್ಮ ಒಡಲಲ್ಲಿ ಹೊಸ ಅಚ್ಚರಿಗಳನ್ನು ಮುಚ್ಚಿಟ್ಟುಕೊಂಡಿವೆ. ಈ ಕಾರಣದಿಂದ ವಚನಗಳನ್ನು ಓದಿದಷ್ಟು ಹೊಸ ಹೊಳಹುಗಳು ವಚನ ಅಭ್ಯಾಸಗಳಿಗೆ, ಸಂಶೋಧಕರಿಗೆ ಒದಗುತ್ತಲೇ ಇವೆ. ಕಾಲ ದೂರ ಸರಿದಂತೆ ಜೀವನ ಶೈಲಿಯಲ್ಲಿ, ಮನುಷ್ಯರ, ಆಲೋಚನೆಗಳಲ್ಲಿ, ಅನುಸರಿಸುವ ಮೌಲ್ಯಗಳಲ್ಲಿ ಸಾಕಷ್ಟು ಬದಲಾವಣೆಯನ್ನು ಕಾಣುತ್ತಿದ್ದೇವೆ. ಬದಲಾದ, ಬದಲಾಗುತ್ತಿರುವ ಕಾಲಘಟ್ಟದಲ್ಲಿ ವಚನಗಳು ನೀಡುವ ಬೆಳಕು ಮಾತ್ರ ಕ್ಷೀಣವಾಗಿಲ್ಲ. ಸಾರ್ವಕಾಲಿಕ ಮೌಲ್ಯಗಳೊಂದಿಗೆ ವಚನಗಳು ಇಂದಿಗೂ ಅಧ್ಯಯನ ಯೋಗ್ಯವಾಗಿವೆ. ಚಿಂತನೆಯ ಕುಲುಮೆಯಲ್ಲಿ ಭಾವಗಳನ್ನು ಕಾಯಿಸಿ-ಬಡಿದು ವಚನಗಳು ವಿನೂತನ ಭಾವಾಭರಣವನ್ನು ತಯಾರು ಮಾಡುತ್ತವೆ. ಇಂತಹ ಶ್ರೇಷ್ಠತೆಗೆ ಕಾರಣವೆಂದರೆ ವಚನಗಳು ಏಕಾಂತದಲ್ಲಿ ರಚನೆಗೊಂಡ ರಚನೆಗಳಲ್ಲ, ಲೋಕಾಂತದಲ್ಲಿ ಅನುಭವಗಳ ಮೂಟೆಯೊಂದಿಗೆ ಸ್ವಚ್ಛಂದವಾಗಿ ಹರವಿಕೊಂಡ ಚಿಂತನೆಗಳು. ವಚನಗಳು ಜನಸಾಮಾನ್ಯರಿಂದ ಅವರ ಸಹಜ ನುಡಿಗಳಿಂದ ಅರಳಿದ ಹೂವುಗಳು… ಹೂವುಗಳು…! ಅಲ್ಲಲ್ಲಾ ಹೂವುಗಳೆಂದು ಮುಟ್ಟಲು ಹೋದರೆ ಸುಡುವ ವೈಚಾರಿಕತೆಯ ನಿಗಿನಿಗಿ ಕೆಂಡಗಳು.
“ಆಡು ಮುಟ್ಟದ ಸೊಪ್ಪಿಲ್ಲ” ಎಂಬಂತೆ ವಚನಗಳು ಹೇಳಿದ ವಿಚಾರಗಳೇ ಇಲ್ಲ ಎಂಬುದು ಸತ್ಯ. ಮಾನವರ ಮಾನವೀಯತೆ ಜಾಗೃತಗೊಳ್ಳಲು ವಚನಗಳು ಎಚ್ಚರಿಕೆಯ ಗಂಟೆಗಳಾಗಿವೆ. ಮಾನವ-ದೇವನಾಗಲು ತನ್ನಲ್ಲಿರುವ ಒಂದೊಂದೇ ಲೋಪ-ದೌಬರ್ಲ್ಯಗಳನ್ನು ಕಳೆದುಕೊಳ್ಳಲು, ಒಟ್ಟರೆ ಮಾನವರ ಸರ್ವತೋಮುಖ ಬೆಳವಣಿಗೆಗೆ ವಚನಗಳು ಸೋಪಾನಗಳಾಗಿವೆ.
ಸಾಲು-ಸಾಲು ಯುದ್ಧಗಳಲ್ಲಿ ಸಾವಿರಾರು ಯೋಧರನ್ನು ಕೊಲ್ಲುವುದು ಮುಖ್ಯವಲ್ಲ, ನಮ್ಮೊಳಗಿರುವ ವಿಕಾರಗಳನ್ನು ಕೊಲ್ಲುವುದು ಮುಖ್ಯ. ಯುದ್ಧಗಳನ್ನು ಗೆಲ್ಲುವುದು ಮುಖ್ಯವಲ್ಲ, ನಮ್ಮ ಇಂದ್ರಿಯಗಳನ್ನು ಗೆಲ್ಲುವುದು ಮುಖ್ಯ, ಅಪರಾಧಿಗಳನ್ನು ಸೆರೆಹಿಡಿದು ಶಿಕ್ಷೆಯಿಂದ ನಿಗ್ರಹಿಸುವುದು ದೊಡ್ಡದಲ್ಲ, ಹರಿಯುವ ಮನಸ್ಸನ್ನು ಒಂದೆಡೆ ನಿಲ್ಲಿಸಿ ನಿಗ್ರಹಸುವುದು ಮುಖ್ಯವಾಗಿದೆ. ಇವುಗಳಿಗೆ ನಿರಂತರ ಸಾಧನೆಯ ಅಗತ್ಯವಿದೆ. ನಮ್ಮನ್ನು ನಾವು ಗೆಲ್ಲುವುದು ಮಹಾಯುದ್ಧ ಗೆಲ್ಲುವುದಕ್ಕಿಂತ ದೊಡ್ಡದು. ಬಸವಾದಿ ಶರಣರು ತಮ್ಮ ವಷನಗಳ ಮೂಲಕ, ಸಿದ್ಧಾಂತಗಳ ಮೂಲಕ ತತ್ವಾದರ್ಶಗಳ ಮೂಲಕ ನಮ್ಮನ್ನು ನಾವು ಗೆಲ್ಲುವ ಮಾರ್ಗವನ್ನು ಹಾಕಿಕೊಟ್ಟರು. ಆ ಮಾರ್ಗದಲ್ಲಿ ಸ್ವತಃ ತಾವು ನಡೆದರು. ಕಾಯಕ-ದಾಸೋಹ-ಅನುಭಾವ ಮೊದಲಾದ ಸಾರ್ವಕಾಲಿಕ ಮೌಲ್ಯಗಳನ್ನು ನೀಡಿದ ಬಸವಾದಿ ಶರಣರು ಮನಸ್ಸು ಮತ್ತು ಇಂದ್ರೀಯಗಳನ್ನು ಹತೋಟಿಯಲ್ಲಿಡಲು, “ಇಷ್ಟಲಿಂಗದಂತಹ ವಿಶಿಷ್ಟ ಪರಿಕಲ್ಪನೆಯನ್ನು, ಅಷ್ಟಾವರಣ, ಷಟಸ್ಥಲ, ಪಂಚಾಚಾರಗಳಂತಹ ಪ್ರಯೋಗಾತ್ಮಕ ವಿಧಾನಗಳನ್ನು ಅನುಷ್ಠಾನಕ್ಕೆ ತಂದರು. ಇವುಗಳ ಮೂಲಕ ಯೋಗ, ಶಿವಯೋಗ ಸಾಧನೆ ಕೈಗೊಂಡರು. ಒಂದು ವಿಧದಲ್ಲಿ ಶಿವಶರಣರ ಬದುಕು ಕಾಯಕಯೋಗ, ಜ್ಞಾನಯೋಗ, ದಾಸೋಹ ಯೋಗದ ಮೂಲಕ ಸಾಗಿ ಇಷ್ಟಲಿಂಗದ ಮೂಲಕ ಅದು ಶಿವಯೋಗವನ್ನು ಸಾಧಿಸುವಲ್ಲಿ ಪರಿಸಮಾಪ್ತಿಗೊಂಡಿದೆ.
ಈ ರೀತಿಯಲ್ಲಿ ಸಾಧಕ ಅಷ್ಟಾವರಣ ಷಟಸ್ಥಲ ಪಂಚಾಚಾರಗಳ ಮೂಲಕ ಸಾಧಿಸಬಹುದಾದ ಯೋಗ-ಶಿವಯೋಗ ಸಿದ್ಧಿಯನ್ನು ಶಿವಶರಣರು ಬರೆದ ವಚನಗಳಲ್ಲಿ ದರ್ಶಿಸಬಹುದಾಗಿದೆ.
ಯೋಗ: ಸಾಮಾನ್ಯವಾಗಿ ‘ಯೋಗ’ ವೆಂದರೆ ಅದೊಂದು ಜೀವನ ದರ್ಶನವಾಗಿದೆ. ಆತ್ಮದ ಅನುಸಂಧಾನವಾಗಿದೆ. ಯೋಗವು ಜೀವನವು ಪದ್ಧತಿಯಾಗಿದೆ. ಆತ್ಮದ ದರ್ಶನಕ್ಕೆ, ಆತ್ಮ-ಪರಮಾತ್ಮನಲ್ಲಿ ಸಂಯೋಗವಾಗುವುದಕ್ಕೆ ಯೋಗವು ಸಾಧನವಾಗಿದೆ.
ಒಬ್ಬ ಸಾಧಕ ತನ್ನೊಳಗಿರುವ ಆತ್ಮವನ್ನು ವಿಕಸಿತ ಮಾಡಲು, ಮನಸ್ಸಿನ ಏಕಾಗ್ರತೆ ಗಟ್ಟಿಗೊಳಲು ಸಹಕರಿಸುವ ವಿಧಾನ ಇವೆಲ್ಲವೂ ಸಾಮಾನ್ಯವಾಗಿ ಯೋಗದ ಕುರಿತು ವಿವರಿಸಬಹುದಾದ ಮಾತುಗಳು.
ಭಾರತೀಯ ದರ್ಶನಗಳಲ್ಲೇ ಯೋಗ ಶಾಸ್ತ್ರಕ್ಕೆ ಅದರದೇ ಆದ ಮಹತ್ವದ ಸ್ಥಾನವಿದೆ. ಯೋಗ ದರ್ಶನ ಇಂದು-ನಿನ್ನೆಯದಲ್ಲ. ಇದು ತುಂಬಾ ಪ್ರಾಚೀನವಾದುದು. ಯೋಗ ಸರ್ವರಿಗೂ ಬೇಕಾಗಿರುವಂತಹದ್ದು.
“ಯೋಗ” ಪದವು “ಯುಜ್” ಎಂಬ ಧಾತುವಿನಿಂದ ನಿಷ್ಪನ್ನುವಾಗಿದೆ, ಯೋಗ ಯುಜ್ ಎಂದರೆ ಸಂಗತ, ಘಟಿಸು, ಕೂಡುವಿಕೆ, ಒಂದಾಗುವಿಕೆ ಎಂಬ ಅರ್ಥವಿದೆ. ಪತಂಜಲಿ ಮಹರ್ಷಿಗಳು ಯೋಗದಲ್ಲಿ ನಾಲ್ಕು ಪ್ರಕಾರಗಳನ್ನು ತಿಳಿಸಿ ಅವುಗಳ ಪ್ರಯೋಜನವನ್ನು ತಿಳಿಸಿದ್ದಾರೆ, ಹಠಯೋಗ, ಲಯಯೋಗ, ಮಂತ್ರಯೋಗ, ರಾಜಯೋಗ ಎಂಬುವುಗಳೇ ಆ ಪ್ರಭೇದಗಳು. ಶರೀರ ಶುದ್ಧಿಯಾಗಬೇಕಾದರೆ ರಾಜಯೋಗ-ಹಠಯೋಗದಿಂದ ಆಗುವುದು. ಮನದ ಶುದ್ಧಿಯು ಮಂತ್ರಯೋಗದಿಂದ ಆಗುವುದು. ಒಟ್ಟಾರೆ ಈ ಎಲ್ಲಾ ಯೋಗಗಳ ಸಾಧನೆಯಿಂದ ಜೀವನವೇ ಶುದ್ಧಿಯಾಗುವುದು ಎಂದು ಪತಂಜಲಿ ಮಹರ್ಷಿಗಳು ಯೋಗದ ಪ್ರಯೋಜನದ ಕುರಿತು ಮಾರ್ಮಿಕವಾಗಿ ಹೇಳುತ್ತಾರೆ.
ಯೋಗದ ಕುರಿತು ವ್ಯಾಖ್ಯಾನಗಳು:
ಪತಂಜಲಿ ಯೋಗ ದರ್ಶನ: ಪತಂಜಲಿ ಮಹರ್ಷಿಗಳು “ಯೋಗ”ದ ಕುರಿತು ತಮ್ಮ “ಯೋಗ ದರ್ಶನ” ಕೃತಿಯಲ್ಲಿ ಹೀಗೆ ವ್ಯಾಖ್ಯಾನಿಸಿದ್ದಾರೆ. ‘ಯೋಗಶ್ಚಿತ್ತ ವೃತ್ತಿನಿರೋಧಃ’ ಎಂದು ಹೇಳಿದ್ದಾರೆ. ಇದರ ಅರ್ಥ “ಮನಸ್ಸಿನ ಚಂಚಲತೆಯನ್ನು ನಿರೋಧ ಅಂದರೆ ನಿಯಂತ್ರಿಸುವುದೇ ಯೋಗ” ಎಂಬುದಾಗಿದೆ.
ಭಗವದ್ಗೀತೆ: ಯೋಗ ಕುರಿತಾಗಿ ಭಗದ್ಗೀತೆಯಲ್ಲಿ ಈ ರೀತಿ ಉಲ್ಲೇಖಿಸಲಾಗಿದೆ. “ಯೋಗಃ ಕರ್ಮಸು ಕೌಶಲಂ” ಅಂದರೆ “ಕರ್ಮ ಅಥವಾ ಕಾಯಕದಲ್ಲಿ ಇರುವ ಕುಶಲತೆ” ಎಂಬುದಾಗಿದೆ. ಇದೇ ಭಗದ್ಗೀತೆಯಲ್ಲಿ ಇನ್ನೂ ಒಂದು ವ್ಯಾಖ್ಯೆ ಇದೆ ಅದೆಂದರೆ “ಸಮತ್ವಂ ಯೋಗಮುಚ್ಚತೇ” ಎಂಬುದು. ಅಂದರೆ “ಸಮಚಿತ್ತವೇ ಯೋಗ” ಎಂಬುದಾಗಿದೆ.
ಯೋಗವಾಸಿಷ್ಟ: “ಮನಃ ಪ್ರಶಮನೋಪಾಯ ಯೋಗ ಇತ್ಯಭಿದೀಯತೆ” ಎಂದು ಯೋಗವಾಸಿಷ್ಟ ಹೇಳುತ್ತದೆ. ಇಲ್ಲಿಯೂ ಮನಸ್ಸೇ ಪ್ರಧಾನವಾಗಿದೆ. ಯಾವುದು ಮನಸ್ಸನ್ನು ಪ್ರಶಾಂತಗೊಳಿಸುತ್ತದೆಯೋ ಅದುವೇ ಯೋಗ ಎನ್ನಲಾಗಿದೆ.
ಕಠೋಪನಿಷತ್ತು: ಕಠೋಪನಿಷತ್ತಿನಲ್ಲಿ “ತಾಂ ಯೋಗಮಿತಿಮನ್ಯತೇ ಸ್ಥಿರಾಂ ಇಂದ್ರಿಯ ಧಾರಣಂ” ಎಂದು ಯೋಗದ ಕುರಿತು. ವ್ಯಾಖ್ಯಾನಿಸಲಾಗಿದೆ. ಅಂದರೆ ಯೋಗದಿಂದ ಇಂದ್ರಿಯಗಳು ಮತ್ತು ಮನಸ್ಸಿನ ಮೇಲೆ ಹತೋಟಿ ಹೊಂದಲು ಸಾಧ್ಯ ಎಂದು ತಿಳಿಸುತ್ತದೆ. ಈ ಮಾತಿಗೆ ಅಲ್ಲಮ ಪ್ರಭುಗಳ ಒಂದು ವಚನ:
ಅಂಗದ ಕೊನೆಯ ಮೇಲಣ ಕೋಡಗ ಕೊಂಬಿಗೆ ಹಾರಿತ್ತು.
ಅಯ್ಯಾ, ಇದು ಸೋಜಿಗ!
ಕಯ್ಯ, ನೀಡಲು ಮೈಯೆಲ್ಲವನು ನುಂಗಿತ್ತು
ಒಯ್ಯನೆ ಕರೆದಡೆ ಮುಂದೆ ನಿಂದತ್ತು.
ಮುಯ್ಯಾಂತಡೆ ಬಯಲಾಯಿತ್ತು-ಗುಹೇಶ್ವರಾ.
ದೇಹ ಮೋಹವನ್ನು, ಮನಸ್ಸುನ ಚಂಚಲತೆಯನ್ನು ಅಲ್ಲಮಪ್ರಭುಗಳು “ಕೋಡಗ”ನಿಗೆ ಹೋಲಿಸಿದ್ದಾರೆ. “ಮುಯ್ಯಾ” ಎಂದು ಆ ಕೋಡಗವನ್ನು ಓಡಿಸಿದರೆ ಅದೇ ಬಯಲು, ಶೂನ್ಯಸ್ಥಿತಿ, ಏಕಾಗ್ರತೆ ಎಂದಿದ್ದಾರೆ.
ಅತ್ತ ಇತ್ತ ಹರಿವ ಮನವ ಒಂದು ಕಡೆ
ನಿಲ್ಲಿಸಬಲ್ಲರೆ ಗುಹೇಶ್ವರ ಲಿಂಗದ ಬೆಳಗು”
ಎಂಬಲ್ಲಿಯೂ ಯೋಗದ ಪರಿಕಲ್ಪನೆ ದೊರೆಯುವುದು. ಅತ್ತ-ಇತ್ತ ಹರಿಯುವ ಮನವ ಕಟ್ಟಿ ಹಾಕುವುದೇ ಯೋಗಸ್ಥಿತಿ ಎಂಬುದೇ ಅವಿರೋಧವಾದ ಭಾವವಾಗಿದೆ.
ಸ್ವಾಮಿ ವಿವೇಕಾನಂದ: ರಾಮಕೃಷ್ಣ ಪರಮಹಂಸರಿಂದ “ಸಮಾಧಿಸ್ಥಿತಿ”ಯ ಹಂತ ತಲುಪಿದ್ದ ಸ್ವಾಮಿ ವಿವೇಕಾನಂದರು ಯೋಗದ ಕುರಿತು ಹೇಳುವ ವಿಚಾರಗಳಿವು;
“Yoga literally means connection or union with the supreme spirit. what unites us with the supreme spirit is yoga, there is only one in the universe”
“yoga for true understanding depends not on words button experience”
ಎನ್ನುತ್ತಾರೆ. ಅಂದರೆ “ಜೀವಾತ್ಮ ಪರಮಾತ್ಮನೊಂದಿಗೆ ಸೇರುವುದೇ ಯೋಗ. ಜೀವ-ದೇವ ಸಂಬಂಧವು ಯೋಗ ಸಾಧನೆಯ ವಿಷಯ. ಅನುಭವಕ್ಕೆ ತಂದುಕೊಳ್ಳುವ ವಿಷಯವೇ ವಿನಃ ಅದನ್ನು ಕುರಿತು ಚರ್ಚಿಸುವ ವರ್ಣಿಸುವ ವಿಷಯವಲ್ಲ.” ಎಂದು ಹೇಳುತ್ತಾರೆ. (Common Sense About Yoga P.75).
ಲೋಕದ ಚೇಷ್ಟಗೆ ರವಿ ಬೀಜವಾದಂತೆ
ಕರಣಂಗಳ ಚೇಷ್ಟಗೆ ಮನವೇ ಬೀಜ.
ಎನಗುಳ್ಳುದೊಂದು ಮನ.
ಆ ಮನ ನಿಮ್ಮಲ್ಲಿ ಸಿಲುಕಿದ ಬಳಿಕ
ಎನಗೆ ಭವವುಂಟೆ ಚನ್ನಮಲ್ಲಿಕಾರ್ಜುನಾ
ಎಂಬ ಮಹಾದೇವಿಯಕ್ಕನ ವಚನ ಮನಸ್ಸಿನ ಕೇಂದ್ರೀಕರಣದಿಂದ ಸಾಧನೆ ಸಾಧ್ಯ. ಆ ಮನಸ್ಸಿನ ನಿಗ್ರಹವೇ ಯೋಗ, ಮುಕ್ತಿ ಎಂದು ಅಥೈಸುತ್ತದೆ. ಲೋಕದ ಚಟುವಟಿಕೆಗಳಿಗೆ ರವಿ ಬೀಜ (ಕಾರಣ) ವಾಗುವಂತೆ ಇಂದ್ರಿಯಗಳ ಚಪಲಕ್ಕೆ “ಮನಸ್ಸು” ಬೀಜ (ಕಾರಣ) ವಾಗಿದೆ. ಎಂದು ಅಕ್ಕ ಗುರುತಿಸಿದ್ದಾಳೆ. ಯೋಗ ಸಾಧನೆಯ ಮೂಲಕ ಮನಸ್ಸಿನ ಏಕಾಗ್ರತೆ ಸಾಧ್ಯ. ಮನಸ್ಸಿನ ಏಕಾಗ್ರತೆಯಿಂದ ಮನ ಶುದ್ಧಿ, ಮನಶುದ್ಧಿಯಿಂದ ಭಾವಶುದ್ಧಿ ಆಗುವುದು. ದೇಹದೊಂದಿಗೆ ಮನಸ್ಸನ್ನು ಹೊಂದಿದ ಮಾನವರ ಈ ಮನಸ್ಸೇ ಮರ್ಕಟ. ಮನಸ್ಸಿನ ಚೇಷ್ಟಯಿಂದ ಜಗತ್ತಿನ ಆಗು-ಹೋಗುಗಳಿವೆ. ಒಳ್ಳೇಯದು ಕೆಟ್ಟದ್ದು ಸಂಭವಿಸುವುದೆಲ್ಲ ಮನಸ್ಸಿನಿಂದಲೇ. ಅಗೋಚರವಾದ ಮನಸ್ಸನ್ನು ಒಂದೆಡೆ ನಿಲ್ಲಿಸಲೇಂದೇ ಶಿವಶರಣರು ಇಷ್ಟಲಿಂಗದ ಮೊರೆ ಹೋದರು. ಈ ಕಾರಣದಿಂದ ಶಿವಶರಣರಿಗೆ ಮನಸ್ಸಿನ ಕೇಂದ್ರೀಕರಣಕ್ಕೆ ಅಥವಾ ಏಕಾಗ್ರತೆಗೆ ಇಷ್ಟಲಿಂಗ ಯೋಗ ಸಾಧನವಾಯಿತು. ಚನ್ನಮಲ್ಲಿಕಾರ್ಜುನ ಎಂಬ ಯೋಗತತ್ವದ ಮೂಲಕ ಅಕ್ಕಮಹಾದೇವಿ ಸ್ಥಿರತೆಹೊಂದಿ ಭಾವ ಮುಕ್ತಿಯನ್ನು ಹೊಂದಿದ್ದಾಕೆ. ಜಗದ ಜಂಜಡದಿಂದ ದೂರವಾಗಿ ಮುಕ್ತಿ ಮಾರ್ಗ ಕಂಡುಕೊಂಡಾಕೆ. “ಎನಗುಳ್ಳುದೊಂದು ಮನ ಆ ಮನ ನಿಮ್ಮಲ್ಲಿ ಸಿಲುಕಿದೆ” ಎಂದು ತನ್ನ ಮನದ ಸ್ಥಿರತೆಗೆ ಕಾರಣ ತಿಳಿಸುತ್ತಾಳೆ ಹೋಗೆ ಮಾನವರು ದೇವರೊಂದಿಗೆ ಸಂಬಂಧ ಬೆಳೆಸುವುದು ಮನಸ್ಸಿನ ಮೂಲಕವೇ ಇದೆ ಯೋಗವಾಗಿದೆ.
ಮನದ ಹೊಯ್ದಾಟ, ಮನದ ಗೊಂದಲ, ಮನದ ವಿಕಾರ, ಮನದ ಮುಂದಿನ ಆಸೆಗಳು ಭವದ ಮನುಜರನ್ನು ಭಕ್ತರನ್ನಾಗಿಸದೇ ಭವಿಗಳನ್ನಾಗಿ ಮಾಡಿದೆ. ಆ ಮನವನ್ನು ಸ್ಥಿಮಿತದಲ್ಲಿಡುವುದು, ಹದ್ದು ಬಸ್ತಿನಲ್ಲಿಡುವುದು ಸಾಧು, ಸಂತ, ಮಹಂತ, ಶರಣ, ಶರಣೆಯರಿಗೂ ಅಸಾಧ್ಯವಾಗಿತ್ತು, “ಯೋಗ” ಸಾಧನೆಯಿಂದ ಮನವನ್ನು ಭಕ್ತಿ ಮಾರ್ಗದಲ್ಲಿ ನಡೆಸಿ ಪರಮಾತ್ಮನಲ್ಲಿ ವಿಲೀನಗೊಳಿಸಿಕೊಳ್ಳುವ ಸುಲಭವಾದ ಭಕ್ತಿಯೋಗವನ್ನು ಬಳಸಿ ಅವರೆಲ್ಲಾ ಸತ್ಪುರುಷರಾದರು. ಕಾಯ ವಿಕಾರ, ಮನೋ ವಿಕಾರಗಳನ್ನು ಕಳೆದುಕೊಂಡು ಸಿದ್ಧ ಪುರುಷರಾದರು. ಬಸವಣ್ಣನವರು ತಮ್ಮದೊಂದು ವಚನದಲ್ಲಿ ಮನಸ್ಸಿನ ವಿಚಿತ್ರವಾದ ವರ್ತನೆಯನ್ನು ಹೇಳುತ್ತಾ, ಅದನ್ನು ಹತೋಟಿಯಲ್ಲಿ ಇಡಲು ಅಸಾಧ್ಯವಾಗುತ್ತಿರುವ ತಮ್ಮ ಅಸಹಾಯಕತೆಯನ್ನು ಸ್ವತಃ ಹೇಳಿಕೊಳ್ಳುತ್ತಾರೆ.
ತನ್ನ ವಿಚಾರಿಸಲೊಲ್ಲದು, ಇದಿರ ವಿಚಾರಸಹೋಹುದೀ ಮನವು.
ಏನು ಮಾಡುವೆನೀ ಮನವನು, ಎಂತು ಮಾಡುವನೀ ಮನವನು.
ಕೂಡಲಸಂಗಮದೇವನ ಶರಣರ
ನಚ್ಛದ-ಮಚ್ಚದ ಬೆಂದ ಮನವನು
ಎಂದು ದುಃಖಿಸುತ್ತಾರೆ. ಮನವು ಮಾಡುವ ಈ ವೇದನೆಯ ಉಪಶಮನಕ್ಕೆ ಮನದ ಆಸೆಗಳನ್ನು ಸುಡುವುದೊಂದೇ ಮಾರ್ಗ ಎಂದು ಕಂಡುಕೊಳ್ಳುವ ಬಸವಣ್ಣನವರು ಮನಸ್ಸಿನ ಚಂಚಲತೆ ದೂರ ಮಾಡಲು ಪ್ರಯತ್ನಿಸುತ್ತಾರೆ.
ತನ್ನಿಚ್ಛೆಯ ನುಡಿದಡೆ ಮೆಚ್ಚುವುದೀ ಮನವು.
ಇದಿರಿಚ್ಛೆಯ ನುಡಿದಡೆ ಮೆಚ್ಚದೀ ಮನವು.
ಕೂಡಲಸಂಗನ ಶರಣರ ನಚ್ಛದ ಮೆಚ್ಚದ
ಮನವನು ಕಿಚ್ಚಿನೊಳಗಿಕ್ಕು
ಬಸವಣ್ಣನಂತವರಿಗೆ “ಮನಸ್ಸು” ಸವಾಲಾಗಿ ನಿಂತಾಗ, ಸಾಮಾನ್ಯ ಮನಷ್ಯರ ಪಾಡೇನು? ಮನಸ್ಸಿನ ಮಾತು ಕೇಳುತ್ತಾ ಹೋದರೆ ಮನಷ್ಯರು ದುರಂತಗಳಿಗೆ ದಾರಿ ಮಾಡಿಕೊಟ್ಟಂತೆ. ಒಳ್ಳೆಯದನ್ನು ಮನಸ್ಸು ಯೋಚಿಸಿದರೆ ಸರಿ, ಆದರೆ ಮನಸ್ಸು ಕೆಟ್ಟದನ್ನ ಯೋಚಿಸಿದರೆ? ತನ್ನಿಚ್ಚೇಗೆ ಕುಣಿಸಿದರೆ? ಒಳ್ಳೆಯದನ್ನು ಒಪ್ಪಿಕೊಳ್ಳದಿದ್ದರೆ? ಮನುಷ್ಯರ ಅವನತಿ ನಿಶ್ಛಿತ. ಅದಕ್ಕೆ ಒಳ್ಳೆಯದನ್ನು ನಚ್ಚದ ಮೆಚ್ಚದ ಮನವನ್ನು ಕಿಚ್ಚಿನೊಳಗಿಕ್ಕು ಎಂದು ಬಸವಣ್ಣನವರು ಮನಸ್ಸಿನ ನಿಯಂತ್ರಣಕ್ಕೆ ಹಾತೊರೆಯುತ್ತಾರೆ. ಅಲ್ಲಮ್ಮ ಪ್ರಭುಗಳಂತು ಜಗದ ಹಾಹೆಗೆ ನಗುತ್ತಾರೆ. ಅಕ್ಕಮಹಾದೇವಿಯಂತೆ ಪ್ರಭುಗಳು ಸಹ ಜಗದ ಲೀಲೆಗೆಲ್ಲ ಮನವೇ ಕಾರಣ ಎನ್ನುತ್ತಾರೆ. “ಮನವೇ” “ಮಾಯೆ” ಎಂದು ಸಾಬೀತು ಮಾಡಿದ್ದಾರೆ. “ಹೆಣ್ಣು, ಹೊನ್ನು, ಮಣ್ಣು ಇವು ಯಾವವೂ ಮಾಯೆಯಲ್ಲ,” ಈ ಮನಸ್ಸು ಈ ಮನಸ್ಸಿನ ಮುಂದಿನ ಬಯಕೆಗಳೇ ಮಾಯೆ, ಬಯಕೆಗಳ ಬೆನ್ನು ಹತ್ತಿ ಮನಷ್ಯರು ಸೋತು ಹೋಗುತ್ತಾರೆ, ಮಾಯಾ ಜಿಂಕೆ ಬಯಸಿದ ಸೀತಾದೇವಿಯು ಬಳಲಿದಂತೆ, ಮಾಯಾ ಜಿಂಕೆಯ ಬೆನ್ನು ಹತ್ತಿ ರಾಮ ಬಳಲಿದಂತೆ ಮನದ ಆಸೆಗಳನ್ನು ಬೆನ್ನು ಹತ್ತಿ ಹೋದಂತೆ ಈ ಜಗತ್ತು ಬಳಲಿದೆ. ಈ ಮಾಯೆಯ ನಿಗ್ರಹವೇ ಬಹು ಮುಖ್ಯ ಎಂದು ಪ್ರಭುಗಳು ಹೇಳುವುದಲ್ಲದೇ ಅದು ಯೋಗದಿಂದ ಮಾತ್ರ ಸಾಧ್ಯ ಎಂದು ತಮ್ಮ ವಚನದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ.
ಅಷ್ಟಾಂಗಯೋಗದಲ್ಲಿ;
ಯಮ ನಿಯಮಾಸನ ಪ್ರಾಣಾಯಾಮ ಪಾತ್ಯಾಹಾರ(ವೆಂಬ)
ಧ್ಯಾನ್ಯ ಧಾರಣ ಸಮಾಧಿ(ಯೆಂಬ), ಎರಡು ಯೋಗ(ವುಂಟು)
ಅಲ್ಲಿ ಅಳಿದು ಕೂಡುವುದೊಂದು ಯೋಗ,
ಅಳೆಯದೆ ಕೂಡುವುದೊಂದು ಯೋಗ,
ಈ ಎರಡು ಯೋಗದೊಳಗೆ.
ಅಳಿಯದೆ ಕೂಡುವ ಯೋಗವು ಅತಿದುಕಾಣಾ ಗುಹೇಶ್ವರಾ
ಅಲ್ಲಮ ಪ್ರಭುಗಳು ಎರಡು ಹಂತಗಳಲ್ಲಿ ಯೋಗವನ್ನು ಪರಿಚಯಿಸಿದ್ದಾರೆ. ಮೊದಲನೆಯದು ಪತಂಜಲಿ ಮಹರ್ಷಿಗಳು ಹೇಳುವ ಅಷ್ಟಾಂಗ (08) ಯೋಗಗಳು. ಮೊದಲನೆಯದು “ಯಮ”, ಎರಡನೆಯದು ‘ನಿಯಮ’, ಮೂರನೆಯದು ‘ಆಸನ’, ನಾಲ್ಕನೆಯದು ‘ಪ್ರಾಣಾಯಾ’, ಐದನೆಯದು ಪ್ರತ್ಯಾಹಾರ, ಆರನೆಯದು ಧಾರಣ, ಏಳನೆಯದು ‘ಧ್ಯಾನ’, ಎಂಟನೆಯದು ‘ಸಮಾಧಿ’ ಇವುಗಳು ತಮ್ಮದೇ ಮಹತ್ವ ಹೊಂದಿವೆ.
ಕಾಯಾ-ವಾಚಾ-ಮನಸಾ ಒತ್ತಡಗಳ ನಿಯಂತ್ರಣಕ್ಕೆ ‘ಯಮ’, ವೈಯಕ್ತಿಕ ಶಿಸ್ತು, ಆತ್ಮಶುದ್ಧಿ, ಅಂತರಂಗ-ಬಹಿರಂಗ ಶಾಂತಿ ಪಾಲನೆ ಇವುಗಳೇ ‘ನಿಯಮ’, ದೇಹ ಹಾಗೂ ಮನಸ್ಸಿನ ದಾರ್ಢ್ಯಕ್ಕೆ ಸಹಕಾರ ನೀಡಿ ಆರೋಗ್ಯ ಹಾಗೂ ಚೈತನ್ಯ ನೀಡುವುದು “ಆಸನ”, ಉಚ್ಛಾಸ, ನಿಶ್ವಾಸಗಳ ಮೇಲೆ ನಿಯಂತ್ರಣ ಮತ್ತು ಚೈತನ್ಯ ಉಳಿಸಿಕೊಳ್ಳುವುದು “ಪ್ರಾಣಾಯಾಮ”, ಶಬ್ಧ, ಸ್ಪರ್ಶ. ರಸ, ರೂಪ ಮತ್ತು ಗಂಧ ಇತ್ಯಾಧಿ ಗ್ರಹಿಸಿ ಇಂದ್ರಿಯಗಳನ್ನು ನಿಯಂತ್ರಿಸುವುದು, ಶರೀರವನ್ನು ದೃಢವಾಗಿ, ಮೃದುವಾಗಿ, ಆರೋಗ್ಯವಾಗಿ ಇಡುವ ಬಹಿರಂಗಯೋಗ ಮತ್ತು ಅಂತರಂಗ ಯೋಗಗಳ ಸೇತುವೆಯಂತಿರುವದು “ಪ್ರತ್ಯಾಹಾರ”, ಒಂದು ವಿಷಯದ ಬಗ್ಗೆ ಪೂರ್ಣ ಚಿತ್ತದ ಏಕಾಗ್ರತೆ ಹೊಂದುವುದು “ಧ್ಯಾನ’, ದೇಹ ಮತ್ತು ಇಂದ್ರಿಯಗಳು ನಿದ್ರೆಯಲ್ಲಿರುವಂತೆ ವಿಶ್ರಾಂತಿಯಲ್ಲಿರುವುದು, ಆದರೆ ಮನಸ್ಸು ಮತ್ತು ಜ್ಞಾನೇಂದ್ರಿಯಗಳು ಎಚ್ಛರವಾಗಿರುವ ಸ್ಥಿತಿಯೇ “ಸಮಾಧಿ” ಹೀಗೆ ಅಷ್ಟಾಂಗಯೋಗಗಳನ್ನು ಪತಂಜಲಿ ಮಹರ್ಷಿಗಳು ಹೇಳಿರುವುದನ್ನೇ ಪ್ರಭುಗಳು ಉಲ್ಲೇಖಿನ ನಂತರ “ಅಳಿದು ಕೂಡುವುದೊಂದು ಯೋಗ”, “ಅಳಿಯದೆ ಕೂಡುವುದೊಂದು ಯೋಗ” ಎಂಬ ಎರಡು ಯೋಗಗಳನ್ನು ಹೇಳುತ್ತಾರೆ. ಇದರಲ್ಲಿ “ಅಳಿಯದೆ ಕೂಡುವ ಯೋಗವು” ಶ್ರೇಷ್ಠ ಎನ್ನುತ್ತಾರೆ. ಅಜ್ಞಾನದಿಂದ ಮನುಷ್ಯ ಇದ್ದಾಗ ಅರಿಷರ್ಡ್ವಗಳು ಅವರೊಳಗೆ ತುಂಬಿಕೊಂಡಿರುತ್ತವೆ. ಇವುಗಳನ್ನು ಅಳಿದು ಪರಮಾತ್ಮನಲ್ಲಿ ಕೂಡುವ ಯೋಗ ಒಂದೆಡೆಯಾದರೆ, ಅರಿವರಿತು, ಅನುವರಿತು, ಪರಮ ಜ್ಞಾನ ಇಟ್ಟುಕೊಂಡು ಕೂಡುವ ಯೋಗವು ಜ್ಞಾನಯೋಗ ಇದು ಅರಿವಿನ ಯೋಗ ಎಂದು ಬಹಿರಂಗಯೋಗ, ಅಂತರಂಗ ಯೋಗ ಎರಡು ವಿಧ ಯೋಗ ವಿಷಾರವನ್ನು ತುಂಬಾ ಸ್ಪಷ್ಟವಾಗಿ ಹೇಳಿದ್ದಾರೆ.
ನಾಭಿಮಂಡಲದ ಉದಯವೆ ಉದಯ
ಮಧ್ಯನಿರಾಳದ ನಿಲುವಿನ ಪರಿಯ ನೋಡಾ!
ಪವನಶೂಲದ ಮೇಲೆ ಪರಿಣಾಮವಯ್ಯಾ.
ಊರ್ಧ್ವಮುಖದಲ್ಲಿ ಉದಯವಾಯಿತ್ತ ಕಂಡೆ.
ಮಿಂಚುವ ತಾರಕೆ ಇದೇನೂ ಗುಹೇಶ್ವರಾ.
ಹೊಕ್ಕಳು ಮಂಡಲ, ಮಧ್ಯ ನಿರಾಳ, ಪವನಶೂಲ, ಊರ್ಧ್ವ ಮುಖಗಳ ಮೂಲಕ ಉದಯವಾಗುವ ಮಿಂಚುವ ಬೆಳಕು ಇದು ಅಂತರಂಗ ಬಹಿರಂಗದ ಬೆಳೆಗು. ಇದು ಯೋಗದಿಂದ ಸಾಧ್ಯ ಎಂಬುದನ್ನೇ ಪ್ರಭುಗಳು ವಚನ ಮೂಲಕ ಅಭಿವ್ಯಕ್ತಿಸುತ್ತಾರೆ.
ಜೀವಾತ್ಮ-ಪರಮಾತ್ಮರನ್ನು, ಅಂಗ-ಲಿಂಗ ಸಾಮರಸ್ಯವನ್ನು, ಸಂಕುಚಿತವಾದ ವ್ಯಕ್ತಿತ್ವವನ್ನು ವಿಶಾಲವಾಗಿಸಿ ತನ್ಮಯವಾದ ಆಹಲಾದ ಸ್ಥಿತಿಗೆ ತಲುಪಿಸುವುದು ಯೋಗ.
ಯೋಗವೆಂಬುದೇ ಒಂದು ಮನೋವಿಜ್ಞಾನ, ಅದು ಒಂದು ಮನಶಾಸ್ತ್ರ. ಪತಂಜಲಿ ಮಹರ್ಷಿಗಳು ಪ್ರಕಾರ “ಯೋಗ-ಚಿತ್ತವೃದ್ಧಿ ನಿರೋಧಃ ಯೋಗ ಮನೋನಿಯಂತ್ರಣದ ವಿಧಾನ” ಎನ್ನುವುದು ಸತ್ಯಮಾತು. ಮನಸ್ಸು ಮತ್ತು ಅದರ ನಿಯಂತ್ರಣವು ಯೋಗದಿಂದ ಸಾಧ್ಯ ಎಂಬುದು ಹೇಗೆ ಸತ್ಯವೋ ‘ಮನ”ವೇ ದೇಹದ ಇಂದ್ರಿಯಗಳು ನಿಯಂತ್ರಣಕ್ಕೆ ಸಾಧನ ಎಂಬುದು ಅಷ್ಟೇ ಸತ್ಯ. ಅದಕ್ಕೆ ಅಲ್ಲಮ ಪ್ರಭೂಗಳು ದೇಹವೆಂಬುದು ತೋಟವಾದರೆ ಮನಸ್ಸು ಗುದ್ದಲಿ ಎಂದಿದ್ದಾರೆ.
ತನುವ ತೋಂಟವ ಮಾಡಿ ಮನವ ಗುದ್ದಲಿ ಮಾಡಿ
ಅಗೆದು ಕಳೆದನಯ್ಯ ಭ್ರಾಂತಿನ ಬೇರ
ಒಡೆದು ಸಂಸಾರದ ಹೆಂಟೆಯ
ಬಗಿದು ಬಿತ್ತಿದೆನಯ್ಯಾ ಬ್ರಹ್ಮಬೀಜವ.
ಅಖಂಡಮಂಡಲವೆಂಬ ಬಾವಿ, ಪವನವೆ ರಾಟಾಳ,
ಸುಷಮ್ನವಾಳದಿಂದ ಉದಕವ ತಿದ್ದಿ,
ಬಸವಗಳೈವರು ಹಸಗೆಡಿಸಿಹವೆಂದು
ಸಮತೆ ಸೈರಣೆಯಂಬ ಬೇಲಿಯನಿಕ್ಕಿ
ಆವಾಗಲೂ ಆ ತೋಟದಲ್ಲಿ ಜಾಗರವಿದ್ದು
ಸಸಿಯ ಸಲುಹಿದೆನು ಕಾಣಾ ಗುಹೇಶ್ವರ.
ಮನಸ್ಸೆಂಬ ಗುದ್ದಲಿಯಿಂದ ದೇಹವೆಂಬ ಹೊಲವ ಅಗೆದು ಭ್ರಾಂತಿಯೆಂಬ ಬೇರನ್ನು, ಸಂಸಾರದ ಭಾವಕಳೆಯನ್ನು ಕಳೆದಾಗ ಬ್ರಹ್ಮಬೀಜ ಬಿತ್ತಲು ಸಾಧ್ಯವೆಂಬ ಅದ್ಭುತವಾದ ಪರಿಕಲ್ಪನೆ ಇದು. ಇದು ಯೋಗ. ಇದು ಜ್ಞಾನ, ಅರಿವಿಗೆ ಸಾಕಾರ.
ಶಿವಯೋಗ:
ಹಿಂದೂ ಧರ್ಮದಲ್ಲಿ ಅತ್ಯಂತ ಪ್ರಾಚೀನವಾದ ಯೋಗ ಭಾರತೀಯ ತತ್ವಶಾಸ್ತ್ರದಲ್ಲಿ ದರ್ಶನವಾಗಿದೆ. ಪತಂಜಲಿ ಮಹರ್ಷಿ ಮತ್ತು ಭಗವದ್ಗೀತೆಗಳಲ್ಲಿ ಯೋಗಕ್ಕೆ ಪ್ರಾಧಾನ್ಯತೆ ದೊರೆತು ಪ್ರಚಲಿತವಾಗಿದೆ. ಪತಂಜಲಿ ಮಹರ್ಷಿಗಳ ಅ?ಂಗಯೋಗ, ಭಗವದ್ಗೀತೆಯಲ್ಲಿ ಹೇಳಿದ ಕರ್ಮಯೋಗ, ಭಕ್ತಿಯೋಗ, ಜ್ಞಾನಯೋಗಗಳು ನಿರ್ಲಿಪ್ತತೆಯನ್ನು, ಸ್ಥಿತಪ್ರಜ್ಞೆಯನ್ನು, ಇಂದ್ರಿಯ ನಿಗ್ರಹ, ಮನೋ ನಿಗ್ರಹ, ಸಾಧಿಸಿಕೊಳ್ಳಲು ಸಾಧುವಾದ ಮಾರ್ಗಗಳನ್ನು ಹೇಳಿಕೊಟ್ಟವು.
ಶೈವಪರವಾದ ‘ಯೋಗ’ದ ಮಾರ್ಗವು ಇವೆಲ್ಲವುಗಳನ್ನು ಅಳವಡಿಸಿಕೊಂಡಿದ್ದರೂ ವಿಶೇ?ವಾಗಿ ಶಿವನ ಆರಾಧನೆ, ಪೂಜೆ ಇವುಗಳ ಮೂಲಕ ಶಿವನೊಂದಿಗೆ ಅನುಸಂಧಾನಗೊಳ್ಳುವ, ಜೀವ-ಶಿವರ ಐಕ್ಯವಾಗುವ ಮಾರ್ಗವನ್ನು ತಿಳಿಯಪಡಿಸಿತು. ಶಿವಯೋಗ ಎಂಬ ವಿಶಿ?ರ್ಥದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಬಳಕೆಯಾಯಿತು. ಶಿವಾಗಮ, ಶಿವಸಂಹಿತೆ ಮುಂತಾದ ಶೈವಪರ ಗ್ರಂಥಗಳಂತೆ ವಚನ ಸಾಹಿತ್ಯದಲ್ಲೂ ವಿಶೇ?ವಾಗಿ ಶಿವಯೋಗವು ನೆಲೆಯೂರಿತು. ಶೈವರಿಗೆ ಶಿವನ ಪೂಜೆ ಶಿವಯೋಗವೆನಿಸಿದರೆ, ಶಿವಶರಣರಿಗೆ ಲಿಂಗಾಂಗ ಸಾಮರಸ್ಯವು ಶಿವಯೋಗವೆನಿಸಿತು. ಶಿವ, ಸೃಷ್ಠಿ, ಜೀವ ಇವುಗಳ ಕುರಿತಾದ ಅರಿವು, ಜ್ಞಾನ ತತ್ವಜ್ಞಾನ ಎನಿಸಿಕೊಂಡರೆ, ಶೋಡಶೋಪಚಾರದ ಪೂಜೆ, ಉಪಾಸನೆ, ಜಪಸ್ತೋತ್ರಗಳು ಕ್ರಿಯಾಯೋಗವೆನಿಸಿಕೊಂಡವು. ಈ ಎರಡರ ಮೂಲಕ ಶಿವನೊಂದಿಗೆ ಕೂಡಿಕೊಳ್ಳುವುದು ಶಿವಯೋಗವಾದರೆ ಇದನ್ನು ನಿ?ಯಿಂದ ಅನುಸರಿಸಿ ಶಿವಯೋಗ ಸ್ಥಿತಿ ಹೊಂದಿದವರು ಶಿವಯೋಗಿಗಳೆನಿಸಿಕೊಂಡರು.
ಜ್ಞಾನವಿಲ್ಲದ ಯೋಗ, ಯೋಗವಿಲ್ಲದ ಜ್ಞಾನ ಇವೆರಡು ಇಲ್ಲದ ಬದುಕು ಅರ್ಥವಿಹೀನ. ಇದನ್ನು ಅರಿತುಕೊಂಡರೆ ಶಿವಶರಣರು ಅವುಗಳನ್ನು ತಾವು ಮೊದಲು ಅಳವಡಿಸಿಕೊಂಡು ನಂತರ ಜನಸಾಮಾನ್ಯರು ಅವರಂತೆ ಶಿವಯೋಗ ಸಾಧನೆ ಮಾಡಲು ಸಾಧ್ಯವಿದೆ ಎಂದು ತಿಳಿಸಲು, ಅವರಿಗೆ ಸುಲಭವಾಗಿ ಸರಳವಾಗಿ ತಿಳಿಯುವ ಭಾ?ಯಲ್ಲಿ ವಚನಗಳ ಮೂಲಕ ಶಿವಯೋಗದ ಮಾರ್ಗಗಳನ್ನು ತಿಳಿಸಿದರು. ವಚನಗಳಲ್ಲಿ ಶಿವಯೋಗ ಸಾಧನೆ ಸ್ಪಷ್ಟ ಮಾಹಿತಿಯೊಂದಿಗೆ ಜನಸಾಮಾನ್ಯರಿಗೆ ಲಭ್ಯ ಇರುವುದರಿಂದ ವಚನಗಳನ್ನು ಕನ್ನಡದ ಉಪನಿ?ತ್ತು ಎಂದು ಕರೆಯಲಾಗಿದೆ. ಶಿವಪೂಜೆ ಉಪಾಸನೆ ಧ್ಯಾನ, ಜಪ, ತಪಗಳಿಗೆ ಮಾತ್ರ ಶಿವಯೋಗ ಎಂದು ಶಿವಶರಣರು ‘ಸೀಮಿತಾರ್ಥ’ದಲ್ಲಿ ಅದನ್ನು ನೆಲೆಗೊಳಿಸದೆ ಸಮಾಜಶಿವ ಅಂದರೆ ಸಮಾಜದ ಆತ್ಮಕಲ್ಯಾಣಕ್ಕೆ ಶಿವಯೋಗವನ್ನು ವಿಸ್ತರಿಸಿದರು. ಬಸವಣ್ಣನವರ ನೇತೃತ್ವದಲ್ಲಿ ಇಷ್ಟಲಿಂಗ, ಕಾಯಕ, ದಾಸೋಹದ ಮೂಲಕ ಅ?ವರಣ, ಪಂಚಾಚಾರ, ಷಟ್ಸ್ಥಲಗಳ ಮೂಲಕ ಇಡೀ ಸಮುದಾಯ ಶಿವಯೋಗ ಸಾಧನೆ ಮಾಡಬಹುದು ಎಂಬುದನ್ನು ಬಸವಣ್ಣನಂತಹ ಶಿವಶರಣರು ತಮ್ಮ ವಚನಗಳ ಮೂಲಕ ಪ್ರತಿಪಾದಿಸಿದರು.
ತನುವ ಗೆಲಲರಿಯದೆ, ಮನವ ಗೆಲಲರಿಯದೆ,
ಧನವ ಗೆಲಲರಿಯದೆ, ಭ್ರಮೆಗೊಂಡಿತ್ತು ಲೋಕವೆಲ್ಲವು.
ತನುವ ದಾಸೋಹಕ್ಕೆ ಸವೆಸಿ, ಮನವ ಲಿಂಗಧ್ಯಾನದಲ್ಲಿ ಸವೆಸಿ,
ಧನವ ಜಂಗಮದಲ್ಲಿ ಸವೆಸಿ ಗೆಲ್ಲಬಲ್ಲಡೆ,
ಸಂಗನಬಸವಣ್ಣನಲ್ಲದೆ ಮತ್ತಾರನು ಕಾಣೆ,
ಗುಹೇಶ್ವರಾ-ನಿಮ್ಮ ಶರಣ ಸಂಗನಬಸವಣ್ಣಂಗೆ
ನಮೋ ನಮೋ ಎನುತಿರ್ದೆನು
ಎನ್ನುವ ಮೂಲಕ ಅಲ್ಲಮಪ್ರಭುಗಳ ಶಿವಯೋಗವು ತನು-ಮನ-ಧನಗಳನ್ನು ಹೇಗೆ ಗೆಲ್ಲಬೇಕು ಎಂಬ ಶಿವಯೋಗ ಸಿದ್ಧಿಯನ್ನು ಬಸವಣ್ಣ ಸುಂದರವಾಗಿ ಸಾಧಿಸಿ ತೋರಿದ್ದಾನೆ. ನಿಜಾರ್ಥದಲ್ಲಿ ಒಬ್ಬ ಒಳ್ಳೆಯ ಶಿವಯೋಗಿ ಬಸವಣ್ಣ. ತನುವ ದಾಸೋಹಕ್ಕೆ ಸವೆಸುವುದು, ಮನವನ್ನು ಲಿಂಗಧ್ಯಾನದಲ್ಲಿ ಸವೆಸುವುದು, ಧನುವ ಜಂಗಮರಿಗಾಗಿ ಸವೆಸುವುದರಿಂದ ಬದುಕನ್ನು ಅರ್ಥಪೂರ್ಣ ಮಾಡಿಕೊಳ್ಳುವದು ಶಿವಯೋಗ. ಅದನ್ನು ಬಸವಣ್ಣನವರು ಮಾಡಿ ತೋರಿಸಿದರು ಎಂದು ತಮ್ಮ ವಚನದ ಮೂಲಕ ಹೇಳಿದ್ದಾರೆ.
ಜ್ಞಾನ-ವೈರಾಗ್ಯ ಮೂರ್ತಿಗಳಾದ ಪ್ರಭುಗಳು ಶಿವಯೋಗದ ನೆಲೆಯನ್ನು ಸಿದ್ಧರಾಮರಿಗೆ ಬೋಧಿಸುತ್ತಾರೆ. ತದನಂತರ ಚನ್ನಬಸವಣ್ಣನವರು ಲಿಂಗತ್ರಯದ (ಇಷ್ಟಲಿಂಗ, ಭಾವಲಿಂಗ, ಪ್ರಾಣಲಿಂಗ) ಮೂಲಕ ಸಿದ್ಧರಾಮರಿಗೆ ಬೋಧಿಸಿ ಪೂರ್ಣಗೊಳಿಸುತ್ತಾರೆ. ನಂತರದಲ್ಲಿ ಸಿದ್ಧರಾಮರು ಶಿವಯೋಗಿ ಸಿದ್ಧರಾಮರಾಗಿ ಪರಿಪೂರ್ಣರಾಗುತ್ತಾರೆ. ಮಾನವರಿಗೆ ಕಾಯಕ ಎಷ್ಟು ಮುಖ್ಯವೋ ಲಿಂಗಪೂಜೆಯೂ ಅಷ್ಟೇ ಮುಖ್ಯ. ಕಾಯಕವು ಪರಿಪೂರ್ಣವಾಗಲು ಲಿಂಗಪೂಜೆಯು ಬೇಕು. ಜೀವ-ಶಿವರು ಒಂದಾಗಲು ಲಿಂಗಪೂಜೆ ಅವಶ್ಯಕ. ಇದು ಲಿಂಗಾಂಗ ಸಾಮರಸ್ಯ. ಇದೇ ಶರಣರ ದೃಷ್ಟಿಯಲ್ಲಿ ಶಿವಯೋಗ. ಶಿವಯೋಗದಲ್ಲಿ ಭಕ್ತಿ, ಜ್ಞಾನ, ಧ್ಯಾನ, ಜಪ, ಸ್ತೋತ್ರಗಳ ಸುಂದರ ಸಂಗಮವಿದೆ.
ಕರಸ್ಥಲದಲ್ಲಿ ಲಿಂಗವ ಧರಿಸಿದಾತ
ಉದಯಾಸ್ತಮಾನನೆನ್ನದೆ
ಶಿವಪೂಜೆ, ಶಿವಮಂತ್ರ, ಶಿವಾರ್ಪಣ, ಶಿವಶಾಸ್ತ್ರ, ಶಿವಯೋಗದಲ್ಲಿರುವ
ಎಂದು ಚನ್ನಬಸವಣ್ಣನವರು ಶಿವಯೋಗದ ಲಕ್ಷಣಗಳನ್ನು ಹೇಳುತ್ತಾರೆ.
ಶಿವಯೋಗದ ಸ್ವರೂಪ:
ಬಹುತ್ವದ ಭಾರತವು ಭೇದ ಸಂಸ್ಕೃತಿಯಿಂದ ಏಕವಾಗಿದೆ. ಅಂದರೆ ಭಾರತದಲ್ಲಿ ವರ್ಗ, ವರ್ಣ, ಲಿಂಗ ಭೇದಗಳಿವೆ. ಇಂತಹ ಭೇದಸಂಸ್ಕೃತಿಯನ್ನು ಆತ್ಮಕಲ್ಯಾಣದ ಮೂಲಕ ಒಂದಾಗಿಸುವ ಪರಿ ಶರಣ ಸಮಾಜದಲ್ಲಿ 12 ನೇಯ ಶತಮನಾದಲ್ಲಿ ಕರ್ನಾಟಕದಲ್ಲಿ ನಡೆಯಿತು. ಆತ್ಮಕಲ್ಯಾಣದ ಜೊತೆಗೆ ಸಮಾಜಕಲ್ಯಾಣವನ್ನು ಶರಣರು ಕಂಡುಕೊಂಡಿದ್ದರು. ಶರಣ ಧರ್ಮ ಭಕ್ತಿ ಮೂಲವಾಗಿದೆ. ಭಕ್ತಿ ಎಂದರೆ ಶ್ರದ್ಧೆ, ನಿಷ್ಠೆ, ಭಕ್ತಿ ಮೂಲವೇ ಲಿಂಗವಾಗಿದೆ. ಶರಣ ಧರ್ಮ ಸಿದ್ಧಾಂತದಲ್ಲಿ ಗುರು-ಲಿಂಗ-ಜಂಗಮಗಳೇ ಮೂಲತತ್ವಗಳು. ಗುರು ಎಂದರೆ ಜ್ಞಾನಿ, ಆ ಗುರು ಲಿಂಗವಾಗಬೇಕಾದರೆ ಜ್ಞಾನವನ್ನು ಕ್ರಿಯೆಯಾಗಿಸಿಕೊಳ್ಳಬೇಕು. ಜ್ಞಾನವನ್ನು ಕ್ರಿಯೆಯನ್ನು ಸಾಮಾಜೀಕರಣಗೊಳಿಸುವಾತ ಅಂದರೆ ಸಾರ್ವತ್ರಿಕಗೊಳಿಸುವಾತ ಜಂಗಮ. ಇದು ವ್ಯಕ್ತಿಯಿಂದ ಸಮಷ್ಟಿಯವರೆಗೆ ನಡೆದುಬರುವ ಹಂತ. ಒಂದೊಂದೇ ಮೆಟ್ಟಿಲನ್ನು ಹತ್ತಿ ಕೊನೆಯ ಹಂತದಲ್ಲಿ ಶಿವಜ್ಞಾನಿಯಾಗಿ ಶಿವಯೋಗ ಸಾಧಿಸಿ ಶಿವಯೋಗಿಯಾಗುವುದು.
ಕರದಲ್ಲಿ ಲಿಂಗ ಹಿಡಿದು ಲಿಂಗಸಿದ್ಧಿ ಪಡೆಯುವುದು, ಲಿಂಗದ ಒಡನಾಟದಲ್ಲಿ ಅಂಗಭಾವ ಕಳೆದುಕೊಂಡು ಸಾಮರಸ್ಯ ಸಾಧಿಸುವುದು, ಲಿಂಗಾಂಗ ಸಾಮರಸ್ಯದಿಂದ ಲಿಂಗವ್ಯಕ್ತಿತ್ವವನ್ನು ಸಂಪಾದಿಸಿಕೊಳ್ಳುವುದು, ಇಂತಹ ವ್ಯಕ್ತಿತ್ವದಿಂದ ಇಡೀ ಬದುಕನ್ನೇ ಲಿಂಗಭಾವದಿಂದ ಅನುಭವಿಸುವುದು ಶಿವಯೋಗವಾಗಿದೆ. ಈ ಭಾವವು ಕೇವಲ ವ್ಯಕ್ತಿಗತವಾಗಿ ನಿಲ್ಲದೇ ಸುತ್ತಲಿನ ಸಮಾಜಕ್ಕೆ ವಿಸ್ತರಿಸುವುದು. ವ್ಯಕ್ತಿ ಜೀವನವು ವಿಕಾಸಗೊಂಡರೆ ಸಾಲದು, ಸಮಾಜವೂ ವಿಕಾಸವಾಗಬೇಕು. ವ್ಯಕ್ತಿಯ ಶುದ್ಧೀಕರಣದಂತೆ ಸಮಾಜ ಶುದ್ಧೀಕರಣವಾಗಬೇಕೆಂಬುದು ಬಸವಾದಿ ಶರಣರ ಮಹದಾಸೆಯಾಗಿತ್ತು. ವೈಯಕ್ತಿಕವಾಗಿ ಸಬಲರಾಗಿ ಸಾಮಾಜಿಕವಾಗಿ ದುರ್ಬಲರಾದರೆ ಇದು ಪ್ರಗತಿಯಲ್ಲ. ಈ ಕಾರಣದಿಂದ ಶಿವಶರಣರು ವ್ಯಕ್ತಿ ಕಲ್ಯಾಣದ ಜೊತೆಗೆ ಸಮಾಜ ಕಲ್ಯಾಣಕ್ಕೆ ಒತ್ತು ನೀಡಿದರು. ಸೋಹಂ ಎನ್ನದೇ ದಾಸೋಹಂ ಎಂದರು. ಶಿವಯೋಗದ ದೃಷ್ಟಿಯು ಹೀಗೆ ವಚನಗಳಲ್ಲಿ ಸಾರ್ವತ್ರಿಕವಾಗಿ ಗೋಚರಿಸಿತು.
ಅಷ್ಟಾವರಣ, ಷಟ್ಸ್ಥಲ, ಪಂಚಾಚಾರಗಳ ಮೂಲಕ ಶಿವಯೋಗದ ಪರಿಕಲ್ಪನೆ ವಚನಗಳಲ್ಲಿ ಸ್ಪಷ್ಠವಾಗಿ ಕಾಣುತ್ತದೆ. ವೀರಶೈವ ಲಿಂಗಾಯತ ಧರ್ಮದಲ್ಲಿ ಅಷವರಣ ಈ ಧರ್ಮದ ಅಂಗವೆನಿಸಿದರೆ, ಷಟ್ಸ್ಥಲ ಅದರ ಆತ್ಮವಾಗಿದೆ. ಪಂಚಾಚಾರ್ಯ ಪ್ರಾಣವೆನಿಸಿದೆ. ಈ ಸ್ವರೂಪ ಹಿಡಿದು ಶಿವಯೋಗ ಸಾಧನೆ ಪ್ರತಿಯೊಬ್ಬರಿಗೂ ಸಾಧ್ಯ ಎಂದವರು ಶಿವಶರಣರು. ಅದರ ತತ್ವಾಚರಣೆಗಳನ್ನು ಸರಳವಾಗಿ ವಚನಗಳಲ್ಲಿ ಬೋಧಿಸಿದರು. ಇದು ಕೇವಲ ಬೋಧನೆಯಲ್ಲ ಸ್ವತಃ ಶರಣರು ನಡೆದು ತೋರಿದ ದಾರಿ.
ವಚನಗಳಲ್ಲಿ ಶಿವಯೋಗ:
ಶಿವಯೋಗ ಸಾಧನೆಯ ಕುರಿತು ವಚನಗಳು ಅಷವರಣ, ಷಟಸ್ಥಲ ಪಂಚಾಚಾರಗಳ ಮೂಲಕ ತೆರೆದುಕೊಂಡಿವೆ. ಶಿವಯೋಗದ ತಾತ್ವೀಕ ನೆಲೆಗಟ್ಟು ನಿರಾಕಾರವಾದ ಶಿವನನ್ನು ಇಟ್ಟಲಿಂಗದ ಮೂಲಕ ಸಾಕಾರವಾಗಿಸಿಕೊಂಡು ಆ ಲಿಂಗದಲ್ಲಿ ಅನುಸಂಧಾನಗೊಳ್ಳುವುದು. ಇಷ್ಟ ಲಿಂಗವನ್ನು ಪೂಜಿಸುತ್ತಾ ಶಿವಯೋಗವನ್ನು ಸಂಪಾದಿಸುವುದಾಗಿದೆ.
ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ
ಪಾತಾಳದಿಂದತ್ತತ್ತ ನಿಮ್ಮ ಶ್ರೀಚರಣ
ಬ್ರಹ್ಮಾಂಡದಿಂದತ್ತ ನಿಮ್ಮ ಶ್ರೀಮುಕುಟ
ಅದಮ್ಯ ಅಗೋಚರ ಅಪ್ರತಿಮ ಲಿಂಗವೇ ಕೂಡಲಸಂಗಮದೇವೈಯ್ಯಾ
ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯ
ಬಸವಣ್ಣನವರ ಈ ವಚನ ಭವ್ಯವಾದ ನಿರಾಕಾರ ಮೂರ್ತಿ ಲಿಂಗವಾಗಿ ಕರಸ್ಥಲದಲ್ಲಿ ಚುಳುಕಾದುನ್ನು ವಿವರಿಸುತ್ತದೆ. ಸರ್ವ ವ್ಯಾಪಿ ಆಗಿರುವ ಶಿವ ಜಗದಗಲ ಇದ್ದಾನೆ. ಮುಗಿಲಗಲ ಇದ್ದಾನೆ. ಅವನ ಮುಕುಟ ಬ್ರಹ್ಮಾಂಡದಿಂದ ಅತ್ತಿತ್ತವಾಗಿದೆ. ಆ ಶಿವನ ಪಾದ ಪಾತಾಳದಿಂದ ಅತ್ತಿತ್ತ ಚಾಚಿಕೊಂಡಿದೆ. ಅದು ಅಗಮ್ಯವಾಗಿದೆ, ಅಗೋಚರವಾಗಿದೆ, ಭವ್ಯವಾಗಿದೆ ಇಂತಹ ಶಿವನು ಇ?ಲಿಂಗ ರೂಪದಲ್ಲಿ ಕರಸ್ಥಳದಲ್ಲಿ ಪೂಜೆಗೊಳ್ಳುವುದು ಚೋದ್ಯವಾಗಿದೆ.
ಇಷ್ಟಲಿಂಗ ಶಿವಯೋಗದ ಸಾಧನ:
ವಚನಗಳಲ್ಲಿ ಮುಖ್ಯವಾಗಿ ಶಿವನ ಸಾಕಾರ ರೂಪವಾದ ಇಷ್ಟಲಿಂಗ ಶಿವಯೋಗದ ಸಾಧನ ಎಂದು ಪ್ರತಿಪಾದಿತವಾಗಿದೆ. ಇಷ್ಟ ಲಿಂಗವನ್ನು ದಯಪಾಲಿಸುವವನು ಶ್ರೀಗುರು. ಕರಸ್ಥಲದಲ್ಲಿ ಶ್ರೀಗುರುವಿನಿಂದ ಅನುಗ್ರಹಿತವಾದ ಇಷ್ಟಲಿಂಗವಿರಲು ಮನೋನಿಗ್ರಹ, ಕರಣಂಗಳ ನಿಗ್ರಹವಾಗಿ ಅಖಂಡವಾದ ಸ್ಥಿರತೆ ಉಂಟಾಗುತ್ತದೆ. ಇದು ಅನುಭವ ವೇದ್ಯವಾದದ್ದು. ಪ್ರಯೋಗಾತ್ಮಕವಾದದ್ದು. ಶಿವಯೋಗ ಸ್ಥಿತಿಯನ್ನು ಶಿವಶರಣರು ತಮ್ಮ ವಚನಗಳಲ್ಲಿ ನೆಲೆಗೊಳಿಸಿದರು.
ಅಂತರಂಗದೊಳಗಿರ್ದ ನಿರವಯ ಲಿಂಗವನು
ಸಾವಯವ ಲಿಂಗವ ಮಾಡಿ
ಶ್ರೀಗುರು ಸ್ವಾಮಿ ಕರಸ್ಥಲಕ್ಕೆ ತಂದುಕೊಟ್ಟನಾಗಿ
ಆ ಇ?ಲಿಂಗವೇ ಅಂತರಂಗವನಾವರಿಸಿ
ಅಂತರಂಗದ ಕರಣಂಗಳೆ ಕಿರಣಂಗಳಾಗಿ
ಬೆಳಗುವ ಚಿದಂಶವೆ ಪ್ರಾಣಲಿಂಗವು
ಅಮೂಲ ಚೈತನ್ಯವೆ ಭಾಗಲಿಂಗವು,
ಇದನ್ನು ಅರಿದು ನೋಡುವ ನೋಟ
ಭಾವ ಪರಿಪೂರ್ಣವಾಗಿ ತಾನು ತಾನಾದಲ್ಲದೆ,
ಇದಿರಿಟ್ಟು ತೋರುವುದಿಲ್ಲವಾಗಿ
ಅಖಂಡ ಪರಿಪೂರ್ಣವಪ್ಪ ನಿಜವು ತಾನೆ ಕೂಡಲಸಂಗಮದೇವಾ
ಇಷ್ಟಲಿಂಗ ಪೂಜೆಯಿಂದ ಅಖಂಡ ಪರಿಪೂರ್ಣತೆ ದೊರೆಯುವುದು ಎಂದು ಸ್ವತಃ ಬಸವಣ್ಣನವರು ವೇದ್ಯವಾಗಿಸಿದ್ದಾರೆ. ಇದೇ ನಿಜದ ಶಿವಯೋಗವಾಗಿದೆ. ಕರಣಂಗಳು ಕಿರಣಗಳಾಗುವ ಪರಿ, ಅಂತರಂಗ ಬೆಳಕಾಗುವ ಚೈತನ್ಯಮಯ ಭಾವ ಉದ್ಭವಿಸುವ ಆನಂದ ಪರಮಸ್ಥಿತಿ ಇದು. ಇಷ್ಟಲಿಣಗ ಪ್ರಾಣಲಿಂಗವಾಗುವ ಪ್ರಾಣಲಿಂಗ ಭಾವಲಿಂಗವಾಗುವ ಹಂತ ಶೇಷ್ಠತಮವಾದದ್ದು.
ಶ್ರೀ ಗುರುವಿನಿಂದ ಅನುಗ್ರಹಿತವಾದ ಇಷ್ಟಲಿಂಗ ಕಲಸ್ಥಲಕ್ಕೆ ಬಂದು ಮನವನ್ನು ಆವರಿಸಿಕೊಳ್ಳುತ್ತದೆ. ಆಗ, ಅಂತರಂಗದ ಭಾವಗಳು ಬೆಳಕಿನ ಕಿರಣಗಳಾಗುತ್ತವೆ. ಆಗ ಇಷ್ಟಲಿಂಗ ಪ್ರಾಣಲಿಂಗವಾಗುತ್ತದೆ. ಆ ಪ್ರಾಣಲಿಂಗ ಆವರಿಸಿಕೊಳ್ಳುತ್ತಾ ಹೋದಂತೆ ಚೈತನ್ಯಯ ಭಾವವು ಉದ್ದೀಪನವಾಗುತ್ತದೆ. ಇದೇ ಭಾವಲಿಂಗ ಆಗ ಸಾಧಕ ತಾನು ತಾನಾಗಿ ಉಳಿಯದೇ ಲಿಂಗದೊಳಗೆ ಒಂದಾಗಿ ಅಖಂಡ ಪರಿಪೂರ್ಣ (ಲಿಂಗ+ಅಂಗ=ಲಿಂಗಾಂಗ ಸಾಮರಸ್ಯ) ನಾಗಿ ಶಿವಯೋಗ ಸಾಧಿಸುತ್ತಾನೆ, ಬಸವಣ್ಣನವರ ಈ ವಿಚಾರವು ಇಷ್ಟಲಿಂಗವು ಶಿವಯೋಗದ ಸಾಧನೆ ಎಂಬುದನ್ನು ಸಾಕ್ಷೀಕರಿಸುತ್ತದೆ.
ಅಲ್ಲಮಪ್ರಭುಗಳು ತಮ್ಮದೊಂದು ವಚನದಲ್ಲಿ ಗುರು-ಶಿಷ್ಯ-ಇಷ್ಟಲಿಂಗದ ವಿಚಾರವಾಗಿ ಮಾರ್ಮಿಕವಾಗಿ ಹೇಳಿತ್ತಾರೆ. ಶಿಷ್ಯ ಒಣಗಿದ ಕಟ್ಟಿಗೆಯಂತಿರಬೇಕು. ಗುರುವಿನ ಜ್ಞಾನದ ಕಿಡಿ ಸೋಕಿದರೆ ಸಾಕು ಅದನ್ನು ಆಹ್ವಾನಿಸಿಕೊಂಡು ಕರ್ಪೂರ ಗಿರಿ ಉರಿಯುವಂತೆ ಉರಿಯಬೇಕು. ಇಂತಹ ಶಿಷ್ಯನ ಕೈಯಲ್ಲಿ ಗುರು ಅನುಗ್ರಹಿಸುವ ಇಷ್ಟಲಿಂಗ, ಆ ಇಷ್ಟಲಿಂಗ ಉಪಾಸನೆಯಿಂದ ಧನ್ಯತೆ ಪಡೆಯುವ ಶಿಷ್ಯ ಶಿವಯೋಗ ಸಾಧನೆಗೆ ಸಜ್ಜಾಗುತ್ತಾನೆ. ಕರಸ್ಥಲ-ಮನಸ್ಥಲ-ಪರಸ್ಥಲಗಳ ವಿಚಾರವಾಗಿ ಪ್ರಭುಗಳು ಸೂಕ್ತವಾಗಿ ಮಾತನಾಡುತ್ತಾರೆ.
ಅಣವಮಲ, ಮಾಯಾಮಲ, ಕಾರ್ಮಿಕಮಲವೆಂಬ
ಮಲತ್ರಯಗಳಿಳಿದು ನಿರ್ಮಲನಾದ ಶಿಷ್ಯ,
ಕಾಯಜೀವದ ಭ್ರಾಂತಸೂತಕ ಹಿಂಗಿ ನಿಶ್ಯಂಕನಾದ ಗುರು.
ಈ ಉಭಯ ಭಾವದೊಳಗೆ
ಆವುದು ಮುಂದು ಅವುದು ಹಿಂದೆಂದರಿಯಬಪುö್ಪದು?
ಕರಸ್ಥಲಕ್ಕೆ ಕಾರುಣ್ಯವ ಮಾಡಿದಡೆ ಮನಸ್ಥಲಕ್ಕೆ ಹಂಗಿಲ್ಲ.
ಮನಸ್ಥಲದ ನಿಲುವು ಪರಸ್ಥಲದಲಡಗಿದರೆ
ಭಾವ ಬಳಲಿತ್ತಿದೇನೊ ಗುಹೇಶ್ವರಾ?
ಮಲತ್ರಯವಳಿದು ನಿರ್ಮಲನಾದ ಶಿಷ್ಯನಿಗೆ ಪೂರ್ವಾಶ್ರಮದ ಭ್ರಾಂತಿ ಕಳೆದುಕೊಂಡು ನಿಶ್ಚಂತನಾದ ಗುರುವು ಕರಸ್ಥಲಕ್ಕೆ ಇಷ್ಟಲಿಂಗ ನೀಡಿದಾಗ ಶಿಷ್ಯನ ಮನಸ್ಥಲದಲ್ಲಿ ಬೆಳಗಾಗಿ ಇಷ್ಟಲಿಂಗ ಕೈಸಾರುವದು. ಲಿಂಗಾಂಗ ಸಾಮರಸ್ಯವಾಗುವುದು. ಯೋಗ್ಯ ಗುರುವು ಯೋಗ್ಯಶಿಷ್ಯನಿಗೆ ಇಷ್ಟಲಿಂಗ ದಯಪಾಲಿಸಿದಾಗ ಅದು ಶಿವಯೋಗ ಪಥಕ್ಕೆ ಕಾಣರಣವಾಗುವುದು ಎಂಬುದು ಸತ್ಯ ವಿಚಾರಚಾಗಿದೆ. ಲಿಂಗ-ಅಂಗಗಳ ಸಾಮರಸ್ಯವನ್ನು ಶಿವಯೋಗಿಯು ಇಷ್ಟಲಿಂಗದ ಮೂಲಕ ಸಾಧಿಸಬೇಕು. ಶಿವಯೋಗ ಸಾದಕನ ಇಡೀ ದೇಹವೇ ಲಿಂಗಮಯ ಎನ್ನುವ ಅದ್ಬುತವಾದ ಕಲ್ಪನೆ ಶಿವಯೋಗದಲ್ಲಿದೆ. ಇದನ್ನೇ ಸರ್ವಾಂಗಲಿಂಗಮಯ ಎನ್ನುವುದು.
“ವೀರಶೈವ ದರ್ಶನದ ಪ್ರಕಾರ ಶಿವಯೋಗದ ಪರಿಭಾಷೆಯಲ್ಲಿ ಮನುಷ್ಯನಿಗೆ ಸ್ಥೂಲ, ಸೂಕ್ಷ್ಮ, ಕಾರಣ ಎಂಬ ಮೂರು ಶರೀರಗಳಿವೆ. ‘ಸ್ಥೂಲ ದೇಹ’ವು ಪಂಚಭೂತಗಳಿಂದಲೂ, ‘ಸೂಕ್ಷ್ಮಶರೀರ’ವು ಅಂತಃ ಕರಣ, ಮನಸ್ಸು, ಬುದ್ದಿಗಳಿಂದಲೂ, ಕಾರಣ ಶರೀರ ವಿಶ್ವಪ್ರಜ್ಞೆಯ ಬೀಜದಿಂದಲೂ ಕೂಡಿವೆ. ಆತ್ಮ ಇವುಗಳಿಗೆ ಅತೀತವಾಗಿದೆ. ಈ ಮೂರು ಶರೀರಗಳನ್ನು ಯೋಗಶಾಸ್ತ್ರದಲ್ಲಿ “ಕೋಶ’ ಎಂದು ಕರೆಯುತ್ತಾರೆ. ಮಲತ್ರಯಗಳು ಆತ್ಮನಿಗೆ ಮುಸುಕಿರುವ ತೆರೆಗಳು. ಇವುಗಳಿಂದ ಆತ್ಮ ತನ್ನ ನಿಜವಾದ ಸ್ವಭಾವನ್ನು ಮರೆತಿರುತ್ತದೆ.
ಅಂಗನು ಲಿಂಗವಾಗುವ ಜ್ಞಾನವನ್ನು ಮುಚ್ಚಿರುವ ಅಜ್ಞಾನದ ಆವರಣಗಳೇ ಈ ಮಲತ್ರಯಗಳು. ಮನೆಯ ಕಸ ಒಮ್ಮೆ ಹೊಡೆದು ನಾವು ಸುಮ್ಮನಿರುವುದಿಲ್ಲ. ನಿತ್ಯ ಕಸಗೂಡಿಸುತ್ತಲೆ ಇರಬೇಕು ಹಾಗೆ ಆತ್ಮಕ್ಕೆ ಅಂಟಿಕೊಂಡ ಮಲತ್ರಯಗಳ ಪರದೆಯನ್ನು ಹರಿಯುತ್ತಲೆ ಇರಬೇಕು. ಇದಕ್ಕೆ ಗುರುವಿನ ದೀಕ್ಷೆ, ಉಪದೇಶ, ಮಾರ್ಗದರ್ಶನ ಬೇಕು. ಆಗ ಮನಸ್ಸು ಅರಳುತ್ತದೆ. ಮಹಾಬೆಳಗು ಉಂಟಾಗುತ್ತದೆ. ಇಂತಹ ದಿವ್ಯಶಕ್ತಿ ಇಷ್ಟಲಿಂಗದಿಂದ ಪ್ರಾಪ್ತವಾಗುತ್ತದೆ. ಇದೇ ಶಿವಯೋಗ ಸಾಧನೆಯ ಮೊದಲ ಮೆಟ್ಟಿಲಾಗುತ್ತದೆ. ಆಗ ತನುವಿನಲ್ಲಿ ನಿರ್ಮೋಹ, ಮನದಲ್ಲಿ ನಿರಂಹಕಾರ, ಭಾವದಲ್ಲಿ ದಿಗಂಬರನಾಗಿ ಸಾಧಕ ಶಿವಯೋಗ ಹೊಂದಿ ಶಿವಯೋಗಿ ಆಗುತ್ತಾನೆ. ಇದನ್ನೇ ಚನ್ನಬಸವಣ್ಣನವರು ತಮ್ಮ ವಚನದಲ್ಲಿ ಹೀಗೆ ಹೇಳುತ್ತಾರೆ;
ಅಂಗದ ಮೇಲೆ ಲಿಂಗಸನ್ನಿಹಿತವಾದ ಬಳಿಕ
ಶ್ರೋತ್ರದಲ್ಲಿ ಅನ್ಯಶಬ್ದವ ಕೇಳನಾ ಶರಣನು.
ಅಂಗದ ಮೇಲೆ ಲಿಂಗಸನ್ನಿಹಿತವಾದ ಬಳಿಕ
ಅನ್ಯವ ಮುಟ್ಟನಾ ಶರಣನು
ಅಂಗದ ಮೇಲೆ ಲಿಂಗಸನ್ನಿಹಿತವಾದ ಬಳಿಕ
ಅನ್ಯವ ನೋಡನಾ ಶರಣನು
ಅಂಗದ ಮೇಲೆ ಲಿಂಗಸನ್ನಿಹಿತವಾದ ಬಳಿಕ
ಅನ್ಯ ಆಹಾರ ವ್ಯವಹಾರವನರಿಯನಾ ಶರಣನು.
ಅಂಗದ ಮೇಲೆ ಲಿಂಗಸನ್ನಿಹಿತವಾದ ಬಳಿಕ
ಅನ್ಯವ ಫ್ರಾಣಿಸನಾ ಶರಣನು.
ಅಂಗದ ಮೇಲೆ ಲಿಂಗಸನ್ನಿಹಿತವಾದ ಬಳಿಕ
ಕೂಡಲ ಚನ್ನಸಂಗಯ್ಯನಲ್ಲದನ್ಯವನರಿಯನಾ ಶರಣನು.
ಹೀಗೆ ಲಿಂಗಾಂಗ ಸಾಮರಸ್ಯದಿಂದ ಶರಣನು ಪಂಚೇಂದ್ರಿಯಗಳನ್ನು ಕಟ್ಟಿಹಾಕಿ ಶಿವಯೋಗ ಸಾಧಿಸುತ್ತಾನೆ ಎಂಬುದನ್ನು ವಿಷದಿಕರಿಸುತ್ತಾರೆ. ಶಿವಯೋಗದ ನೆಲೆಗೇರಿದ ಶರಣ ಪರಮ ಸುಖಿಯಾಗುತ್ತಾನೆ ಎಂಬುದನ್ನು ಚನ್ನಬಸವಣ್ಣನವರು ಬಹುಸ್ಪಷ್ಟವಾಗಿ ಹೇಳುತ್ತಾರೆ.
ಅಂಗದಿಂದ ಲಿಂಗಸುಖ, ಲಿಂಗದಿಂದ ಅಂಗಸುಖ,
ಅಂಗಲಿಂಗಸಂಗದಿಂದ ಪರಮಸುಖ ನೋಡಯ್ಯ,
ಅಂಗಲಿಂಗಸಂಗದ ಸುಖವನು ಕೂಡಲಚನ್ನಸಂಗನಲ್ಲಿ ಲಿಂಗೈಕ್ಯ ಬಲ್ಲ.
ಎನ್ನುವ ನುಡಿಗಳು ಅಂತಿಮ ಸತ್ಯವಾಗಿವೆ.
ಬೆಟ್ಟದ ಮೇಲಿರುವ ದೇವಾಲಯಕ್ಕೆ ಹೋಗಲು ಒಂದೊಂದೆ ಮೆಟ್ಟಿಲನ್ನು ಏರಬೇಕಾಗುತ್ತದೆ. ಒಂದು ಮೆಟ್ಟಿಲಿನಿಂದ ಇನ್ನೊಂದು ಮೆಟ್ಟಿಲು ಏರಲು ಶ್ರಮಬೇಕು, ದೃಢತೆಬೇಕು. ಅಂಗ-ಲಿಂಗವಾಗಲು ಸಾಧನಾರಂಗ ಬಹುಮುಖ್ಯ. ಆಗ ಶಿವಯೋಗ ಸಾಧ್ಯ.
ವಚನಗಳು ಒಂದರ್ಥದಲ್ಲಿ ಶಿವಯೋಗ ದರ್ಶನದ ದೀಪಗಳು, ಷಟ್ಸ್ಥಬ-ಪಂಚಾಚಾರ-ಅಷ್ಟಾವರಣಗಳು ಶಿವಯೋಗ ಸಾಧನೆಯ ಮಾರ್ಗಗಳು, ಷಟಸ್ಥಳಗಳಲ್ಲಿ ಮುಖ್ಯವಾಗಿ ಭಕ್ತಸ್ಥಲ, ಮಾಹೇಶ್ವರ ಸ್ಥಲ, ಪ್ರಸಾದಿಸ್ಥಲಗಳು ಬಹಿರಂಗ ಶಿವಯೋಗದ ನೆಲೆಗಳು. ಪ್ರಾಣಲಿಂಗಸ್ಥಲ, ಶರಣಸ್ಥಲ, ಐಕ್ಯಸ್ಥಲಗಳು ಅಂತರಂಗ ಶಿವಯೋಗದ ನೆಲೆಗಳಾಗಿವೆ.
ಭಕ್ತಸ್ಥಲದಲ್ಲಿ ಸಾಧಕ ಗುರು-ಲಿಂಗ-ಜಂಗಮ-ಭಸ್ಮ-ರುದ್ರಾಕ್ಷಿ-ಪಾದೋದಕ-ಪ್ರಸಾದಗಳ ಬಗ್ಗೆ ಪೂಜನೀಯ ಭಾವ ಹೊಂದಿರುತ್ತಾನೆ. ಇದು ಶಿವಯೋಗದ ಮೊದಲ ಹಂತಃ ಅದಕ್ಕೆಂದೇ ಬಸವಣ್ಣನವರು “ಭಕ್ತಿಯೆಂಬ ಪಂಜರದೊಳಿಕ್ಕಿ ಸಲಹು” ಎಂದು ಕೂಡಲಸಂಗಮ ದೇವನಿಗೆ ಭಕ್ತಸ್ಥಲದಲ್ಲಿ ಮೊರೆಹೋಗುತ್ತಾರೆ.
ಮಹೇಶ್ವರ ಸ್ಥಲ ಶಿವಯೋಗದ ಎರಡನೇಯ ಹಂತ ಇಲ್ಲಿ ಶಿವನಿಷ್ಠೆ ಹೆಚ್ಚಾಗುತ್ತದೆ. ಅಂತರಂಗ ವಿಕಾಸದೊಂದಿಗೆ ಲಿಂಗಪೂಜೆ, ಜಪ, ಧ್ಯಾನ, ಅನುಷ್ಠಾನ ಹೆಚ್ಚಾಗುತ್ತದೆ.
“ಗುರುವಿನಲ್ಲಿ ಸದಾಚಾರಿ, ಲಿಂಗದಲ್ಲಿ ಶಿವಾಚಾರಿ, ಜಂಗಮದಲ್ಲಿ ಸಮಯಾಚಾರಿ, ಪ್ರಸಾದದಲ್ಲಿ ಬ್ರಹ್ಮಚಾರಿ, ಆಚಾರದಲ್ಲಿ ವಿಚಾರಿ ಕೂಡಲಚನ್ನಸಂಗಾ ನಿಮ್ಮ ಶರಣ” ಎಂಬಲ್ಲಿ ಚನ್ನಬಸವಣ್ಣ ಗುರು-ಲಿಂಗ-ಜಂಗಮ ನಿಷ್ಠೆ ತೋರಿದ್ದಾನೆ. ಮಹೇಶ್ವರ ಸ್ಥಲದಲ್ಲಿ ಶರಣರು ಇಂತಹ ಭಾವದಿಂದ ವಚನಗಳನ್ನು ಬರೆದರು.
ಪ್ರಸಾದಿಸ್ಥಲ ಶಿವಯೋಗದ ಮೂರನೇಯ ಹಂತ ಇಲ್ಲಿ ಸಾಧಕನು ಮನಃ ಪ್ರಸಾದ ಯೋಗದಿಂದ ಪ್ರಸಾದಿಯಾಗುತ್ತಾನೆ. ಅವನ ಮನಸ್ಸು ಪ್ರಸನ್ನವಾಗಿದ್ದು, ತನ್ನ ಸಾಧನೆಯ ಬಗ್ಗೆ ಸದಾ ಜಾಗೃತನಾಗಿರುತ್ತಾನೆ. ಜಗವೆಲ್ಲವೂ ಶಿವಮಯ ಎನ್ನುತ್ತಾನೆ.
ಗುರುಲಿಂಗ ಜಂಗಮದಿಂದ ಪಾದೋದಕ ಪ್ರಸಾದವಾಯಿತ್ತು
ಆ ಭಾವವೇ ಮಹಾನುಭಾವವಾಗಿ
ಎನಗೆ ಮತ್ತೆ ಭೇರೆ ಪ್ರಸಾದವೆಂಬುದಿಲ್ಲ
ಕೂಡಲಸಂಗಮ ದೇವಾ
ಎಂಬಂತೆ ವಚನಗಳಲ್ಲಿ ಮಹಾನುಭಾವವೇ ಪ್ರಸಾದ ಭಾವಕ್ಕೆ ಜಾರುವುದು ಶಿವಶರಣರಲ್ಲಿ ಕಂಡುಬರುತ್ತದೆ.
ಪ್ರಾಣಲಿಂಗಸ್ಥಲ ಶಿವಯೋಗದ ನಾಲ್ಕನೇಯ ಹಂತ. ಇದು ಸಾಧಕನ ಅಂತರಂಗ ಶಿವಯೋಗದ ಸಾಧನೆ. ಇದು ಇಷ್ಟಲಿಂಗ ಪೂಜೆ, ಇದು ಮಾನಸಿಕ ಪೂಜೆಯ ಹಂತ. ಇಲ್ಲಿ ಲಿಂಗವೇ ಪ್ರಾಣ; ಪ್ರಾಣವೇ ಲಿಂಗ ಆಗುವ ಹಂತ. ಪ್ರಾಣಲಿಂಗಿಸ್ಥಲದಲ್ಲಿ ನೆಲೆನಿಂತ ಪ್ರಭುದೇವರು ಇದನ್ನೇ ತಮ್ಮ ವಚನದಲ್ಲಿ ನಿವೇದಿಸಿಕೊಂಡಿರುವುದನ್ನು ಕಾಣಬಹುದು.
ಶಬ್ದ ಸ್ಪರ್ಶ ರೂಪು ರಸ ಗಂಧ-ಪಂಚ ಇಂದ್ರಿಯ
ಸಪ್ತಧಾತು ಅಷ್ಟಮದದಿಂದ ಮುಂದಗಾಣದವರು ನೀವು ಕೇಳಿರೇ;
ಲಿಂಗದ ವಾರ್ತೆಯ ವಚನದಲ್ಲಿ ರಚನೆಯ ಮಾಡುವಿರಯ್ಯಾ;
ಸಂಸಾರದ ಮಚ್ಚು ಬಿಡದನಕ್ಕೆ ಸೂಕ್ಷ್ಮ ಶಿವಪಥವು ಸಾದ್ಯವಾಗದು
ಗುಹೇಶ್ವರ ಲಿಂಗದಲ್ಲಿ ವಾಕು ಪಾಕವಾದಡೇನೊ, ಮನ ಪಾಕವಾಗದನಕ್ಕ?
ಶರಣಸ್ಥಲ ಶಿವಯೋಗದ ಐದನೇಯ ಹಂತ. ಸತಿಪತಿಭಾವವನ್ನು ಸಾಧಕ ಹೊಂದುತ್ತಾನೆ. ಅವನ ಭಾವ ಶಿವಭಾವದ ನಿಬ್ಬೆರಗಿನಲ್ಲಿರುತ್ತದೆ. ಹೃದಯಕಮಲ ಆನಂದ ಪರಮಾನಂದದಿಂದ ಅರಳಿರುತ್ತದೆ. ಪೂರ್ತಿಯಾಗಿ ಶಿವನೇ ಅವನನ್ನು ಆವರಿಸುತ್ತಾನೆ. ಪ್ರಭುಗಳು ಇಂತಹ ಸ್ಥಿತಿಯನ್ನು ತಮ್ಮದೊಂದು ವರ್ಚನದಲ್ಲಿ ಹೀಗೆ ನಿರ್ವಚಿಸಿದ್ದಾರೆ.
ಲೋಕದ ನಚ್ಚು ಮಚ್ಚು ಬಿಟ್ಟು ನಿಶ್ಚಿಂತವಾಯಿತ್ತು.
ಏನು ಹತ್ತಿತ್ತೆಂದರಿಯೆನಯ್ಯಾ.
ಏನು ಹೊದ್ದಿತ್ತೆಂದರಿಯೆನಯ್ಯಾ.
ಗುಹೇಶ್ವರನೆಂಬ ಗ್ರಹ ಒಳಕೊಂಡಿತ್ತಾಗಿ
ನಾನೆಂದರಿಯೆನಯ್ಯಾ?
ಲೋಕದ ಹಂಗಿನಿಂದ ಬಿಡುಗಡೆಗೊಂಡು ಲಿಂಗದಲ್ಲಿ ಒಂದಾಗುವ ಪರಮಸುಖವನ್ನು ಪ್ರಭುದೇವರು ತಮ್ಮ ವಚನದಲ್ಲಿ ಹೇಳಿದ್ದಾರೆ.
ಐಕ್ಯಸ್ಥಲ ಶಿವಯೋಗದ ಆರನೆಯ ಕೊನೆಯ ಸ್ಥಲ. ಸಾಧಕ ಅಂತರಂಗ ಭಾವದಿಂದ ಧ್ಯಾನ-ಪೂಜೆ-ಏಕಾಗ್ರತೆ, ನಿಷ್ಠೆಯಲ್ಲಿ ಲಿಂಗದೊಂದಿಗೆ ಐಕ್ಯವಾಗುವ ಸ್ಥಿತಿ. ಶಿವಯೋಗದ ಉತ್ತುಂಗ ಸ್ಥಿತಿ ಇದು. ನದಿ ಸಾಗರ ಸೇರುವಂತೆ. ಭಾವವು ಶಿವನಲ್ಲಿ ಸೇರುತ್ತದೆ. ಇದು ನಿರ್ವಿಕಲ್ಪ ಸಮಾಧಿ ಸ್ಥಿತಿ. ಸಕ್ಕರೆ ಹಾಲಲ್ಲಿ ಕರುಗುವಂತೆ, ಕರಗುವ ಕರಗುವ ಸ್ಥಿತಿ, ಕರ್ಪೂರವನ್ನು ಉರಿಕೊಂಬ ಸ್ಥಿತಿ. ಅದನ್ನು ಚನ್ನಬಸವಣ್ಣ ತುಂಬಾ ಅರ್ಥಪೂರ್ಣವಾಗಿ ಹೇಳಿದ್ದಾನೆ.
ತನು ಸೋಂಕಿ ತನು ನಷ್ಟವಾಯಿತ್ತು.
ಮನ ಸೋಂಕಿ ಮನ ನಷ್ಟವಾಯಿತ್ತು.
ಧನ ಸೋಂಕಿ ಧನ ನಷ್ಟವಾಯಿತ್ತು.
ಭಾವ ಸೋಂಕಿ ಭಾವ ನಷ್ಟವಾಯಿತ್ತು.
ಇದು ಕಾರಣ ಕೂಡಲ ಚನ್ನಸಂಗಯ್ಯ
ಲಿಂಗ ಸೋಂಕಿ ಶರಣನ ಸಂದು ನಷ್ಟವಾಯಿತ್ತು.
ನಿಮ್ಮೊಳಗೇಕಾರ್ಥವಾಯಿತ್ತು.
ಎಂಬ ಐಕ್ಯದ ನೆಲೆಯನ್ನು ಅವಿರಳಜ್ಞಾನಿ ಚನ್ನಬಸವಣ್ಣನವರು ನಿರೂಪಿಸುತ್ತಾರೆ,
ವಚನಗಳಲ್ಲಿ ಶಿವಯೋಗದ ನೆಲೆ ಕೇವಲ ವ್ಯಕ್ತಿಗತ ವಿಕಾಸಕ್ಕೆ ಸೀಮಿತವಾಗದೆ ಸಮಷ್ಠಿಗೂ ಹರಿದುಬಂದಿದೆ. ಆತ್ಮಕಲ್ಯಾಣಕ್ಕೆ ಮಾತ್ರ ಶಿವಶರಣರು ಹಾತೊರೆಯದೆ ಸಮಾಜಕಲ್ಯಾಣಕ್ಕೂ ಶಿವಯೋಗ ದರ್ಶನವನ್ನು ವಚನಗಳಲ್ಲಿ ಮನಗಾಣಿಸಿದ್ದಾರೆ. ಹುಡುಕುತ್ತಾ ಹೋದರೆ ಸಾಗರದಷ್ಟು ಬೆಳೆಯುತ್ತಲೇ ಹೋಗುವ ಶಿವಯೋಗದ ವಿಚಾರ ಅಂತರಂಗಕ್ಕೆ ಬೆಳೆಕಾಗುತ್ತದೆ. ವಚನಗಳಲ್ಲಿ ಯೋಗ-ಶಿವಯೋದ ನೆಲೆಗಳು ಮೇರು ಪರ್ವತದಷ್ಟೇ ಉತ್ತರವಾಗಿವೆ. ಅಧ್ಯಯನಕ್ಕೆ ತೆರದುಕೊಳ್ಳುತ್ತವೆ.
ಡಾ. ಪುಷ್ಪಾವತಿ ಶಲವಡಿಮಠ
ಕನ್ನಡ ಉಪನ್ಯಾಸಕರು,
ಸರಕಾರಿ ಪ್ರಥಮ ದರ್ಜೆ ಕಾಲೇಜು, ಹಾವೇರಿ.
ಮೋಬೈಲ್ ಸಂ. 97407 38330.
Watch at: https://youtu.be/f5Z0w6hGXak
ಪರಾಮರ್ಶನ ಕೃತಿಗಳು:
- ಅಕ್ಕೂರಮಠದ ಸಮಗ್ರ ಸಾಹಿತ್ಯ ಸಂಪುಟ-2: ಷಣ್ಮುಬಯ್ಯ ಅಕ್ಕೂರಮಠ
- ಪ್ರಾಣಾಯಾಮ ರಹಸ್ಯ: ಸ್ವಾಮಿ ರಾಮದೇವ
- ಚನ್ನಬಸವಣ್ಣನವರ ಕುರಿತು ವಿಚಾರ ಸಂಕಿರಣ ಲೇಖನಗಳು
- ಶರಣರು ನೀಡಿದ ಬೆಳಕು: ಡಾ. ಎಚ್.ಎಂ. ಮರಳಸಿದ್ದಯ್ಯ
- ಚನ್ನಬಸವಣ್ಣನವರು ವಿಚಾರ ಸಂಕಿರಣ ಮಾಲೆ-2
- ಬಸವಯುಗದ ವಚನ ಮಹಾಸಂಪುಟ: ಪ್ರ.ಸಂ. ಎಂ.ಎಂ. ಕಲಬುರ್ಗಿ.