
ಹನ್ನೆರಡನೆಯ ಶತಮಾನದಲ್ಲಿ ಬಸವಾದಿ ಶಿವಶರಣರು ಮಾಡಿದ ಕ್ರಾಂತಿ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆಯಲ್ಪಟ್ಟಿದೆ. ಬಸವಣ್ಣನವರು ಸರ್ವಸಮಾನತೆ, ಕಾಯಕ, ದಾಸೋಹ ತತ್ವಗಳ ಮೂಲಕ ಸರ್ವಾಂಗ ಸುಂದರ ಸಮಾಜ ನಿರ್ಮಾಣಕ್ಕಾಗಿ ಮಾಡಿದ ಈ ಕ್ರಾಂತಿ ಮನುಕುಲದ ಏಕತೆಗಾಗಿ ನಡೆದ ಮೊದಲ ಪ್ರಯತ್ನವಾಗಿದೆ. ಸಾವಿರಾರು ವರ್ಷಗಳಿಂದ ಶೋಷಿತ, ದಮನಿತ ಸಮುದಾಯಕ್ಕೆ ಧ್ವನಿಯನ್ನು ಕೊಟ್ಟ ಶ್ರೇಯಸ್ಸು ಬಸವಣ್ಣನವರಿಗೆ ಸಲ್ಲುತ್ತದೆ. ಬಸವಣ್ಣನವರ ಕೀರ್ತಿ, ವಾರ್ತೆಗಳನ್ನು ಕೇಳಿ ಕಾಶ್ಮೀರದಿಂದ, ಗುಜರಾತದಿಂದ, ದೂರದ ಕಂದಹಾರದಿಂದ, ಮಹಾರಾಷ್ಟ್ರದಿಂದ ಹೀಗೆ ದೇಶ-ವಿದೇಶಗಳಿಂದ ಅಭಿಮಾನಿ ಶರಣರು ಕಲ್ಯಾಣಕ್ಕೆ ಬಂದರು. ಕಲ್ಯಾಣ ಪಟ್ಟಣ ಭೂ ಕೈಲಾಸವಾಯಿತು. ಬಸವಣ್ಣನವರು ಸ್ಥಾಪಿಸಿದ “ಅನುಭವ ಮಂಟಪ” ಜಗತ್ತಿನ ಮೊಟ್ಟ ಮೊದಲ ಸಾರ್ವಜನಿಕ ಸಂಸತ್ತಾಯಿತು.
ಇದೆಲ್ಲ ನಡೆದದ್ದು ಕೇವಲ 12 ವರ್ಷಗಳ ಅಲ್ಪಾವಧಿಯಲ್ಲಿ. ಅಷ್ಟರಲ್ಲಿ ಪುರೋಹಿತಶಾಹಿ ವರ್ಗದ ಕುತಂತ್ರದಿಂದ ಶರಣರ ವಿರುದ್ಧ ರಾಜನಲ್ಲಿಗೆ ದೂರು ಹೋಯಿತು. ಶರಣರು ನ್ಯಾಯ ನಿಷ್ಠುರಿಗಳು. ಯಾರಿಗೂ ಅಂಜದ ಧೀರರು. ಹೀಗಾಗಿ ಪ್ರಭುತ್ವವನ್ನು ಎದುರು ಹಾಕಿಕೊಳ್ಳುವ ಪ್ರಸಂಗ ಬಂದಿತು. ಇದರಿಂದ ಶರಣರಿಗೆ ಹಿಂಸೆ ಕೊಡಲು ಪ್ರಾರಂಭಿಸಿದರು. ಸಿಕ್ಕ ಸಿಕ್ಕ ಶರಣರ ಮೇಲೆ ಹಲ್ಲೆ ಮಾಡಲಾಯಿತು. ವಚನ ಕಟ್ಟುಗಳನ್ನು ಸುಡಲಾಯಿತು. ಪುರೋಹಿತಶಾಹಿ ವರ್ಗ ಮತ್ತು ರಾಜ ಪ್ರಭುತ್ವ ಕೂಡಿ ಶರಣ ಸಂಸ್ಕೃತಿಯನ್ನೇ ನಿರ್ನಾಮ ಮಾಡಬೇಕೆಂದು ಪ್ರಯತ್ನಿಸಿದವು. ಆಗ ಉಳಿದ ಶರಣರು ಅನೇಕ ತಂಡಗಳನ್ನು ಮಾಡಿಕೊಂಡು, ವಚನ ಕಟ್ಟುಗಳನ್ನು ಬೆನ್ನಿಗೆ ಕಟ್ಟಿಕೊಂಡು ತಮಗೆ ತಿಳಿದಲ್ಲಿಗೆ ಹೋದರು. ಈ ವಿಷಯವನ್ನು ತುರಗಾಹಿ ರಾಮಣ್ಣ ಎಂಬ ವಚನಕಾರ ಸ್ಪಷ್ಟವಾಗಿ ಹೇಳುತ್ತಾನೆ:
ಬಂದಿತ್ತು ದಿನ ಬಸವಣ್ಣ ಕಲ್ಲಿಗೆ
ಚೆನ್ನಬಸವಣ್ಣ ಉಳಿವೆಯಲ್ಲಿಗೆ
ಪ್ರಭು ಅಕ್ಕ ಕದಳಿದ್ವಾರಕ್ಕೆ
ಮಿಕ್ಕಾದ ಪ್ರಮಥರೆಲ್ಲರೂ ತಮ್ಮ ಲಕ್ಷ್ಯಕ್ಕೆ
ನಾನು ತುರುವಿನ ಬೆಂಬಳಿಯಲ್ಲಿ ಹೋದೆ ಮರೆಯಲ್ಲಿ
ಅಡಗಿಹರೆಲ್ಲರೂ ಅಡಗಿದುದ ಕೇಳಿ ನಾ
ಗೋಪತಿನಾಥ ವಿಶ್ವೇಶ್ವರ ಲಿಂಗದಲ್ಲಿಯೇ ಉಡುಗುವೆನು.
(ಸಮಗ್ರ ವಚನ ಸಂಪುಟ: 7-2021 / ಪುಟ ಸಂಖ್ಯೆ-349 / ವಚನ ಸಂಖ್ಯೆ-1026)
ಚೆನ್ನಬಸವಣ್ಣ ಮತ್ತು ಅಕ್ಕನಾಗಮ್ಮನವರ ನೇತೃತ್ವದಲ್ಲಿ ಕಲ್ಯಾಣದಿಂದ ಉಳವಿಗೆ ಬಂದ ಒಂದು ಶರಣರ ತಂಡ ಬೆಳಗಾವಿ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಹಾದು ಹೋದ ಹೆಜ್ಜೆ ಗುರುತುಗಳನ್ನು ಇಂದಿಗೂ ಗುರುತಿಸಬಹುದು. ಕಲ್ಯಾಣದಿಂದ ಉಳವಿಗೆ ಹೋದ ದಾರಿಯ ಬಗ್ಗೆ ಡಾ. ಆರ್. ಸಿ. ಹಿರೇಮಠ, ಡಾ. ಎಚ್. ತಿಪ್ಪೇರುದ್ರಸ್ವಾಮಿ ಮೊದಲಾದವರು ಎರಡು ಸಂಭಾವ್ಯ ಹಾದಿಗಳನ್ನು ಗುರುತಿಸಿದ್ದರು. ಇತ್ತೀಚೆಗೆ ಸೋದೆಯ ಸದಾಶಿವರಾಯನ “ಉಳವಿ ಮಹಾತ್ಮೆ” ಎಂಬ ಕೃತಿಯ ಶೋಧದಿಂದ ಈ ದಾರಿಯ ಸ್ಪಷ್ಟತೆ ದೊರೆಯುತ್ತದೆ.
ಡಾ. ಆರ್. ಸಿ. ಹಿರೇಮಠ ಮತ್ತು ಡಾ. ಎಚ್. ತಿಪ್ಪೇರುದ್ರಸ್ವಾಮಿ ಅವರು ಬೆಳಗಾವಿ ಜಿಲ್ಲೆಯ ಎಲ್ಲ ಶರಣ ಕ್ಷೇತ್ರಗಳನ್ನು ಕ್ಷೇತ್ರ ಕಾರ್ಯ ಮಾಡಿ ವಿವರವಾದ ಮಾಹಿತಿಗಳನ್ನು ನೀಡುವ ಪ್ರಯತ್ನ ಮಾಡಿದ್ದರು. ಕಲಬುರ್ಗಿಯ ಡಾ. ವೀರಣ್ಣ ದಂಡೆ ಅವರು “12 ನೇ ಶತಮಾನದ ಶರಣ ಸ್ಮಾರಕಗಳು” ಎಂಬ ಸಂಶೋಧನಾತ್ಮಕ ಕೃತಿಯನ್ನು ಬಸವ ಸಮೀತಿಯ ಮೂಲಕ ಪ್ರಕಟಿಸಿದರು. ನಂತರ ಡಾ. ಬಸವರಾಜ ಮಲಶೆಟ್ಟಿ ಅವರು ಕ್ಷೇತ್ರ ಕಾರ್ಯ ಮಾಡಲು ಆಲೋಚಿಸಿ ದಿನಾಂಕ 16.03.2015 ರಂದು ಬೆಳಗಾವಿ ಜಿಲ್ಲೆಯ ಶರಣ ಕ್ಷೇತ್ರಗಳ ಕ್ಷೇತ್ರ ಕಾರ್ಯ ಸಂಶೋಧನೆಗೆ ಪ್ರಾರಂಭ ಮಾಡಿದರು. ಇದರ ಫಲವಾಗಿ “12 ನೆಯ ಶತಮಾನದ ಶರಣ ಕ್ಷೇತ್ರಗಳು” ಎಂಬ ಪುಸ್ತಕವನ್ನು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಮೈಸೂರು ಇವರ ಮೂಲಕ ಪ್ರಕಟಿಸಿದರು.

ಅವರೊಂದಿಗೆ ನಾನು ಹೋಗಿದ್ದೆ. ಎಲ್ಲ ಶರಣಕ್ಷೇತ್ರಗಳನ್ನು ಕಣ್ಣಾರೆ ಕಾಣುವ ಯೋಗ ಲಭ್ಯವಾದುದು ನನ್ನ ಸುಕೃತವೆಂದು ತಿಳಿದಿರುವೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಲೇಖನ ಒಂದು ದೃಷ್ಟಿಯಿಂದ ಪರಿಪೂರ್ಣವಾಗಿದೆ ಎಂದು ನಾನು ಭಾವಿಸಿದ್ದೇನೆ.
ಬೆಳಗಾವಿ ಜಿಲ್ಲೆ ಚನ್ನಬಸವಣ್ಣನವರ ನೇತೃತ್ವದಲ್ಲಿ ಉಳಿದ ಶಿವಶರಣರು ನಡೆದಾಡಿದ ಪವಿತ್ರ ಭೂ ಪ್ರದೇಶವಿದು. ಈ ಭೂಪ್ರ ದೇಶದಲ್ಲಿ ಆಗಿ ಹೋದ ಅನುಭಾವಿಗಳಿಗೆ ಕೊರತೆಯಿಲ್ಲ, ಅಲ್ಲಿಗಲ್ಲಿಗೆ ದೀಪಸ್ತಂಭಗಳಾಗಿರುವ ಕ್ಷೇತ್ರಗಳಿಗೂ ಕೊರತೆಯಿಲ್ಲ. ಚನ್ನಬಸವರಾದಿಯಾಗಿ ಹಲವಾರು ಶರಣರು ನಡೆದಾಡಿದ ಕೆಲವು ಹೆಜ್ಜೆಗುರುತುಗಳನ್ನು ಅರಿಯುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.
- ಅಂಕಲಗಿ, ಗೋಕಾಕ ತಾಲೂಕ:
ಅಂಕಲಗಿ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಒಂದು ಪುಟ್ಟ ಗ್ರಾಮ. ಇದು ಗೋಕಾಕಿನಿಂದ ನೈಋತ್ಯಕ್ಕೆ ಸುಮಾರು 25 ಕಿಲೋಮೀಟರ ದೂರದಲ್ಲಿದೆ. ಸುಳದಾಳ ರೈಲು ನಿಲ್ದಾಣದಿಂದ ಸುಮಾರು 5 ಕಿಲೋಮೀಟರ ದೂರದಲ್ಲಿದೆ.
ಹನ್ನೆರಡನೆಯ ಶತಮಾನದ ಶರಣರ ದಂಡಿನಲ್ಲಿ ರೇಚಣ್ಣನೆಂಬ ಶರಣನಿದ್ದರು. ಕಾದರವಳ್ಳಿಯಲ್ಲಿ ಯುದ್ಧವಾದ ನಂತರ ಶರಣರು ಮುಂದೆ ಉಳವಿಯತ್ತ ನಡೆದರು. ಆಗ ಚನ್ನಬಸವಣ್ಣನವರು ಶರಣ ರೇಚಣ್ಣ ಶರಣ್ಣನವರಿಗೆ ಇಲ್ಲಿಯೇ ಉಳಿದುಕೊಳ್ಳಲು ಸೂಚಿಸಿದರು. ಚನ್ನಬಸವಣ್ಣನವರ ಆಶಯದಂತೆ ರೇಚಣ್ಣ ಶರಣರು ಅಂಕಲಗಿಯನ್ನು ತಮ್ಮ ಕರ್ಮಭೂಮಿಯನ್ನಾಗಿ ಮಾಡಿಕೊಂಡರು ಎಂದು ತಿಳಿದು ಬರುತ್ತದೆ. ಮುಂದೆ ರೇಚಣ್ಣ ಶರಣರು ಬದುಕಿ ಆಧುನಿಕ ಕಾಲಘಟ್ಟದಲ್ಲಿ ಅಡವಿಸಿದ್ಧೇಶ್ವರರೆಂಬ ಅಭಿಧಾನಕ್ಕೆ ಪಾತ್ರರಾದರು. ಅಂಕಲಗಿಯಲ್ಲಿ ಅಡವಿಸಿದ್ಧೇಶ್ವರಮಠ ಇಂದಿಗೂ ಜಾಗೃತ ಸ್ಥಾನವಾಗಿದೆ. ಅಂಗಲಗಿ ಸಮೀಪದಲ್ಲಿಯೇ ಇರುವ ಮತ್ತಿಕೊಪ್ಪ ಗ್ರಾಮದಲ್ಲಿ ಒಂದು ಅಡವಿಸಿದ್ಧೇಶ್ವರ ಮಠವಿದೆ. ಏಳು ದಶಕಗಳ ಹಿಂದೆ ಈ ಊರಿನ ಸುತ್ತ ಮುತ್ತಲಿನ ಜನರು ಮತ್ತಿಕೊಪ್ಪ ಗ್ರಾಮದ ಉತ್ತರಕ್ಕೆ ಇರುವ ದೇಶನೂರ ಗುಡ್ಡದ ವಾರಿಯನ್ನು ಏರಿ ಅಂಕಲಗಿ ಅಡವಿಸಿದ್ಧೇಶ್ವರ ಮಠದ ದರ್ಶನಕ್ಕೆ ಹೋಗುತ್ತಿದ್ದರು ಎಂದು ಅಂಕಲಗಿಯಲ್ಲಿ ಹಲವಾರು ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಚಿಂತಕರಾದ ಶ್ರೀ ರಾಯನಗೌಡ ಪಾಟೀಲ ಅವರು ಮತ್ತು ಆ ಭಾಗದ ಅನೇಕ ಹಿರಿಯರು ಅಭಿಪ್ರಾಯ ಪಡುತ್ತಾರೆ.
- ಗೊಡಚಿ, ರಾಮದುರ್ಗ ತಾಲೂಕ:
ರಾಮದುರ್ಗ ತಾಲೂಕಿನ ಗೊಡಚಿಯಲ್ಲಿ ಇರುವ ವೀರಭದ್ರ ದೇವಸ್ಥಾನ ತುಂಬ ಪ್ರಸಿದ್ಧವಾಗಿದೆ. ಗೊಡಚಿಯಲ್ಲಿ ಇಂದಿಗೂ ಪೂಜಿಸಲಾಗುತ್ತಿರುವ ಮುದಿ ವೀರಭದ್ರನೆಂಬ ಮೂರ್ತಿ ನಿಸ್ಸಂದೇಹವಾಗಿ ಒಬ್ಬ ಶರಣನದು. ಇಷ್ಟಲಿಂಗ, ಕಟ್ಟಿದ ಕಾಶಿ, ಜಂಭೆ, ರುದ್ರಾಕ್ಷಿಮಾಲೆ ಧರಿಸಿರುವ ಈ ವಿಗ್ರಹ ಮಡಿವಾಳ ಮಾಚಿದೇವರದೆಂದು ಡಾ. ಆರ್. ಸಿ. ಹಿರೇಮಠ ಅವರು ಊಹೆ ಮಾಡುತ್ತಾರೆ. ಅಲ್ಲದೆ ಮಾಚಿದೇವರು ವೀರಭದ್ರನ ಅವತಾರವೆಂದು ಜನ ನಂಬಿರುವುದು ಇದಕ್ಕೆ ಪುಷ್ಟಿ ನೀಡುತ್ತದೆ. ಗೊಡಚಿ ಸಮೀಪದ ತೊರಗಲ್ಲಿನಲ್ಲಿ ಶರಣರು ತಂಗಿದ್ದರು ಎಂಬುದಕ್ಕೆ ಎರಡು ಚಿಕ್ಕ ಮಂಟಪಗಳು ಸಾಕ್ಷಿ ಒದಗಿಸುತ್ತವೆ. - ಮುರುಗೋಡ, ಸವದತ್ತಿ ತಾಲೂಕ:
ಶರಣರ ಕ್ರಾಂತಿಯ ಪರಿಣಾಮವಾಗಿ ಕಲ್ಯಾಣದಿಂದ ಎಲ್ಲ ಶರಣರು ಚದುರಿದರು. ಶರಣರು ಉಳವಿಯತ್ತ ಸಾಗುವಾಗ ಮುರುಗೋಡ ಗ್ರಾಮಕ್ಕೂ ಬಂದಿದ್ದರು. ಶರಣರ ಯುದ್ಧ ಇಲ್ಲಿಯೇ ಮುಕ್ತಾಯವಾದ ಸಂಕೇತದಂತೆ ಶರಣರ ಯುದ್ಧ ಮುರುಗಡೆಯಾದದ್ದೇ ಮುರುಗೋಡ ಎಂಬ ಸ್ಥಳನಾಮ ಬಂದ ಐತಿಹ್ಯವಿದೆ. ಶರಣರು ಉಳವಿಯ ಮಾರ್ಗದತ್ತ ಸಾಗಿದಾಗ ಮುರುಗೋಡು ಉಳವಿಯ ಹೆಬ್ಬಾಗಿಲು ಎಂದು ಭಾವಿಸಿದ ಒಂದು ಸ್ಮಾರಕ ಅಲ್ಲಿದೆ.
ಉಳವಿಯ ಹೆಬ್ಬಾಗಿಲು, ಶರಣರು ಇದ್ದ ಗವಿಗಳು, ಶರಣ ಕೂಗು ಮಾರಿತಂದೆ ಸ್ಮಾರಕವಾಗಿರುವ ಮೂಲ ಕೂಗು ಬಸವನ ಶಿಲ್ಪ ಮತ್ತು ಸಮಾಧಿ, ಮಡಿವಾಳ ಮಾಚಿದೇವರ ಗದ್ದುಗೆ, ಬೊಮ್ಮಯ್ಯನ ಗದ್ದುಗೆ, ಸಿದ್ಧನಗವಿ, ಬಯಲ ಬಸವ ಹಾಗು ಹುಚ್ಚಯ್ಯ ಶರಣನ ಗುಡಿ, ಜಂಭುಲಿಂಗೇಶ್ವರ ಗುಡಿ, ಮಡಿವಾಳೇಶ್ವರ ಗುಡಿ, ಸಿದ್ಧಲಿಂಗೇಶ್ವರ ದೇವಾಲಯ ಮುಂತಾದ ಶರಣರ ಸ್ಮಾರಕಗಳು ಇಲ್ಲಿವೆ. ಗ್ರಾಮದ ಹೊರವಲಯದಲ್ಲಿ ಚನ್ನಬಸವಣ್ಣನವರ ದೇವಸ್ಥಾನವಿದೆ. ಅದರ ಬಯಲಿನಲ್ಲಿಯೇ ಯುದ್ಧವಾಯಿತೆಂದು ಜನ ಹೇಳುತ್ತಾರೆ. ಯುದ್ಧಮುಗಿದ ನಂತರ ತಮ್ಮ ಖಡ್ಗಗಳನ್ನು ಸಮೀಪದ ಕೆರೆಯಲ್ಲಿ ತೊಳೆದುಕೊಂಡರು. ಖಡ್ಗದ ರಕ್ತ ನೀರಿನಲ್ಲಿ ಕೂಡಿ ಇಡೀ ಕೆರೆ ಕೆಂಪಾಗಿ ಕಂಡಿತು. ರಕ್ತದಿಂದ ಕೆಂಪಾದ ಕೆರೆಯನ್ನು “ಕೆಂಗೆರಿ” ಎಂದು ಗುರುತಿಸಲಾಗುತ್ತಿದೆ.
ಎಡೆಯೂರು ತೋಂಟದಾರ್ಯ ಪರಂಪರೆಯ ಗೋಸಲ ಸಿದ್ಧೇಶ್ವರರಿಗೂ ಮತ್ತು ಮುರಗೋಡಿಗೂ ಅವಿನಾಭಾವ ಸಂಬಂಧವಿದೆ ಎಂದು ವಿದ್ವಾಂಸರು ಹೇಳುತ್ತಾರೆ. ಮುನವಳ್ಳಿ, ಮುರುಗೋಡ ಮತ್ತು ಸೊಗಲ ಕ್ಷೇತ್ರಗಳಲ್ಲಿ ಗೋಸಲ ಸಿದ್ಧೇಶ್ವರರು ಸಂಚರಿಸಿದ ಕುರುಹುಗಳಿರುವುದನ್ನು ಗುರುತಿಸಲಾಗುತ್ತಿದೆ. ಈ ಪರಂಪರೆಯ ಆದಿಲಿಂಗದೇವರು ಮುರುಗೋಡ ಸಮೀಪದ ಕಲ್ಲೂರು ಗುಡ್ಡದಲ್ಲಿ ನಿರ್ವಯಲಾದರು. ಹೀಗೆ ಎಡೆಯೂರು ತೋಂಟದಾರ್ಯ ಸಂಸ್ಥಾನಮಠಕ್ಕೂ ಮುರುಗೋಡ ಗ್ರಾಮಕ್ಕೂ ಒಂದು ಆತ್ಮೀಯ ಸಂಬಂಧ ಇರುವುದನ್ನು ಗಮನಿಸಬಹುದು.
ಮುರುಗೋಡ ಗ್ರಾಮದಲ್ಲಿ ಐವತ್ತಕ್ಕೂ ಹೆಚ್ಚು ಲಿಂಗಾಯತ ಮಠಗಳಿರುವ ದಾಖಲೆಗಳು ದೊರೆಯುತ್ತವೆ. ಇಲ್ಲಿಯ ಮಹಾಂತೇಶ್ವರಮಠ ಪೂಜ್ಯಶ್ರೀ ಶತಾಯುಷಿ ಮಹಾಂತ ಶಿವಯೋಗಿಗಳವರಿಂದ ಖ್ಯಾತಿ ಪಡೆದಿದೆ. ಅರಭಾವಿ ಪುಣ್ಯಾರಣ್ಯ ಪೀಠದ ಅಧಿಪತಿಗಳಾಗಿದ್ದ ಪೂಜ್ಯರು ಶರಣರ ಭೂಮಿ ಮುರುಗೋಡಿಗೆ ಬಂದು ನೆಲೆಸಿ ಇಲ್ಲಿಯೇ ಮಠ ಸ್ಥಾಪಿಸಿದರು. ಇದೊಂದು ಜಾಗೃತಪೀಠವಾಗಿ ಇಂದಿಗೂ ಭಕ್ತರ ಪಾಲಿನ ಕಾಮಧೇನುವಾಗಿದೆ. ಇಲ್ಲಿ ಶೈವ ಸ್ಮಾರ್ತ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಶಿವಚಿದಂಬರರು ಎಲ್ಲ ಜಾತಿಮತ ಪಂಥಗಳನ್ನು ಮೀರಿ ಬೆಳೆದ ಮಹಾನುಭಾವರು. ಇವರ ಲೀಲಾಭೂಮಿಯಾಗಿ ಮುರುಗೋಡ ತುಂಬ ಪ್ರಸಿದ್ಧವಾಗಿದೆ.
- ಕಾರೀಮನಿ, ಸವದತ್ತಿ ತಾಲೂಕ:
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಕಾರೀಮನಿ ಕ್ಷೇತ್ರವು ಶಿವ-ಶರಣರು ನಡೆದಾಡಿದ ಪುಣ್ಯಕ್ಷೇತ್ರವಾಗಿದೆ.
ಕಾರೀಮನಿ ಗ್ರಾಮದಲ್ಲಿ ಮಡಿವಾಳ ಮಾಚಿದೇವರ ಗದ್ದುಗೆ ಇದೆ. ಮಾಚಿದೇವರು ಮುರುಗೋಡ ಯುದ್ಧದಲ್ಲಿ ಗಾಯಗೊಂಡು, ಇಲ್ಲಿ ಬಂದು ರಕ್ತವನ್ನು ಕಾರಿಕೊಂಡ ಕಾರಣಕ್ಕಾಗಿ ‘ಕಾರೀಮನಿ’ಎಂಬ ಎಂಬ ಸ್ಥಳನಾಮ ಬಂದಿತೆಂದು ಈ ಗ್ರಾಮದ ಜನರು ಹೇಳುತ್ತಾರೆ.
ಇಲ್ಲಿ ಬಯಲು ಬಸವಣ್ಣನವರ ದೇವಸ್ಥಾನವಿದೆ. ಹಾಗೆಯೇ ಈ ಗ್ರಾಮದ ಪೂರ್ವ ದಿಕ್ಕಿನಲ್ಲಿರುವ ಬೆಟ್ಟದಲ್ಲಿ ಮೈಲಾರಲಿಂಗನ ಪ್ರತಿರೂಪವಾಗಿರುವ ಮಲ್ಲಯ್ಯಜ್ಜನ ದೇವಸ್ಥಾನ ಅತ್ಯಂತ ಪ್ರಸಿದ್ಧ ಪುಣ್ಯಕ್ಷೇತ್ರ. ಮಹಾರಾಷ್ಟ್ರದ ಖ್ಯಾತ ಸಂಶೋಧಕ ಡಾ. ರಾ. ಚಿಂ. ಢೇರೆ ಅವರು ಇದು ಮೈಲಾರಲಿಂಗ ಕ್ಷೇತ್ರವೆಂದು ಹೇಳುತ್ತಾರೆ. ಮಾಚಿದೇವನ ಮೂಲ ಸಮಾಧಿ ದೇವರಹಿಪ್ಪರಗಿಯಲ್ಲಿದೆ ಎಂದು ಕೆಲವರು ಹೇಳುತ್ತಾರೆ. ಆ ದೇವರ ಹಿಪ್ಪರಗಿಯಲ್ಲಿ ಕೂಡ ಒಂದು “ಮಲ್ಲಯ್ಯನ ದೇವಸ್ಥಾನ” ಇದೆ. ಮೈಲಾರಲಿಂಗನಿಗೂ ಮಡಿವಾಳ ಮಾಚಯ್ಯನಿಗೂ ಇರುವ ಸಂಬಂಧದ ಬಗ್ಗೆ ಇನ್ನಷ್ಟು ವಿವರವಾದ ಶೋಧ ನಡೆಯಬೇಕಾದ ಅಗತ್ಯವಿದೆ.
- ಸೊಗಲ ಕ್ಷೇತ್ರ, ಸವದತಿ ತಾಲೂಕ:
ಬೆಳಗಾವಿ ಜಿಲ್ಲೆಯಲ್ಲಿರುವ ಸೊಗಲ ಕ್ಷೇತ್ರವು ಒಂದು ಧಾರ್ಮಿಕ ಸ್ಥಳ. ಬೆಳಗಾವಿ ನಗರದಿಂದ ಸುಮಾರು 60 ಕಿ.ಮೀ ಮತ್ತು ಬೈಲಹೊಂಗಲ ಪಟ್ಟಣದಿಂದ 16 ಕಿ.ಮೀ ದೂರದಲ್ಲಿದೆ. ಈ ಸ್ಥಳ ಸವದತ್ತಿ ತಾಲೂಕಿನಲ್ಲಿದ್ದು ತಾಲೂಕು ಕೇಂದ್ರದಿಂದ 35 ಕಿ.ಮೀ ಅಂತರದಲ್ಲಿದೆ. ಸೊಗಲ ಕ್ಷೇತ್ರವು ಹಲವಾರು ದೇವಾಲಯಗಳನ್ನು ಒಳಗೊಂಡಿದೆ.
ರಟ್ಟರ ಕಾಲದಲ್ಲಿ ಸೊಗಲ ಒಂದು ಪ್ರಮುಖ ಅಧ್ಯಾತ್ಮ ಕ್ಷೇತ್ರವಾಗಿತ್ತು. ಅವುಗಳಲ್ಲಿ ಪ್ರಮುಖವಾದುದು ಸೋಮೇಶ್ವರನ ದೇವಸ್ಥಾನ. ಎತ್ತರದ ಬಂಡೆಗಲ್ಲಿನ ಮೇಲೆ ನಿರ್ಮಿಸಿರುವ ಈ ದೇವಾಲಯ ರಾಷ್ಟ್ರಕೂಟರ ಕಾಲದಲ್ಲಿ ನಿರ್ಮಿಸಲಾಗಿದೆ. ಸೊಗಲ ಕ್ಷೇತ್ರದಲ್ಲಿ ಕೂಗು ಬಸವನ ಗುಡಿ ಮತ್ತು ವೀರಭದ್ರದೇವರ ಗುಡಿಗಳಿವೆ. ಈ ಎರಡು ದೇವಸ್ಥಾನಗಳ ಆಧಾರದ ಮೇಲೆ ಇಲ್ಲಿಯೂ ಶರಣರು ಬಂದು ತಂಗಿರಬಹುದೆಂದು ಜನರು ಹೇಳುತ್ತಾರೆ.
ಇಲ್ಲಿರುವ ಬೆಟ್ಟಗಳ ನಡುವಿನಿಂದ ಪ್ರಾಕೃತಿಕವಾಗಿ ಹರಿಯುತ್ತಿರುವ ತೊರೆಯೊಂದು ಜಲಪಾತದಂತೆ ಧುಮುಕುವುದರಿಂದ ಇದು ಸೊಗಲ ಜಲಪಾತ ಎಂದು ಕರೆಯಲ್ಪಡುತ್ತದೆ. ದೇವಾಲಯದ ಬಳಿಯೇ ಈ ಜಲಧಾರೆ ಸುಮಾರು 15 ಅಡಿ ಎತ್ತರದಿಂದ ಧುಮುಕಿ ನಂತರ ಸ್ವಲ್ಪ ಮುಂದಕ್ಕೆ ಹರಿದು ಜಲಧಾರೆಯಾಗಿ 120 ಅಡಿ ಆಳಕ್ಕೆ ಬೀಳುತ್ತದೆ.
- ಹೊಸೂರು, ಸವದತ್ತಿ ತಾಲೂಕ:
ಸೊಗಲದಿಂದ ಎಂಟು ಕಿ.ಮೀ. ಅಂತರದಲ್ಲಿರುವ ಹೊಸೂರು ಗ್ರಾಮದಲ್ಲಿ ಚೆನ್ನಬಸವಣ್ಣನವರ ದೇವಸ್ಥಾನವಿದೆ. ಆ ದೇವಸ್ಥಾನದ ಪಕ್ಕದಲ್ಲಿ ದಾನಮ್ಮ ಎಂಬ ಸ್ಥಳೀಯ ಶರಣೆಯೊಬ್ಬಳ ಗದ್ದುಗೆ ಇದೆ. ಚನ್ನಬಸವಣ್ಣನವರು ಇಲ್ಲಿ ಉಳಿದುಕೊಂಡು ಲಿಂಗಪೂಜೆ ಮಾಡಿಕೊಂಡರೆಂದು ಸ್ಥಳೀಯರು ನಂಬಿದ್ದಾರೆ. - ಇಂಚಲ, ಸವದತ್ತಿ ತಾಲೂಕ:
ಬೈಲಹೊಂಗಲದಿಂದ 6 ಕಿ.ಮೀ. ಅಂತರದಲ್ಲಿರುವ ಇಂಚಲದಲ್ಲಿ ಶರಣ ಬಂಕನಾಥನ ದೇವಸ್ಥಾನವಿದೆ. ದೇವಸ್ಥಾನ ಗಮನಿಸಿದರೆ ಅದೊಂದು ಜೈನರ ಬಸದಿ ಇರಬಹುದು. ದೇವಸ್ಥಾನದ ಹೊರಗೆ ಭಗ್ನಗೊಂಡ ತೀರ್ಥಂಕರ ಮೂರ್ತಿಗಳು ನೋಡಲು ದೊರೆಯುತ್ತವೆ. ದೇವಸ್ಥಾನದ ಪೌಳಿಯಲ್ಲಿ ಒಂದು ಶಾಸನವೂ ಇದೆ. ಜೈನ ಮತ್ತು ಲಿಂಗಾಯತ ಧರ್ಮಗಳ ಸಂಘರ್ಷದ ಚಿತ್ರಣವನ್ನು ಇಲ್ಲಿ ಗಮನಿಸಬಹುದು. ಜೈನ ಬಸದಿಗಳಲ್ಲಿ ಲಿಂಗಪ್ರತಿಷ್ಠೆ ಮಾಡಿದ ಕುರುಹುಗಳನ್ನು ಇಲ್ಲಿ ಗಮನಿಸಬಹುದು. ಇಲ್ಲಿ ಬರುವ ಬಂಕನಾಥ ಯಾರು ಎಂಬ ಪ್ರಶ್ನೆ ಕಾಡುತ್ತದೆ. ಬಂಕನಾಥ ದೇವಸ್ಥಾನದ ಹತ್ತಿರದ ಹೊಲವೊಂದರಲ್ಲಿ ಪ್ರಾಚೀನ ಶಿವನ ದೇವಾಲಯವಿದೆ. ಆದರೆ ಈ ದೇವಾಲಯದ ಕುರಿತು ನಿಖರವಾದ ಮಾಹಿತಿ ಇಲ್ಲಿಯವರೆಗೆ ದೊರೆತಿಲ್ಲ. - ಮುರಕಿಭಾವಿ, ಬೈಲಹೊಂಗಲ ತಾಲೂಕ:
ಬೈಲಹೊಂಗಲ ತಾಲೂಕಿನ ಮುರಕಿಬಾವಿಯಲ್ಲಿ ಶರಣೆ ನೀಲಮ್ಮನವರ ದೇವಸ್ಥಾನವಿದೆ. ಶರಣರ ದಂಡಿನೊಂದಿಗೆ ಬಂದ ನೀಲಮ್ಮನವರನ್ನು ಗಾಯಗೊಂಡ ಕಾರಣವಾಗಿ ಪಲ್ಲಕ್ಕಿಯಲ್ಲಿ ಕರೆದುಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ಪಲ್ಲಕ್ಕಿ ಮುರಿಯಿತು, ಅದರ ಪಕ್ಕದಲ್ಲಿಯೇ ಒಂದು ಬಾವಿ ಇತ್ತು. ಈ ಕಾರಣಕ್ಕಾಗಿ ಈ ಗ್ರಾಮಕ್ಕೆ “ಮುರಕಿಬಾವಿ” ಎಂಬ ಹೆಸರು ಬಂದಿತೆಂದು ಸ್ಥಳೀಯರು ಹೇಳುವುದನ್ನು ಒಪ್ಪುವುದು ಸ್ವಲ್ಪ ಕಷ್ಟ. ಅಲ್ಲದೆ ಬಸವಣ್ಣನವರ ಧರ್ಮಪತ್ನಿ ನೀಲಮ್ಮ ಸ್ವತಃ ಗಂಡನೇ ಕರೆದರೂ ಕಲ್ಯಾಣ ಬಿಟ್ಟು ಬಂದಿರಲಿಲ್ಲ. ಅಲ್ಲಿರುವ ಲಿಂಗಯ್ಯ ಇಲ್ಲಿಲ್ಲವೆ? ಎಂದು ಪ್ರಶ್ನಿಸಿದವರು. ಅವರು ಶರಣರ ದಂಡಿನೊಂದಿಗೆ ಬಂದರೆಂಬುದು ನಂಬುವುದು ಸ್ವಲ್ಪ ಕಷ್ಟ. ಆದರೆ ನೀಲಮ್ಮ ಎಂಬ ಬೇರೊಬ್ಬ ಶರಣೆ ಇದ್ದಿರುವ ಸಾಧ್ಯತೆಯೂ ಇದೆ.
ನಾಲ್ಕು ದಶಕಗಳ ಹಿಂದೆ ನಾಗನೂರು ರುದ್ರಾಕ್ಷಿಮಠದ ಪೂಜ್ಯ ಶ್ರೀ ಶಿವಬಸವ ಮಹಾಸ್ವಾಮಿಗಳವರು ಮೊದಲ ಬಾರಿಗೆ ನೀಲಮ್ಮನ ಸ್ಮಾರಕ ಉಳಿಯಲಿ ಎಂದು ದೇವಸ್ಥಾನ ಕಟ್ಟಿಸಿದ್ದರು. ಇತ್ತೀಚೆಗೆ ಊರಿನ ಜನ ಈ ದೇವಸ್ಥಾನವನ್ನು ನವೀಕರಣ ಮಾಡಿದ್ದಾರೆ. ಆದರೆ ಶರಣರು ಬಳಸಿದ ಬಾವಿ ಎಂದು ಹೇಳುವ ಪ್ರಾಚೀನ ಬಾವಿ ಇಂದು ನೀರಿಲ್ಲದೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಈ ನೀಲಮ್ಮನ ದೇವಸ್ಥಾನದ ಪಕ್ಕದಲ್ಲಿ ಇತ್ತೀಚಿನ ಇಬ್ಬರು ಅವಧೂತರ ಗದ್ದುಗೆಗಳನ್ನು ನಿರ್ಮಾಣ ಮಾಡಿದ್ದು ಯಾವ ಕಾರಣಕ್ಕೆಂದು ತಿಳಿಯದು.
- ಸಂಪಗಾವಿ-ಕಲ್ಲೂರ, ಬೈಲಹೊಂಗಲ ತಾಲೂಕ:
ಸಂಪಗಾವಿ ಮತ್ತು ಕಲ್ಲೂರ ಗ್ರಾಮಗಳಲ್ಲಿ ಬಯಲ ಬಸವೇಶ್ವರ ದೇವಸ್ಥಾನಗಳಿವೆ. ಸಂಪಗಾವಿಯಲ್ಲಿರುವ ಬಯಲ ಬಸವೇಶ್ವರ ದೇವಸ್ಥಾನ ನವೀಕರಣಗೊಂಡಿದೆ. ಇಲ್ಲಿ ಮದುವೆ ಮೊದಲಾದ ಮಂಗಲ ಕಾರ್ಯಗಳು ಜರುಗುತ್ತವೆ. ಕಲ್ಲೂರ ಗ್ರಾಮದ ಹೊರವಲಯದಲ್ಲಿ ಬಸವೇಶ್ವರ ದೇವಸ್ಥಾನವಿದೆ. ಈ ಗ್ರಾಮದಲ್ಲಿ ಕಲ್ಯಾಣಮ್ಮನವರ ದೇವಸ್ಥಾನವೂ ಒಂದಿದೆ. - ತಿಗಡಿ, ಬೈಲಹೊಂಗಲ ತಾಲೂಕ:
ತಿಗಡಿ ಗ್ರಾಮದಲ್ಲಿ ಮೂರು ಗುಡಿಗಳಿದ ಕಾರಣಕ್ಕಾಗಿ “ತ್ರಿಗುಡಿ” ಎಂಬ ಪ್ರಾಚೀನ ಹೆಸರೇ ತಿಗಡಿಯಾಗಿದೆ ಎಂದು ಸ್ಥಳನಾಮ ಹೇಳುತ್ತಾರೆ. ಇಲ್ಲಿ ಚೆನ್ನಬಸವೇಶ್ವರ ದೇವಸ್ಥಾನ ಮತ್ತು ಕಲ್ಯಾಣಮ್ಮನ ದೇವಸ್ಥಾನಗಳಿವೆ. ಹರಳಯ್ಯನ ಹೆಂಡತಿ ಕಲ್ಯಾಣಮ್ಮ ಇಲ್ಲಿಯೇ ಲಿಂಗೈಕ್ಯಳಾದಳೆಂದು ಇಲ್ಲಿನ ಜನ ಭಾವಿಸಿದ್ದಾರೆ. ಆದರೆ ಬಿಜ್ಜಳನ ಎಳೆಹೂಟೆ ಶಿಕ್ಷೆಗೆ ಬಲಿಯಾದ ಮೊದಲ ವ್ಯಕ್ತಿಗಳೇ ಹರಳಯ್ಯ ಮತ್ತು ಕಲ್ಯಾಣಮ್ಮ. ಹೀಗಿರುವಾಗ ಕಲ್ಯಾಣಮ್ಮ ಇಲ್ಲಿಯವರೆಗೆ ಹೇಗೆ ಬಂದಳೆಂಬುದು ಶೋಧನೆಯ ವಿಷಯವಾಗಿದೆ. ಅಥವಾ ಕಲ್ಯಾಣಮ್ಮ ಎಂಬ ಬೇರೆ ಹೆಸರಿನ ಶರಣೆ ಇದ್ದರೂ ಇರಬಹುದು. - ಮರಡಿ ನಾಗಲಾಪುರ, ಚನ್ನಮ್ಮನ ಕಿತ್ತೂರ ತಾಲೂಕ:
ಇಲ್ಲಿ ಚೆನ್ನಬಸವಣ್ಣನವರ ತಾಯಿ ಅಕ್ಕನಾಗಮ್ಮನವರ ದೇವಸ್ಥಾನವಿದೆ. ನಾಗಮ್ಮನ ಹೆಸರಿನ ಕಾರಣವಾಗಿಯೇ ಈ ಗ್ರಾಮಕ್ಕೆ “ನಾಗಲಾಪುರ” ಎಂಬ ಹೆಸರು ಬಂದಿದೆ. ಇತ್ತೀಚೆಗೆ ನಾಗಮ್ಮನವರ ದೇವಸ್ಥಾನ ತುಂಬ ಚೆನ್ನಾಗಿ ನವೀಕರಣಗೊಂಡಿದೆ. ನಾಗಮ್ಮನವರ ಸಮಾಧಿ ಇಲ್ಲಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ. ಆದರೆ ತರೀಕೆರೆ ಸಮೀಪದ ಎಣ್ಣೆಹೊಳೆಯಲ್ಲಿಯೂ ಅವರ ಸಮಾಧಿ ಇದೆ ಎಂದು ಅಲ್ಲಿನ ಜನ ಹೇಳುತ್ತಾರೆ. ಆದರೆ ಒಂದು ವಿಷಯ ಅಕ್ಕನಾಗಮ್ಮನವರಷ್ಟು ಸುದೀರ್ಘ ಪ್ರಯಾಣ ಮಾಡಿದ ಮತ್ತೊಬ್ಬ ಶರಣೆ ಇಲ್ಲ. ಅವಳ ಧೈರ್ಯ ಮೆಚ್ಚಲೇಬೇಕು. ಶರಣರ ದಂಡನ್ನು ವಚನ ಕಟ್ಟುಗಳೊಂದಿಗೆ ಮುನ್ನಡೆಸಿದ ಧೀಮಂತಿಕೆ ಅಕ್ಕನಾಗಮ್ಮನವರದು. - ಮುಗುಟಖಾನ ಹುಬ್ಬಳ್ಳಿ (ಎಮ್. ಕೆ. ಹುಬ್ಬಳ್ಳಿ), ಚನ್ನಮ್ಮನ ಕಿತ್ತೂರ ತಾಲೂಕ:
ರಾಷ್ಟ್ರೀಯ ಹೆದ್ದಾರಿಗೆ ಹತ್ತಿಕೊಂಡಿರುವ ಎಂ. ಕೆ. ಹುಬ್ಬಳ್ಳಿಯ ಹೊರವಲಯದ ಮಲಪ್ರಭಾ ನದಿಯಲ್ಲಿ ಬಸವಣ್ಣನವರ ಧರ್ಮಪತ್ನಿ ಗಂಗಾಂಬಿಕೆಯವರ ಸಮಾಧಿ ಇದೆ. ಕಾದರವಳ್ಳಿಯಲ್ಲಿ ಯುದ್ಧ ನಡೆದ ಸಂದರ್ಭದಲ್ಲಿ ಗಾಯಗೊಂಡ ಗಂಗಾಂಬಿಕೆಯವರು ಇಲ್ಲಿ ಲಿಂಗೈಕ್ಯರಾದರೆಂಬ ಪ್ರತೀತಿ ಇದೆ. ಶ್ರೀ. ಬಿ. ಎಸ್. ಯಡಿಯೂರಪ್ಪನವರ ಇಚ್ಛಾಶಕ್ತಿಯ ಕಾರಣವಾಗಿ ಗಂಗಾಂಬಿಕೆಯವರ ಮುಕ್ತಿಕ್ಷೇತ್ರ ಕೂಡಲಸಂಗಮದ ಮಾದರಿಯಲ್ಲಿ ನವೀಕರಣಗೊಂಡಿದೆ. - ಕಾದರವಳ್ಳಿ, ಚನ್ನಮ್ಮನ ಕಿತ್ತೂರ ತಾಲೂಕ:
ಎಂ. ಕೆ. ಹುಬ್ಬಳ್ಳಿಯಿಂದ 6 ಕಿ.ಮಿ. ಅಂತರದಲ್ಲಿರುವ ಕಾದರವಳ್ಳಿ ಗ್ರಾಮದಲ್ಲಿ ಶರಣರು ಯುದ್ಧಮಾಡಿದರು ಎಂದು ಹೇಳಲಾಗುತ್ತಿದೆ. ಶಾಂತಿ ಪ್ರಿಯರಾದ ಶರಣರು ಯುದ್ಧದ ಆಕಾಂಕ್ಷಿಗಳಾಗಿರಲಿಲ್ಲ. ಆದರೆ ಬಿಜ್ಜಳನ ಸೈನಿಕರಿಗೂ, ಗೋವೆಯ ಕದಂಬ ರಾಜ್ಯದ ಸೈನಿಕರಿಗೂ ಇಲ್ಲಿ ಕಾದಾಟ ಆಗಿರಬಹುದು. ಕಾದು ಆಡಿದ ಕಾರಣಕ್ಕಾಗಿ ಈ ಗ್ರಾಮಕ್ಕೆ “ಕಾದರವಳ್ಳಿ” ಎಂಬ ಹೆಸರು ಬಂದಿದೆ ಎಂದು ಕೆಲವು ವಿದ್ವಾಂಸರು ಹೇಳುತ್ತಾರೆ. ಈ ಗ್ರಾಮದಲ್ಲಿ ರಾಮಲಿಂಗೇಶ್ವರ ದೇವಸ್ಥಾನವಿದೆ. ಇಲ್ಲಿಯ ಹೊಲವೊಂದರಲ್ಲಿ ಯುದ್ಧವಾಯಿತೆಂದು ಜನರು ಎಂಟು ಎಕರೆ ವಿಸ್ತಾರದ ಒಂದು ಹೊಲವನ್ನು ತೋರಿಸುತ್ತಾರೆ. - ಹುಣಸಿಕಟ್ಟಿ, ಬೈಲಹೊಂಗಲ ತಾಲೂಕ:
ಕಾದರವಳ್ಳಿಯಿಂದ 3 ಕಿಲೋಮೀಟರ ಅಂತರದಲ್ಲಿರುವ ಹುಣಸಿಕಟ್ಟಿ ಗ್ರಾಮದಲ್ಲಿ ರುದ್ರಮುನಿ ದೇವಸ್ಥಾನವಿದೆ. ಇದು ರೇವಣಸಿದ್ಧನ ಮಗನಾದ ರುದ್ರಮುನಿಯ ದೇವಸ್ಥಾನವೆಂದು ಇಲ್ಲಿನ ಪೂಜಾರಿಗಳು ಹೇಳುತ್ತಾರೆ. ಆದರೆ ಸ್ಥಳೀಯ ಕೆಲವರ ಪ್ರಕಾರ ಎರಡು ನೂರು ವರ್ಷಗಳ ಹಿಂದೆ ರುದ್ರಮುನಿ ಎಂಬ ಯೋಗಿಗಳೊಬ್ಬರು ಇದ್ದರು. ಅವರ ದೇವಸ್ಥಾನವಿದು ಎಂದು ಹೇಳುತ್ತಾರೆ. ಆದರೆ ದೇವಸ್ಥಾನದ ಶಿಲ್ಪವನ್ನು ಗಮನಿಸಿದರೆ ಹನ್ನೆರಡನೆಯ ಶತಮಾನದ ರುದ್ರಮನಿಯ ಸ್ಮಾರಕವೆಂದು ತೋರುತ್ತದೆ. ಪ್ರಾಚ್ಯ ವಿಭಾಗದ ವಿದ್ವಾಂಸರಿಂದ ಈ ದೇವಸ್ಥಾನದ ಕಟ್ಟಡವನ್ನು ಪರಿಶೀಲಿಸಿದರೆ ಇದನ್ನು ಸ್ಪಷ್ಟಪಡಿಸಬಹುದು. - ಹಿರೇನಂದೀಹಳ್ಳಿ / ಚಿಕ್ಕನಂದಿಹಳ್ಳಿ, ಚನ್ನಮ್ಮನ ಕಿತ್ತೂರ ತಾಲೂಕ:
ಕಿತ್ತೂರಿನಿಂದ 6 ಕಿಲೋಮೀಟರ ಅಂತರದಲ್ಲಿರುವ ಈ ಗ್ರಾಮದಲ್ಲಿ ಬಸವೇಶ್ವರ ದೇವಸ್ಥಾನವಿದೆ. ಈ ದೇವಸ್ಥಾನದ ವಿಶೇಷವೆಂದರೆ ಲಿಂಗ ಅತ್ಯಂತ ಚಿಕ್ಕದಾಗಿದ್ದು, ನಂದಿ ಮೂರ್ತಿ ಬೃಹದಾಕಾರವಿದೆ. ಬಸವಣ್ಣನವರನ್ನು ನಂದಿಯ ಅವತಾರವೆಂದು ಜನಪದರು ಭಾವಿಸಿದ ಕಾರಣವಾಗಿ ಲೋಕಾರೂಢಿಯಾಗಿ ಬಸವೇಶ್ವರ ದೇವಸ್ಥಾನವೆಂದರೂ ಒಳಗೆ ನಂದಿಯ ಮೂರ್ತಿ ಇದೆ. ಈ ಗ್ರಾಮದಿಂದ ಒಂದು ಕಿ.ಮೀ. ಅಂತರದಲ್ಲಿ ಒಂದು ತೊರೆ ಇದೆ. ಪ್ರಶಾಂತವಾದ ಈ ತೊರೆಯಲ್ಲಿ ಬಸವಾದಿ ಶರಣರು ಲಿಂಗಪೂಜೆ ಮಾಡಿಕೊಂಡರೆಂಬ ಪ್ರತೀತಿ ಇದೆ. ಇಂದಿಗೂ ಈ ಸ್ಥಳ ಅತ್ಯಂತ ಪ್ರಶಾಂತಮಯವಾಗಿದೆ. - ಬೈಲೂರು / ಬಸರಕೋಡ, ಚನ್ನಮ್ಮನ ಕಿತ್ತೂರ ತಾಲೂಕ:
ಬೈಲೂರಿನಲ್ಲಿ ಚನ್ನಬಸವೇಶ್ವರ ದೇವಸ್ಥಾನವಿದೆ. ಬಸರಕೋಡ ಗ್ರಾಮದಲ್ಲಿ ಕೂಗು ಬಸವನ ದೇವಸ್ಥಾನವಿದೆ. ಇತ್ತೀಚೆಗೆ ಈ ದೇವಸ್ಥಾನಗಳು ನವೀಕರಣಗೊಂಡಿವೆ. - ಕಕ್ಕೇರಿ, ಖಾನಾಪೂರ ತಾಲೂಕ:
ಖಾನಾಪೂರ ತಾಲೂಕಿನ ಕಕ್ಕೇರಿಯಲ್ಲಿ ಡೋಹರ ಕಕ್ಕಯ್ಯನವರ ಸಮಾಧಿಯಿದೆ. ಕಕ್ಕಯ್ಯನವರ ಪತ್ನಿ ಭಿಷ್ಟಾದೇವಿಯವರ ದೇವಸ್ಥಾನವೂ ಇದೆ. ಇದು ಈಗ ಗ್ರಾಮ ದೇವತೆಯಾಗಿ ಪರಿವರ್ತನೆಯಾಗಿದೆ. ಈ ದೇವತೆಯ ಜಾತ್ರಾ ನಿಮಿತ್ಯ ನೂರಾರು ಕುರಿಗಳನ್ನು ಬಲಿಕೊಡುತ್ತಿರುವುದು ಶರಣ ತತ್ವಕ್ಕೆ ವಿರುದ್ಧವಾದ ಕ್ರಿಯೆಯಾಗಿದೆ. ಇನ್ನೂ ದುರಂತವೆಂದರೆ ಅಲ್ಲಿಯ ದೇವಸ್ಥಾನ ಕಮೀಟಿಯವರು ಈ ದೇವಸ್ಥಾನದ ಒಂದು ಭಾವಚಿತ್ರವನ್ನು ತೆಗೆಯಲು ನಮಗೆ ಅನುಮತಿ ನೀಡಲಿಲ್ಲ. ದೇವಿ ಭಯಂಕರ ಕಾಡುತ್ತಾಳೆ ಎಂದು ಮೂಢನಂಬಿಕೆಯನ್ನು ಹೇಳಿ ಫೋಟೋ ತೆಗೆಯಲು ಅವಕಾಶ ಕೊಡಲಿಲ್ಲ. ಇಂಥ ಮೂಢ ಭಕ್ತರ ಕಾರಣವಾಗಿಯೇ ಶರಣರ ಸ್ಮಾರಕಗಳು ಹೀಗೆ ನಿರ್ಲಕ್ಷ್ಯಕ್ಕೆ ಒಳಗಾಗಿವೆ.
ಇತರೆ ಕ್ಷೇತ್ರಗಳು:
ಬೈಲಹೊಂಗಲ ತಾಲೂಕಿನ ಮೂಗಬಸವ ಗ್ರಾಮದಲ್ಲಿ ಶರಣರ ಕುರುಹುಗಳಿವೆ ಎಂದು ಹೇಳಲಾಗುತ್ತಿದೆ. ತುರಮರಿ ಗ್ರಾಮದಲ್ಲಿ ಚೆನ್ನಬಸವೇಶ್ವರನು ತಂಗಿದನೆಂದು ಹೇಳುವ ದಿನ್ನೆ, ಗುಡಿ ಇವೆ. ಕಿತ್ತೂರು ಸಮೀಪ “ರಣಗಟ್ಟಿ” ಎಂಬ ಹೆಸರು ಯುದ್ಧದ್ಯೋತಕವೆಂದು ಜನಗಳ ನಂಬಿಕೆ. ಅಳ್ನಾವರ ಸಮೀಪವಿರುವ ಖಾನಾಪೂರ ತಾಲೂಕಿನ ಲಿಂಗನಮಠದಲ್ಲಿಯೂ ಶರಣರ ಕುರುಹುಗಳಿವೆ. ಹೀಗೆ ಬೆಳಗಾವಿ ಜಿಲ್ಲೆ ದಾಟಿ ಜಂಗಮಟ್ಟಿ, ಜಗಳಬೆಟ್ಟ, ಸಾಂಬ್ರಾಣಿ ಮೈಲಯಗೈಲ್ಲಾಪುರ ಮಾರ್ಗವಾಗಿ ಉಳವಿ ತಲುಪಿದರು ಎಂದು ವಿದ್ವಾಂಸರು ಹೇಳುತ್ತಾರೆ. ಇನ್ನೊಂದು ತಂಡ ಧಾರವಾಡ, ಹಾವೇರಿ ರಾಣೇಬೆನ್ನೂರತನಕ ಹೋಗಿ ಅಲ್ಲಿಂದ ಸತ್ತೂರು ಮಾರ್ಗವಾಗಿ ಉಳವಿ ತಲುಪಿತೆಂದು ಕೆಲವರು ಹೇಳುತ್ತಾರೆ.
ಉಳವಿ ತಲುಪಿದ ನಂತರ ಅಲ್ಲಿನ ತಂಪು ನೀರಿನ ಕಾರಣವಾಗಿ ಚೆನ್ನಬಸವಣ್ಣನವರು ಕೆಲವೇ ದಿನಗಳಲ್ಲಿ ವಿಷಮಶೀತ ಜ್ವರದಿಂದ ಬಳಲಿ ಲಿಂಗೈಕ್ಯರಾದರು. ಇಲ್ಲಿಗೆ ಶರಣರ ಹೋರಾಟ ಒಂದು ಅಂತಿಮ ಘಟ್ಟ ತಲುಪಿತು. ಹೀಗೆ ಬೆಳಗಾವಿ ಜಿಲ್ಲೆಯ ಅನೇಕ ಗ್ರಾಮಗಳು ಶರಣರ ಹೆಜ್ಜೆಗುರುತುಗಳನ್ನು ಇಂದಿಗೂ ಕಾಪಾಡಿಕೊಂಡು ಬಂದಿವೆ.
ಆಧುನಿಕ ಯುಗ
ಬೆಳಗಾವಿ ಜಿಲ್ಲೆಯಲ್ಲಿ ಶರಣರ ವಾರಸುದಾರಿಕೆಯನ್ನು ಮುಂದುವರಿಸುವ ಆಧುನಿಕ ಶರಣ ಪರಂಪರೆ ಇಂದಿಗೂ ಬೆಳಗುತ್ತ ಬಂದಿರುವುದು ಅಭಿಮಾನದ ಹೆಮ್ಮೆಯ ಸಂಗತಿಯಾಗಿದೆ. 16 ನೇ ಶತಮಾನದಲ್ಲಿ ತೋಂಟದ ಸಿದ್ಧಲಿಂಗೇಶ್ವರ ನೇತೃತ್ವದಲ್ಲಿ ವಿರಕ್ತರ ಗುಂಪು ಐದು ವಿಭಾಗವಾದವು. ಮುರುಘಾ ಸಮಯ, ಚೀಲಾಳ ಸಮಯ, ಕೆಂಪಿನ ಸಮಯ, ಕುಮಾರ ಸಮಯ, ಮತ್ತು ಸಂಪಾದನಾ ಸಮಯ ಎಂದು ಐದು ಭಾಗಗಳಲ್ಲಿ ಕವಲೊಡೆದವು. ಬೆಳಗಾವಿ ಜಿಲ್ಲೆಯ ವಂಟಮುರಿಯಲ್ಲಿ ಸಂಪಾದನಾ ಮಠವೊಂದು ಪ್ರಸಿದ್ಧವಾಗಿತ್ತು. ಇದೇ ಸಂಪಾದನ ಸಮಯದ ಮೂಲವೆಂದು ಕೆಲವು ವಿದ್ವಾಂಸರು ಗುರುತಿಸುತ್ತಾರೆ. ಚಿಕ್ಕೋಡಿ ಸಂಪಾದನಾ ಮಠ, ಗೋಕಾಕದ ಶೂನ್ಯಸಂಪಾದನಾ ಮಠಗಳು ಇದಕ್ಕೆ ಇನ್ನಷ್ಟು ಪುಷ್ಟಿಯನ್ನೊದಗಿಸುತ್ತವೆ.
ನಿಡಸೋಸಿ-ಅರಭಾವಿ ದುರದುಂಡೀಶ್ವರರು, ಅಥಣಿ ಶಿವಯೋಗಿಗಳು, ನಾಗನೂರು ರುದ್ರಾಕ್ಷಿಮಠದ ಪೂಜ್ಯ ಡಾ. ಶಿವಬಸವ ಶಿವಯೋಗಿಗಳು ಮೊದಲಾದ ಅನೇಕ ಯೋಗಿಗಳು-ಅನುಭಾವಿಗಳು ಈ ಶರಣಪರಂಪರೆಯನ್ನು ಮುನ್ನಡೆಸಿಕೊಂಡು ಬಂದಿದ್ದಾರೆ.
ಶ್ರೀ. ಪ್ರಕಾಶ ಗಿರಿಮಲ್ಲನವರ
ಐ. ಟಿ. ಐ ಕಾಲೇಜು,
ಶಿವಬಸವ ನಗರ,
ಬೆಳಗಾವಿ – 590 010.
ಮೊಬೈಲ್. ಸಂ. 99021 30041.
ನನ್ನ ನಮನಗಳು:
ನನ್ನ ಈ ಲೇಖನ “ಬೆಳಗಾವಿ ಜಿಲ್ಲೆಯಲ್ಲಿ ಚನ್ನಬಸವಣ್ಣನವರ ಹೆಜ್ಜೆ ಗುರುತುಗಳು” ಎಂಬ ಬರಹಕ್ಕೆ ಬಹಳ ಜನ ವಿದ್ವಾಂಸರು ಫೋನ್ ಮಾಡಿ ಕೆಲವು ಅಂಶಗಳತ್ತ ನನ್ನ ಗಮನ ಸೆಳೆದರು. ಹಿರಿಯ ವಿದ್ವಾಂಸರಾದ ಡಾ. ಎ. ಬಿ. ಘಾಟಗೆ ಅವರು ರಾಯಬಾಗದಲ್ಲಿಯೂ ಒಂದು ಬಂಕನಾಥನ ದೇವಸ್ಥಾನವಿದೆ ಎಂಬುದರತ್ತ ನನ್ನ ಗಮನ ಸೆಳೆದರು. ಖಿದ್ರಾಪುರದ ಕೋಪನಾಥ, ಬಾಗಿಯ (ರಾಯಬಾಗ) ಬಂಕನಾಥ, ಸಂಕೇಶ್ವರದ ಸಂಕನಾಥ (ಶಂಕರಲಿಂಗ) ಹೀಗೆ ಈ ಮೂರು ದೇವಸ್ಥಾನಗಳ ಬಗ್ಗೆ ಅರವತ್ತು ವರ್ಷಗಳ ಹಿಂದೆ ಜನ ಹೇಳುತ್ತಿದ್ದರು. ಬಂಕನಾಥ ಎಂಬ ವಚನಕಾರನಾಗಿರುವುದು ವಿಶೇಷ. ಲಿಂಗಾಯತ ಧರ್ಮಕ್ಕೂ ನಾಥ ಸಂಪ್ರದಾಯಕ್ಕೂ ನಿಕಟವಾದ ಸಂಬಂಧವಿರುವುದನ್ನು ಇವು ತಿಳಿಸುತ್ತಿರಬಹುದು ಎಂಬ ಸಂಗತಿಯನ್ನು ತಿಳಿಸಿದರು. ಹಿರಿಯ ವಿದ್ವಾಂಸರಾದ ಡಾ. ಸಿ. ಕೆ. ನಾವಲಗಿ ಅವರು ಹಿರೇನಂದಿಹಳ್ಳಿ/ಚಿಕ್ಕನಂದಿಹಳ್ಳಿಯಲ್ಲಿರುವುದು ಚನ್ನಬಸವಣ್ಣನವರ ದೇವಸ್ಥಾನವೇ, ಬಸರಕೂಡದಲ್ಲಿರುವುದು ಕೂಗು ಬಸವನ ದೇವಸ್ಥಾನವಲ್ಲ ಎಂದು ತಿಳಿಸಿದರು. ಶ್ರೀ ಮೃತ್ಯುಂಜಯ ಸ್ವಾಮಿಗಳು ಗಂದಿಗವಾಡ ಅವರು ಇನ್ನೂ ಕೆಲವು ಊರುಗಳಲ್ಲಿ ಶರಣರ ಹೆಜ್ಜೆಗುರುತುಗಳನ್ನು ಇಂದಿಗೂ ಜನರು ಗುರುತಿಸುತ್ತಾರೆ ಎಂದರು. ನಂದಗಡ ಸಮೀಪದ ಗುಡ್ಡದಲ್ಲಿ ಮಾಚಿಗಡ ಇದೆ. ಇಲ್ಲಿ ಮಡಿವಾಳ ಮಾಚಿದೇವರು ಬಂದು ಹೋಗಿದ್ದಾರೆಂಬ ಪ್ರತೀತಿ ಇದೆ ಎಂದು ತಿಳಿಸಿದರು. ಮುರಕಿಬಾವಿಯಲ್ಲಿರುವುದು ಬಸವಣ್ಣನವರ ಧರ್ಮಪತ್ನಿ ನೀಲಮ್ಮನವರ ದೇವಸ್ಥಾನವಲ್ಲ; 18 ನೇ ಶತಮಾನದಲ್ಲಿ ಆಗಿ ಹೋದ ಶರಣೆ ಸಾಧ್ವಿ ಶಿರೋಮಣಿಯವರ ಗುಡಿ ಅದು. ಏಕೆಂದರೆ ಕಲ್ಯಾಣ ಕ್ರಾಂತಿ ಸಂದರ್ಭದಲ್ಲಿ ಬಸವಣ್ಣನವರೇ ಕರೆದಾಗ ಬರಲಾರದ ನೀಲಮ್ಮ ತಾಯಿ ಇಲ್ಲಿಗೆ ಹೇಗೆ ಬರಲು ಸಾಧ್ಯ? ಎಂಬ ತಾರ್ಕಿಕ ಪ್ರಶ್ನೆ ಮೂಡುತ್ತದೆ. ಹಾಗೆಯೇ ಇಟಗಿಯಲ್ಲಿರುವ ಕಲ್ಯಾಣಮ್ಮನವರ ದೇವಸ್ಥಾನವು ಸಂದೇಹಕ್ಕೆ ಎಡೆ ಮಾಡಿಕೊಡುತ್ತದೆ. ಬಿಜ್ಜಳನ ಸೈನಿಕರ ಆನೆಯ ತುಳಿತಕ್ಕೆ ಸಿಕ್ಕು ಲಿಂಗೈಕ್ಯರಾದ ಕಲ್ಯಾಣಮ್ಮನವರು ಇಲ್ಲಿಗೆ ಹೇಗೆ ಬಂದರು? ಎಂಬ ಪ್ರಶ್ನೆ ಕಾಡುತ್ತದೆ. ಅಥವಾ ಕಲ್ಯಾಣಮ್ಮ ಎನ್ನುವ ಇನ್ನೊಬ್ಬ ಶರಣೆ ಇದ್ದಿರಬಹುದೇ? ಎಂಬುದು ಒಂದು ಸಂದೇಹ. ಹಿರಿಯ ವಿದ್ವಾಂಸರಾದ ರಂಜಾನ್ ದರ್ಗಾ ಅವರು ಬಸವಣ್ಣನವರು ಕಲ್ಯಾಣದಿಂದ ಮೊದಲೇ ಪಲಾಯನ ಮಾಡಲಿಲ್ಲ, ಅವರನ್ನು ಗಡಿಪಾರು ಮಾಡಿದ್ದರು ಎಂಬುದರತ್ತ ನನ್ನ ಗಮನ ಸೆಳೆದಿದ್ದಾರೆ. ಶ್ರೀ ಆರ್. ಎಸ್. ಚಾಪಗಾವಿ ಅವರು ಫೋನ್ ಮಾಡಿ, ಬಸವನ ಕುಡಚಿಯಲ್ಲಿ ಚನ್ನಬಸವಣ್ಣನವರು ಬಂದ ದಾಖಲೆಗಳಿವೆ ಎಂದು ತಿಳಿಸಿದರು. ಬಿಜ್ಜಳನ ಸೈನಿಕರು ಚನ್ನಬಸವಣ್ಣನವರನ್ನು ಹುಡುಕುವ ಸಂದರ್ಭದಲ್ಲಿ ಅವರನ್ನು ಕುಡಚಿಯ ಮಹಡಿಯೊಂದರಲ್ಲಿ ಜನರೆಲ್ಲ ಕೂಡಿ ರಕ್ಷಿಸಿದರು ಎಂದು ಜನರ ಅಭಿಪ್ರಾಯ ಇರುವುದಾಗಿ ತಿಳಿಸಿದರು. ಈ ಎಲ್ಲ ಹಿರಿಯರು ನನ್ನ ಜ್ಞಾನದ ಕ್ಷಿತಿಜವನ್ನು ವಿಸ್ತರಿಸಿದ್ದಾರೆ. ಅವರಿಗೆ ಅನಂತ ಶರಣುಗಳು.
ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in