
ಆಯ್ದಕ್ಕಿ ಲಕ್ಕಮ್ಮ ಕಾಯಕದ ಗಣಿಯಮ್ಮ
ಗಂಡಗ ಬುದ್ಧಿ ಕಲಿಸ್ಯಾಳ ಲಕ್ಕಮ್ಮ
ತಂದಕ್ಕಿ ಹಿಂದಕ್ಕ ಕಳುವ್ಯಾಳ
ಕಾಯಕ ಎಂದ ಕೂಡಲೇ ನೆನಪಾಗುವ ಹೆಸರು ಆಯ್ದಕ್ಕಿ ಲಕ್ಕಮ್ಮನವರದು. ಸತಿ-ಪತಿ ಇಬ್ಬರೂ ಬಸವಣ್ಣನವರ ಕಾಯಕ ತತ್ವಕ್ಕೆ ವ್ಯಾಖ್ಯಾನರಾಗಿದ್ದಾರೆ. ಕಾಯಕ ಹೇಗೆ ಮಾಡಬೇನ್ನುವುದನ್ನು ತೋರಿಸಿ ಕೊಟ್ಟು ಅದರಿಂದ ಅರಿವು, ಧೈರ್ಯ, ಸಮಾನತೆ, ಲಿಂಗಾಂಗ ಸಾಮರಸ್ಯ ಮುಂತಾದ ಮಹಾನ್ ಗುಣಗಳನ್ನು ಅಳವಡಿಸಿಕೊಂಡು ಅದರಿಂದ ಬಡತನವನ್ನು ಗೆದ್ದು, ಶಾಂತಿ-ಸಮಾಧಾನದಿಂದ ಬಾಳಬಹುದು ಎಂಬುದನ್ನು ತೋರಿಸಿಕೊಟ್ಟ ದಂಪತಿಗಳು ಆಯ್ದಕ್ಕಿ ಲಕ್ಕಮ್ಮ ಮತ್ತು ಮಾರಯ್ಯ ಶರಣರು. ಜನಪದರೂ ಕೂಡ ಇವರ ಕಾಯಕದ ಮಹಿಮೆಯನ್ನು ಅದ್ಭುತವಾಗಿ ಚಿತ್ರಿಸುತ್ತಾರೆ.
ಮಾರಯ್ಯನ ಮಡದಿಯು ನಾರಿತಾ ಲಕ್ಕಮ್ಮ
ನಾರಿಯಾ ಬಳಗಕ್ಕೆ ಗುರುವಾಗಿ ಕಲಿಸ್ಯಾಳ
ಮರತ್ಯವು ಹ್ಯಾಂಗ ಗೆದಿಬೇಕು.
ಸತಿಪತಿ ತಾಕೂಡಿ ಜೋಡಿ ಸಂಸಾರ ಮಾಡಿ
ಹಾಡ್ಯಾಡಿ ಕಣವ ತುಳದಾರ ಖಣದಾನ
ದಾಣಿಯು ಆರಿಸಿ ತರತ್ತಾರೆ.
ಮಾರಯ್ಯ ಮತ್ತು ಲಕ್ಕಮ್ಮ ತಾಯಿಯವರದು ಆದರ್ಶ ಬಾಳು. ಬದುಕಿಗೆ ಕೇವಲ ಮುತ್ತು, ರತ್ನ, ಬಂಗಾರದಿಂದ ಮಾತ್ರ ಸುಖ ದೊರೆಯುವದಿಲ್ಲ. ಅವು ಬಾಹ್ಯದ ಸುಖ. ಅಂತರಂಗಕ್ಕೆ ಪ್ರೀತಿ, ನಿಷ್ಠೆ ಬಹಳ ಮುಖ್ಯವಾದಂತಹವುಗಳು. ಅಂತಹ ಪ್ರೀತಿಯಿಂದ ಬದುಕು ಸಾಗಿಸಿದ್ದ ದಂಪತಿಗಳು. ಈ ದಂಪತಿಗಳು ಸುಖ – ಸಂತೋಷದಿಂದ ಬಾಳಿದವರು. ಖಣದೊಳಗಿನ ದಾಣಿಯಿಂದ ಬಾಳಿ.
ಖಣದಾನ ದಾಣಿಯು ಕುಣಿಕುಣಿದು ತಾ ಒಯ್ದು
ಖುಸಿಯಿಂದ ದಾಸೋಹ ಮಾಡ್ಯಾರ ಇಬ್ಬರಿಗಿ
ದಣಿವೆಂಬುದು ಒಳಗ ಜರಾಯಿಲ್ಲ”
ಖಣದಲ್ಲಿ ಎಷ್ಟು ಧಾನ್ಯ ಸಿಕ್ಕಿರಬಹುದು ಈ ದಂಪತಿಗಳಿಗೆ. ಒಂದು ಚೀಲವಲ್ಲ ಎರಡು ಚೀಲವಲ್ಲ. ಸಿಕ್ಕಿದುದರಲ್ಲಿ ಅವರು ಮಾಡಿದ್ದು ದಾಸೋಹ, ಮತ್ತೊಬ್ಬರಿಗೆ ಕೊಟ್ಟು ಉಣ್ಣಬೇಕು ಎನ್ನುವ ಸಂಸ್ಕೃತಿ ಬೆಳೆಯಿಸಿಕೊಂಡವರು. ಮೊದಲಿನಿಂದಲೂ
ಇದ್ದದ್ದು ಕೊಡುತಾರ ಇದ್ದದ್ದು ಉಣ್ಣುತ್ತಾರ
ಸದ್ದಿಲ್ಲದೆ ಶಿವಗ ನೆನಿತಾರ ಇಬ್ಬರೂ
ಸುದ್ದುಳ್ಳ ಬದುಕು ನಡಿಸ್ಯಾರ
ತಾವೊಂದು ಸ್ವೀಕರಿಸಿ ದಾಸೋಹಕ್ಕೆ ಇನ್ನೊಂದು ಕೊಡದೆ ತಾವು ಯಾವುದನ್ನು ಸ್ವೀಕರಿಸಿದರೆ ದಾಸೋಹಕ್ಕೂ ಅದನ್ನೆ ಮಾಡಿದವರು. ಹೀಗಾಗಿ ಅವರ ಜೀವನ ಅತೀ ಶುದ್ಧವಾಗಿತ್ತು. ಶುದ್ಧತನು – ಶುದ್ಧಮನ, ಇರುವಲ್ಲಿಯೇ ಪರಶಿವನ ವಾಸ ಹೊರತು ಬಹಳ ಭವ್ಯ ಮನೆಯಿದ್ದರೂ ಅಲ್ಲಿ ಇವೆರಡು ಇರದಿದ್ದರೆ ಅದು ಹೀಗಾಗಿ ಅವರ ನೆಲೆ ಶಿವ ನೆಲೆಯಾಗಿತ್ತು ಎನ್ನುತ್ತಾರೆ ಜನಪದರು.
ಹೀಗೆ ತಮ್ಮ ಕಾಯಕ ಮತ್ತು ದಾಸೋಹಗಳಲ್ಲಿ ಮಗ್ನರಾಗಿದ್ದ ಈ ಶರಣ ದಂಪತಿಗಳ ಕಿವಿ ಮೇಲೆ ಬಸವಣ್ಣನವರ ನಾಮ ಬೀಳುತ್ತದೆ. ಅವರ ತತ್ವಗಳನ್ನು ಕೇಳುತ್ತಾರೆ ತಡಮಾಡಲಿಲ್ಲ ಕಲ್ಯಾಣದತ್ತ ಹೊರಡುತ್ತಾರೆ.
ಬಸವನ ನಾಮವು ಹಸನಾಗಿ ಜಪಿಸ್ಯಾರ
ಹುಟ್ಟೂರು ಬಿಟ್ಟು ನಡದಾರ ಕಲ್ಯಾಣದ
ಹಸನಾದಿ ಹಾದಿ ತುಳದಾರ
ಹಸನಾದ ಹಾದಿಯನ್ನು ತುಳಿಯುತ್ತಾ ಬಾಳು ಹಸನ ಮಾಡಿಕೊಳ್ಳಲು ಹಸನಾದ ನೆಲೆಗೆ ಬರುತ್ತಾರೆ. ನೋಡುತ್ತಾರೆ ಎಲ್ಲೆಲ್ಲೂ ಕಾಯಕ ಜೀವಿಗಳೆ.ದಾಸೋಹ ಧರ್ಮಿ ಎಲ್ಲರ ಮುಖದಲ್ಲೂ ಸಂತೋಷ, ಆನಂದ ಬಾಯಲ್ಲಿ ಶರಣಾರ್ಥಿ. ಅವರನ್ನು ನೋಡಿದರೆ ಸಾಕು ಎಂತಹವರ ತಲೆ ತಾನಾಗಿಯೇ ಬಾಗುತ್ತಿತ್ತು.ಈ ದಂಪತಿಗಳನ್ನು ಕಲ್ಯಾಣದ ಹೊರವಲಯದಲ್ಲೇ ಕಂಡ ಶರಣರು ಶರಣಾರ್ಥಿ ಎಂದಾಗ ಸತಿ-ಪತಿಗಳ ಮುಖದಲ್ಲಿ ಅದೆಷ್ಟು ಆನಂದ ಗೌರವ ಪೂರ್ಣವಾಗಿ ತಾವು ಶರಣಾರ್ಥಿ ಸಲ್ಲಿಸುತ್ತಾರೆ.
ಕಲ್ಯಾಣ ಊರೊಳಗ ಕಾಲಿಟ್ಟ ಸತಿ ಪತಿ
ಕಾಣಲಾರದು ಕಂಡಾರ ಅಲ್ಲಿಯರ ನೋಡ್ಯಾರ
ಶರಣರ ಮಾರಿಯ ಖಳಿಯದುಅವರಿಗೆ ಇರ್ಯಾರು? ಇವರಿಗೆ ಅರ್ಯಾರು
ಶರಣಾರ್ಥಿ ಎಂದಾರ ಸತಿಪತಿಗಿ ಇಬ್ಬರೂ
ಬಾಗಿತಾ ಹೇಳಿ ಶರಣಾರ್ಥಿ
ಇಂತಹ ದೈವಿಕಳೆಯ ಕಲ್ಯಾಣದ ಕಣ ಕಣದಲ್ಲಿ ಕಾಣುತ್ತಾ ಅದರ ಕಾರಣ ಕರ್ತನನ್ನು ಹುಡುಕುತ್ತ ಕಲ್ಯಾಣ ಊರೊಳಗ ಬರುತ್ತಾರೆ. ನೇರವಾಗಿ ಮಹಾಮನೆಗೆ ಬರುತ್ತಾರೆ. ಅಲ್ಲಿ ಲೆಕ್ಕಿಲ್ಲದಷ್ಟು ಶರಣರು ಅರ್ಚನೆ, ಅರ್ಪಣೆಯಲ್ಲಿ ನಿರತರಾಗಿದ್ದಾರೆ. ಎಲ್ಲರೂ ವಿಭೂತಿಧಾರಣ ಮಾಡಿಕೊಂಡು ಎದೆಯ ಮೇಲೆ ಇಷ್ಟಲಿಂಗ ಧರಿಸಿದ್ದಾರೆ. ಅವರೆಲ್ಲರ ನಡುವೆ ಬಸವಣ್ಣನವರು. ಆ ಬಸವಣ್ಣನವರನ್ನು ಯಾರಿಗೆ ಹೋಲಿಸಲಿ ಎನ್ನುತ್ತಾರೆ ಜನಪದರು.
ಏನಂತ ಕರೆಯಲಿ ಯಾರಿಗೆ ಹೋಲಿಸಲಿ
ಕಣ್ಣಿಗೆ ಕಾಣುವ ದೇವರು ಬಸವಣ್ಣ
ದೊಡ್ಡವರು ಪಂಚಭೂತಕ್ಕೂ
ಕಣ್ಣಿಗೆ ಕಾಣುವ ದೇವರು ಬಸವಣ್ಣನವರು. ಕಾಣದ ದೇವರನ್ನು ಬಸವಣ್ಣನವರ ಹಾಗೆ ಇರಬಹುದು ಎನ್ನುತ್ತಾರೆ. ಆ ದೇವರು ಇಂತಹ ಗುಣ ಹೊಂದಿಲ್ಲವಾದರೆ ಆತ ದೇವರಲ್ಲ. ಆಕಾಶ ಭೂಮಿ, ನೀರು, ಗಾಳಿ, ಬೆಂಕಿ _ ಪಂಚಭೂತಗಳು ಬಸವಣ್ಣನವರಲ್ಲಿ ಅಡಗಿವೆ. ಭೂಮಿಗಿಂತ ವಿಶಾಲ ಹೃದಯ, ಆಕಾಶದಂತಹ ನಿರ್ಮಲ ಮನಸ್ಸು, ನೀರಿಗಿಂತ ತಿಳಿಯಾದ ವಿಚಾರ, ಗಾಳಿಗಿಂತ ತೀಕ್ಷ್ಣಣವಾದ ಕಾಯಕ, ಬೆಂಕಿಯಂತೆ ಸಮಾಜದ ಅನಿಷ್ಟಿತೆಗಳನ್ನೆಲ್ಲ ಸುಟ್ಟು ಹಾಕಿದವರು. ಅಂತಹ ಪಂಚಭೂತಗಳೆಲ್ಲಾ ಅವರೊಳಗೆ ಕಂಡ ಅವರು ಶರಣರ ಬಳಗ ಸಾಗರೋಪಾದಿಯಲ್ಲಿ ಕಾಣುತ್ತಿದ್ದಾರೆ ಈ ಶರಣ ದಂಪತಿಗಳಾದ ಮಾರಯ್ಯ ಮತ್ತು ಲಕ್ಕಮ್ಮರಿಗೆ.
ಅವರ ಮಹಾಮನೆಯ ಎದುರು ನಿಂತಿದ್ದಾರೆ. ಆದರೆ ಮಾರಯ್ಯ ಮಡದಿಗೆ ಒಳಗೆ ಹೋಗುವದು ಬೇಡ ಎನ್ನುತ್ತಿದ್ದಾರೆ. ಲಕ್ಕಮ್ಮ ಗಂಡನ ಮುಖನೋಡಿ ಏಕೆ ಎಂದು ಪ್ರಶ್ನಿಸುತ್ತಾಳೆ. ದೂರದಿಂದಲೇ ಕಳಾತೀತವಾದ ಈ ದೇವರು ಇಂತಹ ರೂಪದಲ್ಲಿ ಕಾಣುತ್ತಿದ್ದಾರೆ. ಅವರ ಸಮೀಪಕ್ಕೆ ಹೋದರೆ ಇನ್ನಂತಹ ರೂಪ ನೋಡಬಹುದು ನಡೆಯಿರಿ ಎನ್ನುತ್ತಾಳೆ.
ಗಂಡನ ಮುಖನೋಡಿ ಯಾಕೆಂದು ಕೇಳ್ಯಾಳ
ಗಂಡನಿಗೆ ಪ್ರಶ್ನೆ ಹಾಕ್ಯಾಳ ಲಕ್ಕಮ್ಮ
ಗಂಡನಿಗೆ ಕೈಯರ ಮುಗಿತಾಳ
ಹೆಂಡತಿಯ ಪ್ರಶ್ನೆಗೆ ತಬ್ಬಿಬ್ಬಾದರು ಶರಣ ಮಾರಯ್ಯ. ಹೆಂಡತಿಯ ಪ್ರಶ್ನೆಗೆ ಉತ್ತರ ಕೊಡುವದು ಅವರಿಗೆ ಸಾಧ್ಯವಾಗಲಿಲ್ಲ. ಮನಸ್ಸಿನ ಮಾತು ನುಡಿಯುತ್ತಾರೆ
ಕೈಯಾಕ ಮುಗಿಯುತಿ ಲಕ್ಕಮ್ಮ ನೀಹಿಂಗ
ದೊಡ್ಡವರು ಬಸವಣ್ಣ ನಮಗಿಲ್ಲಿ ಯೋಗ್ಯತೆ
ತಿಳಿದು ನೀ ನೋಡು ಲಕ್ಕಮ್ಮ ಒಳಗ್ಹೋಗಿ
ಕೇಳಿದರ ಏನು ಹೇಳತಿ.
ಒಳಗೆ ಹೋಗಲು ಸಾಧ್ಯವಿದೆಯೋ ಇಲ್ಲೊ ಅಂತಹ ಮಹಾತ್ಮನನ್ನು ನಮಸ್ಕರಿಸುವ ಯೋಗ್ಯತೆ ನಮಗಿದೆಯೋ ಇಲ್ಲೋ? ಎಂಬ ಪ್ರಶ್ನೆ ಮಾರಯ್ಯನವರನ್ನು ಕಾಡುತ್ತಿದೆ. ಆದರೆ ಲಕ್ಕಮ್ಮ ಗಂಡನ ಪ್ರಶ್ನೆಗೆ ನಗುತ್ತಾಳೆ. ಯೋಗ್ಯತೆ ಬೆಳೆಯಿಸಿಕೊಳ್ಳಲು ತಾನೇ ಇಲ್ಲಿಗೆ ಬಂದಿದ್ದೇವೆ ಎನ್ನುತ್ತಾಳೆ.
ನಾವ್ಯಾರು ಎಂಬುದು ತಿಳಿಯಲು ಬಂದಿವಿ
ತಿಳಿಬೇಕು ಅವರ ನುಡಿಯಿಂದ ಮಾರಯ್ಯ
ಬಸವನಿಗಿಂತ ಗುರುವಿಲ್ಲ
ಬಸವಣ್ಣನವರಂತಹ ಗುರು ನಮಗೆ ಎಲ್ಲಿಯೂ ಸಿಗಲೂ ಸಾಧ್ಯವಿಲ್ಲ. ಅವರ ನಡೆ-ನುಡಿಯಿಂದ ನಾವ್ಯಾರು ಎಂಬುದನ್ನು ತಿಳಿದುಕೋಳ್ಳೋಣ ನಡಿಯೆಂದು ಗಂಡನನ್ನು ಮುಂದೆ ಹಾಕಿಕೊಂಡು ಮಹಾಮನೆಯೊಳಗೆ ಕಾಲಿಡುತ್ತಾಳೆ ಲಕ್ಕಮ್ಮ.
ಬಸವಣ್ಣ ಇವರನ್ನು ನೋಡಿ ಖುದ್ದಾಗಿ ತಾವೇ ಎದ್ದು ಬರುತ್ತಾರೆ. ಇಬ್ಬರು ಕಾಲು ಬೀಳಲು ಬಂದಾಗ ಬಸವಣ್ಣ.
ದೊಡ್ಡವ ನಾನಲ್ಲ ದೊಡ್ಡತನ ಎನಗಿಲ್ಲ
ದೊಡ್ಡವರ ಒಳಗ ಸಣ್ಣವ ಶರಣರು
ದೊಡ್ಡವರು ನೋಡು ಜಗಕ್ಕೆಲ್ಲ
ನೀವು ನನ್ನನ್ನು ದೊಡ್ಡವರು ಎಂದು ತಿಳಿದರೆ ಅದು ನಿಮ್ಮ ತಪ್ಪು ಏಕೆಂದರೆ ನೀವು ತಿಳಿದಷ್ಟು ನಾನು ದೊಡ್ಡವನಲ್ಲ ದೊಡ್ಡ ಗುಣವು ಎನಗಿಲ್ಲ. ಇಲ್ಲಿ ಸೇರಿದ್ದಾರಲ್ಲಾ ಶರಣರು ಇವರೆಲ್ಲ ದೊಡ್ಡವರು. ಇವರೊಳಗೆ ನಾನೊಬ್ಬ ಅರಿಯದ ಸಣ್ಣವ ಎನ್ನುತ್ತಾರೆ ಬಸವಣ್ಣನವರು ಪ್ರಥಮದಲ್ಲಿಯೇ ಆ ದಂಪತಿಗಳಿಗೆ ತಿಳಿಸಿ ಕಲ್ಯಾಣದ ಶಿಸ್ತು ಬಿಟ್ಟರು. ಇಲ್ಲಿ ಎಲ್ಲರೂ ಸಮಾನರು, ಜಾತಿ/ಮತ/ಪಂಥ/ ಲಿಂಗ ಯಾವ ಭೇದವು ಇಲ್ಲಿಲ್ಲ. ಇದನ್ನೆಲ್ಲ ಬಿಟ್ಟವರು ದೊಡ್ಡವರೆ ಎನ್ನುತ್ತಾರೆ. ಕಾಲಿಗೆ ಬೀಳುವ ಕಾಲು ಬೀಳಿಸಿಕೊಳ್ಳುವ ಯಾವ ನಿರ್ಭಂದ ಇಲಿಲ್ಲ – ಹೀಗೆ ಒಂದೊಂದಾಗಿ ಎಲ್ಲವನ್ನು ಬಸವಣ್ಣನವರು ತಿಳಿಸುತ್ತಾ ಹೋಗುತ್ತಾರೆ.
ಬಸವಣ್ಣನವರ ಮಾತುಗಳನ್ನು ಆಲಿಸಿದ ಶರಣ ದಂಪತಿಗಳು ಒಂದೇ ನಿಮಿಷದಲ್ಲಿ ಎಲ್ಲವನ್ನು ಅರಿಯುತ್ತಾರೆ. ಮನಸ್ಸಿನ ಕೀಳು ಭಾವನೆಯನ್ನು ಬಿಡುತ್ತಾರೆ. ತಾವ್ಯಾರು? ಎಲ್ಲಿಂದ ಬಂದಿದ್ದೇವೆ? ಎಂಬುದನ್ನು ಬಸವಣ್ಣನವರಿಗೆ ತಿಳಿಸಿಕೊಡುತ್ತಾರೆ. ಬಸವಣ್ಣನವರು ಬಹಳ ಸಂತೋಷ ಪಡುತ್ತಾರಲ್ಲದೆ ತಮಗೆ ಸರಿ ಕಂಡ ಕಾಯಕ ಮಾಡಲು ತಿಳಿಸುತ್ತಾರೆ.
ಆ ದಿನ ಇಬ್ಬರೂ ಮಹಾಮನೆಯಲ್ಲಿ ಉಳಿಯುತ್ತಾರೆ. ಕಣ್ಣಿಗೆ ಕಾಣುವ ಕೆಲಸದಲ್ಲಿ ತೊಡಗುತ್ತಾರೆ. ಮಹಾಮನೆಯ ಮಹಾತಾಯಿ ನೀಲಮ್ಮನವರು ಎಲ್ಲ ಶರಣೆಯರೊಂದಿಗೆ ಕುಳಿತು ಪ್ರಸಾದ ಮಾಡುವ ಕಾಯಕದಲ್ಲಿ ಮಗ್ನರಾಗಿರುತ್ತಾರೆ. ಆ ತಾಯಿ ಸಮೀಪದಲ್ಲಿ ಕುಳಿತು ಲಕ್ಕಮ್ಮ ಅಕ್ಕಿಯನ್ನು ಹಸನು ಮಾಡುತ್ತಿರುತ್ತಾರೆ. ಇದನ್ನೆಲ್ಲ ದೂರದಿಂದಲೇ ನೋಡುತ್ತಿರುವ ನೀಲಮ್ಮ ತಾಯಿ ಬಂದ ಲಕ್ಕಮ್ಮ ಅಕ್ಕಿ ಹಸನುಮಾಡುವ ಕಾಯಕವನ್ನು ಮೆಚ್ಚಿಕೊಳ್ಳುತ್ತಾರೆ. ಲಕ್ಕಮ್ಮ ಎದ್ದು ನಿಂತು ಆ ತಾಯಿಗೆ ವಿನಯದಿಂದ ಬಾಗಿ ತಮ್ಮ ಪರಿಚಯವನ್ನು ಮಾಡಿಕೊಳ್ಳುತ್ತಾರೆ. ಸತಿಪತಿಗಳಿರ್ವರಿಗೂ ಅಕ್ಕಿ ಆಯುವ, ಹಸನು ಮಾಡುವ ಕಾಯಕವನ್ನು ಕೊಟ್ಟಾಗ ಬಹಳ ಖುಷಿಯಿಂದ ಸ್ವೀಕರಿಸಿ ಅಂದಿನಿಂದ ಆಯ್ದಕ್ಕಿ ಎಂಬ ವಿಶೇಷತೆಯಿಂದ ಪ್ರಸಿದ್ಧರಾಗುತ್ತಾರೆ.
ನೀಲಮ್ಮ ಬಂದಾಳ ಲಕ್ಕಮ್ಮಗ ನೋಡ್ಯಾಳ
ನಿಲ್ಲದೆ ಅಕ್ಕಿ ಆಯುತ್ತೆ
ಕಾಯಕದವರಿಗೆ ಬೆರಗಾಗಿ
ಸತಿ-ಪತಿ ಒಂದಾಗಿ ಮಹಾಮನೆಗೆ ಬರುವ ಗಣಂಗಳಿಗೆ ಮಾಡುವ ಪ್ರಸಾದಕ್ಕೆ ಬೇಕಾದ ದವಸ-ಧಾನ್ಯಗಳ ಹಸನು ಮಾಡುವ ಕಾಯಕದಲ್ಲಿ ವಿಶೇಷವಾಗಿ ಅಕ್ಕಿ ಆಯುವ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ.
ಲಕ್ಷದಾ ಮ್ಯಾಲ ತೊಂಭತ್ತಾರು ಸಾವಿರ
ಜಂಗಮರ ದಾಸೋಹ ನಡದಾದ ಸತಿಪತಿ
ಭಕ್ತೀಲಿ ಕಾಯಕ ಮಾಡ್ಯಾರ
ಮಹಾಮನೆಯಲ್ಲಿ ನಡೆಯುವ ದಾಸೋಹಕ್ಕೆ ಬೇಕಾದ ಅಕ್ಕಿ ಆರಿಸುವ ಕಾಯಕದೊಂದಿಗೆ ತನ್ನ ಮನೆಯಲ್ಲಿಯೂ ಕೂಡಾ ದಾಸೋಹ ಮಾಡುತ್ತಾರೆ.
ಈ ಹಿಂದೆ ಹೇಳಿದಂತೆ ಲಕ್ಕಮಳಲ್ಲಿ ಕಾಯಕ ಪ್ರಜ್ಞೆ ಅಪರಿಮಿತವಾಗಿತ್ತು. ಅದು ಎಷ್ಟು ಪ್ರಖರತೆಯಿಂದ ಕೂಡಿತ್ತೆಂದರೆ ಸ್ವಲ್ಪವೂ ಮಾಡುವ ಕಾಯಕದಲ್ಲಿ ಅಗೌರವ ತೋರುವಂತಿಲ್ಲ. ಗೌರವದಿಂದ ಜವಾಬ್ದಾರಿಯಿಂದ ದಾಸೋಹ ಮನೋಭಾವನೆಯಿಂದ ಎಲ್ಲದಕ್ಕೂ ಹೆಚ್ಚಾಗಿ ಭಕ್ತಿಯಿಂದ ಮಾಡುತ್ತಿದ್ದಳು ಕಾಯಕವನ್ನು ದೇವರೆಂದು ತಿಳಿಯಲಿಲ್ಲ. ದೇವರೆ ಕಾಯಕವೆಂದು ತಿಳಿದು ಆ ಕಾಯಕಕ್ಕೆ ಸರ್ಮಪಣಾ ಭಾವನೆಯನ್ನು ತೋರಿದ್ದಳು. ಅದೇ ಪೂಜೆಯೆಂದು ಭಾವಿಸಿದಳು.
ಅನುಭವ ಮಂಟಪದ ಅನುಭಾವಿ ತಾಕುಂತು
ಅನುಭಾವ ನಡೆಸಿ ಭಕ್ತಿಯಲಿ ಮಾರಯ್ಯ
ಅನುಭಾವದೊಳಗ ತಾಮರೆತ.
ಅನುಭವ ಮಂಟಪದ ಅನುಭಾವಿಗಳ ಮಧ್ಯೆ ಕುಳಿತು ಅದರಲ್ಲಿ ಒಂದಾದ ಮಾರಯ್ಯನವರಿಗೆ ಮಡದಿ ಮನೆ ಎನೇನು ನೆನವಿಲ್ಲ. ಇವೆಲ್ಲವುಗಳಿಗೂ ಅಧಿಕವಾದ ಮಾಡುವ ಕಾಯಕವನ್ನು ಅವರು ಮರೆತಿದ್ದಾರೆ. ಮನೆಯಲ್ಲಿ ದಾಸೋಹಕ್ಕೆ ವಿಳಂಬವಾಗುತ್ತಿದೆ. ಪತಿಯ ದಾರಿಯನ್ನೆ ಕಾಯುತ್ತಿದ್ದಾಳೆ. ಲಕ್ಕಮ್ಮ ತೋಚದೆ ಅನುಭವ ಮಂಟಪಕ್ಕೆ ಬರುತ್ತಾಳ್ಳೆ. ಅಲ್ಲಿ ನಡೆದ ಅನುಭಾವಕ್ಕೆ ಅವಳ ಮನಸ್ಸು ವಾಲಿದರೂ ಅದಕ್ಕಿಂತ ಹೆಚ್ಚಾಗಿ ಕಾಯಕ ತಪ್ಪಿದರೆ ಎನು ಮಾಡುವದು ಎಂದು ಬರೆಯುತ್ತಾ ಗಂಡನ ಹತ್ತಿರ ಬಂದು,
ಕಾಯಕ್ಕೆ ಭೂಷಣ ಕಾಯಕ ಮಾರಯ್ಯ
ಕಾಯಕ ಮರೆತು ಕುಂತಿರಿ ಗುರುಬಸವರ
ನ್ಯಾಯದ ಮಾತು ಅರಿಲಿಲ್ಲ.
ಕಾಯಕವೇ ಕೈಲಾಸ ಅಂದಾರ ಗುರುಬಸವಾ
ಕಾಯಕದಿಂದಲಿ ಇಹಪರ ಪತಿದೇವ
ಕಾಯಕಕ್ಕೆ ಹೋಗಿ ಮೊದಲರ
ಮೇಲೆ ಹೇಳಿದ ಲಕ್ಕಮ್ಮ ತಾಯಿಯ ಕಾಯಕ ಪ್ರಜ್ಞೆ ಇಲ್ಲಿ ಗುರುತಿಸಬಹುದು. ಕಾಯಕ್ಕೆ ಕಾಯಕವೇ ಭೂಷಣ, ಆ ಕಾಯಕದಿಂದಲೆ ಇಹ- ಪರಗತಿ ಅದನ್ನು ಮರೆತು ಕುಳಿತರೆ ಹೇಗೆ? ಎಂಬ ನ್ಯಾಯದ ಮಾತುಗಳನ್ನಾಡಿ ಎಚ್ಚರಿಸುತ್ತಾಳೆ. ಆಕೆಯಾಡಿದ ಮಾತುಗಳು ತಾ ಒಪ್ಪಿಕೊಂಡು ತನ್ನ ಕಾಯಕಕ್ಕೆ ನಡೆಯುತ್ತಾರೆ. “ಅವರಿಬ್ಬರಲ್ಲಿ ಭೇದಿಲ್ಲ” ಎಂಬ ಜನಪದರ ನುಡಿ ಇಲ್ಲಿ ಸತ್ಯವಾಗಿದೆ. ಪತ್ನಿಯ ಮಾತುಗಳಿಗೇನು? ಮಾಡುವನು ಎಂಬ ಕೀಳು ಬುದ್ಧಿಯ ಪತಿ ಅವರಲ್ಲಿ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಸತಿಯಾಡಿದ ಮಾತದು ಒಪ್ಪುತಾ ಮಾರಯ್ಯ
ಅವಸರದಿ ಕಾಯಕಕ್ಕೆ ಹೋಗ್ಯಾಯ ಆದಿನ
ಹೆಚ್ಚಿನ ಅಕ್ಕಿ ತಂದಾರ.
ಗಡಿಬಿಡಿಯಲ್ಲಿ ಮಾಡಿದ್ದು ಎನೇ ಇರಲಿ ಅಲ್ಲಿ ಅನಾಹುತ ತಪ್ಪಿದಲ್ಲಿ ಎಂಬುದಕ್ಕೆ ಮಾರಯ್ಯನವರ ಈ ಘಟನೆ ನಿದರ್ಶನ. ಬೇಕೆಂದು ಹೆಚ್ಚಿನ ಅಕ್ಕಿ ತರಲಿಲ್ಲ. ಗಡಿಬಿಡಿಯಲ್ಲಿ ಹೆಚ್ಚಿಗೆ ಅಕ್ಕಿ ತರುತ್ತಾರೆ. ಆದರೆ ಲಕ್ಕಮ್ಮ ಮಾಡಿದೇನು?
ಹೆಚ್ಚಕ್ಕಿ ತಂದಾನ ಮಾರಯ್ಯ ಗಡಿಬಿಡಿಲಿ
ಹಚ್ಚಿಲ್ಲಿ ಕೈಯು ಲಕ್ಕಮ್ಮ ಗಂಡನಿಗೆ
ಹುಚ್ಚಾಗಿ ಯಾಕ ಅನುತಾಳ
ಹುಚ್ಚಾಸಿ ನಿಮಗ ಯಾಕಬಂತು ಮಾರಯ್ಯ
ಹುಚ್ಚಂತ ಮನಕ ಕಡಿವಾಣ? ಹಾಕದಿರಿ
ಮೆಚ್ಚನು ಗುರುಬಸವ ನಮಗರ
ಆಕೆಯ ಈ ಕಾಯಕದ ಪ್ರಜ್ಞೆ ಇಂದು ಎಲ್ಲರೂ ಗಮನಿಸಬೇಕಾದದು. ಈ ಜ್ಞಾನ ನಮ್ಮೊಳಗೆ ಇದ್ದಾಗ ಮಾತ್ರ ದೇಹ, ಮನಸ್ಸು ದೇಶ ಎಲ್ಲವೂ ಸರಿಯಾಗಿರುತ್ತವೆ. ಹುಚ್ಚಾಸೆಯಿಂದ ಮಾಡಿದೆಯಾದರೆ ಸಮಾಜ ಭಿನ್ನವಾಗಿ ಬಡವ ಶ್ರೀಮಂತ ಎಂಬ ಭೇದ ಬಂದು ಸಮಾಜದಲ್ಲಿ ಅಶಾಂತಿ ಉಂಟಾಗುತ್ತದೆ. ಈ ದೂರದೃಷ್ಟಿಯುಳ್ಳ ಅವಳು ಶರಣೆ ಲಕ್ಕಮ್ಮ ಅಂತೆಯೇ ಆ ತಾಯಿ ಗಂಡ ತಂದ ಅಕ್ಕಿಗೆ ಕೈ ಹಚ್ಚಲಿಲ್ಲ. ಕೈ ಹಚ್ಚಿದರೆ ಗುರುಬಸವ ನಮ್ಮನ್ನು ಮೆಚ್ಚುವದಿಲ್ಲವೆಂಬುದು ಆ ತಾಯಿ ಅರಿತಿದ್ದಾಳೆ. ಅಂತೆಯೇ ಪತಿಗೆ ಎಚ್ಚರಿಸುತ್ತಾಳೆ.
ಕಾಯಕ ಒಳಗಿನ ಮಾಯವು ಮರೆತಿಲ್ಲ
ಕಾಯಕವು ಮರುತಿ ಅದರಾಗ ಮಾರಯ್ಯ
ಒಯ್ದು ನೀವು ಸುರಿ ಅಕ್ಕಿ
ಅಷ್ಟೆ ಅಲ್ಲ ಮುಂದುವರೆದು
ಆಶೆಯು ರಾಜಾಗ ರೋಷವು ಯಮರಾಯಗ
ಆಶೆಯು ಯಾಕ ಶರಣರಿಗಿ? ಈ ಮಾತು
ಸೋಸಿನೀ ನೋಡು ಮಾರಯ್ಯದ್ಯಾಹವು ಒಂದಾದ ಮನ ಒಳಗ ಎರಡದ
ಮಹಾದೇವ ಹ್ಯಾಂಗ ಒಲದಾನು? ಪತಿರಾಯ
ಮೋಯವು ಯಾಕ ಅಕ್ಕಿಯದು
ಹಿಡಿ ಅಕ್ಕಿ ಹೆಚ್ಚು ತಂದಿದ್ದಕ್ಕೆ ಕಿಡಿ ಕಾರುತ್ತಿದ್ದಾಳೆ ಲಕ್ಕಮ್ಮ. ಅನುಭಾವಿಯಾದ ಮಾರಯ್ಯನವರಿಗೆ ಇದೆಲ್ಲ ತಿಳಿದದ್ದೆ. ಆದರೆ ಗಡಿಬಿಡಿ ಅವರನ್ನು ಹೀಗೆ ಮಾಡಿಸಿದೆ. ತಪ್ಪು ತನ್ನದಾಗಿರುವಾಗ ಸತಿ ಆಡಿದರೇನು? ಇನ್ನೊಬ್ಬರಾಡಿದರೇನು? ಒಪ್ಪಿಕೊಳ್ಳಬೇಕಲ್ಲವೆ? ಒಪ್ಪಿಕೊಳ್ಳುತ್ತಾರೆ ಮಾರಯ್ಯ ಸತಿ ಹೇಳಿದಂತೆ ಮಹಾಮನೆಗೆ ವಾಪಸ್ಸು ತರುತ್ತಾರೆ. ಬಸವಣ್ಣನವರು ಈ ಸೂಕ್ಷ್ಮತೆಯನ್ನು ಗಮನಿಸಿದ್ದಾರೆ. ಮಾರಯ್ಯನವರಿಗೆ ಕೇಳುತ್ತಾರೆ.
ಬಿಚ್ಚಿ ಬಿಚ್ಚಿ ಹೇಳ್ಯಾರ ಮಡದಿಯ ಮಾತೆಲ್ಲ
ಬೆಚ್ಚಿಬಿದ್ದಾರ ಬಸವಣ್ಣ ಶರಣರ
ಹೆಚ್ಚಿನ ಮಾತಿಗೆ ಶರಣಾಗಿನನಗಿಂತ
ಹೆಚ್ಚಾರ ನನ್ನಯ ಶರಣರು
ನಾನಿಲ್ಲ ದೊಡ್ಡವ ಅವರ್ಮುಂದ ನಿಂತಲ್ಲಿ
ಲಕ್ಕಮ್ಮಗೆ ಕೈಯ ಮುಗಿದಾರೆ
ಮಾರಯ್ಯನವರ ಮಾತು ಕೇಳಿ ಬಸವಣ್ಣನವರು ಆಶ್ವರ್ಯ ಪಡುತ್ತಾರೆ. ನಿಂತಲ್ಲಿಯೇ ಲಕ್ಕಮ್ಮ ತಾಯಿಗೆ ಕೈ ಮುಗಿಯುತ್ತಾರೆ. ಶರಣರು ಸಾಮಾನ್ಯರಲ್ಲ ಎಂದು ಅಂದುಕೊಳ್ಳುತ್ತಾರೆ. ಅವರ ಮನೆಗೆ ಅವರು ಮಾಡುವ ದಾಸೋಹ ಪರಿಯನ್ನು ನೋಡಿ ಬರಬೇಕು ಎಂದು ಮನದಲ್ಲಿ ಆಡಿಕೊಂಡಿದ್ದು ಲಕ್ಕಮ್ಮ ತಾಯಿಗೆ ತಿಳಿತೋ ಎನ್ನುವಂತೆ ಒಂದು ದಿನ:
ನುಡಿತಾಳ ಲಕ್ಕಮ್ಮ ತನ್ನ ಪತಿ ಮಾರಯ್ಯಗ
ಕೊಡಬೇಕು ಬಿನ್ನ ಶರಣರಿಗಿ? ದಾಸೋಹ
ಮಾಡಬೇಕು ಭಕ್ತಿ ಭಾವದಲಿ
ಗುರುಬಸವರಾಜರಿಗೆ ಬಿನ್ನವ ಮಾಡಬೇಕು
ಶರಣರ ಗೂಡ ತಾ ಬಂದು ಪಡೆದರ
ಸಾರ್ಥಕವು ನಮ್ಮ ಕಾಯಕ
ಪತಿಗೆ ತನ್ನ ಮನದ ಇಂಗಿತವನ್ನು ತಿಳಿಸುತ್ತಾಳೆ. ಬಸವಾದಿ ಪ್ರಮಥರಿಗೆ ದಾಸೋಹ ಮಾಡಬೇಕು. ಅವರಿಗೆ ಬಿನ್ನ ಕೊಟ್ಟು ಬನ್ನಿ ಎನ್ನುತ್ತಾಳೆ. ನಮ್ಮ ಕಾಯಕ ಅರ್ಥಪೂರ್ಣ ಆಗಬೇಕಾದರೆ ಶರಣರು ನಮ್ಮ ಮನೆಗೆ ಬಂದು ಪ್ರಸಾದ ಮಾಡಬೇಕು ಎಂಬ ಅಭಿಲಾಶೆ ಲಕ್ಕಮ್ಮನವರದು.
ಗುರು ಬಸವಗ ಕರಿಬೇಕು ಮನೆಗರ
ಅರತಿಲಿ ದಾಸೋಹ ಮಾಡಬೇಕು
ಶರಣರ ಬಳಗಕ್ಕ ಭಿನ್ನವು ಮಾಡಬೇಕು
ಅರತಿಲಿ ದಾಸೋಹ ಮಾಡಬೇಕು
ಮಡದಿಯ ಮಾತಿಗೆ ಮತ್ತೇ ಮಾರಯ್ಯನವರು ಗಾಬರಿಗೊಳ್ಳುತ್ತಾರೆ. ಶರಣರೆಂದರೆ ಸಾಮಾನ್ಯರಲ್ಲ. ಅವರಿಗೆ ಪ್ರಸಾದ ಮಾಡುವದು ನಮ್ಮಂತಹವರಿಗೆ ಸಾಧ್ಯವಿಲ್ಲ ಹೇಗೆ ಮಾಡಬೇಕು ಎನ್ನುತ್ತಾರೆ. ಅದಕ್ಕೆ ಲಕ್ಕಮ್ಮ.
ಗುರುಬಸವ ಕೊಟ್ಟ ಕಾಯಕವು ಇರುವಾಗ
ಚಿಂತಿಯ ಮಾತು ನಮಗ್ಯಾಕ ಪತಿರಾಯ
ಕಾಯಕವೆ ದಾಸೋಹ ನಡೆಸ್ಯಾತು
ಕಾಯಕವೇ ದಾಸೋಹ ನಡೆಸ್ಯಾತು ಮಾರಯ್ಯ
ಮನಶುದ್ಧವಿಟ್ಟು ಮಾಡರಿ ಚಿಂತೆಯು
ಗುರುಬಸವನ ಮ್ಯಾಲ ಬಿಡಬೇಕು
ಗುರುಬಸವಣ್ಣ ಕೊಟ್ಟ ಕಾಯಕವು ಇರುವಾಗ ಚಿಂತೆಯ ಮಾತಿಲ್ಲ. ಮನಶುದ್ಧವುಳ್ಳ ಕಾಯಕವು ತಾನೇ ದಾಸೋಹ ನಡೆಸುತ್ತದೆ. ಅದರ ಚಿಂತೆ ಬಸವಣ್ಣನವರಿಗೆ ನಮಗ್ಯಾಕೆ? ಎಂಬುದು ಲಕ್ಕಮ್ಮನವರ ವಾದ. ಇದು ಆಕೆಯ ವಿಶ್ವಾಸದ ಕಾಯಕ ಒಂದೆಡೆ ಇನ್ನೊಂದು ಬಸವಣ್ಣನವರ ಹರಕೆ ಈ ಎರಡು ಇರುವಾಗ ಯಾರೂ ಯಾರಿಗೂ ಹೆದರಬೇಕಿಲ್ಲ ಧೈರ್ಯಗೆಡಬೇಕಿಲ್ಲ. ಎಲ್ಲವೂ ಸರಳವಾಗಿ ನಡೆದು ಹೋಗುತ್ತದೆಂಬುದು ಲಕ್ಕಮ್ಮ ತಾಯಿಯವರ ನಂಬಿಕೆ.
ಈ ನಂಬಿಕೆ ಹುಸಿಯಾಗಬಹುದೆ? ಇಲ್ಲ ಏಕೆಂದರೆ ಶ್ರದ್ಧೆ ನಿಷ್ಠೆಗಳಿಂದ ಕಾಯಕ ಮಾಡಿಯೇ ಶರಣರು ಕೈಲಾಸ ಕಂಡವರು. ಅವರ ಕಾಯ ಪ್ರಸಾದ ಕಾಯವಾದದ್ದೆ ಈ ಕಾಯಕದಿಂದ. ತನುವಿನಲ್ಲಿ ಶ್ರದ್ಧೆ, ಮನಸ್ಸಿನಲ್ಲಿ ನಿಷ್ಕೆಲ್ಮಶತೆ ಇರಿಸಿ ಕಾಯಕ ಮಾಡಿದ್ದರಿಂದಲೇ ಲಕ್ಕಮ್ಮ ತಾಯಿಯಂತವರಿಗೆ ಇಂತಹ ಧೈರ್ಯ ಬರಲು ಸಾಧ್ಯವಾಗಿದೆ.
ಮಾರಯ್ಯನವರು ಹೋಗಿ ಬಸವಣ್ಣನವರಿಗೆ ಬಿನ್ನ ಕೊಡುತ್ತಾರೆ. ಉಳಿದ ಶರಣರಿಗೂ ಪ್ರಸಾದಕ್ಕೆ ತನ್ನ ಮನೆಗೆ ಆಹ್ವಾನಿಸುತ್ತಾರೆ. ಆದಿನ ಲಕ್ಕಮ್ಮಳು
ದಂಡೀಗೆ ಕರಿತಾಳ ಛಳಿತಾನು ಹೊಡಿತಾಳ
ಹಿಡಿ ಅಕ್ಕಿಲಿ ಅನ್ನ ಜಾನ್ಯಾಳ ಲಕ್ಕಮ್ಮ
ದಂಡಿಗಿ ದಾಸೋಹ ನಡಿಸ್ಯಾಳ
ಬಸವನ ಗಣಂಗಳು ಪ್ರಸಾದ ಮಾಡ್ಯಾರ
ಬಸವಣ್ಣ ಬಗ್ಗಿ ನೋಡ್ಯಾರ? ಗಡಿಗ್ಯಾಗ
ಬಸಿದ್ಹಂತ ಅನ್ನ ಹಂಗೇದ
ಶರಣರು ಕಾಯಕದಲ್ಲಿ ತಮ್ಮ ಭಕ್ತಿ ಎಷ್ಟರ ಮಟ್ಟಿಗೆ ಗಟ್ಟಿಗೊಳಿಸಿಕೊಂಡರೆಂಬ ಸ್ಪಷ್ಟ ಅರ್ಥ ಪಡೆದುಕೊಂಡಿದ್ದಾರೆ. ಬಸವಣ್ಣನವರು ಆ ಶರಣರ ನಿಲುವಿಗೆ ಬಾಗಿದ್ದಾರೆ.
ಲಕ್ಕಮನ ನಿಲುವಿಗೆ ಬಾಗ್ಯಾರ ಬಸವಣ್ಣ
ಲಕ್ಕಮಗ ಹರಕಿ ಕೊಡುತಾರ ನನ್ನವ್ವ
ಕಲಿಬೇಕು ಕಾಯಕ ನಿನ್ನಿಂದ
ಕಾಯಕವು ಕಲಿಸಿದ ತಾಯಿನೀ ಲಕ್ಕಮ್ಮ
ಕಾಯಕದ ಲಕ್ಷ್ಮೀ ನೀನವ್ವ? ಎನುತಲಿ
ಬಸವಣ್ಣ ಹರಕಿ ಕೊಟ್ಟಾರ
ಕಾಯಕವು ಕಲಿಸಿದ ತಾಯಿ ಲಕ್ಕಮ್ಮ ಎಂದು ಉದ್ಗಾರ ತೆಗೆಯುತ್ತಾರೆ. ಬಸವಣ್ಣ ಕಲಿಯಬೇಕು ಕಾಯಕ ಹೇಗೆ ಮಾಡಬೇಕು ಎನ್ನುವದನ್ನು ನಿನ್ನಿಂದ. ನಿಮ್ಮಂತಹ ಶರಣರಿಂದ ಕಲ್ಯಾಣ ಪುರವು ಬಡತನಗೆದಿದ್ದೆವ್ವ.
ಅರಿವಿರಲಿ ಜಗಕ್ಕೆ ನೀ ಮಾಡಿದ ಕಾಯಕ
ಮರೆತರೆ ಹಾಳು ಹಾಳಾಗಿ? ನಿನ್ನಿಂದ
ಮರೆಯದ ಮಾಡಲಿ ಎಲ್ಲರೂ’
ಇದೇ ಜಗಕ್ಕೆ ನೀ ಮಾಡಿದ ಕಾಯಕದ ಅರಿವು ಇರಲಿ. ನಿನ್ನ ಹಾಗೇ ಮಾಡಿದ್ದರೆ ಅವರು ಅವರ ಸಮಾಜ ಶಾಂತ, ಸಮೃದ್ಧಿ ಇಲ್ಲವಾದರೆ ಬೀಳು ಭೂಮಿಯಾಗುತ್ತದೆ. ಮರೆಯದಿರಲ್ಲಿ ನಿನ್ನ ನಿಲುವು ಈ ಜಗವು ಎನ್ನುತ್ತಾ ಹರಕೆಯು ಕೊಟ್ಟು ಗಣಂಗಳೊಂದಿಗೆ ವಾಪಸ್ಸಾಗುತ್ತಾರೆ ಬಸವಣ್ಣನವರು.
ಡಾ. ನೀಲಾಂಬಿಕಾ ಪೊಲೀಸಪಾಟೀಲ,
“ಗುರು ಶರಣ ನಿಲಯ”
ಮನೆ ನಂ. 1495/101 ಮತ್ತು 102/310,
ಗೋದುತಾಯಿ ನಗರ,
ನ್ಯೂ ಜೇವರ್ಗಿ ರಸ್ತೆ,
ಕಲಬುರಗಿ – 585 102.
ಮೋಬೈಲ್ ನಂ. 94821 47084
ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in