“ಪರಮ ಪೂಜ್ಯ ಶ್ರೀತಿಂತಿಣಿ ಮೌನೇಶ್ವರರ ವಚನಗಳಲ್ಲಿ ಶರಣ ತತ್ವ”


ಪರಮ ಕಲ್ಯಾಣಿ ನಿನ್ನ ಅರುವಿನ ಒಡಲೊಳಗೆ
ಪರಬ್ರಹ್ಮಮೂರ್ತಿ ಜನಿಸಿದ, ಅವರಿಬ್ಬರ
ಶರೀರ ಬೇರೆ ಸವಿಯೊಂದೆ, ಬಸವಣ್ಣ.
(ತಿಂತಿಣಿ ಮೌನೇಶ್ವರರ ವಚನಗಳು-ಡಾ. ವೀರೇಶ ಬಡಿಗೇರ/2016/ಪುಟ. 161/ವ.ಸಂ. 374)

ನನಗೆ ಬಸವ ತತ್ವ ಮತ್ತು ವಚನ ಸಾಹಿತ್ಯದ ಶಿವನ ಪ್ರಕಾಶವನ್ನು ತೋರಿಸಿದ್ದ ಶ್ರೀ ಗದಗ ತೋಂಟದಾರ್ಯ ಮಠದ ಲಿಂ. ಡಾ. ಶ್ರೀ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಮತ್ತು ನನ್ನ ಎಲ್ಲ ವಿದೇಶ ಪ್ರವಾಸಗಳಿಗೂ ಬೆನ್ನು ತಟ್ಟಿ ಆಶೀರ್ವದಿಸಿದ್ದ ಸಿದ್ಧಗಂಗೆಯ ಸಿದ್ಧಪುರುಷ ಲಿಂ. ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ಪಾದಕಮಲಗಳನ್ನು ಮನ ಮಂದಿರದಲ್ಲಿ ಪ್ರತಿಷ್ಠಾಪಿಸುತ್ತಾ … …

ವಚನ ಸಾಹಿತ್ಯ, ಸೃಜನಶೀಲ ಸಾಹಿತ್ಯ, ದಾಸ ಸಾಹಿತ್ಯ, ತತ್ವಪದ ಸಾಹಿತ್ಯ ಹೀಗೆ ಹಲವಾರು ನೆಲೆಗಳಲ್ಲಿ ಅಧ್ಯಯನ ಇಂದಿನ ಪೀಳಿಗೆಯ ಬಹಳಷ್ಟು ವಿದ್ವಾಂಸರುಗಳನ್ನು, ವಿದ್ಯಾರ್ಥಿಗಳನ್ನು ಹಾಗೂ ಲೇಖಕರನ್ನು ಆಕರ್ಷಿಸಿದ್ದು ಒಂದು ಉತ್ತಮ ಬೆಳವಣಿಗೆ. ಈ ನಿಟ್ಟಿನಲ್ಲಿ “ಹೇಳತೇನ ಕೇಳ” ಎನ್ನುವಂತಹ ಕಾರ್ಯಕ್ರಮವನ್ನು ರೂಪಿಸಿ 203 ವಾರಗಳನ್ನು ಪೂರೈಸಿ 204 ನೇ ಕಾರ್ಯಕ್ರಮಕ್ಕೆ ಕಾಲಿಟ್ಟಿರುವುದು ಒಂದು ವಿಕ್ರಮ. ಗೌರಿಶಂಕರ ಪರ್ವತವನ್ನು ಏರುವಂಥ ಕ್ರಿಯಾಶೀಲ ಕಾರ್ಯ. ಎಲ್ಲರಿಗೂ ಒಂದು ವೇದಿಕೆಯನ್ನು ಒದಗಿಸಿ ಪ್ರೇರೇಪಿಸುವ ಸಾಹಸ ಕೆಲಸ ಶ್ಲಾಘನೀಯ. ಇಂಥ ಯಶಸ್ಸಿಗೆ ಕಾರಣೀಭೂತರಾದ ಡಾ. ವೀರೇಶ ಬಡಿಗೇರ ಸರ್‌ ಮತ್ತು ಅವರ “ಹೇಳತೇನ ಕೇಳ” ತಂಡದ ಎಲ್ಲ ಮಹನೀಯರಿಗೂ ಹೃತ್ಪೂರ್ವಕ ಅಭಿನಂದನೆಗಳು.

ಆತ್ಮೀಯ ಮಿತ್ರರಾದ ಕಲಬುರ್ಗಿಯ ಶ್ರೀ ದತ್ತಾತ್ರೇಯ ವಿಶ್ವಕರ್ಮ ಅವರು ಬರೆದ “ವಿಶ್ವಕರ್ಮ ಧರ್ಮ ಮತ್ತು ಸಂಸ್ಕೃತಿ” ಪುಸ್ತಕದ “ನನ್ನ ನಿವೇದನೆಗಳು” ಅಧ್ಯಾಯದಲ್ಲಿ ಒಂದು ಸುಂದರವಾದ ದೃಶ್ಯವನ್ನು ಕಟ್ಟಿ ಕೊಟ್ಟಿದ್ದಾರೆ.

“ಒಬ್ಬ ವ್ಯಕ್ತಿಯನ್ನು ಗೌರವ ಸ್ಥಾನದಲ್ಲಿ ನಿಲ್ಲಿಸಿ ಪೂಜಿಸಲಾಗುತ್ತಿದೆಯೆಂದರೆ ಒಂದು ಜನಾಂಗವನ್ನು ಗೌರವಿಸಿದಂತೆ. ಒಂದು ಜನಾಂಗವನ್ನು ಗೌರವಿಸಿದರೆ ಆ ಜನಾಂಗದ ಸಂಸ್ಕೃತಿಯನ್ನು ಗೌರವಿಸಿದಂತೆ”

ಇವತ್ತು ನಾವು ಪರಮ ಪೂಜ್ಯ ಶ್ರೀ ತಿಂತಿಣಿ ಮೌನೇಶ್ವರರನ್ನು ಈ ಉಪನ್ಯಾಸದ ಮೂಲಕ ಪೂಜಿಸಿ ಗೌರವಿಸುತ್ತಿದ್ದೇವೆ ಎಂದರೆ ಅದು ಇಡೀ ಜನಾಂಗವನ್ನು ಮತ್ತು ಅದರ ಸಂಸ್ಕೃತಿಯನ್ನು ಗೌರವಿಸಿದಂತೆ ಎಂದು ಹೇಳುವುದು ಸೂಕ್ತ ಅಂತ ನಾನು ಪರಿಭಾವಿಸಿದ್ದೇನೆ. ಇದು ನನಗೆ ಸಿಕ್ಕ ಗೌರವ ಮತ್ತು ಆಶೀರ್ವಾದ ಎಂದು ಭಾವಿಸುತ್ತೇನೆ.

ಬಾಲ್ಯದಿಂದಲೂ ಅಂದರೆ ಸುಮಾರು ನಾನು 12 ವರ್ಷದವನಾಗಿದ್ದಾಗಿನಿಂದ ವಚನ ಸಾಹಿತ್ಯದ ಕಡೆಗಿನ ಒಲವು ಮೂಡಿಸಿದ್ದು ಅಥವಾ ಗೀಳನ್ನು ಹಚ್ಚಿದ್ದು ಮಕ್ಕಳ ಸಾಹಿತ್ಯದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದ ನಮ್ಮ ತಂದೆ ಲಿಂ. ಶ್ರೀ ಈಶ್ವರ ಕಮ್ಮಾರ ಅವರು. ಅವರ ಪಾದ ಕಮಲಗಳನ್ನು ಮನಮಂದಿರದಲ್ಲಿ ಪ್ರತಿಷ್ಠಾಪಿಸುತ್ತಾ ಇಂದಿನ ವಿಷಯದ ಕಡೆಗೆ ಗಮನ ಹರಿಸೋಣ. *

ಶ್ರೇಣೀಕೃತ ಸಮಾಜದ ಜೊತೆ ಜೊತೆಗೆ ಸಮಾಜದಲ್ಲಿನ ಎಲ್ಲ ಸಮುದಾಯಗಳ ಸಕಾರಾತ್ಮಕ ಚೈತನ್ಯವನ್ನು ವಚನಕಾರರು, ಹರಿದಾಸರು, ತತ್ವಪದಕಾರರು, ಜಾನಪದರು ಗಟ್ಟಿಗೊಳಿಸಿದರು. ಇವರೆಲ್ಲರೂ ಆಯಾ ಕಾಲಘಟ್ಟದ ರಾಜರುಗಳ, ಅಧಿಕಾರಿಗಳ, ಜಾತಿ, ಮತ, ಪಂಥದ ಶ್ರೇಣೀಕರಣವಾದಿಗಳ ದಳ್ಳುರಿಯೆದುರು ಗ್ರಾಮೀಣ ತಳಸ್ಥರದ ಸಮುದಾಯಗಳಿಗೆ ಲೌಕಿಕವಾಗಿ, ಅಲೌಕಿಕವಾಗಿ, ಆಧ್ಯಾತ್ಮಿಕವಾಗಿ ಮನೋಬಲವನ್ನು ಹೆಚ್ಚಿಸಿದವರು. ಇವರ ಹಾಗೆಯೇ ಕನ್ನಡದ ಸಾಹಿತ್ಯ, ಪರಂಪರೆ ಮತ್ತು ಸಾಂಸ್ಕೃತಿಕ ಚಿಂತನೆಗಳನ್ನು ಶ್ರೀಮಂತಗೊಳಿಸಿದವರು 16-17 ನೇ ಶತಮಾನದಲ್ಲಿ ಬಂದ ಸಂತರು, ಅವಧೂತರು, ಆರೂಢರು, ಸೂಫಿ ಸಂತರು. ಅಂಥವರ ಸಾಲಿನಲ್ಲಿ ಪಾಂಚಾಳರ ಆರಾಧ್ಯದೈವ ಮೌನೇಶ್ವರ, ಮೋನಪ್ಪಯ್ಯ, ಮೋನಪ್ಪ ಮತ್ತಿತರ ಹೆಸರಿನಿಂದ ಪ್ರಖ್ಯಾತರಾದ ವಿಶಿಷ್ಟರು. ಏಕ ಕಾಲದಲ್ಲಿ ಸಮಕಾಲೀನ ಮತ್ತು ಇಂದಿನವರೆಗೂ ಎಲ್ಲ ಸಮುದಾಯದವರಿಂದ, ಜನಪದರಿಂದ ಹಾಗೂ ಸೂಫಿ ಪಂಥದ ಅನುಯಾಯಿಗಳಾದ ಮಹಮ್ಮದೀಯರಿಂದಲೂ ಕೂಡ ಪೂಜೆಗೊಳ್ಳುತ್ತಿರುವ ದಾರ್ಶನಿಕರು.

ಇಂದಿನ ಉಪನ್ಯಾಸದ ವಿಷಯವಾದ “ಪರಮ ಪೂಜ್ಯ ಶ್ರೀ ತಿಂತಿಣಿ ಮೌನೇಶ್ವರರ ವಚನಗಳಲ್ಲಿ ಶರಣ ತತ್ವ” ದಲ್ಲಿ ಬರುವ ಶರಣ ಎಂದರೆ ಯಾರು ಎನ್ನುವ ತತ್ವವನ್ನು ತಿಳಿದುಕೊಂಡು ಮುಂದೆ ಹೋಗೋಣ.

ಉಪಮಿಸಲಾರದ ಉಪಮಾತೀತ ಅನುಪಮ ಪರಂಜ್ಯೋತಿ ಸ್ವರೂಪವೇ ಶರಣರು. ಮಾನವರಾಗಿ ಮರ್ತ್ಯಕ್ಕೆ ಆಗಮಿಸಿ ಮಹದೇವನಾಗಿ ಮಹದಲ್ಲಿ ನಿಂದವರೇ ಶರಣರು. ಅಂತರಂಗದ ಅರಿವೇ ಗುರುವಾಗಿ, ನಡೆ-ನುಡಿ ಶುದ್ಧದಿಂದುಂಟಾದ ಆಚಾರವೇ ಲಿಂಗವಾಗಿ, ಅನುಭಾವವನ್ನೇ ಜಂಗಮವನ್ನಾಗಿಸಿಕೊಂಡವರು ಶರಣರು. ಅಂದರೆ ಸಾಧನೆಯ ಹಾದಿಯನ್ನು ಸವೆಸಿದವರೇ ಮಹದೇವನಾಗಿ ನಿಲ್ಲಲು ಸಾಧ್ಯ. ಹಾಗಾದರೆ ಆ ಸಾಧನೆಯ ಹಾದಿಯ ಕ್ರಮವನ್ನು ಈಗ ನೋಡೊಣ.

ಮೊದಲನೇಯದಾಗಿ “ಪಂಚಾಚಾರ” ಗಳೆಂಬ ಪಂಚ ಆಚಾರಗಳಾದ ಲಿಂಗಾಚಾರ (ಏಕದೇವೊಪಾಸನೆ ಜೊತೆಗೆ ತನು ಶುದ್ಧಿ), ಸದಾಚಾರ (ದಾಸೋಹಿಯಾಗಿರುವುದರ ಜೊತೆಗೆ ಮನ ಶುದ್ಧಿ), ಶಿವಾಚಾರ (ಎಲ್ಲರೂ ಸಮಾನರು ಎನ್ನುವ ಜೊತೆಗೆ ಭಾವ ಶುದ್ಧಿ), ಗಣಾಚಾರ (ಲಿಂಗಾಯತ ತತ್ವಗಳ ಪಾಲಣೆ ಪೋಷಣೆ ಮತ್ತು ರಕ್ಷಣೆ ಜೊತೆಗೆ ನಡೆ ಶುದ್ಧಿ), ಭೃತ್ಯಾಚಾರ (ಲಿಂಗಭಕ್ತರ ಸೇವೆಯ ಜೊತೆಗೆ ನುಡಿ ಶುದ್ಧಿ). ಹೀಗೆ ಪಂಚಾಚಾರಗಳು ನಡೆ ನುಡಿ ಶುದ್ಧಿಯ ಜೊತೆಗೆ ಸಾಮಾಜಿಕ ಜವಾಬ್ದಾರಿಗಳನ್ನು ತಿಳಿಸುತ್ತವೆ.

ಎರಡನೇಯದಾಗಿ “ಅಷ್ಟಾವರಣ” ಗಳು ಗುರು, ಲಿಂಗ, ಜಂಗಮ, ಪಾದೋದಕ. ಪ್ರಸಾದ, ವಿಭೂತಿ, ರುದ್ರಾಕ್ಷಿ, ಮಂತ್ರಗಳು. ತನ್ನದೇ ತನುವೆಂಬ ಅಹಂಕಾರದಿಂದ ಮೋಹ-ಮಾಯೆಗಳನ್ನು ಮೈಗೂಡಿಸಕೊಂಡು ನಾನು ಪರಶಿವನ ಚಿದಂಶವೆಂಬುದನ್ನು ಮರೆತು ಭವ ಬೀಜದೆಡೆಗೆ ಮುಖ ಮಾಡುತ್ತೇವೆ. ನಮ್ಮ ಅಜ್ಞಾನವನ್ನು ನಮ್ಮ ಭ್ರಮೆಯನ್ನು ದೂರ ಮಾಡಿ ತನುವಿನಲ್ಲಿರುವ ಅಷ್ಟಮದಗಳನ್ನು ಅಳಿಸಿ ಅಂತರಂಗದ ಅರಿವಿನ ಸಂಸ್ಕಾರವನ್ನು ನೀಡಿ ನಮ್ಮನ್ನು ಪರಿಶುದ್ಧಗೊಳಿಸುತ್ತವೆ. ಇವು ಅಂತರಂಗದ ಶುದ್ಧತೆಯ ಜೊತೆಗೆ ಬಾಹ್ಯ ಶುದ್ಧತೆಯನ್ನು ಕಲಿಸುತ್ತವೆ.

ಇನ್ನೂ ಮೂರನೇಯದಾಗಿ “ಷಟಸ್ಥಲಗಳು” ಶರಣ ಸಿದ್ಧಾಂತ ಮತ್ತು ನಡೆ-ನುಡಿಗಳು ಮತ್ತು ಭಕ್ತಿ-ಜ್ಞಾನಗಳ ಸಾಮರಸ್ಯವನ್ನು ಜೋಡಿಸುವ ತತ್ವಗಳು. ಶರಣರು ಈ ದಾರಿಯಲ್ಲಿ ನಡೆದು ತಮ್ಮ ಗುರಿಯನ್ನು ಸಾಧಿಸಿದವರು. ಶ್ರೇಣೀಕೃತ ಸಮಾಜದಲ್ಲಿದ್ದ ವರ್ಣ-ವರ್ಗ ಭೇಧಗಳನ್ನು ಮೀರಿ ಈ ತತ್ವಗಳನ್ನು ಅಪ್ಪಿಕೊಂಡರು ಮತ್ತು ಒಪ್ಪಿಕೊಂಡರು. ಷಟಸ್ಥಲಗಳು ಶರಣ ಸಿದ್ಧಾಂತದ ಅವಿಭಾಜ್ಯ ಅಂಗಗಳು ಮತ್ತು ಆತ್ಮೋನ್ನತಿಗೆ ಮಾರ್ಗದರ್ಶನ ನೀಡುತ್ತವೆ.

ಷಟಸ್ಥಲ ಸಾಧನೆಯ ಮಾರ್ಗದಲ್ಲಿ ಐದನೇಯ ಸ್ಥಲ ಶರಣ ಸ್ಥಲವಾಗಿದೆ. ತನ್ನ ಅಂತರಂಗದ ಅರಿವು ಜ್ಞಾನ ಪರಾತ್ಪರಲಿಂಗದಲ್ಲಿ ಲೀನವಾಗುವ ಸಾಧನಾ ಸ್ಥಲ. ಅಂಗವು ಲಿಂಗದೊಂದಿಗೆ ನೇರ ಸಂವಾದವನ್ನು ಮಾಡುವ ಸಾಧನೆಯ ಸ್ಥಲ. ಲಿಂಗಾಂಗ ಸಾಮರಸ್ಯದಿಂದ ಭಕ್ತನು ಭಾವಲಿಂಗದಿಂದ ನಿಃಸ್ಸಂಶಯ, ನಿರ್ಭೀತ ಮತ್ತು ಆತ್ಮವಿಶ್ವಾಸದ ಆನಂದದ ಅನುಭೂತಿಯನ್ನು ಅನುಭವಿಸುತ್ತಾನೆ. ಶರಣನು ತನ್ನ ಪಂಚೇಂದ್ರಿಯಗಳ ಮೇಲೆ ನಿಯಂತ್ರಣ ಹೊಂದಬೇಕು. ಅಷ್ಟೇ ಅಲ್ಲ ಪಂಚೇಂದ್ರಿಯ ವಿರಹಿತನಾಗಿ ಲಿಂಗತತ್ವವನ್ನು ಅಗಲದಂತಿರಬೇಕು. ದೇಹವನ್ನು ಧರಿಸಿದ್ದರೂ ನಿರ್ದೇಹಿಯಾಗಿರಬೇಕು. ನುಡಿದರೂ ನಿಶ್ಶಬ್ದವಾಗಿರಬೇಕು, ನಡೆದರೂ ನಿರ್ಗಮನಿಯಾಗಿರಬೇಕು. ಅದು ಶರಣ ತತ್ವದ ಲಕ್ಷಣ.

ಇಂಥ ಶರಣನಾಗುವ ಸಾಧನೆಯ ಮಾರ್ಗದಲ್ಲಿ ಪರಮ ಪೂಜ್ಯ ಶ್ರೀ ತಿಂತಿಣಿ ಮೌನೇಶ್ವರರು ಕೂಡ ತಮ್ಮ ಅಪ್ರತಿಮ ನಡೆ-ನುಡಿ ಸಿದ್ಧಾಂತದಿಂದ ಸಮಾಜದಲ್ಲಿ ಅಕ್ಕರೆಯ ಬೀಜಗಳನ್ನು ಬಿತ್ತಿ ಎಲ್ಲ ವರ್ಗದವರಿಗೂ ಮಾರ್ಗದರ್ಶಿಯಾದ ದಾರ್ಶನಿಕರು. ಅವರ ಒಂದು ವಚನ ಶರಣ ಹೇಗಿರಬೇಕೆಂಬುದನ್ನು ನಿರೂಪಣೆಯನ್ನು ಅದ್ಭುತವಾಗಿ ಮಾಡುತ್ತದೆ.

ತೀರ್ಥದೆಡೆ ಹರಳಯ್ಯನದು ಪ್ರಸಾದದೆಡೆ ಕಕ್ಕಯ್ಯನದು
ಭಕ್ತಿಯೆಡೆ ಬಸವಯ್ಯನದು ಲಿಂಗದೆಡೆ ನೀಲಮ್ಮನದು
ಜಂಗಮದೆಡೆ ಮಡಿವಾಳನದು ಕೀರ್ತಿಯೆಡೆ ಕಿನ್ನರಯ್ಯನದು
ಘನದೆಡೆ ಘಟ್ಟಿವಾಳಯ್ಯನದು ಶಬ್ದದೆಡೆ ಸಂಗಯ್ಯನದು
ಇಂತಿವರ ಕಂಡಾತನೇ ಶರಣ ಅಲ್ಲವೆಂದಾತನೇ ಅಪರಾಧಿ
ಪುರಾತನರ ಮಕ್ಕಳಾದ ಮೇಲೆ ಕಿರಾತಕರ ಮಕ್ಕಳಾಗಬೇಡಿ
ಕರ್ತನ ಮಾತು ಕಳೆಯಬೇಡಿ ಕಡಿಮೆಯಿದ್ದದ್ದು ಹಿಡಿಯಬೇಡಿ
ಕಾಳೇಶ್ವರ ಲಿಂಗವೇ ಕರುಣವಾಗು ಮೌನೇಶ್ವರಗೆ
(ತಿಂತಿಣಿ ಮೌನೇಶ್ವರರ ವಚನಗಳು-ಡಾ. ವೀರೇಶ ಬಡಿಗೇರ/2016/ಪುಟ. 346)

ಶರಣ ಹರಳಯ್ಯನವರಲ್ಲಿ ಕಾಯಕನಿಷ್ಠೆ, ಶರಣ ಡೋಹಾರ ಕಕ್ಕಯ್ಯನವರಲ್ಲಿ ಸಂತೃಪ್ತ ಬದುಕಿನ ಸಂಕೇತವನ್ನು, ಭಕ್ತಿಯ ಭಾವವನ್ನು ಬಸವಣ್ಣನವರಲ್ಲಿ, ಸಂಸ್ಕಾರ ಮತ್ತು ಸಂಸ್ಕೃತಿಯನ್ನು ವಿಚಾರಪತ್ನಿ ನೀಲಮ್ಮನವರಲ್ಲಿಯೂ, ಸಮಷ್ಠಿ ಪ್ರಜ್ಞೆಯನ್ನು ಶರಣ ಮಡಿವಾಳ ಮಾಚಿದೇವರಲ್ಲಿಯೂ, ಕೀರ್ತಿಯನ್ನು ತಲೆಗೇರಿಸಿಕೊಳ್ಳದ ಮನಸಾಕ್ಷಿ ಪ್ರಜ್ಞೆಯನ್ನು ಶರಣ ಕಿನ್ನರಿ ಬ್ರಹ್ಮಯ್ಯನವರಲ್ಲಿಯೂ, ಘನತೆ ಮತ್ತು ಸಂಸ್ಕಾರ ಪ್ರಜ್ಞೆಯನ್ನು ಶರಣ ಘಟ್ಟಿವಾಳಯ್ಯನವರಲ್ಲಿಯೂ, ಶಬ್ದದಿಂದ ನಿಃಶಬ್ದವನ್ನು ಚೆನ್ನಬಸವಣ್ಣನವರಲ್ಲಿಯೂ ಕಾಣುವ ಪರಮ ಪೂಜ್ಯ ಶ್ರೀ ತಿಂತಿಣಿ ಮೌನೇಶ್ವರರು ಶರಣನಾಗುವ ಪರಿಯನ್ನು ಅತ್ಯಂತ ಮನೋಜ್ಞವಾಗಿ ಚಿತ್ರಿಸಿದ್ದಾರೆ. ಶರಣರು ಹೇಗಿರಬೇಕೆಂಬುದಕ್ಕೆ ಪುರಾತನರು ಅಂದರೆ ಪಂಚಭೂತಗಳಾದ ಭೂಮಿ, ನೀರು, ಬೆಂಕಿ, ಗಾಳಿ ಮತ್ತು ಆಕಾಶ ಮತ್ತು ಪಂಚೇಂದ್ರಿಯಗಳಾದ ಕಣ್ಣು, ಮೂಗು, ನಾಲಿಗೆ, ಕಿವಿ, ಚರ್ಮಗಳನ್ನು ಹಿಡಿತದಲ್ಲಿಟ್ಟುಕೊಳ್ಳಬೇಕೆನ್ನುವ ತತ್ವವನ್ನು ವ್ಯಾಖ್ಯಾನಿಸಿದ್ದಾರೆ. ಕರ್ತನ ಮಾತು ಅಂದರೆ ಅಂತರಂಗದ ಅರಿವನ್ನು ಎಂದಿಗೂ ನಿಃಷ್ಕಾಳಜಿ ಮಾಡಬಾರದು ಎನ್ನುವದನ್ನು ಸುಂದರವಾಗಿ ತಿಳಿಸಿದ್ದಾರೆ. ಇದು ಪರಮ ಪೂಜ್ಯ ಶ್ರೀ ತಿಂತಿಣಿ ಮೌನೇಶ್ವರರ ಶರಣನಾಗುವ ಪರಿಯ ನಿರೂಪಣೆ. ಇದನ್ನೇ ಅವಿರಳಜ್ಞಾನಿ ಚೆನ್ನಬಸವಣ್ಣನವರು ತಮ್ಮ ಒಂದು ವಚನದ ಮೂಲಕ ತಿಳಿಸುತ್ತಾರೆ.

ಶರಣ ಶರಣನ ಕಂಡು,
“ಶರಣು” ಎಂದು ಕರವ ಮುಗಿವುದೆ ಭಕ್ತಿ ಲಕ್ಷಣ.
ಶರಣ ಶರಣನ ಕಂಡು,
ಪಾದವಿಡಿದು ವಂದಿಸುವುದೆ ಭಕ್ತಿ ಲಕ್ಷಣ.
ಶರಣ ಚರಣವ ಪಿಡಿಯದೆ
ಕಂಡೂ ಕಾಣದೆ ಪೋದನಾದಡೆ
ಕೂಡಲಚೆನ್ನಸಂಗನ ಶರಣರು ಮನ್ನಿಸರಯ್ಯಾ.
(ಸಮಗ್ರ ವಚನ ಸಂಪುಟ: ಒಂದು-2016/ಪುಟ ಸಂಖ್ಯೆ-502/ವಚನ ಸಂಖ್ಯೆ-1643)

ಹಂಪಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ವೀರೇಶ ಬಡಿಗೇರ ಅವರು ಹೇಳುವಂತೆ ಪರಮ ಪೂಜ್ಯ ಶ್ರೀ ತಿಂತಿಣಿ ಮೌನೇಶ್ವರರ ವಚನಗಳು ಗಿಡ್ಡ ಮೆಣಸಿನಕಾಯಿ ಇದ್ದಂತೆ. ಆಕಾರ ಸಣ್ಣದು ಆದರೆ ಗುಣ ಸ್ವಭಾವದಲ್ಲಿ ಬೆಂಕಿಯಂತೆ ಖಾರ. ಅವರ ವಚನಗಳಲ್ಲಿ ಒಂದು ವಚನ ಶರಣ ತತ್ವವನ್ನು ಉಲ್ಲೇಖ ಮಾಡುತ್ತದೆ.

ಕಾಯವನು ಕಡೆಗಿಟ್ಟು ಜೀವವನು ಮರೆಮಾಡಿ
ಮಾಯವಾಗುವನು ಮರ್ತ್ಯಕ್ಕೆ ಮೋನಯ್ಯ
ಜ್ಞಾನವುಳ್ಳ ದೊರೆಯೆ ದನಿದೋರು, ಬಸವಣ್ಣ.
(ತಿಂತಿಣಿ ಮೌನೇಶ್ವರರ ವಚನಗಳು-ಡಾ. ವೀರೇಶ ಬಡಿಗೇರ/2016/ಪುಟ. 38/ವ.ಸಂ. 89)

ಪರಮ ಪೂಜ್ಯ ಶ್ರೀ ತಿಂತಿಣಿ ಮೌನೇಶ್ವರರ ಈ ವಚನ ಕಾಯ ಜೀವದ ಹೊಲಿಗೆಯನ್ನು ಬಿಚ್ಚಿ ಶರಣತ್ವದ ಕಡೆಗೆ ಕೊಂಡೊಯ್ಯುವ ತತ್ವ ಸಿದ್ಧಾಂತವನ್ನು ತಿಳಿಸುತ್ತದೆ. ಕರಣ ಚತುಷ್ಟಯಂಗಳು, ಅರಿಷಡ್ವರ್ಗಗಳು, ಸಪ್ತವ್ಯಸನಗಳು, ಅಷ್ಟಮದಗಳೆಂಬ ಮೋಹ ಮಾಯೆಗಳನ್ನು ತೊರೆದು ತನು ಮತ್ತು ಮನಗಳನ್ನು ಮೀರಿದವನು ಮಾತ್ರ ಶರಣನ ದಾರಿಯನ್ನು ಸವೆಸಲು ಸಾಧ್ಯ ಎನ್ನುವದನ್ನು ನಿರೂಪಣೆ ಮಾಡಿದ್ದಾರೆ. ಇದನ್ನು ಅಲ್ಲಮ ಪ್ರಭುಗಳ ಒಂದು ಬೆಡಗಿನ ವಚನದ ಮೂಲಕ ಅರಿಯುವ ಪ್ರಯತ್ನವನ್ನು ಮಾಡೋಣ.

ದೇಹಭಾವವಳಿದಲ್ಲದೆ ಜೀವಭಾವವಳಿಯದು.
ಜೀವಭಾವವಳಿದಲ್ಲದೆ ಭಕ್ತಿ ಭಾವವಳವಡದು.
ಭಕ್ತಿ ಭಾವವಳವಟ್ಟಲ್ಲದೆ ಅರಿವು ತಲೆದೋರದು.
ಅರಿವು ತಲೆದೋರಿದಲ್ಲದೆ ಕುರುಹು ನಷ್ಟವಾಗದು.
ಕುರುಹು ನಷ್ಟವಾದಲ್ಲದೆ ಮಾಯೆ ಹಿಂಗದು. ಇದು ಕಾರಣ,
ಕಾಯದ ಜೀವದ ಹೊಲಿಗೆಯ ಅಳಿವ ಭೇದವ ತಿಳಿಯಬಲ್ಲಡೆ,
ಗುಹೇಶ್ವರಲಿಂಗದ ಅರಿವು ಸಾಧ್ಯವಪ್ಪುದು ಕಾಣಾ ಸಿದ್ಧರಾಮಯ್ಯಾ.
(ಸಮಗ್ರ ವಚನ ಸಂಪುಟ: ಒಂದು-2016/ಪುಟ ಸಂಖ್ಯೆ-253/ವಚನ ಸಂಖ್ಯೆ-1256)

ದೇಹಭಾವ, ಜೀವಭಾವ, ಭಕ್ತಿಭಾವ, ಅಂತರಂಗದ ಅರಿವು, ಬಹಿರಂಗದಲ್ಲಿನ ಕುರುಹು ಮತ್ತು ಮನದ ಮುಂದಣ ಮಾಯೆ ಇವೆಲ್ಲವೂ ಕೂಡ ಒಂದಕ್ಕೊಂದು ಬೆಸೆದುಕೊಂಡು ಹೊಲಿಗೆ ಹಾಕಿಕೊಂಡಿರುವಂಥ ತತ್ವನಿಷ್ಠ ತತ್ವಗಳು. ಇದರ ನಿಗೂಢತೆಯನ್ನು ತಿಂತಿಣಿ ಮೌನೇಶ್ವರರು ಮತ್ತು ಅಲ್ಲಮ ಪ್ರಭುಗಳು ಮೇಲಿನ ವಚನಗಳಲ್ಲಿ ಅತ್ಯಂತ ಮನೋಜ್ಞವಾಗಿ ಚಿತ್ರಿಸಿದ್ದಾರೆ.

ನಿತ್ಯಕ್ಕೆ ಅನಿತ್ಯದ ಹೊಲಿಗೆ. ನಿತ್ಯದಿಂದ ಅನಿತ್ಯದ ಹೊಲಿಗೆಯನ್ನು ಬಿಡಿಸಿ ನಿತ್ಯಕ್ಕೆ ಪೂಜೆಯಾಗಬೇಕು. ಅನಾದಿಗೆ ಆದಿಯ ಹೊಲಿಗೆ. ಅನಾದಿಯಿಂದ ಆದಿಯನ್ನು ಬಿಚ್ಚಿ ಆದಿ ಪೂಜೆಗೊಳ್ಳಬೇಕು. ಪರಿಪೂರ್ಣಕ್ಕೆ ಅಪೂರ್ಣದ ಹೊಲಿಗೆ. ಅಪೂರ್ಣದಿಂದ ಪರಿಪೂರ್ಣವನ್ನು ಬಿಚ್ಚಿ ಪರಿಪೂರ್ಣವು ಪೂಜೆಗೊಳ್ಳಬೇಕು. ಸತ್‌, ಚಿತ್‌, ಆನಂದಕ್ಕೆ ಅಸತ್ತು, ಜಡ, ಸುಖ-ಸುಃಖಗಳ ಹೊಲಿಗೆ. ಸತ್‌, ಚಿತ್‌, ಆನಂದಗಳು ಪೂಜೆಗೊಳ್ಳಬೇಕು. ಹೀಗೆ ಒಂದಕ್ಕೊಂದು Diagonally Opposite ಆದ ತತ್ವಗಳು ಒಂದಕ್ಕೊಂದು ಹೊಲಿಗೆ ಹಾಕಿಕೊಂಡ ಯೋಗವನ್ನು ಬೇಧಿಸಿ ತನ್ನನ್ನು ತಾನು ತಿಳಿದುಕೊಳ್ಳುವುದನ್ನು ಅಲ್ಲಮ ಪ್ರಭುಗಳು “ಗುಹೇಶ್ವರಲಿಂಗದ ಅರಿವು ಸಾಧ್ಯವಪ್ಪುದು” ಎನ್ನುತ್ತಾರೆ.

ಹಾಗಾಗಿ ತಾನು ದೇಹವೆಂಬ ದೇಹಭಾವ ಬಿಚ್ಚಬೇಕು. ಜೀವಭಾವವೆಂಬ ಆತ್ಮಭಾವ ಬಿಚ್ಚಬೇಕು. ಇಂತಹ ಭಾವಗಳ ಹೊಲಿಗೆ ಬಿಚ್ಚಿದರೆ ಕುರುಹು ನಷ್ಟವಾಗಿ “ಕಾಯಜೀವದ ಸಂದುಭೇದವಳಿದು ನೋಡಬಲ್ಲರೆ ನಿಜವು ಸಾಧ್ಯವಹುದು” ಎನ್ನುವ ಅಲ್ಲಮ ಪ್ರಭುಗಳು ಕಾಯ ಜೀವದ ಹೊಲಿಗೆ ಬಿಚ್ಚುವುದನ್ನು ಅದ್ಭುತವಾಗಿ ಸೆರೆ ಹಿಡಿದಿದ್ದಾರೆ. ಇದೇ ತತ್ವ ಸಿದ್ಧಾಂತವನ್ನು ಪರಮ ಪೂಜ್ಯ ಶ್ರೀ ತಿಂತಿಣಿ ಮೌನೇಶ್ವರರು “ಕಾಯವನು ಕಡೆಗಿಟ್ಟು ಜೀವವನು ಮರೆಮಾಡಿ ಮಾಯವಾಗುವನು ಮರ್ತ್ಯಕ್ಕೆ ಮೋನಯ್ಯ” ಎಂದು ಅದ್ಭುತವಾಗಿ ಬಿಡಿಸಿದ್ದಾರೆ.

ಪರಮ ಪೂಜ್ಯ ಶ್ರೀ ತಿಂತಿಣಿ ಮೌನೇಶ್ವರರು ಶರಣರ ಮೋಹ-ಮಾಯೆಗಳನ್ನು ತ್ಯಜಿಸಬೇಕೆನ್ನುವುದನ್ನು ತಮ್ಮ ವಚನದಲ್ಲಿ ನಿರೂಪಣೆ ಮಾಡಿದ್ದಾರೆ.

ಕಾಮ ಕ್ರೋಧ ಲೋಭ ಮೋಹ ಮದ ಮತ್ಸರ
ಕ್ರಮದಿ ಷಡ್ಗುಣಗಳನಳಿದವರ ಹೃದಯದಲಿ
ಸ್ವಾಮಿ ಇಹನು ಕಾಣಾ, ಬಸವಣ್ಣ.
(ತಿಂತಿಣಿ ಮೌನೇಶ್ವರರ ವಚನಗಳು-ಡಾ. ವೀರೇಶ ಬಡಿಗೇರ/2016/ಪುಟ. 160/ವ.ಸಂ. 371)

ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳು ಮಾನವರಲ್ಲಿ ಸಹಜವಾಗಿ ಮೂಡಿ ಮಾನವ ಸಾತ್ವಿಕ ಬದುಕಿನಿಂದ ವಿಮುಖನಾಗುತ್ತಾನೆ. ತನ್ನಲ್ಲೇ ಅಡಗಿರುವ ಶಿವನ ಪ್ರಕಾಶವನ್ನು ಮರೆತು ಮಾಯೆಯ ಆಕರ್ಷಣೆಗೆ ತುತ್ತಾಗುತ್ತಾನೆ. ಇಂತಹ ಆಕರ್ಷಣೆಗೆ ಒಳಗಾದ ಮಾನವ ಭಕ್ತಿ ಮಾರ್ಗವನ್ನು ತೊರೆದು ಭೌತಿಕ ಲಾಲಸೆಗಳನ್ನು ಬೆನ್ನು ಹತ್ತಿ ಕಲ್ಮಷಗಳನ್ನು ತನು ಮನದಲ್ಲಿ ತುಂಬಿಕೊಂಡು ಬಂಧಿಯಾಗುತ್ತಾನೆ. ಇದನ್ನೇ ಪರಮ ಪೂಜ್ಯ ಶ್ರೀ ತಿಂತಿಣಿ ಮೌನೇಶ್ವರರು ಈ ವಚನದಲ್ಲಿ ತಿಳಿಸಿದ್ದಾರೆ.

ಈ ಶರಣ ತತ್ವ ಸಿದ್ಧಾಂತವನ್ನು ಪರಮ ಪೂಜ್ಯ ಶ್ರೀ ತಿಂತಿಣಿ ಮೌನೇಶ್ವರರ ವಚನಕ್ಕೆ ಪೂರಕವಾಗಿ ವೈರಾಗ್ಯನಿಧಿ ಅಕ್ಕಮಹಾದೇವಿಯವರೂ ಕೂಡ ತಮ್ಮ ವಚನದಲ್ಲಿ ತಿಳಿಸಿದ್ದಾರೆ.

ನಮ್ಮೆಲ್ಲರದ್ದೂ ಕೂಡ ಹೊರಗಡೆ ಬದುಕು ಬೇರೆ ಮತ್ತು ಒಳಗಡೆಯ ಬದುಕು ಬೇರೆ. ನಾವು ಹಾಕಿಕೊಳ್ಳುವ ಬಟ್ಟೆ ಅಥವಾ ನಮ್ಮ ದೇಹದ ಮೇಲಿನ ಲಾಂಛನಗಳು ಮತ್ತು ಅದು ಕಾಣಲಿ ಅನ್ನುವಂಥಾ ಭಾವ. ಇವೆಲ್ಲವೂ ಕೂಡ ನಮ್ಮ ಹೊರ ಬದುಕು. ಹೆಚ್ಚೂ ಕಡಿಮೆ ನಮ್ಮ ಹೊರ ಬದುಕನ್ನ ಮತ್ತು ಒಳ ಬದುಕನ್ನ ಇವು ಆಕ್ರಮಿಸಿಕೊಂಡು ಬಿಟ್ಟಿರುತ್ತವೆ. ಅಕ್ಕಮಹಾದೇವಿಯವರು ಅಕ್ಷರಶಃ ಆ ಗೆರೆಯನ್ನು ತೆಗೆದು ಬಿಸಾಡಿ ಶರಣಸ್ಥಲದಲ್ಲಿ ನಿಂತಂಥವರು. ಅದನ್ನು ಹೇಗೆ ತನ್ನ ವಚನದಲ್ಲಿ ಹೇಳತಾರೆಂದರೆ:

ಅರ್ಥ ಸನ್ಯಾಸಿಯಾದಡೇನಯ್ಯಾ,
ಆವಂಗದಿಂದ ಬಂದಡೂ ಕೊಳದಿರಬೇಕು.
ರುಚಿ ಸನ್ಯಾಸಿಯಾದಡೇನಯ್ಯಾ,
ಜಿಹ್ವೆಯ ಕೊನೆಯಲ್ಲಿ ಮಧುರವನರಿಯದಿರಬೇಕು.
ಸ್ತ್ರೀ ಸನ್ಯಾಸಿಯಾದಡೇನಯ್ಯಾ,
ಜಾಗ್ರ ಸ್ವಪ್ನ ಸುಷುಪ್ತಿಯಲ್ಲಿ ತಟ್ಟಿಲ್ಲದಿರಬೇಕು.
ದಿಗಂಬರಿಯಾದಡೇನಯ್ಯಾ,
ಮನ ಬತ್ತಲೆಯಾಗಿರಬೇಕು.
ಇಂತೀ ಚತುರ್ವಿಧದ ಹೊಲಬನರಿಯದೆ ವೃಥಾ ಕೆಟ್ಟರು
ಕಾಣಾ ಚನ್ನಮಲ್ಲಿಕಾರ್ಜುನಾ.
(ಸಮಗ್ರ ವಚನ ಸಂಪುಟ: ಒಂದು-2016/ಪುಟ ಸಂಖ್ಯೆ-791/ವಚನ ಸಂಖ್ಯೆ-45) 45)

ಶರಣರು ನನಗಿದು ಬೇಡಾ ಅಂತ ಹೇಳಿ ತೀರ್ಮಾನ ಮಾಡಿದರೆ “ಅರ್ಥ ಸನ್ಯಾಸಿಯಾದಡೇನಯ್ಯಾ ಆವಂಗದಿಂದ ಬಂದಡೂ ಕೊಳದಿರಬೇಕು” ಯಾವ ಕಡೆಯಿಂದ ಬಂದರೂ ಮುಟ್ಟದೇ ಇರುವಂಥಾ ಒಂದು ಮನಸ್ಥಿತಿ ಇರಬೇಕು.

“ರುಚಿ ಸನ್ಯಾಸಿಯಾದಡೇನಯ್ಯಾ ಜಿಹ್ವೆಯ ಕೊನೆಯಲ್ಲಿ ಮಧುರವನರಿಯದಿರಬೇಕು”. ಸಾಧ್ಯ ಇದೆಯಾ ಇದು? ನಾಲಿಗೆಗೆ ಏನ್‌ ತಿಂತಾ ಇದೀವಿ ಅನ್ನೋದರ ರುಚಿ ಗೊತ್ತಾಗದೇ ಇರುತ್ತಾ? ನಾನು ನನ್ನ ಇಂದ್ರಿಯವನ್ನ ನಿಗ್ರಹ ಮಾಡಿದ್ದೇನೆ ಅಂತ ಅಂದರೆ ನಾವು ಏನು ತಿಂದರೂ ಕೂಡ ನಾಲಿಗೆಯ ಕೊನೆಯಲ್ಲೂ ಅದರ ರುಚಿಯ ಅನುಭವ ನನ್ನ ನಾಲಿಗೆಗೆ ಬರಕೂಡದು. ಅದು ನಿಜವಾದ ಸನ್ಯಾಸತ್ವ ಅಥವಾ ಇಂದ್ರಿಯ ನಿಗ್ರಹ ಅಥವಾ ಶರಣ ತತ್ವ.

“ಸ್ತ್ರೀ ಸನ್ಯಾಸಿಯಾದಡೇನಯ್ಯಾ, ಜಾಗ್ರ ಸ್ವಪ್ನ ಸುಷುಪ್ತಿಯಲ್ಲಿ ತಟ್ಟಿಲ್ಲದಿರಬೇಕು”. ನನಗೆ ಸ್ತ್ರೀ ಬೇಕು ಅಥವಾ ಪುರುಷ ಬೇಕು, ಎರಡೂ ದಿಸೆಯಲ್ಲಿಯೂ, ಅನ್ನುವಂಥಾ ಭಾವ ಬರೀ ಜಾಗೃತವಾದಾಗ ಸ್ವಪ್ನ ಮತ್ತು ಸುಷುಪ್ತಿಯಲ್ಲೂ ಕೂಡ ಅಂಥದ್ದೊಂದು ಸಣ್ಣ ಎಳೆಯೂ ಕೂಡ ಮನಸ್ಸಿನಲ್ಲಿ ಬಾರದೇ ಇರಬೇಕು. ಶರಣರ ನಿರ್ವಾಣ ಸಂಬಂಧಪಟ್ಟಿರುವುದು ಮನಸ್ಸಿಗೆ. ಮನಸ್ಸಿಗೆ ನಿರ್ವಾಣ. ಮನಸ್ಸಿಗೆ ನಿಗ್ರಹ. ಮನಸ್ಸು ಮನಸ್ಸು ಅನ್ನುವುದನ್ನ ಅಕ್ಕಮಹಾದೇವಿಯವರು ಪ್ರತೀ ಬಾರಿಯೂ ಹೇಳತಾರೆ. ಬರೀ ಜಾಗೃತ ಮನಸ್ಸಿನಲ್ಲಿ, ಸ್ವಪ್ನದಲ್ಲಿ ಕಾಣುವ ಮತ್ತು ಸುಷುಪ್ತಿಯಲ್ಲಿ ಮನೋವೈಜ್ಞಾನಿಕ ಚಿಂತನೆಯಲ್ಲಿ ಬಹಳ ದೊಡ್ಡ ಅರ್ಥ ಇದೆ ಇದಕ್ಕೆ. ಅಂದರೆ ಯಾವುದು ನಮ್ಮೊಳಗೆ ಇರುತ್ತೋ ಅದು ಹೇಗೋ ಒಂದು ಕಡೆ ಹೊರಗ ಬಂದು ಅದನ್ನ ತೋರಿಸಿಕೊಳ್ಳುತ್ತಿರುತ್ತೆ. ಸುಷುಪ್ತಿಯಲ್ಲೂ ಅಂಥಾ ಭಾವ ಬಾರದೇ ಇರಬೇಕು. ಶರಣರು ಇರಬೇಕಾದದ್ದು ಈ ಸ್ಥಿತಿ.

“ದಿಗಂಬರಿಯಾದಡೇನಯ್ಯಾ ಮನ ಬತ್ತಲೆಯಾಗಿರಬೇಕು”. ತುಂಬಾ ದೊಡ್ಡ ಮಾತು ಅಕ್ಕಮಹಾದೇವಿಯವರದು. ದೇಹದ ಮೇಲಿನ ಬಟ್ಟೆಯನ್ನು ಬಿಚ್ಚಿ ನಿಂತುಕೊಳ್ಳಬಹುದು. ಮನ ಬತ್ತಲೆಯಾಗಬೇಕು. ಮನಸ್ಸು ಬೆತ್ತಲಾಗಬೇಕು. ಏನು ಹಾಗಂದರೆ? ಮನಸ್ಸು ನಗ್ನವಾಗುವುದು ಯಾರ ಮುಂದೆ ಅಂದರೆ ಗುರುವಿನ ಮುಂದೆ. ಏನೂ ಇಲ್ಲದೆ ನಾವು ನಿಂತಾಗ ಮಾತ್ರ. ಯಾವುದಾದರೂ ಅದು ನನ್ನದೂ ಅಂತ ಇದ್ದಾಗ ಅದನ್ನ ಮುಚ್ಚಿಟ್ಟುಕೊಳ್ಳುವಂಥಾ ಪ್ರಯತ್ನ ಮಾಡತೀವಿ. ಆದರೆ ನಂದೇನೂ ಇಲ್ಲಾ ಎಲ್ಲದೂ ಗುರುವಿನದು ಅಂದ ಮೇಲೆ ತೆರೆದಿಡಬೇಕಾಗುತ್ತೆ. ಮನ ಬೆತ್ತಲೆಯಾಗಬೇಕು. ಗುರುವನ್ನು ಹಿಡಿದಿಟ್ಟುಕೊಳ್ಳುವಂಥಾದ್ದು ತುಂಬಾ ತುಂಬಾ ಕಷ್ಟದ ಕೆಲಸ. ಯಾವಾಗ ಹಿಡಿದಿಟ್ಟುಕೊಳ್ಳೋಕಾಗುತ್ತೆ ಅಂದರೆ:

ಎನ್ನ ನಾಲಗೆಗೆ ಬಪ್ಪ ರುಚಿ ನಿಮಗರ್ಪಿತ.
ಎನ್ನ ನಾಸಿಕಕ್ಕೆ ಬಪ್ಪ ಪರಿಮಳ ನಿಮಗರ್ಪಿತ.
[ಎನ್ನ ಕರ್ಣಕ್ಕೆ ಬಪ್ಪ ಶಬ್ದ ನಿಮಗರ್ಪಿತ
ಎನ್ನ ನೇತ್ರಕ್ಕೆ ಬಪ್ಪ ರೂಪು ನಿಮಗರ್ಪಿತ
ಎನ್ನ ಕಾಯಕ್ಕೆ ಬಪ್ಪ ಸುಖ ನಿಮಗರ್ಪಿತ]
ಚನ್ನಮಲ್ಲಿಕಾರ್ಜುನಯ್ಯಾ,
ನಿಮಗರ್ಪಿಸದ ಮುನ್ನ ಮುಟ್ಟಲಮ್ಮೆನಯ್ಯಾ.
(ಸಮಗ್ರ ವಚನ ಸಂಪುಟ: ಒಂದು-2016/ಪುಟ ಸಂಖ್ಯೆ-797/ವಚನ ಸಂಖ್ಯೆ-96)

ಕಾಯದ ಸುಖವನ್ನು ಸಂತೋಷವನ್ನು ನಾವು ಅರ್ಪಿತವನ್ನಾಗಿ ಮಾಡಿ ಬಿಟ್ಟರೆ ಈ ಕಾಯ ಮತ್ತೆ ನನ್ನದಾಗೋದಿಲ್ಲ. ಈ ಕಾಯ ನನ್ನದಲ್ಲಾ ಅಂದ ತಕ್ಷಣ ದೇಹಕ್ಕೆ ಸಂಬಂಧಿಸಿದ ಯಾವುದು ನಡೆಯುತ್ತೋ ಯಾವುದೂ ಕೂಡ ನನಗೆ ಸಂಬಂಧ ಪಟ್ಟಿದ್ದು ಆಗೋದಿಲ್ಲ. ಇದು ಪರಮ ಪೂಜ್ಯ ಶ್ರೀ ತಿಂತಿಣಿ ಮೌನೇಶ್ವರರ ಈ ವಚನದಲ್ಲಿ ಬರುವ ಶರಣ ತತ್ವ. ಶರಣನಾಗುವುದೆಂದರೆ ಪರಮ ಪೂಜ್ಯ ಶ್ರೀ ತಿಂತಿಣಿ ಮೌನೇಶ್ವರರ ವಚನದಲ್ಲಿ ಹೇಳುವ ಹಾಗೆ “ಷಡ್ಗುಣಗಳನಳಿದವರ ಹೃದಯದಲಿ ಸ್ವಾಮಿ ಇಹನು ಕಾಣಾ” ಎನ್ನುವುದರ ಅದ್ಭುತ ಸಂದೇಶ.

ಅಲ್ಲಮ ಪ್ರಭುಗಳು ತಮ್ಮ ಒಂದು ವಚನದಲ್ಲಿ ಶರಣ ತತ್ವದ ಮನದ ಮೈಲಿಗೆಯನ್ನು ತೊಳೆದುಕೊಳ್ಳುವದನ್ನು ಶಿವಯೋಗಿ ಸಿದ್ಧರಾಮೇಶ್ವರರನ್ನು ಉದ್ದೇಶಿಸಿ ವಿವರಿಸಿದ್ದಾರೆ. ಈ ಶರಣನ ಹಾದಿಯಲ್ಲಿ ಕಾಯ ಜೀವದ ಭೇದವನ್ನು ತಿಳಿಸುವ ಅಥವಾ ಬಿಚ್ಚುವುದರ ವಿಶ್ಲೇಷಣೆಗೆ ಪೂರಕವಾಗಿದೆ.

ಮನವ ತೊಳೆದು ನಿರ್ಮಲವ ಮಾಡಿಹೆನೆಂಬ ಯೋಗವೆಂತುಟೊ?
ಮನವ ಹಿಡಿದು ತಡೆದಿಹೆನೆಂಬವರ
ಮರುಳುಮಾಡಿ ಕಾಡಿತ್ತು ನೋಡಾ ಮನವು!
ಮನ ವಿಕಲ್ಪಜ್ಞಾನದಿಂದರಿದು,
ಅದ ಶುದ್ಧವ ಮಾಡಿಹೆನೆಂಬುದು ತಾನೆ ಮನ ನೋಡಾ.
ನಮ್ಮ ಗುಹೇಶ್ವರಲಿಂಗದ ಆನುವನರಿದಿಹೆನೆಂಬವರು,
ಮನವಿಲ್ಲದಿರಬೇಕು ನೋಡಾ ಸಿದ್ಧರಾಮಯ್ಯಾ.
(ಸಮಗ್ರ ವಚನ ಸಂಪುಟ: ಒಂದು-2016/ಪುಟ ಸಂಖ್ಯೆ-271/ವಚನ ಸಂಖ್ಯೆ-1431)


ಪಂಚಭೂತಗಳಿಂದಾದ ಕಾಯದಲ್ಲಿ ಹಾಸು ಹೊಕ್ಕಾಗಿರುವ ಕಳವಳವನ್ನು ಹೊಲಿಗೆಯನ್ನು ಹರಿಯದೇ ಬಿಚ್ಚಬೇಕು. ಕಳವಳವಿಲ್ಲದ ಕಾಯ ಲಿಂಗರೂಪಿ ಕಾಯವಾಗುತ್ತದೆ. ಇದು ಶಿವಪ್ರಜ್ಞೆ. ಇಂಥ ಶಿವಪ್ರಜ್ಞೆಯುಳ್ಳ ಕಾಯದಲ್ಲಿ ಕಳವಳ ಇರೋದಿಲ್ಲ. ನಸುಕಿನಲ್ಲಿ ಕತ್ತಲೆಯನ್ನು ಪ್ರಕಾಶವು ಓಡಿಸಿದ ಹಾಗೆ. ಇಂಥ ಮಾಯೆಗಳ ಮಲೀನತೆ ಕಳೆದುಕೊಂಡಾಗ ಅಲ್ಲಿ ಮನಸ್ಸೆಂಬ ಅಹಂಭಾವ ಇರುವುದಿಲ್ಲ ಮತ್ತು ಗುಹೇಶ್ವರನನ್ನು ಅರಿತಿದ್ದೇನೆ ಎನ್ನುವ ಭಾವವೂ ಇರುವುದಿಲ್ಲ. ತಾನು ತಾನೇ ಆಗಿ ಶಿವಸ್ವರೂಪಿಯಾದ ಭಾವ ಒಡಮೂಡುತ್ತದೆ.

ಇಂಥ ಒಂದು ಅದ್ಭುತ ಸಿದ್ಧಾಂತವನ್ನು ಪರಮ ಪೂಜ್ಯ ಶ್ರೀ ತಿಂತಿಣಿ ಮೌನೇಶ್ವರರು ಹಲವಾರು ವಚನಗಳಲ್ಲಿ ನಿರೂಪಿಸಿದ್ದಾರೆ. ಇಂಥ ಒಂದು ವಿಡಂಬನಾತ್ಮಕ ವಚನ ಶರಣ ಸಿದ್ಧಾಂತವನ್ನು ನಿರೂಪಿಸುತ್ತದೆ.

ಮಾಯೆಯೊಳಗೆ ಹುಟ್ಟಿದೆನು ಮಾಯೆಯೊಳಗೆ ಬೆಳೆದೆನು
ಮಾಯೆಯ ಮುದ್ದಾಡಿ ಬಳಲುವ ಪಾಪಿಗೆ
ಮಹೇಶ್ವರನೆಂಬ ಬಿರುದೇಕೆ, ಇವರ ತಲೆಗೆ ಹುಚ್ಚು
ಹತ್ತಿದೆಯೇನೋ, ಬಸವಣ್ಣ.
(ತಿಂತಿಣಿ ಮೌನೇಶ್ವರರ ವಚನಗಳು-ಡಾ. ವೀರೇಶ ಬಡಿಗೇರ/2016/ಪುಟ. 233/ವ.ಸಂ. 551)

ಮೋಹ-ಮಾಯೆಗಳ ಬೆನ್ನುಹತ್ತಿ ಅದರಲ್ಲಿಯೇ ಮುಳುಗಿ ಹೋದರೆ ಮಹೇಶ್ವರನಾಗಲಿಕ್ಕೆ ಸಾಧ್ಯವಿಲ್ಲ. ಇದೇ ಸತ್ಯ ಎಂದು ತಿಳಿದವರಿಗೆ ಹುಚ್ಚು ಹಿಡಿದಿದೆ ಎಂದರ್ಥ. ಆಸೆ ಆಮಿಷಗಳಿಗೆ ಆತುರಪಡುವವನು ತನ್ನ ಆತ್ಮವನ್ನು ತಾನೇ ವಂಚಿಸಿಕೊಂಡು ಬಳಲುತ್ತಾನೆ. ಶರಣನಾಗುವ ಸಾಧನೆಯಲ್ಲಿ ಈ ಮೋಹ ಮಾಯೆಗಳ ಗೊಡವೆಗೆ ಹೋಗಬಾರದೆನ್ನುವುದು ಪರಮ ಪೂಜ್ಯ ಶ್ರೀ ತಿಂತಿಣಿ ಮೌನೇಶ್ವರರ ಅಭಿಮತ. ಇದಕ್ಕೆ ಇನ್ನೊಂದು ಪೂರಕ ವಚನವೂ ಇದೇ ತತ್ವವನ್ನು ಹೇಳುತ್ತದೆ.

ಎತ್ತನೆ ಹೂಡಿದೆ ಕತ್ತೆಯ ಹೇರಿದೆ
ಹತ್ತಿ ಕುದುರೆಯ ನಾ ಬಳಲಿಸಿದೆ, ನನ್ನಂಥ
ಮಿಥ್ಯೆ ಮತ್ತಿಲ್ಲ, ಬಸವಣ್ಣ
(ತಿಂತಿಣಿ ಮೌನೇಶ್ವರರ ವಚನಗಳು-ಡಾ. ವೀರೇಶ ಬಡಿಗೇರ/2016/ಪುಟ. 102/ವ.ಸಂ. 237)

ಲೌಕಿಕವಾಗಿ ಪ್ರಾಣಿಹಿಂಸೆಯನ್ನು ಖಂಡಿಸುವ ಈ ವಚನ ಅಲೌಕಿಕವಾಗಿ ಎತ್ತು, ಕತ್ತೆ ಮತ್ತು ಕುದುರೆಯ ರೂಪಕಗಳನ್ನು ಮನಸ್ಸಿನ ತಾಕಲಾಟಗಳು ಹೊಯ್ದಾಟಗಳಿಗೆ ಹೋಲಿಸುವ ಬೆಡಗಿನ ವಚನ ಅದ್ಭುತ ಶರಣ ತತ್ವವನ್ನು ತಿಳಿಸುತ್ತದೆ. ಮನಸ್ಸನ್ನು ಎತ್ತು, ಕತ್ತೆ ಮತ್ತು ಕುದುರೆಯ ಹಾಗೆ ಮೋಹ ಮಾಯೆಗಳಿಗೆ ಬಳಸದೆ ನಡೆ-ನುಡಿ ಸಿದ್ಧಾಂವನ್ನು ರೂಢಿಸಿಕೊಳ್ಳುವುದನ್ನು ತಿಳಿಸುತ್ತಾ ನಮಗೆ ಸಾಧನೆಯ ಹಾದಿಯನ್ನು ತೋರಿಸುತ್ತದೆ.

ಶರಣರ ಅತಿ ಪ್ರಮುಖವಾದ ಅಂಶ ಅಂದರೆ ಕೊಟ್ಟ ಮಾತಿನಂತೆ ನಡೆದುಕೊಳ್ಳುವುದು. ಇಂಥ ಶ್ರೇಷ್ಠ ಸಿದ್ಧಾಂತವನ್ನು ಪರಮ ಪೂಜ್ಯ ಶ್ರೀ ತಿಂತಿಣಿ ಮೌನೇಶ್ವರರು ಈ ವಚನದ ಮೂಲಕ ಕಟ್ಟಿಕೊಡತಾರೆ.

ತೈಲವಿಲ್ಲದ ಜ್ಯೋತಿ ಬೈಲೊಳಗೆ ಉರಿಯುವುದು
ಕೌಲು ಕೊಟ್ಟಂತೆ ನಡೆಸುವನು ಹರಿಶ್ಚಂದ್ರನ
ದೌಲತ್ತದೊಳಗೆ, ಬಸವಣ್ಣ.
(ತಿಂತಿಣಿ ಮೌನೇಶ್ವರರ ವಚನಗಳು-ಡಾ. ವೀರೇಶ ಬಡಿಗೇರ/2016/ಪುಟ. 134/ವ.ಸಂ. 311)

“ಕೌಲು ಕೊಟ್ಟಂತೆ ನಡೆಸುವನು” ಹರಿಶ್ಚಂದ್ರನ ಕೊಟ್ಟ ಮಾತಿಗೆ ತಪ್ಪದಂತೆ ನಡೆದುಕೊಂಡ ಕಥೆಯನ್ನು ಬಳಸಿಕೊಂಡು ನಡೆ-ನುಡಿ ಸಿದ್ಧಾಂತವನ್ನು ತಿಳಿಸಿದ್ದಾರೆ. ಇದನ್ನೇ ಬಸವಣ್ಣನವರ ಒಂದು ವಚನ ಕಟ್ಟಿ ಕೊಡುತ್ತದೆ.

ಭಕ್ತಿ ಸುಭಾಷೆಯ ನುಡಿಯ ನುಡಿವೆ, ನುಡಿದಂತೆ ನಡೆವೆ,
ನಡೆಯೊಳಗೆ ನುಡಿಯ ಪೂರೈಸುವೆ,
ಮೇಲೆ ತೂಗುವ ತ್ರಾಸು ಕಟ್ಟಳೆ ನಿಮ್ಮ ಕೈಯಲ್ಲಿ.
ಒಂದು ಜವೆ ಕೊರತೆಯಾದಡೆ
ಎನ್ನನದ್ದಿ ನೀನೆದ್ದು ಹೋಗು, ಕೂಡಲಸಂಗಮದೇವಾ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-43 / ವಚನ ಸಂಖ್ಯೆ-441)

“ಭಕ್ತಿ ಸುಭಾಷೆ” ಅಂತ ಹೇಳತಾರೆ ಬಸವಣ್ಣನವರು. ಸುಭಾಷೆ ಅನ್ನುವ ಅರ್ಥದಲ್ಲಿ. ಅವರ ಈ ವಚನದಲ್ಲಿ “ಭಕ್ತಿ ಸುಭಾಷೆಯ ನುಡಿಯ ನುಡಿವೆ, ನುಡಿದಂತೆ ನಡೆವೆ, ನಡೆಯೊಳಗೆ ನುಡಿಯ ಪೂರೈಸುವೆ”. ಇದು ಭಾಷೆಯ ಸಂಸ್ಕೃತಿ. ನಡೆಯೊಳಗೆ ನನ್ನ ನುಡಿಯನ್ನ ಪೂರೈಸುವೆ ಅಥವಾ ನಡೆ ನುಡಿ ಒಂದಾಗಿರುವೆ ಅಂತ ಹೇಳಿ ಮಾತು ಕೊಡೋದು ಅಷ್ಟೇ ಅಲ್ಲಾ ನಡೆಯೋದು. ಇಷ್ಟಕ್ಕೆ ಅಲ್ಲಾ ಇದು ಬರೀ ಹೇಳಿಕೆಗಳಲ್ಲಾ. “ಮೇಲೆ ತೂಗುವ ತ್ರಾಸು ಕಟ್ಟಳೆ ನಿಮ್ಮ ಕೈಯಲ್ಲಿ”. ಈ ತ್ರಾಸು ಕಟ್ಟಳೆ ತಕ್ಕಡಿ ಅಂತೀವಲ್ಲಾ ಅದನ್ನು ನಿನ್ನ ಕೈಯಲ್ಲಿ ಹಿಡಿದುಕೋ. ನಾನು ಹೇಳಿದ ಮಾತಿನಲ್ಲಿ ಒಂದು “ಜವೆ ವ್ಯತ್ಯಾಸವಾದರೂ ಎನ್ನನದ್ದಿ ನೀನೆದ್ದು ಹೋಗಾ”. ನನ್ನನ್ನ ಮುಗಿಸಿ ಬಿಡು ನೀನು ಹೋಗು. ಇಷ್ಟು ಪ್ರಮಾಣಬದ್ಧವಾಗಿ ಇಷ್ಟು ಆತ್ಮ ಸ್ಥೈರ್ಯದಿಂದ ಹೇಳುವ ಶಕ್ತಿ ಬಸವಣ್ಣನವರಲ್ಲಿ ಇತ್ತಲ್ಲಾ ಅದು ಇವತ್ತು ಎಷ್ಟು ಜನರಿಗೆ ಇದೆ ಎನ್ನುವ ಅರ್ಥದಲ್ಲಿ ನಾವಿವತ್ತು ಇದನ್ನ ಕೇಳಬೇಕು.

ನಮಗೆ ಪರಮ ಪೂಜ್ಯ ಶ್ರೀ ತಿಂತಿಣಿ ಮೌನೇಶ್ವರರು ಮತ್ತು ಬಸವಣ್ಣನವರು ಪ್ರಸ್ತುತ ಆಗೋದು ಈ ಕಾರಣಕ್ಕಾಗಿ. ನುಡಿದಂತೆ ನಡೆಯಬೇಕು. ಅದು ಭಕ್ತಿ ಸುಭಾಷೆ ಇರಬೇಕು. ಅದು ಬರೀ ಭಾಷೆ ಆಗಬಾರದು. ನಡೆ ಕೂಡ ಆಗಬೇಕು ಅನ್ನೋ ಅರ್ಥದಲ್ಲಿ ಆ ಮಾತನ್ನು ಕೇಳಬೇಕು. ಇದು ಪರಮ ಪೂಜ್ಯ ಶ್ರೀ ತಿಂತಿಣಿ ಮೌನೇಶ್ವರರು ಮತ್ತು ಬಸವಣ್ಣನವರು ತಮ್ಮ ಬದುಕಿನುದ್ದಕ್ಕೂ ಅಳವಡಿಸಿಕೊಂಡು ಒಂದು ಕ್ರಾಂತಿಯ ಸ್ವರೂಪದಲ್ಲಿ ಬಂದಂಥ ಒಂದು ಸಂಸ್ಕೃತಿ.

ಇನ್ನು ಕಾಯಕ ಸಂಸ್ಕೃತಿಗೆ ಬಂದರೆ ಪರಮ ಪೂಜ್ಯ ಶ್ರೀ ತಿಂತಿಣಿ ಮೌನೇಶ್ವರರ ವಚನಗಳು ಬಹಳ ಖಾರವಾಗಿಯೇ ಪ್ರತಿಕ್ರಿಯೆ ನೀಡುತ್ತವೆ. ನಮ್ಮ ಅಂತರಂಗವನ್ನು ಬಡಿದೆಬ್ಬಿಸುತ್ತವೆ.

ಬಡಿಗ ಕಮ್ಮಾರರಿಗೆ ತುಡುಗುತನ ಸಲ್ಲದು
ಬಡವರಿಗೆ ಬಡಾಯಿ ಸಲ್ಲದು, ಊಳಿಗದ
ಒಕ್ಕಲು ಹೇಳಿದಂತೆ ಇರಬೇಕು
ಆಳಾಗಿ ಮುಂದೆ ನಡೆವುದು
ಎನಗೊಂದು ತಾನಾಗಿ ಹೋಗುವುದು
ಮೋನಯ್ಯನ ಮಾತು ಚಾಣದ ಹದನಂತೆ
ಜ್ಞಾನವುಳ್ಳವರು ತಿಳುಕೊಳ್ಳಿ, ಬಸವಣ್ಣ.

(ತಿಂತಿಣಿ ಮೌನೇಶ್ವರರ ವಚನಗಳು-ಡಾ. ವೀರೇಶ ಬಡಿಗೇರ/2016/ಪುಟ. 13/ವ.ಸಂ. 27)

ಅತ್ಯಂತ ಶ್ರೇಷ್ಠ ಕುಶಲ ಕರ್ಮಿಗಳಾದ ಬಡಿಗೇರರು, ಕಮ್ಮಾರರು ಅಥವಾ ಎಲ್ಲ ಪಂಚಕರ್ಮಿಗಳಿಗೆ ಮೈಗಳ್ಳತನ ಮತ್ತು ತನ್ನನ್ನು ತಾನು ಹೊಗಳಿಕೊಳ್ಳುವ ಅಜ್ಞಾನ ಬೇಡ ಎನ್ನುವುದು ಈ ವಚನದ ಆಶಯ. ಒಕ್ಕಲು ಅಂದರೆ ಸಮಾಜದಲ್ಲಿ ಸೂಕ್ಷ್ಮವಾದ ನಡೆದುಕೊಳ್ಳುವುದು ಅವಶ್ಯ ಮತ್ತು ಸ್ವಾವಲಂಬನೆಯ ಪ್ರತೀಕ. “ಆಳಾಗಿ ದುಡಿ ಅರಸನಾಗಿ ಉಣ್ಣು” ಎನ್ನುವ ಗಾದೆ ಮಾತಿನ ಕಾಯಕ ತತ್ವದ ಸೊಗಡು ಈ ವಚನದಲ್ಲಿ ಕಂಡು ಬರುತ್ತದೆ. ವಿವೇಕಿಗಳು ಈ ಮಾತುಗಳನ್ನು ಅರ್ಥ ಮಾಡಿಕೊಳ್ಳಬೇಕೆಂದು ಪರಮ ಪೂಜ್ಯ ಶ್ರೀ ತಿಂತಿಣಿ ಮೌನೇಶ್ವರರು ಚಾಣದಷ್ಟು ಹರಿತವಾಗಿ ಹೇಳಿದ್ದಾರೆ. ಇಂಥ ಕಾಯಕ ತತ್ವದ ಶ್ರೇಷ್ಠತೆ ಮತ್ತು ಜ್ಯೇಷ್ಠತೆಯನ್ನು ಬಸವಣ್ಣನವರು ತಮ್ಮ ಒಂದು ವಚನದಲ್ಲಿ ಹೇಳಿದ್ದಾರೆ.

ದೇವ ಸಹಿತ ಭಕ್ತ ಮನೆಗೆ ಬಂದಡೆ
ಕಾಯಕವಾವುದೆಂದು ಬೆಸಗೊಂಡೆನಾದಡೆ
ನಿಮ್ಮಾಣೆ ನಿಮ್ಮ ಪುರಾತರಾಣೆ
ತಲೆದಂಡ ತಲೆದಂಡ ಕೂಡಲಸಂಗಮದೇವಾ
ಭಕ್ತರಲ್ಲಿ ಕುಲವನರಸಿದಡೆ
ನಿಮ್ಮಾಣೆ ನಿಮ್ಮ ರಾಣೀವಾಸದಾಣೆ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-44 / ವಚನ ಸಂಖ್ಯೆ-453)

ಬಸವಣ್ಣನವರ ಈ ವಚನ ಕಾಯಕ ಸಿದ್ಧಾಂತದ ದೈವತ್ವಕ್ಕೆ ಹಿಡಿದ ಕನ್ನಡಿ ಎನ್ನಬಹುದು. ಭಕ್ತರೇ ಆಗಲಿ ಅಥವಾ ದೇವರೇ ಆಗಲಿ ನನ್ನ ಮನೆಗೆ ಬಂದರೆ ಅವನ ಕುಲ, ಜಾತಿ ಹಾಗು ಕಾಯಕವನ್ನು ನಾನು ಕೇಳಿದರೆ ಕೂಡಲಸಂಗಮನ ಮೇಲೆ ಆಣೆ ಅಂತಾರೆ ಬಸವಣ್ಣನವರು. ಇದು ಕಾಯಕವನ್ನು ದೈವತ್ವಕ್ಕೇರಿಸಿದ ಪ್ರಪಂಚದ ಮೊಟ್ಟ ಮೊದಲನೇ ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯ Economic Model. ಇದರ Total Application ನಾವು ಕಾಣಬೇಕಾದರೆ ಜಪಾನ್‌ ದೇಶ ಆರ್ಥಿಕವಾಗಿ ದೈತ್ಯ ಶಕ್ತಿಯಾಗಿ ಬೆಳೆದದ್ದನ್ನು ನಪಿಸಿಕೊಳ್ಳಬೇಕಾಗುತ್ತದೆ.

ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಜಪಾನ್‌ ಮೇಲೆ ಅಣುಬಾಂಬ್‌ ದಾಳಿಯಾದಾಗ ಇಡೀ ಜಪಾನ್‌ ದೇಶ ಛಿದ್ರ ಛಿದ್ರವಾಗಿ ಹೋಗತದೆ. ಆದರೆ, ಅಲ್ಲಿಂದ 50 ವರ್ಷಗಳಲ್ಲಿ ಜಪಾನ್‌ ದೇಶ ಆರ್ಥಿಕವಾಗಿ ಬಲಾಢ್ಯ ರಾಷ್ಟ್ರವಾಗಿ ಬೆಳೀತದೆ. ಅದೇ ಒಂದು ಸಾಹಸ ಗಾಥೆ.

ಫ್ರಾನ್ಸ್‌ ದೇಶದಲ್ಲರುವ OECD (Organization of Economic Co-Operation & Development) ಎನ್ನುವ ಸಂಸ್ಥೆ ಇದೆ. ಇಂಥ ಅಭೂತಪೂರ್ವ ಸಾಧನೆ ಮಾಡಿದ್ದು ಹೇಗೆ ಎನ್ನುವದನ್ನು 1998 ರಲ್ಲಿ ಈ ಸಂಸ್ಥೆ ಜಪಾನ್‌ ದೇಶವನ್ನು ಕೇಳತದೆ. ಈ ಪ್ರಶ್ನೆಗೆ 2001 ರಲ್ಲಿ ಜಪಾನ್‌ ದೇಶ ಬೃಹತ್ 20 volume ಗಳಲ್ಲಿ ವರದಿಗಳ ಮೂಲಕ ಉತ್ತರ ನೀಡತದೆ. ಎಲ್ಲ 20 Volume ಗಳನ್ನೂ ಇಂಗ್ಲೀಷಿಗೆ ಭಾಷಾಂತರಿಸಿ ಪ್ಯಾರಿಸ್ ನ OECD ಕಛೇರಿಯಲ್ಲಿ ಇಡಲಾಗಿದೆ. ನಾನು ಅದರ ಮೊದಲನೇಯ ಪ್ರತಿಯನ್ನು ಓದಿದಾಗ ಅದ್ಭುತ ಮತ್ತು ಆಶ್ಚರ್ಯಕರ ಸಂದೇಶ ಸಿಗತದೆ. ಅದರ ಮೊದಲನೇ ಪ್ಯಾರಾದಲ್ಲಿ ಅವರು ಹೇಳತಾರೆ.

After the destruction we have not started Engg or Medical colleges or any other technical training centres to rebuild our country.
 In fact, we gave responsibility to our own people who are Carpenters, Masons, Blacksmiths, Weavers and so on and depended on them.
 These people built an economically strong nation and much more than that is they went on to start Engg & Medical Colleges, which the younger generation carried forward the legacy of nation building.

ಇದು ಆಯಗಾರ ಪರಿಕಲ್ಪನೆಯ Model. ಇದನ್ನು ಅಳವಡಿಸಿಕೊಂಡು ಜಪಾನ್‌ ದೇಶ ಆರ್ಥಿವಾಗಿ ಸಧೃಢವಾಗಿದ್ದು ನಮ್ಮ ಕಣ್ಣ ಮುಂದೆಯೇ ಇದೆ. ಇದು ಆರ್ಥಿಕ ಮತ್ತು ಸಾಮಾಜಿಕ ಸಮಾನತೆಯ ಪರಿಕಲ್ಪನೆಯ ಒಂದು ಉದಾಹರಣೆ. ಇಂಥ ಕಾಯಕದ ದೈವೀಕರಣವನ್ನು ಪರಮ ಪೂಜ್ಯ ಶ್ರೀ ತಿಂತಿಣಿ ಮೌನೇಶ್ವರರು ತಮ್ಮ ಅನೇಕ ವಚನಗಳಲ್ಲಿ ಮೂಡಿಸಿದ್ದಾರೆ.

ಕುಂಭಿಣಿಯಾಕಾಶದ ಮೇಲೆ ಕಂಭ ಸೂತ್ರವ ಹೂಡಿ
ಎಂಭತ್ನಾಲ್ಕು ಲಕ್ಷ ಜೀವವ ಗೊಂಬಿಯ ಮಾಡಿ ಕುಣಿಸಿದ
ಶಂಭು ಶಂಕರನ ಹೆಸರೇನು ಎಂದರೆ
ಕಮ್ಮಾರನೆಂದು ಕುರುಹು ಹಿಡಿ, ಹಿಡಿಯದಿದ್ದರೆ
ಕಾಡೆಮ್ಮಿಯ ಮಾಡಿ ಕಡಿಸ್ಯಾರು, ಬಸವಣ್ಣ.
(ತಿಂತಿಣಿ ಮೌನೇಶ್ವರರ ವಚನಗಳು-ಡಾ. ವೀರೇಶ ಬಡಿಗೇರ/2016/ಪುಟ. 25/ವ.ಸಂ. 60)

ಅಕ್ಕಸಾಲೆ ತಾನಾದ ಅಲ್ಲಮಪ್ರಭುದೇವ
ಇಕ್ಕಳವ ಪಿಡಿದು, ಕೈಯಲ್ಲಿ ಸುತ್ತಿಗೆ ಹಿಡಿದು
ಸೊಕ್ಕಿದವರ ಹಲ್ಲು ಮುರಿಯುತ ಬಂದಾನೆ, ಬಸವಣ್ಣ.
(ತಿಂತಿಣಿ ಮೌನೇಶ್ವರರ ವಚನಗಳು-ಡಾ. ವೀರೇಶ ಬಡಿಗೇರ/2016/ಪುಟ. 21/ವ.ಸಂ. 46)

ಅಲ್ಲಮ ಪ್ರಭುಗಳು, ಬಸವಣ್ಣನವರು ಮತ್ತಿತರ ಬಸವಾದಿ ಶರಣರನ್ನು ತಮ್ಮ ಅನೇಕ ವಚನಗಳಲ್ಲಿ ಪರಮ ಪೂಜ್ಯ ಶ್ರೀ ತಿಂತಿಣಿ ಮೌನೇಶ್ವರರು ನೆನಪಿಸಿಕೊಂಡಿದ್ದಾರೆ. ವಿಶೇಷವಾಗಿ ಅಲ್ಲಮ ಪ್ರಭುಗಳನ್ನು ಅತ್ಯಂತ ಗೌರವದಿಂದ ಕಂಡಿದ್ದಾರೆ. ಅವರ ಒಂದು ವಚನದಲ್ಲಿ “ದೇವದೇವರಿಗೆಲ್ಲ ದೇವ ಚಿಂತಾಮಣಿಯು” ಎಂದು ಕರೆದಿದ್ದಾರೆ. ಅಲ್ಲಮ ಪ್ರಭುಗಳ ಆಧ್ಯಾತ್ಮಿಕ ಚಿಂತನೆಯನ್ನು ಬಹಳವಾಗಿ ಪ್ರೀತಿಸಿದ್ದನ್ನ ನಾವು ಕಾಣಬಹುದು.

ದೇವದೇವರಿಗೆಲ್ಲ ದೇವ ಚಿಂತಾಮಣಿಯು
ರಾಯರಾಯರಿಗೆಲ್ಲ ರಾಯ ಶಿಖಾಮಣಿಯು
ಅಲ್ಲಮನ ಜ್ಞಾನ ಮಾನವರಿಗೆ ತಿಳಿಯದು, ಬಸವಣ್ಣ.
(ತಿಂತಿಣಿ ಮೌನೇಶ್ವರರ ವಚನಗಳು-ಡಾ. ವೀರೇಶ ಬಡಿಗೇರ/2016/ಪುಟ. 54/ವ.ಸಂ. 131)

ಅಲ್ಲಮ ಪ್ರಭುಗಳ ಅನುಭಾವ ಪಥವನ್ನು ಅನುಸರಿಸುವ ಪರಮ ಪೂಜ್ಯ ಶ್ರೀ ತಿಂತಿಣಿ ಮೌನೇಶ್ವರರು ದೇವತೆಗಳಿಗೂ ಕೂಡ ದೇವಚಿಂತಾಮಣಿಯಾಗಿದ್ದವರು ಅಂತಾ ಡಾ. ವೀರೇಶ ಬಡಿಗೇರ ಅವರು ತಮ್ಮ “ತಿಂತಿಣಿ ಮೌನೇಶ್ವರರ ವಚನಗಳು” ಪುಸ್ತಕದಲ್ಲಿ ಬರೀತಾರೆ. ಮುಂದುವರೆದು ಚಿಂತಾಮಣಿ ಮತ್ತಿ ಶಿಖಾಮಣಿ ಇವೆರಡೂ ತಮ್ಮ ಮೆರಗನ್ನು ಕಂಡುಕೊಳ್ಳುವುದು ಅಕ್ಕಸಾಲಿಗನ ಕೌಶಲ್ಯದಿಂದ. ಇಂಥ ಅಮೂಲ್ಯವಾದ ಜ್ಞಾನವನ್ನು ಸಾಮಾನ್ಯ ಮನುಷ್ಯರು ಅರಿಯಲಾರರು ಎಂದು ಹೇಳತಾರೆ.

ವಿಶ್ವಕರ್ಮರು ಲೋಹ ಶಾಸ್ತ್ರದಲ್ಲಿ ನಿಪುಣರಾಗಿದ್ದು ತವರ ಮತ್ತು ತಾಮ್ರದ ಸರಿಯಾದ ಪ್ರಮಾಣ ಮಿಶ್ರಣದಿಂದ ಕಂಚು ತಯಾರಿಸುವ ವಿದ್ಯೆಯಲ್ಲಿ ಪಾರಂಗತರಾಗಿದ್ದನ್ನು ಪರಮ ಪೂಜ್ಯ ಶ್ರೀ ತಿಂತಿಣಿ ಮೌನೇಶ್ವರರರು ಇಲ್ಲಿ ನಿರೂಪಣೆ ಮಾಡಿದ್ದಾರೆ.

ತವರ ತಾಮ್ರವನು ವಿವರದಲಿ ಕೂಡಿಸಿ ಮಾಡಿದ
ಹರನ ಓಂಕಾರದ ಹರಿವಾಣದೊಳು ಬಿಟ್ಟು
ಎಲೆಯ ಹೊಲಿದು ತಿಂಬುವುದು ಉಚಿತವೆ
ಇದು ನಮ್ಮ ಕೆರವಿನ ಹೊಲಿಗೆಗೆಂದು ಅರಿಯರು
ಹೊಲೆ ಪಾಂಚಾಳರು, ಬಸವಣ್ಣ.
(ತಿಂತಿಣಿ ಮೌನೇಶ್ವರರ ವಚನಗಳು-ಡಾ. ವೀರೇಶ ಬಡಿಗೇರ/2016/ಪುಟ. 200/ವ.ಸಂ. 472)

ಈ ವಚನದಲ್ಲಿ ಬರುವ ಶಬ್ದಗಳ ಪಾರಿಭಾಷಿಕ ಅರ್ಥ:
ಹರಿವಾಣ : ಅಗಲವಾದ ತಟ್ಟೆ,

ಹೆಚ್ಚು ಚರ್ಚೆಗೆ ಒಳಗಾಗದ ಬಸವಣ್ಣನವರ ಒಂದು ವಚನ ಮೇಲ್ನೋಟಕ್ಕೆ ಸರಳವಾಗಿರುವಂತೆ ಕಂಡರೂ ವಿಶ್ಲೇಷಣೆ ಮಾಡುತ್ತಾ ಹೋದಂತೆ ಶರಣ ಕ್ರಾಂತಿಯ ಗುಟ್ಟುಗಳನ್ನು ಮತ್ತು ಆ ಕಾಲಘಟ್ಟದ ಆಯಗಾರರನ್ನು ಅಡಗಿಸಿಕೊಂಡಂತೆ ಕಾಣುತ್ತದೆ.

ಕರಗಿಸಿ ಎನ್ನ ಮನದ ಕಾಳಿಕೆಯ ಕಳೆಯಯ್ಯಾ,
ಒರೆಗೆ ಬಣ್ಣಕ್ಕೆ ತಂದೆನ್ನ ಪುಟವನಿಕ್ಕಿ ನೋಡಯ್ಯಾ,
ಕಡಿಹಕ್ಕೆ ಬಡಿಹಕ್ಕೆ ತಂದೆನ್ನ ಕಡೆಯಾಣಿಯ ಮಾಡಿ,
ನಿಮ್ಮ ಶರಣರ ಪಾದಕ್ಕೆ ತೊಡಿಗೆಯ ಮಾಡಿ
ಸಲಹು ಕೂಡಲಸಂಗಮದೇವಾ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-29 / ವಚನ ಸಂಖ್ಯೆ-251)

ಆಧ್ಯಾತ್ಮಿಕವಾಗಿ ನೋಡುವುದಾದರೆ, ಬಸವಣ್ಣನವರು ಬಂಗಾರವನ್ನು ಕಾಯಿಸಿ ಕರಗಿಸಿ ಬಡಿದು ತಟ್ಟಿ ಆಭರಣವನ್ನು ಮಾಡುವ ಹಾಗೆ ಮನದ ಕಲ್ಮಷವನ್ನು ತೆಗೆದು ಹಾಕಿ ಅಂತರಂಗದ ಅರಿವನ್ನು ಮೂಡಿಸಿ ಶರಣಪಥದಲ್ಲಿ ಸಾಗುವ ಹಾಗೆ ಮಾಡು ಕೂಡಲಸಂಗಮದೇವಾ ಎಂದು ಪ್ರಾರ್ಥನೆ ಮಾಡುತ್ತಾರೆ. ಈ ವಚನದಲ್ಲಿ ಅಕ್ಕಸಾಲಿಗನ ವೃತ್ತಿ ಕೌಶಲ್ಯವನ್ನು ಬಳಸಿಕೊಂಡು ಸಾಮಾಜಿಕ ಮತ್ತು ಆಧ್ಯಾತ್ಮಿಕ ಚಿಂತನೆಯನ್ನು ಮಾಡಿದ್ದಾರೆ.

“ಮಣ್ಣನ್ನು ಆಳಿದವರು ಮಣ್ಣಾಗಿ ಹೋದರು. ಮನಸ್ಸನ್ನು ಆಳಿದವರು ಮನಸ್ಸಿನಲ್ಲಿಯೇ ಉಳಿದರು” ಅಂತ ಹಾವೇರಿಯ ಸರ್ಕಾರಿ ಪದವಿ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಡಾ. ಪುಷ್ಪಾವತಿ ಶಲವಡಿಮಠ ಅವರು ನಮ್ಮ ವಚನ ಮಂದಾರ ವೇದಿಕೆಯ ಕಾರ್ಯಕ್ರಮವೊಂದರಲ್ಲಿ ಹೇಳಿದ ಅತ್ಯಂತ ಪ್ರಬುದ್ಧ ಮಾತುಗಳನ್ನು ಇಲ್ಲಿ ಉಲ್ಲೇಖ ಮಾಡುವ ಪ್ರಸಂಗ ಬಂದಿದೆ. ಅಂಥ ಮನಸ್ಸಿನಲ್ಲಿ ಆಳವಾಗಿ ಬೇರೂರಿದ ಮಹನೀಯರಲ್ಲಿ ಪರಮ ಪೂಜ್ಯ ಶ್ರೀ ತಿಂತಿಣಿ ಮೌನೇಶ್ವರರು ಮತ್ತು ಬಸವಾದಿ ಶರಣರು ಎನ್ನುವುದು ಇಲ್ಲಿ ಬಹಳ ಸೂಕ್ತವಾಗಿದೆ.

ನಮ್ಮ ಗುರು ಹಿರಿಯರು ಮತ್ತು ಪರಮ ಪೂಜ್ಯ ಶ್ರೀ ತಿಂತಿಣಿ ಮೌನೇಶ್ವರರಂಥ ಅನೇಕ ದಾರ್ಶನಿಕರು ನಮಗೆ ನೀಡಿದ ಅಮೃತತ್ವದ ಮಾತುಗಳು ಮತ್ತು ಅವರ ನಡೆ-ನುಡಿಗಳನ್ನು ಕೇಳಿದಾಗ ಸಂಸ್ಕೃತಿಯ ಅನಾವರಣವಾಗಿ ನಮ್ಮ ಅಂತರಂಗದಲ್ಲಿ ಆಳವಾಗಿ ಬೇರೂರುತ್ತಿತ್ತು. ಸಂಚಾರ ಸಾಧನೆಗಳು ಅನುಕೂಲಕರವಿಲ್ಲದಂತ ಕಾಲಘಟ್ಟದಲ್ಲಿ ಊರೂರು ಸುತ್ತಾಡಿ ಧರ್ಮ ಜಾಗೃತಿಯ ಕೆಲಸವನ್ನು ಮಾಡಿದ್ದಾರೆ. ಅಂಥ ಪೂಜ್ಯ ಮಹನೀಯರನ್ನು ನೆನಪಿಸಿಕೊಂಡಾಗ ಹೃದಯದಲ್ಲಿ ತಂಗಾಳಿಯ ಸಿಂಚನವಾಗುತ್ತದೆ. ಅಂಥ ಸಂಸ್ಕೃತಿಯನ್ನು ಹಾಗೂ ಭವ್ಯ ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಮತ್ತು ನಮ್ಮ ಮುಂದಿನ ಪೀಳಿಗೆಗೆ ಅದನ್ನು ವರ್ಗಾಯಿಸುವ ಬಹು ದೊಡ್ಡ ಜವಾಬ್ದಾರಿ ನಮ್ಮ ಹೆಗಲ ಮೇಲೆ ಇದೆ ಅಂತ ಹೇಳತಾ ಕಾಯಕ ಯೋಗಿ ಶರಣ ಮೋಳಿಗೆ ಮಾರಯ್ಯನವರ ಈ ವಚನ ನನ್ನ ಹೃದಯಕ್ಕೆ ಅತ್ಯಂತ ಹತ್ತಿರವಾದಂಥ ವಚನ. ಈ ವಚನದ ಮೂಲಕ ಈ ಉಪನ್ಯಾಸಕ್ಕೆ ವಿರಾಮ ಹೇಳುತ್ತೇನೆ.

ಆನೆ ಕುದುರೆ ಭಂಡಾರವಿರ್ದಡೇನೊ?
ತಾನುಂಬುದು ಪಡಿಯಕ್ಕಿ, ಒಂದಾವಿನ ಹಾಲು, ಮಲಗುವುದರ್ಧ ಮಂಚ.
ಈ ಹುರುಳಿಲ್ಲದ ಸಿರಿಯ ನೆಚ್ಚಿ ಕೆಡಬೇಡ ಮನುಜಾ.
ಒಡಲು ಭೂಮಿಯ ಸಂಗ, ಒಡವೆ ತಾನೇನಪ್ಪುದೊ?
ಕೈವಿಡಿದ ಮಡದಿ ಪರರ ಸಂಗ, ಪ್ರಾಣ ವಾಯುವಿನ ಸಂಗ.
ಸಾವಿಂಗೆ ಸಂಗಡವಾರೂ ಇಲ್ಲ ಕಾಣಾ, ನಿಃಕಳಂಕ ಮಲ್ಲಿಕಾರ್ಜುನಾ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1523 / ವಚನ ಸಂಖ್ಯೆ-1504)

ಅವಕಾಶ ನೀಡಿದ ಎಲ್ಲ ಗುರು ಹಿರಿಯರಿಗೂ ಹಾಗೂ ಇಷ್ಟು ಹೊತ್ತು ತಾಳ್ಮೆ ಹಾಗೂ ಸಂಯಮದಿಂದ ಕೇಳಿದ ಎಲ್ಲರಿಗೂ ಶರಣು ಶರಣಾರ್ಥಿಗಳು.

ಸಂಗ್ರಹ ಮತ್ತು ಲೇಖನ:
ವಿಜಯಕುಮಾರ ಕಮ್ಮಾರ
“ಸವಿಚರಣ” ಸುಮತಿ ಶಾಲೆಯ ಹತ್ತಿರ
ಕ್ಯಾತ್ಸಂದ್ರ, ತುಮಕೂರು – 572 104
ಮೋಬೈಲ್‌ ನಂ: 9741 357 132
ಈ-ಮೇಲ್‌: vijikammar@gmail.com

ಸಹಾಯಕ ಗ್ರಂಥಗಳು :
ಬಸವಯುಗದ ವಚನ ಮಹಾಸಂಪುಟ (1&2) : ಡಾ. ಎಮ್.‌ ಎಮ್.‌ ಕಲಬುರ್ಗಿ.
ಪಂಚಾನನ/ಸಂಪುಟ-1 & 2 : ಡಾ. ವೀರೇಶ ಬಡಿಗೇರ, ರಾಜಕುಮಾರ ಬಡಿಗೇರ, ಪ್ರಹ್ಲಾದ ಪತ್ತಾರ.
ಪಂಚಾಳ ಸಾಹಿತ್ಯ ಮತ್ತು ಸಂಸ್ಕೃತಿ : ಡಾ. ವೀರೇಶ ಬಡಿಗೇರ.
ತಂತಿಣಿ ಮೌನೇಶ್ವರರ ವಚನಗಳು : ಸಂ. ಡಾ. ವೀರೇಶ ಬಡಿಗೇರ.
ವಚನಾರ್ಥ ಚಿಂತನ : ಡಾ. ಸಿದ್ಧರಾಮ ಸ್ವಾಮಿಗಳು.
ವಿಶ್ವಕರ್ಮ ಧರ್ಮ ಮತ್ತು ಸಂಸ್ಕೃತಿ : ದತ್ತಾತ್ರೇಯ ಶ್ರೀ ವಿಶ್ವಕರ್ಮ.
ಕರ್ನಾಟಕದ ಆಯಗಾರರ ಸಂಸ್ಕೃತಿ : ಡಾ. ವೀರೇಶ ಬಡಿಗೇರ.

Loading

Leave a Reply