
ನಾವು ಆಧುನಿಕ ಅರ್ಥಶಾಸ್ತ್ರ ಹಾಗು ವ್ಯವಹಾರ ಅಧ್ಯಯನ ಮಾಡುವಾಗ ಲಾಭ ಅಥವಾ ಪ್ರತಿಫಲದ ಪರಿಕಲ್ಪನೆಯನ್ನು ಆಧುನಿಕ ಪಾಶ್ಚಿಮಾತ್ಯ ಅರ್ಥಶಾಸ್ತ್ರಜ್ಞರು ರೂಪಿಸಿದ ಪರಿಕಲ್ಪನೆಯ ಹಿನ್ನೆಲೆಯಲ್ಲಿ ಮಾತ್ರ ಅಧ್ಯಯನ ಮಾಡುತ್ತೇವೆ. ಬಹುತೇಕ ಆರ್ಥಿಕ ಚಿಂತಕರು ಮತ್ತು ಬರಹಗಾರರು ಆಧುನಿಕ ಪಾಶ್ಚಿಮಾತ್ಯ ಅರ್ಥಶಾಸ್ತ್ರಜ್ಞರ ಪರಿಕಲ್ಪನೆಯನ್ನು ಮಾತ್ರ ವಿವರಿಸುತ್ತಾರೆ. ಹಾಗಾದರೆ ಲಾಭ ಅಥವಾ ಪ್ರತಿಫಲದ ಪರಿಕಲ್ಪನೆ ಅವರಿಗಿಂತ ಮುಂಚೆ ಇರಲಿಲ್ಲವೇ? ಇದ್ದರೆ ಅದನ್ನು ನೀಡಿದವರು ಯಾರು? ಅದರ ಸ್ವರೂಪ ಎಂಥದ್ದು? ಹೀಗೆ ಅನೇಕ ಪ್ರಶ್ನಗಳು ಹುಟ್ಟಿಕೊಳ್ಳುತ್ತವೆ. ನಾನೊಂದು ದಿನ ಅಲ್ಲಮ ಪ್ರಭುಗಳ “ಬೆವಸಾಯವ ಮಾಡಿ ಮನೆಯ ಬೀಯಕ್ಕೆ ಬತ್ತವಿಲ್ಲದಿರ್ದಡೆ, ಆ ಬೆವಸಾಯದ ಘೋರವೇತಕ್ಕಯ್ಯಾ?” ಎಂಬ ವಚನವನ್ನು ಅಲಿಸುವಾಗ, ಅವರು ಇಲ್ಲಿ ರೈತನ ಶ್ರಮ ಮತ್ತು ಆತನ ಶ್ರಮಕ್ಕೆ ತಕ್ಕ ಪ್ರತಿಫಲದ ಬಗೆಗೆ ಮಾತನಾಡಿರುವುದು ಕಂಡುಬಂತು. ಇದರಿಂದ ಪ್ರಭಾವಿತನಾಗಿ ಅಲ್ಲಮ ಪ್ರಭುಗಳ ವಚನಗಳಲ್ಲಿ ಪ್ರತಿಫಲ, ಫಲ, ಕೂಲಿ, ಸಂಪಾದನೆ ಮತ್ತು ಲಾಭಗಳ ಪರಿಕಲ್ಪನೆಯನ್ನು ಶೋಧಿಸಲು ಪ್ರಾರಂಭಿಸಿದೆ. ತದನಂತರ ಬಸವಣ್ಣ, ಅಕ್ಕಮಹಾದೇವಿ, ಸಿದ್ಧರಾಮೇಶ್ವರ, ಚೆನ್ನಬಸವಣ್ಣ, ಆಕ್ಕಮ್ಮ, ಅಮ್ಮುಗೆ ರಾಯಮ್ಮ, ಆಯದಕ್ಕಿ ಲಕ್ಕಮ್ಮ ಮತ್ತು ನೂಲಿಯ ಚೆಂದಯ್ಯನವರ ವಚನಗಳನ್ನು ಅವಲೋಕಿಸಿದಾಗ ಶರಣರು ಲಾಭ ಅಥವಾ ಪ್ರತಿಫಲದ ಪರಿಕಲ್ಪನೆಯನ್ನು ವಿಭಿನ್ನ ಅರ್ಥದಲ್ಲಿ ವಿಶ್ಲೇಷಿಸಿರುವುದು ಸ್ಪಷ್ಟವಾಯಿತು. ಇವರ ಕೆಲ ವಚನಗಳನ್ನು ವಿಶ್ಲೇಷಿಸುವ ಮೂಲಕ ಲಾಭ ಅಥವಾ ಪ್ರತಿಫಲದ ಪರಿಕಲ್ಪನೆಯನ್ನು ತಿಳಿದುಕೊಳ್ಳಲು ಪ್ರಯತ್ನಿಸೋಣ. ಅದಕ್ಕೂ ಮುಂಚೆ ಆಧುನಿಕ ಪಾಶ್ಚಿಮಾತ್ಯ ಅರ್ಥಶಾಸ್ತ್ರಜ್ಞರ ಪರಿಕಲ್ಪನೆಯನ್ನು ತಿಳಿಯೋಣ.
ಲಾಭದ ಸಿದ್ಧಾಂತಗಳು (ಲಾಭದ ಮೂಲಗಳು):
- ಅಮೇರಿಕಾದ ಅರ್ಥಶಾಸ್ತ್ರಜ್ಞ ಎಫ್ ಎ. ವಾಕರ್ (ಫ್ರಾನ್ಸಿಸ್ ಅಮಾಸಾ ವಾಕರ್) ಅವರ ಸಿದ್ದಾಂತವನ್ನು “Rent Theory of Profit” ಎನ್ನುತ್ತಾರೆ. ಅವರ ಪ್ರಕಾರ ಲಾಭವು ಉದ್ಯಮಿಯ ಸಾಮರ್ಥ್ಯಕ್ಕೆ ದೊರೆಯುವ ಪ್ರತಿಫಲವಾಗಿದೆ.
- ಅದರಂತೆ ಇನ್ನೊಬ್ಬ ಅಮೇರಿಕಾದ ಅರ್ಥಶಾಸ್ತ್ರಜ್ಞ ಫ್ರೆಡೆರಿಕ್ ಬಿ. ಹಾಲೆಯವರು “ಲಾಭವು ಉದ್ಯಮದ ಅಪಾಯದ ನಿರ್ವಹಣೆಯ ಪ್ರತಿಫಲವಾಗಿ ಉದ್ಯಮಿಯು ಪಡೆಯುವ ಪ್ರತಿಫಲವಾಗಿದೆ” ಎನ್ನುತ್ತಾರೆ.
- ಫ್ರ್ಯಾಂಕ್ ಹೆಚ್. ನೈಟ್ ರವರ ಪ್ರಕಾರ “ಉದ್ಯಮಿಯು ಅನಿಶ್ಚಿತತೆಯನ್ನು ನಿರ್ವಹಿಸಿದ್ದಕ್ಕಾಗಿ ಪಡೆಯುವ ಪ್ರತಿಫಲವಾಗಿದೆ”.
- ಯುರೋಪಿನ ಅರ್ಥಶಾಸ್ತ್ರಜ್ಞ ಜೋಸೆಫ್ ಎ. ಶುಂಪೀಟರವರ ಪ್ರಕಾರ “ಲಾಭವು ಯಶಸ್ವಿ ನಾವೀನ್ಯತೆಗಾಗಿ ಸಿಗುವ ಪ್ರತಿಫಲವಾಗಿದೆ” ಎನ್ನುತ್ತಾರೆ.
ಶರಣರ ಪ್ರತಿಫಲದ ಸಿದ್ದಾಂತ ಅಥವಾ ಪರಿಕಲ್ಪನೆ:
12 ನೇ ಶತಮಾನದ ಬಸವಾದಿ ಶರಣರ ವಚನ ಚಳುವಳಿ ಮೂಲತಃ ಕಾಯಕ ಮತ್ತು ದಾಸೋಹ ತತ್ವಗಳನ್ನು ಆಧರಿಸಿದೆ. ವಚನಗಳ ಸಾರವೆಂದರೆ ಪ್ರತಿಯೊಬ್ಬರೂ ಸತ್ಯ ಶುದ್ಧವಾದ ಕಾಯಕ ಮಾಡಬೇಕು ಮತ್ತು ಅದರಿಂದ ಬಂದ ಗಳಿಕೆಯಿಂದ ತಮ್ಮ ಕುಟುಂಬವನ್ನು ನಡೆಸಬೇಕು ಹಾಗು ಅದರಲ್ಲಿ ಸ್ವಲ್ಪ ಭಾಗವನ್ನು ಸಮಾಜಕ್ಕೆ ದಾಸೋಹ ಮಾಡಬೇಕು. ಅಂದರೆ ನಾವು ಮಾಡುವ ಪ್ರತಿಯೊಂದು ಕೆಲಸಕ್ಕೆ ಹಾಗು ಶ್ರಮದ ಹೂಡಿಕೆಗೆ ಲಾಭ ಅಥವಾ ಪ್ರತಿಫಲ ಇರಬೇಕು ಎಂದು ಶರಣರು ಸ್ಪಷ್ಟವಾಗಿ ಹೇಳಿದ್ಧಾರೆ. ಬಹುತೇಕ ಶರಣರು ವೃತ್ತಿಪರರಾಗಿದ್ದರು (ಕಾಯಕದ ಶರಣರು). ಈ ವೃತ್ತಿಗಳು ಕೃಷಿ, ಉತ್ಪಾದನೆ, ವ್ಯಾಪಾರ, ಚಮ್ಮಾರ, ಕುಂಬಾರ, ಕಮ್ಮಾರ, ನಟರು, ಕಸ ಗುಡಿಸುವವರು ಮತ್ತು ಇನ್ನೂ ಅನೇಕ ಸೇವೆಗಳಿಗೆ ಸೇರಿದ್ದವು. ಡಾ. ವೀರಣ್ಣ ದಂಡೆಯವರು “ಕಲ್ಯಾಣದ ಶರಣರು” ಎನ್ನುವ ಪುಸ್ತಕದಲ್ಲಿ ಶರಣರು ನಿರ್ವಹಿಸಿದ 175 ವೃತ್ತಿಗಳನ್ನು / ಕಾಯಕಗಳನ್ನು ಗುರುತಿಸಿದ್ದಾರೆ.
ನಾವು ಯಾವುದೇ ವೃತ್ತಿ ಅಥವಾ ವ್ಯಾಪಾರ ಅಥವಾ ಉದ್ಯಮದಲ್ಲಿ ತೊಡಗಿಸಿಕೊಂಡಾಗ ಅದರಿಂದ ಲಾಭ / ಪ್ರತಿಫಲ ಗಳಿಸಬೇಕು. ನಾವು ಲಾಭ ಗಳಿಸದಿದ್ದರೆ ವ್ಯಾಪಾರ ಉಳಿಯುವುದಿಲ್ಲ. ಇದು ಯಾವುದೇ ವ್ಯವಹಾರದ ಮೂಲ ನಿಯಮವಾಗಿದೆ ಮತ್ತು ಬಹುತೇಕ ವ್ಯವಹಾರ ಚಿಂತಕರು ಇದನ್ನೇ ಹೇಳಿದ್ದಾರೆ. ಯಾವುದೇ ವೃತ್ತಿ ಮಾಡಿದರೂ ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಬೇಕು ಎಂದು ಶರಣರು ಸ್ಪಷ್ಟವಾಗಿ ಹೇಳಿದ್ದಾರೆ. ಇದನ್ನೇ ಶರಣ ಆಯ್ದಕ್ಕಿ ಮಾರಯ್ಯನವರು ʼನೇಮದ ಕೂಲಿʼ ಎಂದು ಕರೆದಿರುವರು. ಶೂನ್ಯಪೀಠ ಅಥವಾ ಅನುಭವ ಮಂಟಪದ ಅಧ್ಯಕ್ಷರಾದ ಅಲ್ಲಮಪ್ರಭುಗಳು ಹೇಳುವುದೇನೆಂದರೆ, ನೀವು ಕೃಷಿ ಅಥವಾ ವ್ಯಾಪಾರ ಅಥವಾ ಸೇವೆ ಯಾವುದೆ ವ್ಯವಹಾರ ಮಾಡಿದರೂ ಕೂಡ, ಅದಕ್ಕಾಗಿ ನೀವು ಲಾಭ ಅಥವಾ ಸಂಭಾವನೆಯನ್ನು ಪಡೆಯಬೇಕು. ಒಂದುವೇಳೆ ನೀವು ಮಾಡಿದ ಕೆಲಸಕ್ಕೆ ಪ್ರತಿಫಲ ಪಡೆಯದಿದ್ದರೆ ಆ ಕೆಲಸ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಇಂತಹ ಶ್ರಮ ವ್ಯರ್ಥವಾಗುತ್ತದೆ. ಇದನ್ನು ಈ ಕೆಳಗಿನ ವಚನದಲ್ಲಿ ಸುಂದರವಾಗಿ ವಿವರಿಸಿದ್ದಾರೆ.
ಬೆವಸಾಯವ ಮಾಡಿ ಮನೆಯ ಬೀಯಕ್ಕೆ ಬತ್ತವಿಲ್ಲದಿರ್ದಡೆ,
ಆ ಬೆವಸಾಯದ ಘೋರವೇತಕ್ಕಯ್ಯಾ? (ಕೃಷಿ)
ಕ್ರಯವಿಕ್ರಯವ ಮಾಡಿ ಮನೆಯಸಂಚ ನಡೆಯದನ್ನಕ್ಕ
ಆ ಕ್ರಯವಿಕ್ರಯದ ಘೋರವೇತಕ್ಕಯ್ಯಾ? (ವ್ಯಾಪಾರ)
ಒಡೆಯನನೋಲೈಸಿ ತನುವಿಂಗೆ ಅಷ್ಟಭೋಗವ ಪಡೆಯದಿರ್ದಡೆ
ಆ ಓಲಗದ ಘೋರವೇತಕ್ಕಯ್ಯಾ? (ಸೇವೆ)
ಭಕ್ತನಾಗಿ ಭವಂ ನಾಸ್ತಿಯಾಗದಿರ್ದಡೆ,
ಆ ಉಪದೇಶವ ಕೊಟ್ಟ ಗುರು ಕೊಂಡ ಶಿಷ್ಯ – (ಶಿಕ್ಷಣ)
ಇವರಿಬ್ಬರ ಮನೆಯಲಿ ಮಾರಿ ಹೊಗಲಿ
ಗುಹೇಶ್ವರನೆಂಬವನತ್ತಲೆ ಹೋಗಲಿ
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-143 / ವಚನ ಸಂಖ್ಯೆ-65)
ಮೊದಲ ಸಾಲಿನಲ್ಲಿ ರೈತರನ್ನು ಕುರಿತು ನೀವು ಕೃಷಿ ಮಾಡಿ ಭತ್ತವನ್ನು (ಅಕ್ಕಿ) ಬೆಳೆಯುತ್ತಿದ್ದರೆ ಮತ್ತು ಕೊನೆಯಲ್ಲಿ ನಿಮ್ಮ ಸ್ವಂತ ಅಥವಾ ಕುಟುಂಬದ ಬಳಕೆಗೆ ಭತ್ತ (ಅಕ್ಕಿ) ಇಲ್ಲದಿದ್ದರೆ ನೀವು ಮಾಡುವ ಕೃಷಿಯಿಂದ ಏನು ಉಪಯೋಗ? ಎಂದು ಪ್ರಶ್ನಿಸಿದ್ದಾರೆ. ಒಂದು ವೇಳೆ ನೀವು ವ್ಯಾಪಾರ ಅಥವಾ ವ್ಯವಹಾರ ಮಾಡುತ್ತಿದ್ದರೆ ಮತ್ತು ದಿನದ ಕೊನೆಯಲ್ಲಿ ನಿಮ್ಮ ಕುಟುಂಬವನ್ನು ನಡೆಸಲು ಹಣವಿಲ್ಲದಿದ್ದರೆ ಆ ವ್ಯವಹಾರದಿಂದ ಏನು ಪ್ರಯೋಜನ? ಎಂದಿರುವರು. ಅದರಂತೆ ನೀವು ನಿಮ್ಮ ಯಜಮಾನನ ಸೇವೆಯನ್ನು ಮಾಡಿದರೆ, ನಿಮ್ಮ ಜೀವನವನ್ನು ಆನಂದಿಸಲು ಅಗತ್ಯವಾದ ಪ್ರಯೋಜನವನ್ನು ಪಡೆಯಬೇಕು, ಈ ಪ್ರಯೋಜನಗಳನ್ನು ನೀವು ಪಡೆಯದಿದ್ದರೆ ನೀವು ಅವರ ಸೇವೆಗಾಗಿ ಏಕೆ ಇಷ್ಟೊಂದು ಬಳಲುತ್ತೀರಿ? ಎಂದು ಪ್ರಶ್ನಿಸಿದ್ದಾರೆ. ಅಂತೆಯೇ ಅವರು ಆಧ್ಯಾತ್ಮಿಕತೆಯ ವ್ಯವಹಾರದ ಬಗ್ಗೆ ಮಾತನಾಡಿರುವರು. ಆಧ್ಯಾತ್ಮಿಕ ಚಟುವಟಿಕೆಯ ಗುರಿಯು ಪ್ರಬುದ್ಧನಾಗುವುದು, ಭವಿಯಿಂದ ಭಕ್ತನಾಗಿ ರೂಪಾಂತರಗೊಳ್ಳುವುದು. ನೀವು ಆಧ್ಯಾತ್ಮಿಕತೆಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರೆ ಮತ್ತು ಭವಿ ಗುಣಗಳನ್ನು ತೊಡೆದುಹಾಕಲು ಗುರುವಿನಿಂದ ಕಲಿಯಬೇಕು ಹಾಗು ಅದನ್ನು ಸಾಧಿಸಬೇಕು. ಒಂದು ವೇಳೆ ಹಾಗೆ ಮಾಡದಿದ್ದರೆ ನೀವು ಮಾಡುತ್ತಿರುವ ಪ್ರಯತ್ನ ವ್ಯರ್ಥ. ನೀವು ದೇವರನ್ನು ಎಂದಿಗೂ ಅರಿತುಕೊಳ್ಳುವುದಿಲ್ಲ. ಈ ವಚನದ ಮೂಲಕ ಅಲ್ಲಮಪ್ರಭುಗಳು ಪ್ರತಿ ಪ್ರಯತ್ನಕ್ಕೆ ಪ್ರತಿಫಲವನ್ನು ಪಡೆಯಬೇಕು ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಈ ಲಾಭ ಭೌತಿಕವಾಗಿರುವಂತೆ ಆಧ್ಯಾತ್ಮಿಕವೂ ಆಗಿದೆ. ಯಾವುದೇ ವ್ಯವಹಾರವು ಶ್ರಮದ ಹೂಡಿಕೆಯ ಮೇಲೆ ಲಾಭ ಅಥವಾ ಪ್ರತಿಫಲವನ್ನು ಪಡೆಯಬೇಕು. ಇಲ್ಲದಿದ್ದರೆ ಆ ಶ್ರಮಕ್ಕೆ ಅರ್ಥವಿಲ್ಲ. ನಾವು ಆಹಾರ ತಿನ್ನುವುದು ಶಕ್ತಿಯನ್ನು ಪಡೆಯಲಿಕ್ಕೆ ಒಂದು ವೇಳೇ ತಿಂದ ಆಹಾರದಿಂದ ದೇಹಕ್ಕೆ ಶಕ್ತಿ ಬರದಿದ್ದರೆ ನಮ್ಮ ದೇಹವು ಬದುಕುಳಿಯುವುದಿಲ್ಲ. ಹಾಗೆಯೇ ಪ್ರತಿಯೊಂದು ಕಾರ್ಯಕ್ಕೆ ತಕ್ಕ ಪ್ರತಿಫಲ ದೊರೆಯಬೇಕು ಮತ್ತು ಪ್ರತಿಯೊಂದು ವ್ಯವಹಾರವೂ ಬದುಕಲು ಲಾಭ ಗಳಿಸಲೇಬೇಕು.
ಪ್ರತಿಯೊಂದು ಕಾರ್ಯವು ತನ್ನದೇ ಆದ ಪ್ರತಿಫಲ ಹೊಂದಿದೆ ಎಂದು ಬಸವಣ್ಣನವರು ಕೂಡ ಹೇಳಿದ್ದಾರೆ. ಕೆಳಗಿನ ವಚನದಲ್ಲಿ ನಾನು ಕೃಷಿ ಮಾಡಲಿ, ವ್ಯಾಪಾರ ಮಾಡಲಿ ಅಥವಾ ಸೇವೆ ಮಾಡಲಿ ಗುರುಪೂಜೆ, ಲಿಂಗಾರ್ಚನೆ ಮತ್ತು ಜಂಗಮ ದಾಸೋಹವೆಂದು ಮಾಡುತ್ತೇನೆ ಎಂದು ಹೇಳುತ್ತಾರೆ. ಏಕೆಂದರೆ ನಾನು ಈ ರೀತಿಯ ಬದ್ಧತೆ ಮತ್ತು ಸಮರ್ಪಣೆಯೊಂದಿಗೆ ಯಾವುದೇ ಕೆಲಸವನ್ನು ಮಾಡಿದರೆ ದೇವರು ಖಂಡಿತವಾಗಿಯೂ ಪ್ರತಿಫಲವನ್ನು ನೀಡುತ್ತಾನೆ ಎಂದು ನನಗೆ ತಿಳಿದಿದೆ. ಮತ್ತು ದೇವರು ನನಗೆ ಏನು ಕೊಟ್ಟರೂ ನಾನು ಅದನ್ನು ಮೊದಲು ಅವನಿಗೆ ಸಲ್ಲಿಸುತ್ತೇನೆ ಮತ್ತು ನಂತರ ನಾನು ಅದನ್ನು ಉಳಿದ ಉದ್ದೇಶಕ್ಕಾಗಿ ಬಳಸುತ್ತೇನೆ. ಇಲ್ಲಿ ಅವರು ಪ್ರತಿ ಕೆಲಸವು ಅದರ ಪ್ರತಿಫಲಕ್ಕೆ ಅರ್ಹವಾಗಿದೆ ಎಂದು ಹೇಳುತ್ತಿದ್ದಾರೆ. ಅದು ಕೃಷಿಯಾಗಿರಬಹುದು ಅಥವಾ ವ್ಯಾಪಾರವಾಗಿರಬಹುದು ಅಥವಾ ಸೇವೆಯಾಗಿರಬಹುದು ಅಥವಾ ಮಾನವ ಸೇವೆಯ ಯಾವುದೇ ಕೆಲಸವು ಆರಾಧನೆಯಂತೆ ಪ್ರಾಮಾಣಿಕತೆ, ಶುದ್ಧತೆ, ಸತ್ಯತೆ, ಸಮರ್ಪಣೆ ಮತ್ತು ಬದ್ಧತೆಯಿಂದ ಮಾಡಿದರೆ ಅದು ಲಾಭ ಅಥವಾ ಪ್ರತಿಫಲಕ್ಕೆ ಅರ್ಹವಾಗಿದೆ ಎನ್ನುತ್ತಾರೆ. ವಚನವು ಈ ಕೇಳಗಿನಂತಿದೆ.
ನಾನು ಆರಂಭವ ಮಾಡುವೆನಯ್ಯಾ, ಗುರುಪೂಜೆಗೆಂದು. (ಕೃಷಿ)
ನಾನು ಬೆವಹಾರವ ಮಾಡುವೆನಯ್ಯಾ, ಲಿಂಗಾರ್ಚನೆಗೆಂದು. (ವ್ಯವಹಾರ)
ನಾನು ಪರಸೇವೆಯನು ಮಾಡುವೆನಯ್ಯಾ, ಜಂಗಮ ದಾಸೋಹಕ್ಕೆಂದು. (ಸೇವೆ)
ನಾನಾವಾವ ಕರ್ಮಂಗಳ ಮಾಡಿದಡೆಯು
ಆ ಕರ್ಮಫಲಭೋಗವ ನೀ ಕೊಡುವೆ ಎಂಬುದ ನಾನು ಬಲ್ಲೆನು.
ನೀ ಕೊಟ್ಟ ದ್ರವ್ಯವ ನಿಮಗಲ್ಲದೆ ಮತ್ತೊಂದಕ್ಕೆ ಮಾಡೆನು,
ನಿಮ್ಮ ಸೊಮ್ಮಿಂಗೆ ಸಲಿಸುವೆನು.
ನಿಮ್ಮಾಣೆ ಕೂಡಲಸಂಗಮದೇವಾ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-65 / ವಚನ ಸಂಖ್ಯೆ-709)
ಯಾರು ಲಾಭ / ಪ್ರತಿಫಲಕ್ಕೆ ಅರ್ಹರು:
ಕೆಳಗಿನ ವಚನದಲ್ಲಿ ಅಲ್ಲಮಪ್ರಭುಗಳು ಯಾರು ತಾವು ಮಾಡಿದ ಕಾರ್ಯದ ಪ್ರತಿಫಲಕ್ಕೆ ಅಥವಾ ಲಾಭಕ್ಕೆ ನಿಜವಾಗಿಯೂ ಅರ್ಹರು ಎಂಬುದನ್ನು ಹೇಳಿದ್ದಾರೆ. ತರ್ಕವಿಲ್ಲದೆ ಕೇವಲ ಆಚರಣೆಗಳನ್ನು ಮಾಡುವುದು ಅಥವಾ ಇತರರ ಪ್ರಯತ್ನವನ್ನು ತಮ್ಮದೆಂದು ಹೇಳಿಕೊಳ್ಳುವುದು ಪ್ರತಿಫಲ ಅಥವಾ ಲಾಭಕ್ಕೆ ಅರ್ಹವಲ್ಲ ಎಂದು ಅವರು ಹೇಳುತ್ತಾರೆ. ನಿಜವಾಗಿಯೂ ಪ್ರಯತ್ನವನ್ನು ಮಾಡುವವನು ಪ್ರತಿಫಲ ಅಥವಾ ಲಾಭಕ್ಕೆ ಅರ್ಹನಾಗಿರುತ್ತಾನೆ. ಆದ್ದರಿಂದ ನೀವು ಕೇವಲ ಲಿಂಗದ ಮೇಲೆ ನೀರು ಸುರಿದು ನಾನು ಪೂಜೆ ಮಾಡಿದ್ದೇನೆ ಎಂದು ಹೇಳಿದರೆ ಅದು ನಿಜವಾದ ಪೂಜೆಯೇ? ಮತ್ತು ಅದಕ್ಕಾಗಿ ನೀವು ಪ್ರತಿಫಲ ಪಡೆಯಲು ಅರ್ಹರೇ? ಇಲ್ಲ, ಇದು ನಿಜವಾದ ಪೂಜೆಯಲ್ಲ ಮತ್ತು ವಾಸ್ತವವಾಗಿ ನೀರು ಪ್ರತಿಫಲಕ್ಕೆ ಅರ್ಹವಾಗಿದೆ, ಏಕೆಂದರೆ ನೀವು ಯಾಂತ್ರಿಕ ಕೆಲಸವನ್ನು ತ್ಯಾಗವಿಲ್ಲದೆ, ಕಲ್ಮಶಗಳನ್ನು ಕಳೆದುಕೊಳ್ಳದೆ, ಸಮರ್ಪಣೆ ಮತ್ತು ಬದ್ಧತೆ ಇಲ್ಲದೆ ಮಾಡಿದ್ದೀರಿ. ಅದೇ ರೀತಿ ಸಮರ್ಪಣೆ ಮತ್ತು ಬದ್ಧತೆ ಇಲ್ಲದೆ ದೇವರಿಗೆ/ಲಿಂಗಕ್ಕೆ ಹೂವುಗಳನ್ನು ಸಲ್ಲಿಸುವುದು, ಸಲ್ಲಿಕೆ ಮತ್ತು ಶರಣಾಗತಿ ಪೂಜೆಯೇ ಎಂದು ಪ್ರಶ್ನಿಸುತ್ತಾರೆ. ಇಲ್ಲ, ಆದ್ದರಿಂದ ನೀವು ಪ್ರತಿಫಲಕ್ಕೆ ಅರ್ಹರಾಗಿರುವುದಿಲ್ಲ; ಬದಲಿಗೆ ಆ ಹೂ ನೀಡಿದ ಮರವು ಪ್ರತಿಫಲಕ್ಕೆ ಅರ್ಹವಾಗಿದೆ. ಅದೆ ರೀತಿ, ಕೇವಲ ದಿನಸಿಗಳನ್ನು ಸಲ್ಲಿಸುವವರು ಆ ಮೂಲಕ ಪ್ರತಿಫಲಕ್ಕೆ ಅರ್ಹರೇ? ಇಲ್ಲ, ಸಲ್ಲಿಸಿದವರಿಗಿಂತ ಧಾನ್ಯಗಳು ಪ್ರತಿಫಲಕ್ಕೆ ಅರ್ಹವಾಗಿವೆ. ನಾವು ದೇವರು ಕೊಟ್ಟ ವಸ್ತುಗಳನ್ನು ತೆಗೆದುಕೊಂಡು ಅವನಿಗೆ ಹಿಂದಿರುಗಿಸಿದರೆ? ಅದು ಸೇವೆಯೇ ಅಲ್ಲ, ನಾವು ನಮ್ಮ ಸಮಯ, ಶ್ರಮ, ಸಮರ್ಪಣೆ, ಬದ್ಧತೆ, ತ್ಯಾಗ ಯಾವುದನ್ನೂ ನೀಡದಿರುವಾಗ ನಾವು ಯಾವುದೇ ಲಾಭ ಅಥವಾ ಲಾಭಕ್ಕೆ ಹೇಗೆ ಅರ್ಹರಾಗುತ್ತೇವೆ? ಈ ಕೆಳಗಿನ ವಚನದಲ್ಲಿ ಇಂತಹ ಕೃತ್ಯಗಳ ಬಗ್ಗೆ ಅಚ್ಚರಿ ವ್ಯಕ್ತಪಡಿಸಿ ಅಂಥವರನ್ನು ನಾವು ಏನೆಂದು ಕರೆಯಬೇಕು ಎನ್ನುತ್ತಾರೆ.
ಮಜ್ಜನಕ್ಕೆರೆದು ಫಲವ ಬೇಡುವರಯ್ಯಾ,
ತಮಗೆಲ್ಲಿಯದೊ ಆ ಫಲವು ಸಿತಾಳಕ್ಕಲ್ಲದೆ?
ಪತ್ರೆ ಪುಷ್ಪದಲ್ಲಿ ಪೂಜಿಸಿ ಫಲವ ಬೇಡುವರಯ್ಯಾ,
ತಮಗೆಲ್ಲಿಯದೊ ಆ ಫಲವು ಗಿಡುಗಳಿಗಲ್ಲದೆ?
ಸೈದಾನವನರ್ಪಿಸಿ ಫಲವ ಬೇಡುವರಯ್ಯಾ,
ತಮಗೆಲ್ಲಿಯದೊ ಆ ಫಲವು ಹದಿನೆಂಟು ಧಾನ್ಯಕ್ಕಲ್ಲದೆ?
ಲಿಂಗದೊಡವೆಯ ಲಿಂಗಕ್ಕೆ ಕೊಟ್ಟು,
ಫಲವ ಬೇಡುವ ಜಗದ ಜಂಗುಳಿಗಳನೇನೆಂಬೆ ಗುಹೇಶ್ವರಾ!
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-148 / ವಚನ ಸಂಖ್ಯೆ-119)
ಮಜ್ಜನಕ್ಕೆರೆವರೆಲ್ಲ, ಇದ್ದಲ್ಲಿ ಫಲವೇನು? ಮುದ್ರಾಧಾರಿಗಳಪ್ಪರಯ್ಯಾ.
ಲಿಂಗದಲ್ಲಿ ನಿಷ್ಠೆಯಿಲ್ಲ, ಜಂಗಮದಲ್ಲಿ ಪ್ರೇಮವಿಲ್ಲ
ವೇಷಧಾರಿಗಳಪ್ಪರಯ್ಯಾ.
ಲಾಂಛನ ನೋಡಿ ಮಾಡುವ ಭಕ್ತಿ, ಸಜ್ಜನಸಾರಾಯವಲ್ಲ,
ಗುಹೇಶ್ವರ ಮೆಚ್ಚನಯ್ಯಾ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-148 / ವಚನ ಸಂಖ್ಯೆ-126)
ಆಯ್ದಕ್ಕಿ ಲಕ್ಕಮನವರೂ ಕೂಡ ಇದೇ ಮಾತನ್ನು ಹೇಳುತ್ತಾರೆ, ಯಾರು ನಿಜವಾದ ಪ್ರಯತ್ನವನ್ನು ಮಾಡುತ್ತಾರೋ ಅವರು ಪ್ರತಿಫಲವನ್ನು ಪಡೆಯಲು ಅರ್ಹರಾಗಿರುತ್ತಾರೆ. ನಮ್ಮ ಆಲೋಚನೆ ಮತ್ತು ಕಾಯಕ ಶುದ್ಧ ಮತ್ತು ಪ್ರಾಮಾಣಿಕವಾಗಿಲ್ಲದಿದ್ದರೆ ನಾವು ಬಯಸಿದ ಸಂಪತ್ತು ನಮಗೆ ಸಿಗುವುದಿಲ್ಲ. ಇದು ಅವರ ಈ ಕೆಳಗಿನ ವಚನದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ.
ಮನ ಶುದ್ಧವಿಲ್ಲದವಂಗೆ ದ್ರವ್ಯದ ಬಡತನವಲ್ಲದೆ
ಚಿತ್ತಶುದ್ಧದಲ್ಲಿ ಕಾಯಕವ ಮಾಡುವಲ್ಲಿ
ಸದ್ಭಕ್ತಂಗೆ ಎತ್ತ ನೋಡಿದತ್ತತ್ತ ಲಕ್ಷ್ಮಿ ತಾನಾಗಿಪ್ಪಳು
ಮಾರಯ್ಯಪ್ರಿಯ ಅಮರೇಶ್ವರಲಿಂಗದ ಸೇವೆಯುಳ್ಳನ್ನಕ್ಕರ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-867 / ವಚನ ಸಂಖ್ಯೆ-724)
ನೂಲಿಯ ಚೆಂದಯ್ಯನವರು ʼನೇಮದ ಕೂಲಿ ಅಂದಿನ ನಿತ್ಯ ನೇಮದಲ್ಲಿ ಸಂದಿರಬೇಕುʼ ಎಂದು ಹೇಳುತ್ತಾರೆ. ಹೀಗೆ ಪ್ರತಿಫಲವನ್ನು ಕುರಿತು ಶರಣರೆಲ್ಲರೂ ಇದನ್ನೇ ಹೇಳಿದ್ದಾರೆ. ಹಾಗಾಗಿ ಅವರು ಕಾಯಕವೇ ಕೈಲಾಸ ಎಂದರು. ಸತ್ಯ, ಶುದ್ಧ ಮತ್ತು ಪ್ರಾಮಾಣಿಕ ಕೆಲಸ ಯಾವಾಗಲೂ ಸಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತದೆ ಎಂದು ಶರಣರು ಪ್ರತಿಪಾದಿಸಿದರು.
ಶರಣರ ವಚನಗಳಲ್ಲಿ ಫಲ, ಕೂಲಿ, ಸಂಪಾದನೆ ಮತ್ತು ಲಾಭ ಶಬ್ದಗಳ ಬಳಕೆ ಶರಣರ ವಚನಗಳಲ್ಲಿ ಪ್ರತಿಫಲದ ಅಥವಾ ಲಾಭದ ಕಲ್ಪನೆಯನ್ನು ತಿಳಿಯಲು ಅವರ ವಚನಗಳಲ್ಲಿ ಈ ಶಬ್ದಗಳನ್ನು ಎಷ್ಟುಬಾರಿ ಬಳಸಿದ್ದಾರೆ ಮತ್ತು ಅದಕ್ಕೆ ತೀರಾ ಹತ್ತಿರದ ಮತ್ತು ಸಮನಾಂತರ ಅರ್ಥಕೊಡುವ ಕೂಲಿ ಹಾಗು ಸಂಪಾದನೆಗಳ ಬಳಕೆಯ ಲೆಕ್ಕಹಾಕಲು ಪ್ರಯತ್ನಿಸಲಾಗಿದೆ. ಈ ಕೆಳಗಿನ ಪಟ್ಟಿಯಲ್ಲಿ ಇದನ್ನು ಕಾಣಬಹುದು.
ಶರಣರು | ಫಲ | ಕೂಲಿ | ಸಂಪಾದನೆ | ಲಾಭ |
ಬಸವಣ್ಣಬವರು | 52 | 0 | 1 | 1 |
ಅಲ್ಲಮಪ್ರಭುಗಳು | 63 | 1 | 8 | 3 |
ಅಕ್ಕಮಹಾದೇವಿಯವರು | 5 | 0 | 1 | 0 |
ಸಿದ್ಧರಾಮೇಶ್ವರರು | 30 | 0 | 0 | 0 |
ಚೆನ್ನಬಸವಣ್ಣನವರು | 5 | 0 | 4 | 0 |
ನುಲಿಯ ಚಂದಯ್ಯನವರು | 0 | 2 | 0 | 0 |
ಈ ಒಂದು ಪಟ್ಟಿ ಕೆಲ ಶರಣರ ವಚನಗಳ ವಿಶ್ಲೇಷಣೆಯಾಗಿದೆ. ಈ ಪರಿಕಲ್ಪನೆಯನ್ನು ಇನ್ನೂ ವಿಸ್ತೃತವಾಗಿ ಅರಿಯಲು ಎಲ್ಲಾ ಶರಣರ ವಚನಗಳನ್ನು ಕೂಲಂಕುಶವಾಗಿ ವಿಶ್ಲೇಷಣೆ ಮಾಡಬೇಕಾಗುತ್ತದೆ. ಆಸಕ್ತ ಸಂಶೋಧಕರು ಈ ರೀತಿಯ ವಿಷಯಗಳನ್ನು ತೆಗೆದುಕೊಂಡು ಸಂಶೋಧನೆಯನ್ನು ಮಾಡಬಹುದಾಗಿದೆ. ನಾನು ಕೂಡ ವಚನ ಸಾಹಿತ್ಯ ಮತ್ತು ಭಾರತೀಯ ನಿರ್ವಹಣಾ ಪದ್ದತಿ ಕುರಿತು ಸಂಶೋಧನೆ ಮಾಡುತ್ತಿದ್ದೇನೆ ಆಸಕ್ತ Ph. D ಮಾಡಬಯಸುವ MBA, NET, JRF ಹೊಂದಿದವರು ನಮ್ಮ ವಿಶ್ವವಿದ್ಯಾಲಯದ ವೆಬಸೈಟ್ www.cuk.ac.in ಮೂಲಕ ನಮ್ಮ ಜೊತೆ ಸಂಪರ್ಕಮಾಡಿ ಸಂಶೋಧನೆಗೆ ಅರ್ಜಿ ಹಾಕಬಹುದು.
ಇಂದಿನ ಸಂಕೀರ್ಣ ಉದ್ಯಮ ಮತ್ತು ಆರ್ಥಿಕ ವ್ಯವಸ್ಥೆಯಲ್ಲಿ ಸತ್ಯ, ಶುದ್ಧ ಮತ್ತು ಪ್ರಾಮಾಣಿಕ ವ್ಯವಹಾರ ಪದ್ದತಿಯ ಅನಿವಾರ್ಯತೆಯಿದೆ. ಸತ್ಯ, ಶುದ್ಧ ಮತ್ತು ಪ್ರಾಮಾಣಿಕತೆಯ ಕೊರತೆಯಿಂದ ಅನೇಕ ಉದ್ಯಮಗಳು ಕಾನೂನಾತ್ಮಕ, ಮಾರಕಟ್ಟೆ ಮತ್ತು ಸ್ಪರ್ಧಾತ್ಮಕ ತೊಂದರೆಗಳನ್ನು ಅನುಭವಿಸುತ್ತಿವೆ. ವ್ಯವಹಾರದಲ್ಲಿ ನೈತಿಕತೆಯ ಅಭಾವದ ಕೊರತೆ ಎದ್ದು ಕಾಣುತ್ತದೆ. ಹೇಗಾದರು ಮಾಡಿ ಪ್ರತಿಫಲ ಪಡೆಯಬೇಕೆಂಬ ಇಂದಿನ ಕಾಲದಲ್ಲಿ ಶರಣರ ತತ್ವ ಆಧಾರಿತ, ಸತ್ಯ, ಶುದ್ಧ ಮತ್ತು ಪ್ರಾಮಾಣಿಕ ಕೆಲಸದ ಅಗತ್ಯತೆಯಿದೆ. ಇದು ಯಾವಾಗಲೂ ಸುಸ್ಥಿರ ಹಾಗು ಸಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತದೆ. ಆದ್ದರಿಂದ ಇದು ಸರ್ವಕಾಲಿಕ ಪ್ರಸ್ತುತತೆಯುಳ್ಳದ್ದಾಗಿದೆ.
ಡಾ. ಗಣಪತಿ ಬಿ ಸಿನ್ನೂರ,
ಸಹ ಪ್ರಾಧ್ಯಾಪಕರು,
ವ್ಯವಹಾರ ಅಧ್ಯಯನ ವಿಭಾಗ
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ,
ಕಲಬುರಗಿ.
ಮೋಬೈಲ್ ನಂ. 97310 46434
ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in