
ಸಿಂದಗಿ ತಾಲೂಕಿನ ನಾಗರಹಳ್ಳಿ ಗ್ರಾಮದ ಶ್ರೀ ನಾನಾಗೌಡ ಪಾಟೀಲರು ಕೃಷಿಕರು. ಕೃಷಿಯನ್ನು ಮಾಡುತ್ತಲೆ ಬದುಕಿನ ಕೃಷಿಯಲ್ಲಿ ಬಸವ ತತ್ವದ ಬೀಜ ಉತ್ತಿ ಫಲವ ಬಯಸುವವರು. ವಾರ ದಿನ ತಿಥಿ ಮಿತಿ ನೋಡದೆ ಪಂಚಕದ ದಿನವೆ ತಮ್ಮ ತೋಟದಲ್ಲಿ ಬಾವಿ ತೆಗೆಸಿ, ಅಪಾರ ಜಲರಾಶಿ ಹೊರ ಬಂದಾಗ ಇಡೀ ನಾಡವರೆ ಬೆಕ್ಕಸ ಬೆರಗಾದರು. ತಮ್ಮ ಹೊಲದಲ್ಲಿ ದ್ರಾಕ್ಷಿ ಕೃಷಿಯನ್ನು ಮಾಡಿ ನಾಡಿಗೆ ಸಿಹಿ ಉಣಿಸಿದವರು.
ಇದೆ ರೀತಿಯಲ್ಲಿಯೆ ತಾವು ಅರಿತುಕೊಂಡ ಸತ್ಯ ಫಲವಾದ ಶರಣರ ವಚನ ಸಾಹಿತ್ಯವನ್ನು ಮನೆ ಮನೆಗೆ ತಲುಪಿಸುವ ಉತ್ಸಹ ಹೊಂದಿದ್ದಾರೆ. ನಾಡಿನ ಯಾವ ಭಾಗದಲ್ಲಿಯೆ ಬಸವ ತತ್ವದ ಚಟುವಟಿಕೆ ನಡೆದರೂ ಅಲ್ಲಿ ನಾನಾಗೌಡ ದಂಪತಿಗಳು ಇರುತ್ತಾರೆ.
ಸ್ವತಃ ತಮ್ಮ ಊರಲ್ಲಿಯೆ ಗ್ರಾಮದ ಎಲ್ಲರಿಗೂ ಶರಣ ವೀರ ಗೊಲ್ಲಾಳೇಶ್ವರರ ಬಗೆಗೆ ಸತ್ಯ ಮನಗಾಣಿಸುವ ಮೂಲಕ ಬಸವ ತತ್ವದ ಪ್ರವಚನ ಏರ್ಪಡಿಸಿದ್ದಾರೆ. ಈ ಊರಿನಲ್ಲಿ ಗೊಲ್ಲಾಳೇಶ್ವರರ ಗುಡಿ ಇದೆ. ಜನ ಸಾಮಾನ್ಯರು ಸಹ ಗೊಲ್ಲಾಳೇಶ್ವರರ ಗುಡಿಗೆ ಪ್ರೀತಿ ಗೌರವ ಹಾಗೂ ಅಭಿಮಾನದಿಂದ ಬರುತ್ತಾರೆ. ಆದರೆ ಅವರಿಗೆ ವೀರ ಗೊಲ್ಲಾಳ ಶರಣರು ವಚನಕಾರರು, ಅವರ ವಚನಗಳು ಜನ ಮಾನಸದ ಕೊಳೆಯನ್ನು ತೊಳೆಯುತ್ತವೆ ಎಂಬ ಸತ್ಯವನ್ನು ತಿಳಿಸಲು ಶ್ರಮಿಸುತ್ತಿದ್ದಾರೆ.
ಸಿಂದಗಿಯ ಶರಣ ಜೀವಿ ಸನ್ಮಾನ್ಯ ಶ್ರೀ. ಬಿ.ಎನ್.ಪಾಟೀಲ ಅವರಿಂದ ಶರಣರ ಜೀವನ ಕುರಿತ ಪ್ರವಚನ ನಡೆಸಿದ್ದಾರೆ. ಇದಕ್ಕೆಲ್ಲ ಊರವರ ಸಹಕಾರವನ್ನು ಪಡಕೊಂಡಿದ್ದಾರೆ.
ಶರಣರ ಚಿಂತನೆಗಳನ್ನು ನಾಡಿನೆಲ್ಲೆಡೆ ಹಬ್ಬಲಿ ಎಂಬ ಆಶಯದಲ್ಲಿರುವ ಶ್ರೀ.ನಾನಾಗೌಡ ಪಾಟೀಲ ನಾಗರಹಳ್ಳಿ ಅವರಿಗೆ ಎಲ್ಲಾ ಯಶಸ್ಸು ಸಿಗಲಿ ಎಂದು ಮನದುಂಬಿ ಬಯಸುತ್ತೇನೆ
ವಿಶ್ವಾರಾಧ್ಯ ಸತ್ಯಂಪೇಟೆ
ಬಸವ ಬೆಳಕು ಬುದ್ದ ವಿಹಾರ ಹತ್ತಿರ ಅಂಚೆ
ಶಹಾಪುರ ಯಾದಗಿರಿ, 585223
ಫೋನ್ ನಂ:+91 90088 02456