
ಬಸವಣ್ಣನವರು ಪ್ರಧಾನಿಯಾಗಿ ಕೇವಲ ಭೋಗಿಯಾಗಿ ಕೂಡಲಿಲ್ಲ. ತ್ಯಾಗಿಯಾಗಿ, ಯೋಗಿಯಾಗಿ ಲಿಂಗಾಂಗಿಯಾಗಿ ಒಂದೆಡೆ ಸಮಾಜೋದ್ಧಾರ, ಇನ್ನೊಂದೆಡೆ ಆತ್ಮೋದ್ಧಾರಕ್ಕಾಗಿ ಕಂಕಣ ಬದ್ಧರಾದರು. ಲಿಂಗಾಂಗಿಯಾಗಿ ಲಿಂಗಾಯತ ಧರ್ಮಕಟ್ಟಿ, ಸಮಾನತೆ ಅದರ ಕುರುಹು ಮಾಡಿದರು.
ನಮ್ಮವ ನಮ್ಮವರು ಎನ್ನುತಾ ಬಸವಣ್ಣ
ಒಮ್ಮನದಿ ಎಲ್ಲರ ಅಪ್ಪಿಕೊಂಡು | ಅಳಿಸ್ಯಾರ
ನಾನು ನಿನ್ನೆಂಬ ಬೇಧವ
ಬಸವಣ್ಣನವರ ಮನಸ್ಸನ್ನು ಈ ಜಗತ್ತು ಬಹು ಬೇಗನೆ ಅರಿತುಕೊಂಡಿತು ಎನ್ನುತ್ತಾರೆ ಜನಪದರು. ಅವರದು ತಾಯಿ ಹೃದಯ, ಎಲ್ಲರನ್ನು ಕೈಮಾಡಿ ಕರೆಯಿತು ಅದು. ಅವರ ಅಯ್ಯಾ ಅಪ್ಪಾ ಎನ್ನುವ ಮನಸ್ಸಿಗೆ ನಾಟು ವಂತಹ ನುಡಿ ಮತ್ತುಗಳು ಎಲ್ಲ ಜಾತಿಯವರನ್ನು ಕಲ್ಯಾಣದತ್ತ ಕರೆದ್ಯೋಯದವು.
ಸಾಗಿ ಬಂದಾರ ಜನರು ಯೋಗಿ ಬಸವನಲ್ಲಿ
ಮಿಗಿಲಾದ ಹುರುಪು ಹುಮ್ಮಸದಿ | ಅವರೆಲ್ಲ
ನೀಗ್ಯಾರ ಭವದ ದು:ಖವು|’
ಎಳಗರು ತಾಯಿಯ ಹಂಬಲಿಸಿ ಬಂದಂತೆ
ಬಳಗವು ಬಂತು ಕಲ್ಯಾಣಕ | ಬಸವನೊಳು
ಬೆಳಕಿನ ಕಿರಣ ಕಂಡರು’
ಅಂಜಿಲ್ಲ ಯಾರಿಗೆ ಅಳುಕಿಲ್ಲ ಯಾರಿಗಿ
ನಂಜುಂಡ ರೂಪದ ಬಸವಗ | ನೆನೆಸಲು
ಬಂಜರು ಬಾಳು ಹಸನಾಯ್ತು’
ಬಸವನ್ಣನವರು ಅನುಭವಮಂಟಪ ಕಟ್ಟಿದ್ದು ಅದರ ಕಾರ್ಯ ವೈಖರಿಗಳನ್ನು ಜನಪದ ಸಾಹಿತ್ಯ ಕಟ್ಟಿಗೆ ಕಟ್ಟುವಂತೆ ಚಿತ್ರಿಸುತ್ತದೆ.
ಗೆದ್ದಲು ಹಿಡದಂತ ಬವಣೆಯು ಅಳಿಯಲು
ಮುದ್ದಾಮಕಟ್ಟಿ ಮಂಟಪ | ಇಟ್ಟಾರ
ಅನುಭವ ಮಂಟಪ ಹೆಸರದಕ
ನಡೆದ್ಹಾಂಗ ನುಡಿದವರು ನುಡಿದ್ಹಾಂಗ ನಡೆದವರು
ಮಾಡ್ಯಾರ ಅನುಭವ ಮಂಟಪ | ಅದರಾಗ
ಆಡ್ಯಾರ ಮನದ ಮಾತೆಲ್ಲ
ಇದರ ನೆಲೆ ಅಂದು ಕಲ್ಯಾಣದಲ್ಲಿ ಎಲ್ಲಿಇತ್ತು ಎನ್ನುವದನ್ನು ಅವರು ಗುರುತಿಸುತ್ತಾರೆ.
ತ್ರಿಪುರಾಂತ ಕೆರಿಮುಂದ ಒಪ್ಯಾದ ಛಂದಕ್ಕೆ
ಅಪ್ಪ ಕಟ್ಟಿದ ಅನುಭವ ಮಂಟಪವು | ಬಿದ್ದಾದ
ಕೆರೆಯಾಗ ಬಿಂಬ ಅದರದು.
ಇಂತಹ ಅನುಭವ ಮಂಟಪ ಶೂನ್ಯ ಸಿಂಹಾಸನಾಧಿಪತಿಗಳು ಅಲ್ಲಮ ಪ್ರಭುದೇವರು ಎಂಬುದರ ನೆನಪು ಮಾಡುತ್ತಾರೆ.
ಇದರ ಮುಖಾಂತರ ಸಮಾನತೆತತ್ವ ಮೊದಲು ಬಿತ್ತಿದರು ಅವರು ಎನ್ನುವರು. ಯಾವ ಸ್ತ್ರೀಗೆ ಪರು. ಪಕ್ಷಿ ಪ್ರಾಣಿಗಳಿಗಿಂತಲೂ ಕೀಳಾಗಿ ಕಂಡಿದ್ದರೂ. ಅಜ್ಞಾನಿ ಎಂದುಕರೆದು ಅವಳ ಸ್ವತಂತ್ರ್ಯಾಪಹರಣ ಮಾಡಿದ್ದರೂ ಆ ಸ್ತ್ರೀಗೆ ಮರುಜನ್ಮ ಕೊಟ್ಟವರೇ ಬಸವಣ್ಣನವರೆಂಬುದನ್ನು ಒತ್ತಿಒತ್ತಿ ಹೇಳುತ್ತಾರೆ ಜನಪದರು.
ಹೀರೇಯ ಕಾಯ್ಹಾಂಗ ಗರ್ಯಾರ ಹೆಣ್ಣಿಗೆ
ಗರಗಸದ್ದಾಂಗ ಕೊರದಾರ | ಬಸವಣ್ಣ
ಗುರುವಾಗಿಅವರ ಪೂರೆದಾರ.
ಗುರುವಾಗಿ ಪೊರದಾರ ಅರಿವದು ಕೊಟ್ಟಾರ
ಕರೆದುತಾ ಲಿಂಗ ಕಟ್ಟ್ಯಾರ | ಹೆಣ್ಣಿಗೆ
ಹರಕೆಯು ನೀಡಿ ಪೊರದಾರ
ಹೆಣ್ಣಿಗೆ ಲಿಂಗ ಕಟ್ಟಿಧಾರ್ಮಿಕ ಸ್ವಾತಂತ್ರö್ಯ ಕಾಯಕ ಕಲಿಸಿ ಆರ್ಥಿಕ ಸ್ವಾತಂತ್ರö್ಯ, ದಾಸೋಹ ಕಲಿಸಿ ಸಾಮಾಜಿಕ ಸ್ವಾತಂತ್ರö್ಯ ಬರೆಯಲು ಒದಲು ಕಲಿಸಿ ಅರಿವಿನ ಸ್ವಾತಂತ್ರö್ಯ ಕಲಿಸಿ ಯುಗ ಯುಗಕ್ಕೆ ಅವರು ಗುರುವಾದರು ಎನ್ನುತ್ತಾರೆ.
ಸಮನತೆಯ ಇನ್ನೊಂದು ಮುಖ ಎಲ್ಲ ಜಾತಿಯವರನ್ನು ಒಂದುಗೂಡಿಸಿ ಅವರ ವ್ಯಕ್ತಿತ್ವವನ್ನು ಮೇಲಕ್ಕೆತ್ತಿದ್ದು. ತಾನು ಕಟ್ಟಿದ ಹೊಸ ಲಿಂಗಾಯತ ಧರ್ಮಕ್ಕೆ ಜಾತಿ/ಮತ/ಪಂಥ/ ಲಿಂಗಗಳಿಂದ ದೂರವಿರಿಸಿದ್ದು.
ಹೊಲೆ ನೀನು ಅಂದಿಲ್ಲ ಮಾದಗನೆಂದಿಲ್ಲ
ಎಲ್ಲರಕಂಡು ಕೈ ಮುಗಿದು | ಬಸವಣ್ಣ
ಎಲ್ಲರೂ ನಿನ್ನೊಳಗೆ ಅಡಗ್ಯಾರ
ಕೊಲ್ಲುವ ಮಾದಿಗನು ಹೊಲಸುಂಬುವ ಹೊಲೆಯ
ಕುಲವೊಂದೆ ನಮಗೆ ಎನ್ನುತ್ತಾ | ಅವರಲ್ಲಿ
ಸನ್ನೂ ತಾ ಶರಣ ಎನಿಸ್ಯಾರ.
ಎಲ್ಲಾ ಜಾತಿಯವರು ಬಸವಣ್ಣನವರ ಸಾಗರದಂತಹ ಒಡಲೊಳಗೆ ಸೇರಿಕೊಂಡರು. ಬಡತನ, ಕೀಳರಿಮೆ, ಅಜ್ಞಾನವನ್ನೆಲ್ಲ ಬದಿಗೊತ್ತಿದ್ದರು. ನಾವು ಮನುಷ್ಯರು, ನಮಗೂ ವ್ಯಕ್ತಿತ್ವವಿದೆ ಅವಕಾಶ ಸಿಕ್ಕರೆ ನಾವು ಕೂಡಾಎಂತಹ ಕೆಲಸ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟರು ಕಲ್ಯಾಣದ ಶರಣರು.
ಹದಿನೆಂಟು ಕುಲದವರು ಒಂದಾಗಿ ಕೂಡ್ಯಾರ
ಬದಿಗೊತ್ತಿತಮ್ಮ ಹಳಸಿದ | ಜಾತಿಯು
ಸದ್ದಿಲ್ಲದೆ ಪಡೆದು ಹೊಸಮತ’
ಹೊಸಮತ ಸೇರುತಾ ಹೊಸರೂಪ ಪಡದಾರ
ಹೊಸಹಾದಿ ಹಿಡಿದು ನಡದಾರ | ಬಸವಗ
ಶಿವರೂಪ ಎಂದು ತಿಳದಾರ
ಕಲ್ಯಾಣ ಭೂಮ್ಯಾಗ ಬಲ್ಲಂತ ಜನಕೂಡಿ
ಅನುಭವ ಮಾತು ಆಡ್ಯಾರ | ಅವರೆಲ್ಲ
ಧರೆಮ್ಯಾಲಿನ ದೇವರು ಆಗ್ಯಾರ.
ಎಂದು ಉದ್ಗಾರ ತೆಗೆಯುತ್ತಾರೆ.
ಬಸವಾದಿ ಪ್ರಮಥರು ಕಾಯಕ ಯೋಗಿಗಳು. ಕಾಯಕ ಮಾಡುತ್ತಾ ಅಂತರಂಗ ಬಹಿರಂಗದಲ್ಲಿಯೂ ಕಾಯವನ್ನು ಗಟ್ಟಿಗೊಳಿಸಿಕೊಂಡವರು. ಕಾಯಕ ಕಲಿಸ್ಯಾರ ನಾಯಕ ಬಸವಣ್ಣ ಎನ್ನುತಾ ಪ್ರತಿಯೊಂದು ಕಾಯಕಕ್ಕೂ ಬೆಲೆ ತಂದು ಕೊಟ್ಟು ಅದಕ್ಕೆ ಎಂತಹ ಶಕ್ತಿ ಎಂಬುದನ್ನು ಕಾಯಕದ ಮುಖಾಂತರ ಸಾಧಿಸಿ ತೋರಿದವರು ಬಸವಣ್ಣನವರು.
ಮರ್ತ್ಯಕ್ಕ ಬಂದಿದಿ ಕರ್ತವ್ಯ ಮಾಡಲು
ಮರತ್ಯಾಕ ಕುಂತಿ ಹೀಂಗರ | ಎನ್ನುತ್ತಾ
ಕರ್ತವ್ಯದ ಹಾದಿ ತರ್ಯಾರ
ಕಾಯಕ ಮಾಡಬೇಕು ಕಾಯ ಇರೋತನಕ
ಕುಂತುಂಬ ಮಾತು ಮೊದಲಿಲ್ಲ | ಎನ್ನುತ್ತಾ
ಕಾಯಕ ಕಲಿಸಿ ಎಲ್ಲರಿಗೆ
ಕಾಯಕ ಮಾಡುತಲಿ ಕಾಯವೇ ಮರತಾರ
ಮಾಯಾ ಮೋಹವು ಬಿಟ್ಟಾರ | ಎನ್ನುತ್ತಾ
ಕಾಯದೊಳು ಕೈಲಾಸ ಕಂಡಾರ
ಮಾನವನಾಗಿ ಹುಟ್ಟಿ ಮರತ್ಯಕ್ಕೆ ಬಂದದ್ದೆ ಕಾಯಕ ಮಾಡಲು ಹಸಿವು ಹಂಗಿಸಿಕೊಳ್ಳಲು ದುಡಿದುಣ್ಣಲೇ ಬೇಕು. ಕುಳಿತು ಉಣ್ಣುವದು ಸಲ್ಲದು ಎಂಬಾಶೆಯುಳ್ಳ ಬಸವಣ್ಣನವರು ಕಾಯಕದ ಹಾದಿ ತೋರುತ್ತಾರೆ. ಅವರ ಮಾತಿಗೆ ಶರಣರು ಒಲ್ಲ ಅನ್ನದೆ ಕಾಯಕದೊಳಗೆ ಕೈಲಾಸ ಕಂಡರು.
ಹೊಸಬರು ಬಂದಾರ ಕಲ್ಯಾಣ ಊರಿಗೆ
ಖುಸಿಯಿಂದ ಕುಂತು ಮಂಟಪ | ಒಳಗರ
ಅರಿವಿಟ್ಟು ಕೇಳಿ ಅನುಭವ
ಯಾರೇ ಬರಲಿ ಅವರು ಮೂರು ದಿನದೊಳಗೆ ತಮಗೆ ಸರಿಹೊಂದುವಂತಹ ಕಾಯಕ ಆರಿಸಿಕೊಂಡು ಅದರೊಳಗೆ ಒಂದಾಗಲೇಬೇಕು ಮೂರು ದಿನ ಮಾತ್ರ ಅವರಿಗೆ ಮಹಾಮನೆಯಿಂದ ಪ್ರಸಾದವಾಗುತ್ತಿತ್ತು. ನಾಲ್ಕನೇ ದಿನ ತಮ್ಮ ಕಾಯಕದಿಂದ ತಾವೇ ಪ್ರಸಾದದ ವ್ಯವಸ್ಥೆ ಮಾಡಿಕೊಳ್ಳಬೇಕೆಂಬುದು ಬಸವಣ್ಣನವರ ತತ್ವ. ಜನಪದರು.
ಆಶೆಯ ಬಿಡಬೇಕುದಾಸೋಹ ನಡಿಬೇಕು
ಈಶನ ಕಾಣಬೇಕುಅದರಾಗ | ಎನುತಲಿ
ದಾಸೋಹ ಮರ್ಮ ತಿಳಿಸ್ಯಾರ’
ಕೊಟ್ಟಿನಿ ನಾನೆಂಬ ಅಹಂಮಿಕೆ ಬಿಡಬೇಕು
ಕೊಟ್ಟಿನಿ ಶಿವನದು ಶಿವನಿಗೆ | ಎನ್ನುತ್ತಾ
ಕೊಟ್ಟುಣ್ಣ ಬೇಕು ಎಂದಾರ
ಕೊಟ್ಟು ನೀ ಉಂಡರ ಸಿಟ್ಟಿಲ್ಲ ಶಿವನಿಗೆ
ಬಿಟ್ಟು ನೀ ಉಂಡರ ಕೇಡದ | ಪರಮಾತ್ಮ’
ಸಿಟ್ಟಿಲಿ ಪಾಠ ಕಲಿಸ್ಯಾನು
ಕಾಯಕದಿಂದ ಬಂದುದನ್ನು ದಾಸೋಹವಾಗಲೇಬೇಕು. ಶಿವನಿಂದ ಬಂದದ್ದು ಶಿವನಿಗೆ ಸಲ್ಲಬೇಕು. ಕೂಡದೆ ಮುಚ್ಚಿಟ್ಟು ಉಂಡರೆ ಬದುಕಿಗೆ ಕೇಡಾಗುವದು ಎಂಬ ಮಾತುಗಳಿಂದ ಎಚ್ಚರಿಸುತ್ತಾರೆ. ಹೀಗಾಗಿ ಎಲ್ಲ ಶರಣರು ಕಾಯಕಧಾರಿಗಳಾಗಿ ದಾಸೋಹ ಭಂಡಾರಿಗಳಾಗರುವದು ಆ ಶರಣರ ವೈಶಿಷ್ಟö್ಯವಾಗಿದೆ.
ಅರಿವಿನ ಕುರುಹಾದ ಇಷ್ಟಲಿಂಗ ಬಸವಣ್ಣನವರ ಉದರದಿಂದ ಬಂದದು ಎಂಬುದು ಅವರ ವಾದ.
ಲಿಂಗವು ನಿನ್ನೊಳಗ ಅಡಗ್ಯಾದ ಬಸವಣ್ಣ
ಸರ್ವಾಂಗ ಲಿಂಗ ಗುರುಬಸವ | ಮಾಡಿದರ
ಸರ್ವರ ಎದಿ ಮ್ಯಾಲ ಇಷ್ಟಲಿಂಗ’
ಲಿಂಗವು ಎದಿಮ್ಯಾಲ ಕಟ್ಟ್ಯಾರ ಬಸವಣ್ಣ
ಅಂಗವೇ ಗುಡಿಯ ಮಾಡ್ಯಾರ | ಎಲ್ಲರೂ
ಅಂಗಲಿಂಗ ಒಂದು ಮಾಡ್ಯಾರ’
ಹೊಸಮತ ಕಟ್ಟ್ಯಾರ ಲಿಂಗವು ಇಟ್ಟಾರ
ಹೊಸ ಹೊಸ ನುಡಿ ಆಡ್ಯಾರ | ಜಗದಾಗ
ಗೊಳ್ಳ ಜೊಳ್ಳೆಲ್ಲ ಹರ್ಯಾವ’
ಅರಿವಿನ ಕುರುಹು ಇಷ್ಟಲಿಂಗ. ಇದರ ಪ್ರತಿಫಲ ಎಲ್ಲರಿಗೂ ಸಿಗುವಂತೆ ಮಾಡಿದ್ದರಲ್ಲದೆ ಎಲ್ಲಾ ಶರಣರು ಎದೆಯ ಮೇಲೆ ಇಷ್ಟಲಿಂಗ ಕಟ್ಟಿಕೊಂಡು ಅಂಗಲಿಂಗ ಸಮರಸಗೊಳಿಸಿಕೊಂಡವರು. ಅಂತೆಯೇ ಅವರನ್ನು ಜನಪದರು ಧರೆಯ ಮೇಲಿನ ದೇವರು ಎಂದು ಕರೆಯುತ್ತಾರೆ.
ದೇಶಕ್ಕೆ ಹೊಸಗಾಳಿ ಬೀಸ್ಯಾರ ಬಸವಣ್ಣ
ಮಾಸ್ಯಾವ ಹುಸಿವೇದ ಒಳಗಿಂದು | ವಚನವು
ಹೊಸದಾಗಿ ಬೀಸ್ಯಾವ ಶಿವಗಾಳಿ’
ಎನ್ನುವಲ್ಲಿ ವಚನ ಸಾಹಿತ್ಯದ ಮಹತ್ವವನ್ನು ಸಾರುತ್ತಾರೆ.
ಖೂಳ ಬಿಜ್ಜಳರಾಯ ಅವನಂತೆ ತುಸುಮಾನ
ಗೂಳಿಯಾಹಾಂಗ ಒದರುತ್ತ | ಬಸವಗ
ಇಲ್ಲದ ಆರೋಪ ಮಾಡ್ಯಾನ
ಇಲ್ಲದ ಆರೋಪ ಮಾಡುತ್ತಾ ಅವರಿಗಿ
ಕಲ್ಯಾಣ ಬಿಡಲು ತಿಳಿಸ್ಯಾನ | ಬಸವಣ್ಣ
ನಿಲ್ಲದೆ ನಡದಾರ ಸಂಗಮಕ್ಕೆ
ಎನ್ನುವ ಮಹತ್ವದ ತ್ರಿಪದಿಗಳು ಬಸವನ್ಣನವರು ಕಲ್ಯಾಣ ಬಿಟ್ಟು ವಿಷಯವನ್ನು ತಿಳಿಸುವವು ಬಿಜ್ಜಳನನ್ನು ಖೂಳ ಎಂದು ಸಂಭೋದಿಸುತ್ತಾರೆ. ಖೂಳನಲ್ಲದೆ ಇನ್ನೇನು? ತನ್ನ ಆಸನಕ್ಕಾಗಿ ‘ವಿಶ್ವದೈವ’ ವಾಗಿರುವ ಬಸವಣ್ಣನವರನ್ನು ಅರ್ಥ ಮಾಡಿಕೊಳ್ಳದಷ್ಟು ದುಷ್ಟನಾದ. ಇಲ್ಲದ ಆರೋಪ ಮಾಡುತ್ತಾ ಕಲ್ಯಾಣ ತೊರೆಯಲು ತಿಳಿಸಿದ. ಬಸವಣ್ಣ ನೇರವಾಗಿ ಕಪ್ಪಡಿ ಸಂಗಮಕ್ಕೆ ಹೋದರು ಎನ್ನುತ್ತಾರೆ
ಕಲ್ಯಾಣ ಬಸವಣ್ಣ ವಿಶ್ವದ ದೈವರು
ಎಲ್ಲರಿಗೂ ಪಾವನ ತಾಮಾಡಿ | ಅರಸಗ
ಒಲ್ಲೆಂದು ನುಡಿಯದೆ ನಡೆದಾರ
ತಾ ಕಟ್ಟಿದ ಕಲ್ಯಾಣ, ಕಾಯಕ ಜೀವಿಗಳ ಕಲ್ಯಾಣ, ದಾಸೋಹ ನಿಧಿಗಳ ಕಲ್ಯಾಣ, ಯೋಗದ ತ್ಯಾಗದ ಕಲ್ಯಾಣಪುರಕ್ಕೆ ಬಾಗಿ ನಮಸ್ಕರಿಸುತ್ತಾರೆ. ಆ ಮಣ್ಣನ್ನು ಹಣೆಗೆ ಹಚ್ಚಿಕೊಳ್ಳತ್ತಾರೆ.
ಕರದಾರ ಬಳಗಕ್ಕ ಶಿರಬಾಗಿ ನಮಿಸ್ಯಾರ
ಕರೆ ಈಗ ಬಂದಾಗ ಸಂಗಮನದು | ನಾನೀಗ
ಕಲ್ಯಾಣ ಬಿಟ್ಟು ಹೋಗತ್ತಿನಿ.
ಅವರ ಈ ಮಾತು ತಿಳಿಯಲಿಲ್ಲ ಶರಣರಿಗೆ. ಒಬ್ಬರನ್ನೋಬ್ಬರು ಮುಖ ನೋಡುತ್ತಾರೆ. ‘ವಿವರಿಸಿ ಹೇಳಪ್ಪ ನಿನ ಮಾತಿನರ್ಥ’ ಎಂದಾಗ ಅಪ್ಪ ಬಸವಣ್ಣ ಮುಂದೆ ಬಂದು ಅವರೆಲ್ಲರನ್ನು ಅಪ್ಪಿಕೊಂಡು ನಡೆದ ವಿಷಯ ತಿಳಿಸುತ್ತಾರೆ. ಆಗ ಶರಣರದು: ಜನಪದರು ಕಣ್ಣಿಗೆ ಕಟ್ಟುವಂತೆ ಚಿತ್ತಿಸುತ್ತಾರೆ.
ಕುಂತ್ಹಂತ ಶರಣರುಎದ್ದುತಾ ನಿಂತಾರ
ಕಂತಹರ ಬಸವನು ಮಾರಿನೋಡಿ | ಅನತಾರ
ನಿಮ್ಮ ಹಿಂದ ನಮ್ಮ ನಡಗಿಯು
ನೀವಿಲ್ಲದ ಕಲ್ಯಾಣ ಯಾತಕ್ಕ ಬಸವಣ್ಣ
ನೀವಿಲ್ಲದಜೀವ ಉಳಿಯಲ್ಲ | ನಡಿಯಿರಿ
ನೀವಿದ್ದಜಾಗ ನಮ್ಮದು
ನಿನ್ನಿಂದ ಮಡಿಯಾಯ್ತು ನಿನ್ನಿಂದ ಹಸನಾಯ್ತು
ನಿನ್ನಿಂದ ದ್ಯಾಹ ಶುದ್ಧಾಯ್ತು | ಬಸವಣ್ಣ
ನೀನಿಲ್ಲದರ ಜೀವ ಉಳಿಯಲ್ಲ.
ಎನ್ನುತ್ತಾ ಶರಣರು ದುಃಖದಿಂದ ರೋಧಿಸಲು ಪ್ರಾರಂಭಿಸುತ್ತಾರೆ. ಈ ದೇಹಕ್ಕೆ ಬೆಲೆ ಬಂದದ್ದೆ ನಿನ್ನಿಂದ. ಮಾನವ ಜನ್ಮದ ಅರಿವು ಕೊಟ್ಟ ಗುರುವೇ ನೀನು ಗುರು ಇಲ್ಲದ ಊರು, ಕಲ್ಯಾಣವಾದರೇನು? ಕೈಲಾಸವಾದರೇನು ಎನ್ನುತ್ತ ಶರಣರು
ಕಲ್ಯಾಣ ನಮಗ್ಯಾಕೆ ಕೈಲಾಸ ನಮಗ್ಯಾಕ
ಬಲ್ಲಂತ ಗುರು ಬಸವಣ್ಣನ | ಜಾಗವು
ಕಲ್ಯಾಣ ನೋಡು ನಮಗೆಲ್ಲ.
ಎನ್ನುತಾ ದು:ಖಪಡುವ ಶರಣರನ್ನು ಸಂತೈಸುವದೇ ಬಸವಣ್ಣನವರಿಗೆ ದೊಡ್ಡ ಸಮಸ್ಯೆಯಾಗುತ್ತದೆ. ಒಂದೆಡೆ ತನ್ನ ಕುಟುಂಬ, ಇನ್ನೊಂದೆಡೆ ವಿಶ್ವ ಕುಂಟುಂಬ. ಈ ಎರಡನ್ನು ಸಂತೈಸುತ್ತಾ ಮುಂದೆ ಅವರು ಮಾಡುವ ಕಾರ್ಯಗಳನ್ನು ಸೂಚಿಸುತ್ತಾ ಬಸವಣ್ಣ ತನ್ನ ಪ್ರಾಣ ಸ್ವರೂಪ ಕಲ್ಯಾಣ ತೊರೆಯುತ್ತಾರೆ. ಗಿಡ, ಮರ, ಬಳ್ಳಿ, ಪಶು, ಪಕ್ಷಿ, ಪ್ರಾಣಿ ಬಸವಣ್ಣನವರಿಗೆ ಬಾಗುತ್ತವೆ ಎನ್ನುತ್ತಾರೆ.
ಆದರೆ ಒಂದೇ ಮಾತಿನ ಮಹಾತ್ಮರು ಬಸವಣ್ಣ. ಅರಸ ಬಿಜ್ಜಳನ ಮಾತಿಗೆ ಎರಡಾಡಲಿಲ್ಲ ನೇರವಾಗಿ ಹಡಪದ ಅಪ್ಪಣ್ಣನವರೊಂದಿಗೆ ಸಂಗಮಕ್ಕೆ ಹೋಗುತ್ತಾರೆ. ಅಲ್ಲಿಯೇ ಲಿಂಗೈಕ್ಯರಾಗುತ್ತಾರೆ.
ಅಂಗವು ಕೂಡಲ ಲಿಂಗವು ಸಂಗಮ
ಅಂಗಲಿಂಗ ಕೂಡಲು ಕೂಡಲ| ಸಂಗಮ
ಸಂಗಮನೊಳು ಒಂದಾಗಿ ಬಸವಣ್ಣ
ಬಸವಣ್ಣ ಲಿಂಗೈಕ್ಯರಾಗಿಲ್ಲ ಜನಪದರಿಗೆ.
ಸಂಗಯ್ಯ ಇರುತ್ತಾನ ಸಂಗಮದ ದಂಡಿಮ್ಯಾಲ
ಸಂಗಯ್ಯನ ಮಗ ಬಸವಣ್ಣ | ಇರುತ್ತಾರ
ಲಿಂಗಿರುವ ಭಕ್ತರ ಎದಿಮ್ಯಾಗ
ಎಂಬ ಆತ್ಮ ವಿಶ್ವಾಸ ಅವರಿಗಿದೆ ಅವರು ಕಟ್ಟಿದ ಲಿಂಗ ಅದು ಅವರ ಪ್ರತಿರೂಪವಾಗಿದೆ. ಅದನ್ನು ಪೂಜಿಸಿಯೇ ಪೂಜ್ಯರಾದವರು ಬಸವಣ್ಣ. ಅಂತೆಯೇ ಅವರು ಕಟ್ಟಿದ ಲಿಂಗ ನಮ್ಮ ಎದೆಯ ಮೇಲಿದೆ. ಅವರು ನಮ್ಮ ಆತ್ಮದಲ್ಲಿದ್ದಾರೆ. ಅವರು ಮೆಚ್ಚುವಂತೆ ಬಾಳುತ್ತೇವೆ ಎನ್ನುತ್ತಾರೆ.
ಡಾ. ನೀಲಾಂಬಿಕಾ ಪೊಲೀಸಪಾಟೀಲ,
“ಗುರು ಶರಣ ನಿಲಯ”
ಮನೆ ನಂ. 1495/101 ಮತ್ತು 102/310,
ಗೋದುತಾಯಿ ನಗರ,
ನ್ಯೂ ಜೇವರ್ಗಿ ರಸ್ತೆ,
ಕಲಬುರಗಿ – 585 102.
ಮೋಬೈಲ್ ನಂ. 94821 47084.