
ಬಸವಾದಿ ಶರಣರು ಮಾಡಿದ ಅತ್ಯಂತ ಮಹತ್ವಪೂರ್ಣ ಕಾರ್ಯವೆಂದರೆ ಸಮಾನತೆ ತತ್ವ ಪಾಲಿಸಿದ್ದು. ದೂರದೃಷ್ಟಿಯುಳ್ಳ ಶರಣರ ಅಂದಿನ ಆ ತತ್ವವೇ ದೇಶ-ದೇಶಗಳ ಇಂದಿನ ಸಂವಿಧಾನಗಳಲ್ಲಿ, ವಿದ್ವಾಂಸರಲ್ಲಿ, ವೈಚಾರಿಕ, ಪ್ರಜ್ಞೆಯುಳ್ಳವರಲ್ಲಿ, ಕಟ್ಟಿಕೊಂಡಿದೆ. ಜಾತಿ, ಮತ, ಪಂಥ, ಲಿಂಗಗಳ ಮಧ್ಯೆ ಆಳವಾಗಿ ಬಿರುಕು ಬಿಟ್ಟ ಅಸಮಾನತೆಯನ್ನು ಶರಣರು ಕಾಂಕ್ರೇಟ್ ಹಾಕಿ ಆ ಬಿರುಕನ್ನು ಮುಚ್ಚಿಬಿಟ್ಟರು. ಅವರ ಆ ಸಮಾನತೆ ಮನುಕುಲದ ಇತಿಹಾಸವನ್ನು ಬದಲಾಯಿಸಿತು. ಅದರಲ್ಲಿ ಲಿಂಗ ಸಮಾನತೆ ಅತ್ಯಂತ ಮುಖ್ಯವಾಗಿದೆ. ಏಕೆಂದರೆ ಜಗತ್ತಿನಲ್ಲಿಯೇ ಅತೀ ಶೋಷಣೆಗೆ ಒಳಪಟ್ಟವಳು ಹೆಣ್ಣು. ಮೇಲ್ವರ್ಗದಿಂದ ಹಿಡಿದು ಕೆಳ ಜಾತಿಯ ಜನರಲ್ಲಿ ಸ್ತ್ರೀ ಶೋಷಣೆಗೆ ಒಳಗಾಗಿದ್ದಾಳೆ. ಅಜ್ಞಾನಿ ಪಾಪಿ ಎಂದು ಸಾರುತ್ತಾ ಸ್ತ್ರೀ ಸ್ವಾತಂತ್ರ್ಯತೆಗೆ ಅರ್ಹಳಲ್ಲ ಎಂದು ಹೇಳಿ ಆಕೆಯನ್ನು ಅವಳ ವ್ಯಕ್ತಿತ್ವವನ್ನು ನಿಷ್ಕ್ರರ್ಯೆಗೊಳಿಸಿದ್ದರು. ಅಂತಹ ದುರ್ಧರ ಪ್ರಸಂಗದಲ್ಲಿ ಬಸವಾದಿ ಶರಣರು ಅವಳಿಗೆ ಸ್ವಾತಂತ್ರ ನೀಡಿ ಸುತ್ತಿಕೊಂಡ ಬಂಧನಗಳಿಂದ ಮುಕ್ತಿಗೊಳಿಸಿದರು. ‘ಹೆಣ್ಣು ಮಾಯೆಯಲ್ಲ ಮನದ ಮುಂದಣ ಆಸೆಯೇ ಮಾಯೆ” ಎಂದು ಅಲ್ಲಮ ಪ್ರಭುಗಳು ನುಡಿದರೆ “ಹೆಣ್ಣು ಸಾಕ್ಷಾತ ಕಪಿಲಸಿದ್ಧ ಮಲ್ಲಿಕಾರ್ಜುನ” ಎಂಬುದು ಸಿದ್ದರಾಮ ಶಿವಯೋಗಿಗಳ ನುಡಿಯಾಗಿದೆ. “ಪರವಧು ಮಹಾದೇವಿ ಎಂಬೆ” ಬಸವಣ್ಣನವರ ದೃಷ್ಟಿ. ಇಂತಹ ಮಾತುಗಳು ಅಂದಿನ ಸ್ತ್ರೀಯರನ್ನು ಎಚ್ಚರಿಸಿದವು. ಅವರಿಗೆ ಊರುಗೋಲಾದವು. ಕಾರ್ಯನ್ನುಖಿಗೊಳ್ಳುವಂತೆ ಮಾಡಿದವು. ಎಚ್ಚೆತ್ತುಕೊಂಡು ಆ ಸ್ತ್ರೀಯರ ಒಳಗಿದ್ದ ಅರಿವನ್ನು ವಿಕಾಸಗೊಳಿಸಿದರು. ಅವರಲ್ಲಿ ಅತ್ಯಂತ ಪ್ರಮುಖ ಹೆಸರು ಮಹಾದೇವಿ ಅಕ್ಕನವರದು. ಆ ಹೆಸರು ಅಭಿಮಾನಯುಕ್ತವಾದುದು. ಆ ಹೆಸರಿನಲ್ಲಿದೆ ಧೈರ್ಯ, ಜ್ಞಾನ, ವೈರಾಗ್ಯ, ಭಕ್ತಿ, ಸ್ವಾಭಿಮಾನ. ಅಕ್ಕ ಸ್ತ್ರೀಕುಲದ, ಆತ್ಮೋನ್ನತಿಯ ಸಂಕೇತವಾಗಿದ್ದಾಳೆ. ಅಂತೆಯೇ ಜನಪದರ ಮನದಲ್ಲಿ ಇಂದಿಗೂ ನೆಲೆಸಿದ್ದಾಳೆ.
ಅಕ್ಕ ನಿನ್ನ ಹಾಡು ಎತ್ತಿನಾ ಹಾಡುತ್ತಾ
ಮಾಡಿದ ಪಾಪ ಕಳಕೊಂಡೆ ಮುಂದಿನ
ಹಾದಿಯು ಕಂಡೆ ಅದರಾಗ.
ಮಾಡಿದಂತಹ ಪಾಪಗಳೆಲ್ಲ ಆ ಗರತಿ ಪುಣ್ಯರೂಪಿ ಅಕ್ಕನ ಶಿವಜೀವನವನ್ನು ಭಕ್ತಿಯಿಂದ ಹಾಡಿ ಕಳೆದುಕೊಂಡಳಲ್ಲದೆ. ಮುಂದೆ ಹೇಗಿರಬೇಕು? ಎಂಬುದನ್ನು ತಿಳಿದುಕೊಂಡಿದ್ದಾಳೆ. ಶಿವಮೊಗ್ಗ ಜಿಲ್ಲೆಯ ಉಡುತಡಿಯಲ್ಲಿ ಓಂಕಾರ ಶೆಟ್ಟಿ ಮತ್ತು ಲಿಂಗಮ್ಮ ತಾಯಿಯ ಗರ್ಭದಲ್ಲಿ ಹುಟ್ಟಿದ ಅಕ್ಕ ಸ್ಪುರದ್ರೂಪಿ ಆಗಿದ್ದಳು. ಅಂಗಾಲು ತನಕ ಕೂದಲು ಆ ಸೌಂದರ್ಯಕ್ಕೆ ಮೆರುಗು ಕೊಟ್ಟಿದೆ. ಅಕ್ಕ ತನ್ನ ಕೂದಲು ಬಿಚ್ಚಿದರೆ ‘ಬೆನ್ನಿಹಿಂದ ಕರಿಮೋಡ ಮುಸುಕಿದ್ಹಾಂಗ’ ಎನ್ನುತ್ತಾರೆ. ಉಡುತಡಿ ಊರಿನ ಮೃಢರೂಪಿ ಗುರುಗಳು. ಅಕ್ಕಳಿಗೆ ಲಿಂಗದೀಕ್ಷೆ ಮಾಡುತ್ತಾರೆ, ವಚನ ಕಲಿಸುತ್ತಾರೆ, ಅರ್ಥ ವಿವರಣೆ ನೀಡುತ್ತಾರೆ. ಹೀಗಾಗಿ ಬಾಲ್ಯದಿಂದಲೇ ಆ ತಾಯಿಗೆ ಪರಶಿವನೇ ಪತಿಯಾದ. ಯಾವಾಗಲೂ ಕಟ್ಟಿಕೊಂಡ ಇಷ್ಟಲಿಂಗದಲ್ಲಿ ದೃಷ್ಟಿಯಿಟ್ಟು ಪೂಜೆ ಮಾಡುವವಳು. ಆತನ ಧ್ಯಾನದಲ್ಲಿಯೇ ಇರುವವಳು.
ಗಟ್ಟಿಯಲಿಂಗವು ಕಟ್ಟಲು ಎದಿಮ್ಯಾಲ
ಮೆಟ್ಟಿತಾ ನಿಂತು ಆರುವೈರಿ ಮಹಾದೇವಿ
ಇಟ್ಟಾಳ ದೃಷ್ಟಿ ಲಿಂಗಕ್ಕೆ.
ಭಕ್ತಿ ಸ್ವರೂಪಿಯಾಗಿದ್ದ ಅಕ್ಕ ಬೆಳೆಯತೊಡಗಿದಂತೆ ಆಕೆ ಹೊರಮೈ ಒಳಮೈ ಎರಡು ಸುರಸುಂದರಗೊಂಡವು.
ಬೆಳದಾಳ ಬಾಲೆಯು ಬೆಳದಿಂಗಳು ಚೆಲ್ಲಿದ್ಹಾಂಗ
ನೋಡವರ ಕಣ್ಣು ಕುಕ್ಯಾದ ಪರಶಿವ
ಹೂಡ್ಯಾನ ಆಗ ಆಟೊಂದು.
ಆಟವು ಹೂಡ್ಯಾನ ಚನ್ನಮ್ಮಲ್ಲಿಗನಾಥ
ಅಕ್ಕನ ಬಲವು ತಿಳಿಸಲು ಜಗಕೆಲ್ಲ
ಮುಕ್ಕಣ್ಣ ಮಾಡ್ಯಾನ ದೊಡ್ಡಾಟ
ಉಡುತಡಿ ಪುರದ ರಾಜ ಕೌಶಿಕ. ಒಂದು ದಿವಸ ತನ್ನ ಆತ ವೈಹಾಳಿ ಮುಗಿಸಿಕೊಂಡು ಬರುತ್ತಿರುವಾಗ.
ಮಾಳಿಗೆಯ ಮ್ಯಾಲರ ನಿಂತಾಳ ಮಾದೇವಿ
ಗೆಳತೇರ ಹಿಂದ ತಾ ಹೋಗಿ ಆನೆಯ
ಮ್ಯಾಲಿರುವ ಕೌಶಿಕ ನೋಡಲು.
ಮಾದೇವಿ ಮನಿಮುಂದ ನಿಂತಾದ ಆ ಆನಿ
ಮಾದೇವಿ ಮ್ಯಾಲ ಭವಿಕಣ್ಣು ಗಕ್ಕುಂತ
ಮಾದೇವಿ ತಿರುಗಿ ಹಿಂದಕ್ಕ.
‘ಭವಿಕಣ್ಣು’ ಎಂತಹ ಶಬ್ದಪ್ರಯೋಗ ಜನಪದರದು. ಭವಿ ಭಕ್ತರ ವ್ಯತ್ಯಾಸವಿದೆಯೆಂಬುದನ್ನು ಅರಿತಿದ್ದಾರೆ ಜನಪದರು. ಭಕ್ತರ ಕಣ್ಣಲ್ಲಿ ಪ್ರೀತಿ, ಗೌರವ, ದಯೆಗಳಿದ್ದರೆ ಭವಿಯ ಕಣ್ಣಲ್ಲಿ ಕಾಮ, ಕ್ರೋಧ, ಮೋಹಗಳು ತುಂಬಿರುವುದು. ಅಂತಹ ಕಣ್ಣುಗಳು ಭಕ್ತಗಣ ಅರಿಯಲು ಸಾಧ್ಯವಿಲ್ಲವೆಂಬ ವಿಚಾರ ಅವರದಾಗಿದೆ. ಆ ಭವಿಕಣ್ಣು ಭಕ್ತರೂಪಿಯ ಮೇಲೆ ಬಿತ್ತು. ಆ ಕಣ್ಣಿನೊಳಗೆ ಅಡಗಿದ ಕಾಮ ಕೌಶಿಕನನ್ನು ಹುಚ್ಚಾಗಿಸಿತು. ಅಷ್ಟೇ ಅಲ್ಲ ಅವಳು ತನ್ನವಳಾಗಬೇಕೆಂದು ವಿಚಾರ ಮಾಡತೊಡಗಿದ. ಕುಳಿತಿರುವದು ಆನೆಯ ಮೇಲೆ ಆದರೆ ವ್ಯಕ್ತಿತ್ವ ಮಾತ್ರ ಕೀಳು ಭವಿಗಳು ಹೀಗೆ ಬದುಕುವದು ಎನ್ನುತ್ತಾರೆ ಜನಪದರು.
ಆನೆಯ ಮ್ಯಾಲರ ಕುಂತದ್ದು ಮರತಾನ
ಸೊಣಗನ ಹಾಂಗ ಮನದಾವ ಕೌಶಿಕನ
ಹಣೆಬರ ಆಗ ನಗುತಿತ್ತು.
ಹಣೆಬರಹ ನಗುತಿತ್ತು. ಕೌಶಿಕ ಅರಿಯಲಿಲ್ಲ. ಅವನ ಮನದಲ್ಲಿ ಆ ಮಾಳಿಗೆಯ ಮೇಲಿನ ಹುಡುಗಿ ನನ್ನ ಮಡದಿ ಆಗಬೇಕು ಎನ್ನುವದು.
ಮಾದೇವಿ ರೂಪಕ್ಕ ಹುಚ್ಚಾದ ಮಾರಾಜ
ಬುದ್ದಿಯು ಕಳಕೊಂಡು ತಾಕುಂತ ಅವಳ ಮ್ಯಾಲ
ರಾಜನ ಗತ್ತು ತೋರುತ್ತ
ನಿರ್ಭಯಿಗಳಾಗದ ಶರಣರು ಅಂಜಬಹುದೆ ಇಂತಹ ಕುನ್ನಿಗಳನ್ನೇ! ಇವರೊಳಗಿನ ಮದಮತ್ಸರ ಅಹಂಕಾರ ಇಳಿಸುವದಕ್ಕಾಗಿಯೇ ಹುಟ್ಟಿಬಂದವರೇ ಶರಣರು. ಭವಿಗಳನ್ನು ಭಕ್ತರನ್ನಾಗಿಸಿದ ಅಸಂಖ್ಯಾತ ಶರಣರ ಚರಿತ್ರೆ ನಮ್ಮ ಕಣ್ಣಮುಂದಿದೆ. ಮಹಾ ಶಿವಶರಣೆ ಅಕ್ಕ ಹೆದರಬಹುದೆ! ಅವಳ ತಂದೆ-ತಾಯಿ ಹೆದರಿದ್ದಾರೆ. ಅವರಿಗೂ ಆತನಿಗೆ ತಮ್ಮ ಮಗಳನ್ನು ಧಾರೆಯೆರೆಯುವ ಮನಸ್ಸಿಲ್ಲ.
ಲಿಂಗಯಿಲ್ಲ ಅಂಗಕ್ಕೆ ಗುರುವಿಲ್ಲ ಜ್ಞಾನಕ್ಕೆ
ಜಂಗಮರ ಸಂಗ ಮೊದಲಿಲ್ಲ ಭವಿಗಳ
ಸಂಗವು ನಮಗ ಯಾತಕ್ಕ.
ಎಂದು ವಿಚಾರ ಮಾಡುತ್ತಾರೆ ಓಂಕಾರ ಶಟ್ಟಿ ಲಿಂಗಮ್ಮ. ರಾಜನಿರಲಿ, ಮಹಾರಾಜನಿರಲಿ ತಮಗೆ ಅಳಿಯುನಾಗುವದು ಬೇಡ ಎಂಬ ಭಾವನೆ ಅವರದು. ಹೀಗಾಗಿ ರಾಜನು ಈಗ ತನ್ನ ಮಗಳಿಗೆ ಯಾವ ಕಷ್ಟಕೊಡುತ್ತಾನೋ ಎಂಬ ಚಿಂತೆ ಅವರಿಗೆ.
ತಾಯಿಗಿ ನಮಿಸ್ಯಾಳ ತಂದೀಗಿ ನಮಿಸ್ಯಾಳ
ಧೈರ್ಯವು ತುಂಬಿ ಇಬ್ಬರಿಗಿ ಮಾದೇವಿ
ಪರಶಿವ ಚನ್ನಗ ನೆನೆಯುತಾ.
ಮಗಳ ಧೈರ್ಯವೇ ಧೈರ್ಯ ಆ ಧೈರ್ಯ ಕಂಡು ತಂದೆ ತಾಯಿ ಧೈರ್ಯವಾಗಿದ್ದಾರೆ.
ಮನದಾಗ ಶಿವತುಂಬಿ ತನುವಿಗೆ ಶಿವತುಂಬಿ
ತನುಮನ ಶಿವಗ ಮುಡುಪಿಟ್ಟ ಮಾದೇವಿ
ಚೆನ್ನನೆ ಗಂಡ ಎನಗೆಂದು.
ಆದರೆ ಕೌಶಿಕ ಈ ಮಾತು ಒಪ್ಪುತ್ತಿಲ್ಲ. ಯಾರೆಷ್ಟು ಹೇಳಿದ್ದರೂ ಕೇಳುತ್ತಿಲ್ಲ. ಏಕೆಂದರೆ.
ಏಟೇಟೂ ಹೇಳಿದರೂ ತಿಳಿವಲ್ದು ಕೌಶಿಕಗ
ಹಟಮಾಡಿ ಕುಂತ ದುಸುಮಾನ ಹುಚ್ಚಾಸೆಗೆ
ಸೆಟಗೊಂಡ ಹೋದ ಮುಂದಕ
ಆತನ ಜನರು ಬಂದು ಮಾದೇವಿ ಅಕ್ಕಳ ಮೇಲೆ ಬಹಳಷ್ಟು ಒತ್ತಾಯ ಹೇರುವರಲ್ಲದೆ, ಬೇರೆ ಬೇರೆ ರೀತಿ ಮಾನಸಿಕ ಹಿಂಸೆ ಕೊಡಲು ಪ್ರಾರಂಭಿಸಿದಾಗ ಅಕ್ಕ ಸಿಡಿದೇಳುತ್ತಾಳೆ. ಚಿಕ್ಕ ವಯಸ್ಸಿನಲ್ಲಿರುವ ಅಕ್ಕ ಮಾಡಿದ ಮುಂದಾಲೋಚನೆ, ಧೈರ್ಯ ಗಮನಿಸುವಂತಹವುಗಳು.
ಮೂರು ಷರತ್ತು ಒಡ್ಯಾಳ ಮೂರ್ಖಗ ತಿಳಿಲಿಲ್ಲ.
ಮರತಾನ ಕಾಮದ ಮದದಿಂದ ಆದರಾಗ
ಮೂರಾಬಟ್ಟಿ ಆಗಿ ತಾಹೋದ.
ಮದುವೆಗೆ ಮೂರು ಷರತ್ತು ಹಾಕುತ್ತಾಳೆ ಅಕ್ಕ. ಅಕೆಗೆ ಗೊತ್ತು ಮುಂದೆನಾಗುವದಿದೆ ಎಂಬುದು. ಆ ಮೂರು ಷರತ್ತುಗಳೆಂದರೆ.
ಗುರುವಿನ ಪೂಜೆಯು ಜಂಗಮರ ಪೂಜೆಯು
ಅರತಿಲಿ ಲಿಂಗದ ಪೂಜೆಯು ಮಾಡಿದರ
ಜರಿಬೇಡ ಜರಿದು ಬಯ್ಯಬೇಡ.
ರಾಜಾಗ ಹೇಳ್ಯಾಳ ತೇಜುಳ್ಳ ಮಾದೇವಿ
ನಂಜುಂಡನ ಮ್ಯಾಲ ಆಣ್ಯಾದ ಕೊಟ್ಟಮಾತು
ನಡೆದರೆ ಮದುವಿ ಗಟ್ಯಾದ.
ಗುರು-ಲಿಂಗ-ಜಂಗಮರ ಆರಾಧಕಳು ಅಕ್ಕ. ಯಾವ ತತ್ವಕ್ಕಾಗಿ ಹುಟ್ಟಿದ್ದಾಳೋ ಆ ತತ್ವಕ್ಕೆ ಅಡ್ಡಿಯಾದರೆ ಆಕೆ ಸುಮ್ಮನಿರಬಹುದೇ? ಅದನ್ನು ಕೌಶಿಕನಿಗೆ ಮೊದಲೇ ಮನನ ಮಾಡುತ್ತಿದ್ದಾಳೆ. ಕೌಶಿಕ ಒಪ್ಪುತ್ತಾನೆ ಈ ಎಲ್ಲ ಷರತ್ತುಗಳಿಗೆ, ಏಕೆಂದರೆ ಅಕ್ಕನ ವ್ಯಕ್ತಿತ್ವದ ಅರಿವಿಲ್ಲ ಆತನಿಗೆ. ಅರಮನೆಯ ವೈಭವ ನೋಡಿದರ ತಾನಾಗಿಯೇ ಒಲಿದು ಬರುವವಳು ಎಂದು ಹುಚ್ಚು ಕೌಶಿಕನಿಗೆ ಒಪ್ಪಿಯೇ ಬಿಟ್ಟ.
ಹೂ ಅಂದ ಕೌಶಿಕ ಹಾ ಅಂದ ಕೌಶಿಕ
ಒಳಗರ ನಗತಾ ಒಪ್ಯಾನ ಮುಂದಿನ
ಹಾದಿಯು ತಿಳಿಯದ ತಾ ಹೋದ.
ಕೌಶಿಕ ಒಪ್ಪಿದ ಮೇಲೆ ನೇರವಾಗಿ ಅರಮನೆಗೆ ಹೋಗುತ್ತಾಳೆ. ಅಳುತ್ತಿರುವ ತಂದೆ-ತಾಯಿಗೆ ಸಂತೈಸುತ್ತಾಳೆ.
ಅಳಬೇಡ ನನ್ನವ್ವ ಅಳಬೇಡ ನನ್ನಪ್ಪ
ಕಳೆಯುಳ್ಳ ಚನ್ನನ ನಾಮಡದಿ ಇಬ್ಬರೂ
ಕಳಸಿರಿ ನಗುತ್ತಾ ನನಗರ.
ಕಳಸಿರಿ ನಗುತಲೆ ನನಗರ ನೀವೆಲ್ಲ
ಉಳೆಯಲ್ಲ ನಾನು ಅಲ್ಲಿಯರ ನಿಮ್ಮಗರ
ತಿಳದಾತು ಹಾದಿ ಮುಂದಿನದು.
ಧೈರ್ಯದ ಮಗಳು ಅಕ್ಕಮಹಾದೇವಿ ಧೈರ್ಯಗುಂದಿದ ತಂದೆ-ತಾಯಿಗಳನ್ನು ಸಂತೈಸುವ ಆಕೆಯ ರೀತಿಗೆ ಓದುಗರು ಆಶ್ಚರ್ಯ ಪಡಬೇಡು. ಜನಪದರ ನಿಲುವುಗಳಿಗೆ ಅಭಿಮಾನ ಪಡಬೇಕು. ಏಕೆಂದರೆ ಕವಿಗಳಿಗೂ ಅಸಾಧ್ಯವಾದುದನ್ನು ಸಾಧಿಸಿದ ತೋರುವ ಜನಪದರ ರೀತಿ ಆಶ್ಚರ್ಯ ಪಡುವಂತಹದು.
ನನ್ನ ಹಾದಿ ಮುಂದಿದೆ ಇಂತಹ ಭವಿಗಳ ಮನೆ ಅರಮನೆಯಾಗಿರಲಿ, ಮತ್ತೇನೂ ನನ್ನನ್ನು ತನ್ನತ್ತ ಎಳೆಯಲಾರವು. ಏಕೆಂದರೆ ನನ್ನೊಡೆಯ ಚನ್ನಮಲ್ಲಿಕಾರ್ಜುನ ಅರಮನೆಯಲ್ಲಿ ಇಲ್ಲ. ಗುರುಮನೆಯಲ್ಲಿದ್ದಾರೆ. ಆ ಗುರುಮನೆಗೆ ಮಗಳಾಗಿ ನಾನು ಹೋಗಿ ನನ್ನೊಡೆಯನನ್ನು ಕೂಡಬೇಕಾಗಿದೆ. ಮುಂದೆ ನೀವು ಅದನ್ನು ಅರಿಯುವಿರಿ ಎಂದು ಹೇಳುತ್ತಾ ನಡೆದಳು ಅಕ್ಕ ಭವಿ ಕೌಶಿಕನ ಅರಮನೆಗೆ.
ನಡೆಯುತ್ತಾ ಮಹಾದೇವಿ ಅರಮನೆಗೆ ಬಂದಾಳ
ಆಡಂಬರ ಇಲ್ಲ ಆಮಿಷ ಮೊದಲಿಲ್ಲ
ದೃಢಮನದಿಂದ ನಡದಾಳ.
ದೃಢ ಮನದಿಂದ ಅರಮನೆಗೆ ಬಂದಾಳ
ಮೂಢ ಕೌಶಿಕ ನಿಂತಾನ ಎದುರಿಗೆ ಮಾದೇವಿ
ಅಡಿ ಇಟ್ಟಾಳ ಶರಣಾರ್ಥಿ ಎನ್ನುತ್ತಾ.
‘ಶರಣಾರ್ಥಿ’ ಎನ್ನುತ್ತಾ ದೃಢ ಮನಸ್ಸಿನಿಂದ ಮಾದೇವಿ ಅರಮನೆಗೆ ಕಾಲಿಡುತ್ತಾಳೆ. ಎದುರಿಗೆ ದಾರಿ ನೋಡುತ್ತಾ ನಿಂತಿದ್ದ ಕೌಶಿಕನನ್ನು ಕಂಡು ಯಾವೊಂದು ಭಾವನೆ ತೋರಿಸದೆ ಒಳನಡೆದಳು.
ಆದರೆ ಅಲ್ಲಿಯೂ ಮಾದೇವಿಯ ಲಿಂಗಪೂಜೆಯು ದಿನಂಪ್ರತಿ ನಡೆಯಿತು. ಅರಮನೆಯ ಯಾವ ಭೋಗವು ಅವಳನ್ನು ಆಕರ್ಷಿಸಲಿಲ್ಲ. ತಾನಾಯಿತು ತನ್ನ ಲಿಂಗ ಪೂಜೆಯಾಯಿತು. ಅರಸನ ಕಡೆಗೂ ಲಕ್ಷವಿಲ್ಲದೆ ಮುಂದಿನ ದಿನಗಳಿಗಾಗಿ ಕಾಯುತ್ತಿದ್ದಳು ಅಕ್ಕ. ಒಂದು ದಿನ ಅಕ್ಕ
ಬಿಳಿದೊಂದು ತಾನುಟ್ಟು ಬಿಳಿ ಕುಪ್ಪಸ ತೊಟ್ಟು
ಬೆಳ್ಳನ ವಿಭೂತ ಹಣಿಗಿಟ್ಟು ಮಾದೇವಿ
ಕಳೆಯುಳ್ಳ ಲಿಂಗ ಪೂಜಿಸುತಾ.
ಕಳೆಯುಳ್ಳ ಲಿಂಗವು ಪೂಜಿಸುತಾ ಮಾದೇವಿ
ಮಾಳಿಗೆಯ ಮ್ಯಾಲ ಕುಂತಾಳ ಅದರೊಳು
ಅಕ್ಕಳಿಗಿ ಯಾವ ಖಬರಿಲ್ಲ.
ಒಂದೆಡೆ ಬೆಳದಿಂಗಳು, ಇನ್ನೊಂದೆಡೆ ಬಿಳಿದಾದ ಸೀರೆ ಉಟಿದ್ದಾಳೆ, ಹಣೆಯ ಮೇಲೆ ವಿಭೂತಿ ಇವು ಆ ತಾಯಿಯ ಆಧ್ಯಾತ್ಮಿಕ ನಿಲುವಿಗೆ ಸಾಕ್ಚಿಯಾಗಿವೆ. ಮಾಳಿಗೆಯು ಏರಿದ್ದಾಳೆ. ಶಾಂತವಾದ ವಾತಾವರಣದಲ್ಲಿ ತನ್ನೊಳು ತಾನು ಒಂದಾಗಿದ್ದಾಳೆ. ಕೌಶಿಕನು ಬಂದಿದ್ದಾನೆ. ಅಕ್ಕಳ ಭೌತಿಕರೂಪ ಅವನಿಗೆ ಹುಚ್ಚು ಹಿಡಿಸಿತು.
ಕೌಶಿಕ ಬಂದಾನ ಆರೂಪ ಕಂಡಾನ
ಆಶೆಯು ಹೆಚ್ಚು ಆಗ್ಯಾದ ಆರಾಜ
ಮರತಾನ ಕೊಟ್ಟ ಮಾತೆಲ್ಲ.
ಮಾತು ತಾ ಕೊಟ್ಟಾನ ಮಾತ್ಹಂಗ ನಡಿಲಿಲ್ಲ
ಮತ್ತುತಾ ಏರಿ ರಾಜಗ ಅಕ್ಕಳ
ಬೆಂಕಿಯ ಸೆರಗು ಹಿಡದಾನ.
“ಬೆಂಕಿಯ ಸೆರಗು” ಜನಪದರ ನುಡಿಗೆ ಎಂತಹ ಶಕ್ತಿಯಿದೆ ಎಂಬುದನ್ನು ಈ ಪದ ಪ್ರಯೋಗದಿಂದ ಅರಿಯಬಹುದು. ಶರಣರ ಉಟ್ಟ ಬಟ್ಟೆ, ಮೆಟ್ಟ ಆವುಗೆ ಇವುಗಳು ಸಮಾನ್ಯವಾದವುಗಳಲ್ಲ. ಅವುಗಳನ್ನು ಮುಟ್ಟಬೇಕಾದರೂ ಅವರೂ ಅದೇ ನಿಲವಿನೊಳು ಇರಬೇಕಾಗುತ್ತದೆ. ಅದನ್ನು ಜನಪದರು ತಮ್ಮ ತ್ರಿಪದಿಗಳ ಮುಖಾಂತರ ಅರಿಕೆ ಮಾಡಿ ಕೊಟ್ಟಿದ್ದಾರೆ. ಮಾತು ಕೊಟ್ಟು ಮರೆತು ತಾ ನಿಂತ ಕೌಶಿಕನಿಗೆ ಆತನಿಗೆ ಆ ಮಾತುಗಳು ಅಂದು ಅತೀ ಸಾಮಾನ್ಯ ಎನಿಸಿದ್ದವು. ಅವುಗಳಿಗೆ ಎಂತಹ ಶಕ್ತಿ ಇದೆಯೆಂಬ ಅರಿವು ಈಗ ಅವನಿಗೆ ಉಂಟಾಗಿದೆ. ಅಕ್ಕ ಉಟ್ಟ ಸೀರೆಯು ವಿಷಯ ವಾಸನೆಯಿಂದ ಉಟ್ಟಿದ್ದಲ್ಲ. ಅದು ಬೆಂಕಿಯ ಪ್ರತಿರೂಪ ಎಂಬುದರ ನೈಜತೆ ತಿಳಿದನು ಕೌಶಿಕ.
ಸೆರಗ್ಹಿಡಿದ ಹಸ್ತವು ಸುಟ್ಟುತಾ ಹೋಗ್ಯಾದ
ಚರ್ಯಾನ ರಾಜ ಹೌಹಾರಿ ಮಾದೇವಿ
ಹಾರಿತಾ ತಾ ನಿಂತು ನುಡಿತಾಳ.
ಎಮ್ಮೆಗೆ ಒಂದು ಚಿಂತಿ ಸಮಗಾರಗ ಅದರ ಚಿಂತಿ
ಕಾಮಿಯು ನಿನಗ ನಿನ್ನ ಚಿಂತಿ ಎನಗರ
ಎನ್ನೊಡೆಯನ ಚಿಂತಿ ಅನುಗಾಲ.
ಅಕ್ಕಳ ಸೆರಗ ಹಿಡಿದ ಕೂಡಲೆ ಬೆಂಕಿ ಹಿಡಿದಂತಾಯ್ತು ಕೌಶಿಕನಿಗೆ. ಉರಿ ಉರಿ ಎನ್ನುತ ಚೀರತೊಡಗಿದ ತನ್ನ ಲಿಂಗಪೂಜೆಯಲ್ಲಿ ಮೈಮರೆತ ಅಕ್ಕ ಎಚ್ಚರಗೊಂಡು ಎದ್ದು ನಿಲ್ಲುತ್ತಾಳೆ. ತಾನ್ಯಾರು? ತನ್ನ ಉದ್ದೇಶವೇನು ಎಂಬುದನ್ನು ಈಗ ತಿಳಿಸುತ್ತಾಳೆ ರಾಜ ಕೌಶಿಕನಿಗೆ. ಅಲ್ಲದೆ ರಾಜನಾದವನು ಹೇಗಿರಬೇಕು ಎಂಬುದನ್ನು ತಿಳಿಸುತ್ತಾಳೆ.
ದೇಶವು ಆಳ್ವರು ಸೋಸಿ ತಾ ನಡಿಬೇಕು
ಹುಸಿಮಾತು ಆಡದು ಬಿಡಬೇಕು ಬಳಗಿನ
ಅರಿಷಡ್ವರ್ಗವು ಸುಡಬೇಕು.
ಕಾಯವು ನೀ ಮೆಚ್ಚಿ ಕಾಯಕ ನೀ ಮರತಿ
ಸಾಯುವ ಮುಂದ ಏನಾದಿ ಸತ್ತಮ್ಯಾಲ
ಸಾಂಭನಿಗೆ ಉತ್ತರ ಕೊಡತೇನು?
ಅರುಬೇಕು ನಡೆಯಲ್ಲಿ ಅರುಬೇಕು ನುಡಿಯಲ್ಲಿ
ಮರೆತರ ಅರಸ ಹ್ಯಾಂಗಾದಿ ಎಲೇ ರಾಜ
ಅರುಯಿಟ್ಟು ನಡೆಸು ದೇಶವು.
ವಚನದ ಸಾಲುಗಳಂತೆ ಈ ತ್ರಿಪದಿಗಳು. ಒಂದೆಡೆ ಅಕ್ಕ ಆತನಿಗೆ ರಾಜಧರ್ಮ ತಿಳಿಸಿದ್ದರೆ, ಇನ್ನೊಂದೆಡೆ ಎಚ್ಚರಿಕೆಯ ಮಾತುಗಳು ಕೂಡಾ ಆಡುತ್ತಾಳೆ. ಅರಸತನ ಎನ್ನುವದು ಹುಚ್ಚಾಟವಲ್ಲ, ಹುಡುಗರಾಟವಲ್ಲ. ಇಡೀ ದೇಶ ಕುಸಿದು ಹೋಗುತ್ತದೆ. ಅಲ್ಲಿ ಧರ್ಮವಿರುವದಿಲ್ಲ. ಕರ್ಮ ಹೆಚ್ಚಾಗುತ್ತದೆ. ನ್ಯಾಯ ಬಿದ್ದು ಹೋಗುತ್ತದೆ. ಅನ್ಯಾಯ ಎದ್ದುನಿಲ್ಲುತ್ತದೆ. ತ್ಯಾಗ ನಿಂತರೆ ಭೋಗ ಓಡುತ್ತದೆ. ಇಂತಹ ದುರಾಡಳಿತದಲ್ಲಿ ಪ್ರಜೆಗಳು ಸುಖಿಗಳಾಗಬೇಕು ಹೇಗೆ? ಮುಂತಾದ ನುಡಿಗಳು ಅಕ್ಕ ಬಿಚ್ಚುತ್ತಾ ಹೋಗಿ
ಕಾಯದಾಗ ಏನದ ಬರೀರಕ್ತ ಮಾಂಸದ
ಸುಡುಸುಡು ದೇಹ ಎಲೇರಾಜ ನೆತ್ತರಕ
ಆಸೆಯು ಮಾಡಿ ಸೊಣಗಾದಿ.
ಇದು ಅಕ್ಕಳ ಪ್ರಖರ ಜ್ಞಾನ. ವಯದಲ್ಲಿ ಬಹಳ ಸಣ್ಣವಳಾಗಿರುವ ಅಕ್ಕ ಏರಿದ ನಿಲುವು ಎಂತಹದು ಎಂಬುದರ ಅರಿವು ನಮಗಾಗುತ್ತದೆ. ಕಾಯ ಏನು ಎಂಬುದನ್ನು ತಿಳಿದುಕೊಂಡಿದ್ದಾಳೆ. ಬರೀ ರಕ್ತ ಮಾಂಸಗಳಿಂದ ಈ ಕಾಯ ಬಿದ್ದು ಹೋಗುವಂತಹದು. ಸುಡುಸುಡು ಈ ಕಾಯ ಎನ್ನುತ್ತಾ.
ಉಟ್ಟಿದ್ದು ಕಳದಾಳ ಸಿಟ್ಟಿಲಿ ನಿಂತಾಳ
ಝಟ್ಟಂತ ಮುಂದ ಬಂದಾಳ ಅನತಾಳ
ನಿಟ್ಟಿಸಿ ನೋಡು ಈ ಕಾಯ.
ಅಕ್ಕ ಉಟ್ಟ ಸೀರೆ ತೊಟ್ಟ ಕುಪ್ಪಸ ಎಲ್ಲವು ಕಳೆದು ದಿಗಂಬರಿಯಾಗಿ ನಿಂತಿದ್ದಾಳೆ. ಬತ್ತಲೆಯಾಗಿ ತನ್ನ ಮುಂದೆ ನಿಂತ ಕೌಶಿಕನಿಗೆ ‘ನೋಡು ಈ ದೇಹ ಏನಿದೆ ಇದರಲ್ಲಿ’ ಎಂದು ಕೇಳುತ್ತಿರುವಷ್ಟರಲ್ಲಿ ಕೌಶಿಕನಿಗೆ ಏರಿದ ಕಾಮವು ಅಷ್ಟೇ ಜರ್ರಂತ ಇಳಿದಿದೆ.
ಮಾರುದ್ದ ಜಿಗದಾನ ಮಾರಾಜ ಹಿಂದಕ್ಕೆ
ಬರವಲ್ಲು ಮಾತು ಬಾಯಾಗ ಕಾಮವು
ಜರ್ರಂತ ಇಳಿದು ಹೋಗ್ಯಾದ.
ಆತನ ಕೈಯೊಳಗೆ ಹರಿದು ಹೋಗುವ ಸೀರೆ ಕುಪ್ಪಸಗಳನ್ನು ಕೊಟ್ಟು ಅಕ್ಕ,
ದಿಗಂಬರಿ ಆಗ್ಯಾಳ ದಿವ್ಯಾಂಬರ ತೊಟ್ಟಾಳ
ಭೋಗದ ಜಾಗ ತೊರದಾಳ ಮಾದೇವಿ
ಸಂಗನ ಹಾದಿ ಹಿಡದಾಳ.
ಕೌಶಿಕನ ಅರಮನೆ ಭೋಗದ ಜಾಗ. ಆ ಜಾಗವು ಆಕೆಗೆ ಮುಳ್ಳಿನಂತೆ ಚುಚ್ಚುತಿತ್ತು. ಅಂತೆಯೇ ಅದನ್ನು ತೊರೆಯಲು ಅಕ್ಕ ಹಾತೊರೆಯುತ್ತಿದ್ದಾಳೆ.
ಮಳ್ಹಂತ ರಾಜನ ಮುಳ್ಹಂತ ಜಾಗವು
ಚುಚ್ಯಾದ ಅಕ್ಕನ ಪಾದಕ್ಕ ಬಿಟ್ಟಾಳ
ಹೂವಿನ್ಹಾದಿ ಹಿಡಿದು ನಡದಾಳ.
ಅಕ್ಕ ಅರಮನೆಯಿಂದ ಹೊರ ಬಿದ್ದಿದ್ದಾಳೆ. ನೇರವಾಗಿ ದೀಕ್ಷಾ ಗುರುವಿನ ಆಶ್ರಮದ ಕಡೆ ಹೊರಟಿದ್ದಾಳೆ. ಊರಿಗೆ ಊರೇ ಬೆಚ್ಚಿ ಬಿದ್ದಿದೆ. ಕಾಳ್ಗಿಚ್ಚಿನಂತೆ ಹರಡಿದ ಸುದ್ದಿ ತಂದೆ ತಾಯಿ ಕಿವಿಗೂ ಬಿದ್ದಿದೆ. ಮನೆಕಡೆ ಬರುತ್ತಾಳೆಂಬ ಆಶೆಯಲ್ಲಿ ತಂದೆ-ತಾಯಿಗಳು ಮಠದ ಕಡೆಗೆ ಮಗಳು ಹೋಗಿದ್ದಾಳೆಂಬ ಸುದ್ದಿ ತಿಳಿದು ಅವರು ಮಠದ ಕಡೆಗೆ ಬಂದಿದ್ದಾರೆ. ಮಠದ ಅಂಗಳದಲ್ಲಿ ದಿವ್ಯರೂಪಿಯಾಗಿ ನಿಂತಿದ್ದಾಳೆ. ಅದೇ ಆಗ ಪೂಜೆ ಮುಗಿಸಿ ಪ್ರಸಾದ ಪಡೆಯುತ್ತಿರುವ ಗುರುಗಳು ಮಹಾದೇವಿ ಅಂಗಳದಲ್ಲಿ ನಿಂತಿದ್ದಾಳೆಂಬುದನ್ನು ಅರಿತು ಪ್ರಸಾದ ಬಿಟ್ಟು ಹೊರಗಡೆ ಬರುತ್ತಾರೆ. ನೋಡುತ್ತಲೆ ದಿಗ್ಭ್ರಮೆಗೊಳ್ಳುತ್ತಾರೆ. ಅವರಿಗೂ ತಿಳಿದಿರಲಿಲ್ಲ ಹೀಗೆ ಆಗುತ್ತದೆಯೆಂಬುದು. ಮೈಮೇಲೆ ಬಟ್ಟೆಯಿಲ್ಲ, ಆದರೆ ಮೈಮುಚಿದ ಕೂದಲುಗಳು ಅಕ್ಕನ ಇಡೀ ದೇಹ ಮುತ್ತಿಕೊಂಡಿವೆ. ಅಂಗಳಕ್ಕೆ ಬಂದ ಗುರುಗಳು ಆಕೆಯ ಕೈ ಹಿಡಿದು ಮೇಲಕ್ಕೆ ಒಯ್ಯುತ್ತಾರೆ. ಅಲ್ಲಿಯೇ ಇದ್ದ ತಂದೆ-ತಾಯಿ ಊರಿನ ಜನರೆಲ್ಲರೂ ಕಕ್ಕಾಬಿಕ್ಕಿಗೊಂಡು ನೋಡುತ್ತಿದ್ದಾರೆ. ʼಈ ಹೆಣ್ಣು ಸಾಮಾನ್ಯಳಲ್ಲʼ ಎಂದು ಎಲ್ಲರೂ ಕೈ ಜೋಡಿಸಿ ನಿಂತಿದ್ದಾರೆ.
ಹಡದೋರು ಬಂದಾರ ಪಡದೋರು ಬಂದಾರ
ಉಡುತಡಿ ಊರೆ ಬಂದಾದ ಅನತಾರ
ನಡಿತಂಗಿ ಹುಟ್ಟಿದ ಮನಿಗರ.
ತವರಿಗೆ ನೀನಡಿಯ ದಟ್ಟಿಯ ಉಡಬಾರ
ಅವಸರ ಯಾಕ ನಿನಗರ ಮಾದೇವಿ
ಶಿವಹಾನ ನೋಡು ತೆಲಿಮ್ಯಾಲ.
ತಾಳುತ್ತಿಲ್ಲ ಅಕ್ಕನ ಸ್ಥಿತಿ ಹಡದವರಿಗೆ. ಊರಿನ ಮಗಳಾದ ಅಕ್ಕಳ ಪರಿಸ್ಥಿತಿ ಊರ ಜನರಿಗೂ ಕಳವಳವನ್ನುಂಟುಮಾಡಿತು ಸಹಜತಾನೆ! ಅಕ್ಕ ಅವರ ಮಗಳಲ್ಲವೇ? ಮಗಳ ದು:ಖ ಅವರ ದು:ಖವಲ್ಲವೇ? ಆ ದು:ಖ ಅಕ್ಕನೊಳಗಿಲ್ಲವೆಂಬುದು ಹೆತ್ತ ಕರುಳಿಗೆ ಗೊತ್ತಾಗುತ್ತಿಲ್ಲ. ರಾಜನ ಯಾವ ದರ್ಪ, ಆಕೆಯ ಮೇಲೆ ಈಗ ನಡೆಯುದಿಲ್ಲವೆಂಬುದು ಅವರಿಗೆ ತಿಳಿದಿಲ್ಲ. ಎಲ್ಲಿ ರಾಜ ಮತ್ತು ಆತನ ಭಟರು ಬಂದು ಆಕೆಗೆ ಹಿಂಸೆ ಕೊಡುತ್ತಾರೋ ಎಂಬ ಚಿಂತೆ ಅವರಿಗೆ. ಆದರೆ ಅಕ್ಕ ನಿರ್ಭಯಿ ಯಾವ ಲೌಕಿಕರು ಆಕೆಯನ್ನು ಏನು ಮಾಡಲಾರರು. ಅಂತೆಯೆ ಅಕ್ಕ ತನ್ನ ಮನಸ್ಸಿನ ವಿಚಾರಗಳನ್ನು ಗುರುವಿನ ಸಾಕ್ಷಿಯಾಗಿ ಹಡೆದವರಾದಿಯಾಗಿ ಎಲ್ಲರಿಗೂ ತಿಳಿಸುತ್ತಾಳೆ.
ತವರದ ಕಲ್ಯಾಣ ಅಣ್ಣಹನ ಬಸವಣ್ಣ
ಅವಕೊಟ್ರ ಸೀರೆ ಉಡಬೇಕು ಇಲ್ಲಂದ್ರ
ಕೊನೆತನ ಹೀಂಗ ಇರತ್ತಿನಿ.
ಮಗಳ ಮಾತು ಅವರಿಗೆ ತಿಳಿಯುತ್ತಿಲ್ಲ. ಗುರುಗಳ ಮುಖ ನೋಡುತ್ತಿದ್ದಾರೆ. ಆಗ ಗುರುಗಳು ಅಕ್ಕಳ ಬದುಕಿನ ಗುರಿ ಎಲ್ಲವನ್ನು ಅಲ್ಲಿದ್ದವರಿಗೆಲ್ಲಾ ಬಿಚ್ಚಿ ಹೇಳುತ್ತಾರೆ. ನಾನು ನೀವುಗಳಲ್ಲ ಸಾಕ್ಷಾತ್ ದೇವರು ಹೇಳಿದ್ದರೂ ಆಕೆ ಕೇಳುವದಿಲ. ಅಸಾಮಾನ್ಯ ವ್ಯಕ್ತಿತ್ವದ ಈ ತಾಯಿ ಮುಂದೆ ನಾರಿ ಬಳಗದ ಗುರು ಆಗುತ್ತಾಳೆ, ನಿಲ್ಲಿರಿ. ಹೋಗಲಿ ಆಕೆ ಮುಂದಕ್ಕೆ” ಎಂದು ಅಜ್ಞಾಪಿಸುತ್ತಾರೆ. ತಾಯಿ ತಂದೆಯರ ಕರುಳು ಕಿವಿಚಿದಂತಾಗಿದೆ. ‘ಸಣ್ಣ ವಯದವಳು ಹೀಗೆ ಹೇಗೆ ಹೋಗುತ್ತಾಳೆ ಗುರುಗಳೆ’ ಎನ್ನುತ್ತಾರೆ. ಆ ತಾಯಿಯನ್ನೆ ಗುರುಗಳು ಸಂತೈಸುತ್ತಾರೆ. ವಿಶ್ವದೊಡೆಯ ಆ ತಾಯಿಯ ಬೆನ್ನಿನ ಹಿಂದೆ ಇದ್ದಾನೆ. ಆಕೆಯನ್ನು ತಡೆಯ ಬೇಡವ್ವಾ ಎಂದು ಬಿನ್ನವಿಸಿಸಿಕೊಳ್ಳುತ್ತಾರೆ. ಅಕ್ಕ ತಂದೆ-ತಾಯಿ-ಗುರು-ಹಿರಿಯರೆಲ್ಲರಿಗೂ ಸಾಷ್ಠಾಗ ಹಾಕುತ್ತಾಳೆ. ಅವರೆಲ್ಲರ ಹರಕೆಯನ್ನು ಪಡೆದು.
ಬತ್ತಲೆ ಆಗ್ಯಾಳ ಕೂದಲು ಬಿಟ್ಟಾಳ
ಸತ್ಯದ ಹಾದಿ ಹಿಡದಾಳ ಕಲ್ಯಾಣದ
ಭೂಮ್ಯಾಗ ಕಾಣಲು ನಡದಾಳ.
ಅಂಗದಾಶೆ ಬಿಟ್ಟಾಳ ಲಿಂಗದಾಶೆ ಹಿಡದಾಳ
ಸಂಗವು ಮಾಡಲು ನಡದಾಳ ಅಕ್ಕನಾ
ಗುಂಗೆಲ್ಲ ಕಲ್ಯಾಣ ಊರಾಗ.
ಅಕ್ಕಳ ಗುಂಗು ಕಲ್ಯಾಣದಲ್ಲಿ ಕಲ್ಯಾಣದ ಹಾದಿ ಗೊತ್ತಾಗುತ್ತಿಲ್ಲ. ಆದರೂ ಬಸವಣ್ಣನವರ ನಾಮ ಸ್ಮರಿಸುತ್ತಾ ಕಾಲುಗಳು ಯಾವಕಡೆಗೆ ನಡೆದಿಯೋ ಅಕ್ಕನ ಅಂಗ ನಡೆಯಿತು ಆ ಕಡೆ. ಜಗದ ಕಣ್ಣಿಗೆ ಹುಚ್ಚಳ ಹಾಗೆ ಕಾಣುತ್ತಿದ್ದಾಳೆ.
ಕೂಳಿಲ್ಲ ಹೊಟ್ಟಿಗೆ ಎಣ್ಣಿಲ್ಲ ನೆತ್ತಿಗೆ
ಮೈಮ್ಯಾಲ ಇಲ್ಲ ಅರವಿಯು ಮಾದೇವಿಯ
ಖಳಿಯೆಂಬುದು ಹುಚ್ರ್ಹಾಂಗ.
ಆದರೂ
ಹುಚ್ಚಿಹಾಂಗ ಕಂಡಾಳ ಕಿಚ್ಚಿಲಿ ಹೊಂಟಾಳ
ಚುಚ್ಚಿ ತಾ ಆಡ್ಯಾರ ಕಂಡವರು ಮಾದೇವಿ
ಮೆಚ್ಚಿ ತಾ ಹೊಂಟಾಳ ಶಿವನಿಗೆ.
ಜಗಕ್ಕೆ ಹುಚ್ರ್ಹಾಂಗೆ ಕಂಡವರ ಮುಂದೆ ಕಿಚ್ಚಿನಲ್ಲಿ ಹೊರಟಿದ್ದಾಳೆ ಅಕ್ಕ. ಹುಚ್ಚು ಜಗತ್ತು ಕಂಡ ಹಾಂಗೆ ನುಡಿದಿದ್ದರೂ ಆ ಕಡೆ ಲಕ್ಷವಹಿಸದೆ, ಶಿವನಿಗೆ ಮೆಚ್ಚಿ ಹೊರಟಿದ್ದಾಳೆ. ದಾರಿಯಲ್ಲಿ ಕಾಮುಕರು ಕಾಡುತ್ತಿದ್ದಾರೆ. ಅದ್ಯಾವುದನ್ನು ಲೆಕ್ಕಿಸದೆ ಕಲ್ಯಾಣದ ಜಪಗೈಯುತ್ತಾ, ಬಸವನ ನಾಮ ಸ್ಮರಿಸುತ್ತಾ ಮುಂದೆ ಮುಂದೆ ಬರುತ್ತಿದ್ದಾಳೆ.
ಕಲ್ಯಾಣದ ಹೆಬ್ಬಾಗಿಲಿಗೆ ಬಂದಿದ್ದಾಳೆ ಅದಕ್ಕೆ ಕೈ ಮುಗಿಯುತ್ತಿದ್ದಾಳೆ. ಮನಸ್ಸು ತುಂಬಿ ಬಂದಿದೆ. ‘ಅಯ್ಯಾ ನಿಮ್ಮ ಶರಣರು ಮೆಟ್ಟಿದ ಧರೆ ಪಾವನವಯ್ಯಾ’ ಎನ್ನುತ್ತಾ ಪಾವನ ಭೂಮಿ ಮೇಲೆ ಪವಿತ್ರವಾದ ಪಾವನ ಕಾಲಿಟ್ಟಿದ್ದಾಳೆ. ಅಲ್ಲಿ ಇದ್ದ ಕಿನ್ನರಿ ಬೊಮ್ಮಣ್ಣ ಶರಣರನ್ನು ಕಂಡು ಕೈಮುಗಿಯುತ್ತಾಳೆ.
ಕಿನ್ನರಿ ಬೊಮ್ಮಣ್ಣನ ಚಿಕ್ಕತಂಗಿ ಮಾದೇವಿ
ಅಣ್ಣನ ಕೈಯು ಹಿಡಕೊಂಡು ಹೊಂಟಾಳ
ಅಣ್ಣ ಬಸವನ ಅನುಭವ ಗುಡಿಗೆ.
ಅನುಭವ ಮಂಟಪದೂಳಗೆ ಬಸವಾದಿ ಶರಣರು-ಶರಣೆಯರು ಕುಳಿತಿದ್ದಾರೆ. ಎದುರಿಗೆ ಸಿಂಹಾಸನದಲ್ಲಿ ಅಲ್ಲಮ ಪ್ರಭುಗಳು ಗಂಭೀರರಾಗಿ ಕುಳಿತಿದ್ದಾರೆ. ಆಧ್ಯಾತ್ಮಿಕ ಬಾಗಿಲಿಗೆ ಬಂದ ಮಹಾದೇವಿ ನೊಡಿದ ಕೂಡಲೇ ಬಸವಾದಿ ಪ್ರಮಥರು ಎದ್ದು ನಿಲ್ಲುತ್ತಾ ಅಕ್ಕಳಿಗೆ ಕೈಮುಗಿಯುತ್ತಾರೆ. ಆದರೆ ಪ್ರಭುದೇವರು ಮಾತ್ರ ಏನೊಂದು ನುಡಿಯುತ್ತಿಲ್ಲ.
ಅಲ್ಲಮದೇವರು ಕುಂತಾರ ಗಂಭೀರರು
ಬಲ್ಲಂತ ಶರಣರ ನುಡುಕುಂತು ಹೇಳ್ಯಾರ
ನಿಲ್ಲವ್ವ ತಾಯಿ ನೀನಲ್ಲಿ.
ಎಂದಾಗ ಎಲ್ಲರೂ ಚಕಿತರಾಗುತ್ತಾರೆ. ಅಕ್ಕಳ ವ್ಯಕ್ತಿತ್ವ ಎಂತಹದೆಂಬುದನ್ನು ಜಗತ್ತಿಗೆ ತೋರಿಸಬೇಕಾಗಿದೆ ಪ್ರಭುದೇವರಿಗೆ. ಅದಕ್ಕಾಗಿ ಅಕ್ಕಳನ್ನು ಪ್ರಶ್ನಿಸಲು ಮುಂದಾಗುತ್ತಾರೆ.
ಗಂಡನ ಹೆಸರು ಮೊದಲಿಗೆ ಹೇಳವ್ವಾ
ಹೇಳಿದರೆ ಬಂದು ಕೂಡವ್ವ ಮಾದೇವಿ
ಇಲ್ಲಂದರ ವಾಪಸು ತಿರುಗವ್ವಾ.
ಎಂದು ಮೊದಲಿನ ಪ್ರಶ್ನೆ ಪ್ರಾರಂಭಿಸಿಯೇ ಬಿಟ್ಟರು ಪ್ರಭುಗಳು. ಏಕೆಂದರೆ ಎಲ್ಲೆಡೆ ಇದೇ ಚರ್ಚೆಯಿದೆ ಗಂಡನನ್ನು ಬಿಟ್ಟು ಹೊರಟಿದ್ದಾಳೆಂದು. ಅವಳ ಬಾಯಿಂದಲೇ ಉತ್ತರ ಕೊಡಿಸಬೇಕಾಗಿದೆ ಅವರಿಗೆ.
ಅಂಜಿಲ್ಲ ಮಾದೇವಿ ಅಳುಕಿಲ್ಲ ಮಾದೇವಿ
ನಂಜುಂಡ ನನ್ನಗಂಡ ಎನುತಾಳ ಪಡಿಲಾಕ
ಹೆಜ್ಜಿನಾ ಇಟ್ಟಿನಿ ಇಲ್ಲಿಗೆ.
ಚನ್ನಮಲ್ಲಿಕಾರ್ಜುನನೇ ಗಂಡ ಎನಗೆ, ಉಳಿದವರುನನಗ ಸಂಬಂಧವಿಲ್ಲ ಪ್ರಭುದೇವ ಎನ್ನುತ್ತ ಬಹಳದಿನದ ತನ್ನ ಮನದಿಂಗಿತವನ್ನು ಅಕ್ಕ ಬಲ್ಲವರ ಮಧ್ಯೆ ನಿಂತುಕೊಂಡು ಬಹಿರಂಗ ಪಡಿಸಿದ್ದಾಳೆ. ಪರಶಿವನೇ ಗಂಡ ಆಗಿರುವಾಗ ಲೌಕಿಕ ಪುರುಷರೊಂದಿಗೆ ಯಾವ ಸಂಬಂಧವಿಲ್ಲವೆಂದು ಸ್ಪಷ್ಟವಾಗಿ ನಿರೂಪಿಸುತ್ತಾಳೆ. ಅಂತಹ ಗಂಡನನ್ನು ಒಲಿಸಿಕೊಳ್ಳುವ ಪರಿಯಾವುದು ಎಂಬುದನ್ನು ಅರಿಯುವದಕ್ಕಾಗಿ ನಿಮ್ಮಂತಹ ಅನುಭಾವಿಗಳ ತಾಣಕ್ಕೆ ಬಂದಿದ್ದೇನೆ. ಇಲ್ಲಿ ನನ್ನನ್ಯಾರು ಕಾಮ ದೃಷ್ಟಿಯಿಂದ ನೋಡುವವರಿಲ್ಲ. ಪ್ರೇಮದ ಸ್ವರೂಪಿಗಳಾಗಿರುವ ತಮ್ಮ ಮಡಿಲಿನಲ್ಲಿ ನಿರಾಳವಾಗಿದ್ದು ಬದುಕಬಲ್ಲೆ ಗುರುವೆ ಎಂಬುತ್ತರ ಕೊಡುತ್ತಾಳೆ ಅಕ್ಕ ಆದರೂ ಪ್ರಭುದೇವರು ಮುಂದುವರೆಯುತ್ತಾರೆ.
ಕಾಯದ ಮೇಲಿನ ಮೋಹವು ಬಿಟ್ಟಿಲ್ಲ
ಕಾಯವು ಮುಚ್ಚಿದಿ ಕರಿಕೇಶ ದೊಳಗರ
ಮಾಯವು ಹೋಗಿಲ್ಲ ಒಳಗಿಂದು.
ಮಾಯವು ಹೋಗಿಲ್ಲ ಒಳಗಿಂದು ಮಾದೇವಿ
ಮಾಸಿಲ್ಲ ನಾನು ನನ್ನದೆಂದು ಈಗರ
ನ್ಯಾಯದ ಉತ್ತರ ನೀಕೊಡು.
ಪರಶಿವನೇ ತನ್ನ ಗಂಡ ಎಂದು ಹೇಳಿದ್ದರೂ ಪ್ರಭುದೇವ ಕರಿಕೇಶದಿಂದ ಮುಚ್ಚಿಕೊಂಡು ನಿನಗೆ ಈ ಕಾಯದ ಪ್ರೇಮ ಅಳಿಸಿ ಹೋಗಿಲ್ಲ. ನಾನು ನನ್ನದೆಂಬ ಭಾವನೆ ನಿನ್ನೊಳಗಿಂದ ಇನ್ನು ಮಾಸಿಲ್ಲ. ಇದು ನ್ಯಾಯದ ಪೀಠ ಈ ಪೀಠದ ಎದುರಿಗಿ ನಿಂತು ನ್ಯಾಯದ ಉತ್ತರಕೊಡು ಎನ್ನುತ್ತಾರೆ.
ಕಾಯದ ಮದವಿಲ್ಲ ಕಾಯದ ಮೋಹಿಲ್ಲ
ಮಾಯಾ ಮಮಕಾರ ಸುಟ್ಟಿನಿ ಪ್ರಭುದೇವ
ನ್ಯಾಯವು ಕೇಳಾಕ ಬಂದೀನಿ.
ಕಾಯಕ ಮೇಲಿನ ಮೋಹಕ ಮುಚ್ಚಿಲ್ಲ
ಕಾಯ ವಿಕಾರಕ ಮುಚ್ಚಿನಿ ನಿಮ್ಮಂತ
ನ್ಯಾಯದ ಪುರುಷಕ ಹಾನಿಯೆಂದು
ನ್ಯಾಯದ ಪುರುಷಗ ಹಾನಿಯು ಇದುಯೆಂದು
ಕಾಯವು ಮುಚ್ಚಿನಿ ಕೇಶದಿಂದ ಪ್ರಭುದೇವ
ನ್ಯಾಯದ ಉತ್ತರ ಕೊಟ್ಟಿನಿ’
ಕಾಯದ ಭ್ರಾಂತಿ ಕಳೆದುಕೊಂಡಿಲ್ಲ ನೀನಿನ್ನು ಎಂದಾಗ ಕಾಯದ ವಿವರಣೆ ಕೊಟ್ಟು ನ್ಯಾಯದ ಉತ್ತರ ಕೊಡುತ್ತಾಳೆ ಅಕ್ಕ. ಮಾಯ, ಮೋಹ, ಮದ, ಮತ್ಸರ ಸುಟ್ಟಿರುವೆನೆಂದೇ ಉಟ್ಟಸೀರೆ ಕಳಚಿ ಬಂದಿದ್ದೇನೆ. ಈ ಕಾಯ ಎಷ್ಟು ಸುಂದರವಾಗಿದೆಯೋ ಒಳಗೆ ಅಷ್ಟೆ ವಿಕಾರಗೊಂಡಿದೆ. ಈ ವಿಕಾರತೆಗಾಗಿಯೇ ಹೆಣ್ಣನ್ನು ಕಾಮದ ದೃಷ್ಠಿಯಿಂದ ನೋಡುತ್ತಿದ್ದಾರೆ. ಈ ಕಾಯ ವಿಕಾರ ಎಂತ್ಹೆಂತವರ ಮನಸ್ಸು ಕೆಡಿಸಿದೆ.ನಿಮ್ಮಂತಹ ನ್ಯಾಯವಂತರೂ ಇದರಿಂದ ಬೇಸರಿಸಿಕೊಳ್ಳಬಾರದೆಂಬ ಭಾವನೆಯಿಂದ ಕೂದಲನ್ನು ಮುಚ್ಚಿದೆ ಪ್ರಭುದೇವ ಎಂದು ಉತ್ತರ ಕೊಡುತ್ತಾಳೆ. ಪ್ರಭುದೇವರ ನುಡಿಗೊಂದು ಅಕ್ಕ ಉತ್ತರ ಕೊಟ್ಟಿದ್ದಾಳೆ. ಬಸವಾದಿ ಶರಣರೆಲ್ಲರಿಗೂ ಅಕ್ಕಳ ಮಾತುಗಳಿಂದ ಧೈರ್ಯ ಬಂದಿದೆ. ಪ್ರಭುದೇವರು ಸಂತುಷ್ಟಗೊಂಡಿದ್ದಾರೆ.
ಕೆಳಗರ ಬಂದಾರ ಕೈಮುಗಿದು ನಿಂತಾರ
ಹಿಗ್ಗಿಲಿ ಮಾತು ಆಡ್ಯಾರ ಪ್ರಭುದೇವ
ಇಲ್ಲವ್ವ ನೀನು ಸಣ್ಣಕ್ಕಿ.
ಇಲ್ಲವ್ವ ಮಾದೇವಿ ಸಣ್ಣಕ್ಕಿ ನೀನರ
ಬಲ್ಲಂತ ಶರಣೆ ನೀನವ್ವ ಮಾದೇವಿ
ಎಲ್ಲರಿಗೂ ಅಕ್ಕ ನೀನವ್ವ
ಎಂದು ಸ್ವತಃ ಪ್ರಭುದೇವರು ನುಡಿಯುತ್ತ ಕೆಳಗೆ ಬಂದು ಶರಣಾರ್ಥಿ ಮಾದೇವಿ ಸಣ್ಣವಳು ನೀನಲ್ಲವ್ವ ಎಲ್ಲರಿಗೂ ಅಕ್ಕ ನೀನು. ಜ್ಞಾನದಲ್ಲಿ ಅನುಭವದಲ್ಲಿ ನೀನು ಬಹಳ ದೊಡ್ಡವಳು ತಾಯಿ ಎಂದು ನಡಿಯುತ್ತಾರೆ. ಪ್ರಭುದೇವರ ಮಾತು ಮುಗಿಯುವಷ್ಟರಲ್ಲಿಯೇ ಎಲ್ಲರೂ ಕೈಮುಗಿಯುತ್ತಾರೆ.
ಹಿರಿಹರಿ ಹಿಗ್ಯಾರ ಕುಂತೆಲ್ಲ ಶರಣರು
ಕರಹಿಡಿದು ಒಳಗ ತಂದಾರ ಅಕ್ಕಳಿಗಿ
ಉಪಚಾರ ಮಾಡಿ ಮಗಳ್ಹಾಂಗ.
ಮಗಳಾದಳು ಅಕ್ಕ ಎಲ್ಲ ಶರಣರಿಗೆ. ಎಲ್ಲರೂ ಆ ದಿವ್ಯರೂಪದ ಅಂತರಂಗ ಬಹಿರಂಗಕ್ಕೆ ಮಾರುಹೋದವರೆ. ಅಕ್ಕಳ ನಡೆ-ನುಡಿ ಅನುಪಮ.
ಅಕ್ಕನ ನಡೆಚಂದ ಅಕ್ಕಳ ನುಡಿಚಂದ
ಅಕ್ಕನ ಜ್ಞಾನ ಬಲು ಚಂದ ಜಗದಲ್ಲಿ
ಅಕ್ಕಳ ಹೆಸರು ಮಾಚೆಂದ.
ಅಂತಹ ಅಕ್ಕಳಿಗೆ ಮಗಳೆಂದು, ತಾಯಿಯೆಂದು, ಅಕ್ಕಳೆಂದು ಗೌರವಿಸುವ ಶರಣರ ಬಳಗದೊಂದಿಗೆ ಅಕ್ಕ ಕಲ್ಯಾಣದಲ್ಲಿ ಪರಮತೆಯನ್ನು ಸಾಧಿಸಿಕೊಂಡಳು.ಮುಂದಿನ ದಾರಿಯನ್ನು ಸ್ಪಷ್ಟವಾಗಿ ಅರಿತಳು. ಬಸವಣ್ಣನವರ ಭಕ್ತಿ, ಚನ್ನಬಸವಣ್ಣನವರ ಜ್ಞಾನ, ಪ್ರಭುದೇವರ ತ್ಯಾಗ ತತ್ವಗಳನ್ನು ಅಕ್ಕಳ ಜೀವನದಲ್ಲಿ ಹಾಸು ಹೊಕ್ಕಾಗಿದ್ದವು. ಅಂತೆಯೆ ಭಕ್ತಿ, ಜ್ಞಾನ, ತ್ಯಾಗದಿಂದ ಮುಪ್ಪುರಿಗೊಂಡಿದ್ದಳು. ಕಲ್ಯಾಣದಲ್ಲಿ ಅಕ್ಕ ಏರಿದ ನೀಲವನ್ನು ಗುರುತಿಸಿ ಪ್ರಭುದೇವರು ಕದಳಿಗೆ ಹೋಗಲು ತಿಳಿಸುತ್ತಾರೆ. ಅಕ್ಕಳಿಗೆ.
ಕದಳಿಗೆ ಹೋಗೆಂದು ನುಡಿಯಲು ಪ್ರಭುದೇವ
ಮಾದೇವಿ ಒಪ್ಪಿ ಹಿಗ್ಗಿಲಿ ತನ್ನೊಡೆಯ
ಚನ್ನನ ಕಾಣಲು ಮುಂದಾಗಿ.
ತನ್ನ ಮನದೊಡೆಯನನ್ನು ಕಂಡು ಕೂಡಲು ಅಕ್ಕ ಕದಳಿಗೆ ಹೋಗಲೇಬೇಕು ಎಂಬ ಪ್ರಭುದೇವರ ಮಾತಿಗೆ ಅಕ್ಕ ಹರುಷದಿಂದ ಒಪ್ಪಿಕೊಂಡಳು. ಹೊರಟೇ ಬಿಟ್ಟಳು. ಆದರೆ ಬಸವಣ್ಣನವರ ಮಾನಸ ಮಗಳಾದ ಅಕ್ಕಳನ್ನು ಬಿಟ್ಟು ಹೋಗುವದು ಅವರಿಗೆ ಅತೀವ ದುಃಖವನ್ನುಂಟು ಮಾಡುತ್ತಿದೆ. ಆದರೂ ಪ್ರಭುದೇವರ ಮಾತು ಮಿರುವಂತಿಲ್ಲ. ಅಕ್ಕಳ ದಿನ ನಿಗದಿಯಾಯಿತು. ಆದಿನ,
ಬಲಗೈ ಬಸವಣ್ಣ ಎಡಗೈ ನೀಲಮ್ಮ
ಮಹಾಮನಿಯೊಳಗಿಂದ ತಂದಾರ ಇಬ್ಬರು
ಶರಣರ ಮುಂದ ನಿಲ್ಲಿಸ್ಯಾರ.
ಬಸವಗ ನಮಿಸ್ಯಾಳ ಪ್ರಭುವಿಗಿ ನಮಿಸ್ಯಾಳ
ಬಸವನ ಗಣಕ ನಮಿಸ್ಯಾಳ ಮಾದೇವಿ
ಬಸವೇಶ ಎನುತಾ ಕೈಮುಗಿದು.
ನೀಲಮ್ಮಗ ನಮಿಸ್ಯಾಳ ಗಂಗಮ್ಮಗ ನಮಿಸ್ಯಾಳ
ನೀಲಮ್ಮನ ಬಳಗಕ್ಕೆ ನಮಿಸ್ಯಾಳ ಮಾದೇವಿ
ಎಲ್ಲರಿಗೂ ಕರವ ಮುಗದಾಳ.
ಇಡೀ ಬಸವ ಬಳಗವೇ ಮಹಾಮನೆಯಲ್ಲಿ ಕೂಡಿದೆ ಎಲ್ಲರ ಮನಸ್ಸಿನಲ್ಲಿ ತಳಮಳ ದುಃಖ ತಮ್ಮಲ್ಲರ ಮಧ್ಯೆ ಉಳಿದು ಎಲ್ಲರ ಬಾಯಲ್ಲಿರುವ ಅಕ್ಕ ತಮ್ಮೆಲ್ಲರನ್ನು ಬಿಟ್ಟು ಹೋಗುತ್ತಿರುವದು ಅವರಿಗೆ ನೋವನ್ನುಂಟು ಮಾಡಿದೆ. ಮಗಳಿಗೆ ಗಂಡನ ಮನೆಗೆ ಕಳುಹಿಸುವ ದೃಶ್ಯ ಅಲ್ಲಿ ನಿರ್ಮಾಣವಾಗಿದೆ. ಎಷ್ಟೆ ದುಃಖವಿದ್ದರೂ ಮಗಳಿಗೆ ಕಳುಹಿಸಬೇಕೆಲ್ಲವೆ? ಇಲ್ಲಿ ಸಹ ಅಕ್ಕಳಿಗೆ ಚನ್ನಮಲ್ಲಿಕಾರ್ಜುನ ಮನೆಗೆ ಕಳುಹಿಸಲು ಸಮಸ್ತ ಶರಣರು ನೆರೆದಿದ್ದಾರೆ. ಉಡುತಡಿಯಂದ ಕಲ್ಯಾಣಕ್ಕೆ ಬರುವಾಗ ದಿಗಂಬರಿಯಾಗಿ ಬಂದ ಅಕ್ಕ ಇಂದು ತವರು ಮನೆಯ ತನ್ನ ತಂದೆ ಬಸವಣ್ಣನವರು ಉಡಿಸಿದ ಬಿಳಿಸೀರೆ ಉಟ್ಟಿದ್ದಾಳೆ, ಕೂದಲು ಹಾಗೆ ಬಿಟ್ಟಿದ್ದಾಳೆ. ಹಣೆಯ ಮೇಲೆ ವಿಭೂತಿ ಕೊರಳಲ್ಲಿ ಲಿಂಗ, ರುದ್ರಾಕ್ಷಿ. ನೋಡಿದರೆ ಆ ಸಾತ್ವಿಕ ಕಳೆಗೆ ಇನ್ನೊಮ್ಮೆ ನೋಡಬೇಕು ಎನ್ನುವಷ್ಟು ಸೌಂದರ್ಯ.
ಅಕ್ಕ ತಾ ಉಟ್ಟಿದ ಬಿಳಿಸೀರೆ ತುಂಬೆಲ್ಲ
ಷಟ್ಸ್ಥಲ ಲಿಂಗ ಹೊಳದಾವ ಅಕ್ಕಳ
ಸೆರಗಿನ ಮ್ಯಾಲ ಬಸವಣ್ಣ.
ಅಷ್ಟಾವರಣೆಯಾದ ಅಕ್ಕ ಲಿಂಗಾನುಭೋಗಿಯಾದ ಅಕ್ಕಳ ಶರೀರದ ತುಂಬೆಲ್ಲಾ ಜನಪದರು ಅಷ್ಟಾವರಣ ಷಟ್ಸ್ಥಲಗಳನ್ನೆ ಗುರುತಿಸುತ್ತಾರೆ. ಆಕೆಯ ಸೆರಗು ಅರ್ಥಾತ ಶಿರದ ಮೇಲೆ ಬಸವಣ್ಣನವರ ಆಶೀರ್ವಾದ.
ಮಗಳಾ ಮಾದೇವಿಗಿ ಮದಿಮಾಡಿ ಶರಣರು
ಚನ್ನನ ಮನಿಗಿ ಖಳುವ್ಯಾರ ಎಲ್ಲರೂ
ಖಿನ್ನಾಗಿ ನಿಂತು ಹರಸ್ಯಾರ
ಕಣ್ಣಾಗಿನ ನೀರದು ಬಳಬಳ ಹರದಾವ
ಗುಣವಂತಿ ಮಗಳ ಖಳುವಲು ಶರಣರು
ಸಣ್ಣಾಗಿ ಒಳಗ ದುಃಖಿಸಿ.
ಕರುಣರಸದ ಘಟ್ಟವಿದು. ಜನಪದರ ಅದ್ಭುತ ಕಲ್ಪನೆ! ಶರಣರ ಸಂಬಂಧಗಳು ಎಷ್ಟುಗಟ್ಟಿಯಾಗಿದ್ದವು ಎಂಬುದನ್ನು ಅರಿಯಬಹುದಾಗಿದೆ. ಎಲ್ಲರ ಕಣ್ಣಲ್ಲಿ ನೀರು ಕಂಡ ಅಕ್ಕಳಿಗೆ ದುಃಖವಾಗಿ ಅವಳ ಕಣ್ಣಲ್ಲಿ ನೀರು ಹರಿಯಲು ಆರಂಭಿಸಿತು. ಗದ್ಗಗೊಂಡ ಅಕ್ಕ
ಆಗೊಂದು ನುಡಿತಾಳ ಮಾದೇವಿ ಶರಣರಿಗೆ
ನಡಿತಿನಿ ನಿಮ್ಮ ಹಾದ್ಯಾಗ ತರತ್ತಿನಿ
ಬಸವನೆ ತಲೆಗ ಹೂವದು.
ಬಸವಣ್ಣನವರ ತಲೆಗೆ ಹೊವು ತರುವೆನು ಹೊರತು ಹುಲ್ಲು ತಾರೆನು! ನಿಮ್ಮೆಲ್ಲರ ಮಾರ್ಗವೇ ನನಗೆ ಶಿವ ಮಾರ್ಗ ಆ ಮಾರ್ಗದಲ್ಲಿ ನಡೆದು ನನ್ನ ಗುರಿ ತಲುಪುತ್ತೆನೆಂಬ ವಿಶ್ವಾಸದ ಮಾತು ಆಡುತ್ತಾ ಕಲ್ಯಾಣದ ಭೂಮಿಗೆ ನಮಿಸುವಷ್ಟರಲ್ಲಿ ಮಡಿವಾಳ ಮಾಚಿದೇವರು ಬಂದು.
ಹಡದಿಯು ಹಾಸ್ಯಾನ ಭಕ್ತೀಲಿ ಮಾಚಣ್ಣ
ನಡಿಯಕ್ಕ ಪಾದಿಟ್ಟು ಎನುತಾನ ಮಾದೇವಿ
ಹಡದಿಯು ಎತ್ತಿ ನಮಿಸ್ಯಾಳ.
ಹಡೆದಿಗೆ ನಮಿಸಿ. ಕಲ್ಯಾಣ ತಾಯಿಗೆ ನಮಿಸಿ ಅಕ್ಕ ಕಲ್ಯಾಣ ಬಿಟ್ಟು ಭರಭರನ ಹೆಜ್ಜೆ ಹಾಕುತ್ತಾ ನಡೆದೆ ಬಿಟ್ಟಳು. ಶರಣರು ಅಕ್ಕ ಮರೆಯಾಗುವ ತನಕ ಅಲ್ಲಿಯೇ ನಿಂತರು. ಒಬ್ಬರಿಗೊಬ್ಬರು ಸಮಾಧಾನ ಮಾಡುತ್ತ ತಮ್ಮ ತಮ್ಮ ಕಾಯಕಗಳಿಗೆ ನಡೆಯುತ್ತಾರೆ.
ಮನೆಯದು ಭಣಭಣ ಮನವದು ಭಣಭಣ
ಕಲ್ಯಾಣ ಊರು ಭಣಭಣ ಎಲ್ಲೆಲ್ಲು
ರಣರಣ ಆಗಿ ಊರೆಲ್ಲ
ಈ ಕಡೆ ಅಕ್ಕ ಬಸವಾದಿ ಶರಣರನ್ನು ನೆನೆಯುತ್ತಾ ಕದಳಿಗೆ ಬಂದಿದ್ದಾಳೆ. ಶರಣರಿಗೆ ಹೇಳಿದಂತೆ ಅಕ್ಕ ತನ್ನ ಸಾಧನೆಯನ್ನು ಮುಂದುವರಿಸುತ್ತಾಳೆ.
ಹಸಿವಿಲ್ಲ ನೀರಿಲ್ಲ ಮಾತಿಲ್ಲ ಕತೆಯಿಲ್ಲ
ಉಸಿರೊಂದೆ ನಡೆದು ಅಕ್ಕಂದು ಅದರೊಳು
ಹಾಸಿತಾ ಹೊಕ್ಕಿ ಒಂದಾಗಿ
ಹಸಿವು ನೀರಡಿಕೆ ಇಲ್ಲ ಅಕ್ಕಳಿಗೆ ಲಿಂಗದೊಂದಿಗೆ ಮಾತು ನಡೆದಿವೆ ಮೌನವಾಗಿ. ಭಕ್ತಿಯೊಂದೇ ಮೈಮನದಲ್ಲಿ ಹಾಸು ಹೊಕ್ಕಾಗಿದೆ. ಹುಲಿ, ಆನೆ, ಹಾವುಗಳೆಲ್ಲ ಸುತ್ತೆಲೂ ಹರಿದಾಡುತ್ತಿವೆ. ಆದರೆ ಅಕ್ಕ ಸ್ಥಿತಪ್ರಜ್ಞೆಳಾಗಿದ್ದಾಳೆ.
ಭಯವಿಲ್ಲ ಮನದಾಗ ನಯಗಳು ಲಿಂಗದಾಗ
ಓಂಯೆಂಬ ಶಬುದ ಮನದಾಗ ಅಕ್ಕಳ
ಅಂಗವು ನಿಂದು ಲಿಂಗದಾಗ
ಅಂಗವು ತಾಹಿಡಿದು ಲಿಂಗವು ತಾ ಪಡೆದು
ಅಂಗಲಿಂಗ ಎರಡು ಒಂದುಮಾಡಿ ಮಾದೇವಿ
ಜಂಗಮ ಚನ್ನನ ಕಂಡಾಳ
ಶರೀರದಿಂದಲೇ ಎಲ್ಲವೂ ಸಾಧ್ಯ ಎಂಬುದುನ್ನು ಅಕ್ಕ ಸಾಧಿಸಿ ತೋರಿಸಿದ್ದಾಳೆ. ಜಂಗಮಮೂರ್ತಿ ಚನ್ನಮಲ್ಲಿಕಾರ್ಜುನನ್ನು ಲಿಂಗದೊಳು ಕಂಡು ಅಂಗಲಿಂಗ ಸಮಸರಗೊಳಿಸಿದ್ದಾಳೆ. ತಾನಾರು? ಎಂಬುದನ್ನು ಸಾಧಿಸಿ ತೋರಿದ್ದಾಳೆ.
ಡಾ. ನೀಲಾಂಬಿಕಾ ಪೊಲೀಸಪಾಟೀಲ,
“ಗುರು ಶರಣ ನಿಲಯ”
ಮನೆ ನಂ. 1495/101 ಮತ್ತು 102/310,
ಗೋದುತಾಯಿ ನಗರ,
ನ್ಯೂ ಜೇವರ್ಗಿ ರಸ್ತೆ,
ಕಲಬುರಗಿ – 585 102.
ಮೋಬೈಲ್ ನಂ. 94821 47084
ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in.