
ಕರಗಿಸಿ ಎನ್ನ ಮನದ ಕಾಳಿಕೆಯ ಕಳೆಯಯ್ಯಾ,
ಒರೆಗೆ ಬಣ್ಣಕ್ಕೆ ತಂದೆನ್ನ ಪುಟವನಿಕ್ಕಿ ನೋಡಯ್ಯಾ,
ಕಡಿಹಕ್ಕೆ ಬಡಿಹಕ್ಕೆ ತಂದೆನ್ನ ಕಡೆಯಾಣಿಯ ಮಾಡಿ,
ನಿಮ್ಮ ಶರಣರ ಪಾದಕ್ಕೆ ತೊಡಿಗೆಯ ಮಾಡಿ ಸಲಹು
ಕೂಡಲಸಂಗಮದೇವಾ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-29 / ವಚನ ಸಂಖ್ಯೆ-251)
ನನಗೆ ಬಸವ ತತ್ವ ಮತ್ತು ವಚನ ಸಾಹಿತ್ಯದ ಶಿವನ ಪ್ರಕಾಶವನ್ನು ತೋರಿಸಿದ್ದ ಶ್ರೀ ಗದಗ ತೋಂಟದಾರ್ಯ ಮಠದ ಲಿಂ. ಡಾ. ಶ್ರೀ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಮತ್ತು ನನ್ನ ಎಲ್ಲ ವಿದೇಶ ಪ್ರವಾಸಗಳಿಗೂ ಬೆನ್ನು ತಟ್ಟಿ ಆಶೀರ್ವದಿಸಿದ್ದ ಸಿದ್ಧಗಂಗೆಯ ಸಿದ್ಧಪುರುಷ ಲಿಂ. ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ಪಾದಕಮಲಗಳನ್ನು ಮನ ಮಂದಿರದಲ್ಲಿ ಪ್ರತಿಷ್ಠಾಪಿಸುತ್ತಾ … …
ವಚನ ಸಾಹಿತ್ಯದ ಅಧ್ಯಯನ ಇಂದಿನ ಪೀಳಿಗೆಯ ಬಹಳಷ್ಟು ವಿದ್ವಾಂಸರುಗಳನ್ನು, ವಿದ್ಯಾರ್ಥಿಗಳನ್ನು ಹಾಗೂ ಲೇಖಕರನ್ನು ಆಕರ್ಷಿಸಿದ್ದು ಒಂದು ಉತ್ತಮ ಬೆಳವಣಿಗೆ. ಬಾಲ್ಯದಿಂದಲೂ ಅಂದರೆ ಸುಮಾರು ನಾನು 12 ವರ್ಷದವನಾಗಿದ್ದಾಗಿನಿಂದ ವಚನ ಸಾಹಿತ್ಯದ ಕಡೆಗಿನ ಒಲವು ಮೂಡಿಸಿದ್ದು ಅಥವಾ ಗೀಳನ್ನು ಹಚ್ಚಿದ್ದು ನಮ್ಮ ತಂದೆ ಲಿಂ. ಶ್ರೀ ಈಶ್ವರ ಕಮ್ಮಾರ ಅವರು. ಇವತ್ತು ಅವರ ಪಾದ ಕಮಲಗಳನ್ನು ಮನಮಂದಿರದಲ್ಲಿ ಪ್ರತಿಷ್ಠಾಪಿಸುತ್ತಾ ಇಂದಿನ ವಿಷಯದ ಕಡೆಗೆ ಗಮನ ಹರಿಸೋಣ.
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಕಲೆ, ಸಾಹಿತ್ಯ, ಸಂಗೀತ, ಶಿಕ್ಷಣದಲ್ಲಿ ತನ್ನದೇ ಆದ ಕೀರ್ತಿ ಗಳಿಸಿ, ಐತಿಹಾಸಿಕ ಪರಂಪರೆಯನ್ನು ಹೊಂದಿದೆ. ಇಂದಿನ ವಿಷಯ “ಅರಿವೇ ಗುರು – ವೈಜ್ಞಾನಿಕ ಚಿಂತನೆ” ಯ ಮೂಲವಾದ “ಅರಿವು” ಎನ್ನುವ ಶಬ್ದವನ್ನು ತನ್ನ ಲಾಂಛನದಲ್ಲಿ ಬಳಸಿಕೊಂಡಿರುವುದು ಗಮನಾರ್ಹ. ಕರ್ನಾಟಕ ವಿಶ್ವವಿದ್ಯಾಲಯವು ವಚನ ಸಾಹಿತ್ಯ, ಬಸವ ತತ್ವ ಮತ್ತು ಶರಣ ಸಿದ್ಧಾಂತವನ್ನು ಕುರಿತು ಅದ್ಭುತ ಕೊಡುಗೆಯನ್ನು ನೀಡಿದೆ. ಡಾ. ಪಿ ಬಿ ದೇಸಾಯಿ, ಡಾ. ಅರ್ ಸಿ ಹಿರೇಮಠ, ಡಾ. ಎಮ್ ಎಮ್ ಕಲಬುರ್ಗಿ, ಡಾ. ವೀರಣ್ಣ ರಾಜೂರರವರಂಥ ಸಾವಿರಾರು ವಚನ ಸಾಹಿತ್ಯದ ವಿದ್ವಾಂಸರ Galaxy ಯನ್ನೇ ತಯಾರು ಮಾಡಿದ ಹೆಗ್ಗಳಿಕೆ ಕರ್ನಾಟಕ ವಿಶ್ವವಿದ್ಯಾಲಯಕ್ಕಿದೆ.

ಅರಿವೇ ಗುರು ಹಾಗೂ ಕಾಯಕವೇ ಕೈಲಾಸ ಎನ್ನುವ ಪಾರಿಭಾಷಿಕ ಶಬ್ದಗಳು ವಚನ ಸಾಹಿತ್ಯದಲ್ಲಿ ಹಾಸುಹೊಕ್ಕಾಗಿವೆ. ವಚನ ಸಾಹಿತ್ಯ, ಬಸವ ತತ್ವ ಮತ್ತು ಶರಣ ಸಿದ್ಧಾಂತಗಳು ವಚನ ಸಾಹಿತ್ಯ ಬಿಟ್ಟು ಬೇರೆ ಸಾಹಿತ್ಯ, ತತ್ವ ಶಾಸ್ತ್ರ, ಸೃಜನ ಶೀಲ ಸಾಹಿತ್ಯ ಮುಂತಾದ ಅನೇಕ ಸಾಹಿತ್ಯಗಳಲ್ಲಿ ಕಂಡು ಬರುವುದಿಲ್ಲ. ಅರಿವು ಮತ್ತು ಗುರು ಎರಡೂ ಶಬ್ದಗಳು ಜೋಡಣೆಯಾದಾಗ ಅಥವಾ ಅರಿವೇ ಗುರುವಾದಾಗ ಅದನ್ನು ಆಚರಣೆಯಲ್ಲಿ ತರುವಾಗ ಅಂತರಂಗದಲ್ಲಿರುವ ಮನಸ್ಸೇ ಶಿಷ್ಯನ ಸ್ಥಾನವನ್ನು ಪಡೆಯುವ ಒಂದು ಅದ್ಭುತ ಲೋಕವನ್ನೇ ಸೃಷ್ಟಿಯನ್ನು ಮಾಡುತ್ತದೆ. ಇದು ಬಸವಾದಿ ಶರಣರ ನಡೆ-ನುಡಿ ಸಿದ್ಧಾಂತದ ಲಿಂಗಾಂಗ ಸಾಮರಸ್ಯದ ಬೆಳಕಿನ ಕಿಂಡಿ. ಆತ್ಮ ಪರಮಾತ್ಮನಲ್ಲಿ ಸಮಾಗಮವಾಗುವದೇ ಲಿಂಗಾಂಗ ಸಾಮರಸ್ಯ. ಇದನ್ನೇ ವ್ಯೋಮಕಾಯ ಅಲ್ಲಮ ಪ್ರಭುಗಳು ತಮ್ಮ ವಚನದಲ್ಲಿ ನಿರೂಪಣೆ ಮಾಡಿದ್ದಾರೆ.
ಅರಿವಿನಲ್ಲಿ ಉದಯಿಸಿ ಮರಹು ನಷ್ಟವಾಗಿರ್ದ
ಶರಣನ ಪರಿಯನರಸಲುಂಟೆ? ಗತಿಯ ಹೇಳಲುಂಟೆ?
ಶಿಶು ಕಂಡ ಕನಸಿನಂತಿಪ್ಪರು ಗುಹೇಶ್ವರಾ ನಿಮ್ಮ ಶರಣರು!
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-168 / ವಚನ ಸಂಖ್ಯೆ-384)
ಲಿಂಗಾಂಗ ಸಾಮರಸ್ಯ ಒಂದು ಅರಿವಿನ ಸಾಧನೆ. ಇಂಥ ಸಾಧನೆಯ ಅಂತಿಮ ಘಟ್ಟದಲ್ಲಿ ಅಪರಿಮಿತ ಜ್ಞಾನದ ಸ್ಫುರಣವಾಗುತ್ತದೆ. ಈ ಹಂತದಲ್ಲಿ ನನ್ನ ದೇಹ ಎನ್ನುವ ಭಾವ ನಷ್ಟವಾಗುತ್ತದೆ. ಈ ಸ್ಥಿತಿಯಲ್ಲಿ ನಿಂದ ಶರಣನ ಲಿಂಗ ಭಾವವನ್ನು ಬಿಟ್ಟು ಅರಿಯುವುದು ಕಷ್ಟ. ಇಲ್ಲಿ ಸಾಧ್ಯತೆ ಹಾಗೂ ಸಾಧಕನಲ್ಲಿ ಭೇದವು ಕಂಡುಬರುವುದಿಲ್ಲ. ಎಳೆಗೂಸು ತಾನು ಕಂಡ ಕನಸನ್ನು ಹೇಗೆ ಶಬ್ದಗಳಲ್ಲಿ ವ್ಯಕ್ತಪಡಿಸಲಾಗುವುದಿಲ್ಲವೋ ಹಾಗೆ ಅದು ಶಬ್ದಗಳಿಗೆ ಮೀರಿ ನಿಂತ ಭಾವ. ಅದೊಂದು ಶಬ್ದಮುಗ್ಧ ಸ್ಥಿತಿ. ಶರಣನ ನಿಜ ನಿಲುವು ಅನುಭವಕ್ಕೆ ಮಾತ್ರ ಸಿಲುಕುವಂಥದು. ಇಂಥ ಶರಣ ಉಪಮಾತಿತ. ಇದು ಜ್ಞಾನ ಸಾಗರದಲ್ಲಿ ಈಜಾಡುವ ಅರಿವಿನ ಸ್ಫೋಟದ ಅನುಭವ.

ಈ ಅರಿವು ಎನ್ನುವಂಥ ಶಬ್ದಕ್ಕೆ ಧಾರವಾಡದ ಶ್ರೀಮತಿ. ಸುನಿತಾ ಮೂರಶಿಳ್ಳಿಯವರು ತಮ್ಮ ಪುಸ್ತಕ “ಅರಿವಿನತ್ತ ಎನ್ನ ಚಿತ್ತ” ದಲ್ಲಿ ಅತ್ಯಂತ ಅದ್ಭುತವಾದ ವ್ಯಾಖ್ಯಾನವನ್ನು ನೀಡಿದ್ದಾರೆ. “ಶಾಶ್ವತ ಆನಂದ ಜಾಗರಗೊಳ್ಳುವ ಅಂತರಂಗದ ಪ್ರಜ್ಞೆಯೇ ಅರಿವು” ಅಂತ ಅವರು ಬರೀತಾರೆ. ಇದಕ್ಕೆ ಅಲ್ಲಮ ಪ್ರಭುಗಳ ಒಂದು ಪೂರಕವಾದ ವಚನವನ್ನೂ ಕೂಡ ಅವರು ಇಲ್ಲಿ ಉಲ್ಲೇಖ ಮಾಡಿದ್ದಾರೆ.
ಅಂಗದಲ್ಲಿ ಅಳವಟ್ಟಿಪ್ಪ ಆಚಾರವೇ ಲಿಂಗವೆಂದರಿದನು,
ಮನದಲ್ಲಿ ಬೆಳಗುತಿಪ್ಪ ಅರಿವೆ ಜಂಗಮವೆಂದರಿದನು,
ಈ ಎರಡರ ಸಂಗವೇ ತಾನೆಂದರಿದನು.
ಮಾಡುವ ದಾಸೋಹವೇ ಲಿಂಗಜಂಗಮವೆಂದರಿದನು.
ನಮ್ಮ ಗುಹೇಶ್ವರಲಿಂಗದಲ್ಲಿ,
ಸಂಗನಬಸವನ್ನನ ತಿಳುಹಿಕೊಡಾ ಚನ್ನಬಸವಣ್ಣಾ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-193 / ವಚನ ಸಂಖ್ಯೆ-707)
ಅಂಗ, ಅರಿವು, ಆಚಾರ, ನಡೆ, ನುಡಿ ಮುಂತಾದ ಶಬ್ದಗಳು ವಚನಗಳಲ್ಲಿ ಲೌಕಿಕ ಮತ್ತು ಅಲೌಕಿಕವಾಗಿ ಬಳಕೆಯಲ್ಲಿ ಬಂದಿವೆ. ಇಲ್ಲಿ ಅಲ್ಲಮ ಪ್ರಭುಗಳು ಆಚಾರವೇ ಲಿಂಗ ಎನ್ನುತ್ತಾರೆ. ಆ ಲಿಂಗದಿಂದ ಅಂತರಂಗದಲ್ಲಿ ಪ್ರಕಾಶಮಾನವಾಗಿ ಬೆಳಗುವುದೇ ಅರಿವು ಎನ್ನುವ ಜಂಗಮ. ಒಂದು ಬಿಟ್ಟು ಇನ್ನೊಂದಿಲ್ಲ. ಇದನ್ನು ಸತ್ವಯುತವಾಗಿ ಅರತವರು ಬಸವಣ್ಣ ಒಬ್ಬರೇ ಎಂದು ಅಲ್ಲಮರು ನಿರೂಪಣೆ ಮಾಡತಾರೆ. ಅಲ್ಲಮರ ಮತ್ತೊಂದು ವಚನ ಈ ಅರಿವೇ ಗುರು ಎನ್ನುವ ತತ್ವ ಸಿದ್ಧಾಂತವನ್ನು ತಿಳಿಸುತ್ತದೆ.
ಅರಿವಿನ ಹೃದಯ ಕಂದೆರೆಯಬೇಕೆಂದು
ಗುರುವೆಂದು ಕಲ್ಪಿಸಿಕೊಂಡರಲ್ಲದೆ,
ಗುರುವೆಂದೆನಲುಂಟೆ ಶಿಷ್ಯಂಗೆ? ಶಿಷ್ಯನೆಂದೆನಲುಂಟೆ ಗುರುವಿಂಗೆ?
ಗಮನಾಗಮನ ನಾಸ್ತಿಯಾದ ಲಿಂಗಕ್ಕೆ
ಅಂಗವೆಲ್ಲಿಯದು ಹೇಳಾ ಗುಹೇಶ್ವರಾ?
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-212 / ವಚನ ಸಂಖ್ಯೆ-835)
ಗುರು-ಶಿಷ್ಯ ಎನ್ನುವುದು ಅರಿವಿನ ಪ್ರಜ್ಞೆಯ ಪರಿಕಲ್ಪನೆ ಜಾಗೃತವಾಗಲು ಬಳಸಿಕೊಳ್ಳಬಹುದಾದ ಸಾಧನಗಳು. ಇಲ್ಲಿ ಗುರುವೂ ಇಲ್ಲಾ ಶಿಷ್ಯನೂ ಇಲ್ಲಾ. ಕೇವಲ ಅಂತರಂಗದ ಅರಿವಿನ ಪ್ರಜ್ಞೆ ಮಾತ್ರ ಕೆಲಸ ಮಾಡುತ್ತದೆ. ಲಿಂಗದ ಬಗ್ಗೆ ಅರಿವಾಗಲೀ ಲಿಂಗ ಸಾಧನೆಯತ್ತ ಗಮನವಾಗಲೀ ಇಲ್ಲದ ಶಿಷ್ಯನು ಗುರುವಿನಿಂದ ಪಡೆದ ಲಿಂಗಕ್ಕೆ ಮಹತ್ವ ನೀಡುತ್ತಾನೆಯೇ ಹೊರತು ಅಂತರಂಗದಲ್ಲಿ ಆರಾಧಿಸಿ ಭವಮುಕ್ತನಾಗುವುದಿಲ್ಲ. ಒಂದು ರೀತಿಯಲ್ಲಿ ಲಿಂಗದಲ್ಲಿ ಬಂಧಿಯಾಗುತ್ತಾನೆ. ಶರಣನಾದವನು ಲಿಂಗವಿಡಿದು ಶಿವಪಥವನ್ನೂ ಅರಿತವನಾಗುತ್ತಾನೆ. ಲಿಂಗಾಂಗ ಸಾಮರಸ್ಯದ ಕುರಿತು ಅವನು ಪ್ರತೀಕ್ಷಣವನ್ನು ಯೋಚಿಸುತ್ತಾನೆ. ಶಾಶ್ವತವಾಗಿರುವ ಜ್ಞಾನಸಾಗರದಲ್ಲಿ ಮಿಂದು ಸುಖಿಸುತ್ತಾನೆ ಎಂದು ಅಲ್ಲಮರ ನಿರೂಪ.
ಗುರು ಎಂದರೆ, ವಚನಗಳ ಪ್ರಕಾರ ಅರಿವನ್ನು ಪಡೆದವನು, ತನ್ನ ತಾನರಿದವನು, ಅಥವಾ ಆ ಅರಿವೇ ಗುರು. ಅರಿವೇ ಗುರು ಇದು ತತ್ತ್ವವೋ ಅಥವಾ ವ್ಯಕ್ತಿಯೋ ಎಂಬುದು ವಚನಗಳನ್ನು ಓದುವವರಿಗೆ ಬಹಳ ಸಂಶಯವಾದ ಪ್ರಶ್ನೆಯಾಗುತ್ತದೆ. ಈ ಪ್ರಶ್ನೆಗೆ ವಚನಗಳಲ್ಲಿ ಮೂರು ಉತ್ತರಗಳನ್ನು ಕಾಣಬಹುದು.
ಅರಿವೇ ಗುರು
ನಿರ್ಧಾರವೇ ಗುರು
ಗುರು ಒಬ್ಬ ವ್ಯಕ್ತಿ
ಅರಿವೇ ಗುರು ಎಂದರೇನು? ಇದನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಮೊದಲು ಅರಿವು ಎಂದರೇನು? ಗುರು ಎಂದರೆ ಏನು? ಶಿಷ್ಯ ಎಂದರೇನು? ಎಂಬ ಮೂರು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕು. ಅರಿವು ಎಂಬ ಪದಕ್ಕೆ ವಚನಗಳಲ್ಲಿ ಕನಿಷ್ಠ ಮೂರು ಅರ್ಥಗಳಿವೆ. ಜಾಗೃ, ಸ್ವಪ್ನ ಮತ್ತು ಸುಷುಪ್ತಿಯಲ್ಲಿ ಉಂಟಾಗುವ ಅರಿವು.
ಮೊದಲನೇಯದು ನಾವು ಶಾಲಾ ಕಾಲೇಜುಗಳಲ್ಲಿ ಪಡೆಯುವ ಶೈಕ್ಷಣಿಕ ಶಾಸ್ತ್ರಗಳ ಅರಿವು. ಈ ಅರಿವನ್ನು ಪಂಚೇಂದ್ರಿಯಗಳ ಮೂಲಕ, ಗ್ರಂಥಗಳ ಮೂಲಕ ಅಥವಾ ಶಿಕ್ಷಕರು ಕಲಿಸುವುದರ ಮೂಲಕ ನಾವು ಜಾಗೃತಿ ಸ್ಥಿತಿಯಲ್ಲಿದ್ದಾಗ ಪಡೆಯಬಹುದು. ತರ್ಕ ಅಥವಾ ಅನುಮಾನದ ಮೂಲಕ ಉತ್ತರಗಳನ್ನು ಪಡೆಯುವ ಜ್ಞಾನ ಅಥವಾ ಅರಿವೂ ಕೂಡ ಇದೇ ಸಾಲಿಗೆ ಸೇರುತ್ತದೆ.
ಎರಡನೇಯದ್ದು ನಮ್ಮ ಚಿತ್ತ ಸ್ವಪ್ನ ಸ್ಥಿತಯಲ್ಲಿದ್ದಾಗ ಅಂದರೆ ವಸ್ತು ಮತ್ತು ಸ್ಥಿತಿಗಳನ್ನು ತಿಳಿದುಕೊಳ್ಳುವಾಗ, ಕಾರ್ಯ ನಿರ್ವಹಿಸುವಾಗ ಮತ್ತು ಸುಖದುಃಖಗಳನ್ನು ಅನುಭವಿಸುವಾಗ ನಾನು ಎನ್ನುವ ಪರೋಕ್ಷ ಅರಿವು ಇರುತ್ತದೆ. ವಸ್ತುಗಳು ಅಥವಾ ಸಾಧನಗಳ ಅರಿವು ಪರ ಪ್ರಜ್ಞೆಯಾದರೆ, ಅನುಭವವಾಗುವ ಮತ್ತು ಅನುಭವಿಸುವ ವ್ಯಕ್ತಿಯ ಅರಿವು ಸ್ವ ಪ್ರಜ್ಞೆ ಎನಿಸಿಕೊಳ್ಳುತ್ತದೆ.
ಮೂರನೇಯದ್ದು ಸುಷುಪ್ತಿ ಪ್ರಜ್ಞೆಯಲ್ಲಿದ್ದಾಗ ಅಥವಾ ಧ್ಯಾನಸ್ಥ ಸ್ಥಿತಿಯಲ್ಲಿದ್ದಾಗ ನಾನು ಎನ್ನುವ ಪ್ರಜ್ಞೆಯೂ ಕಂಡು ಬರುವುದಿಲ್ಲ ಜೊತೆಗೆ ಪರ ಪ್ರಜ್ಞೆಯ ಭಾವವೂ ಇರುವುದಿಲ್ಲ. ಇದನ್ನು ಅಲ್ಲಮ ಪ್ರಭುಗಳು ಬಹಳ ಸೊಗಸಾಗಿ “ನಾನೂ ಇಲ್ಲ ನೀನೂ ಇಲ್ಲ ಏನೇನೂ ಇಲ್ಲ” ಎಂದು ತಮ್ಮ ಒಂದು ವಚನದಲ್ಲಿ ಹೇಳಿದ್ದಾರೆ. ಇದು ಇಂದ್ರಿಯಕ್ಕತೀತವಾದ ಮತ್ತು ಅಲೌಕಿಕ ಅರಿವು. ಈ ಅರಿವನ್ನೇ ಅನುಭಾವಿಗಳು ಸತ್, ಚಿತ್, ಆನಂದ, ಶಿವನ ಪ್ರಕಾಶ, ಶೂನ್ಯತತ್ವ, ಬಯಲು ಮುಂತಾಗಿ ಹಲವಾರು ಪಾರಿಭಾಷಿಕ ಶಬ್ದಗಳಲ್ಲಿ ಕರೆಯುತ್ತಾರೆ. ಇಂಥ ಚೇತನದ ಅರಿವಾದವನಿಗೆ ಜಗತ್ತಿನ ಎಲ್ಲ ವಸ್ತುಗಳಲ್ಲಿಯೂ ನಿರಾಕಾರ ಶಿವನ ಪ್ರತಿರೂಪವನ್ನು ಕಂಡು ತನ್ನಲ್ಲಿ ಅಳವಡಿಸಿಕೊಳ್ಳುವದರ ಮೂಲಕ ಜ್ಞಾನವುಂಟಾಗುತ್ತದೆ.
ಇಂಥ ಅಂತಃಸತ್ವವಾದ ಲಿಂಗಪ್ರಜ್ಞೆಯ ಅರಿವು ಮತ್ತು ಅರಿವಿನ ಕುರುಹಾದ ಲಿಂಗದ ಕುರಿತಾಗಿಯೂ ಅಲ್ಲಮ ಪ್ರಭುಗಳು ಮಾತನಾಡತಾರೆ.
ಲಿಂಗವನರಿಯದೆ ಏನನರಿದರೂ ಫಲವಿಲ್ಲ,
ಲಿಂಗವನರಿದ ಬಳಿಕ ಮತ್ತೇನನರಿದಡೆಯೂ ಫಲವಿಲ್ಲ.
ಸರ್ವಕಾರಣ ಲಿಂಗವಾಗಿ,
ಲಿಂಗವನೆ ಅರಿದರಿದು ಆ ಲಿಂಗ ಸಂಗವನೇ ಮಾಡುವೆ.
ಸಂಗಸುಖದೊಳು ಓಲಾಡುವೆ ಗುಹೇಶ್ವರಾ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-277 / ವಚನ ಸಂಖ್ಯೆ-1483)
ಎಂದು ಲಿಂಗವನರಿದ ಬಳಿಕ ಸಿಗುವ ಪರಮಾನಂದವು ಶಾಶ್ವತವಾದ ಸುಖ. ಆ ಸುಖದ ಅಮೃತವನುಂಡ ಬಳಿಕ ಏನೂ ಬೇಡ. ಅವೆಲ್ಲವೂ ಲಿಂಗಮಯ. ಲಿಂಗದತ್ತ ಸಾಗುವ ನಿರಂತರ ಪಯಣ ಕೊನೆಗೆ ಲಿಂಗವೇ ಆಗುವ ಪ್ರಜ್ಞೆಯೇ ಅರಿವು. ಗುರು-ಶಿಷ್ಯ-ಲಿಂಗ ಈ ಮೂರರ ಸಂಬಂಧವನ್ನು ಅಲೌಕಿಕವಾಗಿ ಚಿಂತನೆ ಮಾಡಿದರೆ ಭಿನ್ನ-ಭೇದಗಳಿಲ್ಲದ ಅಖಂಡ ಸತ್ಯವಾದ ಪರವಸ್ತು. ಈ ಪರಮ ಮೂಲ ಸತ್ಯವೇ ಗುರು ಮತ್ತು ಶಿಷ್ಯ. ಇದನ್ನರಿತ ಇಬ್ಬರೂ ಲಿಂಗವಾಗುತ್ತಾರೆ. ಲಿಂಗವು ಮನಸ್ಸನ್ನು ಆವರಿಸಿ ಪ್ರಾಣಲಿಂಗವಾಗುತ್ತದೆ. ಅಂತಿಮವಾಗಿ ಭಾವಲಿಂಗವೆನಿಸುತ್ತದೆ. ಆಗ ದೇಹ, ಮನಸ್ಸು ಮತ್ತು ಜೀವಭಾವಗಳು ಬಯಲಿನಲ್ಲಿ ಬಯಲಾಗುತ್ತವೆ. ಉಳಿಯುವುದು ಲಿಂಗವನ್ನು ಕೊಟ್ಟ ಗುರುವೂ ಅಲ್ಲಾ ಅದನ್ನು ಸ್ವೀಕರಿಸಿದ ಶಿಷ್ಯನೂ ಅಲ್ಲಾ. ಅವರಿಬ್ಬರನ್ನೂ ಕೂಡಿಸಿದ ಲಿಂಗವೂ ಅಲ್ಲಾ. ಅದು ಅರಿವೆಂಬ ತತ್ವ. ಏನೂ ಎನೂ ಇಲ್ಲದ ಶೂನ್ಯಸ್ಥಿತಿ ಅಥವಾ ಬಯಲಿನ ತತ್ವ.
ಮನಃಶಾಸ್ತ್ರದಲ್ಲಿ ಅಥವಾ Psychology ಯಲ್ಲಿ ಈ ಅರಿವಿಗೆ ಅಥವಾ ಅಂತರಂಗದ ಜಾಗೃತಿಗೆ ಇದಕ್ಕೆ ದೊಡ್ಡ ದೊಡ್ಡ ವ್ಯಾಖ್ಯಾನಗಳನ್ನು ಅನೇಕ ವಿಜ್ಞಾನಿಗಳು ನೀಡಿದ್ದಾರೆ. ಅವರಲ್ಲಿ ಜರ್ಮನಿಯ ಫ್ರಾನ್ಸ್ ಬ್ರೆಂಟಾನೋ, ಆಸ್ಟ್ರಿಯಾದ ಸಿಗ್ಮಂಡ್ ಫ್ರಾಯ್ಡ್, ಅಮೇರಿಕಾದ ಅಬ್ರಹಾಮ್ ಮಾಸ್ಲೋವ್, ಅಮೇರಿಕಾದ ಬಿ ಎಫ್ ಸ್ಕಿನ್ನರ್, ಅಮೇರಿಕಾದ ಮೇರಿ ಐನ್ಸವರ್ಥ್, ಸ್ವಿಟ್ಝರ್ಲಂಡಿನ ಕಾರ್ಲ್ ಜಂಗ್, ಜರ್ಮನಿಯ ಎರಿಕ್ ಎರಿಕ್ಸನ್, ಇಂಗ್ಲಂಡಿನ ಎಡ್ವರ್ಡ್ ಟಿಚ್ನರ್ ಮುಂತಾದವರು ಅತ್ಯಂತ ಸುಪ್ರಸಿದ್ಧ ಮನಃಶಾಸ್ತ್ರಜ್ಞರು.
ಜರ್ಮನಿಯ ಮನಃಶಾಸ್ತ್ರಜ್ಞ ಫ್ರಾನ್ಸ್ ಬ್ರೆಂಟಾನೋ ತನ್ನ ಪುಸ್ತಕ Descriptive Psychology ನಲ್ಲಿ ಹೇಳತಾನೆ:
o Inner observation was not possible because our phenomena are part of the flow of experienced events; therefore, we can only study phenomena the way we see them with our inner perception.
o ಅಂತರಂಗ ಮತ್ತು ಬಹಿರಂಗದ ಅರಿವಿನ ಕುರಿತು ಫ್ರಾನ್ಸ್ ಬ್ರೆಂಟಾನೋ ಮಾತನಾಡತಾನೆ.
o ಅವನ ಮತ್ತೊಂದು ಸುಪ್ರಸಿದ್ಧ ಸಾಲುಗಳು ಅಂದರೆ “Awareness of Lacking something is human psychology. ಅದನ್ನೇ ಹಿಂದಿಯಲ್ಲಿ “ದುನಿಯಾ ಜಿಸೆ ಕೆಹತೇ ಹೈ ಜಾದೂ ಕಾ ಖಿಲೋನಾ ಜೋ ಮಿಲಾ ವೋ ಮಿಟ್ಟೀ ಹೈ ಜೋ ನಹೀ ಮಿಲಾ ವೋ ಸೋನಾ ಹೈ.” ನಾವೆಲ್ಲಾ ನಮ್ಮ ಕೈಗೆ ಸಿಗದೇ ಇರೋದಕ್ಕಾಗಿ ಹೋರಾಟ ಮಾಡುತ್ತೇವೆ. ಇದ್ದದ್ದನ್ನು ಕಾಪಾಡಿಕೊಳ್ಳುವಲ್ಲಿ ಎಡವುತ್ತೇವೆ. ಇದು ಎಲ್ಲ ಸಾಮಾನ್ಯ ಮನುಷ್ಯರ ಒಂದು ಮನಃಸ್ಥಿತಿ.
ಅಲ್ಲಮ ಪ್ರಭುಗಳ ಒಂದು ವಚನ ಈ ಅಂತರಂಗ ಮತ್ತು ಬಹಿರಂಗದ ಕುರಿತು ವಿಶ್ಲೇಷಣೆ ಮಾಡುತ್ತದೆ.
ನಿಮ್ಮಲ್ಲಿ ನೀವು ತಿಳಿದು ನೋಡಿದರೆ ಅನ್ಯವಿಲ್ಲ ಕಾಣಿರಣ್ಣಾ.
ಅರಿವು ನಿಮ್ಮಲ್ಲಿಯೆ ತದ್ಗತವಾಗಿಯದೆ.
ಅನ್ಯ ಭಾವವ ನೆನೆಯದೆ ತನ್ನೊಳಗೆ ತಾನೆಚ್ಚರಬಲ್ಲಡೆ
ತನ್ನಲ್ಲಿಯೆ ತನ್ಮಯವು ಗುಹೇಶ್ವರಲಿಂಗವು.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-167 / ವಚನ ಸಂಖ್ಯೆ-376)
ನಾನು ಯಾರು? ಎನ್ನುವ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೋದಂತೆ ಅಂತರಂಗದ ದಾರಿಗೆ ಬಂದು ನಿಲ್ಲುತ್ತೇವೆ. ನಮ್ಮ ಮನವನ್ನು ವಿವೇಕದ ದೃಷ್ಟಿಯಿಂದ ಶೋಧಿಸಿ ತಿಳಿದಾಗ ಗುಹೇಶ್ವರನೆಂಬ ಲಿಂಗವು ಭಿನ್ನವಾಗಿರದೇ ತನ್ನಲ್ಲಿಯೇ ಅಡಗಿರುವುದು ಕಂಡುಬರುತ್ತದೆ. ಬಹಿರಂಗದ ಮಾಯೆಗಳನ್ನು ಅಪ್ಪಿಕೊಂಡಾಗ ಅಥವಾ ಬಹಿರಂಗದ ಆಚರಣೆಗಳು ದಾರಿ ತಪ್ಪಿದಾಗ ಮನಃಶಾಂತಿ ಕಲಕಿ ಮಾನವ ಸಮಾಜದಲ್ಲಿ ನಿಕೃಷ್ಠ ಸ್ಥಾನ ತಲುಪುತ್ತಾನೆ. ನಿರ್ಮಲವಾದ ಮನಸ್ಸು ಅರಿವಿನ ಪ್ರಜ್ಞಾದೃಷಿಯಿಂದ ಅರಳಬೇಕು. ಇದುವೇ ಗುಹೇಶ್ವರನೆಂಬ ಲಿಂಗದ ಅರಿವಿನ ಕಲ್ಪನೆ ಎನ್ನುವುದುನ್ನು ಅಲ್ಲಮರು ನಿರೂಪಣೆ ಮಾಡುತ್ತಾರೆ, ಈ ತತ್ವ ಸಿದ್ಧಾಂತವನ್ನೇ ಫ್ರಾನ್ಸ್ ಬ್ರೆಂಟಾನೋ ತಿಳಿಸಿದ್ದಾನೆ.
ಅಲ್ಲಮ ಪ್ರಭುಗಳ ಮತ್ತೊಂದು ವಚನ ಈ ಸಿದ್ಧಾಂತವನ್ನು ಸುಂದರವಾಗಿ ಚಿತ್ರಣ ಮಾಡುತ್ತದೆ.
ಒಳಗೆ ತೊಳೆಯಲರಿಯದೆ
ಹೊರಗೆ ತೊಳೆದು ಕುಡಿವುತಿರ್ದರಯ್ಯಾ,
ಪಾದೋದಕ ಪ್ರಸಾದವನರಿಯದೆ.
ಬಂದ ಬಟ್ಟೆಯಲ್ಲಿ ಮುಳುಗುತ್ತೈದಾರೆ ಗುಹೇಶ್ವರಾ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-151 / ವಚನ ಸಂಖ್ಯೆ-161)
ಅಂತರಂಗದಲ್ಲಿ ಆವರಿಸಿರುವ ಮಲೀನತೆಯ ಬಗ್ಗೆ ತಮಗೇ ಗೊತ್ತಿಲ್ಲದಿರುವುದು ಅಜ್ಞಾನ. ಬರೀ ಬಹಿರಂಗದ ಮಲೀನತೆಯನ್ನು ತೊಳೆದರೇ ಏನೂ ಫಲವಿಲ್ಲ. ಅಂತರಂಗದಲ್ಲಿ ಮನಸ್ಸು ಅಥವಾ ಅರಿವು ಪಕ್ವವಾಗಬೇಕು. ಪಾದೋದಕ-ಪ್ರಸಾದಗಳೆಂದರೆ ನಮ್ಮಲ್ಲಿಯೇ ಅಡಗಿರುವ ತತ್ವಗಳು. ಇವು ಬಾಹ್ಯಾಡಂಬರದ ಕುರುಹುಗಳಲ್ಲ ಎನ್ನುವುದನ್ನು ಅಲ್ಲಮ ಪ್ರಭುಗಳು ಇಲ್ಲಿ ಚಿಂತನೆ ಮಾಡಿದ್ದಾರೆ.
ಆಸ್ಟ್ರಿಯಾದ ಸಿಗ್ಮಂಡ್ ಫ್ರಾಯ್ಡ್ ತನ್ನ Introduction to Psycho Analysis ನಲ್ಲಿ ಬರೀತಾನೆ:
o The mind is like an iceberg; it floats with one-seventh (@15%) of its bulk above water.
o ಎಲ್ಲರ ಅರಿವು ಅಥವಾ ಜ್ಞಾನವೆಲ್ಲವೂ 85% ರಷ್ಟು ಅಂತರಂಗದ ಅರಿವಿನ ಜ್ಞಾನ”.
ಆಧುನಿಕ ಪ್ರಪಂಚ ಕಂಡ ಅದ್ಭುತ ಮನೋಶಾಸ್ತ್ರಜ್ಞ ಸಿಗ್ಮಂಡ್ ಫ್ರೈಡ್. ಅರಿವಿನ ಕುರುಹು ಬಹಿರಂಗದಲ್ಲಿ ಕಾಣುವುದು ಕೇವಲ 15% ಅಂತಾ ಹೇಳತಾನೆ. ಇದನ್ನೇ ಶರಣೆ ಮುಕ್ತಾಯಕ್ಕ ತಮ್ಮ ಒಂದು ವಚನದಲ್ಲಿ ನಿರೂಪಣೆ ಮಾಡಿದ್ದಾರೆ.
ತನ್ನ ತಾನರಿದವಂಗೆ ಅರಿವೆ ಗುರು.
ಅರಿವರತು ಮರಹು ನಷ್ಟವಾದಲ್ಲಿ, ದೃಷ್ಟನಷ್ಟವೆ ಗುರು.
ದೃಷ್ಟನಷ್ಟವೆ ಗುರು ತಾನಾದಲ್ಲಿ, ಮುಟ್ಟಿ ತೋರಿದವರಿಲ್ಲದಡೇನು?
ಸಹಜವ ನೆಲೆಗೊಳಿಸುವ ನಿರ್ಣಯ ನಿಷ್ಪತ್ತಿಯೆ ಗುರು ನೋಡಾ,
ಗುರು ತಾನಾದಡೂ ಗುರುವಿಡಿದಿರಬೇಕು ಎನ್ನ ಅಜಗಣ್ಣನಂತೆ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-901 / ವಚನ ಸಂಖ್ಯೆ-1113)
ದೃಷ್ಟನಷ್ಟವೇ ಗುರು ಎಂದು ಲಿಂಗಾಂಗ ಸಾಮರಸ್ಯದ ಅನುಭವ ಬರಬೇಕಾದರ ಗುರು ಎನ್ನುವ ತತ್ವ ಬೇಕೆ ಬೇಕೆನ್ನುವುದು ಮುಕ್ತಾಯಕ್ಕನವರ ಅಚಲವಾದ ವಿಶ್ವಾಸ. ಅಲ್ಲಮ ಪ್ರಭುಗಳ ಅದ್ವೈತ ಸಿದ್ಧಾಂತದ ಹಿನ್ನೆಲೆಯಲ್ಲಿ ಗುರು_ಶಿಷ್ಯರ ಸಾಮರಸ್ಯವನ್ನು ಒಪ್ಪಿಕೊಂಡರೂ ಅಜಗಣ್ಣನಂತ ಗುರು ಬೇಕು ಎನ್ನುವುದು ಅವಳ ವಾದ. ಕಣ್ಣಿಗೆ ಬಟ್ಟೆ ಕಟ್ಟಿ ಜ್ಯೋತಿಯನ್ನು ನೋಡು ಅಂದರೆ ಹೇಗೆ ಕಾಣುತ್ತದೆ. ಸಮರ್ಥ ಗುರು ಕಣ್ಣಿಗೆ ಕಟ್ಟಿದ ಅಜ್ಞಾನವೆಂಬ ಬಟ್ಟೆಯನ್ನು ಕಳಚಿದರೆ ಮಾತ್ರ ಜ್ಞಾನ ಪ್ರಕಾಶ ಗೋಚರಿಸುತ್ತದೆ. ನಾನೇ ಗುರುವಾಗಿದ್ದರೂ ಕೂಡ ನನ್ನ ಅಂತರಂಗದಲ್ಲಿ ಸಮರಸವಾಗಿರುವ ಶಿಷ್ಯನ ಅನುಭಾವದ ಎಚ್ಚರ ನನ್ನಲ್ಲಿ ಇರಬೇಕು. ನನ್ನ ಅರಿವನ್ನು ತನ್ನ ಅರಿವಿನೊಂದಿಗೆ ಸೇರಿಸಿದ ಅಂತರಂಗದ ಮತ್ತು ಬಹಿರಂಗದ ಗುರು ಅಜಗಣ್ಣನು ನನ್ನ ಅರಿವನ್ನು ಸಾಕಾರಗೊಳಿಸಲು ಸಾಧ್ಯ ಅಂತಾರೆ ಮುಕ್ತಾಯಕ್ಕನವರು.
ಅಮೇರಿಕಾದ ಅಬ್ರಹಾಮ್ ಮಾಸ್ಲೋವ್ ತನ್ನ ಪುಸ್ತಕ A Theory of Human Motivation ನಲ್ಲಿ ಹೇಳತಾನೆ:
o What is necessary to change a person is to change his awareness of himself.
o ಒಬ್ಬ ಮನುಷ್ಯನನ್ನು ಪರಿವರ್ತನೆಗೊಳಿಸಬೇಕಾದರೆ ಅವನ ಅಂತರಂಗವನ್ನು ಶುದ್ಧಿಗೊಳಿಸಬೇಕು ಅಂತ.
ಚಿನ್ಮಯಜ್ಞಾನಿ ಚನ್ನಬಸವಣ್ಣನವರ ಒಂದು ವಚನ ಅಂತರಂಗದ ಜ್ಞಾನದ ಮತ್ತು ಶುಚಿಯ ಕುರಿತು ಮಾತನಾಡುತ್ತದೆ.
ಅರಿವಿನೆಡೆಯನರಿದೆಹೆನೆಂದರೆ ಅರಿವು ಮರಹಿಂಗೊಳಗಾಯಿತ್ತಾಗಿ,
ಆ ಅರಿವಿಂದ ಅರಿದೆವೆಂಬ ಬರಿಜ್ಞಾನಿಯ ಮಾತ ಕೇಳಲಾಗದು,
ಭಾವದಿಂದ ಭಾವಿಸಿದರೆ ಭಾವ ಭ್ರಾಂತಿಗೊಳಗಾಯಿತ್ತಾಗಿ
ಭಾವದಿಂದ ಭಾವಿಸಿಹೆನೆಂಬ ಭ್ರಮಿತರ ಮಾತ ಕೇಳಲಾಗದು,
ಜ್ಞಾನದಿಂದ ಅರಿದೆನೆಂದರೆ ಜ್ಞಾನ ಅಜ್ಞಾನಕ್ಕೊಳಗಾಯಿತ್ತಾಗಿ
ಜ್ಞಾನದಿಂದ ಅರಿದೆನೆಂಬ ಅಜ್ಞಾನಿಯ ಮಾತ ಕೇಳಲಾಗದು,
ಸುಜ್ಞಾನಭರಿತ ಕೂಡಲಚೆನ್ನಸಂಗಾ ನಿಮ್ಮ ಶರಣ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-361 / ವಚನ ಸಂಖ್ಯೆ-676)
ಅರಿವು ಎನ್ನುವಂತಹ ವಿಷಯವೇ ಒಂದು ಸೋಜಿಗದ ಸಂಗತಿ. ಎಲ್ಲವನ್ನೂ ನಾನು ಅರಿತಿದ್ದೇನೆ ಎನ್ನುವದು ಅಹಂಕಾರ ವಿಷಯ. ಅಹಂಭಾವವು ತಲೆಗೇರಿದಾಗ ಇಂತಹ ಭ್ರಮಿತರ ಮಾತು ಕೇಳಲಾಗದು. ಹಾಗಾಗಿ ಅರಿದಿಹೆನೆಂಬ ಅಹಂಭಾವದ ಭ್ರಾಂತಿ ನಷ್ಟವಾಗುವುದನ್ನು ಅಬ್ರಹಾಮ್ ಮಾಸ್ಲೋವ್ ನ ತತ್ವವೂ ಕೂಡ ನಿರೂಪಣೆ ಮಾಡುತ್ತದೆ.
ಸ್ವಿಟ್ಝರ್ಲಂಡಿನ ಕಾರ್ಲ್ ಜಂಗ್ ತನ್ನ ಪುಸ್ತಕ Modern Man in Search of a Soul ನಲ್ಲಿ ಬರೀತಾನೆ:
o Until you make the unconscious conscious, it will direct your life and you will call it fate.
o ಅಜ್ಞಾನವನ್ನು ಅಂತರಂಗದ ಅರಿವನ್ನು ಅರಿವಿನ ಮೂಲಕ ಜಾಗೃತಗೊಳಿಸಬೇಕು. ಅದು ನಿಮ್ಮನ್ನು ಸರಿದಾರಿಗೆ ಕೊಂಡೊಯ್ಯುತ್ತದೆ.
ಕಾರ್ಲ್ ಜಂಗ್ ನ ಈ ಅಂತರಂಗದ ಅರಿವಿನ ಜಾಗೃತಿಯನ್ನು ಕುರಿತು ಅಲ್ಲಮ ಪ್ರಭುಗಳು ಅತ್ಯಂತ ಮಾರ್ಮಿಕವಾಗಿ ಒಂದು ವಚನದಲ್ಲಿ ಹೇಳುತ್ತಾರೆ.
ತಾನಿರ್ದು ತನ್ನನರಿಯದೆ ಇನ್ನೆಂದಿಗೆ ಶರಣನಪ್ಪನಯ್ಯಾ?
ಪವನಸ್ಥಾನವರಿತ ಬಳಿಕ, ಬಂದು ಬಂದು ಸುಳಿಯಲಿಲ್ಲ.
ಇದರಂತುವನಾರು ಬಲ್ಲರು ಗುಹೇಶ್ವರಾ-ನಿಮ್ಮ ಶರಣನಲ್ಲದೆ?
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-183 / ವಚನ ಸಂಖ್ಯೆ-587)
ಪವನ ಎನ್ನುವ ಶಬ್ದವನ್ನು ಬಹಳ ಸೂಕ್ಷ್ಮತೆಯಿಂದ ಅಲ್ಲಮ ಪ್ರಭುಗಳು ಇಲ್ಲಿ ಬಳಸಿದ್ದಾರೆ. ಇದು ಕರಣ ಚತುಷ್ಟಯಂಗಳು, ಅರಿಷಡ್ವರ್ಗಗಳು ಅಷ್ಟಮದಗಳಿಗೆ ಪರ್ಯಾಯವಾಗಿ ವಚನ ಸಾಹಿತ್ಯದಲ್ಲಿ ಬಳಕೆಯಾಗುತ್ತದೆ. ಇವೆಲ್ಲವೂ ಮನುಷ್ಯನೇ ಸೃಷ್ಟಿಸಿಕೊಂಡಿರುವ ಮಾಯೆಗಳು. ಈ ಎಲ್ಲ ಮಾಯೆಗಳೂ ಕೂಡ ಕಣ್ಣಿಗೆ ಕಾಣುವ ತತ್ವಗಳಲ್ಲ. ನಮ್ಮಲ್ಲೇ ಅಡಗಿರುವ ಮಾಯೆಗಳು. ಇವುಗಳನ್ನು ತೊರೆದಾಗ ಮಾತ್ರ ಅರಿವನ್ನು ಪಡೆಯಲು ಸಾಧ್ಯ ಎನ್ನುವುದನ್ನು ಅಲ್ಲಮ ಪ್ರಭುಗಳು ತಿಳಿಸಿದ್ದಾರೆ. ಇದನ್ನೆ ಕಾರ್ಲ್ ಜಂಗ್ ಕೂಡ ನಿರೂಪಣೆ ಮಾಡುತ್ತಾನೆ.
ಜರ್ಮನಿಯ ಎರಿಕ್ ಎರಿಕ್ಸನ್ ತನ್ನ ಪುಸ್ತಕ A Way of Looking at Things ನಲ್ಲಿ ಹೇಳತಾನೆ:
o The more you know yourself, the more patience you have for what you see in others.
o ನಿನ್ನನ್ನು ನೀನು ಅರಿತಾಗ ನಿನ್ನಲ್ಲಿ ಸೂಕ್ಷ್ಮತೆ, ಸಂವೇದನೆ ಮತ್ತು ತಾಳ್ಮೆ ಬೆಳೆಯುತ್ತದೆ. ಬೇರೆಯವರೊಂದಿಗೆ ವ್ಯವಹರಿಸುವಾಗ ಈ ತತ್ವಗಳು ನಿನ್ನ ವ್ಯಕ್ತಿತ್ವಕ್ಕೆ ಮೆರಗನ್ನು ನೀಡುತ್ತವೆ. ಇದು ಅರಿವೇ ಗುರು ಎನ್ನುವುದಕ್ಕೆ ಅತ್ಯಂತ ಸೂಕ್ತ ವಿಚಾರ.
ಬಸವಣ್ಣನವರು “ಭಕ್ತಿ ಸುಭಾಷೆಯ ನುಡಿಯ ನುಡಿವೆ” ಎನ್ನುವ ವಚನದಲ್ಲಿ ಈ ಸೂಕ್ಷ್ಮತೆಗಳನ್ನು ಬಿಂಬಿದ್ದಾರೆ.
ಭಕ್ತಿ ಸುಭಾಷೆಯ ನುಡಿಯ ನುಡಿವೆ, ನುಡಿದಂತೆ ನಡೆವೆ,
ನಡೆಯೊಳಗೆ ನುಡಿಯ ಪೂರೈಸುವೆ,
ಮೇಲೆ ತೂಗುವ ತ್ರಾಸು ಕಟ್ಟಳೆ ನಿಮ್ಮ ಕೈಯಲ್ಲಿ.
ಒಂದು ಜವೆ ಕೊರತೆಯಾದಡೆ
ಎನ್ನನದ್ದಿ ನೀನೆದ್ದು ಹೋಗು, ಕೂಡಲಸಂಗಮದೇವಾ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-43 / ವಚನ ಸಂಖ್ಯೆ-441)
“ಭಕ್ತಿ ಸುಭಾಷೆಯ” ಅಂತ ಹೇಳತಾರೆ ಬಸವಣ್ಣನವರು. ಸುಭಾಷೆ ಅನ್ನುವ ಅರ್ಥದಲ್ಲಿ. ಭಕ್ತಿ ಸುಭಾಷೆಯ ನುಡಿಯ ನುಡಿವೆ. ನುಡಿದಂತೆ ನಡೆವೆ. ಇದು ಸೂಕ್ಷ್ಮತೆ ಎನ್ನುವುದನ್ನು ಅವರ ವಚನದಲ್ಲಿ ಗಮನಿಸಬಹುದು, ಭಕ್ತಿ ಸುಭಾಷೆಯ ನುಡಿಯ ನುಡಿವೆ, ನುಡಿದಂತೆ ನಡೆವೆ, ನಡೆಯೊಳಗೆ ನುಡಿಯ ಪೂರೈಸುವೆ. ಇದು ಬೇರೆಯವರ ಜೊತೆಗೆ ವ್ಯವಹರಿಸುವ ಭಾಷೆ. ನಡೆಯೊಳಗೆ ನನ್ನ ನುಡಿಯನ್ನ ಪೂರೈಸುವೆ ಅಥವಾ ನಡೆ ನುಡಿ ಒಂದಾಗಿರುವೆ ಅಂತ ಹೇಳಿ ಮಾತು ಕೊಡೋದು ಅಷ್ಟೇ ಅಲ್ಲಾ ನಡೆಯೋದು. ಇದು ಬರೀ ಹೇಳಿಕೆಯಲ್ಲಾ. ಮೇಲೆ ತೂಗುವ ತ್ರಾಸು ಕಟ್ಟಳೆ ನಿಮ್ಮ ಕೈಯಲ್ಲಿ. ಈ ತ್ರಾಸು ಕಟ್ಟಳೆ ತಕ್ಕಡಿ ಅಥವಾ ದಂಡ ಅಂತೀವಲ್ಲಾ ಅದನ್ನು ನಿನ್ನ ಕೈಯಲ್ಲಿ ಹಿಡಿದುಕೋ. ನಾನು ಹೇಳಿದ ಮಾತಿನಲ್ಲಿ ಒಂದು ಜವೆ ವ್ಯತ್ಯಾಸವಾದರೂ ಎನ್ನನದ್ದಿ ನೀನೆದ್ದು ಹೋಗಾ. ನನ್ನನ್ನ ಮುಗಿಸಿ ಬಿಡು ನೀನು ಹೋಗು. ಇಷ್ಟು ಪ್ರಮಾಣಬದ್ಧವಾಗಿ ಇಷ್ಟು ಆತ್ಮ ಸ್ಥೈರ್ಯದಿಂದ ಹೇಳುವ ಶಕ್ತಿ ಬಸವಣ್ಣನವರಲ್ಲಿ ಇತ್ತಲ್ಲಾ ಅದು ಇವತ್ತು ಎಷ್ಟು ಜನರಿಗೆ ಇದೆ ಎನ್ನುವ ಅರ್ಥದಲ್ಲಿ ನಾವಿವತ್ತು ಇದನ್ನ ಕೇಳಬೇಕು. ಬಸವಣ್ಣನವರು ಪ್ರಸ್ತುತ ಆಗೋದು ಈ ಕಾರಣಕ್ಕಾಗಿ. ನುಡಿದಂತೆ ನಡೆಯಬೇಕು. ಅದು ಭಕ್ತಿ ಸುಭಾಷೆ ಇರಬೇಕು. ಅದು ಬರೀ ಭಾಷೆ ಆಗಬಾರದು. ನಡೆ ಕೂಡ ಆಗಬೇಕು ಅನ್ನೋ ಅರ್ಥದಲ್ಲಿ ಆ ಮಾತನ್ನು ಕೇಳಬೇಕು.
ಮನಸ್ಸನ್ನು ಅತ್ಯಂತ ಮನೋಜ್ಞವಾಗಿ ಮನಃಶಾಸ್ತ್ರದ ಮೂಲಕ ವಿವರಣೆ ನೀಡಿದ ಇಂಗ್ಲಂಡಿನ ಎಡ್ವರ್ಡ್ ಟಿಚ್ನರ್ (1867-1927) ಒಬ್ಬ ಶ್ರೇಷ್ಠ ಮನೋವಿಜ್ಞಾನಿ. ಮನೋ ವಿಜ್ಞಾನಕ್ಕೆ 1909 -1910 ರಲ್ಲಿ ಈ ಹೊಸ ವೈಜ್ಞಾನಿಕ ಸಂವಿಧಾನದ ಅಗತ್ಯವನ್ನೂ ಸಾಧ್ಯತೆಯನ್ನೂ ವಿವರಿಸಿ ಮನಶ್ಯಾಸ್ತ್ರದ ಮೇಲೆ ಗ್ರಂಥವೊಂದನ್ನು ಸಿದ್ಧಪಡಿಸಿದ. ಈತ ಶುದ್ಧ ಅಂತಃಸಮೀಕ್ಷೆಯ ಸಂವಿಧಾನದ ಮೇಲೆ ಸಂಶೋಧನೆಗಳನ್ನು ನಡೆಸಿದ್ದಾನೆ. ಮನುಷ್ಯನ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದು ಇವನ ಸಂಶೋಧನೆಗಳ ಉದ್ದೇಶ. ಪ್ರಾಯೋಗಿಕ ಮನಶ್ಯಾಸ್ತ್ರದ ಮೇಲೆ ಶಿಕ್ಷಕರಿಗೂ ವಿದ್ಯಾರ್ಥಿಗಳಿಗೂ ಉಪಯೋಗವಾಗುವಂತೆ ಗ್ರಂಥಗಳನ್ನೂ ಹಾಗೂ ಕೈಪಿಡಿಗಳನ್ನೂ ಈತ ಸಿದ್ಧಪಡಿಸಿದ. ಇವನ ಗ್ರಂಥಗಳಲ್ಲಿ ಮುಖ್ಯವಾದವು ಸೈಕಾಲಜಿ ಆಫ್ ಫೀಲಿಂಗ್ ಅಂಡ್ ಅಟೆನ್ಷನ್ (1908), ಎಕ್ಸ್ ಪೆರಿಮೆಂಟಲ್ ಸೈಕಾಲಜಿ ಆಫ್ ಥಾಟ್ ಪ್ರೋಸೆಸಸ್ (1909), ಎ ಬಿಗಿನರ್ಸ್ ಸೈಕಾಲಜಿ (1915). ಬಹುಶಃ ಈತ ವಚನ ಸಾಹಿತ್ಯವನ್ನು ಅಭ್ಯಾಸ ಮಾಡಿದ್ದಿದ್ದರೆ ಇನ್ನೂ ಉತ್ಕೃಷ್ಟ ಚಿಂತನೆಗಳು ಬರುತ್ತಿದ್ದವೋ ಏನೋ ಅಂತ ನನಗನ್ನಿಸುತ್ತದೆ.

ಅವನು ತನ್ನ ಒಂದು ಸಂಶೋಧನೆಯಲ್ಲಿ ಬರೀತಾನೆ:
An experiment with the mind is an observation that can be repeated, isolated and varied. The more frequently you can repeat an observation, the more likely are you to see clearly what is there and to describe accurately what you have seen.
ಇದನ್ನೇ ಅಲ್ಲಮ ಪ್ರಭುಗಳು ಕೂಡ ತಮ್ಮ ಒಂದು ವಚನದಲ್ಲಿ ಹೇಳಿದ್ದಾರೆ.
ಅರಿವು ಅರಿವು ಎನುತಿಪ್ಪಿರಿ, ಅರಿವು ಸಾಮಾನ್ಯವೆ?
ಹಿಂದಣ ಹೆಜ್ಜೆಯ ನೋಡಿ ಕಂಡಲ್ಲದೆ
ನಿಂದ ಹೆಜ್ಜೆಯನರಿಯಬಾರದು.
ಮುಂದಣ ಹೆಜ್ಜೆ [ಯ] ಳಿದಲ್ಲದೆ, ಒಂದು ಪಾದ ನೆಲೆಗೊಳ್ಳದು.
ನೆಲನ ಬಿಟ್ಟು ಆಕಾಶದಲ್ಲಿ ನಿಂದು
ಮುಗಿಲೊಳಗೆ ಮಿಂಚಿದಲ್ಲದೆ ತಾನಾಗಬಾರದು.
ಗುಹೇಶ್ವರನೆಂಬುದು ಬರಿದೆ ಬಹುದೆ ಹೇಳಿರೆ?
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-175 / ವಚನ ಸಂಖ್ಯೆ-475)
ಕಣ್ಣಿಗೆ ಕಾಣುವ ಬಹಿರಂಗದ ಪ್ರಪಂಚವೆಲ್ಲವನ್ನೂ ಕೂಡ ತಿಳಿಯುವ ಅರಿವು ತನ್ನ ಮರೆಯಲ್ಲಿರುವುದನ್ನು ಸುಲಭವಾಗಿ ಅರಿಯಲಾರದು. ಅದಕ್ಕಾಗಿ “ಅರಿವು ಸಾಮಾನ್ಯವೇ?” ಅಂತಾ ಅಲ್ಲಮ ಪ್ರಭುಗಳು ಪ್ರಶ್ನಿಸುತ್ತಾರೆ. ನಿಜ ಶರಣನಿಗೆ ಮಾತ್ರ ಈ ಅರಿವು ಅರ್ಥ ಆಗುವುದು. ಆತ್ಮದ ಅರಿವು, ಆತ್ಮಾನುಭೂತಿ ಇವು ಅಸಾಮಾನ್ಯ ಸಾಧನೆಗಳು. ಸಾಮಾನ್ಯರಿಗೆ ನಿಲುಕದ ತತ್ವಗಳು. ಹಿಂದಿನ ಹೆಜ್ಜೆಗಳಲ್ಲಿ ನಮಗೆ ಸಿಕ್ಕ ಮಾಯಾ ಮೋಹಗಳ ಬಂಧನವಿರುವುದು ಸಾಮಾನ್ಯ. ಈ ಮಾಯೆಗಳನ್ನು ವಿವೇಕಚಿತ್ತದಿಂದ ಗುರುತಿಕೊಂಡು ಅವುಗಳಿಂದ ಹೊರಬರಬೇಕು. ಶಿವಪಥದಲ್ಲಿ ಶಾಂತಿ ನೆಮ್ಮದಿಗಳ ಶಿವನ ಪ್ರಕಾಶವಿದೆ. ಅಂತರಂಗದಲ್ಲಿ ಅರಿವು ಉಂಟಾದಾಗ ಮಾತ್ರ ಈಗಿನ ಹೆಜ್ಜೆಯ ಗುರುತುಗಳ ಜ್ಞಾನ ಗೋಚರವಾಗುವುದು. ಮಾಯೆಗಳೆಂಬ ಅಹಂಕಾರಗಳು ತಲೆದೊರದಿದ್ದರೆ ಅದೇ ಮುಂದಣ ಹೆಜ್ಜೆಗಳು. ಭೂಮಿಯ ಮೇಲಿರುವ ನಮಗೆ ಅರಿವು ಅಥವಾ ಜ್ಞಾನ ಅಂತರಂಗದಲ್ಲಿ ನೆಲೆಗೊಳ್ಳದಿದ್ದರೆ ಆಕಾಶಕ್ಕೆ ಏಣಿ ಹಾಕುವ ಅವಶ್ಯಕತೆಯಿಲ್ಲ. ಇಂಥ ಶಿವಪಥವನರಿಯದೆ ಏನೂ ಅರಿತರೂ ಪ್ರಯೋಜನವಿಲ್ಲ. ಆತ್ಮಭಾವ ಸ್ಥಿರಗೊಂಡು ನೆಲೆ ನಿಂತಲ್ಲಿ ಅದೇ ಆಕಾಶದಲ್ಲಿ ಮಿಂಚುವ ಚಿದಾತ್ಮಭಾವ. ಅದೇ ಅರಿವು ಹಾಗೂ ಅದೇ ಗುಹೇಶ್ವರನ ಪ್ರಥಮ ನಿಲುವು. ಅರಿವೇ ಗುರು ಎನ್ನುವ ತತ್ವ ಸಿದ್ಧಾಂತವನ್ನು ಬಿಂಬಿಸುವ ಅಲ್ಲಮ ಪ್ರಭುಗಳ ಮತ್ತೊಂದು ವಚನ ಹೀಗಿದೆ.
ತನ್ನ ತಾನರಿದೆನೆಂಬವನ ಮುನ್ನ ನುಂಗಿತ್ತು ಮಾಯೆ.
ನಿನ್ನೊಳಗೆ ಅರಿವು ಭಿನ್ನವಾಗಿರುತ್ತಿರಲು
ಮುನ್ನವೆ ನೀನು ದೂರಸ್ಥ ನೋಡಾ!
ಭಿನ್ನವಿಲ್ಲದ ಅಜ್ಞಾನವ ಭಿನ್ನವ ಮಾಡಬಲ್ಲಡೆ
ತನ್ನಲ್ಲಿ ಅರಿವು ನಿಜವಪ್ಪುದು ಗುಹೇಶ್ವರಾ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-165 / ವಚನ ಸಂಖ್ಯೆ-349)
ನನ್ನನ್ನು ನಾನು ಅರಿತೆನು ಎಂದು ಹೇಳುವಾಗ ಅರಿಯುವ ನಾನೇ ಬೇರೆ ಅರುಹಿಸಿಕೊಳ್ಳುವ ನಾನು ಬೇರೆ ಎಂಬ ಭೇದ ಭಾವ ಇರುವುದು ಕಂಡು ಬರುತ್ತದೆ. ಈ ದ್ವೈತ ಭಾವವಿರುವವನ ಒಳಗೂ ಹೊರಗೂ ಮಾಯೆಯಿರುವುದನ್ನು ಕಾಣಬಹುದು. ನಮ್ಮ ಅಂತರಂಗದಲ್ಲಿರುವ ಅಜ್ಞಾನವನ್ನು ನಿವಾರಿಸಿಕೊಂಡಾಗ ಅಲ್ಲಿ ಉಳಿಯುವುದು ನಿಜವಾದ ಅರಿವು ಹಾಗೂ ಈ ಅರಿವೇ ಗುರು ಎನ್ನುವ ತತ್ವ. ಇದು ಲಿಂಗಾಂಗ ಸಾಮರಸ್ಯವನ್ನು ಪಡೆದ ಶರಣನ ಶಾಶ್ವತ ನಿಜದ ನಿಲುವು.
ಮಾಯಾಮಲಿನ ಮನದಿಂದಗಲದೆ,
ಕಾಯದ ದಂದುಗ ಕಳೆಯಿಂದಗಲದೆ,
ಅರಿವು ಬರಿದೆ ಬಪ್ಪುದೆ? ನಿಜವು ಬರಿದೆ ಸಾಧ್ಯವಪ್ಪುದೆ?
ಮರುಳೆ, ಗುಹೇಶ್ವರಲಿಂಗವನರಿಯ ಬಲ್ಲಡೆ,
ನಿನ್ನ ನೀ ತಿಳಿದು ನೋಡಾ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-167 / ವಚನ ಸಂಖ್ಯೆ-373)
ಬಹಿರಂಗದಲ್ಲಿ ಕಂಡುಬರುವ ಮೋಹ-ಮಾಯೆಗಳೆಂಬ ಮಲೀನಗಳು ನಮ್ಮ ಮನದಿಂದ ಅಗಲದೇ ದಂದುಗ ಅಂದರೆ ಚಿಂತೆ, ಭ್ರಾಮತಿ, ವ್ಯಸನ, ಕಥೆ-ವ್ಯಥೆಗಳು ಕಳೆದುಹೋಗುವುದಿಲ್ಲ. ತನುವಿಗೆ ಅಂಟಿಕೊಂಡಿರುವ ಈ ಎಲ್ಲ ಕ್ಲೇಷಗಳನ್ನು ಕಳೆದುಕೊಳ್ಳಲೇಬೇಕು. ಅವುಗಳೆಲ್ಲವೂ ದೂರ ಸರಿದಾಗ ಅರಿವು ಎನ್ನುವ ತತ್ವ ಅರಿಯಲು ಸಾಧ್ಯ ಎನ್ನುವುದು ಅಲ್ಲಮ ಪ್ರಭುಗಳ ನಿರೂಪ.
ನಾನು ಎಂಬುದು ಕೇವಲ ತನುವಿಗೆ ಸೀಮಿತವೇ? ದೇಹಕ್ಕೆ ಹಲವಾರು ನೋವುಗಳಿವೆ. ಅಂದರೆ ಇಂತಿಷ್ಟು ವರ್ಷಗಳ ಕಾಲಮಿತಿ ಅಂತಾ ಇದೆ. ದೇಹ ಮತ್ತು ಮನಸ್ಸುಗಳಲ್ಲಿ ಮರೆವು ಅಥವಾ ಅಜ್ಞಾನ ಹರಡಿಕೊಂಡಿದ್ದರೆ ಅರಿವು ಎಲ್ಲಿ ಬರುತ್ತದೆ? ಆ ಮರೆವು ಮಾಯೆಯ ರೂಪದಲ್ಲಿ, ನಾನು, ನನ್ನದು ಎನ್ನುವ ಅಹಂ ರೂಪದಲ್ಲಿ ದೇಹ ಕಳೆದಾಗ ಮಾತ್ರ ಅರಿವು ಮೂಡಲು ಸಾಧ್ಯ. ಈ ಅರಿವಿನ ಪ್ರಶ್ನೆ ಪ್ರಜ್ಞೆಯಲ್ಲಿ ಜಾಗೃತಗೊಂಡು ಅರಿವಿನಲ್ಲಿ ಉತ್ತರ ಪಡೆಯುತ್ತದೆ.
12 ನೇ ಶತಮಾನದಲ್ಲಿ ಕನ್ನಡ ನಾಡಿನಲ್ಲಿ ನಡೆದ ಕ್ರಾಂತಿಯು ಸಮಾಜದ ಮತ್ತು ಶರಣರ ವಿವಿಧ ಆಯಾಮಗಳಲ್ಲಿ ಪಸರಿಸಿ ಒಂದು ಸಮ ಸಮಾಜವನ್ನು ಕಟ್ಟುವಲ್ಲಿ ಯಶಸ್ವಿಯಾದ ಒಂದು ಅದ್ಭುತ ಕ್ರಾಂತಿ. ಒಂದು ಅಪೂರ್ವವಾದ ವೈಚಾರಿಕ, ಸಾಮಾಜಿಕ, ಪ್ರಗತಿಪರ (Progressive) ಚಿಂತನೆಯುಳ್ಳ ಮತ್ತು ಪರಿವರ್ತನಾತ್ಮಕ ಕ್ರಾಂತಿ (Transformational Revolution) ಗೆ ಉಗಮವಾಯಿತು. ಬಸವಾದಿ ಶರಣ ಶರಣೆಯರು ಮೌಲಿಕವಾದ (Value Based) ವೈಚಾರಿಕವಾದ (Rational), ಆಧ್ಯಾತ್ಮಿಕ (Spiritual) ಕ್ರಾಂತಿಯ ಕೇಂದ್ರ ಬಿಂದುವಾದ ಅಂತರಂಗದ ಅರಿವಿನ ಪ್ರಜ್ಞೆಯ ಮೂಲಕ ಇಂಥ ಕ್ರಾಂತಿಯನ್ನು ಹುಟ್ಟು ಹಾಕಿ ಇಲ್ಲಿಯವರೆಗೂ ನೆನಪಿನಲ್ಲಿ ಉಳಿದಿದ್ದಾರೆ.
ನಾನು ಸತ್ಯದ ಶಿವನ ಪ್ರಕಾಶವೇ ಆಗಿದ್ದೇನೆ ಎನ್ನುವ ಅರಿವನ್ನು ಮೂಡಿಸಿಕೊಳ್ಳುವುದೇ ಜ್ಞಾನ. ನಮ್ಮೊಳಗೆ ಕವಿದಿರುವ ಅಜ್ಞಾನದ ಅಂಧಕಾರವನ್ನು ಹೋಗಲಾಡಿಸಿ ತನ್ನ ಅಂತರಂಗದಲ್ಲ ಮೂಡಿದ ಬೆಳಕಿನಿಂದಲೇ ತನ್ನೊಳಗಿನ ದೈವತ್ವವನ್ನು ಕಂಡುಕೊಂಡಾಗ ಶರಣ ತಾನೇ ದೇವನಾಗುತ್ತಾನೆ. ಹಾಗಾಗಿ ಬಸವಾದಿ ಶರಣರ ಚಿಂತನೆಗಳು ಮತ್ತು ತತ್ವ ಸಿದ್ಧಾಂತಗಳು ನಮ್ಮ ಅಂತರಂಗವನ್ನು ಪ್ರವೇಶಿಸಿ ಬಾಳನ್ನು ಹಸನುಗೊಳಿಸಲಿ ಅಂತ ಹೇಳತಾ ಅವಿರಳಜ್ಞಾನಿ ಚನ್ನಬಸವಣ್ಣನವರ ಒಂದು ವಚನದ ಮೂಲಕ ಈ ಲೇಖನಕ್ಕೆ ವಿರಾಮವನ್ನು ಹೇಳುತ್ತೇನೆ.
ಜ್ಞಾನ ತನ್ನೊಳಗೆ, ಅಜ್ಞಾನ ತನ್ನೊಳಗೆ,
ಎರಡುವನರಿದ ಸಹಜ ಸುಜ್ಞಾನಿ ಸುಸಂಗಿ,
ಲಿಂಗವಶಕನಾಗಿದ್ದು ಪರಿಣಾಮಿ
ಕೂಡಲಚನ್ನಸಂಗಾ, ನಿಮ್ಮ ಶರಣ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-361 / ವಚನ ಸಂಖ್ಯೆ-680)
ಸಂಗ್ರಹ ಮತ್ತು ಲೇಖನ:
ವಿಜಯಕುಮಾರ ಕಮ್ಮಾರ.
“ಸವಿಚರಣ” ಸುಮತಿ ಶಾಲೆಯ ಹತ್ತಿರ
ಕ್ಯಾತ್ಸಂದ್ರ, ತುಮಕೂರು – 572 104
ಮೋಬೈಲ್ ನಂ : 9741 357 132
ಈ-ಮೇಲ್ : vijikammar@gmail.com
ಸಹಾಯಕ ಗ್ರಂಥಗಳು :
ಬಸವಯುಗದ ವಚನ ಮಹಾಸಂಪುಟಗಳು (1&2) : ಡಾ. ಎಮ್. ಎಮ್. ಕಲಬುರ್ಗಿ.
ವಚನಗಳಲ್ಲಿ ವಿಜ್ಞಾನ : ಡಾ. ವೀರಣ್ಣ ರಾಜೂರ, ಶ್ರೀ ಬಸವರಾಜ ಹೂಗಾರ.
ವಚನಾರ್ಥ ಚಿಂತನ : ಡಾ. ಸಿದ್ಧರಾಮ ಸ್ವಾಮಿಗಳು.
Elementary Psychology : Edward Titchener.
The Tao of Physics : Dr. Fritjof Capra.
Descriptive Psychology : Franz Brentano.
Introduction to Psycho Analysis : Sigmund Freud.
A Theory of Human Motivation : Abraham Maslow.
Modern Man in Search of a Soul : Carl Jung.
A Way of Looking at Things : Erik Erikson.