
ಹನ್ನೆರಡನೆಯ ಶತಮಾನದ ವಚನಕಾರರಲ್ಲಿ ಅಧ್ಯಯನಗಳ ಮೂಲಕ ಅಷ್ಟಾಗಿ ಬೆಳಕಿಗೆ ಬಾರದ ಶರಣರಲ್ಲಿ ಅರಿವಿನ ಮಾರಿತಂದೆಯವರೂ ಕೂಡ ಒಬ್ಬರು. “ಸದಾಶಿವಮೂರ್ತಿಲಿಂಗ” ಎಂಬ ಅಂಕಿತದಿಂದ ವಚನಗಳನ್ನು ಬರೆದುದಾಗಿ ವಿದ್ವಾಂಸರು ಗುರುತಿಸಿದ್ದಾರೆ. ಸಮಗ್ರ ವಚನ ಸಂಪುಟ-2021 / ಸಂಕೀರ್ಣ ವಚನ ಸಂಪುಟ-6 ರಲ್ಲಿ ಅರಿವಿನ ಮಾರಿತಂದೆಯವರು ಬರೆದ 309 ವಚನಗಳನ್ನು ಡಾ.ಎಂ. ಎಂ. ಕಲಬುರ್ಗಿಯವರ ಪ್ರಧಾನ ಸಂಪಾದಕತ್ವದಲ್ಲಿ ಹಾಗೂ ಡಾ. ಕೆ ರವೀಂದ್ರನಾಥ ಅವರ ಸಂಪಾದಕತ್ವದಲ್ಲಿ ಸಂಪಾದಿಸಿದ್ದಾರೆ. ಆದರೆ “ಈ ಶರಣರ ಬದುಕಿನ ವಿವರಗಳು ಸಾಕಷ್ಟು ಸಿಗುವುದಿಲ್ಲ” ಎಂಬ ಮಾತನ್ನು ಅವರು ಸೇರಿಸಿದ್ದಾರೆ.
ಶರಣರ ಹೆಸರಿನ ಹಿಂದೆ ಇರುವ “ಅರಿವಿನ” ಎಂಬ ನಾಮಧೇಯ ಬಹು ಸುಂದರವಾಗಿದೆ. ಅರಿವು ಶರಣರು ಟಂಕಿಸಿದ ಪದ. “ಅರಿವೆ ಗುರು” ಎಂಬುದು ಅವರ ಬಹು ದೊಡ್ಡ ಸಿದ್ಧಾಂತ. ಅರಿವು ಎನ್ನುವದಕ್ಕೆ “ಮೊದಲು ತನ್ನನ್ನು, ನಂತರದಲ್ಲಿ ಲಿಂಗವನ್ನು ತಿಳಿಯುವ ಜ್ಞಾನ” ಎಂಬುದು ಆಧ್ಯಾತ್ಮಿಕ ಅರ್ಥವಾದರೆ ಸಾಮಾಜಿಕದಲ್ಲಿ “ನಮ್ಮ ಸುತ್ತಲಿರುವ ಲೋಕವನ್ನು ಅರ್ಥ ಮಾಡಿಕೊಂಡು ಎಲ್ಲರೊಡನೆ ಹೊಂದಿಕೊಂಡು ಹೋಗುವ ಗುಣ” ಎಂಬ ಅರ್ಥವನ್ನೂ ಹೇಳಬಹುದು. ಸಾಮಾನ್ಯವಾಗಿ ಶರಣರು ಹೆಸರಿನ ಜೊತೆಗೆ ಇರಿಸಿಕೊಂಡ ಇಂಥಹ ನಾಮಧೇಯಗಳು ಅವರ ವೃತ್ತಿಯನ್ನೋ, ಇಷ್ಟ ದೈವವನ್ನೋ ಸೂಚಿಸುವದು ವಾಡಿಕೆ. ಆದರೆ “ಅರಿವಿನ” ಎಂಬುದು ಶರಣರ ಇಂಥ ಯಾವ ಅಂಶವನ್ನೂ ಸಂಕೇತಿಸುವದಿಲ್ಲ. ಹೀಗಾಗಿ ಇದೊಂದು ತುಂಬ ವಿಶಿಷ್ಟವಾದ ಅಂಕಿತವಾಗಿದೆ. ಶರಣರಲ್ಲಿ ನಗೆಯ ಮಾರಿತಂದೆ ಎಂಬ ಇನ್ನೊಬ್ಬ ಮಾರಿತಂದೆ ಇದ್ದಾರೆ. ಬಹುಶ ಶಿವ ಎನ್ನುವ ಅರ್ಥವನ್ನೇ ಮಾರಿತಂದೆ ಎಂಬ ಪದ ಸೂಚಿಸುತ್ತದೆ. “ಅರಿವಿನ” ಎಂಬ ಪದ ಬಹುಶ: ಈ ಶರಣರು ತುಂಬ ಜ್ಞಾನಿಯಾಗಿದ್ದರು ಎಂಬುದನ್ನು ಸಂಕೇತಿಸುವಂತಿದೆ. ಅದಕ್ಕೆ ಪೂರಕವಾಗಿ ಅವರ ವಚನಗಳೂ ಹೆಚ್ಚು ಆದ್ಯಾತ್ಮಿಕ ಚಿಂತನೆಯೆ ವಚನಗಳೇ ಆಗಿವೆ. ಡಾ ಎಂ. ಎಂ. ಕಲ್ಬುರ್ಗಿಯವರು ಪ್ರಸ್ತಾವನೆಯಲ್ಲಿ “ಅರಿವಿನ ಎಂಬುದು ಮನಸ್ಥಿತಿಯನ್ನು ತೋರುತ್ತದೆ.” ಎಂಬ ಒಂದು ಸಾಲಿನ ವಿವರಣೆಯನ್ನು ನೀಡುತ್ತಾರೆ. ಅಲ್ಲದೇ “ಇವರ ಜೀವನ ಚರಿತ್ರೆಯ ಬಗೆಗೆ ವಿವರಗಳು ತಿಳಿದು ಬರುವದಿಲ್ಲ” ಎನ್ನುತ್ತಾರೆ.
ಅವರನ್ನು ಕುರಿತು ತಿಳಿಯಲು ಅವರು ಬರೆದ ವಚನಗಳ ಅಧ್ಯಯನವೇ ನಮಗಿರುವ ಏಕಮಾತ್ರದ ದಾರಿ. ಹಲವು ಸಲ ‘’ಅರಿವು” ಶಬ್ದದ ಬಗೆಗೆ ಉಲ್ಲೇಖ ಬರುತ್ತದೆ. “ಅರು ಹಿರಿಯರೆಲ್ಲರೂ ಮರೆಯಬೇಡಿ, ಅರಿವಿನ ಹಂಬಲ ನೋಡಿಕೊಳ್ಳಿ” ಎನ್ನುತ್ತಾರೆ. ಅರಿವು ಎಂದರೆ “ತಾನಾರೆಂಬುದು ತಿಳಿವುದು, ತನ್ನ ಸತ್ಪಥವ ತಿಳಿದು ಅದರಂತೆ ನಡೆವುದು” ಎಂಬುವುದು ಅವರ ಮತವಾಗಿದೆ.
ಅರಿವ ಮರೆದ ಪೂಜೆ ಸ್ಥಾವರ ಲಿಂಗಕ್ಕೆ ಸರಿ,
ಅರಿಯದೆ ಮರೆಯದೆ ಕರಿಗೊಂಡ ನೆನಹು,
ಅದು ಪರಿಪೂರ್ಣ ಪ್ರಾಣಲಿಂಗ ಸಂಬಂಧ.
ಇಂತಿವರಲ್ಲಿ ಭೇದಂಗಳನರಿತು
ಪರತತ್ವ ಕೊಡುವ ಪರಮಗುರುವಾಗಬೇಕು
ಸದಾಶಿವಮೂರ್ತಿಲಿಂಗವು ತಾನಾಗಬೇಕು.
(ಸಮಗ್ರ ವಚನ ಸಂಪುಟ: ಆರು-2021 / ಪುಟ ಸಂಖ್ಯೆ-150 / ವಚನ ಸಂಖ್ಯೆ-389)
ಎಂಬುದು ಈ ಶರಣರು ಸಾರುವ ಅರಿವಿನ ಸಿದ್ದಾಂತವಾಗಿದೆ. ಶರಣರ ಪ್ರಕಾರ ಸ್ಥಾವರ ಲಿಂಗವ ಪೂಜಿಸುವದು ಅಷ್ಟು ಮಹತ್ವದ್ದಲ್ಲ. ಅವರು ಅರಿವು ಮರೆತವರು. ನಿಜವಾದ ಅರಿವಿದ್ದವರು ಪ್ರಾಣಲಿಂಗವ ಪೂಜಿಸುವವರು ಎನ್ನುವ ಅರಿವಿನ ಮಾರಿತಂದೆಯವರು ಆ ಪ್ರಾಣಲಿಂಗ ಸಂಬಂಧವಾಗಬೇಕಾದರೆ ನಮ್ಮೊಳಗೆ ಮೊದಲು ಅರಿವು ದೀಪ್ತವಾಗಬೆಕು ಎನ್ನುವದನ್ನು ಹೇಳುತ್ತಾರೆ. “ಅರಿವಿನ ಸಂಗದಿಂದ ಸದಾಶಿವಮೂರ್ತಿಲಿಂಗವು ತಾನಾಗಬೇಕು” ಎಂಬುದೇ ಗಮ್ಯ. ಅರಿವು ಮರೆತು ಪೂಜಿಸಿದರೆ ವ್ಯರ್ಥವಾಗಿ ಕಲ್ಲು ಪೂಜಿಸಿದಂತೆ. ಲಿಂಗ ಸ್ಥಾವರವಲ್ಲ. ಅದು ಪರಿಪೂರ್ಣ ಚಲನಶೀಲ. ಅರಿವು ಎಂದರೆ ಪರತತ್ವ ಕೊಡುವ ಪರಮ ಗುರುವು. ಇವರ ಪ್ರಕಾರ ಎಲ್ಲಕ್ಕೂ ಅರಿವೇ ಕಾರಣ. ಅಂತೆಯೇ “ಮಾಡುವಂಗೆ ಅರಿವೇ ಕಾರಣ ಮಾಡಿಸಿಕೊಂಬವಂಗೆ ಅರಿವೇ ಕಾರಣ. ಸರ್ವಮಯವೆಲ್ಲಕ್ಕೂ ಅರಿವೇ ಮುಖ್ಯ ಸದಾಶಿವಮೂರ್ತಿಲಿಂಗಕ್ಕೂ ಅರಿವೆ ಕಾರಣ” ಎಂದು ಸಾರುತ್ತಾರೆ.
ಭಕ್ತನಾದವನಿಗೆ ಗುರೂಪದೇಶ, ಗುರುವಿನ ಮಾರ್ಗದರ್ಶನ ಬೇಕೇ ಬೇಕು. ಅದಿಲ್ಲದೆ ಲಿಂಗ ಮಾರ್ಗವ ಅರಿಯಲಾಗದು ಎನ್ನುವರು ಶರಣ ಅರಿವಿನ ಮಾರಿತಂದೆಯವರು:
ಗುರುಮಾರ್ಗವನರಿಯದೆ ಆತ್ಮತೇಜದಿಂದ ಪೀಳಿಗೆ ಶುದ್ಧವೆಂದು,
ಆಗು ಚೇಗೆಯನರಿಯದೆ ಉಪದೇಶವ ಮಾಡೂದಕ್ಕೊಡಲಾಹ,
ಕಂಬಳಕ್ಕೆ [ಅಪೇಯವ] ತಿಂಬ,
ದುರ್ಗುಣ ಕಾಯ ವಿಕಾರಿಗಳನೊಲ್ಲರು
ಸದಾಶಿವಮೂರ್ತಿಲಿಂಗವನಯರಿದ ಶರಣರು.
(ಸಮಗ್ರ ವಚನ ಸಂಪುಟ: ಆರು-2021 / ಪುಟ ಸಂಖ್ಯೆ-148 / ವಚನ ಸಂಖ್ಯೆ-383)
ಎಂಬಲ್ಲಿ ಅವರ ಸಿದ್ಧಾಂತ ಸ್ಪಷ್ಟವಿದೆ. ಆದರೆ ಗುರು ಎಂಥವ? ಗುರು ಯಾರು? ಎಂದು ನಿರ್ಧರಿಸುವುದು ಅಷ್ಟೇ ಮುಖ್ಯ. ವೇಷಧಾರಕ, ನಾಮಧಾರಕ ಗುರುಗಳು ಗುರುಗಳಲ್ಲ ಎಂಬುದು ಅವರ ಸ್ಪಷ್ಟ ಎಚ್ಚರಿಕೆ.
ಲಿಂಗ ಹೊರತೆಯಾಗಿ, ವಿಭೂತಿ ರುದ್ರಾಕ್ಷಿಯ ಕೊಟ್ಟು,
ಗುರುವಾಗಬಹುದೆ ಅಯ್ಯಾ? ಬೀಜವಿಲ್ಲದೆ ಅಂಕುರವಾಗಬಲ್ಲುದೆ?
ಗಂಡನಿಲ್ಲದ ಮುಂಡೆಗೆ ಗರ್ಭನಿಂದಡೆ ಅವಳಾರಿಗೆ ಯೋಗ್ಯ?
ಉಭಯವು ಕೇಡಾಯಿತ್ತು.
ಇದನರಿತು ಮಾಡಿ, ಸದಾಶಿವಮೂರ್ತಿಲಿಂಗವನರಿವುದಕ್ಕೆ.
(ಸಮಗ್ರ ವಚನ ಸಂಪುಟ: ಆರು-2021 / ಪುಟ ಸಂಖ್ಯೆ-148 / ವಚನ ಸಂಖ್ಯೆ-384)
ಎಂದು “ಲಿಂಗ ಹೊರತೆಯಾಗಿ ವಿಭೂತಿ ರುದ್ರಾಕ್ಷಿಯ ಕೊಟ್ಟು ಗುರುವಾಗಬಹುದೇ ಅಯ್ಯ? ಬೀಜವಿಲ್ಲದೇ ಅಂಕುರ ವಾಗಬಲ್ಲುದೇ“ ಎಂದು ಪ್ರಶ್ನಿಸುತ್ತಾರೆ. ನಿಜಗುರು ಹೇಗಿರಬೇಕೆಂದರೆ ಆತ ಹೊರಗೆ (ಬಹಿರಂಗಕ್ಕೆ) ಗುರು ಒಳಗೆ (ಅಂತರಂಗಕ್ಕೆ) ಸದ್ಗುರು ಆಗಿರಬೇಕು ಎನ್ನುತ್ತಾರೆ.
ನಿಜಗುರುವಿನ ಇರವು ಹೇಗಿರಬೇಕೆಂದಡೆ:
ನಿರ್ಮಲ ಸುಚಿತ್ತನಾಗಿ ತನ್ನ ಸೋಂಕುವ
ಸುಖದು:ಖಗಳು ಬಂದಲ್ಲಿ ಆಗು ಚೇಗೆಯನರಿಯದೆ,
ಫಲವ ಹೊತ್ತ ತರುವಿನಂತೆ, ಕೆಚ್ಚಲ ಕ್ಷೀರದಂತೆ,
ಕಪಿತ್ಥದ ಫಳ ಘಟ್ಟಿಗೊಂಡಂತೆ.
ಹೊರಗಳ ಇರವು, ಒಳಗಳ ನಿಜ,
ಲೌಕಿಕಕ್ಕೆ ಗುರುವಾಗಿ ಪಾರಮಾರ್ಥಿಕಕ್ಕೆ ಸದ್ಗುರುವಾಗಿ
ಡುಂಡುಫಳದಂತೆ ಹೊರಗೆ ಬಿರಿಬು,
ಒಳಗಳ ಮಧುಸಾರದಂತಿರಬೇಕು.
ಕರು [ಣಿ] ಕಾರುಣ್ಯಾಂಬುಧಿ ಸದ್ಗುರುವಿನ ಇರವು
ಸದಾಶಿವಮೂರ್ತಿಲಿಂಗವು ತಾನೆ.
(ಸಮಗ್ರ ವಚನ ಸಂಪುಟ: ಆರು-2021 / ಪುಟ ಸಂಖ್ಯೆ-167 / ವಚನ ಸಂಖ್ಯೆ-443)
ನಿಜವಾದ ಗುರುವಿಗೆ ಅವನ ವೈಯಕ್ತಿಕ ದೇಹಕ್ಕೆ ಬರುವ ಸುಖ-ದು:ಖಗಳು ಮುಖ್ಯವೇ ಅಲ್ಲ ಎನ್ನುವಂತಿರಬೇಕು. ಆತ ಫಲವ ಹೊತ್ತ ತರುವಿನಂತೆ, ಕೆಚ್ಚಲ ಕ್ಷೀರದಂತೆ, ಕಪಿತ್ಥದ ಫಳ ಘಟ್ಟಿಗೊಂಡಂತೆ ಶಿಷ್ಯನ ಪಾಲಿಗೆ ಇರಬೇಕು. ಶಿಷ್ಯನಿಗೆ ಸದಾ ಒಳಿತು ಮಾಡುವಂಥವನಿರಬೇಕು. ಹೊರಗೂ ಒಳಗೂ ಸತ್ಯನಾಗಬೇಕು. ಅಂದರೆ ವ್ಯವಹಾರದಲ್ಲಿ ಬದುಕಿನಲ್ಲಿಯೂ ಶಿಷ್ಯನಿಗೆ ಉಪಕಾರಿ, ಧಾರ್ಮಿಕದ ಬದುಕಿನಲ್ಲಿಯೂ ಅವನಿಗೆ ಮಾರ್ಗದರ್ಶಕನಾಗಿರಬೇಕು. ಆತ ಬಹಿರಂಗದ ಬದುಕಿಗೆ ಗುರುವಾಗಿ ಮಾರ್ಗದರ್ಶನ ಮಾಡಿದರೆ ಆಂತರಂಗಿಕ ಅಥವಾ ಪರಮಾರ್ಥಿಕದ ಬದುಕಿಗೆ ನಿಜದ ದಾರಿ ತೋರುವಂಥವನಾಗಿರಬೇಕು. ಕರುಣಿ, ಕಾರುಣ್ಯಾಂಬುಧಿಯಾಗಿರುವ ಅವನ ಇರುವಿಕೆ ಸಾಕ್ಷಾತ್ ಸದಾಶಿವಮೂರ್ತಿಲಿಂಗವಲ್ಲದೇ ಬೇರೆ ಅಲ್ಲ ಎನ್ನುತ್ತಾರೆ. ಇದು ಅರಿವಿನ ಮಾರಿತಂದೆಯವರು ತೋರುವ ಗುರುದರ್ಶನ.
ಶರಣರು ನಾವು ಮಾಡುವ ಕಾರ್ಯ, ಆಚರಣೆ ಶುದ್ಧವಾಗಿರಬೆಕು ಎಂಬುದನ್ನು ನಂಬಿದವರು ಅರಿವಿನ ಮಾರಿತಂದೆಯವರ ವಿಚಾರವೂ ಅದೇ ಆಗಿದೆ.
ಕಸುಗಾಯಲ್ಲಿ ಹಣ್ಣಿನ ರಸವನರಸಿದರುಂಟೆ, ಅಯ್ಯಾ?
ಶಿಶು ಗರ್ಭದಲ್ಲಿ ಬಲಿವುದಕ್ಕೆ ಮೊದಲೆ
ಅಸು ಘಟಿಸಿದುದುಂಟೆ, ಅಯ್ಯಾ?
ಮಾಡುವ ಆಚರಣೆಮಾರ್ಗ ಭಾವಶುದ್ಧವಾಗಿ ನೆಲೆಗೊಳ್ಳದೆ
ಕಾಮ್ಯದಲ್ಲಿ ಕಾಮ್ಯಾರ್ಥ ನೆಲೆಗೊಂಬ ಪರಿಯಿನ್ನೆಂತೊ?
ಸೂಜಿಕಲ್ಲು ಸೂಜಿಯನರಸುವಂತೆ,
ಉಭಯಕ್ಕೆ ಬಾಯಿಲ್ಲದೆ ಕಚ್ಚುವ ತೆರನ ನೋಡಾ, ಅಯ್ಯಾ!
ಶಿಲೆ ಲೋಹದಿಂದ ಕಡೆಯೆ ನಿಮ್ಮಯ ಅರಿವಿನ ಭೇದ?
ಅದರ ಮರೆಯ ಬೆಳಗು ತೋರುತ್ತದೆ
ಸದಾಶಿವಮೂರ್ತಿಲಿಂಗದಲ್ಲಿ.
(ಸಮಗ್ರ ವಚನ ಸಂಪುಟ: ಆರು-2021 / ಪುಟ ಸಂಖ್ಯೆ-141 / ವಚನ ಸಂಖ್ಯೆ-364)
“ಮಾಡುವ ಆಚರಣೆ ಮಾರ್ಗ ಭಾವಶುದ್ಧವಾಗಿ ನೆಲೆಗೊಳ್ಳದೆ ಕಾಮ್ಯದಲ್ಲಿ ಕಾಮ್ಯಾರ್ಥ ನೆಲೆಗೊಂಬ ಪರಿಯಿನ್ನೆಂತೋ” ಇದು ಅರಿವಿನ ಮಾರಿತಂದೆಯವರ ಪ್ರಶ್ನೆ. ಮಾಡುವ ಕಾಮ್ಯ (ಕಾರ್ಯ) ಅದು ಕಾಮ್ಯಾರ್ಥಗೊಳ್ಳಬೇಕಾದರೆ ಅರ್ಥಪೂರ್ಣವಾಗಿ ಸತ್ಯ ಶುದ್ಧವಾಗಿ ಪೂರ್ಣಗೊಳ್ಳಬೇಕಾದರೆ ಅದು ಭಾವಶುದ್ಧ (ಮನಶುದ್ಧ) ವಾಗಿರಬೇಕು.
ಶರಣರು ಶರೀರದ ಮಹತ್ವವನ್ನು ಸಾರಿದವರು. ಇದಕ್ಕೆ ಅರಿವಿನ ಮಾರಿತಂದೆಯವರೂ ಹೊರತಾಗುವದಿಲ್ಲ. ಎಲ್ಲದಕ್ಕೂ ದೇಹವೇ ಮುಖ್ಯ ಎನ್ನುವ ಶರಣ ಏನನ್ನೂ ಮಾಡಲು ದೇಹವೇ ಆಧಾರ ಎನ್ನುತ್ತಾರೆ.
ಅಂಗವ ಮರೆದು ಲಿಂಗವನರಿಯಬೇಕೆಂಬರು.
ಕರಣಂಗಳನರತು ಘನಲಿಂಗವನರಿಯಬೇಕೆಂಬರು.
ಅದು ನಾನಿಕ್ಕಿದ ತಡೆ ಕೇಳಿರಣ್ಣ.
ಆಕಾಶ ಬಯಲಾದಡೆ ಮುಗಿಲು
ರೂಪ ತೋರಿ ಅಳಿವ ಪರಿಯಿನ್ನೆಂತೋ?
ನಕ್ಷತ್ರ ಚಂದ್ರ ಸೂರ್ಯಾದಿಗಳು
ಗ್ರಹ ಪ್ರವರ್ತನವಹ ಪರಿಯಿನ್ನೆಂತೋ?
ಅವು ವಾಯುಮಯ ಆಧಾರವಾಗಿ
ತೋರುತ್ತಿಹ ನೆಮ್ಮುಗೆಯ ಇರವು.
ಅದು ಕಾರಣದಲ್ಲಿ ಅಂಗವಿದ್ದಂತೆ ಲಿಂಗವನರಿಯಬೇಕು.
ಕರಣಂಗಳಿದ್ದಂತೆ ಘನಲಿಂಗವ ಭೇದಿಸಬೇಕು.
ಹೂಗಲ್ಲದೆ ಮರೆದರಿಯಲಿಲ್ಲ, ಅರಿದು ಮರೆಯಲಿಲ್ಲ
ಉಭಯದ ಅಭಿಸಂಧಿಯಲ್ಲಿ ಬೆಳಗು ತೋರುತ್ತದೆ
ಸದಾಶಿವಮೂರ್ತಿಲಿಂಗದಲ್ಲಿ.
(ಸಮಗ್ರ ವಚನ ಸಂಪುಟ: ಆರು-2021 / ಪುಟ ಸಂಖ್ಯೆ-144 / ವಚನ ಸಂಖ್ಯೆ-371)
ಇನ್ನೊಂದೆಡೆ:
ಕಾಯವಳಿಯಲಾಗಿ ಜೀವನ ಚೇತನಕ್ಕೆ ಸ್ಥಾಪ್ಯವಿಲ್ಲ.
ಜೀವ ಹಿಂಗೆ ಘಟವೊಂದು ದಿನಕ್ಕೆ ಆಶ್ರಯಿಸಿ ನಿಲಲರಿಯದು.
ಒಂದ ಬಿಟ್ಟೊಂದ ಹಿಡಿವುದಕ್ಕೆ ಎಡೆತೆರಪಿಲ್ಲ.
ಇದು ಕಾರಣದಲ್ಲಿ, ಇಷ್ಟಕ್ಕೂ ಪ್ರಾಣಕ್ಕೂ ಬೆಚ್ಚಂತಿರಬೇಕು.
ನಿಂದ ಇರವಿನಲ್ಲಿ ಸಂದು,
ಮತ್ತೊಂದು ವಿಚಾರಿಸಿಹೆನೆಂಬ ಸಂದೇಹವಳಿದಲ್ಲಿ
ತೋರುತ್ತದೆ ಬೆಳಗು, ಸದಾಶಿವಮೂರ್ತಿಲಿಂಗದಲ್ಲಿ.
(ಸಮಗ್ರ ವಚನ ಸಂಪುಟ: ಆರು-2021 / ಪುಟ ಸಂಖ್ಯೆ-146 / ವಚನ ಸಂಖ್ಯೆ-375)
“ದೇಹವನ್ನು ಕರಣಂಗಳನ್ನು ಮರೆತು ಮಾತನಾಡುವವರಿಗೆ ನನ್ನ ವಿರೋಧವಿದೆ” ಎನ್ನುವ ಅರಿವಿನ ಮಾರಿತಂದೆಯವರು ಅದನ್ನು ಉಗ್ರವಾಗಿಯೇ ಪ್ರತಿಭಟಿಸುತ್ತಾರೆ. “ಅದು ನಾನಿಕ್ಕಿದ ತಡೆ ಕೇಳಿರಣ್ಣ” ಎನ್ನುವಲ್ಲಿ ಅವರ ನಿರ್ಧಾರದ ಧ್ವನಿ ಇರುವದನ್ನು ಅರಿಯಬೇಕು. ಇದನ್ನು ಸಿದ್ಧ ಮಾಡುವದಕ್ಕೆ ಅವರು ಕೊಡುವ ಸಾಕ್ಷಾಧಾರಗಳು ಅತ್ಯಂತ ಸ್ಪಷ್ಟವಾಗಿವೆ. “ಅಂಗವಿದ್ದಂತೆ ಲಿಂಗವನರಿಯಬೇಕು” ಎಂದು ಸಾರಿದುದು ಮಹತ್ವದ್ದಾಗಿದೆ.
ಎಲ್ಲದಕ್ಕೂ ಆಧಾರ ದೇಹವೇ. ಬೀಜವನ್ನು ಬಿತ್ತಲು ಭೂಮಿಯೆಂಬ ದೇಹ ಹೇಗೆ ಬೇಕೋ ಹಾಗೆ ಮನಸ್ಸು ಆತ್ಮಗಳ ಪೊರೆಯಲು ಶರೀರವೆಂಬುದು ಬೇಕೇ ಬೇಕು. ಬೀಜವಿಲ್ಲದೆ ಬೆಳೆ ಇರುವದು ಅಸಾಧ್ಯ. ಹಾಗೆಯೇ ಶರೀರದ ಆಶ್ರಯ.
ಬೀಜವಿಲ್ಲದೇ ಬೆಳೆ ಉಂಟೇ, ಅಯ್ಯ?
ನಾದವಿಲ್ಲದೆ ಶಬ್ದವುಂಟೇ, ಅಯ್ಯಾ?
ದೃಷ್ಟಿಯಿಲ್ಲ[ದೆ] ಕಳೆ ಉಂಟೆ, ಅಯ್ಯಾ?
ಅಂಗ ಸಹಿತವಾಗಿ ಸರ್ವಸಂಗವವರಿಯಬೆಕಲ್ಲದೇ,
ನಿರಂಗ ಅಂಗದಲ್ಲಿ ಹೊಕ್ಕು ಸರ್ವಭೋಗಂಗಳ ಕಾಬುದಕ್ಕೆ ಇದೇ ದೃಷ್ಟ.
ಬಂಗಾರದ ಒಡಲಿನಲ್ಲಿ ಬಣ್ಣ ನಿಂದು ಲೆಕ್ಕವಟ್ಟಂತೆ ಬಾಹಂತೆ,
ಆತ್ಮನ ದೃಷ್ಟನ ಕಂಡು ಮತ್ತೆ ಆಧ್ಯಾತ್ಮವೆನಲೇಕೆ?
ಘಟದ ಮಧ್ಯದಲ್ಲಿ ನಿಂದು ಲೆಕ್ಕವಟ್ಟಂತೆ ನುಡಿವುದೆ ಕ್ರಿಯೆಂದೆ
ಸದಾಶಿವಮೂರ್ತಿಲಿಂಗವನರಿವುದಕ್ಕೆ.
(ಸಮಗ್ರ ವಚನ ಸಂಪುಟ: ಆರು-2021 / ಪುಟ ಸಂಖ್ಯೆ-147 / ವಚನ ಸಂಖ್ಯೆ-379)
ಎಂದು ಇನ್ನೊಂದೆಡೆ ಸಾರುತ್ತಾರೆ. ಒಟ್ಟಾರೆ ಶರೀರವಿಲ್ಲದೇ ಏನನ್ನೂ ಸಾಧಿಸಲಾಗದು ಎಂಬ ಶರಣರ ವಿಚಾರ ಇಲ್ಲಿ ಇನ್ನೂ ಸ್ಪಷ್ಟವಾಗಿದೆ.
ಶಿವಭಕ್ತನಾದವನು ಅಂಗವ ಹೊಂದಿದರೆ ಸಾಲದು, ಅಂಗದ ಮೇಲೆ ಲಿಂಗವ ಹೊಂದಬೇಕು. ಅದಿಲ್ಲದೆ ವಿಭೂತಿ ರುದ್ರಾಕ್ಷಿ ಧರಿಸಲೂ ಬಾರದು ಎನ್ನುವ ಅರಿವಿನ ಮಾರಿತಂದೆಯವರು ಈ ಕೆಳಗಿನ ವಚನದಲ್ಲಿ ಅದ್ಭುತವಾಗಿ ನಿರೂಪಣೆ ಮಾಡತಾರೆ.
ಅಂಗದ ಮೇಲೆ ಲಿಂಗವಿಲ್ಲದೇ ವಿಭೂತಿ ರುದ್ರಾಕ್ಷಿಯ ಧರಿಸಲಾಗದು,
ಅದೆಂತೆಂದಡೆ:
ಸತಿಪುರುಷರಿಗೆ ಸಂಯೋಗವಲ್ಲದೆ,
ಸತಿ ಸತಿಗೆ, ಪುರುಷ ಪುರುಷನಿಗು ಸಂಯೋಗವುಂಟೇ?
ಅಂಗಹೀನಂಗೆ ಹಿಂಗದ ನವರಸವುಂಟೇ ಅಯ್ಯಾ?
ಇಂತೀ ಲಿಂಗ ಬಾಹ್ಯಂಗೆ ವಿಭೂತಿಯ ಪಟ್ಟ ವೆಂದು ಕಟ್ಟಿದ ಗುರು
ಕುಂಭೀ ಘೋರಕ್ಕೆ ಒಳಗು, ಸದಾಶಿವಮೂರ್ತಿಲಿಂಗಕ್ಕೆ ದೂರ.
(ಸಮಗ್ರ ವಚನ ಸಂಪುಟ: ಆರು-2021 / ಪುಟ ಸಂಖ್ಯೆ-149 / ವಚನ ಸಂಖ್ಯೆ-386)
ನಮ್ಮ ಅಳವಿಗೆ ತಿಳಿಯದ ಸಂಗತಿಯನ್ನು ನಮ್ಮ ಅರಿವಿಗೆ ತಿಳುಹುವಂತೆ ಮಾಡಲು ಶರಣರು ಲೌಕಿಕ ಸಂಗತಿಗಳನ್ನು ಬಳಸುತ್ತಾರೆ. ಸತಿ-ಪುರುಷ ಸಂಯೋಗವೆಂಬ ರೂಪಕದ ಮೂಲಕ ಶರೀರ-ಲಿಂಗ ಸಂಯೋಗದ ವಿಚಾರವನ್ನು ಶರಣ ಹೇಳುವದಕ್ಕೆ ಹೊರಟಿರುವದು ಅರ್ಥಪೂರ್ಣವಾಗಿದೆ. ಸತಿ-ಸತಿ, ಪುರುಷ-ಪುರುಷ ಇವರ ನಡುವೆ ಸಂಯೋಗ ಹೇಗೆ ಸಾಧ್ಯವಿಲ್ಲವೋ ಹಾಗೆ ಅಂಗದ ಮೇಲೆ ಲಿಂಗ ಸಂಬಂಧ ಸಾಧ್ಯವಾಗುವವರೆಗೂ ಉಳಿದುದೆಲ್ಲವೂ ಅರ್ಥಹೀನ ಎನ್ನುವದನ್ನು ಮರೆಯಬಾರದು.
ಹನ್ನೆರಡನೆಯ ಶತಮಾನದ ಶರಣರು ಕಾಯಕದ ಮಹತ್ವವನ್ನು ಅರಿತವರಾಗಿದ್ದರು. ಹಾಗಾಗಿ ಎಲ್ಲರೂ ಕಾಯಕಕ್ಕೆ ಪ್ರಾಧಾನ್ಯವನ್ನು ಕೊಟ್ಟರು. ಅರಿವಿನ ಮಾರಿತಂದೆ ಕೂಡ ಕಾಯಕದ ಮಹತ್ವ ತಿಳಿದವರೇ ಆಗಿದ್ದರು. ಅವರು ಕಾಯಕದ ಮಹತ್ವವನ್ನು ಸಾರಿದ್ದು ಹೀಗೆ:
ಕಾಯಕ್ಕೆ ಕರ್ಮ ಗುರುವಾಗಬೇಕು,
ಜೀವಕ್ಕೆ ಮೋಕ್ಷ ಗುರುವಾಗಬೇಕು,
ಉಭಯ ವೇಧಿಸಿ ನಿಂದಲ್ಲಿ ಸ್ವಾನುಭಾವ ಸನ್ನದ್ಧನಾಗಿ ಗುರುವಾಗಬೇಕು.
ಆತನನುಜ್ಞೆಯಿಂದ ಬಂದ ಚಿತ್ತದ ಗೊತ್ತಿನ ಕುರುಹು,
ಅದೆ ವಸ್ತು ನಿಶ್ಚಯ, ಸದಾಶಿವಮೂರ್ತಿಲಿಂಗವು ತಾನಾಗಿ.
(ಸಮಗ್ರ ವಚನ ಸಂಪುಟ: ಆರು-2021 / ಪುಟ ಸಂಖ್ಯೆ-152 / ವಚನ ಸಂಖ್ಯೆ-396)
ಎನ್ನುತ್ತಾರೆ.
ಭಕ್ತ ಹೇಗಿರಬೇಕು, ಅವನು ಮಾಡುವ ಕಾರ್ಯ ಹೇಗಿರಬೇಕು ಎನ್ನುವ ಭಕ್ತನ ವಿವರಗಳನ್ನು ಅರಿವಿನ ಮಾರಿತಂದೆ ವಿವರವನ್ನು ನೀಡುತ್ತಾರೆ:
ತ್ರಾಸಿನ ನಾಲಗೆಯಂತೆ ಹೆಚ್ಚು ಕುಂದನೊಳಕೊಳ್ಳದೆ,
ಗುರು ಲಿಂಗ ಜಂಗಮ ತ್ರಿವಿಧ ಮುಖವು ಒಂದೇಯಂದು ಪ್ರಮಾಣಿಸಿ,
ಮಾಡುವ ದ್ರವ್ಯ ಕೇಡಿಲ್ಲದಂತೆ ಮಾಡುವುದು ಸದ್ಭಕ್ತಿಸ್ಥಲ.
ಹೀಗಲ್ಲದೆ ಗುರುವಿನ ಆಢ್ಯಕ್ಕಂಜಿ,
ಜಂಗಮದ ಸಮೂಹದ ವೆಗ್ಗಳ ಕಂಡು ಅಂಜಿ ಮಾಡಿದಡೆ,
ಭಕ್ತಿಗೂಣೆಯ, ದ್ರವ್ಯದ ಕೇಡು ಸತ್ಯಕ್ಕೆ ಹೊರಗು,
ಸದಾಶಿವಮೂರ್ತಿಲಿಂಗಕ್ಕೆ ದೂರ.
(ಸಮಗ್ರ ವಚನ ಸಂಪುಟ: ಆರು-2021 / ಪುಟ ಸಂಖ್ಯೆ-151 / ವಚನ ಸಂಖ್ಯೆ-393)
ಭಕ್ತಿ ಯಾರದೋ ಮುಲಾಜಿಗೆ ಮಾಡುವದಲ್ಲ. ಅಲ್ಲಿ ಗುರು ಲಿಂಗ ಜಂಗಮ ಎನ್ನುವದಕ್ಕೆ ಅಂತರವಿರಬಾರದು. ಹಾಗೆ ಒಮ್ಮತವಿಲ್ಲದೇ ಮಾಡಿದುದಾದರೆ ಅದು ಭಕ್ತಿಯ ಕೇಡು ಎನ್ನುವ ಅವರು ಮೂರು ಒಂದೇ ಎಂದು ಪ್ರಮಾಣಿಸಿ ಮಾಡಿದರೆ ಅಂಥಹ ಭಕ್ತ ಮಾತ್ರ ಸಾರ್ಥಕ ಎನ್ನುತ್ತಾರೆ.
ಈ ಶರಣರು ಸಹ-ಭೋಜನ, ದಾಸೋಹ ತತ್ವವನ್ನು ಅರಿತವರಾಗಿದ್ದರು. ಅವರ ವಚನಗಳಲ್ಲಿ ಸಹ-ಭೋಜನದ, ಸಹ ಪಂಕ್ತಿಯ ಮಾತು ಮತ್ತೆ ಮತ್ತೆ ಬರುತ್ತವೆ. ಅದು ದಾಸೋಹ ತತ್ವಕ್ಕೆ ಪರ್ಯಾಯವೆಂಬಂತೆ ಕಾಣುತ್ತದೆ.
ಭಕ್ತಿಯ ಆಗುವಿಕೆಯನ್ನು ಕೃಷಿ ರೂಪಕದ ಮೂಲಕ ವಿವರಿಸುವದು ಒಂದು ಉಪಕ್ರಮ. ಅದು ಇವರ ವಚನಗಳಲ್ಲಿಯೂ ಬಂದಿದೆ. ಉಳಿದ ವಚನಕಾರರಲ್ಲಿ ಈ ಉದಾಹರಣೆ ಸಾಕಷ್ಟು ಬಂದಿತ್ತು. ಅರಿವಿನ ಮಾರಿತಂದೆಯವರ ಒಂದು ವಚನ ಗಮನಿಸಿದರೆ ಅದು ಸ್ಪಷ್ಟವಾಗುತ್ತದೆ.
ಭಕ್ತ ಭೂಮಿಯಾಗಿ, ಜಂಗಮ ಬೀಜವಾಗಿ,
ಅ ಜಂಗಮದ ಅರಿವು ಅಪ್ಪುವಾಗಿ,
ಆ ಸುಭೂಮಿಯ ಬೀಜದ ಮೇಲೆ ಸುರಿಯೆ,
ಆ ಭೂಮಿ ಶೈತ್ಯವಾಗಿ,
ಆ ಬೀಜದ ಒಳಗು ಒಡೆದು ಅಂಕುರ ತೋರಿ,
ಭಕ್ತಿ ಜ್ಞಾನ ವೈರಾಗ್ಯವೆಂಬ ಮರ ಶಾಖೆ
ಫಲ ಬಲಿದು ತುರೀಯ ನಿಂದು ಹಣ್ಣಾಯಿತ್ತು.
ಆ ಹಣ್ಣ ಮೆಲಣ ಜಡವ ಕಳೆದು ಒಳಗಳ ಬಿತ್ತ
ಮುಂದಕ್ಕೆ ಹುಟ್ಟದಂತೆ ಹಾಕಿ
ಉಭಯದ ಮಧ್ಯದಲ್ಲಿ ನಿಂದ ಸವಿಸಾರವ
ಸದಾಶಿವಮೂರ್ತಿಲಿಂಗಕ್ಕೆ ಅರ್ಪಿತವ ಮಾಡು.
(ಸಮಗ್ರ ವಚನ ಸಂಪುಟ: ಆರು-2021 / ಪುಟ ಸಂಖ್ಯೆ-164 / ವಚನ ಸಂಖ್ಯೆ-434)
ಇಡಿ ವಚನ ಕೃಷಿ ಕಾಯಕದ ವಿವರಗಳನ್ನು ಕೊಡುತ್ತಲೆ ಅಂತರಂಗದ ಭಕ್ತಿಯ ನಿರೂಪವನ್ನು ಮಾಡುತ್ತದೆ. ಆದರೆ ಅಲ್ಲಿಯೂ ಸರಳತೆಯಿಲ್ಲ. ಅರಿವಿನ ಮಾರಿತಂದೆಗಳ ವಚನಗಳ ವಿಶೇಷವೇ ಅದು. ಸಂವಹನದ ದೃಷ್ಟಿಯಿಂದ ತುಂಬ ಸಂಕೀರ್ಣವಾದ ವಚನಗಳು ಈ ಶರಣರ ವಚನಗಳು ಎನಿಸುತ್ತವೆ. ಒಂದು ಹಂತದವರೆಗೆ ಕೃಷಿ ರೂಪಕ ನಿಲ್ಲುತ್ತದೆ. ಆದರೆ ವಚನದ ಕೊನೆಗೆ ಬಂದೊಡನೆ ಮತ್ತೆ “ಆ ಹಣ್ಣ ಮೇಲಣ ಜಡವ ಕಳೆದು ಒಳಗಳ ಬಿತ್ತ ಮುಂದಕ್ಕೆ ಹುಟ್ಟದಂತೆ ಮಾಡುವುದೇ” ಇಲ್ಲಿ ಮುಖ್ಯವೆನಿಸುತ್ತದೆ.
ಭಕ್ತಿ ನಮ್ಮ ನಮ್ಮ ಕಾರಣಕ್ಕಾಗಿ ಮಾಡುವದು. ಅದು ಇತರರಿಗಾಗಿ ಅಲ್ಲ. ಇದನ್ನು ತಮ್ಮ ಒಂದು ವಚನದಲ್ಲಿ ನಿರೂಪಣೆ ಮಾಡತಾರೆ ಅರಿವಿನ ಮಾರಿತಂದೆಯವರು.
ಓಗರ ಹಸಿಯಿತ್ತೆಂದು ಉಂಬವರಿಲ್ಲ,
ನೀರು ಬಾಯಾರಿತ್ತೆಂದು ಕುಡಿವರಿಲ್ಲ,
ಭೂಮಿಗೆ ಬಡತನವೆಂದು ಬಿತ್ತುವರಿಲ್ಲ.
ತಮ್ಮ ಒಲವರಕ್ಕೆ ತಾವು ಮಾಡುವಲ್ಲಿ ಗನ್ನದ ಆಸೆ ಬೇಡ,
ಸದಾಶಿವಮೂರ್ತಿಲಿಂಗವನರಿವುದಕ್ಕೆ
(ಸಮಗ್ರ ವಚನ ಸಂಪುಟ: ಆರು-2021 / ಪುಟ ಸಂಖ್ಯೆ-156 / ವಚನ ಸಂಖ್ಯೆ-406)
ಬಹಳ ಸ್ಪಷ್ಟವಾಗಿ ಹೇಳುವದು ಭಕ್ತಿ ತಾ ತನಗೆ ಬೇಕೆಂದು ಮಾಡಿಕೊಂಡದ್ದೇ ಹೊರತು ಬೇರೆಯವರಿಗಾಗಿಯಲ್ಲ. ತನಗೆ ಹೊಟ್ಟೆ ಹಸಿದಿದೆಯಂದು ಉಣ್ಣುತ್ತಾರೆಯೇ ಹೊರತು ನಾನು ಉಣ್ಣದಿರೆ ಅನ್ನ ಕೆಡುತ್ತದೆ ಎಂದಲ್ಲ. ಹಾಗೆಯೆ ತನಗೆ ನೀರಡಿಕೆಯಾಗಿ ನೀರು ಕುಡಿವುದೇ ಹೊರತು ಜಲಕ್ಕೆ ತೃಷೆಯಾಗುವದು ಎಂದು ಯಾರೂ ಕುಡಿಯುವದಿಲ್ಲ. ಭಕ್ತಿ ಕೂಡ ತನ್ನ ಪ್ರೀತಿಗಾಗಿ ಮಾಡುವಂಥದು ಎಂಬುದು ನಿಜಕ್ಕೂ ಅರ್ಥಪೂರ್ಣ ಆಲೋಚನೆಯಾಗಿದೆ.
ಅರಿವಿನ ಮಾರಿತಂದೆಯವರ ವಚನಗಳು ಮಾಯೆಯ ಕುರಿತು ಸಾಕಷ್ಟು ಮಾತನಾಡುತ್ತವೆ. ಮಾಯೆ ನಮ್ಮನ್ನು ಹಿಡಿದು ನುಂಗುವಾಗ ಯಾರೂ ತಡೆಯರು. ಮೂರು ಲೋಕವೆಲ್ಲವೂ ಮಾಯೆಯ ತುತ್ತಾಗುವದನ್ನು ಅರಿವಿನ ಮಾರಿತಂದೆಯವರು ಹೇಳುತ್ತಾರೆ. ಈ ಬಗೆಯ ತಾತ್ವಿಕವಾದ ವಚನಗಳು ಸಾಕಷ್ಟು ಸಂಖ್ಯೆಯಲ್ಲಿವೆ. ಬಹಳ ಸುಂದರವಾದ ಬೆಡಗಿನ ವಚನಗಳನ್ನು ಅರಿವಿನ ಮಾರಿತಂದೆ ಬರೆದಿದ್ದಾರೆ. ಅವುಗಳ ಬೆಡಗು ಬಿಡಿಸಿ ಅರ್ಥ ಮಾಡಿಕೊಳ್ಳಲು ಕಷ್ಟ ಪಡಬೇಕಾಗುತ್ತದೆ. ಉದಾಹರಣೆಗೆ ನಾವು ಲೌಕಿಕ ಮತ್ತು ಪಾರಲೌಕಿಕ ಎರಡೂ ಬಗೆಯ ಬದುಕನ್ನು ಸರಿದೂಗಿಸಿಕೊಂಡು ಹೋಗಬೇಕು ಎಂಬ ತತ್ತ್ವವನ್ನು ಹೇಳಲು
ಕೋಣೆಯೊಳಗಣ ಮಿಂಡ, ನಡುಮನೆಯೊಳಗನ ಗಂಡ,
ಇವರಿಬ್ಬರ ಒಡಗೂಡವಳ ಚಂದವ ನೋಡಾ.
ಕೈಯಲ್ಲಿ ಕಣ್ಣು ಹುಟ್ಟಿ, ಬಾಯಲ್ಲಿ ಬಸುರು ಹುಟ್ಟಿ,
ಮೊಲೆ ತಲೆಯಲ್ಲಿ, ಭಗ ಬೆನ್ನಿನಲ್ಲಿ
ಈ ಹಾದರಗಿತ್ತಿಯ ಅಂದವ ಸದಾಶಿವಲಿಂಗವೇ ಬಲ್ಲ.
(ಸಮಗ್ರ ವಚನ ಸಂಪುಟ: ಆರು-2021 / ಪುಟ ಸಂಖ್ಯೆ-170 / ವಚನ ಸಂಖ್ಯೆ-452)
ಇಡೀ ವಚನ ಸಂಸಾರ ಮತ್ತು ಅದನ್ನು ಮೀರಿದ ಬದುಕಿನ ಚಿಂತನೆಯನ್ನು ಬಹಳ ಸುಂದರವಾಗಿ ಸಮೀಕರಿಸಿದೆ. ಇಂತಹ ಬೆಡಗಿನ ಹಲವರು ವಚನಗಳು ಅವರ ಸಂಕಲನದ ತುಂಬ ಇವೆ.
ಅರಿವಿನ ಮಾರಿತಂದೆಯವರ ವಚನಗಳಲ್ಲಿ ಸಾಮಾಜಿಕ ಚಿಂತನೆ ಇಲ್ಲವೆನ್ನುವಷ್ಟು ಕಡಿಮೆ. ಬಸವಾದಿ ಶರಣರು ಸಮಾಜವನ್ನು ಛಿದ್ರಗೊಳಿಸಿದ ಜಾತಿ ಪೆಡಂಭೂತದ ಬಗ್ಗೆ ಸಾಕಷ್ಟು ವಿಡಂಬನೆ ಮಾಡುತ್ತಾರೆ. ಆದರೆ ಅಂತರಂಗ ಸಾಧಕರಾದ ಅರಿವಿನ ಮಾರಿತಂದೆ ಅಂಥ ಆಲೋಚನೆಗಳನ್ನು ಅಲ್ಲೊಮ್ಮೆ ಇಲ್ಲೊಮ್ಮೆ ತಂದಿದ್ದಾರೆ. ಜ್ಞಾನವನ್ನು ಗುತ್ತಿಗೆ ಹಿಡಿದ ಕೆಲ ಜಾತಿ ಡಂಬಕರನ್ನು ಅವರ ಒಂದು ವಚನ ತಿರಸ್ಕರಿಸಿದೆ. ಕೇವಲ ಉತ್ತಮ ಜಾತಿಯವರನ್ನು ಗುರುತಿಸಿ ಅವರಿಗೆ ಮಾತ್ರ ಜ್ಞಾನ ಹಂಚುವ ಇಂಥಹ ಪೃವೃತ್ತಿಯನ್ನು ಖಂಡಿಸುವ ಅರಿವಿನ ಮಾರಿತಂದೆಯವರು:
ವೇದವ ನುಡಿವಲ್ಲಿ ವಿಪ್ರರು
ಮತ್ತಾರೂ ಶೂದ್ರಜಾತಿ ಕೇಳದಂತೆ ನುಡಿವರದೇತಕ್ಕೆ?
ಅದು ಈಚೆಯ ಮಾತು,
ಕಂಡಕಂಡವರೊಡನೆ ಹೇಳಿಕೊಂಡಾಡುತ್ತಿಪ್ಪ
ದಿವ್ಯಜ್ಞಾನ ಪರಮ ಪ್ರಕಾಶ[ವು]
ಭಂಡರಿಗೇಕೋ ಸದಾಶಿವಮೂರ್ತಿಯಲಿಂಗದ ಅರಿವು.
(ಸಮಗ್ರ ವಚನ ಸಂಪುಟ: ಆರು-2021 / ಪುಟ ಸಂಖ್ಯೆ-179 / ವಚನ ಸಂಖ್ಯೆ-480)
ಎಂದು ಅಂಥ ಡಂಬಕರನ್ನು ವಿಡಂಬಿಸುತ್ತಾರೆ. ಆ ಜ್ಞಾನಿ ಎಲ್ಲರಿಗೂ ಮುಕ್ತವಾಗಿ ಜ್ಞಾನವನ್ನು ನೀಡಬೇಕು. ಇಲ್ಲಿ ಸ್ಪಷ್ಟವಾಗಿ ಕೆಳವರ್ಗವನ್ನು ಶೋಷಿಸುವ ಮೇಲು ಜಾತಿಯ ವಿಡಂಬನೆ ಇದೆ. ಜ್ಞಾನವನ್ನು ಮುಚ್ಚಿಡುವ ಇಂಥ ದುರುಳರ ವಿರುದ್ಧ ಇಲ್ಲಿ ಪ್ರತಿಭಟಣೆ ಎದ್ದು ಕಾಣುತ್ತದೆ.
ಒಟ್ಟಾರೆ ಭಕ್ತಿಯೇ ಮುಖ್ಯ ಎನ್ನುವ ಅರಿವಿನ ಮಾರಿತಂದೆಯವರ ವಚನಗಳು ಅನುಭಾವ ಸಂಪನ್ನತೆಯಿಂದ ಕೂಡಿದ ರಚನೆಗಳು. ಭಕ್ತಿಯಿಲ್ಲದೆ ಇನ್ನೇನೂ ಇಲ್ಲ ಎನ್ನುವಲ್ಲಿ ನಿಜವಾದ ಭಕ್ತಿ ಸಾಧನೆಯಲ್ಲಿದೆ ಹೊರತು ಸಾಧನೆಗಳಲಿಲ್ಲ ಎನ್ನುತ್ತಾರೆ.
ಮೊನೆ ತಪ್ಪಿದಲ್ಲಿ ಅಲಗಿನ ಘನವೇನ ಮಾಡುವದು?
ಅರಿವು ಹೀನವಾದಲ್ಲಿ ಕ್ರೀಯ ಹರವರಿವೇನ ಮಾಡುವದು?
ವಚನ ಶುದ್ಧವಿಲ್ಲದೆ ಲಾಂಛನದ ಉತ್ಕೃಷ್ಟವೇನ ಮಾಡುವದು?
ತ್ರಿಕರಣ ಶುದ್ಧವಿಲ್ಲದೆ ಮಾಟ ದ್ರವ್ಯವ ಕೇಡು, ಭಕ್ತಿಗೆ ಹಾನಿ.
ಇಂತೀ ಗುಣಾದಿಗುಣಂಗಳಲ್ಲಿ ಅರಿಯಬೇಕು.
ಸದಾಶಿವಮೂರ್ತಿಲಿಂಗವನರಿಯಬೇಕು.
(ಸಮಗ್ರ ವಚನ ಸಂಪುಟ: ಆರು-2021 / ಪುಟ ಸಂಖ್ಯೆ-200 / ವಚನ ಸಂಖ್ಯೆ-556)
ಎನ್ನುವ ಶರಣ ಭಕ್ತಿಯಂತಹ ಹಿರಿದು ಯಾವುದು ಇಲ್ಲ. ಎಲ್ಲದಕ್ಕೂ ಭಕ್ತಿಯೇ ಮೂಲ ಎಂದು ಸಾರುತ್ತಾರೆ. ಭಕ್ತನಾಗುವದು ಅಷ್ಟು ಸರಳವಲ್ಲ ಎನ್ನವುದು ಅವರ ಮಾತು.
ಕೋಟಿ ಗುರುವಾಗಬಹುದು, ಭಕ್ತನಾಗಬಾರದು.
ಕೋಟಿ ಲಿಂಗವಾಗಬಹುದು ಭಕ್ತನಾಗಬಾರದು
ಕೋಟಿ ಚರವಾಗಬಹುದು, ಭಕ್ತನಾಗಬಾರದು.
ತ್ರಿವಿಧಕ್ಕಾಧಾರ ಭಕ್ತನ ವಿಶ್ವಾಸ, ತ್ರಿವಿಧದ ಪ್ರಾಣ ಭಕ್ತನ ಚಿತ್ತ.
ಭಕ್ತನ ಬಾಗಿಲಲ್ಲಿ ಈಶ್ವರನಿಪ್ಪ,
ಭಕ್ತನ ಅಂಗಳದಲ್ಲಿ ಮಹಾಲಿಂಗವಿಪ್ಪುದು.
ಭಕ್ತನ ಆಶ್ರಯದಲ್ಲಿ ಪ್ರಸಾದಕ್ಕೆ
ಸದಾಶಿವಮೂರ್ತಿಲಿಂಗವು ಕಾಯಿದುಕೊಂಡಿಪ್ಪನು
(ಸಮಗ್ರ ವಚನ ಸಂಪುಟ: ಆರು-2021 / ಪುಟ ಸಂಖ್ಯೆ-206 / ವಚನ ಸಂಖ್ಯೆ-577)
ಗುರು ಲಿಂಗ ಜಂಗಮಕ್ಕೆಲ್ಲ ಭಕ್ತನೇ ಆಧಾರ. ಅವನಿಲ್ಲದೇ ಯಾವುದು ಇಲ್ಲ ಎಂಬುದನ್ನು ಸಾರಿದ ವಚನಕಾರರು ಅರಿವಿನ ಮಾರಿತಂದೆಯವರು. “ಗುರುವಿಗೂ ಲಿಂಗಕ್ಕೂ ಜಂಗಮಕ್ಕೂ ಭಕ್ತನಂಗವೇ ಮಂದಿರ” ಎನ್ನುತ್ತಾರೆ ಇನ್ನೊಂದೆಡೆ.
ಈ ಅಂಗ ಮತ್ತು ಲಿಂಗ ಒಂದರೊಳಗೊಂದು ಹೊಂದಿಕೊಂಡು ಇರುವಿಕೆಯೂ ಅಚ್ಚರಿಯೇ. ಅರಸ ಅನೇಕ ಅರಮನೆಗಳ ಕಟ್ಟಿಸಿ ಎಲ್ಲದರಲ್ಲಿ ಹಲವು ದಿನ ಇರುವಂತೆ ಆತ್ಮ ಹಲವು ಶರೀರಗಳನ್ನು ಆಶ್ರಯಿಸುತ್ತವೆ ಎಂಬ ರೂಪಕದ ಮೂಲಕ ಶರೀರದೊಳಗಿನ ಪ್ರಾಣ ಬೇರಾಗುವ ಚಿತ್ರಣವನ್ನು ನೀಡುತ್ತಾರೆ.
ಅರಸು ಆಲಯವ ಹಲವ ಕಟ್ಟಿಸಿದಂತೆ,
ಶರೀರದಲ್ಲಿ ಅತ್ಮನು ಹಲವು ನೆಲೆವುಂಟೆಂದು
ತಿರುಗುತ್ತಿಹ ಭೇದವಾವುದು ಹೇಳಯ್ಯಾ?
ಆಘಟದೊಳಗಳ ಭೇದ:
ಅಸು ಹಿಂಗಿದಾಗ ಘಟವಡಗಿತ್ತು.
ಅರಸಿಲ್ಲದಾಗ ಆಲಯ ದೆಸೆಗೆಟ್ಟಿತ್ತು.
ಅಳಿವುದೊಂದು, ಉಳಿದಿಹಲ್ಲಿ ಕಾಬದೊಂದೆ ಭೇದ,
ಸದಾಶಿವಮೂರ್ತಿಲಿಂಗವನರಿತಲ್ಲಿ.
(ಸಮಗ್ರ ವಚನ ಸಂಪುಟ: ಆರು-2021 / ಪುಟ ಸಂಖ್ಯೆ-202 / ವಚನ ಸಂಖ್ಯೆ-562)
ಮನೆಯಲ್ಲಿ ಒಡೆಯ ಇರದಿದ್ದರೆ ಮನೆ ದೆಸೆಗೆಡುವ ರೂಪಕವನ್ನು ಬಸವಣ್ಣನವರೂ ಬಳಸಿದ್ದನ್ನು ಮನೆಯೊಳಗೆ ಮನೆಯೊಡೆಯನಿಲ್ಲ ಎಂಬ ವಚನದಲ್ಲಿ ನೋಡುತ್ತೇವೆ. ಅದೇ ರೂಪಕ ಇಲ್ಲಿ ಇನ್ನೂ ವಿಸ್ತಾರವಾಗಿದೆ.
ಬಹಳ ಸುಂದರವಾದ ಉಪಮೆ ರೂಪಕಗಳ ಸೃಷ್ಟಿ ಅವರದು.
ಉಪ್ಪಿನ ನೀರು ಹೆಪ್ಪು ಬಲಿದು ಘಟ್ಟಿಯಾದಂತೆ
ಮತ್ತೆ ಅಪ್ಪುವ ಬೆರೆಸಿ ತನ್ನಂಗ ತಪ್ಪದಂತೆ,
ಸಕಲ ಶಾಕಂಗಳಲ್ಲಿ ತನ್ನಯ ಇರವ ತೋರಿ ಕುರುಹಿಂಗೆ ಬಾರದಂತೆ
ವಸ್ತು ಅಂಗದಲ್ಲಿ ತನ್ಮಯವಾಗಿ ವೇಧಿಸಿ ಉಭಯ ನಾಮವಳಿದು
ಸದಾಶಿವಮೂರ್ತಿಲಿಂಗದಲ್ಲಿ ಕೂಟಸ್ಥವಾಗಿರಬೇಕು.
(ಸಮಗ್ರ ವಚನ ಸಂಪುಟ: ಆರು-2021 / ಪುಟ ಸಂಖ್ಯೆ-187 / ವಚನ ಸಂಖ್ಯೆ-508)
ಹುತ್ತದೊಳಗನ ಹಾವು ಹದ್ದಿನ ಹೊಟ್ಟೆಯೊಳಗನ ತತ್ತಿ ನುಂಗಿತ್ತ.
ಗಿಡುಗನ ಉಡು ನುಂಗಿ, ಹೊಡೆದವನ ದಡಿ ನುಂಗಿತ್ತು.
ಹಾವನು ಹದ್ದಿನ ತತ್ತಿಯ, ಗಿಡುಗನ ಉಡುವ,
ಹೊಡೆದವನ ಡೊಣ್ಣೆಯ ಬಾಯಿಲ್ಲದ ಇರುಹೆ ನುಂಗಿತ್ತ ಕಂಡೆ.
ಸದಾಶಿವಮೂರ್ತಿಲಿಂಗವು ಬಚ್ಚಬಯಲಾಯಿತ್ತು.
(ಸಮಗ್ರ ವಚನ ಸಂಪುಟ: ಆರು-2021 / ಪುಟ ಸಂಖ್ಯೆ-185 / ವಚನ ಸಂಖ್ಯೆ-504)
ಹೀಗೆ ಅವರ ವಚನಗಳ ಭಾಷೆ ಬಹಳ ಸುಂದರವಾದ ಉಪಮೆ ರೂಪಕಗಳಿಂದ ಪರಿಪುಷ್ಠವಾಗಿದೆ.
ಮುನ್ನೂರಕ್ಕೂ ಹೆಚ್ಚು ವಚನಗಳನ್ನು ಬರೆದಿದ್ದರೂ ಆ ವಚನಗಳಲ್ಲಿ ತನ್ನ ಸ್ವಂತ ಬದುಕಿನ ಬಗ್ಗೆ ಒಂದಿನಿತೂ ಸುಳಿವನ್ನು ಕೊಡದ ಶರಣರ ವೈಯಕ್ತಿಕ ಜೀವನ, ಅವರ ಪೂರ್ವಾಪರಗಳ ಬಗ್ಗೆ ನಮಗೆ ಏನೂ ದೊರಕದೇ ಹೋಗಿದೆ. ಈ ದಿಶೆಯಲ್ಲಿ ಆಗಬೇಕಾದ ಸಂಶೋಧನೆಗೆ ಸಾಕಷ್ಟು ಅವಕಾಶವಿದೆ.
ಡಾ. ಯಲ್ಲಪ್ಪ ಯಾಕೊಳ್ಳಿ.
ಪ್ರಾಚಾರ್ಯರು,
ಸರ್ಕಾರಿ ಪದವಿ ಪೂರ್ವ ಕಾಲೇಜು,
ಯಕ್ಕುಂಡಿ, ಬೆಳಗಾವಿ ಜಿಲ್ಲೆ.
ಮೋಬೈಲ್ ಸಂ. 97319 70857
ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in