
ಅಷ್ಟವಿಧಾರ್ಚನೆಯ ಮಾಡಿ ಒಲಿಸುವೆನೇ ಅಯ್ಯಾ?
ನೀನು ಬಹಿರಂಗ ವ್ಯವಹಾರ ದೂರಸ್ಥನು.
ಅಂತರಂಗದಲ್ಲಿ ಧ್ಯಾನವ ಮಾಡಿ ಒಲಿಸುವೆನೇ ಅಯ್ಯಾ?
ನೀನು ವಾಙ್ಮನಕ್ಕತೀತನು.
ಜಪ ಸ್ತೋತ್ರದಿಂದ ಒಲಿಸುವೆನೇ ಅಯ್ಯಾ?
ನೀನು ನಾದಾತೀತನು.
ಭಾವಜ್ಞಾನದಿಂದ ಒಲಿಸುವೆನೇ ಅಯ್ಯಾ?
ನೀನು ಮತಿಗತೀತನು.
ಹೃದಯಕಮಲಮಧ್ಯದಲ್ಲಿ ಇಂಬಿಟ್ಟುಕೊಂಬೆನೆ ಅಯ್ಯಾ?
ನೀನು ಸರ್ವಾಂಗ ಪರಿಪೂರ್ಣನು.
ಒಲಿಸಲೆನ್ನಳವಲ್ಲ; ನೀನೊಲಿಯುವುದೇ ಸುಖವಯ್ಯ
ಚೆನ್ನಮಲ್ಲಿಕಾರ್ಜುನ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-791 / ವಚನ ಸಂಖ್ಯೆ-49)
ಅಕ್ಕ ಮಹಾದೇವಿಯವರು ಮಹಿಳಾ ಅನುಭಾವಿಗಳಲ್ಲೇ ಅತ್ಯಂತ ಎತ್ತರದ ಸ್ಥಾನದಲ್ಲಿ ನಿಲ್ಲುತ್ತಾರೆ. ಕನ್ನಡ ನಾಡಿನ ಮೊದಲ ಅನುಭಾವಿ ಕವಿಯಿತ್ರಿ. ಇವರ ವಚನಗಳು ಭಾವ ಪ್ರಧಾನತೆಯಿಂದ ಕಂಗೊಳಿಸುತ್ತವೆ. ಅಕ್ಕನವರಲ್ಲಿ ಅನುಭಾವದ ತೀವ್ರತೆ, ಆಧ್ಯಾತ್ಮದ ಹಸಿವು, ಚೆನ್ನಮಲ್ಲಿಕಾರ್ಜುನನ ಮೇಲಿನ ಒಲುಮೆ, ಪ್ರೀತಿ ಅವುಗಳ ಹುಡುಕಾಟ ಅನನ್ಯವಾಗಿವೆ. ಲೋಕದ ಗಂಡನನ್ನು ತೊರೆದು ಅಲೌಕಿಕನಾದ ಚೆನ್ನಮಲ್ಲಿಕಾರ್ಜುನನ್ನು ಬಯಸಿದ ಇವರ ಅಂತರಂಗ ಪಯಣದ ಹೆಜ್ಜೆಗಳು ಎಷ್ಟು ಅನುಪಮವೋ ಅಷ್ಟೇ ಕಠಿಣವಾಗಿವೆ.
ಈ ಹಿನ್ನೆಲೆಯಲ್ಲಿ ಅಕ್ಕನವರ ಈ ವಚನ ಒಲುಮೆ, ಪ್ರೀತಿಯ ಆತ್ಯಂತಿಕ ಉತ್ಕಟ ನೆಲೆಯನ್ನು ತಿಳಿಸುತ್ತದೆ. ಒಲುಮೆ, ಪ್ರೀತಿಯಂತಹ ಭಾವಸಂವೇದನೆಗಳು ಸಹಜತೆಯಲ್ಲಿ ಅರಳಬೇಕೇ ವಿನಃ ಒತ್ತಾಯದಿಂದ ಪಡೆದುಕೊಳ್ಳಲು ಸಾಧ್ಯವಿಲ್ಲ ಎಂಬ ಭಾವ ಸೂಕ್ಷ್ಮತೆಯನ್ನು ಪ್ರಕಟಿಸುತ್ತದೆ.
ಚೆನ್ನಮಲ್ಲಿಕಾರ್ಜುನನ್ನು ಒಲಿಸಿಕೊಳ್ಳಲು ಅವರು ಮಾಡುವ ಪ್ರಯತ್ನಗಳಲ್ಲೆವು ವಿಫಲವಾದಂತಿದೆ. ಹೀಗಾಗಿ ಅವನಾಗಿ ಅವನೇ ಒಲಿದು ಬರುವುದು ಸುಖ ಎಂಬ ಭಾವ ಬಲಿತು ಅನುಭಾವದ ನೆಲೆಗೇರಿದ ಸ್ಥಿತಿಯಲ್ಲಿ ಅಕ್ಕ ಮಹಾದೇವಿವರು ಈ ವಚನ ಬರೆಯುತ್ತಾರೆ.
ಚೆನ್ನಮಲ್ಲಿಕಾರ್ಜುನನ್ನು ಒಲಿಸಿಕೊಳ್ಳಲು ಎಷ್ಟೋ ವಿಧದ ಅರ್ಚನೆ ಪೂಜೆ ಮಾಡಿದೆ, ಆದರೆ ಅವನು ಇಂತಹ ಬಹಿರಂಗ ವ್ಯವಹಾರ ಅಂದರೆ ಬಾಹ್ಯ ಪೂಜೆಗಳಿಂದ ಅತೀತನಾದವನು. ಬಾಹ್ಯ ಆಚರಣೆಯಿಂದ ದೂರವಾಗಿ ಅಂತರಂಗದಲ್ಲಿ ಧ್ಯಾನ ಮಾಡಿ ಒಲಿಸಿಕೊಳ್ಳಬೇಕೆಂದರೆ ಅವನು ಮಾತಿಗೂ, ಮನಸ್ಸಿಗೂ ನಿಲುಕದವನು. ಜಪ ಮಾಡಿ, ಸ್ತುತಿ ಮಾಡಿ ಒಲಿಸಿಕೊಳ್ಳಬೇಕೆಂದರೆ ಅವನು ಶಬ್ದ ನಾದಗಳಿಂದ ಮುಗ್ಧನಾದವನು, ದೂರವಾದವನು, ಭಾವಜ್ಞಾದಿಂದ ಒಲಿಸಿಕೊಳ್ಳಬೇಕೆಂದರೆ ಅವನು ಭಾವ ಬುದ್ಧಿಗೆ ಸಿಗಲಾರದವನು. ಸರ್ವಾಂಗ ಪರಿಪೂರ್ಣನಾದ ಅವನನ್ನು ಹೃದಯ ಕಮಲ ಮಧ್ಯದಲ್ಲೂ ಹಿಡಿದಿಡಲು ನಾನು ಅಸಹಾಯಕಳಾಗಿದ್ದೇನೆ. ನಾನು ಅವನನ್ನು ಒಲಿಸಿಕೊಳ್ಳಲು ಹೋಗಿ ಸೋಲುತ್ತಿದ್ದೇನೆ. ನಾನು ಒಲಿಸಿಕೊಳ್ಳುವೆ ಎಂಬ ಭಾವವೇ ಅಹಂಕಾರದ ಪರಮಾವಧಿ. ನನ್ನ ಉತ್ಕಟ ಪ್ರೀತಿಗೆ ಅವನಾಗಿ ಒಲಿದು ಬರುವುದರಲ್ಲಿಯೇ ಪರಮಸುಖವಿದೆ, ಎಂಬ ಭಾವ ಅಕ್ಕನವರದು.
ಅಕ್ಕ ಮಹಾದೇವಿಯವರು ಬಹಳ ಅಂತರ್ಮುಖಿ. ಅಪ್ಪಟ ಚೆನ್ನಮಲ್ಲಿಕಾರ್ಜುನನ ಪ್ರೇಮಿ ಅವರು. ಅವರಿಗೆ ಪ್ರೀತಿಯ ಪರಿಭಾಷೆಯೆಲ್ಲಾ ಗೊತ್ತು. ಈ ಅಂಶಗಳೆಲ್ಲವೂ ಈ ವಚನದಲ್ಲಿ ಹರಳುಗಟ್ಟಿ ನಿಂತಿವೆ.
ಪ್ರೀತಿ, ಒಲುಮೆ ನಮ್ಮೊಳಗೆ ಸಹಜವಾಗಿ ಅರಳುವ ಭಾವಗಳು. ಒತ್ತಾಯದಿಂದ ಒಂದು ಮೊಗ್ಗನ್ನು ಅರಳಿಸುವುದು ಅಸಾಧ್ಯ. ಪ್ರಕೃತಿ ಸಹಜತೆಯಂತೆ ಅದು ಅರಳಬೇಕು, ಘಮ ಘಮಿಸಬೇಕು. ಹಾಗೆಯೇ ಸಂಪತ್ತಿನಿಂದಾಗಲಿ, ಅಧಿಕಾರದಿಂದಾಗಲಿ, ದರ್ಪದಿಂದಾಗಲಿ ಒಲುಮೆ, ಪ್ರೀತಿಯನ್ನು ಪಡೆಯಲು ಅಸಾಧ್ಯ. ಇವುಗಳು ಸಹಜವಾಗಿಯೇ ಅರಳಬೇಕು. ಇದೆ ಬದುಕಿನ ಸಹಜತೆ. ನಾನು ಪಡೆಯುತ್ತೇನೆ, ಗೆಲ್ಲುತ್ತೆನೆ, ಒಲಿಸಿಕೊಳ್ಳುತ್ತೇನೆ ಎಂಬುದು ಅಹಂಕಾರ ಆಗುತ್ತದೆ. ಇದು ಲೌಕಿಕ ಮತ್ತು ಅಲೌಕಿಕ ಎರಡಕ್ಕೂ ಅನ್ವಯವಾಗುವ ಸತ್ಯ. ಅದ್ದರಿಂದ ನಿರಹಂಕಾರವೇ ಸದಾಶಿವನ ಒಲುಮೆಗೆ ಸಾಧನ ಎಂಬುದು ಅಕ್ಕನ ಭಾವ. ಈ ಕಾರಣದಿಂದ ಚೆನ್ನಮಲ್ಲಿಕಾರ್ಜುನನೇ ತಾನಾಗಿ ಒಲಿಯುವುದರಲ್ಲೇ ಸುಖ ಇದೆ ಎನ್ನುತ್ತಾರೆ ಅಕ್ಕ ಮಹಾದೇವಿಯವರು. ಇದು ಭಕ್ತಿಲೋಕದ ಪ್ರೀತಿಯ ಪರಿಭಾಷೆಯಲ್ಲಿ ಅರಳಿದ ಅಕ್ಕನವರ ಸುಂದರ ಭಾವ ಗೀತಾತ್ಮಕ ವಚನಗಳಲ್ಲಿ ಒಂದು. ಸಾಹಿತ್ಯಕವಾಗಿ, ಅನುಭಾವಾತ್ಮಕವಾಗಿ ಅಕ್ಕನವರ ಪ್ರಬುದ್ಧ ಮನಸ್ಥಿತಿಯ ಪ್ರತೀಕ ಈ ವಚನ.
ಡಾ. ಪುಷ್ಪಾ ಶಲವಡಿಮಠ,
ಕನ್ನಡ ಉಪನ್ಯಾಸಕರು,
ಸರ್ಕಾರಿ ಪ್ರಥಮ ದರ್ಜೆ ಕಾಲೇಜು,
ಚಿಕ್ಕ ಬಾಸೂರು, ಹಾವೇರಿ ಜಿಲ್ಲೆ.
ಮೋಬೈಲ್. ಸಂ. 97407 38330
ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in