
ಧರ್ಮಕ್ಕೂ, ವಿಜ್ಞಾನಕ್ಕೂ ಎಂಥ ಸಂಬಂಧವಿದೆ? ಎಂಬ ಪ್ರಶ್ನೆ ಹಲವಾರು ವಿಜ್ಞಾನಿಗಳನ್ನೂ, ಧಾರ್ಮಿಕ ಚಿಂತಕರನ್ನೂ ನಿರಂತರ ಕಾಡುತ್ತ ಬಂದಿದೆ. ಶ್ರೇಷ್ಠ ವಿಜ್ಞಾನಿಗಳನೇಕರು ಧರ್ಮದಲ್ಲಿ ವಿಜ್ಞಾನವನ್ನೂ, ವಿಜ್ಞಾನದಲ್ಲಿ ಧರ್ಮವನ್ನೂ ಕಂಡಿದ್ದಾರೆ. ಹಾಗೆಯೇ ವೈಚಾರಿತೆಯನ್ನು ಗೌರವಿಸುವ ಕೆಲವು ‘ನಿಜ’ ಧಾರ್ಮಿಕರೂ ಅದೇ ಅಭಿಪ್ರಾಯದವರಾಗಿದ್ದಾರೆ. ಆದರೆ, ಇವರೆಲ್ಲ ತಮ್ಮ ಈ ಅಭಿಪ್ರಾಯಗಳ ಪ್ರತಿಪಾದನೆಯಲ್ಲಿ ಪ್ರಾಯೋಗಿಕ ಕ್ರಮವನ್ನು ಅನುಸರಿಸಿಲ್ಲವೆನಿಸುತ್ತದೆ. ನಂಬಿಗೆ ಹಾಗೂ ಭಾವನಾತ್ಮತ ನೆಲೆಯಲ್ಲಿ ಇವರೆಲ್ಲ ಈ ಸಂಬಂಧ ಕುರಿತು ಮಾತಾಡಿದ್ದಾರೆಯೇ ಹೊರತು, ಪ್ರಯೋಗಾತ್ಮಕ ಕ್ರಮ ಇಲ್ಲಿಲ್ಲ. ಅದನ್ನು ಹಾಗೆ ತೋರಿಸುವುದು ಕಷ್ಟದ ಕೆಲಸವೂ ಹೌದು. ಅಚ್ಚರಿಯೆಂದರೆ, ಇಂಥ ಕಷ್ಟದ ಕೆಲಸವನ್ನೂ ಹನ್ನೆರಡನೆಯ ಶತಮಾನದ ಶರಣರು ಸಾಕ್ಷಿಸಹಿತವಾಗಿ ಮಾಡಿ ತೋರಿಸಿದ್ದಾರೆ. ಇದು ನಿಜಕ್ಕೂ ಅಪೂರ್ವ ಹೆಜ್ಜೆ. ಇದು ಶರಣರ ವೈಜ್ಞಾನಿಕ ಧೋರಣೆಗೂ, ಅಂಥ ವೈಜ್ಞಾನಿಕತೆಯನ್ನು ಧಾರ್ಮಿಕ ಕ್ಷೇತ್ರಕ್ಕೆ ಅನ್ವಯಿಸಿ ತೋರಿಸಲು ಸಾಧ್ಯವಿದೆ ಎಂಬುದನ್ನು ಪ್ರತಿಪಾದಿಸುವ ವಿನೂತನ ಕ್ರಮಕ್ಕೂ ಸಾಕ್ಷಿಯಾಗಿದೆ. ಇಲ್ಲಿ ಅವಸರದ ರೇಕಣ್ಣನ ಒಂದು ವಚನವನ್ನು ಇದೇ ನೆಲೆಯ ಪ್ರಾಯೋಗಿಕ ಪ್ರಾತ್ಯಕ್ಷಿಕೆಗಾಗಿ ಅವಲೋಕಿಸಬಹುದಾಗಿದೆ.
ದೃಕ್ಕಿನ ದೃಶ್ಯಕ್ಕೆ ಕಾಬತನಕ ಕಂಡು
ಅಲ್ಲಿಂದಾಚೆ ಏನೂ ಇಲ್ಲಾ ಎಂಬುದು
ದೃಷ್ಟಿಯ ಭೇದವೊ? ಜಗದ ಭೇದವೊ?
ಇಂತೀ ಭೇದವ ತಿಳಿದು ತನ್ನ ದೃಷ್ಟಕ್ಕೆ ತಕ್ಕ ಸ್ಥಲವ ಮೆಟ್ಟಿ,
ಸ್ಥಲಕ್ಕೆ ತಕ್ಕ ಆಚರಣೆಯಲ್ಲಿ ನಿಂದು, ಆ ಆಚರಣೆ ಆದಿಯಾಗಿ
ಅನಾದಿಯಿಂದತ್ತಣವನ ಭೇದಿಸಿ ಹಿಡಿದು
ಸದ್ಯೋಜಾತಲಿಂಗದಲ್ಲಿ ವೇಧಿಸಬೇಕು.
ವಚನದ ಆರಂಭದಲ್ಲಿ ದೃಶ್ಯವತ್ತಾಗಿ ತೋರಿಸಲ್ಪಟ್ಟಿರುವುದು ಒಂದು ವಾಸ್ತವ ಘಟನೆಯನ್ನು. ಇದು ಖಚಿತ ವೈಜ್ಞಾನಿಕ ಘಟನೆ. ಇದನ್ನು ಪ್ರಯೋಗಾತ್ಮಕವಾಗಿ ತೋರಿಸಲು, ಆಕಾಶದಲ್ಲಿ ಹಾರಿ ಬರುತ್ತಿರುವ ಒಂದು ವಿಮಾನದ ದೃಶ್ಯವನ್ನು ಊಹಿಸಿಕೊಳ್ಳೋಣ. ದೂರದಲ್ಲಿ ಹಾರಿ ಬರುವಾಗ ಅದು ಚಿಕ್ಕದಾಗಿ ಕಾಣುತ್ತದೆ. ಹತ್ತಿರ ಬಂದಾಗ ನಿಧಾನ ದೊಡ್ಡದಾಗಿ ಕಾಣುತ್ತ, ನಮ್ಮ ತಲೆಯೆ ಮೇಲೆಯೇ ಬಂದು, ಹಾಗೆ ಬರುತ್ತಿರುವಂತೆ ಮತ್ತೊಂದು ದಿಕ್ಕಿಗೆ ಚಲಿಸಿದಾಗ ಮತ್ತೆ ಚಿಕ್ಕದಾಗುತ್ತ ಹೋಗಿ, ಇನ್ನೂ ದೂರವಾದಂತೆ ಕ್ರಮ-ಕ್ರಮೇಣ ಸಣ್ಣದಾಗುತ್ತ, ಸ್ವಲ್ಪ ಹೊತ್ತಿನಲ್ಲೇ ಕಾಣದಾಗಿಬಿಡುತ್ತದೆ. ಇದನ್ನು ಸಾಮಾನ್ಯವಾಗಿ ಎಲ್ಲರೂ ಗಮನಿಸಿರುತ್ತಾರೆ. ಅವಸರದ ರೇಕಣ್ಣ ಇಲ್ಲಿ ವಿಮಾನದ ಉದಾಹರಣೆಯನ್ನು ಹೇಳಿಲ್ಲವಾದರೂ, ಯಾವುದೋ ಒಂದು ವಸ್ತು ನಮ್ಮ ಕಣ್ಣ
ಮುಂದೆ ಹಾಯ್ದು ಆಚೆ ಚಲಿಸಿ, ದೂರವಾಗುತ್ತ ಹೋದಂತೆ ಆಗುವ ಪರಿಣಾಮವನ್ನು ಮಾತ್ರ ಸ್ಪಷ್ಟವಾಗಿ ದೃಶ್ಯೀಕರಿಸುತ್ತಾನೆ.
ಹೀಗೆ ಒಂದು ವಸ್ತು ನಮ್ಮ ಕಣ್ಣಿಂದ ದೂರವಾಗುತ್ತ ಹೋಗಿ, ಮುಂದೆ ಏನೂ ಇಲ್ಲವೆಂಬಂತೆ ಕಾಣದಾಗುತ್ತದೆಯಲ್ಲ, ಇದರ ಕಾರಣವೇನು ಎಂಬುದು ಇಲ್ಲಿರುವ ಪ್ರಧಾನ ಪ್ರಮೇಯ. ಇದಕ್ಕೆ ಕಾರಣ, ಕಣ್ಣಿನ ದೋಷವೋ? ಅಥವಾ ವಸ್ತುವಿನ ದೋಷವೋ? ಎಂಬುವು ಇಲ್ಲಿ ಹುಟ್ಟುವ ಮುಖ್ಯ ಪ್ರಶ್ನೆಗಳು. ರೇಕಣ್ಣ ಇಲ್ಲಿ ಕೇಳಿರುವುದು ಈ ಪ್ರಶ್ನೆಗಳನ್ನೆ. ಇವುಗಳಿಗೆ ಉತ್ತರ ಏನೆಂಬುದು ಎಲ್ಲರಿಗೂ ಗೊತ್ತು. ನಮ್ಮ ದೃಷ್ಟಿಯಿಂದ ದೂರಾಗುವ ವಸ್ತುಗಳು ದೂರಕ್ಕೆ ಹೋದಂತೆ, ದೂರದ ವಸ್ತುಗಳನ್ನು ನೋಡುವ
ನಮ್ಮ ಕಣ್ಣಿನ ಸಾಮರ್ಥ್ಯ ಕಡಿಮೆಯಾಗುತ್ತ ಹೋಗಿ, ಕೊನೆಗೆ ಅದೇ ಕಾರಣಕ್ಕೆ ಆ ವಸ್ತು ಕಾಣದಂತೆಯೇ ಆಗಿಬಿಡುತ್ತದೆ. ಈ ಪ್ರಕ್ರಿಯೆಯನ್ನು ಸೂಕ್ಷö್ಮವಾಗಿ ಪರಿಭಾವಿಸಿದಾಗ ತಿಳಿಯುವ ಸತ್ಯವೆಂದರೆ, ಇದು ಖಂಡಿತವಾಗಿ ವಸ್ತುವಿನ ದೋಷವಲ್ಲ, ಅದು ನಮ್ಮ ಕಣ್ಣಿನ ದೋಷ ಅಥವಾ ಮಿತಿ ಎಂದು. ಅಂದರೆ, ಅಲ್ಲಿರುವ ಆ ವಸ್ತು ಅದು ಇರುವಂತೆಯೇ ಯಥಾವತ್ತಾಗಿ ತನ್ನ ಮೂಲ ಸ್ವರೂಪದಲ್ಲಿಯೇ ಇರುತ್ತದೆ; ಆದರೆ, ಅದನ್ನು ಕಾಣುವ ನಮ್ಮ ಕಣ್ಣಿನ ಸಾಮರ್ಥ್ಯ ಮಾತ್ರ ಕಡಿಮೆಯಾಗುತ್ತದೆ. ಇದು ವೈಜ್ಞಾನಿಕ ವಾಸ್ತವ.
ಮೂಲ ವಸ್ತು ಇರುವಂತೆಯೇ ಇದ್ದು, ನಮ್ಮ ಕಣ್ಣುಗಳ ಮಿತಿಯಿಂದ ಅದನ್ನು ನೋಡಲು ಸಾಧ್ಯವಾಗದಾದಾಗ, ಮುಂದೆ ಆ ವಸ್ತುವನ್ನು ಅದು ಇರುವಂತೆಯೇ ಕಾಣುವ ಬಗೆ ಹೇಗೆ? ಇದು ಇಲ್ಲಿರುವ ಮತ್ತೊಂದು ಮಹತ್ವದ ಪ್ರಶ್ನೆ. ಇದಕ್ಕೆ ಅತ್ಯಂತ ಸೂಕ್ತ ಮತ್ತು ಸಮರ್ಥ ಉತ್ತರ ಕೊಟ್ಟು, ಅದನ್ನು ಯಥಾವತ್ತಾಗಿ ಕಾಣುವ ಮಾರ್ಗ ತೋರಿಸುತ್ತಾನೆ ಅವಸರದ ರೇಕಣ್ಣ. ಅವನ ಈ ಮಾರ್ಗಸೂಚಿ ಶುದ್ಧ ವೈಜ್ಞಾನಿಕ ದೃಷ್ಟಿಯದು. ವಚನದ ಮಾತನ್ನೇ ಇಲ್ಲಿ ಉಲ್ಲೇಖಿಸುವುದಾರದೆ, ‘ಇಂತೀ ಭೇದವ ತಿಳಿದು ತನ್ನ ದೃಷ್ಟಕ್ಕೆ ತಕ್ಕ ಸ್ಥಲವ ಮೆಟ್ಟಿ, ಸ್ಥಲಕ್ಕೆ ತಕ್ಕ ಆಚರಣೆಯಲ್ಲಿ ನಿಂದು, ಆ ಆಚರಣೆ ಆದಿಯಾಗಿ ಅನಾದಿಯಿಂದತ್ತಣವನ ಭೇದಿಸಿ ಹಿಡಿದು ಸದ್ಯೋಜಾತಲಿಂಗದಲ್ಲಿ ವೇಧಿಸಬೇಕು’ ಎಂಬುದು ಅವನ ಸೂಚನೆ. ಅತ್ಯಂತ ಸರಳ ಮತ್ತು ಖಚಿತ ವೈಜ್ಞಾನಿಕ ಮಾರ್ಗವಿದು.
ನಮ್ಮ ಕಣ್ಣಿನ ಮಿತಿಯಿಂದಾಗಿಯೇ ದೂರದ ವಸ್ತು ಕಾಣದಾದಾಗ, ಅದನ್ನು ಕಾಣಲೇಬೇಕೆಂಬ ಉದ್ದೇಶ ಹೊಂದಿರುವ ನಾವು ಮಾಡಬೇಕಾದ ಮೊದಲ ಕೆಲಸವೆಂದರೆ, ಎಲ್ಲಿಯ ವರೆಗೆ ಆ ವಸ್ತು ನಮ್ಮ ನೇರ ನೋಟಕ್ಕೆ ಸ್ಪಷ್ಟವಾಗಿ ಕಾಣುತ್ತಿತ್ತೋ ಅದು
ನಮ್ಮ ಮಿತಿಯ ಸ್ಥಳ (ಸ್ಥಲ-ಪ್ಲೇಸ್)ವೆಂದು ಗುರುತಿಸಿಕೊಂಡು, ಆ ಸ್ಥಳದಿಂದಲೇ ಮತ್ತೆ ಮುಂದೆ ಆ ವಸ್ತುವನ್ನು ನೋಡುವ ಕ್ರಮ ಆರಂಭಿಸಬೇಕು. ಆಗ ಖಂಡಿತವಾಗಿಯೂ ಮುಂದಿರುವ ಆ ವಸ್ತು ಇರುವಂತೆಯೇ ಕಾಣುತ್ತದೆ. ಇದು, ಕಾಣದ ಅಥವಾ ದೂರದ ವಸ್ತುವನ್ನು ದೂರ ಹೋಗುತ್ತಿದ್ದಂತೆಯೇ ಅಥವಾ ದೂರದಲ್ಲಿರುವಂತೆಯೇ ನೋಡುವ ವೈಜ್ಞಾನಿಕ ಕ್ರಮ. ಹೀಗೆ ಮಾಡಿದರೆ ಬದಲಾಗದ ಒಂದು ವಸ್ತುವಿನ ಮೂಲ ಸ್ವರೂಪ ನಮಗೆ ಯಾವಾಗಲೂ ಯಥಾವತ್ತಾಗಿಯೇ ಗೋಚರಿಸಲು ಸಾಧ್ಯ. ನಮ್ಮ ಮಿತಿಯೇ ಒಂದು ಘಟ್ಟವಾಗಿ ಅಥವಾ ಒಂದು ಹೆಜ್ಜೆಯಾಗಿ ಮುಂದಿನ ಕಾಣ್ಕೆಗೆ ಮತ್ತೊಂದು ಹಂತವಾಗುವ ವೈಜ್ಞಾನಿಕ ಮಾರ್ಗವಿದು.
ವಚನದ ಮೊದಲ ಭಾಗದಲ್ಲಿ ಹೀಗೆ ಭೌತವಸ್ತುವಿನ ಮೂಲ (ನಿಜ)ಸ್ವರೂಪವನ್ನು ಕಾಣಲು ನಮ್ಮ ಮಿತಿಯ ಮೂಲಕವೇ ಮುಂದುವರೆಯಬೇಕಾದ ಪ್ರಾಯೋಗಿಕ ಪಥ ತೋರಿಸುವ ಅವಸರದ ರೇಕಣ್ಣ, ಮುಂದಿನ ಭಾಗದಲ್ಲಿ ಇದೇ ಕ್ರಮವನ್ನು ಅಧ್ಯಾತ್ಮ ಅಥವಾ ಆನುಭಾವದ ಸಾಧನೆಯಲ್ಲೂ ಪ್ರಯೋಗಿಸಬಹುದಾದ ಸೂಚನೆ ಕೊಡುತ್ತಾನೆ. ವಿಜ್ಞಾನ ಮತ್ತು ಅಧ್ಯಾತ್ಮ ಎರಡರ ನಡುವೆ ಇರುವ ಸಾಮ್ಯತೆ ಮತ್ತು ಅವೆರಡೂ ಕಾರ್ಯಪ್ರವೃತ್ತವಾಗುವ ಕ್ರಮದಲ್ಲಿನ ಸಮಾನತೆ ಇಲ್ಲಿ ಸ್ಪಷ್ಟವಾಗುವುದನ್ನು ಗುರುತಿಸಬಹುದು.
ಅಧ್ಯಾತ್ಮದ ಗುರಿಯೂ ಒಮ್ಮೆಲೇ ಸಾಧಿತವಾಗುವಂಥದ್ದಲ್ಲ. ಹಂತ ಹಂತವಾಗಿ ಕ್ರಮಿಸಿಯೇ ಅದನ್ನು ತಲುಪಬೇಕಾಗುತ್ತದೆ. ಶರಣರು ಇದನ್ನರಿತೇ ಷಟ್ಸ÷್ಥಲ ಮಾರ್ಗವನ್ನು ಸೂಚಿಸಿದರು. ಒಂದೊಂದೇ ಸ್ಥಲ ತಲುಪಿದಾಗ, ಅಲ್ಲಿ ಮತ್ತೆ ಮುಂದಿನ ಮಾರ್ಗ ಕಾಣುವುದು ಕೂಡ ವೈಜ್ಞಾನಿಕ ಕ್ರಮವೆ. ಇದು ಅನುಭವ, ಅನುಭಾವ ಮತ್ತು ಅರಿವಿನ ಸಂಗಮಪಯಣ. ಆದರೆ ಇದೆಲ್ಲವೂ ಒಮ್ಮೆಲೇ ತಿಳಿಯುವಂಥದ್ದಲ್ಲ. ಅಷ್ಟೇ ಅಲ್ಲ, ಸಾಧನಾಪಥದ ಒಂದೊಂದು ಹಂತದಲ್ಲಿ ನಮಗೆ ಗುರಿ ಹಾಗೂ ಗಮ್ಯಗಳು ಅಸ್ಪಷ್ಟ ಹಾಗೂ ಅಗೋಚರವಾಗಿಯೂ ಕಾಣಬಹುದು. ಇಂಥ ಈ ಅಸ್ಪಷ್ಟತೆಯಿಂದಾಗಿಯೇ ಗಮ್ಯವು ಇರಲಿಕ್ಕಿಲ್ಲವೆಂಬ ಅನುಮಾನವೂ ನಮ್ಮಲ್ಲಿ ಉಂಟಾಗಬಹುದು. ಹಾಗೆಂದ ಮಾತ್ರಕ್ಕೆ ಪರವಸ್ತು ಇಲ್ಲವೆಂದೇನೂ ಅರ್ಥವಲ್ಲ. ಅದು ಇದ್ದೇ ಇರುವಂಥದ್ದು. ನಮ್ಮ ಅರಿವಿನ ಮಿತಿ ಅಥವಾ ದೋಷಗಳಿಂದಾಗಿ ಅದು ನಮ್ಮೊಳಗೆ ಈ ಬಗೆಯ ಸಂದೇಹವನ್ನು ಹುಟ್ಟಿಹಾಕುತ್ತದೆ ಅಷ್ಟೆ. ಇಂಥ ಮಿತಿ ಅಥವಾ ದೋಷವು ಸಾಧನಾ ಪಥದಲ್ಲಿ ಒಂದು ಘಟ್ಟ ಅಥವಾ ಹಂತ. ಇದನ್ನು ಸ್ಪಷ್ಟವಾಗಿ ಮತ್ತು ಖಚಿತವಾಗಿ ಅರಿತು, ಅದೇ ಘಟ್ಟದಲ್ಲಿ ನಿಂತು ಮತ್ತೆ ಮುಂದಿನ ಸಾಧನೆಗೆ ತೊಡಗಿದರೆ ನಮ್ಮ ಕ್ರಮಣ ಗುರಿಯೆಡೆಗೆ ಸಾಗಲು ಮತ್ತು ತಲುಪಲು ಸಾಧ್ಯವಿದೆ. ಇದನ್ನೇ ರೇಕಣ್ಣ ‘ಆ ಆಚರಣೆ ಆದಿಯಾಗಿ ಅನಾದಿಯಿಂದತ್ತಣವನ ಭೇದಿಸಿ ಹಿಡಿದು ಸದ್ಯೋಜಾತಲಿಂಗದಲ್ಲಿವೇಧಿಸಬೇಕು’
ಎಂದು ಹೇಳಿದ್ದು. ಇಲ್ಲಿನ ‘ಆದಿಯಾಗಿ’ ಎಂಬ ಶಬ್ದವು ಅದೇ ಮತ್ತೆ ಮೊದಲನೆಯ ಹೆಜ್ಜೆಯಾಗಿ ಎಂಬ ಅರ್ಥವನ್ನೂ, ‘ಅನಾದಿ’ಯಿಂದತ್ತಣವನ ಭೇಧಿಸಿ’ ಎಂಬ ಶಬ್ದವು ಪರವಸ್ತುವನ್ನು ಕಾಣುವುದರ ಅರ್ಥವನ್ನೂ ಕೊಡುತ್ತಿರುವುದು ಗಮನಾರ್ಹ.
‘ತನ್ನ ದೃಷ್ಟಕ್ಕೆ ತಕ್ಕ ಸ್ಥಲವ ಮೆಟ್ಟಿ’ ಎಂಬುದು ‘ನಮ್ಮ ಸಾಮರ್ಥ್ಯದ ಸ್ಥಲವನ್ನು ತಲುಪಿ’ ಎಂಬ ಅರ್ಥವನ್ನು ಒಳಗೊಂಡಿದ್ದು, ಅದು ಸ್ಥಲಸೂಚಕವೂ ಹೌದು. ಈ ಸ್ಥಲವೆಂಬುದು ನಿಲ್ದಾಣವಿದ್ದಂತೆ. ಅಲ್ಲಿ ನಿಂತು ಅನುಭಾವ ಸಾಧನೆಯ ಮತ್ತೊಂದು ಪಯಣಪ್ರಯತ್ನವನ್ನು ಆರಂಭಿಸಿದರೆ, ಅದು ನಮ್ಮನ್ನು ಮುಂದಿನ ಗುರಿಯತ್ತ, ಅಂದರೆ, ಸದ್ಯೋಜಾತ ಲಿಂಗದೆಡೆಗೆ ಅಥವಾ ಪರವಸ್ತುವಿನ ಹತ್ತಿರಕ್ಕೆ ಕರೆದೊಯ್ಯುತ್ತದೆ. ಇದನ್ನು ಆತ್ಮಸಾಕ್ಷಾತ್ಕಾರ ಅನ್ನಬಹುದು, ಆತ್ಮ-ಪರಮಾತ್ಮರ ಮಿಲನ ಎನ್ನಬಹುದು ಅಥವಾ ಬಯಲಲ್ಲಿ ಬಯಲಾಗುವುದು ಎಂದೂ ಹೇಳಬಹುದು. ಇದು ಸಾಧ್ಯವಾಗಬೇಕಾದರೆ ಸಾಧನೆಯಲ್ಲಿನ ನಮ್ಮ ಮಿತಿಯ ಅರಿವಾಗಿ, ಅಂಥ ಅರಿವಿನ ಘಟ್ಟವೇ ಮುಂದಿನ ಪಥವಾಗಬೇಕು. ಇಲ್ಲಿಯೂ ಅಷ್ಟೆ, ಸದ್ಯೋಜಾತಲಿಂಗವಾಗಲಿ, ಪರವಸ್ತುವಾಗಲಿ, ಅಥವಾ ಬಯಲೇ ಆಗಲಿ ಇವೆಲ್ಲ ಯಾವ ಬದಲಾವಣೆಯೂ ಇಲ್ಲದೆ ತಮ್ಮ ಮೂಲ ಸ್ವರೂಪದಲ್ಲಿ ಯಥಾವತ್ತಾಗಿಯೇ ಇರುವಂಥವು. ಅವು ಭೌತವಸ್ತುವಿನಷ್ಟೇ ವಾಸ್ತವ ಕೂಡ. ಇದರ ಬಗ್ಗೆ ನಮಗಿರುವ ಅರಿವಿನ ಕೊರತೆಯೇ ಕಾರಣವಾಗಿ ಅವು ಇಲ್ಲವೆಂಬ ಸಂಶಯ ಹುಟ್ಟುತ್ತದೆ ಮತ್ತು ನಮ್ಮ ದಾರಿಯನ್ನೂ ಅಸ್ಪಷ್ಟ ಮಾಡುತ್ತದೆ. ಆದರೆ, ಅದು ನಮ್ಮ ಮಿತಿ ಮಾತ್ರ ಎಂಬ ಅರಿವು ಮೂಡಿದಾಗ, ಆ ಮಿತಿಯ ಅರಿವಿನ ಒಳಗೇ ಮುಂದಿನ ದಾರಿ ಕಾಣುತ್ತದೆ. ಹೀಗೆ ಅಧ್ಯಾತ್ಮ ಮತ್ತು ವಿಜ್ಞಾನ ಕ್ಷೇತ್ರಗಳ ತಾತ್ವಿಕತೆ ಮತ್ತು ಅವುಗಳ ಹಿಂದಿರುವ ಮೂಲಸತ್ಯ ಒಂದೇ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಶರಣರು ಷಟ್ಸ÷್ಥಲ ಸಿದ್ಧಾಂತದ ಆಚರಣಾ ಪಥದಲ್ಲಿ ‘ಕ್ರಮಸಮುಚ್ಛಯ’ ಎಂಬ ಮತ್ತೊಂದು ಮಹತ್ವದ ದಾರಿಯನ್ನೂ ಸೂಚಿಸಿದ್ದಾರೆ. ಇದು ಅವಸರದ ರೇಕಣ್ಣ ಹೇಳುವ ‘ತನ್ನ ದೃಷ್ಟಕ್ಕೆ ತಕ್ಕ ಸ್ಥಲವ ಮೆಟ್ಟಿ, ಸ್ಥಲಕ್ಕೆ ತಕ್ಕ ಆಚರಣೆಯಲ್ಲಿ ನಿಂದು, ಆ ಆಚರಣೆ ಆದಿಯಾಗಿ ಅನಾದಿಯಿಂದತ್ತಣವನ ಭೇದಿಸಿ ಹಿಡಿದು ಸದ್ಯೋಜಾತಲಿಂಗದಲ್ಲಿ ವೇಧಿಸಬೇಕು ಎಂಬ ಮಾತಿನಲ್ಲೂ ಸ್ಪಷ್ಟವಾಗಿದೆ. ಇಲ್ಲಿ ಅನುಸರಿಸಬೇಕಾಗಿರುವುದು ಒಂದೊಂದೇ ಹಂತದ ಕ್ರಮವನ್ನು ಹಾಗೂ ಒಂದಾದ ನಂತರದ ಮತ್ತೊಂದು ಕ್ರಮವನ್ನು.ಇದು ಕೂಡ ವೈಜ್ಞಾನಿಕ ಮಾರ್ಗವೇ.
ವೈಜ್ಞಾನಿಕ ಅಥವಾ ಧಾರ್ಮಿಕ ಎರಡೂ ಕ್ಷೇತ್ರಗಳಲ್ಲಿ ಸಾಗುವಾಗ ನಮ್ಮ ಅರಿವಿನ ಮಿತಿಯಿಂದಾಗಿ ಹಲವಾರು ಸಂಶಯ ಮತ್ತು ಅಡೆತಡೆಗಳು ಬರುವುದು ಸಹಜ. ಇವುಗಳನ್ನು ಪರಿಹರಿಸಿಕೊಂಡು ಮುನ್ನಡೆಯಲು ಇರುವ ಏಕೈಕ ಮಾರ್ಗವೆಂದರೆ ಮೊದಲು ನಮ್ಮ ಮಿತಿಯನ್ನು ಗುರುತಿಸಿಕೊಳ್ಳುವುದು, ಮತ್ತು ಆ ಮಿತಿಯನ್ನೇ ಸ್ಥಲವನ್ನಾಗಿಸಿಕೊಂಡು, ಅಲ್ಲಿಂದಲೇ ಮತ್ತೆ ಮುಂದಿನ ನಡೆಯನ್ನು ಆರಂಭಿಸುವುದು. ಇದು ಅಧ್ಯಾತ್ಮ ಮತ್ತು ವಿಜ್ಞಾನ ಎರಡೂ ಕ್ಷೇತ್ರಗಳಿಗೂ ಅನ್ವಯಿಸುವ ಮಾರ್ಗ. ಅವಸರದ ರೇಕಣ್ಣ ಈ ವಚನದಲ್ಲಿ ಎರಡೂ ಕ್ಷೇತ್ರಗಳಲ್ಲಿ ಕಾರ್ಯಪ್ರವೃತ್ತವಾಗುವ ಇಂಥ ವೈಜ್ಞಾನಿಕ ಮಾರ್ಗದ ಬಗ್ಗೆಯೇ ಖಚಿತವಾದ ಮಾತು ಹೇಳಿದ್ದಾನೆ. ಶರಣರಿಗೆ ವಿಜ್ಞಾನದ ಬಗೆಗೆ ಮತ್ತು ಅಧ್ಯಾತ್ಮವೂ ವಿಜ್ಞಾನ ಎಂಬುದರ ಬಗೆಗ ಇದ್ದ ಸ್ಪಷ್ಟ ತಿಳುವಳಿಕೆಗೆ ಇದು ಸಾಕ್ಷಿ. ಶರಣರ ವಚನಗಳಲ್ಲಿ ವೈಜ್ಞಾನಿಕ ಸತ್ಯದ ಇಂಥ ಅನೇಕ ಪ್ರಮೇಯಗಳ ಅನಾವರಣವಿದ್ದು, ಆ ಕಾರಣಕ್ಕಾಗಿಯೇ ವಚನಗಳನ್ನು ವೈಜ್ಞಾನಿಕ ನೆಲೆಯಲ್ಲಿ ವಿಶ್ಲೇಷಿಸುವ ಹೊಸ ಉಪಕ್ರಮ ಆರಂಭವಾಗಬೇಕಿದೆ. ವಚನಗಳಿಗೆ ಅದು ಮತ್ತೊಂದು ಆಯಾಮವನ್ನೂ ಕೂಡಬಲ್ಲುದು.
ಡಾ. ಬಸವರಾಜ ಸಾದರ.
ನಿಲಯದ ನಿರ್ದೇಶಕರು, ಆಕಾಶವಾಣಿ, ಬೆಂಗಳೂರು (ನಿ)
೩೦೩, ಎಸ್. ಎಲ್. ವಿ. ತೇಜಸ್, ೩ ನೇ ಮಹಡಿ,
೨ ನೇ ಅಡ್ಡ ರಸ್ತೆ, ಭುವನೇಶ್ವರಿ ನಗರ,
(ಹೆಬ್ಬಾಳ-ಕೆಂಪಾಪೂರ)
ಬೆಂಗಳೂರು – ೫೬೦ ೦೨೪
ಮೋಬೈಲ್ ಸಂ. +೯೧ ೯೮೮೬೯ ೮೫೮೪೭
ಒಳ್ಳೆಯ ಚಿಂತನ. ವಚನ ಸಾಹಿತ್ಯದ ಕುರಿತು ಇಂಥ ಚಿಂತನ ಮಂಥನ ಆಗಬೇಕಿದೆ. ತಮ್ಮ ಶ್ರಮ ಇಲ್ಲಿ ಸಾರ್ಥಕವಾಗಿದೆ. ತಮಗೆ ಅಭಿನಂದನೆಗಳು.