ವಚನ ಸಾಹಿತ್ಯದಲ್ಲಿ ದಯಾಪರತೆ ಚಿಂತನೆಗಳು / ಡಾ. ಪೂರ್ಣಿಮಾ ಎಸ್, ಬೆಂಗಳೂರು.

ಸಮಾಜದ ಏಳಿಗೆಗಾಗಿ ಪ್ರತಿಯೊಂದು ಜೀವ-ಜೀವಿಯ ಕಲ್ಯಾಣಕ್ಕಾಗಿ ಕಾಲಾನುಕ್ರಮದಲ್ಲಿ ಹಲವಾರು ಧರ್ಮಗಳು ಉದಯವಾದವು. ಹಾಗೆ ಉದಯವಾದ ಜಗತ್ತಿನ ಅತ್ಯಂತ ಪ್ರಾಚೀನ ಧರ್ಮಗಳಲ್ಲಿ ಬಸವಾದಿ ಶರಣ ಧರ್ಮವೂ ಒಂದು.

ದಯವಿಲ್ಲದ ಧರ್ಮವದೇವುದಯ್ಯಾ?
ದಯವೇ ಬೇಕು ಸರ್ವಪ್ರಾಣಿಗಳೆಲ್ಲರಲ್ಲಿ,
ದಯವೇ ಧರ್ಮದ ಮೂಲವಯ್ಯ,
ಕೂಡಲಸಂಗಯ್ಯನಂತಲ್ಲದೊಲ್ಲನಯ್ಯ.
(ಸಮಗ್ರ ವಚನ ಸಂಪುಟ: ಒಂದು-2021 / ಪುಟ ಸಂಖ್ಯೆ-67 / ವಚನ ಸಂಖ್ಯೆ-247)

ಎಂಬ ಬಸವಣನವರ ದಿವ್ಯ ಸಂದೇಶವನ್ನು ಹಾಗೂ ಜಗತ್ತಿನಲ್ಲಿರುವ ಯಾವುದೇ ಸೂಕ್ಷ್ಮಾತಿ ಸೂಕ್ಷ್ಮ ಜೀವಕ್ಕೂ ಕೂಡ ಹಿಂಸೆಯಾಗಬಾರದೆಂಬ ಉದ್ದೇಶದಿಂದ ಸಕಲ ಜೀವಾತ್ಮರಿಗೂ ಲೇಸನ್ನೇ ಬಯಸಿದ ಬಸವಣ್ಣನವರ ಧ್ಯೇಯೋದ್ದೇಶದ ಹಾದಿಯಲ್ಲಿ ಎಲ್ಲ ಶಿವಶರಣರು ಸಹ ದಯೆ ಕರುಣೆ ವಾತ್ಯಲ್ಯಗಳನ್ನು ಅಳವಡಿಸಿಕೊಂಡು ಅನುಸರಿಸಿರುವುದನ್ನು ಬಸವಾದಿ ಶರಣರ ವಚನ ಸಾಹಿತ್ಯದಲ್ಲಿ ಮನಗಾಣಬಹುದು.

ಬಸವಣ್ಣನವರಂತೆ ವೈರಾಗ್ಯನಿಧಿ ಅಕ್ಕಮಹಾದೇವಿಯೂ ಸಹ ಅಹಿಂಸಾ ತತ್ವಕ್ಕೆ, ದಯಾಪರತೆಗೆ ಹೆಚ್ಚಿನ ಒತ್ತನ್ನು ಕೊಟ್ಟಿರುವುದನ್ನು ಸಾದರಪಡಿಸುವ ವಚನ:

ಸಜ್ಜನೆಯಾಗಿ ಮಜ್ಜನಕ್ಕೆರೆವೆ,
ಶಾಂತಳಾಗಿ ಪೂಜೆಮಾಡುವೆ,
ಸಮರತಿಯಿಂದ ನಿಮ್ಮ ಹಾಡುವೆ,
ಚನ್ನಮಲ್ಲಿಕಾರ್ಜುನಯ್ಯಾ,
ನಿಮ್ಮನಗಲದ ಪೂಜೆ ಅನುವಾಯಿತ್ತೆನಗೆ.
(ಸಮಗ್ರ ವಚನ ಸಂಪುಟ: ಐದು-2021 / ಪುಟ ಸಂಖ್ಯೆ-136 / ವಚನ ಸಂಖ್ಯೆ-382)

ಎಂಬಲ್ಲಿ ಪೂಜೆ ಮಾಡುವುದರಲ್ಲೂ ಸಹ ಹಿಂಸೆಯ ಭಾವವಿರಬಾರದು ಪ್ರತಿಯೊಂದರಲ್ಲೂ ದಯಾಪರತೆಯ ಅಹಿಂಸೆಯೇ ಮುಖ್ಯವಾಗಿರಬೇಕೆಂಬುದನ್ನು ಅರ್ಥ ಮಾಡಿಸಿದರೆ, ಬಸವಣ್ಣನವರು:

ಕೋಪಿ ಮಜ್ಜನಕ್ಕೆರೆದಡೆ ರಕ್ತದ ಧಾರೆ,
ಪಾಪಿ ಹೂವನೇರಿಸಿದಡೆ ಮಸೆದಡ್ಡಾಯುಧದ ಗಾಯ.
ಕೂಪವರನಾರನೂ ಕಾಣೆನು ಮಾದಾರ ಚೆನ್ನಯ್ಯನಲ್ಲದೆ,
ಕೂಪವರನಾರನೂ ಕಾಣೆನು ಡೋಹರ ಕಕ್ಕಯ್ಯನಲ್ಲದೆ,
ವ್ಯಾಪ್ತಿಯುಳ್ಳವ ನಮ್ಮ ಮಡಿವಾಳ ಮಾಚಯ್ಯ.
ನಿನ್ನಾಪತ್ತಿಗರಿವರಯ್ಯಾ, ಕೂಡಲಸಂಗಯ್ಯಾ.
(ಸಮಗ್ರ ವಚನ ಸಂಪುಟ: ಒಂದು-2021 / ಪುಟ ಸಂಖ್ಯೆ-177 / ವಚನ ಸಂಖ್ಯೆ-650)

ಎನ್ನುತ್ತಾರೆ. ಅಂದರೆ ಕೋಪಿಷ್ಟನಾದವನು ಲಿಂಗಪೂಜೆಯನ್ನು ಮಾಡಿದರೆ ಮಸೆದ ಆಯುಧದಿಂದ ಲಿಂಗಕ್ಕೆ ಮಾಡಿದ ಗಾಯದಂತೆ. ಹಾಗೆಯೇ ಪಾಪಿಯಾದವನು ಲಿಂಗಕ್ಕೆ ಹೂವನೇರಿಸಿದರೆ, ಹೂ ಮುಡಿಸಿದರೆ ಅದು ರಕ್ತಧಾರೆಯೆಂಬಂತೆ ಎಂದಿದ್ದಾರೆ. ಹಾಗಾಗಿ ನಮ್ಮ ಅಂತರಂಗ ಬಹಿರಂಗಗಳ ನಡೆನುಡಿಗಳು ಬಹಳ ಮುಖ್ಯ. ಅಂತರಂಗ ಬಹಿರಂಗಗಳೆರಡು ಪರಿಶುದ್ಧವಾಗಿದ್ದಾಗ ದಯಾಪರತೆಯಿಂದ ಕೂಡಿದ್ದಾಗ ಮಾತ್ರ ಪ್ರಯೋಜನ. ದ್ವೇಷ ಅಸೂಯೆಗಳಿಂದ ಹೊರತಾದ ಮುಕ್ತವಾದ ಪೂಜೆ ದೇವರಿಗೆ ಸಲ್ಲುತ್ತದೆ ವಿನಃ ಹಿಂಸಾತ್ಮಕವಾಗಿರುವ ಯಾವ ಪೂಜೆಯೂ ಸಲ್ಲುವುದಿಲ್ಲ. ಕೆಲವರ ಹಿಂಸಾ ವೃತ್ತಿಯವರನ್ನು ಕಂಡು ಅಕ್ಕಮಹಾದೇವಿಯು

ಜಾಲಗಾರನೊಬ್ಬ ಜಲವ ಹೊಕ್ಕು ಶೋಧಿಸಿ,
ಹಲವು ಪ್ರಾಣಿಯ ಕೊಂದು, ನಲಿನಲಿದಾಡುವ.
ತನ್ನ ಮನೆಯಲೊಂದು ಶಿಶುವು ಸತ್ತೊಡೆ
ಅದಕ್ಕೆ ಮರುಗುವಂತೆ ಅವನೇಕೆ ಮರುಗ?
ಅದೆಂತೆಂದಡೆ:
“ಸ್ವಾತ್ಮಾನಮಿತರಂ ಚೇತಿ ಭಿನ್ನತಾ ನೈವ ದೃಶ್ಯತಾಂ|
ಸರ್ವಂ ಚಿಜ್ಜ್ಯೋತಿರೇವೇತಿ ಯಃ ಪಶ್ಯತಿ ಸ ಪಶ್ಯತಿ||”
ಎಂದುದಾಗಿ,
ಜಾಲಗಾರನ ದುಃಖ ಜಗಕೆಲ್ಲ ನಗೆಗೆಡೆ,
ಇದು ಕಾರಣ, ಚೆನ್ನಮಲ್ಲಿಕಾರ್ಜುನಯ್ಯನ ಭಕ್ತನಾಗಿರ್ದು
ಜೀವಹಿಂಸೆ ಮಾಡುವ ಮಾದಿಗರನೇನೆಂಬೆನಯ್ಯಾ?
(ಸಮಗ್ರ ವಚನ ಸಂಪುಟ: ಐದು-2021 / ಪುಟ ಸಂಖ್ಯೆ-74 / ವಚನ ಸಂಖ್ಯೆ-208)

ಎಂದು ನಮ್ಮ ಮಕ್ಕಳ ಬಗೆಗಿರುವ ಪ್ರೀತಿ, ವಾತ್ಸಲ್ಯ, ಕರುಣೆ, ಅಂತಃಕರಣಗಳು ಪ್ರಾಣಿಗಳ ಕರಿತು ಇರಬೇಕಲ್ಲವೆ ಎಂಬ ಮಾನವೀಯ ಮೌಲ್ಯಗಳನ್ನು ಈ ಮೂಲಕ ವಿಮರ್ಶಿಸುತ್ತಾಳೆ. ಇದಕ್ಕೆ ಪೂರಕವಾಗಿ ಬಸವಣ್ಣನವರು ಸಹ ಸಕಲ ಜೀವಾತ್ಮರಿಗೆ ಲೇಸನೆ ಬಯಸುವ ನಮ್ಮ ಕೂಡಲಸಂಗನ ಶರಣರೆ ಕುಲಜರು ಎಂದು ವೃತ್ತಿಯಿಂದ ಜಾತಿಯನ್ನು ಪರಿಗಣಿಸಲಾಗದು, ಪ್ರಾಣಿಗಳನ್ನು ಕೊಲ್ಲುವವನೇ ಕೀಳು, ಮಾಂಸಾದಿ ಇತರ ಹೊಲಸು ಪದಾರ್ಥಗಳನ್ನು ಸೇವಿಸುವವನೇ ಕೀಳು. ಹೀಗಿರುವಾಗ ಕುಲದ ವಿಚಾರವೆಲ್ಲಿ. ಎಲ್ಲಾ ಸಚರಾಚರ ಪ್ರಾಣಿಗಳಿಗೂ ಲೇಸನ್ನು, ಹಿತವನ್ನು ಬಯಸುವ ಕೂಡಲಸಂಗನ ಶರಣರು ಉತ್ತಮ, ಶ್ರೇಷ್ಠ ಕುಲವೆಂದು ಹೇಳಿದರು. ಹಾಗೆಯೇ ಮತ್ತೊಂದು ವಚನದಲ್ಲಿ;

ಮಾತಿನ ಮಾತಿಂಗೆ ನಿನ್ನ ಕೊಂದಹರೆಂದು
ಎಲೆ ಹೋತೆ ಅಳು, ಕಂಡಾ!
ವೇದವನೋದಿದವರ ಮುಂದೆ ಅಳು, ಕಂಡಾ!
ಶಾಸ್ತ್ರ ಕೇಳಿದವರ ಮುಂದೆ ಅಳು, ಕಂಡಾ!
ನೀನತ್ತುದಕ್ಕೆ ತಕ್ಕುದ ಮಾಡುವ ಕೂಡಲಸಂಗಮದೇವ.
(ಸಮಗ್ರ ವಚನ ಸಂಪುಟ: ಒಂದು-2021 / ಪುಟ ಸಂಖ್ಯೆ-154 / ವಚನ ಸಂಖ್ಯೆ-573)

ಎಂಬಲ್ಲಿ ಹಿಂಸೆ ಪ್ರತಿಯಾಗಿ ತಕ್ಕ ಶಿಕ್ಷೆಯನ್ನು ಆ ದೇವರಿಂದ ಅನುಭವಿಸಬೇಕಾಗುತ್ತದೆ ಎಂದಿದ್ದಾರೆ. ಹಾಗೆಯೇ

ಹಬ್ಬಕ್ಕೆ ತಂದ ಹರಕೆಯ ಕುರಿ
ತೋರಣಕ್ಕೆ ತಂದ ತಳಿರ ಮೇಯಿತ್ತು,
ಕೊಂದಹರೆಂಬುದನರಿಯದ ಬೆಂದ ಒಡಲ ಹೊರೆವುತ್ತಲದೆ.
ಅದಂದ ಹುಟ್ಟಿತ್ತು, ಆದಂದ ಹೊಂದಿತ್ತು.
ಕೊಂದವರುಳಿದವರೆ, ಕೂಡಲಸಂಗಮದೇವಾ?
(ಸಮಗ್ರ ವಚನ ಸಂಪುಟ: ಒಂದು-2021 / ಪುಟ ಸಂಖ್ಯೆ-37 / ವಚನ ಸಂಖ್ಯೆ-129)

ಹರಕೆಯನ್ನು ತೀರಿಸುವ ಸಂಪ್ರದಾಯ ಇಂದು ನಿನ್ನೆಯದಲ್ಲ. ಹಬ್ಬದ ಹರಕೆಯನ್ನು ತೀರಿಸುವುದಕ್ಕಾಗಿ ತಂದಿರುವಂತಹ ಕುರಿಯು ಇನ್ನು ಸ್ವಲ್ಪ ಸಮಯದಲ್ಲಿಯೇ ತನ್ನನ್ನು ಕೊಲ್ಲುತ್ತಾರೆ ಎಂಬುದನ್ನು ಅರಿಯದ ಹೊಟ್ಟೆಯ ಹಸಿವನ್ನು ಹಿಂಗಿಸಿಕೊಳ್ಳಲಿಕ್ಕೆ ತಳಿರು ತೋರಣಕ್ಕಾಗಿ ತಂದಂತಹ ತಳಿರನ್ನೇ ತಿನ್ನುವಂತೆ, ಮಾನವ ತನ್ನ ನಾಲಿಗೆಯ ರುಚಿಗಾಗಿ ಕುರಿಯನ್ನು ಕೊಂದು ತಿಂದು ಸಂತಸಪಡುವ ಪ್ರಾಣಿಹಂತಕರು ಬದುಕಲು ಸಾಧ್ಯವೇ? ಕೂಡಲಸಂಗಮದೇವ ಎಂದು ಭಗವಂತನನ್ನೇ ಪ್ರಶ್ನೆ ಮಾಡುವ ಬಸವಣ್ಣನವರ ಅಹಿಂಸಾವಾದ ಸರ್ವಕಾಲಿಕ ದಯೆಯ ಮಹತ್ವವನ್ನು ನುಡಿಯುತ್ತಾ, ನುಡಿದಂತೆ ನಡೆಯುತ್ತಾ

ಕೊಲ್ಲೆನಯ್ಯಾ ಪ್ರಾಣಿಗಳ, ಮೆಲ್ಲೆನಯ್ಯಾ ಬಾಯಿಚ್ಛೆಗೆ.
ಒಲ್ಲೆನಯ್ಯಾ ಪರಸತಿಯರ ಸಂಗವ,
ಬಲ್ಲೆನಯ್ಯಾ ಮುಂದೆ ತೊಡಕುಂಟೆಂಬುದ.
ಬಳ್ಳದ ಬಾಯಂತೆ ಒಂದೆ ಮನವ ಮಾಡಿ
ನಿಲ್ಲೆಂದು ನಿಲಿಸಯ್ಯಾ, ಕೂಡಲಸಂಗಮದೇವಾ.
(ಸಮಗ್ರ ವಚನ ಸಂಪುಟ: ಒಂದು-2021 / ಪುಟ ಸಂಖ್ಯೆ-200 / ವಚನ ಸಂಖ್ಯೆ-736)

ಎಂದು ಪ್ರಾಣಿಗಳನ್ನು ಕೊಲ್ಲಲಾರೆನು, ನಾಲಿಗೆಯ ರುಚಿಗಾಗಿ, ಪರಸತಿಯರ ಸಂಗವನ್ನು ಬಯಸಲಾರೆ, ಇಂತಹ ಹಿಂಸಾತ್ಮಕ ಮತ್ತು ಅಮಾನವೀಯ ಕೃತ್ಯಗಳಿಂದ ತೊಂದರೆ ಉಂಟಾಗುವುದೆಂಬುದನ್ನು ನಾನು ಅರಿತಿದ್ದೇನೆ. ದೊಡ್ಡ ದೊಡ್ಡ ಮಡಕೆ ಗಡಿಗೆಗಳಿಗೆ ಒಂದೇ ಬಾಯಿ ಇರುವಂತೆ, ಮನಸ್ಸನ್ನು ಏಕಾಗ್ರ ಚಿತ್ತಗೊಳಿಸಿ ಕೂಡಲ ಸಂಗಮದೇವನೇ ನಿನ್ನ ಸ್ಮರಣೆಯಲ್ಲೇ ಅನವರತ ನನ್ನನ್ನು ಇರಿಸು ಎಂದು ಪ್ರಾರ್ಥಿಸುತ್ತಾರೆ. ಹೀಗೆ ದೇವರ ಹೆಸರಿನಲ್ಲಿ ಆಗುವ ಪ್ರಾಣಿ ಹಿಂಸೆಯನ್ನು ಶರಣರು ಸಂಪೂರ್ಣವಾಗಿ ನಿರ್ನಾಮ ಮಾಡಲು ಬಯಸುತ್ತಾರೆ. ಅಲ್ಲದೆ ಜೀವ ನೀಡುವ ಶಕ್ತಿ ನಮಗಿಲ್ಲದಿದ್ದ ಮೇಲೆ ಜೀವ ತೆಗೆಯುವ ಹಕ್ಕೂ ನಮಗಿಲ್ಲ. ಅದಕ್ಕಾಗಿ ಬಸವಣ್ಣನವರು ಪರಿಶ್ರಮಿಸಿದ್ದನ್ನು ಎಲ್ಲಾ ಶರಣರು ಒಪ್ಪಿಕೊಂಡು ಅಪ್ಪಿಕೊಂಡು ನಡೆದರು.

ಇಂಥ ಅಹಿಂಸಾ ಹಾದಿಯಲ್ಲಿ ಅಪೂರ್ವ ದಯಾಗುಣಗಳನ್ನು ಬೆಳೆಸಿಕೊಂಡು ಆಶ್ಚರ್ಯ ಅದ್ಭುತ ಎನಿಸುವಷ್ಟು ದಯಾನಿಧಿಯಾದವರು ‘ದಸರಯ್ಯ’. ಇವರು ಅಹಿಂಸಾ ತತ್ವದ ನಾಯಕರಾಗಿ “ದಯೆಗೆ ಅರಸನಾದ ಅಯ್ಯಾ ದಸರಯ್ಯ” ಎಂಬ ತಮ್ಮ ನಾಮಾಂಕಿತಕ್ಕೆ ಅನ್ವರ್ಥಕರೆಂಬಂತೆ ಜೀವಿಸಿದರೆಂಬುದು ದಸರಯ್ಯನವರೇ ರಚಿಸಿದ ಹತ್ತು ವಚನಗಳನ್ನು ಗಮನಿಸಿದಾಗಲೂ ಮತ್ತು ಇತರ ಶರಣರು, ಕವಿಗಳು ದಸರಯ್ಯನ ಬಗ್ಗೆ ತಮ್ಮ ಕಾವ್ಯಗಳಲ್ಲಿ ಉಲ್ಲೇಖಿಸಿ ತಿಳಿಸಿರುವ ವಿಚಾರಗಳಿಂದ ಅರಿಯಬಹುದು.

ದಸರಯ್ಯನ ಊರು ರಾಮಗೊಂಡೆ, ದಸರಯ್ಯ ಅಹಿಂಸಾ ವೃತಕ್ಕೆ ದಯಾಪರತೆಗೆ ನಿಷ್ಠನಾಗಿದ್ದು ವಿವಿಧ ಧರ್ಮಗಳ ಸಾರವನ್ನು ಅರಿತುಕೊಂಡಿದ್ದನು. ಜೈನಧರ್ಮದ “ಅಹಿಂಸೋಪರಮೋದರ್ಮಃ” ಎಂಬುದನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡು ನುಡಿದಂತೆಯೇ ನಡೆದು ಬದುಕಿನಲ್ಲಿ ಎದುರಾಗುವ ಅಹಿಂಸಾ ಪರೀಕ್ಷೆಗಳಲೆಲ್ಲ್ಲಾ ಜಯಶಾಲಿಯಾದ ಮಹಾ ಅಹಿಂಸಾ ಯೋಗಿ.

ದಸರಯ್ಯ ಶರಣನಾದರೂ ಜೈನ ಧರ್ಮೀಯರಲ್ಲಿನ ಅಹಿಂಸಾಧರ್ಮದ ಪರಾಕಾಷ್ಠತೆಯನ್ನು ದಸರಯ್ಯನಲ್ಲಿ ಕಂಡುಬರುವುದರಿಂದ ದಸರಯ್ಯ ಅಹಿಂಸಾ ವ್ರತಸ್ಥನಾದ ಜೈನ ಸವಣನಂತೆ, ಜೈನ ಸಂನ್ಯಾಸಿಯಂತೆ, ಜೈನ ಕ್ಷಪಣಕನಂತೆ ಕಂಗೊಳಿಸಿದ್ದಾನೆ. ಜೀವ ದಯಾಮಯನಾದ ದಸರಯ್ಯನು ಮನುಕುಲದ ಒಳಿತಿಗಾಗಿ ಸರ್ವಭೂತಹಿತವೆ ಮುಖ್ಯವೆಂದು ಭಾವಿಸಿದ್ದನು. “ಜೀವಿಯ ನೋವೇ ಲಿಂಗದ ನೋವು” ಎಂದು ತಿಳಿದು ಅಹಿಂಸಾ ವ್ರತವನ್ನೇ ತನು, ಮನಗಳಲ್ಲಿ ವಚನ ಶುದ್ಧತೆಯ ಕಠಿಣ ವ್ರತವಾಗಿ ಸ್ವೀಕರಿಸಿ, ಆಚರಣೆಯಲ್ಲಿ ಬಂದ ಅಡ್ಡಿ ಆತಂಕಗಳನ್ನೆಲ್ಲಾ ಗೆದ್ದು, ಕ್ಷಮೆ, ದಯೆ, ಶಾಂತಿ, ಸದಾಚಾರ, ಸದ್ಭಕ್ತಿ ಸರ್ವ ಪ್ರೀತಿಗಳೇ ದಸರಯ್ಯನ ಉಸಿರಾಗಿದ್ದವು. ದಸರಯ್ಯನ ದಯಾಪರತೆಯ ಅಹಿಂಸೆ ಸಕಲ ಸಚರಾಚರಗಳನ್ನೆಲ್ಲಾ ವ್ಯಾಪಿಸಿತ್ತು. ತನ್ನಿಂದ ತರು, ಮರ, ಕ್ರಿಮಿ, ಕೀಟ, ಪಶು-ಪಕ್ಷಿಗಳಾದಿಯಾಗಿ ಯಾವುದಕ್ಕೂ ಹಿಂಸೆಯಾಗಬಾರದೆಂದು ಭಾವಿಸಿದ್ದನು.

ದಸರಯ್ಯನು ಅಹಿಂಸಾಯೋಗಿಯೆನಿಸಲು ಕಾರಣವಾದ ಘಟನೆಗಳು ಹಲವಾರು. ದಸರಯ್ಯನವರ ದಯಾಗುಣವನ್ನು ಭೀಮಕವಿಯು ಕೊಂಡಾಡುತ್ತಾ:

ತೊಡರಿಯಡ್ಡಂ ಪಾರ್ವ ಜೀವಿಗ
ಳೆಡೆಗುಪದ್ರವದಹುದೊ ತಾ ಪೊ
ಪೆಡೆಯೊಳೆನುತಂ ಕೈಗಳಂ ತವೆ ಬೀಸದಿಹನಂತೆ
ನುಡಿಯಲೇತಕೆ ಫಲವನಿನ್ನೀ
ಒಡೆಯನರಳ್ಗಳಿಗೆಯ್ದಿ ಹೂವಿನ
ಗಿಡುವಿನಲಿ ಕೊಯ್ಯುಲ್ಕೆ ನೊಂದಿತು ನೊಂದೆನೆಂದೆನುತ
(ಭೀಮಕವಿ ವಿರಚಿತ ಬಸವಪುರಾಣ: ಸಂಪಾದಕರು. ಡಾ. ಆರ್. ಸಿ. ಹಿರೇಮಠ/ಸಂಧಿ-37/ದಸರಯ್ಯಗಳ ಕಥೆ/ ಪುಟ-551/ಪದ್ಯ-9)

ಹೂವ ಕುಯ್ಯುವುದನ್ನೇ ಬಿಟ್ಟನೆಂದು ವಿವರಿಸಿದ್ದಾರೆ. ಭೀಮಕವಿಯು ಮುಂದಿನ ಪದ್ಯದಲ್ಲಿ ದಸರಯ್ಯನ ಸಸ್ಯಾವಳಿಯ ದಯಾಗುಣವನ್ನು ಬಹು ಸೊಗಸಾಗಿ ಉಲ್ಲೇಖಿಸಿದ್ದಾರೆ. ಶಿವಪೂಜೆಗೆ ತಡವಾಗುವುದೆಂದು ಆತುರದಲ್ಲಿ ಹೂ ತುಂಬಿದ ಕೊಂಬೆಯನ್ನು ದಸರಯ್ಯ ದಸರಯ್ಯ ಬಗ್ಗಿಸಿದಾಗ ಅದು ಮುರಿದ ಭಾಗದಲ್ಲಿ:

ಆವಗಂ ಗಿಡು ಮುನ್ನ ಚಿವುಟಿದ
ಠಾವು ಭೋರನೆ ನೆತ್ತರುಗೆ ತಾ
ವಾವ ಗಿಡುವಂ ಮುಟ್ಟಿದಡೆ ಹೋ ನೊಂದೆವೆನುತಿಹವು
ಆವ ಗಿಡುವಂ ನೋಯಿಸಿದಡಂ
ಭಾವಿಸುವಡಿದು ಹಿಂಸೆಯೆನುತಂ
ತೋವಿ ಹೂಗಿಡುಗಳ ಕೆಳಗೆ ಸುತ್ತುವರೆ ಸಾರಿಸುತ
(ಭೀಮಕವಿ ವಿರಚಿತ ಬಸವಪುರಾಣ: ಸಂಪಾದಕರು. ಡಾ. ಆರ್. ಸಿ. ಹಿರೇಮಠ/ಸಂಧಿ-37/ದಸರಯ್ಯಗಳ ಕಥೆ/ಪುಟ-551/ಪದ್ಯ-9)

ರಕ್ತವೇ ಸುರಿದಂತೆ ಕಂಡು ಗಿಡವು ನೊಂದ ನೋವು ದಸರಯ್ಯನ ಹೃದಯವನ್ನು ತಾಕಿತು. ಎಂದು ದಸರಯ್ಯನ ದಯಾರಸಭರಿತೆಯನ್ನು ಪ್ರಶಂಸಿದ್ದಾನೆ. ಆ ದುಷ್ಟಾಂತ ಹೀಗಿದೆ;

ಒಮ್ಮೆ ದಸರಯ್ಯನ ಹೂದೋಟದಲ್ಲಿ ಹೂ ಗಿಡದಿಂದ ಹೂ ಬಿಡಿಸಿಕೊಳ್ಳುತ್ತಿರುವಾಗ ಹೂ ನೊಂದು, ಹಾ! ಎಂದ ಹಾಗಾಯಿತು. ಹೂ ಹಾಗೆ ಅಂದಿರಲು ಸಾಧ್ಯವಾಗಲಿಕ್ಕಿಲ್ಲ, ಆದರೆ ದಸರಯ್ಯನ ಮನೋವೃತ್ತಿ ಹಾಗೂ ಅವನ ಸುಪ್ತ ಚೇತನದಲ್ಲಿ ಹುದುಗಿದ್ದ ದಯಾಪರತೆಯಿಂದಾಗಿ ಅವನ ಮನಸ್ಸಿಗೆ ಹಾಗೆ ಭಾಸವಾಗಿರಬೇಕು. ಅವನ ಕಿವಿಗೆ, ಹೂವು ನೋವಿನಿಂದ ‘ಹಾ’ ಎಂದಂತೆ ಕೇಳಿಸಿ ಹೂವಿನ ಹೃದಯಕ್ಕೆ ತನ್ನಿಂದ ನೋವಾಯಿತೆಂದು ಹೂವನ್ನು ಬಿಡಿಸಿದ ರೆಂಬೆಯನ್ನು ನೋಡಿದನು. ಅಲ್ಲಿ ಒಸರಿ ತೊಟ್ಟಿಕ್ಕಿದ ರಸ ರಕ್ತದಂತೆ ಕಾಣಿಸಿ ದಸರಯ್ಯನ ಮೈನಡುಗಿ, ಕಣ್ಣು ಕತ್ತಲೆಗೂಡಿ, ಹೃದಯ ಝಲ್ಲೆಂದು ವಿಲವಿಲನೆ ಒದ್ದಾಡಿತು. ಗಿಡ, ಮರ, ಬಳ್ಳಿಗಳಿಂದ ಪೂಜೆಗೆ ಬೇಕಾದ ಹೂಗಳನ್ನು ಬಿಡಿಸಿಕೊಳ್ಳುವುದೆಲ್ಲಾ ಹಿಂಸೆಯೇ ಎಂದೆನಿಸಿ ಅಂದಿನಿಂದ ಹೂಗಳನ್ನು ಕಿತ್ತುಕೊಳ್ಳುವುದಾಗಲಿ, ಹೂಗಳನ್ನು ಹರಿಯುವುದಾಗಲಿ ಬಿಟ್ಟುಬಿಟ್ಟ. ಬದಲಾಗಿ ಹಿಂದಿನ ದಿನವೇ ಸಂಜೆ ಹೂ ಗಿಡಗಳ ಕೆಳಗೆ ಸ್ವಚ್ಛ ಮಾಡಿ, ಸಗಣಿಯಿಂದ ಸಾರಿಸಿ ಗೋಮಯ ಮಾಡಿ ಬರುತ್ತಿದ್ದ. ಮರುದಿನ ಮುಂಜಾನೆ ಹೋಗಿ ತಾವಾಗಿ ತಂಗಾಳಿಗೆ ಉದುರಿ ಬಿದ್ದ ಹೂಗಳನ್ನೇ ಆಯ್ದು ತಂದು ಲಿಂಗಕ್ಕೆ ಅರ್ಪಿಸಿ ಹೀಗೆ ನಿವೇದಿಸಿಕೊಳ್ಳುತ್ತಿದ್ದ:

ಉದುರಿ ಬೀಳುವನ್ನಕ್ಕ ನಿನ್ನ ಹಂಗು
ಉದುರಿ ಬಿದ್ದಲ್ಲಿ ಎನ್ನೊಡವೆ
ನಾ ಪೂಜಿಸದನ್ನಕ್ಕ ದೇವ.
ಎನ್ನ ಪೂಜೆಗೊಳಗಾದಲ್ಲಿ ನೀ ಭಕ್ತ, ನಾ ನಿತ್ಯ.
ಇಂತೀ ಸರ್ವರ ದಯವಸ್ತು ಬೀಜವಲಾ.
ಸರ್ವಮಲತ್ರಯದೂರ,
ಸರ್ವಾಂಗ ಸಂತೋಷನಿಗರ್ವಿ
ದಸರೇಶ್ವರಲಿಂಗವು ತಥ್ಯಮಿಥ್ಯದವನಲ್ಲಾ.
(ಸಮಗ್ರ ವಚನ ಸಂಪುಟ: ಏಳು-2021 / ಪುಟ ಸಂಖ್ಯೆ-361 / ವಚನ ಸಂಖ್ಯೆ-1055)

ತರು ಲತೆ ಸ್ಥಾವರ ಸೃಷ್ಠಿಯ ಸಕಲ ಜೀವಗಳೆಲ್ಲ ನಿನ್ನ ಕಾರುಣ್ಯದಿಂದ ಉತ್ಪತ್ತಿಯಾದವು. ಆದ್ದರಿಂದ ಸರ್ವವೂ ನಿನ್ನ ಸೃಷ್ಠಿ ಆಗಿರುವಾಗ ಯಾವುದನ್ನು (ಹೂವನ್ನು) ಕಿತ್ತು ಇನ್ಯಾವುದಕ್ಕೆ (ಲಿಂಗಕ್ಕೆ) ಅರ್ಪಿಸುವುದೇನು, ಆದರೆ ಹೂಗಳೆಲ್ಲಾ ಉದುರಿ ಬೀಳುವವರೆಗೂ ಅವು ನಿನ್ನವು, ಉದುರಿ ಬಿದ್ದ ಬಳಿಕ ನನ್ನವು ತಂದೆ ಎಂದು ದಸರಯ್ಯ ಹೇಳಿಕೊಳ್ಳುತ್ತಿದ್ದ. ಹಾಗೆಯೇ ಬಿದ್ದು ಬಾಡಿದ ಹೂಗಳನ್ನು ಅರ್ಪಿಸಿದುದಕ್ಕಾಗಿ ದಸರೇಶ್ವರ ಲಿಂಗಯ್ಯನೆಲ್ಲಿ ತಪ್ಪು ತಿಳಿದುಕೊಳ್ಳುವನೋ ಎಂದು ಆಲೋಚಿಸಿ, ನಾ ಪೂಜಿಸುವನ್ನಕ್ಕ ನೀ ದೇವ ಎನ್ನ ಪೂಜೆಗೊಳಗಾದಲ್ಲಿ ನೀ ಭಕ್ತ, ನಾ ನಿತ್ಯನಯ್ಯ, ಮರೆಯದಿರು.

ಅಂದರೆ ನಾನು ನಿನ್ನನ್ನು ಪೂಜಿಸುವವರೆಗೂ ನೀನು ದೇವರಷ್ಟೇ. ಬಾಡಿದ ಹೂ ಬೇಡ, ಗಿಡ ಮರಗಳ ತಾಜಾ ಹೂವೇ ಬೇಕೆಂದು ನೀನು ಬಯಸಿದರೆ ನಿನ್ನಲ್ಲೂ ಆಸೆ ಮೂಡಿ ನೀನು ದೈವತ್ವವನ್ನ ಕಳೆದುಕೊಂಡು ನೀನು ಭಕ್ತನಾಗ್ತೀಯಾ ನಾನು ನಿತ್ಯನಾಗ್ತೀನಿ ನೆನಪಿರಲಿ ಎಂದು ಎಚ್ಚರಿಸುವನು. ಇದಕ್ಕನುಗುಣವಾಗಿ ಅಲ್ಲಮ ಪ್ರಭುಗಳು ತಮ್ಮ ಒಂದು ವಚನದಲ್ಲಿ:

ನಾ ದೇವನಲ್ಲದೇ ನೀ ದೇವನೇ?
ನಿ ದೇವನಾದಡೆ ಎನ್ನನೇಕೆ ಸಲಹೇ?
ಆರೈದು, ಒಂದು ಕುಡಿತೆ ಉದಕವನೆರೆವೆ,
ಹಸಿದಾಗ ಒಂದು ತೂತ್ತು ಓಗರವನಿಕ್ಕುವೆ.
ನಾ ದೇವ ಕಾಣ ಗುಹೇಶ್ವರ!
(ಸಮಗ್ರ ವಚನ ಸಂಪುಟ: ಎರಡು-2021 / ಪುಟ ಸಂಖ್ಯೆ-173 / ವಚನ ಸಂಖ್ಯೆ-558)

ಹಾಗೆಯೇ ಜೇಡರ ದಾಸಿಮಯ್ಯನ ವಚನ;
ಒಡಲುಗೊಂಡವ ಹಸಿವ; ಒಡಲುಗೊಂಡವ ಹುಸಿವ
ಒಡಲುಗೊಂಡವನೆಂದು
ನೀನೆನ್ನ ಜಡಿದೊಮ್ಮೆ ನುಡಿಯದಿರಾ!
ನೀನೆನ್ನಂತೆ ಒಡಲುಗೊಂಡು ನೋಡಾ!
ರಾಮನಾಥ.
(ಸಮಗ್ರ ವಚನ ಸಂಪುಟ: ಏಳು-2021 / ಪುಟ ಸಂಖ್ಯೆ-221 / ವಚನ ಸಂಖ್ಯೆ-785)

ಎಂಬಂತಹ ವಚನಗಳಲ್ಲೆಲ್ಲಾ ತನ್ನ ಮತ್ತು ದೇವರ ನಡುವೆ ಅಜಗಜಾಂತರ ವ್ಯತ್ಯಾಸವನ್ನು ಮಾಡದೇ ದೇವರೊಡನೆ ಶರಣರು ಸಂವಾದಿಸುವ ಅಪೂರ್ವ ಶೈಲಿಗಳನ್ನು ಮನವರಿಕೆ ಮಾಡಿಸುತ್ತದೆ.

ದಸರಯ್ಯನಿಗೆ ಶಿವನ ಕಲ್ಯಾಣ ಗುಣಗಳು ನೆನಪಾಗಿ, ಸರ್ವದಯಾ ವಸ್ತು ಬೀಜನಲಾ ನೀನು ಮಲತ್ರಯ ದೂರನೆ ಸರ್ವಾಂಗ ಸಂತೋಷಿಯೆ, ನಿಗರ್ವಿಯೆ ದಸರೇಶ್ವರ ಲಿಂಗವು ತಥ್ಯ ಮಿಥ್ಯವದವನಲ್ಲಾ ಎಂದು ಹೇಳುತ್ತಾ ಸರ್ವದಯಾ ವಸ್ತುವಿಗೂ ಬೀಜವೆಂದರೆ ‘ಮೂಲ’ ವಾದವನು ನೀನು. ಮಲತ್ರಯವೆಂದರೆ ಅಣವ ಮಲ, ಮಾಯಾ ಮಲ, ಕಾರ್ಮಿಕ ಮಲಗಳೆಂಬ ಮೂರು ಮಲಗಳು ಶರೀರದಿಂದ ಸ್ವೇದ/ಬೆವರು, ಮೂತ್ರ ಮತ್ತು ಪುರೀಷ/ಮಲ/ಅಮೇಧ್ಯ/ಕಲ್ಮಷ/ಹೊಲಸುಗಳು. ಈ ಮಲಗಳು ಇಲ್ಲದವನೇ ನೀನು, ಸರ್ವಾಂಗ ಸಂತೋಷಿಯೆ ನೀನು, ನಿಗರ್ವಿಯೆ ದಸರೇಶ್ವರ ಲಿಂಗವೇ ನೀನು. ಈ ಸುಳ್ಳು ಸತ್ಯಗಳಿಂದ ಹೊರತಾದ ಕರುಣೆ, ದಯೆ, ಅಂತಃಕರಣ, ಮರುಕಗಳನ್ನು ಅನುಗ್ರಹಿಸೆಂದು ದಸರಯ್ಯ ಪ್ರಾರ್ಥಿಸುತ್ತಿದ್ದನು.

ದಸರಯ್ಯನ ದಯಾದೃಷ್ಟಿ ಬರುಬರುತ್ತಾ ವಿಶ್ವವ್ಯಾಪಕವಾಗಿ ಅಹಿಂಸೆ ಅನಂತವಾಗುತ್ತದೆ. ದಾರಿಯಲ್ಲಿ ನಡೆಯುವಾಗ ಕೂಡ ಕ್ರಿಮಿ ಕೀಟಾದಿಗಳ ಜೀವ ಹತ್ಯೆಯಾದೀತೆಂದು ನಿಧಾನವಾಗಿ ಮೆಲ್ಲನೆ ನಡೆಯುತ್ತಾನೆ. ಮಾತನಾಡುವಾಗ ಅತ್ಯಂತ ಎಚ್ಚರಿಕೆಯಿಂದ ಯಾರ ತನು-ಮನಗಳಿಗೂ ನೋವಾಗದಂತೆ ನುಡಿಯುತ್ತಾನೆ. ಕಣ್ಣಿಗೆ ಕಾಣಿಸದ ಅಗೋಚರ ಜೀವಗಳಿಗೇಲ್ಲಿ ಹಿಂಸೆಯಾಗುವುದೋ ಎಂದು ಕೈ ಬೀಸುವಾಗಲೂ ಜಾಗೃತನಾಗಿರುತ್ತಾನೆ. ಹೀಗೆ ಕುಂತಾಗ, ನಿಂತಾಗ, ಏಳುವಾಗ, ನಡೆಯುವಾಗ, ನುಡಿಯುವಾಗ ಒಟ್ಟಿನಲ್ಲಿ ಉಸಿರಾಡುವಾಗಲೂ ಸಹ ತನ್ನಿಂದ ಯಾರಿಗೂ ಯಾವುದಕ್ಕೂ ಹಿಂಸೆಯಾಗದಂತೆ ಅಹಿಂಸೆಯ ಅಪರಾವತಾರಿಯಾಗಿ ಜೀವಿಸಿದ ಎಂಬಂತ ವಚನದಲ್ಲಿ ನುಡಿದಿದ್ದಾರೆ;

ನುಡಿವಲ್ಲಿ ಕಿಂಕಲವನರಿದು,
ಕರವ ಬೀಸುವಲ್ಲಿ ತುಷಾರ ಕೀಟವನರಿದು,
ಅಡಿಯಿಡುವಲ್ಲಿ ಪೊಡವಿಯಲ್ಲಿ
ಹೊರಹೊಮ್ಮಿದ ಜೀವ ಚೇತನಾದಿಗಳನರಿದು
ಮತ್ತೆ, ನೀಡುವಲ್ಲಿ ಹಿಡಿವಲ್ಲಿ,
ಮತ್ತೊಂದು ಒಡಗೂಡುವಲ್ಲಿ, ಒಡಗೂಡಿ ಬಿಡುವಲ್ಲಿ
ಸರ್ವದಯಕ್ಕೆ ಪುಡಿಪುಚ್ಚವಿಲ್ಲದಿರಬೇಕು.
ಇಂತೀ ಸಡಗರದ ಚಿತ್ತ
ದಸರೇಶ್ವರ ಲಿಂಗವನೊಡಗೂಡುವ ಭಕ್ತಿ.
(ಸಮಗ್ರ ವಚನ ಸಂಪುಟ: ಏಳು-2021 / ಪುಟ ಸಂಖ್ಯೆ-362 / ವಚನ ಸಂಖ್ಯೆ-1059)

ಎಂಬುದು ದಸರಯ್ಯನ ವಚನದಲ್ಲಿ ಸುವ್ಯಕ್ತಗೊಂಡಿದೆ.

ಕೊಲ್ಲುವ ಧರ್ಮವನೋಯ್ದು ಒಲೆಯೊಳಗಿಕ್ಕುವ, ಕೊಲಲಾಗದ ಜೈನಧರ್ಮವು ಎನ್ನ ತಲೆಯ ಮೇಲಿರಲಿ ಸರ್ವಜ್ಞ ಎಂದು ಕವಿ ಹೇಳಿರುವಂತೆ, ಜೈನಧರ್ಮವು ಸೇರಿದಂತೆ ಜಗತ್ತಿನ ಎಲ್ಲಾ ಧರ್ಮಗಳು ಸಹ ಅಹಿಂಸೆಯೇ ಶ್ರೇಷ್ಠಧರ್ಮ ಎಂದು ನಂಬಿದ್ದವು. ಆದರೂ ಅಹಿಂಸಾ ತತ್ವಕ್ಕೆ ಜೈನಧರ್ಮ ಎಲ್ಲಿಲ್ಲದ ಮಹತ್ವದ ಸ್ಥಾನ ಕೊಟ್ಟಿರುವ ಕಾರಣಕ್ಕಾಗಿ ಜೈನಧರ್ಮವನ್ನು “ಅಹಿಂಸಾ ಪರಮೋಧರ್ಮ:, ಅಹಿಂಸಾಪರ ಧರ್ಮ, ಜೀವ ದಯಾಪರ ಧರ್ಮ” ಎಂಬುದಾಗಿ ವಿಶೇಷವಾಗಿ ಗುರುತಿಸುತ್ತಾರೆ. ಜೈನ ದರ್ಮದ ಉಸಿರೇ ಅಹಿಂಸೆ. ಈ ಅಹಿಂಸೆ ಎಂಬ ಮೂಲತತ್ವದ ತಳಹದಿಯ ಮೇಲೆ ಎಲ್ಲಾ ನೈತಿಕ ಸಿದ್ಧಾಂತಗಳು ಅಡಕವಾಗಿರುವುದನ್ನು ಅರಿಯಬಹುದು.
ಜೈನಧರ್ಮ ಆಚಾರದಲ್ಲಿ ‘ಅಹಿಂಸೆಗೆ’ ಮಹತ್ವ ನೀಡಿದರೆ ವಿಚಾರದಲ್ಲಿ ‘ಅನೇಕಾಂತವಾದ’ ಅಡಿಪಾಯವಾಗಿರುತ್ತದೆ. ಅನೇಕಾಂತವಾದವೆಂದರೆ ಏಕಮುಖ ಆಲೋಚನೆಯನ್ನು ಹೊರತುಪಡಿಸಿದ ಸರ್ವಾಧಿಕಾರ ರಹಿತ ದೃಷ್ಟಿಕೋನವಿರುವ ಅಂದರೆ ಹಲವರ ಹಲವು ದೃಷ್ಟಿಕೋನದ ಸಮಷ್ಠಿ ವಿಚಾರಗಳಿಗೆ ಪ್ರಾಶಸ್ತ್ಯ ನೀಡುತ್ತದೆ. ಹೇಗೆಂದರೆ ನಾನೇ ಸರಿ, ನನ್ನದೇ ಸರಿ ಎನ್ನುವುದಕ್ಕಿಂತ ಅನ್ಯರನ್ನು ದೃಷ್ಟಿಯಲ್ಲಿಟ್ಟುಕೊಂಡು ಹೀಗೂ ಇರಬಹುದಲ್ಲವಾ ಎಂಬ ಸಮದರ್ಶನ ಎಂಬುದು ಅನೇಕಾಂತವಾದವಾಗಿರುತ್ತದೆ. ಇದಕ್ಕೆ ಪೂರಕ ಪ್ರಭಾವ ದಸರಯ್ಯನಲ್ಲಿ ಅಹಿಂಸೆ ಎಂಬುದು ಶ್ರದ್ಧೆಯಲ್ಲಿ ಉದ್ಭವಿಸಿದುದು ಮಾತ್ರವಲ್ಲ ಬುದ್ಧಿಯಲ್ಲಿ ವಿಚಾರದಲ್ಲಿ ಪ್ರಜ್ಞಾಪೂರ್ವಕವಾಗಿ ಬೆಳೆದುದನ್ನು ಸಾದರಪಡಿಸುವ ದಿವ್ಯ ದರ್ಶನದ ವಚನವಿದು;

ಸರ್ವವನರಿದಲ್ಲಿ, ಸರ್ವಜ್ಞನಾದಲ್ಲಿ
ಇದಿರೆಲ್ಲಿ ತಾನೆಲ್ಲಿ? ಎಂದು ಅದು ತನ್ನ ಭಿನ್ನಭಾವ
ಅನ್ಯರಲ್ಲಿ ಎಮ್ಮುವ ತೋರಿ
ಆ ಗುಣ ತನ್ನನೆ ಅನ್ಯವೆನಿಸೂದು.
ತನ್ನ ಶಾಂತಿ ಅನ್ಯರಲ್ಲಿ ತೋರಿ, ಅಲ್ಲಿ ಭಿನ್ನಭಾವವಿಲ್ಲದಿರೆ
ಅವರನ್ಯರಲ್ಲ ಎಂಬುದು ತನ್ನ ಗುಣ.
ಅನ್ಯವಿಲ್ಲವೆಂಬುದನರಿತು
ತನ್ನೊಪ್ಪದ ದರ್ಪಣದಲ್ಲಿ ತೋರುವಂತೆ
ಇದಕ್ಕೆ ಕರ್ಕಶವಿಲ್ಲ
ದಸರೇಶ್ವರಲಿಂಗವನರಿವುದಕ್ಕೆ.
(ಸಮಗ್ರ ವಚನ ಸಂಪುಟ: ಏಳು-2021 / ಪುಟ ಸಂಖ್ಯೆ-365 / ವಚನ ಸಂಖ್ಯೆ-1064)

ಈ ಒಂದು ವಚನವನ್ನು ದಸರಯ್ಯ ಬರೆದು ಹೋಗಿದ್ದರೂ ವಚನ ಸಾಹಿತ್ಯದಲ್ಲಿ ಆತನಿಗೊಂದು ಸ್ಥಾನವಿದ್ದೇ ಇರುತ್ತಿತ್ತು. ಇಲ್ಲಿ ಮಾನವತೆಯ ಮೂಲ ಸೂತ್ರವನ್ನೇ ಬಿತ್ತರಿಸಿದ್ದಾನೆ ದಸರಯ್ಯ. ಧ್ವನಿ ಪ್ರತಿಧ್ವನಿಯಂತೆ; ದರ್ಪಣದ ಪ್ರತಿಬಿಂಬದಂತೆ ನಾವು ತೋರಿದ ಭಾವವೇ, ಇತರರಲ್ಲಿ ಭಾವ ಬಿಂಬಿತವಾಗುತ್ತದೆ. ನಾವು ಜೋರುಧ್ವನಿಯಿಂದ ಮಾತಾಡಿದರೆ ಅನ್ಯರೂ ಜೋರಾಗಿ ಮಾತಾಡುತ್ತಾರೆ. ಎಲ್ಲರೂ ತನ್ನವರೆಂದು ತಿಳಿದರೆ ತನ್ನವರಾಗುತ್ತಾರೆ. ಅನ್ಯರೆಂದು ತಿಳಿದರೆ ಅನ್ಯರಾಗುತ್ತಾರೆ. ಮುಖ್ಯವಾಗಿ ಬೇಕಾದುದು ಸಮದರ್ಶನ. ಈ ಸಮದರ್ಶನ ಭಾವ ಸ್ಪುರಿಸಿದರೆ ಸಮದರ್ಶನ ಸಿದ್ಧಿಸಿ ಸಹಜೀವನ ತಾನಾಗಿಯೇ ಮೂಡುತ್ತದೆ. ಜೈನಧರ್ಮದ ಅನೇಕಾಂತವಾದದ ಆ ಸಮದರ್ಶನವೇ ಮಾನವಾಕಾರದ ದಸರಯ್ಯನಾಗಿ ಹುಟ್ಟಿರಬೇಕೆನಿಸುತ್ತದೆ.

ಸರ್ವಮಯ ನಿನ್ನ ಬಿಂದುವಾದಲ್ಲಿ
ಆವುದೆನಹುದೆಂಬೆ, ಆವುದನಲ್ಲಾಯೆಂಬೆ?
ಸರ್ವಚೇತನ ನಿನ್ನ ತಂತ್ರಗಳಿಂದ ಆಡುವವಾಗಿ
ಇನ್ನಾವುದ ಕಾಯುವೆ, ಇನ್ನಾವುದ ಕೊಲುವೆ?
(ಸಮಗ್ರ ವಚನ ಸಂಪುಟ: ಏಳು-2021 / ಪುಟ ಸಂಖ್ಯೆ-364 / ವಚನ ಸಂಖ್ಯೆ-1063)

ಎಂದು ಕೇಳುವ ದಸರಯ್ಯನ ದರ್ಶನ ವಿಶುದ್ಧಿಯನ್ನೇನು ವರ್ಣಿಸುವುದು? ಹೀಗೆ ಜೈನ ಧರ್ಮದ ಉದ್ದೇಶಪೂರ್ವಕ ಹಿಂಸೆಯನ್ನು ಸಂಪೂರ್ಣವಾಗಿ ತಪ್ಪಿಸಿದರೂ ಉದ್ದೇಶ ರಹಿತ ಹಿಂಸೆಯನ್ನು ಎಷ್ಟು ಎಚ್ಚರದಿಂದ ಪಾಲಿಸಿ ನಡೆದರೂ ಪೂರ್ಣವಾಗಿ ತಪ್ಪಿಸುವುದು ಅಸಾಧ್ಯ ಆಗಿರುವದರಿಂದ ದಸರಯ್ಯ ದುಃಖಿಸುತ್ತಾರೆ. ಹೊರಗಿನ ಜೀವಿಗಳನ್ನು ಹಿಂಸಿಸದೆ ಹೇಗಾದರೂ ಬದುಕಬಹುದು. ಆದರೆ ತನ್ನ ತನುವಿನಲ್ಲಿಯೇ ಹುಟ್ಟಿ, ಶರೀರ ಧರ್ಮದಿಂದ ಸಾಯುವ ಕ್ರಿಮಿ ಜಂತುಗಳ ಹಿಂಸೆಯನ್ನು ಹೋಗಲಾಡಿಸುವುದೇಗೆ? ಎಂದು ಪ್ರಲಾಪಿಸುವ ದಸರಯ್ಯನ ವಚನ;

ಎಲು ನರ ಚರ್ಮ ಮಜ್ಜೆ ಮಾಂಸದೊಳಗಾದ
ಕ್ರಿಮಿ ಎನ್ನಂಗದೊಳು ಹುಟ್ಟಿ,
ಮಲ ಹುಣ್ಣು ಉಗುಳುಗಳಲ್ಲಿ ಬೀಳುವುದ ಕಂಡು
ಅವ ನಾ ರಕ್ಷಿಸಿದೆನೆ?
ಅವು ಬೀಳಬೇಕೆಂದು ನಾ ಶಿಕ್ಷಿಸಿದೆನೆ?
ಇಂತೀ ಜೀವದ ದೃಷ್ಟವ ಕಂಡು
ಎನಗಿದೆತ್ತಣ ಸರ್ವಜೀವ ದಯ
ಈ ರಕ್ತದ ಲೇಪವ ಬಿಡಿಸಾ,
ಕಲ್ಲು ಮಣ್ಣು ಮರನಂತೆ
ಚನ್ನ ದಸರೇಶ್ವರ ಲಿಂಗಾ.
(ಸಮಗ್ರ ವಚನ ಸಂಪುಟ: ಏಳು-2021 / ಪುಟ ಸಂಖ್ಯೆ-362 / ವಚನ ಸಂಖ್ಯೆ-1057)

ಎಂದು ದಸರಯ್ಯ ಮೊರೆಯಿಡುತ್ತಾರೆ.

ನಮ್ಮ ವೈಜ್ಞಾನಿಕ ಆಹಾರ ಸರಪಳಿಯಲ್ಲಿ ಜೀವಿ ಜೀವಿಯ ತಿಂದು ಜೀವಿಸುವ ಜೀವನ ದೃಶ್ಯದ ಕುರಿತು ದಸರಯ್ಯ ಅತ್ಯಂತ ಗಾಢವಾಗಿ ಆಲೋಚಿಸುವ ಪರಿಯೇ ಖಂಡಿತವಾಗಿಯೂ ಮೈ ಪುಳಕಿತವಾಗಿಸುವಂತಹುದು. ನಮ್ಮ ದೇಹದ ನರ, ಚರ್ಮ, ಮಜ್ಜೆ, ಮಾಂಸ ಇತ್ಯಾದಿಗಳಲ್ಲಿ ಅನೇಕ ರೀತಿ ಕ್ರಿಮಿಗಳುಟ್ಟುವುದರಿಂದ ಅವುಗಳಿಗೆ ನಾನು ಆಶ್ರಯನಾಗುವ ಮೂಲಕ ನಾನು ರಕ್ಷಿಸಿದಂತಾಗುತ್ತದೆಯೇ? ಅಥವಾ ಕ್ರಿಮಿ, ಜಂತುಗಳೆಲ್ಲಾ ದೇಹದೊಳಗಿದ್ದರೆ ನನಗೆ ತೊಂದರೆಯಾಗುತೆಂದು ಅವನ್ನು ಮಲ-ಮೂತ್ರ ವಿಸರ್ಜನೆ ಮೂಲಕ ಮತ್ತು ಕೆಮ್ಮುವಾಗ, ಸೀನುವಾಗ, ಬೆವರಿನ ಮೂಲಕ ಹೊರಗಾಕಿ ಅವನ್ನು ನಾನೇನು ಶಿಕ್ಷಿಸುತ್ತಿದ್ದೇನೆಯೆ? ತಾನು ಜೀವಿಸಬೇಕಾದರೆ ದೈನಂದಿನ ಈ ಕ್ರಿಯಾಕರ್ಮಗಳಿಂದ ಹೊರತಾಗಿರಲು ಸಾಧ್ಯವಿಲ್ಲ. ಬದುಕಬೇಕೆಂದರೆ ಕೆಲವು ಜೀವಿಗಳ ಹಿಂಸೆಗೆ ಕಾರಣನಾಗುತ್ತೇನೆ ಎಂಬ ಅಪರಾಧಿ ಭಾವ ದಸರಯ್ಯನನ್ನು ಕಾಡತೊಡಗುತ್ತದೆ. ಇಂಥ ಜೀವನ ಸಂಗ್ರಾಮದಲ್ಲಿ ನಾನು ಸರ್ವಜೀವ ದಯಾಭರಿತನಾಗಿ ಬದುಕಲಾರೆ. ಈ ಹಿಂಸಾಮಯವಾದ ಜೀವನದಿಂದ ತನ್ನನ್ನು ಮುಕ್ತನನ್ನಾಗಿ ಮಾಡು ತಂದೆ ಎಂದು ದೇವರನ್ನು ಬೇಡಿಕೊಳ್ಳುವ ದಸರಯ್ಯನ ದಯಾಪರಗುಣದ ಹೃದಯಕ್ಕೆ ಎಂಥವರೂ ನಮಿಸಬೇಕೆನಿಸುತ್ತದೆ!.

ಈ ವಚನ ವಿಶ್ಲೇಷಣೆಯನ್ನು ಸುಪ್ರಸಿದ್ಧ ಶರಣ ವಿದ್ವಾಂಸರಾದ ಸವದತ್ತಿಯ ಪ್ರೊ. ಜಿ ಎ. ತಿಗಡಿ ಅವರು ಅತ್ಯಂತ ಸವಿಸ್ತಾರವಾಗಿ ಹೀಗೆ ಮಾಡಿದ್ದಾರೆ. ಎಲಬು, ನರ, ಚರ‍್ಮ, ಮಜ್ಜೆ, ಹಾಗೂ ಮಾಂಸಗಳಿಂದ ಕೂಡಿದ ಈ ದೇಹದಲ್ಲಿ ಸೂಕ್ಷ್ಮಾತಿ ಸೂಕ್ಷ್ಮ ಕ್ರಿಮಿಗಳು ಹುಟ್ಟುತ್ತವೆ. ಅಂತವುಗಳಲ್ಲಿ ಕೆಲವು ಮಲ, ಮೂತ್ರ, ಉಗುಳು, ವಾಂತಿಗಳ ಮೂಲಕ ದೇಹದಿಂದ ಹೊರಬರುತ್ತವೆ. ಇದೊಂದು ನೈಸರ್ಗಿಕವಾದ ಪ್ರಕ್ರಿಯೆ. ಈ ರೀತಿ ತನ್ನ ದೇಹದಿಂದ ತ್ಯಾಜ್ಯ ವಸ್ತುಗಳ ಮೂಲಕ ಹೊರ ಬರುವ ಕ್ರಿಮಿಗಳು ಸ್ವಲ್ಪ ಸಮಯದಲ್ಲಿ ಸತ್ತು ಹೋಗುತ್ತವೆ. ಈ ರೀತಿ ದೇಹದಿಂದ ಹೊರ ಬಂದು ಸಾಯುವ ಪ್ರಕ್ರಿಯೆಯಲ್ಲಿ ಹಿಂಸೆಯನ್ನು ಗಮನಿಸಿದ ಶರಣ ದಸರಯ್ಯ ಇದಕ್ಕೆ ತನ್ನನ್ನು ತಾನೇ ಅಪರಾಧಿಯನ್ನಾಗಿಸಿಕೊಳ್ಳುತ್ತಾನೆ. ದೇಹದಿಂದ ಅವು ಹೊರ ಬಂದದ್ದು ತೀರಾ ಸ್ವಾಭಾವಿಕ ಕ್ರಿಯೆಯಾದರೂ, ಅವು ಸಾಯುತ್ತವೆ ಎಂದು ಗೊತ್ತಿದ್ದರೂ ಹೊರ ಹಾಕಿದ್ದು ನಾನು ಅವುಗಳನ್ನು ಶಿಕ್ಷಿಸಿದ್ದಂತಾಗಲಿಲ್ಲವೇ? ಅವುಗಳನ್ನು ನಾನು ರಕ್ಷಿಸಬಹುದಿತ್ತಲ್ಲವೇ? ಎಂದು ತನ್ನನ್ನೇ ತಾನು ಪ್ರಶ್ನಿಸಿಕೊಳ್ಳುತ್ತಾನೆ. ಅವುಗಳ ಸಾವಿಗೆ ತಾನೇ ಕಾರಣನೆಂಬ ಅಪರಾಧಿ ಭಾವ ಅವನಲ್ಲಿ ಉಂಟಾಗುತ್ತದೆ. ಇಂತಹ ಜೀವನ ಸಂಗ್ರಾಮದಲ್ಲಿ ಸರ್ವ ಜೀವ ದಯಾಭರಿತನಾಗಿ ನಾನು ಹೇಗೆ ಬದುಕಲಿ? ಹಿಂಸೆಯ ಈ ರಕ್ತದ ಕಲೆಯಿಂದ ನನ್ನನ್ನು ಬಿಡಿಸು ತಂದೆ ಎಂದು ಬೇಡಿಕೊಳ್ಳುತ್ತಾನೆ. ಬೇಕಾದರೆ ನನ್ನನ್ನು ಕಲ್ಲು, ಮಣ್ಣು, ಮರಗಳಂತೆ ಇರಿಸು, ಈ ಹಿಂಸಾಮಯ ಜೀವನ ಸಾಕಾಗಿದೆ ಎಂದು ನೊಂದು ಬಿಡುಗಡೆಗಾಗಿ ಭಗವಂತನಲ್ಲಿ ಪ್ರಾರ್ಥಿಸುತ್ತಾನೆ.

ಜೀವಿ ಜೀವಿಯ ತಿಂದು ಜೀವಿಸುವ ಜೀವನ ದೃಶ್ಯದ ವಿವರಣೆ ಮೈ ನಡುಗಿಸುವಂತಹುದಾಗಿದೆ. “ಅಹಿಂಸಾ ಪರಮೋರ‍್ಮ” ಎಂದು ಸಾರಿದ ಜೈನ ಧರ್ಮ ಅಹಿಂಸೆಗೆ ಪರಮೋಚ್ಚ ಪ್ರಾಧಾನ್ಯತೆ ನೀಡಿದೆ. ಅಹಿಂಸೆಗೆ ಇನ್ನೊಂದು ಹೆಸರೇ ಜೈನ ಧರ್ಮ ಎಂಬಂತಿದೆ. ಸರ್ವಜೀವಿಗಳನ್ನು ಸಮಾನವಾಗಿ ಕಂಡು ದಯಾಪರರಾಗಿ, ಪ್ರೀತಿ ಕರುಣೆಯಿಂದ ಅವುಗಳ ಜೊತೆ ಸಹಬಾಳ್ವೆ ಬಾಳಬೇಕೆನ್ನುವ ಜೈನ ಧರ್ಮದ ಸಿದ್ಧಾಂತಕ್ಕಿಂತ ಒಂದು ಹೆಜ್ಜೆ ಮೇಲಕ್ಕೆ ಹೋದ ದಸರಯ್ಯನ ಅಹಿಂಸಾಪರ ಯೋಚನೆಯ ರೀತಿ ಬೆರಗು ಮೂಡಿಸುತ್ತದೆ. ಭೌತಿಕ ಜಗತ್ತಿನ ಸಕಲ ಜೀವಿಗಳ ಹಿಂಸೆ ಅಹಿಂಸೆಗಳ ಬಗ್ಗೆ ಎಲ್ಲ ಧರ್ಮಗಳೂ ಒಂದಲ್ಲ ಒಂದು ರೀತಿಯಲ್ಲಿ ಚರ್ಚಿಸುತ್ತವೆ, ಆದರೆ ದಸರಯ್ಯನವರು ದೇಹದೊಳಗಿನ ಅವ್ಯಕ್ತ ಕ್ರಿಮಿ, ಜೀವಿಗಳ ಹಿಂಸೆ ಅಹಿಂಸೆಗಳ ಕುರಿತು ಮಾತನಾಡುತ್ತಿರುವುದು ಅತ್ಯಂತ ಆಶದಚರ್ಯವೂ ಅದ್ಭುತವೂ ಆಗಿದೆ. ಜಗತ್ತಿನಲ್ಲಿ ಯಾವ ಸಂತನೂ, ಮಹಾತ್ಮನೂ ಈ ರೀತಿ ದೇಹದೊಳಗಿನ ಕ್ರಿಮಿಗಳ ಹಿಂಸೆ ಅಹಿಂಸೆಗಳ ಕುರಿತಾಗಿ ಚಿಂತಿಸಿದ್ದು ಯೋಚಿಸಿದ್ದು ಎಲ್ಲಿಯೂ ದಾಖಲಾಗಿಲ್ಲ. ಈ ದೃಷ್ಟಿಯಿಂದ ದಸರಯ್ಯನವರು “ಮಹಾನ್ ಅಹಿಂಸಾಮೂರ್ತಿ, ಸರ್ವ ಜೀವ ದಯಾಪರ ಮಹಾತ್ಮ” ಎನಿಸುತ್ತಾನೆ.

ಮಲ, ಮೂತ್ರ ವಿಸರ್ಜನೆ ಹಾಗೂ ಉಗುಳುವ ಈ ದೈಹಿಕ ಕ್ರಿಯೆಗಳು ತೀರಾ ನೈಸರ್ಗಿಕವಾದವುಗಳು ಅಷ್ಟೇ ಅಲ್ಲ, ಪ್ರತಿ ಜೀವಿಯ ಬದುಕಿನ ದಿನನಿತ್ಯದ ಒಂದು ಸಾಮಾನ್ಯ ಅಷ್ಟೇ ಸ್ವಾಭಾವಿಕ ಕ್ರಿಯೆಗಳಾಗಿವೆ. ತನಗೆ ಬೇಡವಾದ ಕಲ್ಮಶಗಳನ್ನು ದೇಹ ಹೊರ ಹಾಕುತ್ತದೆ, ಇದರಲ್ಲಿ ನಮ್ಮ ಪ್ರಯತ್ನ, ಪಾತ್ರಗಳೇನೂ ಇರುವುದಿಲ್ಲ. ಒಂದು ವೇಳೆ ತ್ಯಾಜ್ಯವನ್ನು ಹಾಗೆ ಹೊರಹಾಕದಿದ್ದರೆ ನಾವು ಬದುಕಲಾರೆವು. ಅಂದರೆ ನಮ್ಮ ಸ್ವಸ್ಥ ಬದುಕಿಗೆ ದೇಹದಿಂದ ನಿತ್ಯವೂ ತ್ಯಾಜ್ಯವನ್ನು ಹೊರಹಾಕಲೇಬೇಕು. ಆದರೆ ಹೊರಹಾಕಿದ ತ್ಯಾಜ್ಯಗಳಲ್ಲಿರುವ ಸಾವಿರಾರು ಕ್ರಿಮಿಗಳು ಸತ್ತು ಹೋಗುತ್ತವೆ. ಪ್ರತಿ ಜೀವಿಯ ಜೀವನದ ಅಂತ್ಯದವರೆಗೂ ಈ ಕ್ರಿಯೆ ಸ್ವಾಭಾವಿಕವೆಂಬಂತೆ ಅವ್ಯಾಹತವಾಗಿ ಸಾಗುತ್ತಿರುತ್ತದೆ. ಅಂದರೆ ಪ್ರತಿ ಜೀವಿಯ ಬದುಕಿನ ಅಸ್ತಿತ್ವವಿರುವುದು, ಇನ್ನೊಂದು ಜೀವಿಯ ಸಮಾಧಿಯ ಮೇಲೆಯೇ ಎಂದಾಯಿತು. ಜೀವಿ ಜೀವಿಯ ತಿಂದು ಜೀವಿಸುವ ಈ ದೃಶ್ಯವನ್ನು ಗಮನಿಸಿದ ದಸರಯ್ಯ ಇದನ್ನು ಗಂಭೀರವಾಗಿ ಪರಿಗಣಿಸಿ ಈ ಕ್ರಿಯೆಯಲ್ಲಿ ‘ಹಿಂಸೆ’ ನಡೆಯುವ ಸಂಗತಿಯನ್ನು ಗಮನಿಸುತ್ತಾರೆ. ದೇಹದಿಂದ ತ್ಯಾಜ್ಯವನ್ನು ಹೊರಹಾಕಿದ ಮನುಷ್ಯನೇ (ಪ್ರತಿ ಜೀವಿಯೂ) ಈ ಹಿಂಸೆಗೆ ಕಾರಣನೆಂಬ ತೀರ್ಮಾನಕ್ಕ ಬರುತ್ತಾನೆ. ಸರ್ವಾಂತರ್ಯಾಮಿಯಾದ ಭಗವಂತನ ಅಂಶ ಪ್ರತಿಯೊಂದು ಜೀವಿಯಲ್ಲಿಯೂ ಸ್ಥಿತವಾಗಿರುವುದರಿಂದ ಅವುಗಳ ಸಾವಿಗೆ ಕಾರಣನಾದ ತಾನು, ಹಿಂಸೆ ಮಾಡಿದೆನೆಂಬ ಅಪರಾಧಿಭಾವ ಅವನಲ್ಲಿ ಕಾಡತೊಡಗುತ್ತದೆ. ಪ್ರತಿ ಜೀವಿಯೂ ತನ್ನ ಅಸ್ತಿತ್ವಕ್ಕಾಗಿ ಇನ್ನೊಂದು ಜೀವಿಯ ಅಂತ್ಯಕ್ಕೆ ಕಾರಣವಾದ ಈ ಹಿಂಸಾಮಯ ಜಗತ್ತಿನಲ್ಲಿ ನಾನು ಬದುಕಲಾರೆ. ನನ್ನನ್ನು ಇದರಿಂದ ರಕ್ಷಿಸಿ ಮುಕ್ತನನ್ನಾಗಿ ಮಾಡೆಂದು ಭಗವಂತನಲ್ಲಿ ಆರ್ತನಾಗಿ ಮೊರೆಯಿಡುವ ದಸರಯ್ಯ, ಸರ್ವ ಮಹಾನ್ ಅಹಿಂಸಾ ಮೂರ್ತಿಯಾಗಿ ನಮ್ಮ ಮನದಲ್ಲಿ ಚಿರಸ್ಥಾಯಿಯಾಗಿ ನಿಲ್ಲುತ್ತಾನೆ. ಮಹಾನ್ ಅಹಿಂಸಾ ಮೂರ್ತಿಯೇ, ಶರಣ ಸಂಕುಲದ ಅಹಿಂಸೆಯ ಅನುಭವ ಮಂಟಪಕ್ಕೆ ನೀನೇ ಅಧಿಪತಿ, ಶೂನ್ಯ ಸಿಂಹಾಸನಾಧೀಶ್ವರ ಧನ್ಯ ದಸರಯ್ಯ, ನೀನೇ ಧನ್ಯ, ಧನ್ಯ ಎಂದು ವಿಶ್ಲೇಷಣೆಯನ್ನು ಪ್ರೊ. ಜಿ ಎ. ತಿಗಡಿ ಮಾಡಿದ್ದಾರೆ.

ಇಂಥ ಅಹಿಂಸೆಯ ಮೂರ್ತಿಗೂ ಹಿಂಸೆ ತಪ್ಪಲಿಲ್ಲ. ಈ ಕ್ರೂರ ಕುಟಿಲ ಕುಹಕ ಲೋಕದಲ್ಲಿ ದಸರಯ್ಯನ ಅಹಿಂಸೆಯನ್ನು ಒರೆಗೆ ಹಚ್ಚಿ ನೋಡಬೇಕೆಂದು ಕೆಲ ಮಲೀನ ಮತಿಗಳು ಸಿದ್ಧರಾದರು. ದಸರಯ್ಯನ ಊರು ರಾಮಗೊಂಡೆಯಲ್ಲಿ ಮೋಟ ಮಲ್ಲುಗನೆಂಬ ದುರಾತ್ಮನಿದ್ದ. ಕಳ್ಳತನ ಮಾಡಿ ಸಿಕ್ಕಿ ಬಿದ್ದಿದ್ದವನ ಮುಂಗೈಗಳನ್ನು ಕತ್ತರಿಸಿ ಕೈಗಳೆರಡು ಮೋಟಾದ್ದರಿಂದ ‘ಮೋಟ ಮಲ್ಲುಗ’ ನೆಂದು ಹೆಸರಾಗಿದ್ದನು. ಮಲೀನ ಮತಿಗಳೆಲ್ಲಾ ಸೇರಿ ಮೋಟ ಮಲ್ಲುಗನನ್ನು ಏನಾದರೂ ಮಾಡಿ ದಸರಯ್ಯನ ಅಹಿಂಸಾ ವ್ರತಭಂಗ ಮಾಡಲು ಪ್ರೇರೆಪಿಸಿದರು. ಮೋಟು ಮಲ್ಲುಗನು ಸಹ ತುಂಬಾ ಉತ್ಸಾಹದಿಂದಲೇ ಒಪ್ಪಿಕೊಂಡು ಬಂದು ವಂದಿಸಿದ. ದಸರಯ್ಯನಿಗೆ ವಿನಾ ಕಾರಣ ಹೊಡೆದು, ಬಡಿಯುವಾಗಲೂ ದಸರಯ್ಯ ಮೋಟು ಮಲ್ಲುಗನನ್ನು ಪ್ರಶ್ನಿಸದೆ, ಪ್ರತಿಭಟಿಸದೆ ಬದಲಿಗೆ ತನ್ನ ಮನಸ್ಸಿಗೆ ಸಕಲ ಜೀವಕ್ಕೆಲ್ಲಾ ದಯೆಯೊಂದನ್ನೇ ಕರುಣಿಸು ಎಂದು ಪ್ರಾರ್ಥಿಸುವ ವಚನ;

ಸರ್ವಜೀವ ನಿನ್ನ ಹಾಹೆ ಎಂಬೆನೆ? ಅದು ಭಿನ್ನಭಾವ
ತ್ರಿಗುಣಾತ್ಮಕರುಂಟು, ಅವರು ನಿನಗನ್ಯವೆಂಬೆನೆ?
ಆ ತ್ರಿಗುಣಾತ್ಮಕರೂ ನಿನ್ನ ತಿಲಾಂಶ.
ಇಂತೀ ಸರ್ವಭೂತಕ್ಕೆ ನಿನ್ನ ದಯ.
ಎನಗಿದೇಕೆ ಗೆಲ್ಲ ಸೋಲವೆಂಬ ಖುಲ್ಲತನ,
ಎಲ್ಲ ಜೀವಕ್ಕೂ ಸರಿ.
ಅರುಣೋದಯದಂತೆ
ಎನ್ನ ಚಿತ್ತದಲ್ಲಿ ಸರ್ವಜೀವಕ್ಕೆ ಎಲ್ಲಕ್ಕೂ
ದಯವ ಮಾಡು,
ಚೆನ್ನ ದಸರೇಶ್ವರ ಲಿಂಗಾ.
(ಸಮಗ್ರ ವಚನ ಸಂಪುಟ: ಏಳು-2021 / ಪುಟ ಸಂಖ್ಯೆ-364 / ವಚನ ಸಂಖ್ಯೆ-1062)

ಧನ್ಯ ದಸರಯ್ಯಾ! ನಿನ್ನಂಥ ಅಹಿಂಸಾ ಮೂರ್ತಿಗಳು ಶತಮಾನಕ್ಕೂಬ್ಬರು ಜೀವಿಗಳೆಲ್ಲೆಲ್ಲಾ ಒಳ್ಳೆಯ ಗುಣ ಸ್ವಭಾವದರಾದ ಸಾತ್ವಿಕರು. ಕಾಮ, ಕ್ರೋಧ, ಮದ, ಮತ್ಸರ, ಲೋಭ, ಮೋಹಗಳೆಂಬ ಅರಿಷಡ್ವರ್ಗಗಳಿಂದ ಕೂಡಿದ ರಜೋ ಗುಣಶೀಲರಾದ ರಾಜಸಿಗಳು ಹಾಗೂ ನೀಚ, ದುಷ್ಟ, ಅಜ್ಞಾನದ ತಮೋಗುಣದ ತಾಮಸಿಗಳೆಂಬ ಈ ಮೂರೂ ಗುಣಗಳ ತ್ರಿಗುಣಾತ್ಮಕರಿದ್ದಾರೆ. ಆ ತ್ರಿಗುಣಾತ್ಮಕರೂ ಶಿವನ ಅಂಶವನ್ನು ಹೊಂದಿದವರಾದ್ದರಿಂದ ಅವರು ಸಹ ತನಗೆ ಅನ್ಯರಲ್ಲ. ಮೋಟ ಮಲ್ಲುಗ ತ್ರಿಗುಣಗಳಲ್ಲೊಂದಾದ ತಾಮಸದಿಂದ ಈ ತಾಮಸೀ ಕೃತ್ಯ ನಡೆಸಿದ್ದಾನೆ. ಅವನು ಗೆದ್ದನು ನಾನು ಸೋತೆನೆಂಬ ವಿಮರ್ಶಿಸುವ ಸಣ್ಣತನ, ಖುಲ್ಲತನ, ಸಂಕುಚಿತತೆ ನನಗೇಕೆ? ಈ ಸೃಷ್ಟಿಯ ಸಕಲ ಚರಾಚರಕ್ಕೂ ಪರಶಿವನ ಕರುಣೆ ಸಮಾನವಾಗಿದೆ. ಅದು ಅರುಣೋದಯದಂತೆ. ಪಾಪಿಗಳು ಪುಣ್ಯವಂತರೆನ್ನದೆ ಗುಡಿ, ಗುಡಿಸಲುಗಳೆನ್ನದೆ ಎಲ್ಲರ ಮೇಲೂ ತನ್ನ ಬಂಗಾರದ ಬೆಳಕನ್ನು ಚೆಲ್ಲುವ ಬಾಲ ದಿನಮಣಿ ಸೂರ್ಯನಂತೆಯೇ ಶಿವನ ದಯೆ. ಆದುದರಿಂದ ಆ ಪರಾತ್ಪರ ಶಿವನೇ ನನ್ನ ಚಿತ್ತದಲ್ಲಿ ಸಾತ್ವಿಕರು, ರಾಜಸರು, ತಾಮಸಿಗಳೆಂಬ ಭೇದ ಭಾವರಹಿತವಾಗಿ ಸರ್ವ ಜೀವಕ್ಕೆಲ್ಲ ದಯೆಯೊಂದೇ ಉಳಿಯುವಂತೆ ಅನುಗ್ರಹಿಸು! ಎಂದು ಪ್ರಾರ್ಥಿಸುತ್ತಾ ಮೋಟ ಮಲ್ಲುಗನಿಂದ ಮೈ ಎಲವು ಮುರಿಯುವಂತೆ ಗುದ್ದಿಸಿಕೊಳ್ಳುತ್ತಿರುವಾಗಲೂ ಸಹಿಸಿಕೊಂಡ ದಸರಯ್ಯ ಅಹಿಂಸೆಗೊಂದು ಹೆಸರಾಗಿ ಉಳಿದ. ಹೊಡೆದು ಹೊಡೆದೂ ಸಾಕಾಗಿ ಸುಸ್ತಾಗಿ ಸುಮ್ಮನೆ ಕುಳಿತ ಮೋಟ ಮಲ್ಲಗನಲ್ಲಿಗೆ ದಸರಯ್ಯ ಧಾವಿಸಿ ಬಂದು “ಅಣ್ಣಾ, ನಿನ್ನ ಕೈಗಳೆಷ್ಟು ನೊಂದುವಲಾ! ಏಕೆ ಇಷ್ಟು ಬಳಲಿದೆ?” ಎನ್ನುತ್ತ ಅವನ ಕೈಗಳನ್ನೂ ಕಾಲುಗಳನ್ನೂ ಮೆತ್ತಗೆ ಒತ್ತತೊಡಗಿದನು. ಆಗ ಮೋಟಮಲ್ಲುಗನ ಕಲ್ಲೆದೆ ಕರಗಿ ಹರಿಯಿತು. ದಸರಯ್ಯನ ಕಾಲಿಗೆ ಬಿದ್ದು ಕ್ಷಮಿಸೆಂದು ಅಂಗಲಾಚಿದನು. ಹೀಗೆ ಕಪಟ ವೇಷಧಾರಿ ಜಂಗಮನಾಗಿ ಬಂದ ಮೋಟ ಮಲ್ಲಗ ದಸರಯ್ಯನ ಪ್ರಭಾವದಿಂದ ನಿಜವಾದ ಜಂಗಮನಾಗಿ ಮಾರ್ಪಟ್ಟನು. ಲಕ್ಕಣ ದಂಡೇಶನ ಶಿವತತ್ವ ಚಿಂತಾಮಣಿಯಲ್ಲಿ ಶಿವನೇ ದಸರಯ್ಯನನ್ನು ಪರೀಕ್ಷಿಸಲು ಮೋಟ ಮಲ್ಲುಗನಾಗಿ ಬಂದು ಪರೀಕ್ಷಿಸಿ, ಅವನ ದಯಾಪರತೆಯನ್ನು ಕಂಡು ಮೆಚ್ಚಿ ಕೈವಲ್ಯವನ್ನು ದಯಪಾಲಿಸಿದನೆಂದು ಹೇಳಲಾಗಿದೆ.

ದಸರಯ್ಯನವರ ಧರ್ಮಪತ್ನಿ ವೀರಮ್ಮನವರು. ವೀರಮ್ಮನವರ ವಚನಗಳ ಅಂಕಿತನಾಮ ‘ಗುರುಶಾಂತೇಶ್ವರಾ’. ಶರಣೆಯರೆಲ್ಲರೂ ಸಾಮಾನ್ಯವಾಗಿ ಪತಿಯ ಅಂಕಿತಕ್ಕೆ ‘ಪ್ರಿಯ’ ಶಬ್ಧವನ್ನು ಸೇರಿಸಿಕೊಂಡಿದ್ದರೆ ವೀರಮ್ಮನ ವಚನಾಂಕಿತ ಮಾತ್ರ ಪತಿಯಾದ ದಸರಯ್ಯ ಮತ್ತು ಅತನ ದಸರೇಶ್ವರ ಲಿಂಗ ಎಂಬುದಕ್ಕೂ ಭಿನ್ನವಾದ ಅಂಕಿತವಾಗಿದೆ ಎಂದು ಹಲವರು ಹೇಳುತ್ತಾರೆ. ಆದರೆ ದಸರಯ್ಯನನ್ನು ಸಮಗ್ರವಾಗಿ ಅರ್ಥೈಸಿಕೊಂಡಾಗ ದಸರಯ್ಯ ತನ್ನ ಸಂಪೂರ್ಣ ಬದುಕಿನ ಎಂತಹ ಕಠಿಣ, ಕ್ಲಿಷ್ಟ ಸಂದರ್ಭಗಳಲ್ಲೂ ಸಮಾಧಾನಿಯಾಗಿ ಅಹಿಂಸೆಯನ್ನು ಪಾಲಿಸಿರುವುದು ಅರಿವಾಗುತ್ತದೆ. ಹಾಗಾಗಿ ಶರಣೆ ವೀರಮ್ಮನವರು ತಮ್ಮ ಪತಿ ದಸರಯ್ಯನವರು ಕರುಣೆ, ಶಾಂತಿ, ಕ್ಷಮೆ, ದಮೆ ಮೊದಲಾದವುಗಳಿಗೆ ಗುರುವಾಗಿರುವವರು ಎಂದು ಭಾವಿಸಿ ಪತಿಯ ಗುಣ ಸ್ವಭಾವಗಳಿಗೆ ಅನುಗುಣವಾಗಿ ‘ಗುರುಶಾಂತೇಶ್ವರಾ’ ಎಂದು ಇಟ್ಟುಕೊಂಡಿರಬಹುದು. ಇದಕ್ಕೆ ಪೂರಕವಾಗಿ ನೋಡಿದರೆ ಷಡಕ್ಷರದೇವ ತನ್ನ ‘ಬಸವರಾಜ ವಿಜಯಂ’ ನಲ್ಲಿ ದಸರಯ್ಯನನ್ನು ಕುರಿತು ಹೀಗೆ ಪ್ರಸ್ತಾಪಿಸಿದ್ದಾನೆ.

ಪರರಂ ತನ್ನಂತೆ ನೋಳ್ಪಂ ಗಡ ಪರರ ಮನಂ ನೋಗುಮೇಂದಾಗಳುಂ ನಿ
ಷ್ಠುರ ವಾಕ್ರಾಲಾಪಮಂ ತಾಂ ಮರೆದುಮುಸುರದಿರ್ಪಂ ಗಡಾ ಸರ್ವಜಂತೂ
ತ್ಕರಮೆಂತುಂ ನೋಯದಂತಾಚರಿಪ ಪರಮಶಾಂತಂ ಗಡಾ ವೀರಮಾಹೇ
ಶ್ವರರೊಳ್ಮುಖಂ ಗಡೀತಂ ಪಿಡಿದ ಬುತದ ಸಾಮರ್ಥ್ಯಮಂ ನೋಳ್ಪೆವೀಗಳ್
(ಷಡಕ್ಷರದೇವ ವಿರಚಿತ ಬಸವರಾಜ ವಿಜಯಂ: ಸಂಪಾದಕರು. ಪಂ. ಚನ್ನಪ್ಪ ಎರೇಸೀಮಿ/ಷಡ್ವಿಂಶಾಶ್ವಾಸಂ/ಪುಟ-23/ಪದ್ಯ-10)

ಪರರನ್ನು ತನ್ನಂತೆಯೇ ಎಂದು ಭಾವಿಸಿ ಅಪ್ಪಿತಪ್ಪಿಯೂ ನಿಷ್ಠುರ ಮಾತನ್ನಾಡದ ಸಕಲ ಜೀವ ಜಂತುಗಳನ್ನು ನೋಯಿಸದವನು ಅತ್ಯಂತ ದಯಾರಸಭರಿತನೂ, ಪರಮ ಶಾಂತನೂ ದಸರಯ್ಯನಲ್ಲವೆ? ಎಂದಿದ್ದಾರೆ. ಹಾಗಾಗಿ ಪತ್ನಿಯಾದ ವೀರಮ್ಮನವರ ‘ಗುರುಶಾಂತೇಶ್ವರ’ ವಚನಾಂಕಿತ ಪತಿಯ ಮತ್ತು ಪತಿಯ ಅಂಕಿತಕ್ಕೆ ಅನುಗುಣವಾಗಿಯೇ ಇದೆ. ದಯೆಗೆ ಅಸರನಾದವನು ದಸರಯ್ಯ ಹಾಗೂ ಆತನ ಅಂಕಿತನಾಮ ದಸರೇಶ್ವರಲಿಂಗ ಆಗಿರುವಾಗ ‘ಶಾಂತೇಶ್ವರ’ ಎಂಬುದು ಭಿನ್ನವೆನ್ನಲು, ಬೇರೆ ಎನ್ನಲು ಹೇಗೆ ಸಾಧ್ಯ. ದಯೆ ಮತ್ತು ಶಾಂತ ಎಂಬರ್ಥಗಳು ಪರಸ್ಪರ ಪೂರಕವಲ್ಲವೆ? ಅಲ್ಲದೆ ದಸರಯ್ಯ-ವೀರಮ್ಮ ದಂಪತಿಗಳು ಲೌಕಿಕದಲ್ಲಿ ನಿರ್ಮಲ ಜೀವನ ನಡೆಸಿ, ನಿರ್ವಯಲಾದರು. ಅಲ್ಲದೆ ಪರಮಾರ್ಥಕ್ಕೊಲಿದ ಸತಿ-ಪತಿಗಳಾಗಿ ಪಾರಮಾರ್ಥಕ್ಕೆ ಪರಸ್ಪರರು ಅನುಕೂಲರಾಗಿ ಶರಣರ ತಾರಾಗಣದಲ್ಲಿ ತೊಳಗಿ ಬೆಳಗುವ ತಾರೆಗಳಂತೆ ಆದರ್ಶಪ್ರಾಯರಾದವರು. ಪತ್ನಿಯರ ಅಂಕಿತನಾಮಗಳೆಲ್ಲಾ ಪತಿಗೆ ಅನ್ವಯಿಸುವಂತಿರಬೇಂಬ ನಿಲುವು ಅಂದಿನದೂ ಅಲ್ಲ ಮತ್ತು ಇಂದಿನದೂ ಅಲ್ಲ. ಆ ಕಾಲಮಾನದಲ್ಲಿಯೂ ಶರಣ ಸತಿ-ಪತಿಗಳ ಅಂಕಿತನಾಮಗಳಲ್ಲಿ ಸಾಮ್ಯತೆ, ಭಿನ್ನತೆಗಳಿದ್ದವು. ಒಂದೇ ಆಗಿರಬೇಕೆಂಬುದೆನೂ ಇಲ್ಲ. ಆದರೆ ದಸರಯ್ಯ ಮತ್ತು ವೀರಮ್ಮನ ಅಂಕಿತ ನಾಮಗಳು ಬೇರೆ ಬೇರೆಯಾಗಿದೆ ಎಂಬ ಉಲ್ಲೇಖಗಳು ಈವರೆಗಿನ ಎಲ್ಲಾ ಕೃತಿಗಳಲ್ಲೂ, ಉಪನ್ಯಾಸಗಳಲ್ಲೂ ಪ್ರಸ್ತಾಪಿತವಾಗಿದೆ. ಆದರೆ ಪರಸ್ಪರ ಪೂರಕವಾಗಿವೆ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ.

ಎಲ್ಲವನರಿದಲ್ಲಿ,
ಕಡೆಯಲ್ಲಿ ಕೊಲ್ಲಬೇಕೆಂಬುದೊಂದು ವೇಧ ಉಂಟೆ?
ಶಾಸ್ತ್ರವನೆಲ್ಲವ ಕಲಿತಲ್ಲಿ ಗೆಲ್ಲ ಸೋಲಕ್ಕೆ
ಹೊರಬೇಕೆಂಬುದು ಕಡೆಯಲ್ಲಿ ಒಂದು ಸೊಲ್ಲುಂಟೆ?
ಪುರಾಣವನೆಲ್ಲವನೋದಿದಲ್ಲಿ ಸರ್ವಜೀವವ
ಕೊಲ್ಲು ಕೊರೆ- ಎಂಬುದೊಂದು ದಳ್ಳುರಿಯುಂಟೆ?
ಶ್ರುತಿಯ ಕೇಳುವಲ್ಲಿ ಸ್ಮೃತಿಯನಂಗೀಕರಿಸುವಲ್ಲಿ
ಸರ್ವಹತವ ಮಾಡಬೇಕೆಂಬುದೊಂದು ಗತಿಯುಂಟೆ?
ಇಂತೀ ಆತ್ಮನಲ್ಲಿ ಸರ್ವಭೂತ ಹಿತವುಳ್ಳವಂಗೆ
ಆತ ಅತೀತ ಸ್ವಯವಸ್ತು ದಸರೇಶ್ವರಲಿಂಗವು.
(ಸಮಗ್ರ ವಚನ ಸಂಪುಟ: ಏಳು-2021 / ಪುಟ ಸಂಖ್ಯೆ-361 / ವಚನ ಸಂಖ್ಯೆ-1056)

ವೇದ, ಶಾಸ್ತ್ರ, ಪುರಾಣ, ಆಗಮ, ಸ್ಮೃತಿ ಮೊದಲಾದವುಗಳಲೆಲ್ಲಾ ಸಾಮರಸ್ಯ, ಸಹಜೀವನ ಇತ್ಯಾದಿಗಳನ್ನೇಲ್ಲಾ ಬೋಧಿಸಿದರೂ ಅಂತಿಮವಾಗಿ ನ್ಯಾಯ ಧರ್ಮಗಳು ಉಳಿಯಬೇಕಾದರೆ ಅನ್ಯಾಯ ಅಧರ್ಮಗಳು ಅಳಿಯಲೇಬೇಕು. ದಸರಯ್ಯ ಮಾತ್ರ ಯಾವುದೇ ಕಾರಣಕ್ಕೂ, ಯಾವುದೇ ಸಂದರ್ಭದಲ್ಲೂ ಕಾಯ-ವಾಚ-ಮನಸ್ಸಾ ಯಾವ ಹಿಂಸೆಗಳನ್ನು ಒಪ್ಪುತ್ತಿರಲಿಲ್ಲ ಎಂಬುದನ್ನು ಈ ವಚನ ಸ್ಪಷ್ಟಪಡಿಸುತ್ತದೆ.

ದಸರಯ್ಯನ ಕೀರ್ತಿ ದಶದಿಕ್ಕುಗಳಿಗೆ ಹರಡಿತು. ಈ ಸುದ್ದಿಯನ್ನು ಕೇಳಿದ ಬಸವಣ್ಣವರು ಉತ್ಸಾಹದಿಂದ ಸದ್ಭಕ್ತರಿಂದೊಡಗೂಡಿ ಬಂದು, ಆತನಿಗೆ ಪ್ರಣಾಮ ಮಾಡಿ, ಆನಂದ ಬಾಷ್ಪವನ್ನು ಸುರಿಸುತ್ತಾ ಅವನ ಅಮಳ ಕಾರುಣ್ಯವನ್ನು ಹೀಗೆ ಕೊಂಡಾಡುವರು: “ಸರ್ವದಯಾಪರ ನಿನ್ನಯ ಪರ್ವಿದ ಮಹಿಮಾತಿಶಯವನರಿವಂ ಜಗದೊಳ್ ಸರ್ವಜ್ಞನೊರ್ವನಲ್ಲದೆ ದುರ್ವಾರ ಮದಾಂಧಮತಿಗಳಾವರಿದಪೆವೆ?”

ಹತ್ತಾರು ದಿಕ್ಕುಗಳಿಗೂ ದಸರಯ್ಯನ ಅಹಿಂಸಾ ಪ್ರವೃತ್ತಿಯನ್ನು ಪ್ರಶಂಸುತ್ತಾ ಬಸವಣ್ಣ ತಮ್ಮನ್ನು ಸೇರಿದಂತೆ ಅಹಂಕಾರ, ಕಂದಾಚಾರ ಮೊದಲಾದ ಸಂಕುಚಿತ ಸ್ವಾಭಾದ ಸಾಮಾನ್ಯ ಜನರಿಗೆ ದಸರಯ್ಯನ ಅಹಿಂಸಾ ಬದ್ಧತೆ ಪಾಲಿಸುವುದಿರಲಿ, ಅರ್ಥಮಾಡಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಸರ್ವಜ್ಞಾನಿಯಾದ ಸರ್ವಜ್ಞನೊಬನಿಗೆ ಮಾತ್ರ ಅರ್ಥೈಸಿಕೊಳ್ಳಲು ಸಾಧ್ಯ ಎಂದಿದ್ದಾರೆ.

“ಸಸ್ಯಗಳಿಗೂ ಜೀವವಿದೆ” ಎಂದು ಜಗದೀಶ ಚಂದ್ರ ಭೋಸರು ಆಧುನಿಕ ಯುಗದಲ್ಲಿ ಕಂಡು ಹಿಡಿದರೆಂದು ನಾವು ಹೇಳುತ್ತೇವೆ. ಆದರೆ ಹನ್ನೆರಡನೇ ಶತಮಾನದಲ್ಲೇ ಶರಣರಿಗೆ ಆ ಕಲ್ಪನೆ ಇತ್ತೆಂಬುದನ್ನು, ಅವರಿಗಿದ್ದ ಪರಿಸರ ಪ್ರೇಮವನ್ನು ಗಮನಿಸಿದರೆ ಆಶ್ಚರ್ಯವೆನಿಸುತ್ತದೆ. ಶರಣ ಧರ್ಮದ ಸುವರ್ಣ ಸೂತ್ರವೇ ಸಕಲ ಜೀವಾತ್ಮರಿಗೆ ಲೇಸನೇ ಬಯಸುವುದು, ದಯವೇ ಧರ್ಮದ ಮೂಲವೆಂದು ತಿಳಿಯುವುದು. ಎಲ್ಲ ಶಿವ ಶರಣರೂ ಸಹ ಈ ಸುವರ್ಣ ಸೂತ್ರವನ್ನನುಸರಿಸಿ ನಡೆದಿದ್ದಾರೆ. ದಸರಯ್ಯನಾದರೊ ಈ ಸೂತ್ರಕ್ಕೆ ತನ್ನ ಬಾಳಿನಿಂದಲೇ ಭಾಷ್ಯ ಬರೆದಿದ್ದಾರೆ.

ಆಕರಗಳು

ಶರಣ ಕಥಾ ಮಾಲೆ – 7, ದಸರಯ್ಯ-ಬ್ಯಾಡನೂರ ಶಾಂತವೀರಪ್ಪ, ಬಸವಸಮಿತಿ.
ಶರಣರ ಅಹಿಂಸೆಯ ಸಂದೇಶ, ಪೂಜ್ಯಶ್ರೀ ಬಸವಗೀತಾ ತಾಯಿಯವರ ಪ್ರವಚನ, ಯೂಟುಬ್, ಕುಂದನ್ ಟಿವಿ.
ವಚನ ಶ್ರಾವಣ-27, ದಯಾಮೂರ್ತಿ ದಸರಯ್ಯ, ಜಿ.ಪಿ.ಮರಿಸ್ವಾಮಿ ಗೋಡೆಕೆರೆ, ನ್ಯಾಯವಾದಿಗಳು, ವಚನಜ್ಯೋತಿ ಬಳಗ, ಯೂಟುಬ್.
ಬಸವ ಸಮಿತಿ ಆನ್‌ಲೈನ್ ಅರಿವಿನ ಮನೆ, 14.05.2022 “ಸಕಲ ಜೀವ ದಯಾಪರ ಶರಣ ದಸರಯ್ಯ” ಉಪನ್ಯಾಸಕರು: ಪ್ರೊ.ಜಿ.ಎ.ತಿಗಡಿ, ನಿವೃತ್ತ ಪ್ರಾಚಾರ್ಯರು, ಪದವಿ ಪೂರ್ವ ಶಿಕ್ಷಣ ಇಲಾಖೆ, ಧಾರವಾಡ.
ಸಮಗ್ರ ವಚನ ಸಂಪುಟ: ಏಳು-2021 / ಸಂಪಾದಕರು-ಡಾ. ಕೆ. ರವೀಂದ್ರನಾಥ.
ಷಡಕ್ಷರದೇವ ವಿರಚಿತ ಬಸವರಾಜ ವಿಜಯಂ: ಸಂಪಾದಕರು. ಪಂ. ಚನ್ನಪ್ಪ ಎರೇಸೀಮಿ.
ಸಮಗ್ರ ವಚನ ಸಂಪುಟ: ಎರಡು-2021 / ಸಂಪಾದಕರು-ಶ್ರೀ. ಸಿದ್ಧರಾಮ ಶರಣರು ಬೆಲ್ದಾಳ್.
ಸಮಗ್ರ ವಚನ ಸಂಪುಟ: ಒಂದು-2021 / ಸಂಪಾದಕರು-ಡಾ, ವೀರಣ್ಣ ರಾಜೂರ.
ಸಮಗ್ರ ವಚನ ಸಂಪುಟ: ಐದು-2021 / ಸಂಪಾದಕರು- ಡಾ, ವೀರಣ್ಣ ರಾಜೂರ.
ಭೀಮಕವಿ ವಿರಚಿತ ಬಸವಪುರಾಣ: ಸಂಪಾದಕರು. ಡಾ. ಆರ್. ಸಿ. ಹಿರೇಮಠ.

ಡಾ. ಪೂರ್ಣಿಮಾ ಎಸ್.
ಬೆಂಗಳೂರು.

Loading

Leave a Reply