
ವಚನ ಸಾಹಿತ್ಯದಲ್ಲಿ ಬಸವಯುಗದ ವಚನಕಾರ್ತಿಯರಂತೆ ಕೊಡುಗೆಯಿತ್ತವರನ್ನು ಬಹುಶಃ ಯಾವ ಶತಮಾನವೂ ಕಂಡಿರಲಿಕ್ಕಿಲ್ಲ. ಈ ಕಾಲಘಟ್ಟದಲ್ಲಿ ಹಲವಾರು ಶರಣೆಯರು ತಮ್ಮ ಮುಕ್ತ ಮನಸ್ಸಿನಿಂದ, ಸ್ವತಂತ್ರ ಆಲೋಚನೆಗಳಿಂದ ಎಲ್ಲರೂ ಬೆರಗಾಗುವಂತೆ ವಚನಗಳನ್ನು ರಚನೆ ಮಾಡಿದ್ದಾರೆ. ವಚನಯುಗವು ಮಹಿಳೆಯರ ಆಂತರ್ಯದಲ್ಲಿ ನವ ಜಾಗ್ರತ, ನವ ಸಾಕ್ಷರತೆಯ ಅರಿವನ್ನ ಮೂಡಿಸಿ ಸುಮಾರು 39 ಕ್ಕೂ ಹೆಚ್ಚು ಜನ ಶರಣೆಯರಿಗೆ ವಚನ ರಚನೆ ಮಾಡುವ ಅವಕಾಶವನ್ನು ಕಲ್ಪಿಸಿಕೊಟ್ಟಿತು. ಬಸವಣ್ಣನವರ ಈ ಕ್ರಾಂತಿಯು ಶ್ರೇಣಿಕೃತ ಸಮಾಜದಲ್ಲಿನ ದೀನ-ದಲಿತರನ್ನು ಮೇಲೆತ್ತುವದರ ಜೊತೆಗೆನ ಕಡೆಗಣಸಲ್ಪಟ್ಟಿದ್ದ ಮಹಿಳೆಯರನ್ನು ಉದ್ಧಾರ ಮಾಡಿ ಸಮಾಜದ ಮುಖ್ಯ ವಾಹಿನಿಗೆ ಕರೆ ತರುವದಾಗಿತ್ತು. ಮಹಿಳೆಯರು ಮನೆ ಬಿಟ್ಟು ಹೊರೆಗೆ ಬರಲಾರದಂತಹ ಕಾಲಘಟ್ಟದಲ್ಲಿ ಅವರಿಗೆ ಆತ್ಮಗೌರವ ನೀಡಿ ಆತ್ಮಸ್ಥೆೈರ್ಯ ತುಂಬಿದರು. ಅಕ್ಷರ ಲೋಕಕ್ಕೆ ಅಪರಿಚಿತರಾದಂತಹ ಮಹಿಳೆಯರಿಗೆ ಅಕ್ಷರಗಳನ್ನು ಕಲಿಸಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ. ವಚನ ಸಾಹಿತ್ಯದಲ್ಲಿ ನಮಗೆ ಸುಮಾರು 250 ಕ್ಕೂ ಹೆಚ್ಚು ಶರಣೆಯರ ಉಲ್ಲೇಖ ಸಿಗುತ್ತದೆ. ಆದರೆ ನಮಗೆ ಕೇವಲ 39 ಶರಣೆಯರ ವಚನಗಳು ಮಾತ್ರ ಲಭ್ಯವಾಗಿವೆ. ವಚನ ಸಾಹಿತ್ಯದ ಬೆಳೆಕಿನಲ್ಲಿ ಈ ಶರಣೆಯರು ಸುಮಾರು 1350 ಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದಾರೆ. ಆ ಕಾಲದಲ್ಲಿನ ಸಂಸ್ಕೃತ ಭಾಷೆಯ, ವೇದ ಉಪನಿಷತ್ತುಗಳ ಆರ್ಯ ಸಂಸ್ಕೃತಿಯಂತಹ ಆಲದ ಮರದ ನೆರಳಿನಲ್ಲಿ ಕನ್ನಡದಲ್ಲೆ ವಚನಗಳನ್ನು ರಚಿಸಿದ್ದು ಹೆಗ್ಗಳಿಕೆ.
ಆಧ್ಯಾತ್ಮಿಕ ಅನುಭಾವದ ದೃಷ್ಠಿಯಿಂದ ನೋಡಿದರೆ ವಚನಕಾರ್ತಿಯರು ಯಾರಿಗೂ ಕಡಿಮೆ ಇಲ್ಲದಂತೆ ವಿಫಲವಾದ ಸಾಹಿತ್ಯ ರಚಿಸಿದ್ದಾರೆ. ಬಸವಣ್ಣನವರ ಸಾಮಾಜಿಕ ಕ್ರಾಂತಿಯ ಮತ್ತೊಂದು ಮುಖ ಅಂದರೆ ಸ್ತ್ರೀ ಸ್ವಾತಂತ್ರ್ಯ. ಯಾವ ಹಮ್ಮು, ಬಿಮ್ಮು ಇಲ್ಲದೆ ಸ್ವತಂತ್ಯವಾಗಿ ವಚನಗಳನ್ನು ರಚಿಸಿದರು. ಎಷ್ಟು ಸ್ವತಂತ್ರ ಆಲೋಚನೆಗಳು ಇದ್ದವು ಅಂದರೆ, ಮಹಾದೇವಿಯಕ್ಕ, ಮುಕ್ತಾಯಕ್ಕ ನಂತಹ ಶರಣೆಯರು ವ್ಯೋಮಮೂರ್ತಿ ಅಲ್ಲಮ ಪ್ರಭುಗಳನ್ನೇ ಪ್ರಶ್ನೆ ಮಾಡುವಂತಹ ಪ್ರಖರ ಬುದ್ಧಿವಂತರಾಗಿದ್ದು. ಅವರಲ್ಲದೆ ಕೆಲವು ಶರಣೆಯರು ತಮ್ಮ ತೀಕ್ಷ್ಣವಾದ ವಚನಗಳ ಮೂಲಕ ಸಮಾಜದ ಓರೆ-ಕೋರೆಗಳನ್ನು ಎತ್ತಿ ತೋರಿಸಿ ಸಮಾಜದ ಉನ್ನತಿಗೆ ಯತ್ನಿಸಿದ್ದು ಅವರಲ್ಲಿ ಒಬ್ಬ ಪ್ರಮುಖ ವಚನಕಾರ್ತಿ ನಮ್ಮ ಪ್ರಾಮಾಣಿಕ ಸತ್ಯ ಸಾಧಕಿ ಶರಣೆ ಸತ್ಯಕ್ಕನ್ನವರು.
ಶಿವನನ್ನಲ್ಲದೆ ಅನ್ಯ ದೈವವ ಪೂಜಿಸಿ ಶಿವ ಶಬ್ದವನ್ನಲ್ಲದೆ ಅನ್ಯ ದೈವದ ಹೆಸರ ಕೇಳಿ ಎಂಬ ಏಕದೇವನಿಷ್ಠೆ ಸತ್ಯಕ್ಕನವರದಾಗಿತ್ತು. ಸತ್ಯಕ್ಕನವರನ್ನು ಕುರಿತು ನಡುಗನ್ನಡ ಕಾವ್ಯ ಕೃತಿಗಳಲ್ಲಿ ಪ್ರಸ್ತಾಪ ನಮಗೆ ಸಿಗುತ್ತದೆ. ಹರಿಹರ, ಲಕ್ಕಣ್ಣ ದಂಡೇಶ, ಮುಪ್ಪಿನ ಷಡಕ್ಷರಿ, ನಂಜುಂಡ ಕವಿ, ವಿರುಪಾಕ್ಷ ಪಂಡಿತ, ಷಡಕ್ಷರದೇವ, ಶಾಂತಲಿಂಗ ದೇಶಿಕ, ತೊಂಟದ ಸಿದ್ಧಲಿಂಗ ಶಿವಯೋಗಿಗಳು ಮೊದಲಾದಂತಹ ಶಿಷ್ಟ ಕವಿಗಳ ಕಾವ್ಯಗಳಲ್ಲಿ ಸತ್ಯಕ್ಕನವರ ಬಗ್ಗೆ ನಮಗೆ ಮಾಹಿತಿ ಸಿಗುತ್ತವೆ. ಶಿವಮೂರ್ತಿ ಶಾಸ್ತ್ರಿಗಳು ಸಂಪಾದಿಸಿರುವ “ಶಿವಶರಣರ ತ್ರಿಪದಿಗಳು”, ಕೃಷ್ಣಮೂರ್ತಿ ಅವರು ಸಂಪಾದಿಸಿರುವ ಕನ್ನಡ ಜನಪದ ಸಾಹಿತ್ಯ ಭಂಡಾರ ಮತ್ತು ಏ. ಜಿ. ನೀಲಗಾರ ಅವರು ಸಂಪಾದಿಸಿರುವ ʼಅಕ್ಕ ನಾಗಮ್ಮನ ಜೋಗುಳ ಪದʼ ಮುಂತಾದ ಜನಪದ ಕಾವ್ಯಗಳಲ್ಲಿಯೂ ಸತ್ಯಕ್ಕನವರ ಬಗ್ಗೆ ಮಾಹಿತಿಗಳು ಸಿಗುತ್ತವೆ. ಈ ಎಲ್ಲ ಮಾಹಿತಿಗಳಿಂದ ನಾವು ಸತ್ಯಕ್ಕನವರ ಜೀವನ ಚರಿತ್ರೆಯನ್ನು ನಾವು ಹೀಗೆ ವಿಶ್ಲೇಷಿಸಬಹುದು.
ಶಿವಮೊಗ್ಗ ಜಿಲ್ಲೆ ನಮಗೆ ಹಲವಾರು ಶಿವಶರಣರನ್ನು ನಮಗಿತ್ತ ಸ್ಥಳ. ಮಹಾದೇವಿಯಕ್ಕ, ಅಲ್ಲಮ ಪ್ರಭುಗಳಂತಹ ಮಹಾ ಮಹಿಮರನ್ನ ನಮ್ಮ ನಾಡಿಗಿತ್ತ ಪುಣ್ಯ ಸ್ಥಳ. ಅದೇ ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪದಿಂದ ಕೇವಲ ನಾಲ್ಕು ಕಿ.ಮೀ. ದೂರದಲಿರುವ ಹಿರೆಜಂಬೂರ ಗ್ರಾಮವೇ ಸತ್ಯಕ್ಕನವರ ಊರು. ಇದೇ ಗ್ರಾಮದಲ್ಲಿ ಜಕ್ಕೆಶ್ವರನ ದೇವಾಲಯವಿದೆ. 12 ನೇ ಶತಮಾನದಲ್ಲಿ ಶಿವಶರಣರು ವಾಸವಾಗಿದ್ದ ಜಂಬೂರು ಗ್ರಾಮದಲ್ಲಿ ಶರಣರ ಮನೆಯಂಗಳದ ಕಸ ಗುಡಿಸುವ ಕಾಯಕದಲ್ಲಿ ಸತ್ಯಕ್ಕನವರು ನಿರತ ಆಗಿದ್ದರು ಎಂದು ರಾವಬಹದ್ದೂರ ಫ. ಗು. ಹಳಕಟ್ಟಿ ಅವರ ಶಿವಶರಣೆಯರ ಚರಿತ್ರೆಗಳು ಎಂಬ ಕೃತಿಯಿಂದ ಗೊತ್ತಾಗುತ್ತದೆ. ಇವರ ಕಾಲಮಾನ ಸುಮಾರು 1160 ಆಗಿರಬಹುದು. ತನ್ನ ಆರಾಧ್ಯ ದೈವ ಜಕ್ಕೆಶ್ವರನ ಹೆಸರಿನಲ್ಲಿ ಕಸಗೂಡಿಸುವ ಒಬ್ಬ ಸಾಮಾನ್ಯ ಮಹಿಳೆ ಆದ್ಯಾತ್ಮದ ಕ್ಷೇತ್ರದಲ್ಲಿ ಎತ್ತರವಾಗಿ ಬೆಳಯಲಿಕ್ಕೆ ಶರಣರ ಪ್ರಭಾವವೆ ಕಾರಣವಾಗಿತ್ತು. “ಶಂಭುಜಕ್ಕೆಶ್ವರ” ಎಂಬ ಅಂಕಿತ ನಾಮದಿಂದ ಸತ್ಯಕ್ಕನವರು ರಚಿಸಿದ ಸುಮಾರು 27 ವಚನಗಳು ಇಲ್ಲಿಯವರೆಗೆ ನಮಗೆ ಸಿಕ್ಕಿವೆ. ದೃಢ ನಿಲುವಿನ, ನಿಷ್ಟಾ ಭಕ್ತಿಯ ಸತ್ಯಕ್ಕನವರು ಶರಣರಲ್ಲಿಯ ಅತ್ಯಂತ ವಿಶಿಷ್ಟ ವ್ಯಕ್ತಿತ್ವ ಹೊಂದಿದವರಾಗಿದ್ದಾರೆ. ಬೊಂತಾದೇವಿ, ಗೊಗ್ಗವ್ವೆಯವರ ಹಾಗೆ ಈ ಸತ್ಯಕ್ಕನೂ ಮದುವೆ ಆಗಿರಲಿಲ್ಲ. ಆದರೆ ಮದುವೆ ಆಗಿ ಸಂಸಾರವನ್ನೆ ಕಂಡಿರದ ಈ ಶರಣೆ ಸಂಸಾರವನ್ನ ಕುರಿತು ದಾಂಪತ್ಯದ ಬಗ್ಗೆ ಬಹಳ ಮಹತ್ವದ ಮಾತುಗಳನ್ನಾಡಿರುವದು ಅತ್ಯಂತ ಕುತೂಹಲ. ಶಿವನನ್ನಲ್ಲದೆ ಅನ್ಯ ದೇವರುಗಳನ್ನ ಪೂಜಿಸದ ಸತ್ಯಕ್ಕನವರು ತನ್ನ ವಚನಗಳೊಳಗೆ ಶಿವನನ್ನೆ ವಿಡಂಬನ ಮಾಡ್ತಾರೆ. ಶಿವನಿಗೇನೇ ಪ್ರಶ್ನೆ ಮಾಡುತ್ತಾರೆ. ಊರಲ್ಲಿರುವ ಜಕ್ಕೆಶ್ವರನ ಗುಡಿಗೆ ಊರಲ್ಲಿನ ಅಸ್ಪ್ರಶ್ಯ ಜನಾಂಗದವರು ಹರಕೆಯನ್ನ ಹೊರತಿದ್ರು. ಅವರನ್ನ ಕೀಳು ಮಟ್ಟದಲ್ಲಿ ಕಾಣುತ್ತಿದ್ದ ಊರ ಜನರ ಬಗ್ಗೆ ಅವರಿಗಿದ್ದ ಸಿಟ್ಟು ಅವರ ವಚನಗಳಲ್ಲಿ ಕಂಡು ಬರುತ್ತದೆ.
ಇನ್ನು ಸತ್ಯಕ್ಕನವರ ವಚನಗಳಲ್ಲಿ ಶಿವ ಮಹಿಮೆ, ಸತಿ-ಪತಿ ಭಾವ, ಸದ್ಭಕ್ತಿಯ ಮಹತ್ವ, ಸದಾಚಾರ, ಸ್ತ್ರೀ ಪುರುಷರ ಸಮಾನತೆ, ಗುರು-ಶಿಷ್ಯರ ಸಂಬಂಧ, ಗುರು-ಲಿಂಗ-ಜಂಗಮದ ಪ್ರಾಮುಖ್ಯತೆ, ಢಾಂಬಿಕರ ವಿಡಂಬನೆ ಮುಂತಾದ ವಿಷಯಗಳು ಗಮನ ಸೆಳೆಯುತ್ತವೆ. ಢಾಂಬಿಕ ಗುರು ಶಿಷ್ಯರನ್ನು ನೇರವಾಗಿ ತರಾಟೆಗೆ ತೆಗೆದುಕೊಳ್ಳುವ ಸತ್ಯಕ್ಕನವರು ಭವಿಗಳನ್ನು ಟೀಕಿಸಿದ್ದಾರೆ. ಭವಿಗಳನ್ನು ಅಸತ್ಯಕ್ಕೆ ಜಡ ಜೀವಿಗಳು ಹುಟ್ಟು ಅಂಧಕರು, ಭಾಷೆ ಹೀನರು ಅಂತೆಲ್ಲ ಕರಿತಾರೆ. ಅಹಂಭಾವದ ಅರಸರನ್ನ ಅಸಮಾನತೆ ಬಿತ್ತುವ ಪುರೋಹಿತರನ್ನ ಕಾಯಕ ಮಾಡದ ಆಲಸಿಗಳನ್ನ ಸತ್ಯಕ್ಕ ಭವಿಗಳೆಂದು ಕರೆಯುತ್ತಾರೆ.
ಸತ್ಯಕ್ಕ ಅಂದರೆ ನಮಗೆ ಅವರ ಈ ಒಂದು ಅದ್ಭುತವಾದ ವಚನ ನೆನಪಿಗೆ ಬರುತ್ತದೆ:
ಲಂಚವಂಚನಕ್ಕೆ ಕೈಯಾನದ ಭಾಷೆ.
ಬಟ್ಟೆಯಲ್ಲಿ ಹೊನ್ನು ವಸ್ತ್ರ ಬಿದ್ದಿದ್ದರೆ
ನಾ ಕೈ ಮುಟ್ಟಿ ಎತ್ತಿದೆನಾದೆರೆ
ನಿಮ್ಮಾಣಿ ನಿಮ್ಮ ಪ್ರಮಥರಾಣೆ
ಅದೇನು ಕಾರಣವೆಂದರೆ,
ನೀವಿಕ್ಕಿದ ಭಿಕ್ಷದಲ್ಲಿಪ್ಪೆನಾಗಿ,
ಇಂತಲ್ಲದೆ ನಾನು ಅಳಿಮನವ ಮಾಡಿ
ಪರದ್ರವ್ಯಕ್ಕೆ ಆಸೆ ಮಾಡಿದೆನಾದರೆ,
ನೀನಾಗಲೆ ಎನ್ನ ನರಕದಲ್ಲಿ ಅದ್ದಿ
ನೀನೆದ್ದು ಹೋಗಾ ಶಂಭುಜಕ್ಕೇಶ್ವರಾ.
(ಸಮಗ್ರ ವಚನ ಸಂಪುಟ: ಐದು-2021 / ಪುಟ ಸಂಖ್ಯೆ-446 / ವಚನ ಸಂಖ್ಯೆ-1227)
ಅತ್ಯಂತ ಸಭ್ಯ, ಘನತೆಯ ಮತ್ತು ಸರಳ ಜೀವನ ಸತ್ಯಕ್ಕನವರದಾಗಿತ್ತು. ತಾನು ಲಂಚಕ್ಕೆ ಕೈ ಒಡ್ಡಲಾರೆನೆಂದೂ ದಾರಿಯಲ್ಲಿ ಬಿದ್ದ ಅನ್ಯರ ಒಡವೆ ವಸ್ತ್ರಗಳನ್ನ ಕೈಯಿಂದಲೂ ಮುಟ್ಟಲಾರೆನೆಂದೂ ತನಗೆ ತಾನೆ ನಿರ್ಭಂಧ ಹೇರಿಕೊಂಡು, ಮುಟ್ಟಿದೆನಾದರೆ ನನ್ನನ್ನು ನರಕದಲ್ಲಿ ಅದ್ದಿ ಬಿಡು ಅಂತಾರೆ. ನುಡಿದಂತೆ ನಡೆದ ನಡೆದಂತೆ ನುಡಿದ ಉದಾತ್ತ ಚಿಂತನೆಯ ಪ್ರಾಮಾಣಿಕತೆಯ ಸತ್ಯಾ ಸತ್ಯತೆಯ ಮತ್ತು ಸಮಗ್ರ ಬದುಕನ್ನ ನಡೆಸಿದ ಸತ್ಯಕ್ಕನವರು ನಮಗೆಲ್ಲ ಆದರ್ಶ ವ್ಯಕ್ತಿ. ಒಬ್ಬ ಸಾಮಾನ್ಯ ಮಹಿಳೆ ಅನುಸರಿಸಿದ ಈ ಶುದ್ಧ ಮಾರ್ಗ ಇಂದಿನ ಭ್ರಷ್ಠರಿಗೆ ಬಹುದೊಡ್ಡ ಪಾಠ ಅಂತ ನನಗನಿಸುತ್ತದೆ.
ಇನ್ನು ಸತ್ಯಕ್ಕನವರ ಇನ್ನೊಂದು ವಚನ ನೋಡೋಣ:
ಅರ್ಚನೆ ಪೂಜನೆ ನೇಮವೆಲ್ಲ;
ಮಂತ್ರ ತಂತ್ರ ನೇಮವಲ್ಲ;
ಧೂಪ ದೀಪಾರತಿ ನೇಮವಲ್ಲ;
ಪರಧನ, ಪರಸ್ತ್ರೀ ಪರದೈವಂಗಳಿಗೆರಗದಿಪ್ಪುದೆ ನೇಮ.
ಶಂಭುಜಕ್ಕೇಶ್ವರನಲ್ಲಿ ಇವು ಕಾಣಿರಣ್ಣ ನಿತ್ಯ ನೇಮ.
(ಸಮಗ್ರ ವಚನ ಸಂಪುಟ: ಐದು-2021 / ಪುಟ ಸಂಖ್ಯೆ-438 / ವಚನ ಸಂಖ್ಯೆ-1205)
ನೋಡಿ ಎಂತಾ ತೀಕ್ಷ್ಣ ವಚನ ಇದು. ಅತ್ಯಂತ ಸರಳ ಆಗಿದ್ದರೂ ಮಹತ್ತರವಾದ ವಿಷಯವನ್ನ ತಿಳಿಸುತ್ತದೆ. ಲೋಕದಲ್ಲಿ ಭಗವದ್ಭಕ್ತಿ ಮತ್ತು ಆ ಬಗೆಗಿನ ಪೂಜೆ-ವೃತಾಚರಣೆಗಳು ಅವರವರ ಅಭಿರುಚಿ ನಂಬಿಕೆ ಭಾವಗಳಿಗೆ ಅನುಗುಣವಾಗಿ ನೂರಾರು ಸಾವಿರಾರು ಇರುತ್ತವೆ. ಪ್ರತಿಯೊಬ್ಬರಿಗೂ ತಮ್ಮದೆ ಸರಿ ಅಂತ ಅನಿಸ್ತಾ ಇರುತ್ತೆ. ತಾನು ಭಕ್ತನೆಂದು ಬಿಂಬಿಸುವದಕ್ಕೆ ಹತ್ತು ಹಲವು ಸಾಧನೆಗಳು, ನೂರಾರು ವೇಷಗಳು, ತಂತ್ರ ಕುತಂತ್ರಗಳು. ಹೀಗಾಗಿಯೇ ಧಾರ್ಮಿಕ ವಿಷಯದಲ್ಲಿ ಇಂದು ಸಾಕಷ್ಟು ಗೊಂದಲಗಳು. ಜಕ್ಕೆಶ್ವರನ ಗುಡಿಗೆ ಬರುತ್ತಿದ್ದ ಡಾಂಭಿಕ ಭಕ್ತರನ್ನ ನೋಡಿ ನೋಡಿ ಸಾಕಾಗಿ ಈ ವಚನವನ್ನ ಬರೆದಿರಬಹುದು. ಅದಕ್ಕಾಗಿಯೇ ಈ ವಚನದಲ್ಲಿ ಸತ್ಯಕ್ಕನವರು ನಿತ್ಯ-ನೇಮ ಅನ್ನೊದಕ್ಕೆ ಒಂದು ವ್ಯಾಖ್ಯೆಯನ್ನೇ ನೀಡಿದ್ದಾರೆ. ಸರಳವಾಗಿ ಹೇಳೋದಾದ್ರ ನೇಮ ಅಂದ್ರ ವೃತ ಅಂತ ಅರ್ಥ. ನಮ್ಮಲ್ಲಿ ಸಾಕಷ್ಟು ವೃತಗಳು ಅದಾವು. ಎಷ್ಟು ದೇವರುಗಳೂ ಅಷ್ಟು ವೃತಗಳು. ಇವುಗಳಲ್ಲದೆ ತಮ್ಮ ಇಷ್ಟ ದೇವರುಗಳನ್ನು ಅಲಂಕರಿಸುವುದು, ಅರ್ಚಿಸೋದು, ಮಂತ್ರ ಪಠಣ, ಧೂಪಾರತಿ, ದೀಪಾರತಿ, ಷಡೋಪಚಾರ ಪೂಜೆ ಭಕ್ಷ್ಯಗಳು, ನೈವೇದ್ಯಗಳು ಇಷ್ಟೇ ಅಲ್ಲದೆ ಕೆಲವೊಂದು ದೇವರುಗಳಿಗೆ ಇಂತಹದ್ದೇ ನೈವೇದ್ಯ ಅಂತ ಬೇರೆ. ದಿನ ಬಹುತೇಕ ಸಮಯವನ್ನು ಅದರೊಳಗೆ ಕಳೆಯುತ್ತ, ತಮ್ಮನ್ನ ತಾವೇ ಶ್ರೇಷ್ಟ ಭಕ್ತರೆಂದು ತಿಳಿದುಕೊಳ್ತಾರೆ. ಆದರೆ ಈ ತರಹದ ಪೂಜೆ ಕೇವಲ ಆಡಂಬರಕ್ಕಾಗಿ ಇರುವಂತಹ ಪೂಜೆ ಅನಿಸಿಕೊಳ್ಳುತ್ತೆ. ಭಕ್ತಿ ಭಾವಕ್ಕಿಂತ ಆಡಂಬರಕ್ಕೆ ಅಲಂಕಾರಕ್ಕೆ ಹೆಚ್ಚಿಗೆ ಮಹತ್ವ. ಇಂತಹ ಪೂಜೆಯನ್ನೆ ಸತ್ಯಕ್ಕ ವಿರೋಧಿಸುತ್ತಾರೆ ನೋಡಿ ಎನು ಹೇಳತಾರಂತೆ.
ಅರ್ಚನೆ ಪೂಜನೆ ನೇಮವಲ್ಲ ಮಂತ್ರ ತಂತ್ರ ನೇಮವಲ್ಲ:
ಸತ್ಯಕ್ಕನವರ ಪ್ರಕಾರ ಅರ್ಚನೆ ಪೂಜೆ, ಮಂತ್ರ ತಂತ್ರಗಳಾವುಗಳೂ ನೇಮವಲ್ಲ. ಇವೆಲ್ಲವೂ ಭಗವದ್ಭಕ್ತಿಯ ಆಚರಣೆಗಳಾದ್ರೂ ಅವುಗಳ ಹಿಂದೆ ನಿಕ್ಷಲ್ಮಶವಾದ ಭಕ್ತಿಯಾಗಲಿ, ಮನೋಭಾವವಾಗಲಿ ಲೋಕ ಸುಖವನ್ನು ಬಯಸುವ ಸಮಷ್ಟಿ ಪ್ರಜ್ಞೆ ಆಗಲಿ ಇರೋದಿಲ್ಲ. ಇವೆಲ್ಲ ಸ್ವಾರ್ಥ ಸಾಧಿತವಾದವುಗಳು. ಇತರರಿಂದ ಲಾಭ ಗಳಿಸಲು ಇರುವ ಒಂದು ಮಾರ್ಗ. ಈ ರೀತಿಯ ಮನೋಭಾವ ಇಲ್ಲದವರೂ ಇರ್ತಾರೆ. ಆದರೆ ನಿಕ್ಷಲ್ಮಷರೂ, ಸಾತ್ವಿಕರೂ ನೈತಿಕರೂ ಇರುವವರ ಸಂಖ್ಯೆ ತುಂಬಾ ಕಡಿಮೆ. ಅದಕ್ಕೆ ಮಹಾದೇವಿಯಕ್ಕ ಹೇಳ್ತಾರೆ, “ಭಾವ ಶುದ್ಧ ಇಲ್ಲದವರಲ್ಲಿ ಧೂಪವನೊಲ್ಲೆಯಯ್ಯ, ಪರಿಣಾಮಗಳಲ್ಲದವರಲ್ಲಿ ನೈವೇದ್ಯವನೋಲ್ಲೆಯಯ್ಯ ಚನ್ನಮಲ್ಲಿಕಾರ್ಜುನ” ಅಂತ.
ಭಯದಿಂದ ಮಾಡುವ ಪೂಜೆ, ಅರ್ಚನೆ ನೇಮ ಅಲ್ಲ. ಮೂರ್ತಿ ಪೂಜೆ, ಅರ್ಚನೆ ಧೂಪ ದೀಪ ಬೆಳಗುವದು, ಗುಡಿಗಳು ಇವ್ಯಾವದಕ್ಕೂ ಲಿಂಗಾಯತ ಧರ್ಮದಲ್ಲಿ ಬೆಲೆ ಇಲ್ಲ “ಸ್ಥಾವರ” ಅಂದ್ರೆ ಪ್ರತಿಷ್ಟೆ ಅಂತ ಬಸವಣ್ಣನವರೆ ಹೇಳಿದ್ದಾರೆ. ನಮಗೆ ದೇಹವೇ ದೇಗುಲ ಎಂಬಂತೆ ನಾವೆ ಚಲಿಸುವ ದೇವಾಲಯಗಳು ನಮ್ಮೊಳಗಿನ ಚೈತನ್ಯವೆ ದೇವರು. ನಿಜವಾದ ಅರ್ಥದಲ್ಲಿ ಇಷ್ಟಲಿಂಗಧಾರಿಗಳು ಪೂಚೆ ಮಾಡುವದಿಲ್ಲ. ಪೂಜೆ ಮಾಡಿಕೊಳ್ತಾರೆ. ಪೂಜೆ ಮಾಡಿಕೊಳ್ಳುದು ಅಂದರೆ ನಮ್ಮೊಳಗಿನ ಚೈತನ್ಯಾತ್ಮಕ ಪರಮಾತ್ಮನ ಪೂಜೆ ಮಾಡಿಕೊಳ್ಳುದು. ಈ ತರಹದ ಪೂಜೆ ಮಾಡಿಕೊಳ್ಳೊದಕ್ಕನ ಬಸವಣ್ಣನವರು ನಮಗೆ ಇಷ್ಟಲಿಂಗವನ್ನ ಕೊಟ್ಟಾರ. ಪ್ರವೇಶವಿರದ ಗುಡಿಯೊಳಗಿನ ದೇವರನ್ನ ತಂದು ನಮ್ಮ ಅಂಗೈಯಲ್ಲಿ ಇರಿಸಿದ್ದಾರೆ. ಆ ಮೂಲಕ ಲಿಂಗಾಂಗ ಯೋಗದೊಂದಿಗೆ ಶೂನ್ಯ ಸ್ಥಿತಿಯನ್ನು ಸಾಧಿಸಿ ನಮ್ಮೊಳಗಿನ ಪರಮಾತ್ಮನೊಡನೆ ಒಂದಾಗುವುದೇ ಪೂಜೆ. ಈ ಪೂಜೆಗೆ ಯಾವುದೆ ದೀಪ-ಧೂಪದ, ಗಂಧದ ಅಲಂಕಾರ ಬೇಕಿಲ್ಲಾ. ಕೇವಲ ಶುದ್ಧ ಭಕ್ತಿಯೊಂದಿದ್ದರೆ ಸಾಕು. ಅದಕ್ಕೆ ಬಸವಣ್ಣನವರು:
ನಾದಪ್ರಿಯನೆಂಬರು, ನಾದಪ್ರಿಯ ಶಿವನಲ್ಲಯ್ಯಾ,
ವೇದಪ್ರಿಯ ಶಿವನೆಂಬರು, ವೇದಪ್ರಿಯ ಶಿವನಲ್ಲಯ್ಯಾ,
ನಾದವ ಮಾಡಿದ ರಾವಣಂಗೆ ಅರೆ ಆಯುಷ್ಯವಾಯಿತ್ತು.
ವೇದವನೋದಿದ ಬ್ರಹ್ಮನ ಶಿರ ಹೋಯಿತ್ತು.
ನಾದಪ್ರಿಯನೂ ಅಲ್ಲ, ವೇದಪ್ರಿಯನೂ ಅಲ್ಲ,
ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ.
(ಸಮಗ್ರ ವಚನ ಸಂಪುಟ: ಒಂದು-2021 / ಪುಟ ಸಂಖ್ಯೆ-50 / ವಚನ ಸಂಖ್ಯೆ-181)
ಆದರೆ ಲಿಂಗ ಪೂಜೆಯನ್ನ ಕೇವಲ ಸಾಂಪ್ರಾದಾಯಿಕ ಪೂಜೆ ಅಂತ ಭಾವಿಸಲಾಗದು. ಆ ರೀತಿ ಅಂದುಕೊಂಡವರ ಕುರಿತು ಅಲ್ಲಮ ಪ್ರಭುಗಳು “ಅರಿವು ಹಿಡಿಯಂದರೆ ಕುರುಹು ಹಿಡಿದರು ನೋಡಾ” ಅಂತ ಅಂದಿದ್ದಾರೆ. ಕಸಗುಡಿಸುವ ಸತ್ಯಕ್ಕನವರು ಇಂತಹ ಮಹತ್ವದ ಗಹನವಾದ ಸೈದ್ಧಾಂತಿಕ ವಿಚಾರವನ್ನು ಈ ವಚನದಲ್ಲಿ ಮನ ಮುಟ್ಟುವಂತ ಸರಳವಾಗಿ ಸಹಜ ರೀತಿಯಲ್ಲಿ ತಿಳಿಸಿದ್ದಾರೆ.
ಪರಸ್ತ್ರೀ, ಪರಧನ ಪರದೈವಂಗಳಿಗೆ ಎರಗದಿಪ್ಪುದೆ ನೇಮ:
ಎಂತಹ ಅದ್ಬುತ ಸಾಲು ನೋಡಿ ಇದು. ಸತ್ಯಕ್ಕನವರ ಪ್ರಕಾರ ಪರರ ಸ್ತ್ರೀಯರಿಗೆ, ಪರರ ಧನಕ್ಕೆ ಆಸೆ ಮಾಡದಿರುವದೇ ನಿಜವಾದ ನೇಮ. ಅವುಗಳನ್ನ ಕಣ್ಣೆತ್ತಿಯೂ ಕೂಡ ನೋಡಲಾರೆ. ಒಂದು ವೇಳೆ ನೋಡಿದರೆ ಕೈಯಲ್ಲಿ ಮುಟ್ಟಿ ಎತ್ತಿದಡೆ ನನ್ನನ್ನ ನರಕದಲ್ಲಿ ಅದ್ದಿಬಿಡು ಶಂಭುಜಕ್ಕೆಶ್ವರ ಅಂತ ಸತ್ಯಕ್ಕ ತಮ್ಮ ಇನ್ನೊಂದು ವಚನದಲ್ಲಿ ಹೇಳಿದ್ದಾರೆ. ಅವುಗಳನ್ನ ಹೊಂದದಿರುವುದೇ ನಿಜವಾದ ಮತ್ತು ನಿತ್ಯ ಅನುಷ್ಠಾನಗೊಳಿಸಬೇಕಾಗಿರುವ ವ್ರತ.
ಸಮಾಜದ ಹಿತ ದೃಷ್ಟಿಯಿಮದ ಪರಸ್ತ್ರೀ ಧನಾಪೇಕ್ಷೆಗಳು ಬಹಳ ಅಪಾಯಕಾರಿ. ಪುರಾಣಗಳ ಪ್ರಕಾರ ಪರಸ್ತ್ರೀ, ಭೂಮಿಗಳಿಗೊಸ್ಕರ ರಾಮಾಯಣ ಮಹಾಭಾರತಗಳ ಆಗಿ ಹೋಗಿವೆ. ಇವೆಲ್ಲ ಅವಗುಣಗಳು ಮಾತ್ರವಲ್ಲ, ಸಮಾಜ ವಿರೋಧಿ ಪ್ರವೃತ್ತಿಗಳು ಅಂತ ಅನಿಸಿಕೊಂಡಿದ್ದಾವೆ. ಅದಕ್ಕೆ ಬಸವಣ್ಣನವರು “ಛಲಬೇಕು. ಶರಣಂಗೆ ಪರಸತಿಯನೊಲ್ಲೆನೆಂಬ ಛಲ ಬೇಕು. ಶರಣಂಗೆ ಪರಧನವನೊಲ್ಲೆನೆಂಬ” ಅಂತ ಹೇಳಿದ್ದಾರೆ. ಪರಸತಿ, ಪರಧನಾಪೇಕ್ಷೆಯು ಕಳುವು ದರೋಡೆ ಮೊದಲಾದ ಸಮಾಜ ವಿರೋಧಿ ಕೃತ್ಯಗಳಿಗೆ ದಾರಿ ಮಾಡಿಕೊಡುತ್ತದೆ. ಅದಕ್ಕಾಗಿಯೆ ಇಂತಹ ಬೂಟಾಟಕೆಯ ಪ್ರವೃತ್ತಿಗಳನ್ನು ಮತ್ತು ಆಚರಣೆಗಳನ್ನು ಸತ್ಯಕ್ಕನವರು ಪ್ರಬಲವಾಗಿ ವಿರೋಧಿಸುತ್ತಾರೆ. ವ್ಯಕ್ತಿ ಸುಧಾರಣೆಯಿಂದಲ್ಲದೆ ಬೇರಾವುದರಿಂದಲೂ ಇವೆಲ್ಲ ಅಸಾಧ್ಯ ಎಂಬುದು ಸತ್ಯಕ್ಕನ ದೃಢವಾದ ನಿಲುವು. ಬಹುಶಃ 12 ನೇ ಶತಮಾನದಲ್ಲಿಯೆ ಸಮಾಜದಲ್ಲಿ ಈ ರೀತಿಯ ವೈರುಧ್ಯ ಕಾಣಿಸಿಕೊಂಡಿತ್ತು ಅಂತಾ ತೋರುತ್ತದೆ. ಅದಕ್ಕಾಗಿಯೇ ಸತ್ಯಕ್ಕನವರು ಇಂತಹ ಅನೈತಿಕತೆಯನ್ನೆ ಬಲವಾಗಿ ಖಂಡಿಸುತ್ತಾರೆ.
ಪರದೈವಂಗಗಳಿಗೆ ಎರಗದಿಪ್ಪುದೆ ನೇವು:
ಸತ್ಯಕ್ಕನ ಏಕದೈವ ನಿಷ್ಟೆ ಅತ್ಯಂತ ಉನ್ನತವಾದದ್ದು. ಆಕೆ ಶಿವನಲ್ಲದೆ ಬೇರೆ ಯಾವ ದೇವರ ಹೆಸರನ್ನೂ ಕಂಡ ಕೇಳಲಾರೆ ಅಂತಾರೆ. ಮಹಾದೇವಿಯಕ್ಕನವರ ಚೆನ್ನಮಲ್ಲಿಕಾರ್ಜುನನ ನಿಷ್ಟೆಯ ಹಾಗೆ ಸತ್ಯಕ್ಕ ಶಿವನಲ್ಲಿ ನಿಷ್ಠೆ ಹೊಂದಿದ್ದರು. ಶಿವನೊಡನೆಯೆ ಅವರ ಮಾತು. ಪ್ರೀತಿ, ಭಕ್ತಿ ಕೊನೆಗೆ ಜಗಳಾನೂ ಕೂಡ ಇರ್ತಿತ್ತು. ಸತ್ಯಕ್ಕನವರ ಪ್ರಕಾರ ಯಾರು ಶರಣ ಮಾರ್ಗವನ್ನ ಅನುಸರಿಸ್ತಾರೊ, ಯಾರು ಶರಣ ಪರಂಪರೆಯಲ್ಲ ಇರ್ತಾರೊ ಅವರಿಗೆ ಇರುವದು ಒಂದೇ ದೈವ. ಅದು ನಮ್ಮ ಅಂತಃಸಾಕ್ಷಿ. ಅದನ್ನ ನಾವು ಯಾವ ಹೆಸರಿಂದ ಬೇಕಾದರೂ ಕರೆಯಬಹುದು. ಅದನ್ನೆ ನಮ್ಮ ಪರಂಪರೆಯಲ್ಲಿ ಲಿಂಗ ಅನ್ನ ಬಹುದು.
ಬೇರೆ ಬೇರೆ ದೇವರುಗಳಿಗೆ ನಮಿಸುವ ಜನರಿಗೆ ದಿಟ್ಟ ಗಣಾಚಾರಿ ಶರಣ ಅಂಬಿಗರ ಚೌಡಯ್ಯನವರು ತಮ್ಮ ಒಂದು ವಚನದಲ್ಲಿ ಈ ರೀತಿ ಹೇಳ್ತಾರೆ:
ಕಟ್ಟಿದ ಲಿಂಗವ ಕಿರಿದು ಮಾಡಿ,
ಬೆಟ್ಟದ ಲಿಂಗವ ಹಿರಿದು ಮಾಡುವ ಪರಿಯ ನೋಡ!
ಇಂತಪ್ಪ ಲೊಟ್ಟಿಮೂಳರ ಕಂಡರೆ
ಗಟ್ಟಿವುಳ್ಳ ಪಾದರಕ್ಷೆಯ ತೆಗೆದುಕೊಂಡು
ಲೊಟಲೊಟನೆ ಹೊಡೆಯಂದಾತ ನಮ್ಮ ಅಂಬಿಗರ ಚೌಡಯ್ಯ.
(ಸಮಗ್ರ ವಚನ ಸಂಪುಟ: ಆರು-2021 / ಪುಟ ಸಂಖ್ಯೆ-38 / ವಚನ ಸಂಖ್ಯೆ-92)
ಲಿಂಗೊಪಾಸನೆಯ ಬಿಟ್ಟು ಅನ್ಯ ದೈವಗಳಿಗೆ ಎರಗದಿರುವದೇ ನಿತ್ಯ ನೇಮವಾಗಬೇಕು. ಏಕೆಂದರೆ ಬಹುದೇವರ ಕಲ್ಪನೆಯು ಬಹುಶೋಷಣೆಯ ಮಾರ್ಗಗಳು. ಪೂಜೆ ಅಂದರೆ:
ಉಸಿರಿನ ಪರಿಮಳವಿರಲು
ಕುಸುಮದ ಹಂಗೇಕಯ್ಯ?
ಕ್ಷಮೆ, ದಮೆ ಶಾಂತಿ ಸೈರಣೆ ಇರಲು
ಸಮಾಧಿಯ ಹಂಗೇಕಯ್ಯ?
ಲೋಕವೆ ತಾನಾದ ಬಳಿಕ
ಏಕಾಂತದ ಹಂಗೇಕಯ್ಯ ಚೆನ್ನಮಲ್ಲಿಕಾರ್ಜುನಾ?
(ಸಮಗ್ರ ವಚನ ಸಂಪುಟ: ಐದು-2021 / ಪುಟ ಸಂಖ್ಯೆ-36 / ವಚನ ಸಂಖ್ಯೆ-84)
ಎಂಬ ಮಹಾದೇವಿಯಕ್ಕನವರ ವಚನದಂತೆ ನಮ್ಮ ಕಾಯಕವನ್ನ ಸತ್ಯ ಶುದ್ಧತೆಯಿಂದ ಮಾಡುವದೆ ನಿಜವಾದ ಪೂಜೆ. ಶ್ರಮದಿಂದ ಗಳಿಸಿದ್ದನ್ನ ನಮ್ಮವರೊಂದಿಗೆ ಹಂಚಿಕೊಂಡು ಬಾಳುವದೆ ನಿತ್ಯ ನಿಯಮವಾಗಬೇಕು. ತಾನು ನಂಬಿದ ಸಿದ್ಧಾಂತವನ್ನ ಬಿಟ್ಟು ಅನ್ಯದ ಕಡೆಗೆ ಚಿತ್ತ ಚಂಚಲವಾಗದಂತೆ ನೋಡಿಕೊಳ್ಳುವದೇ ನಿಜವಾದ ವೃತ.
ನಮ್ಮಲ್ಲಿ ಹುಣ್ಣಿಮೆಗೊಮ್ಮೆ, ಅಮವಾಸೆಗೊಮ್ಮೆ, ಹಬ್ಬಗಳಿಗೆ, ಶ್ರಾವಣ, ನವರಾತ್ರಿಗಳಿಗೆ ಮುಂತಾದವುಗಳಿಗಷ್ಟೆ ಪೂಜೆ ನಿಯಮಗಳಿರುವದಿಲ್ಲ. ಸತ್ಯ ಶುದ್ಧ ಕಾಯಕವೇ ನಮಗೆ ನಿತ್ಯ ನಿಯಮ. ಪ್ರತಿ ದಿನ ಆಚರಿಸಿಕೊಳ್ಳತಕ್ಕಂತಹ ನಿಯಮಗಳು. ದೇವರ ಹೆಸರಿನಲ್ಲಿ ನಡೆಯುವಂತಹ ಸಂಘರ್ಷಗಳನ್ನು ತಿಕ್ಕಾಟಗಳನ್ನು ಗಮನದಲ್ಲಿ ಇಟ್ಟುಕೊಂಡ ನಮ್ಮ ಶರಣರು ಒಂದು ದೇವರನ್ನ ನಂಬಿದ ಬಳಿಕ, ಲಿಂಗವನ್ನ ಕಟ್ಟಿಕೊಂಡ ಬಳಿಕ ಬೇರೆ ದೇವರುಗಳಿಗೆ ಎರಗಬಾರದು ಅಂತ ಅಂದಿದ್ದಾರೆ. ಅದು ನಮ್ಮನ್ನ ಅರಿವಿನತ್ತ ಕೊಂಡೊಯ್ಯದೆ ಅಜ್ಞಾನದೆಡೆಗೆ ಕರೆದೊಯ್ಯುತ್ತೆ. ಅರಿವಿನತ್ತ ಹೋಗುವ ಶೃದ್ಧೆ ನಮಗಿರಬೇಕು ಅಂತ ಸತ್ಯಕ್ಕ ತಮ್ಮ ವಚನದಲ್ಲಿ ಹೇಳ್ತಾರೆ.
ಹೀಗೆ ಸರ್ವಸಮಾನತೆ, ಮನುಷ್ಯನ ಘನತೆ, ಕಾಯಕ ತತ್ವದ ಮೂಲಕ ಬೆವರಿನ ಘನತೆ ಮತ್ತು ಆದರ್ಶಗಳನ್ನ ತಿಳಿಸುತ್ತ ದಾಸೋಹದ ತತ್ವದ ಮೂಲಕ ಹಂಚಿಕೊಂಡು ಬದುಕುವ ಸಂಪೂರ್ಣ ಸಾಮಾಜಿಕ ವ್ಯವಸ್ಥೆಯ ಭಾಗವಾಗಿದ್ದವರು ಸತ್ಯಕ್ಕನವರು. ಎಂದಿಗೂ ತನಗಾಗಿ ಬದುಕದೇ ಆದರ್ಶ ತತ್ವ ಸಿದ್ಧಾಂತಗಳತ್ತ ಗಮನ ಹರಿಸಿ ನುಡಿದಂತೆ ನಡೆದು ಬಯಲೊಳಗೆ ಬಯಲಾದರು ಸತ್ಯಕ್ಕ.
ಶರಣೆ ಸತ್ಯಕ್ಕನವರ ಜೀವನ ಚರಿತ್ರೆಯಲ್ಲಿ ಮತ್ತು ಈ ವಚನ ವಿಶ್ಲೇಷನೆಯಲ್ಲಿ ಇನ್ನೂ ಹೆಚ್ಚಿನ ಮಾಹಿತಿ ಇರಬಹುದು. ಏಕೆಂದರೆ ಈ ವಚನಗಳು ಸಾಗರದಷ್ಟು ಆಳ ಮತ್ತು ವಿಶಾಲ, ಇಲ್ಲಿ ನಮಗೆ ಬರೆದಷ್ಟು ಹೆಚ್ಚು ಅತ್ಯಮೂಲ್ಯ ಮುತ್ತು ರತ್ನಗಳು ಸಿಗ್ತಾವೆ. ನಾನು ನನ್ನ ಅರಿವಿಗೆ ಬಂದಷ್ಟು ವಿಶ್ಲೇಷಣೆ ಮಾಡಿದ್ದೆನೆ. ಕಲ್ಯಾಣ ಕ್ರಾಂತಿಯ ನಂತರ ತಮ್ಮ ಬಲಿದಾನದ ಮೂಲಕ ನಮಗೆ ವಚನಗಳನ್ನ ಉಳಿಸಿಕೊಟ್ಟಂತಹ ಎಲ್ಲ ಶರಣರನ್ನ ಸ್ಮರಿಸುತ್ತ ಅವುಗಳನ್ನ ರಕ್ಷಿಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ.
ಶರಣು ಶರಣಾರ್ಥಿಗಳು,
ಶ್ರೀಮತಿ. ಅನುಪಮ ಪಾಟೀಲ,
ನಂ. 10, ದೇಸಾಯಿ ಪಾರ್ಕ್,
ಕುಸೂಗಲ್ ರಸ್ತೆ, ಕೇಶ್ವಾಪೂರ,
ಹುಬ್ಬಳ್ಳಿ – 580 023.
ಮೋ. ಸಂ. +91 9845810708.
ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in.