
ತನುವ ತೋಂಟವ ಮಾಡಿ, ಮನವ ಗುದ್ದಲಿಯ ಮಾಡಿ,
ಅಗೆದು ಕಳೆದೆನಯ್ಯ ಭ್ರಾಂತಿಯ ಬೇರ.
ಒಡೆದು ಸಂಸಾರದ ಹೇಂಟೆಯ,
ಬಗಿದು ಬಿತ್ತಿದೆನಯ್ಯ ಬ್ರಹ್ಮ ಬೀಜವ.
ಅಖಂಡ ಮಂಡಲವೆಂಬ ಭಾವಿ, ಪವನವೇ ರಾಟಾಳ,
ಸುಷುಮ್ನನಾಳದಿಂದ ಉದಕವ ತಿದ್ದಿ,
ಬಸವಗಳೈವರು ಹಸಗೆಡಿಸಿಹರೆಂದು
ಸಮತೆ ಸೈರಣೆಯೆಂಬ ಬೇಲಿಯನಿಕ್ಕಿ,
ಆವಾಗಳೂ ಈ ತೋಂಟದಲಿ ಜಾಗರವಿದ್ದು
ಸಸಿಯ ಸಲುಹಿದೆನು ಕಾಣಾ ಗುಹೇಶ್ವರಾ.
(ಸಮಗ್ರ ವಚನ ಸಂಪುಟ: ಎರಡು-2021 / ಪುಟ ಸಂಖ್ಯೆ-454 / ವಚನ ಸಂಖ್ಯೆ-1217)
ಅಲ್ಲಮ ಪ್ರಭುಗಳು ಸಾಧನೆಯನ್ನ ನಿರೂಪಿಸಿರುವ ಈ ವಚನ ಸಾಧಕ ವೃಂದಕ್ಕೆನೇ ಆದರ್ಶಪ್ರಾಯವಾಗಿರುವ ದೃವ ನಕ್ಷತ್ರದಂತಿದೆ. ಈ ವಚನವನ್ನ ನೋಡಿದ ಕೂಡಲೆ ಕೃಷಿಗೆ ಸಂಬಂಧಿಸಿದ ವಚನ ಅನಿಸಿದರೂ ಕೂಡ ದೇಹವನ್ನೆ ತೋಟವನ್ನಾಗಿ ಮಾಡಿಕೊಂಡು ಹೇಗೆ ಪರಮಾನಂದದ ಬೆಳೆಯನ್ನು ಬೆಳೆಯಬಹುದು ಎಂದು ವಿವರಿಸಿದ್ದಾರೆ.
ಅಲ್ಲಮ ಪ್ರಭುಗಳು ಲೋಕ ಸಂಚಾರ ಮಾಡುತ್ತಿರುವಾಗ ಕೃಷಿಕನಾದ ಶರಣ ಗೊಗ್ಗಯ್ಯನವರನ್ನು ಭೇಟಿ ಆಗತಾರೆ. ಶರಣ ಗೊಗ್ಗಯ್ಯನವರ ಆಧ್ಯಾತ್ಮಿಕ ಆಕಾಂಕ್ಷೆಯನ್ನ ಗುರುತಿಸಿದ ಪ್ರಭುಗಳು ತೋಟಗಾರರಾದ ಶರಣ ಗೊಗ್ಗಯ್ಯನವರಿಗೆ ಕೃಷಿಯ ಭಾಷೆಯಲ್ಲಿಯೇ ಈ ವಚನದ ಮೂಲಕ ಅಧ್ಯಾತ್ಮದ ಅರಿವನ್ನ ಮೂಡಿಸಿ ಶರಣ ಗೊಗ್ಗಯ್ಯನವರಿಗೆ ಪೂರ್ಣ ಸಾಧನೆಯ ಮಾರ್ಗವನ್ನ ತೋರಿಸಿ ಕೊಡುತ್ತಾರೆ.
ತನುವ ತೋಂಟವ ಮಾಡಿ, ಮನವ ಗುದ್ದಲಿಯ ಮಾಡಿ, ಅಗೆದು ಕಳೆದೆನಯ್ಯ ಭ್ರಾಂತಿಯ ಬೇರ:
ಇಲ್ಲಿ ಅಲ್ಲಮರು ಗೊಗ್ಗಯ್ಯನಿಗೆ ಹೇಳುತ್ತಾರೆ, ನೋಡು ನಿನ್ನ ತೋಟದಂತೆಯೆ ನಾನೂ ಕೂಡ ಒಂದು ತೋಟವನ್ನ ಮಾಡಿದ್ದೆನೆ. ಶರೀರವನ್ನೆ ತೋಟವನ್ನಾಗಿಸಿ, ಆ ತೋಟದಲ್ಲಿ ಮನವನ್ನೆ ಗುದ್ದಲಿಯನ್ನಾಗಿ ಮಾಡಿಕೊಂಡು ತೋಟದಲ್ಲಿ ಹೇಗೆ ಕಸ, ಕಳೆಯ ಗಿಡಗಳನ್ನು ತಗೆಯುತ್ತಾರೊ ಹಾಗೇಯೆ ಮನದಲ್ಲಿನ ಭ್ರಾಂತಿಯ ಬೇರನ್ನ ಅಂದರೆ ಸುಳ್ಳು, ಅಸತ್ಯ, ಭ್ರಮೆ, ಅಜ್ಞಾನ ಎಂಬ ಭ್ರಾಂತಿಯ ಬೇರನ್ನ ಅಗೆದು ತಗೆಯುತ್ತೆನೆ. ಹೊಲದಲ್ಲಿ ಮಣ್ಣಿನ ಹೇಂಟೆಗಳನ್ನ ಒಡೆದು ಹಸನು ಮಾಡುವಂತೆ, ನಮ್ಮ ಜೀವನದಲ್ಲಿ ನಾನು, ನನ್ನದು, ನನ್ನಿಂದ ಎನ್ನುವ ಆಸೆ, ಸಂಸಾರದ ಮೋಹ ಎಂಬ ಹೇಂಟೆಗಳನ್ನ ಒಡೆದು ಹಾಕುತ್ತೆನೆ. ಹೊಲದಲ್ಲಿ ಉತ್ತಮ ಫಸಲು ಬೆಳೆಯಲು ಉತ್ತಮ ಬೀಜಗಳನ್ನು ಬಿತ್ತುವಂತೆ ನಾನೂ ಕೂಡ ಪರಮಾನಂದವನ್ನ ಬೆಳೆಯಲಿಕ್ಕೆ ಬ್ರಹ್ಮ (ಪರಮಾತ್ಮ) ಎಂಬ ಬೀಜವನ್ನು (ಮಂತ್ರ) ಬಿತ್ತನೆ ಮಾಡುತ್ತೆನೆ.
ಅಖಂಡ ಮಂಡಲವೆಂಬ ಭಾವಿ, ಪವನವೇ ರಾಟಾಳ, ಸುಷುಮ್ನನಾಳದಿಂದ ಉದಕವ ತಿದ್ದಿ:
ಇಲ್ಲಿ ಅಲ್ಲಮ ಪ್ರಭುಗಳು ಹೇಳತಾರೆ. ಹೊಲದಲ್ಲಿ ಮಳೆಯಿಂದ ಅಥವಾ ಕೆರೆಗಳ ಮೂಲಕ ನೀರನ್ನ ಹರಿಸುತ್ತಾರೊ ಹಾಗೇಯೆ ನಾನು ನನ್ನ ತನುವೆಂಬ ತೋಟಕ್ಕೆ ಅಖಂಡ ಮಂಡಲವೆಂಬ ಬಾವಿಯ ಅಂದರೆ ಭೂಮಿ ಆಕಾಶದಷ್ಟಿರುವ ಅನಂತತೆಯ ಭಾವಿಯ ನೀರನ್ನ ಹರಿಸುತ್ತೆನೆ. ನನ್ನ ದೇಹದಲ್ಲಿರುವ ಉಸಿರನ್ನೆ ರಾಟಾಳ (ನೀರನ್ನು ಭಾವಿಯಿಂದ ಮೇಲಕ್ಕೆತ್ತುವ ಚಕ್ರ) ವಾಗಿಸಿ ಸುಷುಮ್ನ ನಾಡಿಯ ಮೂಲಕ ಅಂದರೆ ಯೋಗ ಪ್ರಾಣಾಯಾಮದ ಉಸಿರಿನ ಮೂಲಕ ಭಕ್ತಿ ಎಂಬ ನೀರನ್ನ ಹರಿಸುತ್ತೆನೆ. ಉಸಿರಿನ ಮೂಲಕ ಚಂಚಲತೆಯಿಂದ ಹರಿದಾಡುವ ಮನಸ್ಸನ್ನ ಒಂದೆಡೆಗೆ ನಿಲ್ಲಿಸುತ್ತೆನೆ. ಅಂತ ಹೇಳತಾರೆ.
ಬಸವಗಳೈವರು ಹಸಗೆಡಿಸಿಹರೆಂದು, ಸಮತೆ ಸೈರಣೆಯೆಂಬ ಬೇಲಿಯನಿಕ್ಕಿ:
ತೋಟದಲ್ಲಿ ಎಳೆಯ ಸಸಿಗಳು ಹಾಳಾಗದಿರಲೆಂದು, ಕಾಡು ಪ್ರಾಣಿಗಳಿಂದ ಸಸಿಗಳನ್ನು ರಕ್ಷಿಸಲು ಹೇಗೆ ಬೇಲಿಯನ್ನ ಹಾಕ್ತಾರೊ ಹಾಗೆಯೆ ನಾನೂ ಕೂಡಾ ನನ್ನ ಮನಸ್ಸಿಗೆ ಸಪ್ತವ್ಯಸನಗಳು, ಅಷ್ಟಮದಗಳು, ಅರಿಷಡ್ವರ್ಗಗಳು ಮತ್ತು ಪಂಚೆಂದ್ರಿಯಂಗಳೆಂಬ ಪ್ರಾಣಿಗಳಿಂದ ರಕ್ಷಿಸಲು ಸಂಯಮದ ಬೇಲಿ, ಸಮಾನತೆಯೆಂಬ ಬೇಲಿಯನ್ನ ಹಾಕುತ್ತೆನೆ.
ಆವಾಗಳೂ ಈ ತೋಂಟದಲಿ ಜಾಗರವಿದ್ದು, ಸಸಿಯ ಸಲುಹಿದೆನು ಕಾಣಾ ಗುಹೇಶ್ವರಾ:
ರೈತ ತಾನು ಬೆಳೆದ ಬೆಳಯನ್ನು ಹಗಲೂ ರಾತ್ರಿ ಎಚ್ಚರವಿದ್ದು ಕಾಯುವಂತೆ, ಪರಮಾತ್ಮನ ಪರಮಾನಂದವನ್ನ ಪಡೆಯಲು ಸಾಧಕ ಯಾವಾಗಲೂ ಎಚ್ಚರವಾಗಿದ್ದು, ಅಂತರಂಗದ ಮತ್ತು ಬಹಿರಂಗದ ಇಂದ್ರಿಯಗಳು ದುಡುಕಿ ದಾರಿ ತಪ್ಪದಂತೆ ಮನಸ್ಸನ್ನು ಕಾವಲು ಕಾಯಬೇಕು. ಅವುಗಳ ನಿಯಂತ್ರಣ ಮಾಡಬೇಕು, ಮನಸ್ಸನ್ನ ಪರಮಾತ್ಮನಲ್ಲಿ ಶರಣಾಗತನನ್ನಾಗಿ ಮಾಡಬೇಕು. ಇಷ್ಟೆಲ್ಲ ಎಚ್ಚರವಾಗಿದ್ದು ಸಾಧನೆ ಮಾಡಿದ್ರೆ ಬ್ರಹ್ಮನ ಸಾಕ್ಷಾತ್ಕಾರ ಆಗುತ್ತೆ.
ಈ ಇಡಿ ವಚನದಲ್ಲಿ ರೈತ ಕೃಷಿಯು ಮೂಲಕ ತನಗೆ ಬೇಕಾದ ಫಸಲನ್ನ ಪಡೆದುಕೊಂಡು ಹೇಗೆ ಸಂತೋಷ ಪಡುತ್ತಾನೋ ಅದೆ ರೀತಿ ಒಬ್ಬ ಅನುಭಾವಿ ಸಾಧಕ ತನ್ನ ದೇಹವನ್ನೆ ತೋಟವ ಮಾಡಿಕೊಂಡು ಅನುಭಾವದ ಬೆಳೆಯನ್ನ, ಅದರ ಮೂಲಕ ಸಾಕ್ಷಾತ್ಕಾರವನ್ನ, ಪರಮಾನಂದವನ್ನ ಪಡೆದುಕೊಳ್ತಾರೆ ಅಂತ ಅಲ್ಲಮ ಪ್ರಭುಗಳು ವಿವರಿಸಿದ್ದಾರೆ. ಅಷ್ಟೆ ಅಲ್ಲದೆ ಈ ವಚನದಲ್ಲಿ ಸಮಾನತೆಯ ತತ್ವ ಇದೆ, ಸಂಯಮದ ಪಾಠ ಇದೆ.
ಕೃಷಿ ಬೇಸಾಯದ ಜೊತೆಗೆ ತಾಳ್ಮೆ, ಅರಿವು, ಸದಾಚಾರದ ಮೃದು ಮಾತುಗಳಿಂದ ಅನುಭಾವದ ಬೆಳೆಯನ್ನ ಹೇಗೆ ತೆಗೆಯಬೇಕೆಂದು ಈ ವಚನದಲ್ಲಿ ವಿವರಿಸಿದ್ದಾರೆ. ಇದೊಂದು ಪರಿಪೂರ್ಣ ವಚನ.
ಶ್ರೀಮತಿ. ಅನುಪಮ ಪಾಟೀಲ,
ನಂ. 10, ದೇಸಾಯಿ ಪಾರ್ಕ್,
ಕುಸೂಗಲ್ ರಸ್ತೆ, ಕೇಶ್ವಾಪೂರ,
ಹುಬ್ಬಳ್ಳಿ – 580 023.
ಮೋ. ಸಂ. +91 9845810708.
ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in.