ಶ್ರಾವಣ ವಚನ ಚಿಂತನ-13: ವ್ಯೋಮಕಾಯ ಅಲ್ಲಮ ಪ್ರಭುಗಳ ವಚನ ವಿಶ್ಲೇಷಣೆ / ಡಾ. ಯಲ್ಲಪ್ಪ ಯಾಕೊಳ್ಳಿ, ಯಕ್ಕುಂಡಿ, ಬೆಳಗಾವಿ ಜಿಲ್ಲೆ.

ಹಳ್ಳದೊಳಗೆ ಹುಳ್ಳಿ ಬರುತ್ತಿರಲು,
ನೊರೆ ತೆರೆಗಳು ತಾಗಿದುವಲ್ಲಾ!
ಸಂಸಾರ ಸಾಗರದೊಳಗೆ ಸುಖದುಃಖಗಳು ತಾಗಿದುವಲ್ಲಾ!
ಇದಕ್ಕಿದು ಮೂರ್ತಯಾದ ಕಾರಣ
ಪ್ರಳಯವಾಗಿತ್ತು ಗುಹೇಶ್ವರಾ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-142 / ವಚನ ಸಂಖ್ಯೆ-47)

ಮಾನವ ಜನ್ಮವನ್ನು‌ ಹೊಂದಿ ಬಂದ ಮೇಲೆ ಅದಕ್ಕೆ ಸುಖ ದುಃಖಗಳು ತಾಕುತ್ತವೆ. ಎಲ್ಲ ಸುಖ-ದುಃಖಗಳಿಗೆ ಕಾರಣ ನಮ್ಮೊಳಗಿರುವ ಅಜ್ಞಾನ. ತನ್ನ ಇರವನ್ನು ಮರೆತ‌ ಮಾನವ ಅಜ್ಞಾನ‌ದ ಕಾರಣ ಇರುವ ಮಾಯೆಯನ್ನು ಸತ್ಯವೆಂದು ತಿಳಿದು ಅದರಲ್ಲಿಯೆ ಮುಳುಗಿ ಹೊರಳಾಡುತ್ತಾನೆ. ಇದೇ ಮಾಯೆಗೆ ಕಾರಣ ಅಥವಾ ದೇಹದ ನೋವಿಗೆ ಕಾರಣ. ಈ ಮಾಯೆ ಪಲ್ಲಟಿಸಿ ನಿಜ ಜ್ಞಾನ‌ ಪ್ರಾಪ್ತವಾಗುವವರೆಗೆ ಎಂಥವನಿಗೂ ನೋವು ಸಂಕಟ ತಪ್ಪಿದ್ದಲ್ಲ. ಅದು ಹೇಗೆಂದು ನಿರೂಪಿಸಲು‌ ಅಲ್ಲಮ ಪ್ರಭುಗಳು ಒಂದು ಉದಾಹರಣೆಯನ್ನು ಬಳಸುತ್ತಾರೆ. ಹಳ್ಳದೊಳಗೆ ನೀರು ಹರಿಯುವಾಗ ಒಂದು ಕೊಡ್ಡ (ಓಣಗಿದ ಮರದ ತುಂಡು) ತೇಲುತ್ತಿರುತ್ತದೆ. ಅದಕ್ಜೆ ಅಲೆಗಳು, ನೊರೆ ಬಂದು ಬಡಿಯುತ್ತಿರುತ್ತವೆ. ಆದರೆ ಆ ಕೊಡ್ಡವನ್ನು ಅವು ಏನೂ ಮಾಡಲಾರವು.

ಹಾಗೆಯೆ ಸಂಸಾರವನ್ನು ಹೊಂದಿದ ಮೇಲೆ ಸುಖ ದುಃಖಗಳು‌ ಬಂದು ಬಡಿಯುವವೇ. ಅವನ್ನು ಬೇಡ ಎಂದರೆ ಅವು ನಿಲ್ಲಲಾರವು. ದೇಹ ಇರುವವರೆಗೆ ಸುಖ ದುಃಖ ಇರುವವೆ. ಹಾಗೆಯೇ ಎರಡನೆಯ ವಿಚಾರವೆಂದರೆ ಜಗತ್ತಿನಲ್ಲಿ ಹುಟ್ಟಿ ಬಂದ ಮೇಲೆ ಅದಕ್ಕೆ ಒಂದು ಅಂತ್ಯ ಇರಲೇಬೇಕು. ಎಷ್ಟೇ ಚಂದದ ಬಾಳು ಇದ್ದರೂ ಅದು ಕಡೆಯಾಗಲೇಬೇಕು. ಇವೆಲ್ಲ ವಿಚಾರಗಳನ್ನು ಅಲ್ಲಮ‌ಪ್ರಭುಗಳ ಈ ವಚನ ಸಾರಿದೆ‌.

ಪ್ರಳಯ ಎಂದರೆ ಸಾವು ಅಥವಾ ಅಂತ್ಯ, ಅದು ಅನಿವಾರ್ಯ. ಸಾಯುವದಕ್ಕೆ ಹಿಂಜರಿಯಬಾರದು ಎಂದು ಸಾರುವುದು ಈ ವಚನದ ಉದ್ದೇಶ. ಯಾವದು ವಸ್ತು ಅಥವಾ ಜೀವಿ ಮೂರ್ತಿಗೊಂಡಿದೆಯೋ ಅದು ನಾಶವಾಗಲೇಬೇಕು. ಹಾಗಾಗಿ ಹುಟ್ಟಿದ ಮನುಷ್ಯನ ದೇಹ ಒಂದು ದಿನ ನಾಶವಾಗಲೇಬೇಕು ಎಂದು ಅಲ್ಲಮ ಪ್ರಭುಗಳು ಈ ವಚನದಲ್ಲಿ ನಿರೂಪಣೆ ಮಾಡಿದ್ದಾರೆ.

ಡಾ. ಯಲ್ಲಪ್ಪ ಯಾಕೊಳ್ಳಿ.
ಪ್ರಾಚಾರ್ಯರು,
ಸರ್ಕಾರಿ ಪದವಿ ಪೂರ್ವ ಕಾಲೇಜು,
ಯಕ್ಕುಂಡಿ, ಬೆಳಗಾವಿ ಜಿಲ್ಲೆ.
ಮೋಬೈಲ್‌ ಸಂ. 97319 70857

ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
 ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in

Loading

Leave a Reply