
ಸುಮಾರು 900 ವರ್ಷಗಳ ಹಿಂದೆ ಕರ್ನಾಟಕದಲ್ಲಿ ನಡೆದ ಶಿವಶರಣರ ಆಂದೋಲನವು ಕೇವಲ ಧಾರ್ಮಿಕ ಆಯಾಮಕಷ್ಟೇ ಸೀಮಿತವಾಗದೇ ಅಂದಿನ ಅನೇಕ ಪ್ರಚಲಿತ ಗಂಭೀರ ಸಮಸ್ಯೆಗಳಿಗೆ ಪರಿಣಾಮಕಾರಿಯಾಗಿ ಸ್ಪಂದಿಸಿತು ಎನ್ನುವುದು ಗಮನಾರ್ಹ ಸಂಗತಿ. ಅಂದು ವಚನಕಾರರು ವರ್ಣ-ವರ್ಗ-ಲಿಂಗ ಬೇಧಗಳನ್ನು ಹೋಗಲಾಡಿಸಿ ದೀನ ದಲಿತರ ಬದುಕಿಗೆ ಆಶಾಕಿರಣವಾದರು. ನವ ಸಮಾಜವೊಂದನ್ನು ನಿರ್ಮಿಸಿದರು. ಆತ್ಮವಿಶ್ವಾಸ ಮೂಡಿಸುವ ದಿಸೆಯಲ್ಲಿ ಜನಮಾನಸದ ಸಂಗಾತಿಗಳಾಗಿ ಮಾರ್ಗದರ್ಶಕರಾದರು. ಅವರು ರಚಿಸಿದ ವಚನವಾಙ್ಮಯ ಕನ್ನಡ ಪರಂಪರೆಯ ಅಪೂರ್ವ ಸಾಹಿತಿಕ ಸಾಂಸ್ಕೃತಿಕ ಆಧ್ಯಾತ್ಮಿಕ ಸಂಪತ್ತು.
12 ನೇ ಶತಮಾನದ ಸಾಹಿತ್ಯದಲ್ಲಿ ಒಂದು ಸುವರ್ಣ ಅಧ್ಯಾಯ. ಸಾಮಾಜಿಕ ಬದಲಾವಣೆಗೆ ಕಾರಣರಾದ ಮಹಾಚೇತನನ ನಮ್ಮಕ್ರಾಂತಿ ಪುರುಷ ಬಸವಣ್ಣನವರು. ಭಕ್ತಿ ಭಂಡಾರಿ ಜಗಜ್ಯೋತಿ ಕ್ರಾಂತಿಕಾರಿ ಬಸವಣ್ಣ ಹೀಗೆ ಅನೇಕ ಹೆಸರುಗಳಿಂದ ಸಂಬೋಧಿಸಲ್ಪಡುವ ಇವರು ಸಮಾಜ ಸುಧಾರಕರಾಗಿ ವಿಚಾರವಾದಿಗಳಾಗಿ ಸಾಮಾಜಿಕ ಅನಿಷ್ಟ ಹಾಗೂ ಕೆಳಸ್ತರದ ಜನತೆಯ ಶೋಷಣೆಯ ವಿರುದ್ಧ ಪ್ರತಿಭಟನೆಗೈದ ನಮ್ಮ ನಾಡು ಕಂಡಿರುವ ಮಹಾಮಾನವತಾವಾದಿ. ಸಮಾಜದ ಅಂಕು ಡೊಂಕುಗಳನ್ನು ಎಳೆಯಾಗಿ ಬಿಡಿಸಿ ತಿಳಿಗನ್ನಡದ ವಚನಗಳ ಮೂಲಕ ನಿರೂಪಿಸಿದ ಮಹಾನ್ ನೇತಾರ ಈ ಎಲ್ಲ ಕಾರಣಗಳಿಂದಲೇ 12ನೇ ಶತಮಾನದ ಕಾಲಘಟ್ಟವನ್ನು ಬಸವಯುಗ ಎಂದು ದಾರ್ಶನಿಕರು ಕರೆದಿರುವರು.
ಬಸವನ ವಚನಗಳೇ ಕನ್ನಡ ಸಾಹಿತ್ಯಕ್ಕೆ ಕನ್ನಡಿ
ಕಾಯಕವೇ ಕೈಲಾಸ ಎಂದು ಬರೆದಿರುವೆ ಮುನ್ನುಡಿ
ದಯವೇ ಧರ್ಮದ ಮೂಲ ಎನ್ನುವುದೇ ಮೇಲ್ನುಡಿ
ಕಿರಿದರಲ್ಲಿ ಪಿರಿದರ್ಥವ ಅಡಗಿಸುವುದೇ ನಿನ್ನ ಕೈಪಿಡಿ
ವಚನಾಮೃತವನ್ನು ಉಣಬಡಿಸಿ ನೀನಾದೆ ಹೊನ್ನುಡಿ
ವಚನ ಸಾಹಿತ್ಯವು ಕನ್ನಡ ಸಾಹಿತ್ಯದಲ್ಲಿಯೇ ವಿಶಿಷ್ಟವಾಗಿದ್ದು, ಇವು ಮೇಲೆ ನೋಡುವುದಕ್ಕೆ ಬಿಡಿಬಿಡಿಯಾದ ಗದ್ಯರೂಪದ ಮುಕ್ತಕಗಳಂತೆ ಹಾಗೂ ಓದಿದರೆ ಪದ್ಯದ ಲಯವನ್ನು ಒಳಗೊಂಡಿರುವುದು ಗೋಚರವಾಗುತ್ತದೆ. ಅವರು ರಚಿಸಿದಂತಹ ವಚನದ ಪ್ರತಿಯೊಂದು ಸಾಲುಗಳು ವಿಸ್ಮಯಕಾರಿಯಾಗಿದ್ದು, ಪ್ರತಿಯೊಬ್ಬರನ್ನು ಚಿಂತನೆಗೆ ಹಚ್ಚುತ್ತವೆ. ಜನಸಾಮಾನ್ಯರಿಗೆ ಅರ್ಥವಾಗುವಂತಹ ತಿಳಿ ಭಾಷೆಯಲ್ಲಿ ರಚಿಸಿದ ವಚನಗಳಿಂದಲೇ ಈ ಯುಗವನ್ನು ಸಾಹಿತ್ಯದ ಸುವರ್ಣ ಯುಗ ಎಂದು ಹೇಳಿದ್ದಾರೆ.
ಬಸವಣ್ಣನವರು ಬಿಜಾಪುರ ಜಿಲ್ಲೆಯ ಬಾಗೇವಾಡಿ ಅಗ್ರಹಾರದಲ್ಲಿ ಮಾದರಸ ಮಾದಲಾಂಬಿಕೆ ಎಂಬ ದಂಪತಿಯ ಮಗನಾಗಿ ಬ್ರಾಹ್ಮಣ ಕುಲದಲ್ಲಿ ಜನಿಸಿದನು. ಆದರೆ ಮಗುವಾಗಿದ್ದಾಗಲೇ ಇವರಿಗೆ ಕರ್ಮನಿಷ್ಟ ಬ್ರಾಹ್ಮಣ್ಯಕ್ಕಿಂತ ಜಾತಿ ,ಕುಲ ,ಬೇಧಗಳನ್ನು ಮನ್ನಿಸದ ಭಕ್ತಿ ಮಾರ್ಗವು ಪ್ರಿಯವಾಯಿತು. ಧರ್ಮ ಕರ್ಮಗಳ ಬಂಧನಕ್ಕೆ ಒಳಪಡಿಸುವ ಉಪನಯನ ಕಾರ್ಯವನ್ನು ಪ್ರತಿಭಟಿಸಿ ನಿಂತನು. ತನ್ನ ತಂದೆ ತಾಯಿಗಳು ತೀರಿ ಹೋದ ಮೇಲೆ ಒತ್ತಾಯದ ಜನಿವಾರವನ್ನು ಕಿತ್ತೆಸೆದು ಈಶಾನ್ಯ ಗುರುಗಳಿಂದ ಕೂಡಲಸಂಗಮದಲ್ಲಿ ಲಿಂಗ ದೀಕ್ಷೆಯನ್ನು ಪಡೆದನು. ಅನ್ನ ಮಾರ್ಗವನ್ನು ಹರಸುತ್ತಾ ಮಂಗಳ ವೇಳೆಯ ಸಾಮಂತ ದೊರೆ ಬಿಜ್ಜಳನ ಹತ್ತಿರ ಗಣಕನಾಗಿ ಸೇರಿಕೊಂಡು ಮುಂದೆ ಭಂಡಾರಿ ಪದವಿಗೆ ಏರಿದನು. ನಂತರ ಗಂಗಾಂಬಿಕೆ ಮತ್ತು ನೀಲಾಂಬಿಕೆಯರನ್ನು ಕೈ ಹಿಡಿದು ಗ್ರಹಸ್ತನಾದನು. ಬಿಜ್ಜಳನ ರಾಜ್ಯಭಾರವು ಕಲ್ಯಾಣಕ್ಕೆ ವರ್ಗಾವಣೆಯಾದ ನಂತರ ಬಸವಣ್ಣನವರು ಸಮಾಜದಲ್ಲಿ ಹೊಸ ಮನ್ವಂತರವನ್ನು ಮೂಡಿಸುವ ಸಂಕಲ್ಪ ಮಾಡುತ್ತಾರೆ. ಅವರೊಂದಿಗೆ ಅಕ್ಕನಾಗಮ್ಮ ,ಚೆನ್ನಬಸವಣ್ಣ ,ಅಲ್ಲಮ ,ಸಿದ್ದರಾಮಯ್ಯ, ಮಡಿವಾಳ ಮಾಚಯ್ಯ ಹೀಗೆ ಅನೇಕ ಶಿವಶರಣರ ಸಹಕಾರ ದೊರೆಯುತ್ತದೆ. ಆದರೆ ಸಮಾಜ ಸುಧಾರಕರಿಗೆ ಕಷ್ಟಗಳೇನು ಇರಲಿಲ್ಲವೆಂದರ್ಥವಲ್ಲ. ರಾಜಾ ಬಿಜ್ಜಳನಿಗೂ ಇವರಿಗೂ ಕೆಲವೊಂದಿಷ್ಟು ವಿರೋಧಾಭಾಸಗಳು ಇದ್ದವು. ಅವೆಲ್ಲವುಗಳನ್ನು ಮೀರಿ ಬಸವಣ್ಣನವರು ಬೆಳೆದು ನಿಲ್ಲುತ್ತಾರೆ.
ನ್ಯಾಯ ನಿಷ್ಠುರಿ ದಾಕ್ಷಿಣ್ಯಪರನು ನಾನಲ್ಲ
ಲೋಕವಿರೋಧಿ, ಶರಣನಾರಿಗಂಜುವನಲ್ಲ
ಕೂಡಲಸಂಗಮದೇವರ ರಾಜತೇಜದಲ್ಲಿಪ್ಪನಾಗಿ
ತನಗೆ ದೇವರ ರಾಜ ತೇಜಸ್ಸಿನ ರಕ್ಷಣೆಯಿರುವುದರಿಂದ ಯಾರಿಗೂ ಅಂಜಬೇಕಾಗಿಲ್ಲವೆಂದು ,ನ್ಯಾಯ ನಿಷ್ಠುರಿಯಾದ ಮೇಲೆ ಲೋಕದ ವಿರೋಧವನ್ನು ಲೆಕ್ಕಿಸುವವನಲ್ಲವೆಂದು ತನ್ನ ಒಂದು ವಚನದ ಮೂಲಕ ಹೇಳುತ್ತಾರೆ. ಅಲ್ಲದೆ ಅನೇಕ ಕ್ರಾಂತಿಕಾರಿ ಚಟುವಟಿಕೆಗಳನ್ನು ಸಾಗಿಸುತ್ತಾ ಕಲ್ಯಾಣದ ವೀರ ಭಕ್ತರಿಂದ ನವಯುಗದ ನೇತಾರರಿಂದ ಸ್ಪೂರ್ತಿ ತೇಜಸ್ಸು ಆತ್ಮವಿಶ್ವಾಸಗಳನ್ನು ತುಂಬಿಕೊಂಡು ಎಲ್ಲೆಡೆ ಹರಡಿದರು. ಬಸವಣ್ಣನವರ ವಚನಗಳು ತಮ್ಮ ನೆಲೆಯನ್ನು ತಾವು ಗುರುತಿಸಿಕೊಳ್ಳುವ ಮಾಧ್ಯಮಗಳಾಗಿರುವಂತೆಯೇ ಜನತೆಗೆ ಅತ್ಯಂತ ಸುಲಭ ಭಾಷೆಯಲ್ಲಿ ನೀತಿ ಬೋಧನೆ ಮಾಡಿ ಮಾರ್ಗದರ್ಶನ ನೀಡುವ ಸಾಧನಗಳು ಆದವು. ಹೀಗಾಗಿ ಬಸವಣ್ಣನವರು ಆ ಕಾಲದ ಪ್ರತಿಯೊಬ್ಬ ಶಿವಶರಣರಿಗೂ ಮಾದರಿ ವ್ಯಕ್ತಿಯಾಗಿ ನಿಲ್ಲುತ್ತಾನೆ. ಸಾಮಾಜಿಕ ಜೀವನದ ಕಟುಟೀಕೆ ವಿಡಂಬನೆಯನ್ನು ಚಿತ್ರಿಸುತ್ತಾ ಹುಸಿ-ಮೋಸ, ವಂಚನೆ ಕಪಟಗಳನ್ನು ಬಯಲಿಗೆಳೆದು ಶಸ್ತ್ರಚಿಕಿತ್ಸೆಗೈಯ್ಯುತ್ತಿದ್ದರು
.
ಲೋಕದ ಡೊಂಕ ನೀವೇಕೆ ತಿದ್ದುವಿರಿ
ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ
ಇಂತಹ ಅನೇಕ ವಚನಗಳ ಮೂಲಕ ಸರ್ವಸಮಾನತೆ ,ಪ್ರಾಣಿದಯೆ, ಶಿವಭಕ್ತಿಯ ಕಳಕಳಿಯನ್ನು ತಿಳಿಸುವ ನವೀನ ಸ್ಮೃತಿಯಿದೆ. ಸಮಾಜದಲ್ಲಿಯ ಡಾಂಭಿಕತೆ ಪೊಳ್ಳುತನವನ್ನು “ಕಲ್ಲನಾಗರ ಕಂಡರೆ ಹಾಲೆನೆರೆಯೆಂಬರು ,ದಿಟರ ನಾಗರ ಕಂಡರೆ ಕೊಲ್ಲೆಂಬರು”.”ಹಾವು ತಿಂದವರ ನುಡಿಸಬಹುದು” ಹೀಗೆ ಆಷಾಢಭೂತಿತನ ಹಾಗೂ ಗರ್ವಿಷ್ಟ ಪ್ರಜ್ಞೆಯ ಹೀನ ಸ್ಥಿತಿಯ ವಿಡಂಬನೆಯನ್ನು ವಿಶ್ಲೇಷಿಸಿದ್ದಾರೆ. ದೇವಲೋಕ ಮರ್ತ್ಯ ಲೋಕದ ವಿಚಾರಗಳನ್ನು ಕೇಳಿದಾಗ ಉಪನಿಷಾದ್ವಾಕ್ಯಗಳನ್ನು ಕೇಳಿದ ಅನುಭವವಾಗುತ್ತದೆ. ಅವರ ವಚನಗಳನ್ನು ಕನ್ನಡದ ಉಪನಿಷತ್ತುಗಳೆಂದು ಕರೆದುದರ ಸಾರ್ಥಕತೆ ಅರ್ಥವಾಗುತ್ತದೆ. ಬಸವಣ್ಣನವರ ವಚನಗಳು ಜ್ಞಾನಜ್ಯೋತಿಯ ಶುಭ್ರಕ್ರಾಂತಿಯಾಗಿ ತೊಳಗಿ ಬೆಳಗುತ್ತಿವೆ. ನುಡಿದರೆ ಮುತ್ತಿನ ಹಾರದಂತಿರಬೇಕು ಎಂಬ ವಚನವು ಆದರ್ಶಕ್ಕೆ ಸಾಕ್ಷಿ. ಇವರ ವಚನಗಳಲ್ಲಿ ಧರ್ಮ ಕಾವ್ಯ ಧರ್ಮಗಳು ಸಮರವಾಗಿ ಬೆರೆತು ಹೃದಯಕ್ಕೆ ಆನಂದವನ್ನು ಆತ್ಮಕ್ಕೆ ಶ್ರೇಯಸ್ಸನ್ನು ಒದಗಿಸುತ್ತದೆ. ಹೀಗೆ ಬಹುಮುಖ ವ್ಯಕ್ತಿತ್ವದ ಬಸವಣ್ಣನವರು ನಮ್ಮ ಮುಂದೆ ದೇವಮಾನವರಾಗಿ ಇಂದಿಗೂ ನಿಂತಿದ್ದಾರೆ.
ಹೀಗೆ ನಡೆ-ನುಡಿಗಳು ಒಂದೇ ಆಗಿದ್ದ ಬಸವಣ್ಣನವರ ವಚನಗಳನ್ನು ಶಿವಸುಖದ ಸಂತೃಪ್ತಿಯ ಅಭಿವ್ಯಕ್ತಿಯೆಂದು ಹೇಳಬಹುದು. ವಿಶಿಷ್ಟ ವ್ಯಕ್ತಿತ್ವದ ಸರಳತೆಯ ಮನುಜನ ಜನ್ಮದಿನವನ್ನು ವೈಶಾಖ ಶುದ್ಧ ತದಿಗೆ ದಿನವೆಂದು ಅಕ್ಷಯ ತೃತೀಯಾ ಎಂಬ ನಾಮದೊಂದಿಗೆ ನಾಡಿನಾದ್ಯಂತ ಹಬ್ಬವನ್ನಾಗಿ ಆಚರಿಸುವ ನಮಗೆಲ್ಲರಿಗೂ ಶುಭವಾಗಲಿ.೧೯೧೩ ರಂದು ಬಸವ ಜಯಂತಿಯನ್ನು ಸ್ವಾತಂತ್ರ್ಯ ಪೂರ್ವದಲ್ಲಿ ಮೊಟ್ಟಮೊದಲ ಆಚರಣೆಗೆ ತಂದವರು ಕರ್ನಾಟಕದ ಗಾಂಧಿ ಎಂದು ಹೆಸರಾಗಿರುವ ಹರ್ಡೇಕರ ಮಂಜಪ್ಪನವರು. ಬಸವಣ್ಣನವರ ಜನ್ಮದಿನದ ಬಗ್ಗೆ ವಾದ ವಿವಾದಗಳಿದ್ದರೂ ಕೂಡ ಅಂದಿನ ಮುರುಗಾ ಮಠದ ಪೂಜ್ಯಶ್ರೀ ಮೃತ್ಯುಂಜಯ ಸ್ವಾಮಿಗಳ ಮಾರ್ಗದರ್ಶನದಲ್ಲಿ ಅಕ್ಷಯದ್ದಿಗೆ ಎಂದು ಬಸವ ಜಯಂತಿಯನ್ನು ಆಚರಿಸಬೇಕೆಂದು ನಿರ್ಧರಿಸಿ ದಾವಣಗೆರೆಯಲ್ಲಿ ಮೊದಲ ಸಾರ್ವಜನಿಕ ಆಚರಣೆಯನ್ನು ಮಾಡಿದರು. ಹೀಗೆ ಬಸವ ಜಯಂತಿಯನ್ನು ಅಕ್ಷಯ ತೃತೀಯ ಎಂಬ ನಾಮದೊಂದಿಗೆ ಬೆಳೆದು ಬಂದಿತು. ಇಂತಹ ಮಹಾವ್ಯಕ್ತಿಯ ಆಚರಣೆಗೆ ಶ್ರೀಕಾರ ಹಾಕಿದ ಹರ್ಡೇಕರ ಮಂಜಪ್ಪನವರನ್ನು ನೆನೆಯುತ್ತಾ ಬಸವಣ್ಣನ ವ್ಯಕ್ತಿತ್ವದ ಆಕರ್ಷಣೆ, ಸರಳತೆ ,ಸೌಜನ್ಯಗಳನ್ನು ಅವನ ನಿಚ್ಚಳವಾದ ಆದರ್ಶ ವಾಸ್ತವ ಪ್ರಜ್ಞೆಗಳು ಎಂದೂ ನಂಬಿಕೆಯನ್ನು ಬಲಿಗೊಡದ ದೃಢತೆಗಳು ಪ್ರಾಮಾಣಿಕತೆ ದಯಾಪರತೆಗಳು ಎಲ್ಲ ಕಾಲದ ಆಸ್ತಿಕರನ್ನಾಗಲೀ, ನಾಸ್ತಿಕರನಾಗಲೀ ಎಲ್ಲ ಕಾಲದಲ್ಲಿಯೂ ಆಕರ್ಷಿಸುತ್ತವೆ.
ಡಾ.ದಾಕ್ಷಾಯಣಿ ಅಶೋಕ ಮಂಡಿ
ಶಿಕ್ಷಕರು ಮತ್ತು ಸಾಹಿತಿಗಳು
ಮಹಾಲಿಂಗಪುರ
ಮೋಬೈಲ್ ಸಂ. 9035367714