
ಜನಪದ ಬೇರು ಉಳಿದಿದ್ದೆಲ್ಲ ನಾರು”
‘ಧರ್ಮನೀತಿ ವಿಶ್ವಕೋಶ’ ದ (Encyclopedia of Religion & Ethics) ಸಂಪಾದಕರಾದ ಜೇಮ್ಸ್ ಹೆಸ್ಟಿಂಗ್ರ “ಇತಿಹಾಸವು ಒಂದು ರಾಜ್ಯದ ಅಥವಾ ರಾಷ್ಟ್ರೀಯ ಜೀವನದಲ್ಲಿ ದಾಖಲಾದರೆ, ಜನಪದ ಸಾಹಿತ್ಯವು ಪ್ರಾಗೈತಿಹಾಸಿಕ ಜೀವನದ ಪರಂಪರಾಗತ ಸಂಗತಿಯಾಗಿದೆ ಎನ್ನುತ್ತಾರೆ. ಮುಂದುವರಿದು ‘ಅವು ಕೇವಲ ಕಲ್ಪನಾತೀತವಲ್ಲ, ಜಾನಪದ ಕತೆಗಳು ಜನಾಂಗದ ಪುರಾಣಗಳು, ವಿಜ್ಞಾನ ಯುಗಕ್ಕೂ ಹಿಂದಿನ ವಿಜ್ಷಾನವು ಅದ್ಭುತಗಳ ಬಗ್ಗೆ ನೀಡಿದ ವಿವರಣೆಗಳೆ ಪುರಾಣಗಳು” ಎಂದು ಜನಪದ ಸಾಹಿತ್ಯದ ಮಹತ್ವ ತಿಳಿಸುತ್ತಾರೆ.
ಒಂದು ಕಾಲದ ಘಟನೆಯನ್ನು ನಡೆದು ಹೋದ ಸಂಗತಿಯನ್ನು ತಿಳಿದುಕೊಳ್ಳಲು ಹೊರಟಾಗ ಇತಿಹಾಸ ಅನೇಕ ವಿಷಯಗಳು ಆಧಾರವಾಗುತ್ತವೆ. ಶಾಸನಗಳು, ಕವಿಗಳು ರಚಿಸಿರುವ ಸಾಹಿತ್ಯ, ಸಂಶೋಧನಾ ಗ್ರಂಥಗಳು, ಐತಿಹಾಸಿಕ ನಿರೂಪಣೆಯ ಕೃತಿಗಳು, ಆದರೆ ಕೆಲವೊಂದು ಸಲ ಇವುಗಳಲ್ಲಿ ಇಲ್ಲದ ವಿಷಯಕ್ಕೆ ನಾವು ಜನಪದರತ್ನ ನೋಡಬೇಕಾಗುತ್ತದೆ. ಈ ಆಧಾರಗಳು ನಿಂತಾಗ ಇದಕ್ಕೆ ಮೊರೆ ಹೋಗದೆ ಗತ್ಯಂತರವಿಲ್ಲ. ಅದರಲ್ಲಿ ಉಲ್ಲೇಖತ ವಿಷಯ ನಿಕೃಷ್ಣ ಎಂದು ದೂರ ತಳ್ಳುವಂತಿಲ್ಲ. ಏಕೆಂದರೆ ಜನಪದರು ಕಂಡದ್ದನ್ನು, ಅನುಭವಿಸಿದ್ದನ್ನು, ಕೆಲವೊಮ್ಮೆ ಕೇಳಿದ್ದನ್ನು ತಮಗೆ ತಿಳಿದಂತೆ ಅವರು ಹೇಳಿರುತ್ತಾರೆ. ನಾನು ಹೇಳುವದೇ ಸತ್ಯ, ಅದೇ ಮುಖ್ಯ ಈ ಯಾವ ಗೋಜಿಗೂ ಹೋಗದೆ ತಿಳಿದಂತೆ ಹೇಳುತ್ತಾರೆ ಹಾಗೂ ಹಾಡುತ್ತಾರೆ. ಅಂತೆಯೇ ಎಲ್ಲದ್ದಕ್ಕೂ ಜನಪದ ಬೇರಾಗಿದೆ. ಆ ಬೇರಿನಿಂದಲೆ ಮರ ಬೆಳೆದು ನಳನಳಿಸಬೇಕಾಗುತ್ತದೆ. ಹೂ, ಕಾಯಿ, ಹಣ್ಣು ಬಿಡಬೇಕಾಗುತ್ತದೆ. ಅದನ್ನು ಮನುಷ್ಯ ತಿಂದು ಸಂತೋಷ ಪಡುತ್ತಾನೆ. ಹಾಗೆಯೇ ಜನಪದ ಸಾಹಿತ್ಯ.
ಜನಪದ ಸಾಹಿತ್ಯ ಯಾವ ದೇಶದಲ್ಲಿಯೂ ಯಾವ ಜನಾಂಗದಲ್ಲಿಯೂ ಗ್ರಂಥಸ್ಥವಾಗಿಲ್ಲ; ಬಾಯಿಂದ ಬಾಯಿಗೆ ಹರಿದು ಬಂದದ್ದಾಗಿರುವ ಈ ಸಾಹಿತ್ಯದ ಬೆಲೆ ಈಗ ಅರಿತು ಅದನ್ನು ಸಂಗ್ರಹಿಸುವ ಸಂಪಾದಿಸುವ ಕೆಲಸ ಎಲ್ಲಾ ದೇಶಗಳಲ್ಲಿ ವಿದ್ವಾಂಸರು ಮಾಡುತ್ತಿದ್ದಾರೆ. ಸರ್ಕಾರ, ಸಂಘ-ಸಂಸ್ಥೆಗಳು ಸಹಾಯ ಮಾಡುತ್ತಿವೆ. ಆದರೆ ಕೆಳದುಕೊಂಡದ್ದೆ ಹೆಚ್ಚು. ಉಳಿದಿದ್ದನ್ನೆ ಸಂಗ್ರಹಿಸಿ ಸಂತೋಷ ಪಡಬೇಕಾಗಿದೆ.
ಹೀಗೆ ನಮ್ಮ ದೇಶದ ಸಂಸ್ಕೃತಿಯ ಘನವಾದ ಸ್ವತ್ತಾಗಿರುವ ಜನಪದ ಸಾಹಿತ್ಯ ಸತ್ಯ-ನಿತ್ಯ ಮನಸ್ಸಿನ ರೈತಾಪಿ ಜನಾಂಗದ ಅನುಭವದ ಕುಲುಮೆಗಳಾಗಿವೆ. ದೊರೆತ ಸಾಹಿತ್ಯದ ಅವಲೋಕನಗೈದಾಗ ಅದಕ್ಕಿದ್ದ ನಿಖರತೆ, ಕಾವು, ಮಹತ್ವ ಗೊತ್ತಾಗುತ್ತದೆ. ಇಂತಹ ಅಮೂಲ್ಯ ಸಾಹಿತ್ಯದ ಹಿನ್ನೆಲೆಯಲ್ಲಿ ವೀರಶೈವ-ಲಿಂಗಾಯತ ಧರ್ಮದ ಪ್ರಾಮುಖ್ಯತೆಯನ್ನು ಗುರುತಿಸಬಹುದಾಗಿದೆ.
ನನಗೆ ಸಿಕ್ಕ ಜನಪದ ಸಾಹಿತ್ಯ (ಭಜನಾ ಪದ ಹೊರತುಪಡೆಸಿ) ನೋಡಿದಾಗ ವೀರಶೈವ ಎಂಬ ಪದ ಆ ಸಾಹಿತ್ಯದಲ್ಲಿ ಎಲ್ಲಿಯೂ ಬಂದಿರುವದಿಲ್ಲ. ಅವರು ಶಿವಮತ, ಲಿಂಗಾಯತ, ಲಿಂಗಮತ ಎಂಬ ಪದಗಳನ್ನು ಬಳಸುತ್ತಾರೆ ಹೊರತು ವೀರಶೈವ ಎಂಬ ಪದವನ್ನು ಬಳಸಿರುವದು ಕಂಡು ಬರುವದಿಲ್ಲ.
ಅರಿಯುವದಕೆ ಕುರುಹೆಂದು ಕರಲಿಂಗ ನೀ ಕೊಟ್ಟ
ಶರಣೆಂಬೊ ನುಡಿಯ ಚಲಮಾಡಿ | ಶಿವಮತಕ್ಕೆ
ಗುರುಬಸವಲಿಂಗ ನಿಜಮಂತ್ರೊ
ಮುರಾಸಂಜೀಲಿ ಮುತ್ತೈದಿ ಬಾಯಲ್ಲಿ
ಕೇಳಿಬಾ ತಮ್ಮ ಶಿವಮತ | ಮುತ್ತೈದಿ
ಕೈಲಾಸ ಇಳಿಸ್ಯಾಳ ನಮ ಮುಂದ
ಎಂದು ಒಂದು ತ್ರಿಪದಿಯಲ್ಲಿ ಬಂದರೆ ಇನ್ನೊಂದರಲ್ಲಿ,
ಆಚಾರ ಅದರೊಳು ನೀಚೆಂಬ ಮಾತಿಲ್ಲ
ತೋಚುವದು ಜನಕೆ ಲಿಂಗಮತ | ಮಂದಿರವು
ಊಚೆಂಬ ಸದರು ಶಿವಮತಕ
ಎಂಬುದಾಗಿದೆ. ಇಂತಹ ಶಿವಮತ, ಲಿಂಗಾಯತ ಧರ್ಮ ಹುಟ್ಟಿದ್ದು ಬಸವಣ್ಣನಿಂದಲೇ ಎಂದು ಖಚಿತವಾಗಿ ನುಡಿಯುತ್ತಾರೆ, “ಹೊಸ ಮತದ ಸೂರ್ಯ ನುಡಿಸಿದನು” ಎಂದು ಹೆಮ್ಮೆಯಿಂದ ಹೇಳಿಕೊಳ್ಳುವರು.
ಕಾಯಕವ ಕಲಿಸುದಕ ನಾಯಕನು ಬಸವಯ್ಯ
ಜೀಯ ಹೊಸಮತಕೆ ಶಿವಭಕ್ತಿ | ಸಾರುದಕೆ
ರಾಯ ಜೀವನದ ಹೊಸನುಡಿಗೆ.
ಲಿಂಗಾಯತ ಮತಕಟ್ಯಾನ ಬಸವಣ್ಣ
ಲಿಂಗಕಟ್ಯಾನ ಎದಿಮ್ಯಾಲ | ಸುದರಾಸಿ
ಅಂಗ ಮಾಡ್ಯಾನ ತಾ ಗುಡಿ
ಲಿಂಗಾಂಗಿ ಬಸವಣ್ಣ ಲಿಂಗವಂತ ಮತಕಟ್ಟಿ
ಲಿಂಗ ತಾ ಕಟ್ಟಿ ಎಲ್ಲರಿಗಿ | ಬಸವಣ್ಣ
ಸಂಗ ಮಾಡ್ಯಾನ ಎಲ್ಲರದು
ಹೀಗೆ ಜನಪದರು ಲಿಂಗಾಯತ, ಲಿಂಗವಂತ, ಹೊಸಮತ ಶಿವಮತ ಮುಂತಾದ ಶಬ್ದಗಳನ್ನು ಬಳಸಿ ಬಸವಣ್ಣನವರೇ ಆ ಧರ್ಮದ ಸ್ಥಾಪಕರು ಎನ್ನುತ್ತಾರೆ.
ಶಿವನೇ ಈ ಧರ್ಮದ ಆರಾಧಕ ಆತನನ್ನು ತಮ್ಮ ಇಷ್ಠ ಲಿಂಗದಲ್ಲಿ ಕಂಡವರು ಲಿಂಗಾಯತರು ಬಸವಣ್ಣನವರು ಮಹಾದೇವನನ್ನು ಬಹಳಷ್ಟು ಸಲ ತಮ್ಮ ವಚನಗಳಲ್ಲಿ ನೆನೆಯುತ್ತಾರೆ. ಆತನ ಮೇಲಿರುವ ಅವರ ಭಕ್ತಿ ಅನೋನ್ಯವಾಗಿದೆ.
ಸ್ವಾಮಿ ನೀನು ಶಾಶ್ವತ ನೀನು
ಎತ್ತಿದೆ ಬರಿದೆ ಜಗವೆಲ್ಲವರಿಯಲು
ಮಹಾದೇವ ಮಹಾದೇವ ಮಹಾದೇವ
ಇಲ್ಲಿಂದ ಮೇಲೆ ಶಬ್ದವಿಲ್ಲ
ಪಶುಪತಿ ಜಗಕ್ಕೇಕೋ ದೇವಾ
ಸ್ವರ್ಗ ಮರ್ತ್ಯ ಪಾತಾಳದೊಳಗೆ
ಒಬ್ಬನೆ ದೇವಾ ಕೂಡಲಸಂಗಮದೇವಾ
ಪಾತಕ ಶತಕೋಟಿಯನ್ನೊರೆಸಲು
ಸಾಲದೆ ಒಂದು ಶಿವನಾಮ
ಸಾಲದೆ ಒಂದು ಹರನಾಮ
‘ಮಹಾದೇವ’ ಎಂಬ ಶಬ್ದಕ್ಕಿಂತ ಇನ್ನೊಂದು ದೊಡ್ಡ ಶಬ್ದವಿಲ್ಲವೆನ್ನುವ ಬಸವಣ್ಣನವರು ಶತಕೋಟಿ ಪಾಪಗಳನ್ನು ಅಳಿಸಿಕೊಳ್ಳಲು ಒಂದು ಶಿವ, ಹರನಾಮ ಸಾಕು ಎಂದು ಹೇಳುತ್ತಾರೆ. ಇಂತಹ ಮಹಾದೇವನನ್ನು ಅರ್ಚಿಸಲು ಬಸವಣ್ಣ ತೋರಿದ ಮಾರ್ಗಗಳೆಂದರೆ ಒಂದು ಇಷ್ಟಲಿಂಗ ಪೂಜೆ, ಇನ್ನೊಂದು ಷಡಕ್ಷರಿ ಮತ್ತು ಪಂಚಾಕ್ಷರಿ ಮಂತ್ರ.
ಜನಪದರಲ್ಲಿ ಮುಖ್ಯವಾಗಿರುವದು ಇದೇ ಆಗಿದೆ. ಅವರಿಗೆ ಮುಖ್ಯ ದೇವರು, ದೊಡ್ಡದೇವರು, ಹಿರಿಯದೇವರು, ಪರಮಾತ್ಮ, ಶಿವನ ಹೊರತು ಅವರಿಗೆ ಎಲ್ಲಾ ಗೌಣ. ಹನುಮ, ಕೃಷ್ಣ, ಗಣಪ, ಹೀಗೆ ಹತ್ತು ಹಲವು ದೇವರುಗಳನ್ನು ಅವರು ನೆನೆದಿರಬಹುದು. ಆದರೆ ಶಿವ ಅವರ ಆರಾಧ್ಯದೇವರು. ಒಕ್ಕಲಿಗರಾಗಿರುವ ಜನಪದರು ತಮ್ಮ ಕಾಯಕಕ್ಕೆ ಮೂಲ ಪರಶಿವ ಎನ್ನುತ್ತಾರೆ. ಆತನ ಪೂಜೆ, ನೆನಹು, ಸ್ಮರಣೆ ಅವರಿಗೆ ಮುಖ್ಯ ಬಸವಣ್ಣನವರಂತೆ.
ಶಿವಶಿವ ಎಂದರೆ ಸಿಡಿಲೆಲ್ಲ ಬಯಲಾಗಿ
ಕಲ್ಲು ಬಂದೆರಗಿಕಡೆಗಾಗಿ | ಎಲೆಮನೆವೇ
ಶಿವನೆಂಬ ಶಬ್ದುದ ಬಿಡಬ್ಯಾಡ
ಮಾದೇವ ನಿನ್ಹೊರತು ನಾನ್ಯರ ನಂಬಲಿ
ನಾ ಮಾಡೆನೆಂಬ ಅಳಿವಿಲ್ಲ | ಮಲ್ಲಯ್ಯ
ನೀ ನಡೆಸು ನನ್ನ ಸರುವೆಲ್ಲ
ಏಳೂತ ಶಿವಶಿವ ಮಲಗೂತ ಶಿವಶಿವ
ಮಗ್ಗೂಲಾದಾಗ ಶಿವಶಿವ | ನನತಂದಿ
ನಿನ್ನ ಗ್ಯಾನದಾಗ ಬೆಳಕಾಗಿ
ಹೀಗೆ ಹಲವು ತ್ರಿಪದಿ, ದ್ವಿಪದಿಗಳಲ್ಲಿ ಅವರು ಶಿವಸ್ಮರಣೆ ಮಾಡುತ್ತಾರೆ. ಆ ಸ್ಮರಣೆ ಇಹಲೋಕ ಪರಲೋಕ ಎರಡಕ್ಕೂ ಸುಮಾರ್ಗ ಮುಕ್ತಿ ಪಡೆಯಲು ಸನ್ಮಾರ್ಗ. ಶಿವನಾಮ ನುಡಿಯೋ ಇದೇ ಜನ್ಮ ಕಡಿಯೊ ಎಂದು ಹೇಳುತ್ತಾರೆ.
ಬಸವಾದಿ ಶಿವಶರಣರ ಲಿಂಗಾಯತ ಧರ್ಮವನ್ನೇ ಕಟ್ಟಿಕೊಂಡ ಜನಪದದಲ್ಲಿ ಆ ಧರ್ಮದ ವಿಶಿಷ್ಠ ಲಕ್ಷಣಗಳನ್ನೆಲ್ಲಾ ಗುರುತಿಸಬಹುದಾಗಿದೆ.
• ಮಹಾದೇವನ ಪರಮ ಭಕ್ತರು
• ಅವರ ವಾಣಿಕನ್ನಡ
• ಒಕ್ಕಲುತನ ಕಾಯಕ ಮುಖ್ಯವಾಗಿದ್ದು, ಉಳಿದ ಕಾಯಕಗಳನ್ನು ಗೌರವದಿಂದಕಂಡಿದ್ದಾರೆ
• ಅಷ್ಟಾವರಣ, ಪಂಚಾಚಾರ, ಷಟಾಸ್ಥಲಗಳ ಬಗ್ಗೆ ಗೌರವ
• ದಾಸೋಹಿಗಳು
• ನಡೆ-ನುಡಿ ಒಂದಾಗಿಸಿಕೊಂಡವರು
• ಅನುಭಾವಿಗಳು
• ಶರಣರ ಬಗ್ಗೆ ಅಪಾರಗೌರವ, ಭಕ್ತಿಯಿಟ್ಟುಕೊಂಡವರು
ಹೀಗೆ ಜನಪದರು ಬಸವಾದಿ ಶರಣರ ಮಾರ್ಗವನ್ನು ಅನುಸರಿಸುತ್ತಾ ಈ ಹಿಂದೆ ವಿವರಿಸಿದಂತೆ ಮಹಾದೇವನನ್ನು ಭಕ್ತಿಯಿಂದ ಶ್ರದ್ಧೆ ನಿಷ್ಠೆಗಳಿಂದ ಪೂಜಿಸುತ್ತಾ, ತಮ್ಮದೇ ಆದಗಟ್ಟಿ ಕನ್ನಡದಲ್ಲಿ ಹೇಳುತ್ತಾರೆ. ಅವರ ನುಡಿ ಗಂಡು ನುಡಿ. ಅಲ್ಲಿ ಭಯವಿಲ್ಲ, ನಾಚಿಕೆಯಿಲ್ಲ. ಡೋಲಾಯಮಾನ ಸ್ಥಿತಿಯಿಲ್ಲ. ಕನ್ನಡ ಭಾಷೆಗೆ ಎಂತಹ ಶಕ್ತಿಯಿದೆ ಎಂಬುದನ್ನು ಅವರ ನುಡಿಗಳಲ್ಲಿ ಕಂಡುಕೊಳ್ಳಬಹುದಾಗಿದೆ. ‘ಶಿವನುಡಿಯನ್ನೆ ಸೂಡ ಕಟ್ಟಿದರು’, ಹೊಲ್ಲೆಂಬ ನುಡಿಗೆ ಅವರಲ್ಲಿ ತಾಣವಿಲ್ಲ ಶರಣರಂತೆ ಜನಪದರು ನಿರ್ಭಿತಿಯಿಂದ ಹೇಳುತ್ತಾ ಕನ್ನಡೆಕ್ಕೊಂದು ಬೆಲೆ ಕಟ್ಟಿದ್ದಾರೆ
ಜನಪದರು ಕಾಯಕ, ದಾಸೊಹಿಗಳು, ಅದರಲ್ಲಿ ಒಕ್ಕಲುತನ ಕಾಯಕಕ್ಕೆ ಹೆಚ್ಚು ಪ್ರಾಶಸ್ತ್ಯ ಕೊಟ್ಟವರು.
ಬೇಡೆನೆಗೆ ಕೈಲಾಸ ನೀಡೆನಗೆ ಶಿವಭಕ್ತಿ
ಮಾಡುವೆನು ಸೇವೆ ಶಿವಮತಕೆ | ಶರಣರಿಗೆ
ನಾಡಕಾಯಕವೆ ಕೈಲಾಸ
ಕಾಯಕವೆ ಶಿವಭಕ್ತಿ ಕಾಯಕವೆ ಶಿವಭಜನೆ
ಕಾಯಕವೆ ಲಿಂಗ ಶಿವಪೂಜೆ | ಶಿವಯೋಗ
ಕಾಯಕವೇ ಕಾಯುವ ಕೈಲಾಸ
ಜಗದೊಳಗೆ ಕಾಯಕವು ನಗುನಗುತ ಮಾಡುತ್ತಾ
ಮಗುವಾಗಿ ಸತತ ಒಕ್ಕಲಿಗ | ಹೊಲಗೆಲಸ
ಹಗಲಿರುಳು ಕೇಳೊ ದಾಸೋಹ
ಶರಣರು ಹೇಳಿದ ‘ಕಾಯಕವೇ ಕೈಲಾಸ’ ಎಂಬ ತತ್ವವನ್ನು ಅವರು ಒಪ್ಪಿಕೊಂಡಿದ್ದಾರೆ ಕೈಲಾಸವನ್ನು ಧಿಕ್ಕರಿಸುತ್ತಲೇ ಅವರ ಕಾಯಕದಲ್ಲಿ, ಅದು ಹಗಲಿರುಳು ಹೊಲ ಕೆಲಸದಲ್ಲಿ ಮಗ್ನರಾಗಿದ್ದಾರೆ. ಮಾನವ ಹುಟ್ಟರುವನೇ ಭೋಗಕ್ಕಾಗಿಯಲ್ಲ; ಕಾಯಕಕ್ಕೆ ಎನ್ನುತ್ತಾರೆ. ಒಕ್ಕಲುತನ ಕಾಯಕ ಕೈಕೊಂಡರೂ ಉಳಿದ ಕಾಯಕವನ್ನು ಪ್ರೀತಿಯಿಂದಲೇ ಕಂಡವರು. ಅವುಗಳಲ್ಲಿ ಅವರಿಗೆ ಮೇಲು ಕೀಳುಗಳಿಲ್ಲ. ಅವುಗಳಿಂದ ಹೆಚ್ಚುಗಳಿಸಬೇಕೆಂಬ ತವಕವಿಲ್ಲ. ಇದ್ದುದ್ದರಲ್ಲಿ ತೃಪ್ತಿಗೊಳ್ಳುವ ದೊಡ್ಡಮನಸ್ಸು ನಮ್ಮ ಜನಪದರದು. ಇದು ಬಸವಾದಿ ಶಿವಶರಣರ ನಂತರ ಅವರ ಪರಂಪರೆಯ ಪ್ರಭಾವಿ ಎಂಬುದು ಸತ್ಯ
ಕಸವ ಬಳಿಯುವ ಕೈ ಕಸ್ತೂರಿ ನಾತವ
ಬಸವ ನಿನ್ನ ಸಗಣಿ ಬಳದರ | ಕೈಗಳು
ಯಾಲಕ್ಕಿ ನಾತನಾರ್ಯಾವ
ಹೀಗೆ ಯಾವುದೇ ಕೆಲಸ ಮಾಡಿದ್ದರೂ ಅದು ತೃಪ್ತಿಯಿಂದ ಮಾಡಿದರು. ಅದು ದಾಸೋಹಕ್ಕಾಗಿ ಮಾಡಿದ್ದರು ಮಹಾದಾಸೋಹಿ ಶರಣಬಸವೇಶ್ವರರನ್ನು ಕುರಿತು ಹಾಡುವಾಗ ಅವರಿಗಿದ್ದ ದಾಸೋಹದ ಮಹಿಮೆ ತಿಳಿದುಕೊಳ್ಳಬಹುದು.
ದಾಸೋಹ ಎಂಬುದು ಎಲ್ಲದಕ್ಕೂ ದೊಡ್ಡದು
ದಾಸೋಹದಾಗ ಧರ್ಮದ | ಶರಣಪ್ಪ
ದಾಸೋಹವೇ ದಾರಿ ಸ್ವರ್ಗಕ್ಕೆ
ಮಣ್ಣಿನ ಕಾಯವಿದು ಮಣ್ಣಾಗಿ ಹೋಗುವದು
ಸಣ್ಣಾಗಿ ಸವಿಸಿ ಜಂಗಮಕೆ | ದಾಸೋಹ
ಕಣ್ಣೊಂದೆ ಸಾಕು ಕಾಯಕಕ್ಕೆ
ಮೂರು ಕಾಲಿನ ಮೆಟ್ಟು ಮೂರು ಲಿಂಗಗಳಾಗಿ
ತೂರುವ ಜೀವ ಶಿವವಾಗಿ | ಶರಣಪ್ಪ
ತೂರಿದ ರಾಣಿ ಶಿವಮತಕ್ಕೆ
ಶರಣಬಸವೇಶ್ವರರ ಇಡೀ ಜೀವನದ ಸಿದ್ಧಾಂತವೇ ದಾಸೋಹ. ಅಂತಹ ದಾಸೋಹದಿಂದ ಅವರು ಸ್ವರ್ಗಕ್ಕೆ ಹೋದರೆಂಬುದು ಜನಪದರ ಅಭಿಪ್ರಾಯ. ಶರಣ ಬಸವರು ನುರಿತ ಒಕ್ಕಲಿಗ. ಅಂತೆಯೇ ಕರಕೀಯ ಹೊಲದಲ್ಲಿ ನೂರುಚೀಲ ರಾಶಿ ಮಾಡಿದವರು ಆ ರಾಶಿ ದಾಸೋಹಕ್ಕಾಗಿ.
ಬಸವಾದಿ ಶರಣರ ಆಧ್ಯಾತ್ಮಿಕ ಸಾಧನೆ ನಡೆದಿರುವದು ಅಷ್ಟಾವರಣ, ಪಂಚಾಚಾರ, ಷಟ್ಸ್ಥಲಗಳ ಮುಖಾಂತರ. ಅವರು ಚರ್ಚಿಸಿದ್ದ ಗುರು, ಲಿಂಗ, ಜಂಗಮ, ಪಂಚಾಚಾರ, ಷಟ್ಸ್ಥಲಗಳ ಬಗ್ಗೆ ಜನಪದರು ಹಾಡುತ್ತಾರೆ. ಕಥೆಗಳನ್ನು ಹೇಳುವದರ ಮುಖಾಂತರ ಒಬ್ಬೊಬ್ಬ ಶರಣರು ಯಾವ ಮಟ್ಟಕ್ಕೆ ಹೋದರೆಂಬುದನ್ನು ಸೊಗಸಾಗಿ ಹೇಳುತ್ತಾರೆ.
ಗುರುವಿನ ಬಗ್ಗೆ ಅವರಿಗೆ ಅಪಾರ ಗೌರವ. ಗುರು ಯಾರು? ಆತ ಹೇಗಿರಬೇಕುಎಂಬುದನ್ನಲ್ಲ ಹೇಳುತ್ತಾರೆ.
ಮುಕ್ಕಣ್ಣ ಬಂದಾನ ಮೂರು ರೂಪ ಧರಿಸಿ
ಮುಕ್ತಿ ಕೊಟ್ಟಾನ ಗುರು ಲಿಂಗ ಜಂಗಮನಾಗಿ
ಸುಗುಣ ರೂಪ ತೊಟ್ಟು ಸರ್ವಗುರುವಾದ
ನಿರ್ವಿಕಾರ ರೂಪ ತೊಟ್ಟು | ಲಿಂಗವಾದ
ಚೈತನ್ಯ ರೂಪ ತೊಟ್ಟು ಜಂಗಮನಾದ
ಗುರು, ಲಿಂಗ, ಜಂಗಮರು ಬಸವಣ್ಣನವರು ಪ್ರತಿಪಾದಿಸಿದ ಲಿಂಗಾಯತ ಧರ್ಮದ ಆಧಾರ ಸ್ತಂಭಗಳು. ಇವುಗಳ ಮುಖಾಂತರವೇ ಆ ಧರ್ಮದ ತತ್ವಗಳು ಸಮಾಜಮುಖಿಯಾಗಬೇಕು. ಅವರಿಗೂ ಜವಾಬ್ದಾರಿಗಳನ್ನು ಕೊಟ್ಟ ಧರ್ಮ ಇದು. ಅಲ್ಲದೆ ಸಾಕ್ಷಾತ್ ಪರಮಾತ್ಮನೇ ಈ ಮೂರು ರೂಪ ಧರಿಸಿ ‘ಅರಿವು ಕೊಟ್ಟು ಗುರುವಾದ, ನಿಂತು ಲಿಂಗವಾದ ಚಲಿಸಿ ಜಂಗಮನಾದ’ ಎನ್ನುತ್ತಾರೆ. ತತ್ವಶಃ ಜನಪದರು ಈ ಮಾತನ್ನು ಒಪ್ಪುತ್ತಾರೆ. ಈ ಮೇಲಿನ ಹಾಡಿನಲ್ಲಿ ಅದನ್ನು ಅವರು ಪ್ರತಿಪಾದಿಸುತ್ತಾರೆ. ಆದರೂ ಗುರು ಎಂತಹವನಾಗಿರಬೇಕೆಂಬುದನ್ನು ನಿಖರವಾಗಿ ಹೀಗೆ ಹೇಳುತ್ತಾರೆ.
ಕಾಚಯಿಲ್ಲದ ಎಲಿಯು ಏಟು ಮೆಲಿದರೇನು?
ಸಾಚ ಇಲ್ಲದಗುರು ಬೆನ್ಹಿಂದ | ಇದ್ದರ
ಘಾತ ಆಗ್ಯಾದ ಭಕುತರಿಗೆ
ಗುರುವು ಸಾಚಾನಾಗಿಬೇಕು; ಸಾಮಾಜಿಕ ಕಳಕಳಿಯುಳ್ಳವನಾಗಿರಬೇಕು, ಅರಿಷಡ್ವರ್ಗಗಳಿಂದ ದೂರನಾಗಿರಬೇಕು, ಭಕ್ತರನ್ನು ಸನ್ಮಾರ್ಗಕ್ಕೆ ಹೆಚ್ಚಬೇಕು. ಇಂತಹ ಉನ್ನತ ಮೌಲ್ಯಗಳಿಲ್ಲದಿದ್ದರೆ ಆತ ಗುರುವಾಗಲಾರ ಎಂದು ಅಭಿಪ್ರಾಯ ಪಡುತ್ತಾರೆ. ಶಿವಪಥವನರಿವೊಡೆ ಗುರುಪಥವೆ ಮೊದಲು ಎಂಬ ಬಸವಣ್ಣನವರ ಮಾತಿನಂತೆ ಸಾಚಾ ಗುರುವಿನಿಂದ ಶಿವಮಾರ್ಗ ಪಡೆಯಲು ಸಾಧ್ಯ ಎಂಬುದು ಜನಪದರ ಅಭಿಪ್ರಾಯವು ಹೌದು.
ಗುರುಭಕ್ತಿಯಿದ್ದರ ಶಿವಭಕ್ತಿ ಇದ್ಹಾಂಗ
ಪರಮಾತ್ಮಗಿಂತ ಅಂವಹೆಚ್ಚು | ಇಲ್ಲಂದರ
ಪರಶಿವ ನಮಗ ಸಿಗಲಾರ
ಅಂತಹ ಪರಶಿವನ ದಾರಿತೋರಿಸುವ ನಿಗರ್ವಿ ಗುರುಬೇಕು ಎನ್ನುತ್ತಾರೆ ಜನಪದರು. ಅದಕ್ಕಾಗಿ ಗುರುವಿಗೆ ನೆನೆಯಬೇಕೆನ್ನುತ್ತಾರೆ.
ಗುರುವಿನ ನೆನಿಯದೆ ಮಂಕಾದೆ ಮರುಳಾದೆ
ತರುಗು ಮಾವಿನ ಎಲೆಯಾದೆ | ನನ್ನ ಗುರುವೆ
ನಿನ್ನ ಅಂಗೈಯೊಳಗೆ ಗಿಣಿಯಾದೆ
ಲಿಂಗ ಮತ್ತು ಜಂಗಮರ ಬಗ್ಗೆಯೂ ಅವರಿಗೆ ಅಪಾರ ಭಕ್ತಿಯುಂಟು.
ಅಂಗೈಯಾಗಿರುವ ಲಿಂಗ ಮಾರುತಿ ಸ್ವಾಮಿ
ಮಂಗಳಾರತಿ ನಾ ಬೆಳಗಿ | ಕೇಳುವೆನು
ಮಾರಾಯರ ಮುಂದ ಮರಣವ
ಎಂದ ತನ್ನ ಇಷ್ಠಲಿಂಗಕ್ಕೆ ಗರತಿ ಕೇಳಿಕೊಳ್ಳುತ್ತಾಳೆ. ಅಲ್ಲದೆ ಅನೇಕ ತ್ರಿಪದಿಗಳಲ್ಲಿ ಲಿಂಗಾಯತರಾರು? ಎಂಬುದನ್ನು ವ್ಯಾಖ್ಯಾನಿಸುತ್ತಾರೆ.
ಲಿಂಗಾಯತ ಆದವ ಲಿಂಗಾ ಕಟಬೇಕು
ಲಿಂಗದ ಮರ್ಮ ತಿಳಿಬೇಕು | ಕೊನಿತನ
ಲಿಂಗದ ಹಾಂಗ ನಡಿಬೇಕು
ಲಿಂಗಾಯತರೆನಿಸಿಕೊಂಡವರು ಕೇವಲ ಎದೆಯ ಮೇಲೆ ಲಿಂಗ ಕಟ್ಟಿದರೆ ಸಾಲದು; ಲಿಂಗದಂತೆ ನಡೆಯಬೇಕು. ಅಂದರೆ ಭಕ್ತಿ, ಶ್ರದ್ಧೆ, ಶಾಂತಿ, ಸಹನೆ, ತೃಪ್ತಿಯಿಂದ ಜೀವನ ಸಾಗಿಸವೇಕೆನ್ನುತ್ತಾರೆ. ಅಲ್ಲದೆ ಅದರ ಮುಖಾಂತರ ನಿಷ್ಕಲ್ಮಶ ಮನಸ್ಸಿನಿಂದ ಸಾಧನೆ ಮಾಡಬೇಕೆಂದು ಹೇಳುತ್ತಾರೆ.
ಅಡವಿಸೇರಲು ಬ್ಯಾಡಜಡಿಯ ಬೆಳೆಸಲು ಬ್ಯಾಡ
ಮೃಢರೂಡಿ ಲಿಂಗ ಬಿಡಬ್ಯಾಡ | ನನ್ನ ತಮ್ಮ
ದೃಢದಿಂದ ಪೂಜಿಸಿ ಮೃಢನಾಗು
ಶಿವನ ರೂಪದಿಂದ ಜನಿಸಿದ ಮಾನವ ಮತ್ತೆ ಲಿಂಗವನ್ನು ದೃಢವಾಗಿ ಪೂಜಿಸಿರುವದರಿಂದ ಶಿವನೇ ಆಗಬಹುದೆಂಬುದು ಶಿವಶರಣರಂತೆ ಇವರ ಅಭಿಪ್ರಾಯವು ಹೌದು. ಅದಕ್ಕಾಗಿ ಇಷ್ಟಲಿಂಗವಿಲ್ಲದೆ ಬದುಕಬೇಡಿರಿ ಎನ್ನುತ್ತಾರೆ.
ಲಿಂಗಿಲ್ಲದ ಅರಗೇಡಿ ಮರತ್ಯಾಕ ಲಿಂಗವು
ಅಂಗದ ಒಳಗ ಹುಳಬಿದ್ದು | ಸತ್ತರ
ಮೂಗು ಮುಚ್ಯಾರು ನಿಂತವರು
ಎಂದು ಎಚ್ಚರಿಸುತ್ತಾರೆ’
‘ಅರಿವೇಗುರು’ ಇದು ಬಸವಾದಿ ಪ್ರಮಥರ ಕಟ್ಟ ಕಡೆಯ ಸಂದೇಶ. ಏನು ಮಾಡಿದರೇನು? ಹೇಗೆ ಮಾಡಿದರೇನು? ಅರಿವು ಬರದಿದ್ದರೆ ಎಲ್ಲವು ವ್ಯರ್ಥ. ಅಂತೆಯೇ ಜನಪದರು.
ತನುವೆಂಬುದು ಗದ್ದುಗೆ ಆತ್ಮವೇ ಲಿಂಗವು
ಕಾಣುನೀ ಶಿವಗ ಅರುಯಿಟ್ಟು | ಅರ್ಹೋರತು
ಹಾದಿಯಿಲ್ಲ ಶಿವನ ನೋಡಾಕ
ಇಂತಹ ಲಿಂಗವಿಡಿದು ಷಟ್ಸ್ಥಲ ಸಾಧನೆ ನಡೆಯಬೇಕು. ಆದರೆ ಷಟ್ಸ್ಥಲ ಅಷ್ಟು ಸರಳವಲ್ಲ ಎಂಬುದು ಜನಪದರ ಅಭಿಪ್ರಾಯ.
ಅಡಿಕಿಲ ಗಡಿಗೆಲ್ಲ ಷಟ್ಸ್ಥಲ ಎಂಬುದು
ತೊಡಕದ ಅದರ ಹಾದಿಯು | ತಿಳಿಯಲು
ದೃಢದಿಂದ ನಡಿಬೇಕು ಮನಮುಟ್ಟಿ…
ಹೀಗೆ ಅನುಭಾವಿಗಳಾಗಿರುವ ಜನಪದರು ನಡೆ ಸುಡಿಗಳಲ್ಲಿ ಸಮನ್ವಯತೆ ಸಾಧಿಸಿದವರು ಶರಣರಂತೆ.
ಅಡವಿ ಸೇರಬ್ಯಾಡ ದಾಡಿ ಬೆಳಸಬ್ಯಾಡ
ಮಡದಿಗೆ ನೀನು ಬಡಿಬ್ಯಾಡ | ನಡೆ-ನುಡಿ
ದೃಢದಿಂದ ಒಂದು ಮಾಡಬೇಕು
ಹೀಗೆ ಜನಪದ ಸಾಹಿತ್ಯವನ್ನು ಅವಲೋಕನ ಮಾಡಿದಾಗ ಅವರು ಬಸವಾದಿ ಶಿವಶರಣರು ಆಚರಿಸಿದ ಧರ್ಮ ತತ್ವಗಳನ್ನು ತಮ್ಮದಾಗಿಸಿ ಕೊಂಡಿದ್ದಾರೆ. ಅದರಲ್ಲಿ ಉತ್ತರ ಕರ್ನಾಟಕದ ಜನಪದರಂತೂ ಅಪ್ಪಟ್ಟ ಬಸವಾದಿ ಶಿವಶರಣರನ್ನು ಆ ಶಿವಶರಣರ ಪರಂಪರೆಯಲ್ಲಿ ಬರುವ ಇಂದಿಗೂ ಆಗಿ ಹೋದ ಎಲ್ಲ ಶರಣರನ್ನು ಮನಮುಟ್ಟುವಂತೆ ಹಾಡುತ್ತಾರೆ.
ಡಾ. ನೀಲಾಂಬಿಕಾ ಪೊಲೀಸಪಾಟೀಲ,
“ಗುರು ಶರಣ ನಿಲಯ”
ಮನೆ ನಂ. 1495/101 ಮತ್ತು 102/310,
ಗೋದುತಾಯಿ ನಗರ,
ನ್ಯೂ ಜೇವರ್ಗಿ ರಸ್ತೆ,
ಕಲಬುರಗಿ – 585 102.
ಮೋಬೈಲ್ ನಂ. 94821 47084
ಆಧಾರ ಗ್ರಂಥಗಳು:
• Encyclopedia of Religion and Ethics Written by James Hasting
• ಕನ್ನಡಜಾನಪದ ಗೀತೆಗಳು: ಡಾ. ಬಿ. ಎಸ್ಗದ್ವಗಿಮಠ.
• ಅಚ್ಚಮಲ್ಲಿಗೆ ಹೂ: ಸಂ. ಶ್ರೀ ಎ. ಕೆ. ರಾಮೇಶ್ವರ.
• ಬೇಕಾದ ಸಂಗಾತಿ: ಡಾ. ಕಾಳೇಗೌಡ ನಾಗವಾರ
• ಜಾನಪದ ಸಾಹಿತ್ಯದಲ್ಲಿ ಶರಣಬಸವೇಶ್ವರ: ಸಂ. ಡಾ. ನೀಲಾಂಬಿಕಾ
ಪೋಲೀಸ್ಪಾಟೀಲ
ಅದ್ಭುತ ಮತ್ತು ಸುಂದರವಾದ ವಿಷಯ ನಿರೂಪಣೆ🙏🙏🙏🙏